ಟೂ ಹಡದೊಲೋರ ಹೋಟಲಿಗ್ಹೋಗಿ, ಓನ್ಲಿ ಒನ್ ಕಾಫಿ ತಗೊಂಡು ಬಾರೋ" ಎಂದು ಘರ್ಜಿಸಿದ.
ಓಹೋ ತಾನೊಬ್ನೇ ಕಾಫಿ ಕುಡ್ದು ಸ್ಟ್ರಾಂಗ್ ಇಂಟರಾಗೇಷನ್ನು ಸ್ಟಾರ್ಟ್ ಮಾಡ್ತಾನೆ ಎಂದುಕೊಳ್ಳುತ್ತ ರಘು ಬಬ್ಬಲ್‌ಗಮ್ಮನ್ನು ಮರಡೋನ ಫುಟ್ ಬಾಲನ್ನು ಆ ಮೂಲೆಯಿಂದ ಈ ಮೂಲೆಗೆ ತಿರುವಾಡಿದಂತೆ, ಆ ದವಡೆಯಿಂದ ಈ ದವಡೆಗೆ ಓಡಾಡಿಸಿದ.
"ಯಾಕೆ ಸಾರ್ ಹುಷಾರಿಲ್ವೆ" ಮಾತಿಗೆಳೆಯದಿದ್ದರಾಗುತ್ತದೆಯೆ?
"ಒನ್‌ಟ್ವೆಂಟಿ ಕಿಲೋ ಲಿಫ್ಟ್ ಮಾಡ್ತಿದ್ದೆ ಕಣಪ್ಪಾ.. ಎಂದು ಮುಖವನ್ನು ಒಂದು ಕ್ಷಣ ಮಾಡಿಕೊಂಡು ಹೇಳಿದರು. "ಅದಿರ್‍ಲಿ.. ನಾನು ಒಂದು ಕೇಳ್ತೀದೀನಿ...ನೀನು ಮಾತ್ರ ನಾನು ನಿನ್ನ ತಮ್ಮ ಅಂತ ತಿಳ್ಕೊಂಡು ನಿಜ ಹೇಳ್ಬೇಕು. ನೋಡು."
ಆತ ನನಗೆ ತಮ್ಮ! ಆತನ ವಯಸ್ಸೇನು? ನನ್ನ ವಯಸ್ಸೇನು? ಏನು ಮಾತಾಡುತ್ತಿರುವನಲ್ಲ!
"ನನಗಿನ್ನೂ ಮದುವೇನೇ ಅಗಿಲ್ಲ ಸಾರ್ ಸ್ಟಿಲ್ ಐಯಾಮ್ ಬ್ಯಾಚುಲರ್. ನನಗಿನ್ನೂ ಬಿಲೋ ಟ್ವೆಂಟಿಫೈವ್."
"ಹ್ಹಾ! ನೀನಿನ್ನೂ ಬ್ಯಾಚುಲರ್.. ನಿನಗಿನ್ನೂ ಟ್ವೆಂಟಿಫೈವ್. ನನಗಿಂತ ನೀನು


೧೬೦

ಯಂಗರ್ರೇನು?" ಎಂದು ಆಶ್ಚರ್ಯ ವ್ಯಕ್ತಪಡಿಸುತ್ತ ಕರಾಟೆ ಕಲಿ " ಐ ಮ್ಯಾರೀಡ್ ವೆನ್ ಐ ವಾಜ್ ಟ್ವೆಲ್ವ್ ಇಯರ್ಸ್ ಓಲ್ಡ್.. "
"ಇರಬೌದು... ನನ್ಯಾಕೆ ಕರೆಸಿದ್ರಿ ಹೇಳಿ?" ಹೋದ ಕೂಡಲೆ ಕನ್ನಡಿಯಲ್ಲಿ ನೋಡಿಕೊಳ್ಳಲು ನಿರ್ಧರಿಸುತ್ತ ಹೇಳಿದ.
ಅಷ್ಟರಲ್ಲಿ ಕಾಫಿ ಬಂತು. ಟೈಗರ್ ಬಸಿಯಲ್ಲೊಂದಿಷ್ಟು ಹಾಕಿಕೊಟ್ಟು, ತಾನು ಹ್ಹಾ... ಹ್ಹೂ... ಅನ್ನುತ್ತ ಕುಡಿಯತೊಡಗಿದ.
ಪೀಸಿಗಳೆಲ್ಲ ಮುಖ ಸಿಂಡರಿಸಿಕೊಂಡು ಟೈಗರನ್ನು ಶಪಿಸುತ್ತ ಅಲ್ಲಲ್ಲಿ ನಿಂತುಕೊಂಡಿದ್ದರು.
ರಘು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಟೈಗರ್ನ ಮೀಸೆ ಮೇಲೆ ಅದುವರೆಗೆ ವಿರಾಜಮಾನವಾಗಿದ್ದ ನೊಣ ಪುರ್ರನೆ ಹಾರಿ ಬಂದು ಬಸಿಯೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಕ್ರಾಂತಿಕಾರಿಯ ಸ್ವಾಭಿಮಾನವನ್ನು ಕಾಪಾಡಿತು.
ಟೈಗರ್ ನೊಣವನ್ನು ನೋಡಿ ತನ್ನ ಜಗಳಗಂಟಿ ಹೆಂಡತಿಯನ್ನು ನೆನಪಿಸಿಕೊಂಡು ಹಿಡಿಹಿಡಿ ಶಾಪ ಹಾಕಿದ. ನಾಲಿಗೆಯಿಂದ ಮೀಸೆಗಂಟಿದ್ದ ಕಾಫಿ ನೆಕ್ಕಿಕೊಂಡ.
ಇದನ್ನೆಲ್ಲ ನೋಡುತ್ತಿದ್ದ ರಘೂಗೆ ಮೈಪರಚಿಕೊಳ್ಳಬೇಕೆನ್ನಿಸಿತು.
"ನನ್ನ್ಯಾಕೆ ಕರೆಸಿದೆ, ಹೇಳಿ ಸ್ವಾಮಿ?" ರಘು ಕಡ್ಡಿ ಮುರಿದಂತೆ ಮಾತಾಡಿದ್ದು ಕಂಡು ಪೀಸಿಗಳಿಗೆ ಆಶ್ಚರ್ಯ. ಇಂದಿರಾಗಾಂಧಿಯವರ ಸಾಮ್ರಾಜ್ಯದಲ್ಲಿ ಇವನು ಪೋಲೀಸ್ರಿಗೆ ಹೆದರುತ್ತಿಲ್ಲವೆಂದು.
"ಎಷ್ಟು ವರ್ಷದಿಂದ.. ಅಂದರೆ ಹೌಮೆನಿಯರ್ಸಿಂದ ಬೆಂಗ್ಳೂರು ಸೇರ್‍ಕೊಂಡಿರುವಿ?"
ಟೈಗರ್ ಕೊಕ್ ಕೊಕ್ ಕೆಮ್ಮಿತು.
"ಅದನ್ನು ಕಟ್ಕೊಂಡೇನಾಗೋದೈತಿ?" ರಘು ಎಷ್ಟಿದ್ದರೂ ಕ್ರಾಂತಿಕಾರಿ, ಏಕ್‌ಮಾರ್ ದೋ ತುಕುಡಾ.
"ನಿನ್ತಮ್ಮನಾಗಿ ನಾನು.. "
"ಅಲ್ಲ! ಗ್ರಾಂಡ್ ಫಾದರಾಗಿ.. " ಮಾತನ್ನು ತಿದ್ದಿದ.
"ಏನೋ ಒಂದು... ಆ ವಯಲೆಂಟು ಸಿಟೀಲಿ ಏನು ಕೆಲ್ಸ ಮಾಡ್ತಿದ್ದೀ?"
"ಏನೋ ಒಂದು ಮಾಡ್ತಿದೀನಿ."
"ಹಂಗಂದ್ರ ಸರಕಾರದ ವಿರುದ್ಧ ಮಸಲತ್ತೂ ಗಿಸಲತ್ತೂ."
"ಮಸಲತ್ತು ಇಲ್ಲ ಗಿಸಲತ್ತೂ ಇಲ್ಲ. ಇಂದಿರಾಗಾಂಧಿಯವರೇನು ನಮ್ಮ ಸೋದರತ್ತೆ ಏನ್ರಿ
ಅದೆಲ್ಲ ಮಾಡೋಕೆ?"
"ಸೋದರತ್ತೆ ಅಂತೀಯಲ್ಲ.. ನವರಾಷ್ಟ್ರದ ನಿರ್ಮಾಪಕಿ ಅಂತ ಅನಬೇಕಪ್ಪಾ."
"ಹ್ಹೂ ಆಗ್ಲಿ. ಆಕೆ ನವರಾಷ್ತ್ರದ ನಿರ್ಮಾಪಕಿಯೇ ಆಗಿರ್ಲಿ.. ಆದ್ರೆ ನಾನು
ದುಡೀಬೇಕು ತಿನ್ನಬೇಕು ಅಲ್ವೆ?"
"ಅದು ಸರಿ."
ಟೈಗರು ಸೊಂಟದ ಮೇಲೊಂದು ಕೈ ಗಲ್ಲದ ಮೇಲೊಂದು ಕೈ ಇಟ್ಟುಕೊಂಡು ಸ್ವಲ್ಪ ಹೊತ್ತು
ಯೋಚಿಸಿದ.
"ಹಾಗಾದ್ರೆ ನೀನು ಬುಡಮೇಲು ಕೃತ್ಯದಲ್ಲಿ ತೊಡಗಿಲ್ಲ. ಅಂತಾಯ್ತು" ಟೈಗರ್
ಲೊಚಗುಟ್ಟಿತು.


೧೬೧

"ನಾನ್ಯಾಕೆ ತೊಡಗ್ಲಿ ಸ್ವಾಮಿ.. ನಮ್ದೇ ನಮ್ಗೆ ಸಾಕಾಗಿದೆ!"
"ಆದ್ರೆ ನಮ್ಗೆ ಹಂಗನ್ನಿಸ್ತಾ ಇದೆಯಲ್ಲಾ!
"ಏನಾದ್ರೂ ಎವಿಡೆನ್ಸು."
"ನೀನು ತೊಟ್ಕೊಂಡಿರೋ ಕೆಂಪು ಬಟ್ಟೆನೇ ಸಾಕು.. ನೀನು ಸಂಚುಗಾರ ಅಂತ ಸಾಬೀತು
ಮಾಡೋಕೆ!"
"ಹಂಗಂದ್ರೆ ಈ ದೇಶದ ಓಣಿಓಣಿಗಳಲ್ಲಿರೋ ಸಾಧು ಸಂತ್ರು, ಗುರು ಜಗದ್ಗುರುಗಳೆಲ್ಲರೂ ತೊಟ್ಟುಕೊಂಡಿರೋದು ಕೆಂಪು ಬಟ್ಟೆಯನ್ನೆ.. ಅವರನ್ನೆಲ್ಲ ಸಂಚುಗಾರರೂಂತ ಆರೋಪದ ಮೇಲೆ ಅರೆಷ್ಟು ಯಾಕೆ ಮಾಡಬಾರ್ದು ಮೊದ್ಲು!"
"ಭಲೆ ಚಾಲಾಕಿದ್ದಿ ಕಣಪ್ಪಾ."
"ಈ ದೇಶದಲ್ಲಿರೋ ಅರವತ್ತೆಪ್ಪತ್ತು ಕೋಟಿ ಮಂದಿ ಮೈಯಲ್ಲಿ ಹರಿತಿರೋ ರಕ್ತದ ಬಣ್ಣಾನು ಕೆಂಪು ಎಂಬೋದನ್ನು ಮರೀಬೇಡಿ."
"ಶಹಭಾಷ್" ಟೈಗರ್ ಒಂದು ಕ್ಷಣ ದಿಗ್ಭ್ರಮೆಗೊಂಡು ಮುಂದುವರಿದು ಕೇಳಿದ,
"ಇದನ್ನೆಲ್ಲ ನಾವು ಸರಿಮಾಡಿಬಿಡ್ತೀವಿ. ನಮ್ಗೇನು ಇದು ದೊಡ್ ವಿಷಯ ಅಲ್ಲ..
ಎಂಥೆಂಥ ಕೇಸ್ನ ಮುಚ್ಚಿ ಹಾಕಿದ್ದೀವಿ.. ನಿನ್ನ ಕೇಸ್ನೂ ಮುಚ್ಚಿಹಾಕ್ತೀವಿ.. ಆದ್ರೆ.."
"ಆದ್ರೆ?"
"ಸ್ವಲ್ಪ ಕೈ ಬೆಚ್ಚಗೆ ಮಾಡಬೇಕಪ್ಪಾ" ಟೈಗರ್ ಪಿಸುಗುಟ್ಟಿದ.
"ನನ್ನ ಹತ್ರ ಅದೇನು ಇಲ್ಲ"
"ಇದೆ... ಮುಂಗೈಗೆ ಕಟ್ಕೊಂಡಿರೋ ಅಟಕ್ ಪಿಟಕ್ ವಾಚು!"
"ಅಟಕ್ ಅಲ್ಲ ಪಿಟಕ್ಕೂ ಅಲ್ಲ... ಎಲೆಕ್ಟ್ರಾನಿಕ್"
"ಅದ್ನ ಕೊಟ್ ಬಿಟ್ರೆ?"
ಅಷ್ಟರಲ್ಲಿ "ಯಾರ್ರಿ ಅವ್ರು ಎಸೈ.. ಅವರಿಗೆ ಹೇಳೋರು ಕೇಳೋರು ಇಲ್ಲವೇನು?
ಇವ್ರಿಂದಾಗಿ ಊರಿಗೆ ಯಾರೂ ಬರಂಗಿಲ್ಲ... ಹೋಗೋಹಂಗಿಲ್ಲ" ಎಂದು ಸ್ಟೆನ್‌ಗನ್ ಸ್ಪೋಟಿಸುತ್ತ ಗೊಬ್ಬರದ ಅಂಗಡಿ ಜಲಜಾಕ್ಷಿ ಒಳಗೆ ಬಂದುಬಿಟ್ಟಳು.
ಆಕೆಯನ್ನು ನೋಡುತ್ತಲೆ ಟೈಗರ್ ಲದ್ದಿ ಹಾಕಿದ. ಗಬಕ್ಕನೆ ಎದ್ದು, ‘ಬನ್ನಿ ಮೇಡಂ ಬನ್ನಿ ಮೇಡಮ್’ ಅಂತ ಎದ್ದು ಸ್ವಾಗತ ಕೋರಿದ.
ರಘು ಕೂಲಿಂಗ್ ಗ್ಲಾಸ್ ಧರಿಸಿದ್ದ ಆ ಶ್ವೇತಾಂಬರಿಯತ್ತ ಆಶ್ಚರ್ಯದಿಂದ ನೋಡಿದ.
"ನಮ್ಮಿಂದ ಏನಾಗಬೇಕು ಮೇಡಂ" ಟೈಗರ್ ಹಲ್ಲು ಗಿಂಜಿದ.
"ನಮ್ಮ ಪೈಕಿ ಒಬ್ಬರನ್ನು ಸ್ಟೇಷನ್ಗೆ ಕರೆಸಿಕೊಂಡಿದ್ದೀರಂತಲ್ಲ?"
"ಇವ್ರೇ! ಅವರು"
"ಓಹ್ ಇವರೇನಾ.. " ಜಲಜಾಕ್ಷಿ ರಘು ಕೈ ಕುಲುಕಿ "ನೈಸ್ ಟು ಮೀಟ್ ಯು... ನಾನು
ಅನಸೂಯಾ ಕ್ಲಾಸ್ಮೇಟ್ಸ್" ಎಂದಳು.
ನಂಟರ ಟೈಗರ್ ಹ್ಯಾಪು ಮೋರೆ ಹಾಕ್ಕೊಂಡು ಮಾತು ಮಾತಿಗೆ ಸಾರಿಪಾರಿ ಹೇಳಿ
ಅವರಿಬ್ಬರನ್ನು ಬೀಳುಕೊಟ್ಟನು.
ತನ್ನನ್ನು ಸಂಕಟದಿಂದ ಪಾರು ಮಾಡಿದ ಈ ವೀರವನಿತೆ ಯಾರೂಂತ ಆಕೆಯ ಹಿಂದೆಯೇ


೧೬೨

ಬೆರಗಿನಿಂದಲೇ ನಡೆದ.
ಯಮನ ಕಾಟೇಜು ಪೊಕ್ಕುಳಿದು ಬಂದಾಯ್ತವನ ಪರಿಸ್ಥಿತಿ.
ನೆಮ್ಮದಿಯಿಂದ ಉಸಿರುಬಿಟ್ಟ.
"ಥ್ಯಾಂಕ್ಸ್ ಮೇಡಂ. ನಾನಿನ್ನು ಬರ್‍ತೀನಿ.
"ಬನ್ನಿ ಡ್ರಾಪ್ ಕೊಡ್ತೀನಿ" ಜಲಜಾಕ್ಷಿ ಕಾರಿನ ಬಾಗಿಲು ತೆಗೆದಳು.
"ಮತ್ತೆ ಯಾಕೆ! ನಡಕೊಂಡೇ ಹೋಗ್ತೀನಿ" ಫಾರ್ಮಾಲಿಟೀಸ್ ವಿಷಯದಲ್ಲಿ ರಘು ಯಾವತ್ತೂ ಒಂದು ಹೆಜ್ಜೆ ಮುಂದು.
"ಅಯ್ಯೋ ಬಾರಪ್ಪಾ... ನಿನ್ ಬಿಡೋ ನೆಪದಲ್ಲಿ ನಾನೂ ಅನೂನ ಮಾತಾಡಿಸಿದಂತಾಗ್ತದೆ"
ಎಂದು ಒತ್ತಾಯಿಸಿದ ಮೇಲೆ ನಿರಾಕರಿಸುವುದಾವುದೇನು?
ಆಕೆಯ ಒತ್ತಾಯದಿಂದ ಆಕೆಯ ಮಗ್ಗುಲು ಅಂದರೆ ಮುಂದುಗಡೆ ಸೀಟಿನಲ್ಲಿ ವಿರಾಜಮಾನನಾದ.
ದುರುಗಮ್ಮನ ಬೇವಿನ ಮರದ ಮೇಲೆಲ್ಲ ಕೂತಿದ್ದ ಕದನ ಕುತೋಹಲಿಗಳು ‘ಉಘೇ’ ಎನ್ನಲು ಜಲಜಾಕ್ಷಿ ಎಂಬ ರಾವಣನು ರಘುರಾಮ ಎಂಬ ಸೀತೆಯನ್ನು ಕಾರು ಎಂಬ ಪುಷ್ಪಕ ವಿಮಾನದಲ್ಲಿ ಅಪಹರಿಸುತ್ತಿರುವ ರೀತಿಯಲ್ಲಿ ಬುರ್ ಎಂದು ಸದ್ದು ಮಾಡುತ್ತ; ನೆಲ ಮುಗಿಲು ನಡುವೆ ಶೋಭಾಯಮಾನದವಾದ ಧೂಳು ಎಬ್ಬಿಸುತ್ತ, ತಗ್ಗು ದಿನ್ನಿಯೊಳಗೆ ಒಳ್ಳೆಯ ಸ್ಪ್ರಿಂಟರ್ ಥರಕುಪ್ಪಳಿಸುತ್ತ; ಹೆಜ್ಜೆಗೊಮ್ಮೊಮ್ಮೆ ಪುಂಯ್ ಪುಂಯ್ ಪುರ್ರ್ ಪುರ್ರ್ ಎಂದು ಕೇದಾರ ಗೌಳ ಹಾಡುತ್ತ; ಆನೆ ಹೋದ ಕಡೇಲೆಲ್ಲ ಹಾದಿ ಎಂಬಂತೆ ಹಾದಿ ಇಲ್ಲದ ಕಡೆ ಹಾದಿ ಮಾಡಿಕೊಂಡು ಓಡತೊಡಗಿತು.
ಓಡೀ ಓಡೀ ದಣಿದು ಶಾಸ್ತ್ರಿಗಳ ಮನೆ ಮುಂದೆ ಡರ್ರಡಸಕ್ಕೆಂದು ಸಿಂಹನಾದಗೈಯುತ್ತ ಅದು ನಿಂತು ಬಿಟ್ಟೊಡನೆ ಅಲುಮೇಲಮ್ಮ; ಶಾಸ್ತ್ರಿಗಳು ; ಶಾಮು, ಕಾಮೋಷಿ ಮೊದಲಾದ ಸಸ್ತನಿಗಳು ಹೊಸಪೇಟೆಯಿಂದ ಬೀಗರೇ ಬಂದುಬಿಟ್ಟಿರುವರೆಂದು ಅನ್ಯಥಾ ಭಾವಿಸಿ ಅಂಗಳಕ್ಕೆ ಓಡಿಬಂದರು.

ಧೂಳಿನೊಳಗೆ ಅನಾವರಣಗೊಂಡು ಕ್ರಮೇಣ ಗೋಚರಿಸಿದ ಜಲಜಾಕ್ಷಿ ಎಂಬ ರಾಹುವನ್ನೂ, ರಘುರಾಮ ಎಂಬ ಕೇತುವನ್ನೂ ನೋಡಿ ಇದ್ದಕ್ಕಿದ್ದಂತೆ ತಳ ಸಡಲಿದಂತಾಗಿ ಶಾಮು ಎಂಬ ಚಂದ್ರನು ಕಕ್ಕಸು ಎಂಬ ವಿಂಧ್ಯಾಪರ್ವತದ ಗವಿಯೊಳಗೆ ಪಲಾಯನ ಮಾಡುತ್ತಿದ್ದುದನ್ನು ಕಂಡು..
"ಎಲೈ ಪುಳಿಯೋಗರೆ.. ಮರ್ಯಾದೆಯಿಂದ ಬರ್ತೀಯೋ ಇಲ್ಲವೋ?" ಎಂದು ಗೊಬ್ಬರದಂಗಡಿಗೆ ಗೊಬ್ಬರದಂಗಡಿಯೇ ‘ಧಡ್ ಧಡಿಲ್’ ಎಂದು ಗುಡುಗಲು..
ಶಾಮನು ಶೋಕ ಸಂತಪ್ತ ಕವಿತೆಯಂತೆ ಸಹಗಮನ ಮಾಡಲಿರುವ ಸತಿಯಂತೆ ಭಾರವಾದ ಒಂದೊಂದೆ ಹೆಜ್ಜೆಗಳನ್ನು ಇಡುತ್ತ ಕಾರಿನ ಕಡೆ ನಡೆಯುತ್ತಿರಲು....
"ಸ್ತ್ರೀ ಸ್ವಾತಂತ್ರ್ಯಂ ನ ಅರ್ಹತಿ" ಎಂದು ಶಾಸ್ತ್ರಿಗಳು ಅವನನ್ನು ತಡೆಯಲು
ಯತ್ನಿಸುತ್ತಿರಲು..
"ಅಯ್ಯೋ ದೇವರೇ ನನ್ನ ಮಗನನ್ನು ಕಾಪಾಡು" ಎಂದು ಅಲುಮೇಲಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಒಳಗೆ ಓಡಲು
"ಏನೋ, ಸೀನ್‌ಕಾನರಿ.. ಎಷ್ಟು ದಿನಾಂತ ತುಳಸೀ ಕಟ್ಟೆಯೊಳಗೆ ಬಚ್ಚಿಟ್ಟುಕೊಂಡಿರ್ತೀಯಾ.. ಬಾ.. ಕಾರು ತಳ್ಳು" ಎಂದು ಜಲಜಾಕ್ಷಿ ಸುಗ್ರೀವಾಜ್ಞೆ ಮಾಡಿದಳು.


೧೬೩

"ಯಾಕಿವರ್‍ನ ಗೋಳಾಡಿಸುತ್ತಿರುವಿರಿ?" ಎಂದು ರಘು ಒಂದು ಕ್ಷಣ ಜಾಣ್ತನದ ಪ್ರಶ್ನೆ ಹಾಕಿದ.
"ಇವ್ರೂ ನನ್ ಕ್ಲಾಸ್‌ಮೇಟ್ ಕಣ್ರಿ.. ನಾನಿವನನ್ನು ರೇಪ್ ಮಾಡೋಕೆ ಎರಡು ಸಾರಿ ಪ್ರಯತ್ನಿಸಿದ್ದೀನಿ" ಎಂಸು ಬಲಿಪಶು ಕಡೆ ತಿರುಗಿ "ಹೌದೋ ಅಲ್ಲವೋ" ಎಂದು ಕಣ್ಣು ಮಿಟುಕಿಸಿದಳು.
ಅದಕ್ಕೆ ಅವನು ವಿಧೇಯ ವಿದ್ಯಾರ್ಥಿಯಂತೆ ತಲೆ ಅಲ್ಲಾಡಿಸಿದನು.
"ಅಭ್ಯಾಸಾನುಸಾರಿಣೀ ವಿದ್ಯಾಬುದ್ಧಿ; ಕರ್ಮಾನುಸಾರಿಣೀ" ಎಂದು ಶಾಸ್ತಿಗಳು ಬಿಟ್ಟು ಬಿಡಮ್ಮಾ ಆದಿಶಕ್ತಿ ಅವನು ಮದುವೆಯಾಗೋ ಹುಡುಗ"
"ಅದನ್ನು ಪರೀಕ್ಷೆ ಮಾಡಬೇಕೂಂತಲೇ ನಾನು ಪ್ರಯತ್ನಿಸಿದ್ದು ಶಾಸ್ತಿಗಳೇ" ಎಂದು ಆಕೆ ತುಂಬ ಬೊಲ್ಡಾಗಿ ಉತ್ತರ ಕೊಟ್ಟಳು.
ವಿಧಿ ಲಿಖಿತಂ ಬುದ್ಧಿರನುಸರತಿ ಅಂತ ಹಣೆಹಣೆ ಚಚ್ಚಿಕೊಳ್ಳುತ್ತ ಒಳಗಡೆ ಹೋದರು.
ಶಾಮನ ಸುಪ್ತಾವಸ್ಥೆಯ ಮನಸ್ಸಿನ ನೂರೆಪ್ಪತ್ತರಡನೆಯ ಪುಟದ ಕೊನೇ ಪ್ಯಾರಾದಲ್ಲಿ ಜಲಜಾಕ್ಷಿಯ ರೂಪದ ಹಾಗೂ ಕಬಂಧ ಬಾಹುವಿನ, ಧೃತರಾಷ್ಟ್ರಾಲಿಂಗನದ ವರ್ಣನೆ ಇತ್ತು. ಆದ್ದರಿಂದ ಅವನು ಒಲ್ಲದ ಮನಸ್ಸಿನಿಂದ ಸಲ್ಲದ ಕಾರ್ಯವನ್ನು ಮಾಡಲು ಸಂಸಿದ್ಧನಾದನು.
ರಘು ಜಲಜಾಕ್ಷಿ ಕೂತಿದ್ದ ಕಾರಿನ ಹಿಂಭಾಗವನ್ನು ಎರಡೂ ಕೈಗಳಿಂದ ಸ್ಪರ್ಶಿಸಿದಾಗ ಅಸದಳ ಆನಂದವಾಯಿತು. ಜಲಜಾಕ್ಷಿಯ ಭಾರೀ ಜಘನಗಳನ್ನು ತಳ್ಳುತ್ತಿರುವೆನೆಂದು ಅವನು ಭಾವಿಸಿದ. ತಿಣುಕುತ್ತ ತಳ್ಳುತ್ತಲೆ ಅವನ ತಳ ಕ್ಲಾರಿನೇಟ್ ವಾದನ ಮಾಡಿತು. ಅಷ್ಟು ದೂರ ತಳ್ಳಿದ. ಕಾರು ಸ್ಟಾರ್ಟ್ ಆಗುತ್ತಲೆ ‘ಪಾಹಿಮಾಮ್ ಜಗನ್ಮಾತಾ’ ಎಂದು ಉದ್ಗರಿಸುತ್ತ ಮನೆಯೊಳಗೆ ಓಡಿ ತಲೆ ಮರೆಸಿಕೊಂಡನು.
ಪ್ರಾಯೋ ಗಚ್ಚತಿ ಯತ್ರ ದೈವಹತಕಃತತ್ರೈವ ಯಾಂತ್ಯಾಪದಃ ಎಂದು ಭರ್ತೃಹರಿ ಹೇಳಿರುವುದು ಸುಳ್ಳಾಗದು.
"ಅಡಸಿದಾಪತ್ತಿನಲಿ ಧೈರ್ಯವ ಹಿಡಿವುದೇ ಸುಪ್ರೌಢೀ ಅಂತ ಕೋಳಿವಾಡದ
ನಾರಣಪ್ಪನೋರು ಹೇಳಿರುವುದು ಸುಳ್ಳಲ್ಲವೋ" ಎಂದು ಶಾಸ್ತ್ರಿಗಳು ಮೊಮ್ಮಗನನ್ನು ಎದುರಿಗೆ ಕೂಡ್ರಿಸಿಕೊಂಡು ಪ್ರಾಪಂಚಿಕ ಜ್ಞಾನದ ಬಗ್ಗೆ ವಿವರಿಸುತ್ತಿರುವಾಗ..
ಅತ್ತ..
"ಈ ರಘು ನಿಜಕ್ಕೂ ಹುಲಿ ಕಣೇ ಅನಸೂಯಾ...ಪೋಲೀಸರನ್ನು ಯಾರು ಹೆದರಿಸುವರೋ ಅಂಥವರು ಹೆಂಡತಿಗೆ ಖಂಡಿತ ಹೆದರಿ ಬಾಳುವು ಮಾಡ್ಕೊಂಡು ಹೋಗ್ತಾರೆ ನೋಡು" ಎಂದು ಜಲಜಾಕ್ಷಿ ಅಣಿಮುತ್ತುಗಳನ್ನುದುರಿಸಿದಳು. "ಇಂಥವರು ತಮ್ಮ ಪ್ರತಿಭೆಯನ್ನು ಇಂದಿನ ರಾಜಕಾರಣಕ್ಕೆ ಧಾರೆ ಎರೆಯಬೇಕಿದೆ" ಎಂದು ರಾಜಕಾರಿಣಿಯ ಗತ್ತಿನಲ್ಲಿ ನುಡಿದಳು.

ಬ್ರಹ್ಮನ ಮುಖದಿಂದ ಜನಿಸಿದ ಕಾಮಧೇನುವೇ ಅಟಕ್ ಪಿಟಿಕ್ ವಾಚಿನ ರೂಪದಲ್ಲಿ ಅಲಂಕರಿಸಿರುವುದೋ ಎಂಬಂತಿದ್ದುದರ ಕಡೆ ಕುಡಿ ನೋಟ ಬೀರಿದಳು. ಇತಿಹಾಸದ ನಾಳಿನ ಪುಟದಲ್ಲಿ ಭಾರತದ ಭವಿಷ್ಯ ಬರೆಯಲಿರುವ ತಾನು ಯಕಃಚಿತ್ ವಾಚಿಗೆ ಪರವಶಳಾಗುವುದೆಂದರೇನು?...ದಿಕ್ಕುಗಳನ್ನು ಹಡುಕಿಕೊಂಡಲೆಯುವ ತನ್ನ ಎಮ್ಮೆಲ್ಲೆ ಡಾರ್ಲಿಂಗಿಗೆ ಹೇಳಿದರಾಯಿತು. ಕಂಕುಳದವರೆಗೆ ಕಟ್ಟಿಕೊಳ್ಳುವಷ್ಟು ತಂದುಕೊಡುವನು!

ಆಕೆ ತನ್ನ ಘನವಾದ ವಾಚಿನ ಕಡೆ ನೋಡುತ್ತಿರುವಾಗ ಅನಸೂಯಾ ಕಾಫಿಯೊಂದಿಗೆ


೧೬೪

ಚುರುಮುರಿ ತಂದುಕೊಟ್ಟಳು. ತನ್ನ ಕಿಲಾಸು ಮೇಟಿಗೆ ಕುರುಕುಲು ತಿಂಡಿ ಎಂದರೆ ತುಂಬ ಇಷ್ಟವೆಂದು ಆಕೆಗೆ ಗೊತ್ತಿಲ್ಲದಿಲ್ಲ. ಇಲ್ಲವಾದರೆ ಈ ಪಾಟಿ ದೇಹ ಬೆಳೆಸಿಕೊಳ್ಳುವುದು ಹೇಗೆ ಸಾಧ್ಯ? ಆಕೆ ಕಣ್ಣು ಮಿಟಿಕಿಸುವುದರೊಳಗಾಗಿ ತಿಂದು ಮುಗಿಸಿದಳು. ಕಾಫಿ ಕುಡಿಯುತ್ತ ಮದುವೆಯ ದಿನದ ಬಗ್ಗೆ ವಿಚಾರಿಸಿದಳು. ಕರವಸ್ತ್ರದಿಂದ ಬಾಯಿ ಒರೆಸಿಕೊಳ್ಳುತ್ತ ಒಳ್ಳೆ ಕ್ರಾಂತಿಕಾರಿಯನ್ನೇ ಮಾಡ್ಕೊಳ್ತಿದೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದಳು. ತನ್ನ ಗೆಳೆತಿಯ ಕಿವಿಯೊಳಗೆ ಬಾಯಿಇಟ್ಟು ಡರ್ರನೆ ಡೇಗಿ ‘ಏನಾದ್ರು ಒಂಚೂರು ಶಾಂಪಲ್ ನೋಡಿದೇನು? ಎಂದೂ, ಆ ಶಾಸ್ತ್ರಿಯನ್ನು ಪ್ರೀತಿಸಿ ಮೋಸ ಹೋಗಿದ್ದಿ ಎಂದೂ, ಮದುವೆಗೆ ಮುಂಚೆ ಟೇಸ್ಟ್ ನೋಡೊದನ್ನು ಮರೆಯಬೇಡವೆಂದೂ; ಅದರಲ್ಲಿ ತಾನು ಎಕ್ಸ್‌ಪರ್ಟ್ ಎಂದೂ; ಇಲ್ಲದಿದ್ದಲ್ಲಿ ತನ್ನಿಂದ ವ್ಹೇಟ್‌ಲಿಫ್ಟ್ ಮಾಡಲಿಕ್ಕಾಗುತ್ತಿರಲಿಲ್ಲವೆಂದೂ ಪಿಸುಗುಟ್ಟಿದಳು.

ಇನ್ನೂ ಹೇಳುತ್ತಿದ್ದಳೇನೋ! ಆದರೆ ಓಣಿಯ ಹುಡುಗರೆಲ್ಲ ಕಾರಿನ ಪಾರದರ್ಶಕದ ಮೈಯೊಳಕೆ ಇಣುಕಿ ತಂತಮ್ಮ ಮುಖವನ್ನು ನೋಡಿಕೊಳ್ಳತೊಡಗಿದ್ದರು. ಕೆಲವರು ಪುಂಯ್ ಪುಂಯ್ ಅಂತ ಹಾರ್ನ್ ಮಾಡುತ್ತಿದ್ದರೆ ಮತ್ತೆ ಕೆಲವರು ಅದರ ಮೇಲೆ ಸ್ವಯಾರ್ಜಿತ ಜ್ಞಾನವನ್ನು ಧಾರೆಎರೆಯತೊಡಗಿದ್ದರು. ಈ ಕಾರಣದಿಂದಾಗಿ ಜಲಜಾಕ್ಷಿ " ಅನೂ ಬರ್ತೀನಿ...ಮುಂದೆ ಹೇಗೋ ಎಮ್ಮೆಲ್ಲೆಯಾಗಿ ಬೆಂಗ್ಳೂರಲ್ಲಿರ್‍ತೀನಲ್ಲ... ಆಗ ವಿಚಾರಿಸಿಕೊಳ್ತೀನಿ" ಎಂದು ಬೀಳ್ಕೊಂಡು ಹೊರಟಳು.

ಆಕೆ ಮರೆಯಾಗುವವರೆಗೆ ರಘು ನೋಡಿದ. ಇಂಥಾಕಿ ತಮ್ಮ ಕ್ರಾಂತಿಕಾರಿಚಟುವಟಿಕೆಗಳಲ್ಲಿ ಇದ್ದುಬಿಟ್ಟಿದ್ದರೆ ಚಿಟಿಕೆ ಹೊಡೆವಷ್ಟರಲ್ಲಿ ಸಮಾನತೆಯನ್ನು ಸಾಧಿಸಿಬಿಡಬಹುದೆಂದುಕೊಂಡ. ಇಂಥಾಕಿಯ ತ್ರಿವರ್ಣದ ಭಾವಚಿತ್ರ ಇಟ್ಟುಕೊಂಡೇ ಅಮೀರರ ಮತ್ತು ಗರೀಬರ ನಡುವಿನ ಕಂದರ ಅಳಿಸಿಬಿಡಬಹುದೆಂದುಕೊಂಡ ರಘು ಒಂದು ನಿಡಿದಾದ ಉಸಿರುಬಿಟ್ಟನು.

ಅನಸೂಯ ಏನೋ ಹೇಳಬೇಕೆಂದು ಬಾಯಿ ತೆರೆದಳು. ಬೆಳಗಿನ ತಿಂಡಿಗೆ ಜೊತೆಯಾಗಿ ಶಾಸ್ತ್ರಿಗಳ ಮನೆಗೆ ಬರಬೇಕೆಂದು ಆರು ಬೊಟ್ಟಿನ ಪದ್ದಕ್ಕ ತುಸು ಹೊತ್ತಿನ ಹಿಂದೆ ಬಂದು ಹೇಳಿ ಹೋಗಿದ್ದಳು. ಜೊತೆಯಾಗಿ ಅಲ್ಲದಿದ್ದರೂ ರಘು ನನ್ನೊಬ್ಬನ್ನೇ ಕಳಿಸಬಹುದು! ತಿಂಡಿಯಲ್ಲಿ ಏನಾದರೂ ಹಾಕಿಬಿಟ್ಟರೆ ಎಂದು ಅನುಮಾನ ಕಾಡಿತು. ತಿಂಡಿ ತಿಂದಾದ ಮೇಲೆ ತಟ್ಟೆ ಕಪ್ಪು ತೊಳೆ ಎಂದು ಹೇಳಿಬಿಟ್ಟರೆ ಎಂಬ ಇನ್ನೊಂದು ಅನುಮಾನವೂ ಕಾಡಿತು. ಹೃದಯದೊಳಗೊಂದೂ ಬಚ್ಚಿಟ್ಟುಕೊಳ್ಳದೆ ಬಾಯಿಯಿಂದ ರಘು ಒಂದೇ ಸಮನೆ ಪುತುಪುತು ಮಾತಾಡಿಬಿಟ್ಟರೆ ಎಂಬ ಮತ್ತೊಂದು ಅನುಮಾನವೂ ಕಾಡಿತು. ಶಾಸ್ತ್ರಿಗಳಾಗಲೀ; ಅಲುಮೇಲಮ್ಮನಾಗಲೀ ರಘೂಗೆ ಇಲ್ಲಸಲ್ಲದ್ದನ್ನು ಹೇಳಿ ಸಂಬಂಧ ಮುರಿದುಬಿಟ್ಟರೆ ಎಂಬ ಮಗದೊಂದು ಅನುಮಾನವೂ ಕಾಡಿತು. ಹೀಗೆ ಯೋಚಿಸುತ್ತಾ ಯೋಚಿಸುತ್ತಾ ತನ್ನ ಅನುಮಾನಗಳಿಗೆ ತನಗೇ ನಗು ಬಂದು ಅನುಸೂಯ
ಕಿಲಕಿಲ ನಕ್ಕಳು.

ಅಕ್ಕ ತಮ್ಮ ಇಬ್ಬರೂ ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದರು.
*
*
*
ಮರುದಿನ ಬೆಳೆಗ್ಗೆ ಸೂರ್ಯನ ಕಿರಣಗಳು ಸಚರಾಚರಗಳಿಗೆ ಹಲೋ ಹಲೊ ಅನ್ನುತ್ತಿರುವಾಗ ಆರು ಬೊಟ್ಟಿನ ಪದ್ದಕ್ಕ ಬರಬೇಕಂತೇ ಅಂತ ಮತ್ತೆ ಬಂದಳು. ಒಂದು ಪಟ್ಟದ


೧೬೫

ಹಿಂದೆಯೇ ಕುಡುಕ ಗಂಡನನ್ನು ತ್ಯಜಿಸಿರುವ ಪದ್ದಕ್ಕಗೆ ಮೂಲತಃ ಮಾಂಸಾಹಾರಿಯಾದರೂ ಅಪ್ಪಟ ಸಸ್ಯಾಹಾರಿಗಳ ಮನೆಯಲ್ಲಿ ಕಸಮುಸುರಿ ಮಾಡುವುದೆಂದರೆ ತುಂಬ ಮೋಜು. ಗಂಡಸರನ್ನು ತ್ಯಜಿಸಿದ ಪಾಪ ಪರಿಹಾರರ್ಥವಾಗಿ ಶಾಸ್ತ್ರಿಗಳ ಮನೆಯಲ್ಲಿ ಸೇವೆಗೆ ಸೇರಿಕೊಂಡಿದ್ದಳು. ಒಂದೆರಡು ತಿಂಗಳ ಹಿಂದೆ ಕೈಗೆ ಬಂದಿರುವ ಮಗನನ್ನು ಎಲ್ಲರಿಗೆ ತೋರಿಸಿಕೊಂಡು ಅಡ್ಡಾಡಿದ್ದಳು. ಕಸಮುಸುರಿಯಿಂದ ಕೂಡಿಟ್ಟಿದ್ದ ಗಂಟನ್ನು ಮಗನ ಕೈಗೆ ಕೋಡುತ್ತ ‘ನಿಮ್ಮಪ್ಪನ್ನ ಬೇಷಿ ನೋಡ್ಕಳಪಾ’ ಎಂದು ಕಣ್ತುಂಬಿ ಹೇಳಿ ಬೀಳ್ಕೊಟ್ಟಿದಳು.

"ಅನಸೂಯಮ್ಮನವರೇ.. ನಿಮ್ಮವರನ್ನು ಕರಕೊಂಡು ಬರಬೇಕಂತೆ.. ಅಲುಮೇಲಮ್ಮನವರು ಬಿಟ್ಟು ಬರಬೇಡ ಎಂದು ಹೇಳಿದ್ದಾರೆ!" ಪದ್ದಕ್ಕಗೆ ವ್ಯಾಕರಣ ಶುದ್ಧ ಮಾತಾಡುವುದೆಂದರೆ ಇತ್ತೀಚಿಗೆ ತುಂಬಾ ಖಯಾಲಿ.

ತಮ್ಮ ಮಗಳಾಗಲೀ; ತಮ್ಮನಾಗಲೀ ಅಲ್ಲಿಗೆ ಹೋಗುವುದು ರುಕ್ಕಮ್ಮಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.

ಆದರೆ ದೋಸೆ ವಾಸನೆ ಎಂಬ ಬಲೆಯಲ್ಲಿ ಬಂಧಿತನಾಗಿ ವಿಲಿವಿಲಿ ಒದ್ದಾಡುತ್ತಿದ್ದ ರಘುವನ್ನು ತಡೆಯುವುದು ಒಂದೆ, ಉಕ್ಕಿ ಹರಿಯುವ ನದಿಯನ್ನು ತಡೆಯುವುದು ಒಂದೆ.
"ಪದ್ದಕ್ಕ.. ನಾನಿಲ್ಲಿ ಮಾಡಿಟ್ಟಿರೋ ತಿಂಡಿ ಯಾರು ತಿನ್ನಬೇಕಮ್ಮಾ?.. ಅವಲಕ್ಕಿ ವಗ್ಗರಣೆ ಮಾಡಿ ಕಾಯ್ತಿದೀನಿ" ರುಕ್ಕಮ್ಮ ಬಚ್ಚಲಮನೆಯಿಂದಲೇ ಕೂಗಿದಳು.

ಸುತ್ತೆಲ್ಲ ಗುಡ್‌ಮಾರ್ನಿಂಗ್ ಹೇಳುತ್ತಿರುವ ಮಸಾಲೆ ದೋಸೆ ಪರಿಮಳ ಬೇರೆ, ಮಂತ್ರಮುಗ್ದನಾದ. ಪರವಶನಾದ. ಬ್ರಾಹ್ಮಣ ವಿಧವೆಯರು ರುಚಿಕರವಾದ ದೋಸೆ ತಯಾರಿಸುತ್ತಾರೆಂಬುದು ಅವನು ಕಂಡುಹಿಡಿದ ಸಿದ್ಧಾಂತಗಳಲ್ಲಿ ಒಂದು. ಉದ್ದಿನಬೇಳೆ ಪ್ರಮಾಣ ಕಡಿಮೆ ಇದ್ದರೂ ರುಬ್ಬಿದ ಹಿಟ್ಟು ಉಬ್ಬುವುದು ಅವರ ಮೇಲಿನ ಅಂತಃಕರಣದಿಂದಾಗಿಯೇ ಎಂಬುದು ಅವನು ಕಂಡುಕೊಂಡ ಹಲವು ಸತ್ಯಗಳಲ್ಲಿ ಒಂದು.

ಬರೀ ವಗ್ಗರಣೆ ಮಾಡುವುದರಲ್ಲಿಯೇ ಜೀವ ಸವೆಸಿದ ಅಕ್ಕನ ಕಡೆ ನೋಡಿದ. ಅಕ್ಕನಿಗೆ ದೋಸೆ ಮಾಡುವುದು ಗೊತ್ತಿದ್ದಲ್ಲಿ ಭಾವ ಮಾನವಾತೀತ ಶಕ್ತಿಯನ್ನು ಹಿಂಬಾಲಿಸಿ ಹೋಗುತ್ತಿರಲಿಲ್ಲವೇನೋ?

ಒಳಗಡೆ ಅಕ್ಕ ಕಾದ ಕಡಾಯಿಯಲ್ಲಿ ಎನೇನೋ ಹಾಕಿ ಚುಂಯ್ ಚುಂಯ್ ಅನ್ನಿಸುತ್ತಲೆ ಇರುವಳು. ಸೀರೆಗೆ ಕೈಯೊರಸಿಕೊಳ್ಳುತ್ತ ಆಕೆ ಅಕಸ್ಮಾತ್ ಪಡಸಾಲೆಗೆ ಬಂದಳು.

ಬೆಂಗಳೂರಿನಲ್ಲಿ ವಾಸಿಸುತ್ತಿರುವವನು ಎಂಬ ಅಕ್ಕರೆಯಿಂದ ಪದ್ದಕ್ಕ ರಘೂನ ಕಡೆಗೆ ಕಡೆಗೆ ನೋಡುತ್ತ ನೋಡುತ್ತ ಮುಖವನ್ನು ಸಾಕಷ್ಟು ಕೆಂಪಗೆ ಮಾಡಿಕೊಂಡಿದ್ದಳು. ಸಾಮಾನ್ಯ ಮನುಷ್ಯನನ್ನು ಮಾತಾಡಿಸಿದಂತೆ ಬೆಂಗಳೂರಿನವರನ್ನು ಮಾತಾಡಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಆಕೆ ಒರಳಲ್ಲಿ ಅವಲಕ್ಕಿ ಕುಟ್ಟುವ ಹಾಗೆ ಭಾಷೆಯನ್ನು ಅಲಂಕಾರವೆಂಬ ಒರಳಲ್ಲಿ ನಿಶ್ಶಬ್ದವಾಗಿ ಕುಟ್ಟುವ ತಾಲೀಮು ನಡೆಸಿದ್ದಳು.

ಪದ್ದಕ್ಕ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದುದ್ದನ್ನು ನೋಡಿ ರುಕ್ಕಮ್ಮ ಊಹಿಸಿದ್ದೇ ಬೇರೆ! ಗಂಡಿನ ಆಸರೆಯಿಂದ ವಂಚಿತಗೊಂಡಿರುವ ಹೆಣ್ಣುಗಳೆಂದರೆ ಆಕೆಗೆ ಎಲ್ಲಿಲ್ಲದ ಗುಮಾನಿ. ಒಮ್ಮೊಮ್ಮೆ ತನ್ನನ್ನು ತಾನೇ ಅನುಮಾನಿಸುತ್ತಿದ್ದ ಜಾಯಮಾನದಾಕಿಯೂ ಹೌದು.
"ಏನ್ ಪದ್ದಕ್ಕ? ಇನ್ನೂ ಇಲ್ಲೇ ನಿಂತಿದ್ದೀಯಲ್ಲೆ... ನಾನು ಹೇಳಿದ್ದು ಕಿವಿಗೆ ಬೀಳ್ಲಿಲ್ಲೇನು?"


೧೬೬

ಎಂದು ರುಕ್ಕಮ್ಮ ಕೈಯಲ್ಲಿದ್ದ ಸವುಟು ಝಳಪಿಸಿಬಿಡುವುದೇನು!
ಸೆಂಟಿನ ಗಾಳದಲ್ಲಿ ಸಿಕ್ಕಿಕೊಂಡಿದ್ದ ಪದ್ದಕ್ಕ ಬೆಚ್ಚಿ ಬಿದ್ದಳು.
"ಕಳಿಸ್ರಿ ರುಕ್ಕಮ್ಮನವರೇ.. ಇಲ್ಲಾಂದ್ರೆ ಅಮ್ಮನವರಿಗೆ ಬೇಸರವಾಗುತ್ತೆ" ವಯ್ಯಾರದಿಂದ ಹೇಳಿದಳು.
"ನೀವೆಂಗ ಮಾತಾಡ್ತಿದ್ದೀಯಲ್ಲ ಪದ್ದಕ್ಕ..." ರುಕ್ಕಮ್ಮ ತಮ್ಮನ ಕಡೆ ಕಣ್ಣಿಂದ ಸಂಜ್ಞೆಮಾಡುತ್ತ " ಅವನೇನು ಚಿಕ್ಕ ಮಗೂನಾ ಎಲ್ಲಿಗೋಗ್ಬಾರ್ದು ಎಲ್ಲಿಗೋಗಬೇಕು ಅಂತ ಹೇಳಿಸಿಕೊಳ್ಳೋಕೆ" ಎಂದು ಒದ್ದೆ ಕೈಯನ್ನು ಸೀರೆಗೆ ಒರೆಸಿಕೊಂಡಳು.
ರಘೂ ಬಿಸಿತುಪ್ಪವನ್ನು ನುಂಗಲಾರ ಉಗುಳಲಾರ.
ಕೊನೆಗೂ ಧೈರ್ಯದಿಂದ -
"ಅಷ್ಟೊಂದು ಕರೀತಿದ್ದಾರಂದ್ರೆ ಹೋಗದಿದ್ರೆ ಹೇಗೆ?" ಎಂದ.

ಅವನೇ ಹೋಗಿಬರುವುದಾಗಿ ಹೇಳಿದ ಮೇಲೆ ತಮಗಿನ್ನೇನು ಕೆಲಸ? ಯಾರ ಮುಖವನ್ನು ನೋಡುವ ಧೈರ್ಯ ಮಾಡದೆ ಭಾವನ ಕಂದು ವರ್ಣದ ಪಂಚೆಯನ್ನು ಮಡೆಚಿ ಲುಂಗಿ ರೀತಿಯಲ್ಲಿ ಉಟ್ಟುಕೊಂಡು ಮೇಲೆ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ತೊಟ್ಟುಕೊಂಡು ಕನ್ನಡಿಯಲ್ಲಿ ಇಣುಕಿ ತನ್ನ ರೂಪಕ್ಕೆ ತಾನೆ ಬೆರಗಾದ. ಅವನು ಸಾಮಾನ್ಯವಾಗಿ ದೋಸೆ ಸೇವಿಸಬೇಕಾದ ಸಂದರ್ಭದಲ್ಲಿ ಧರಿಸುತ್ತಿದ್ದುದು ಕೆಂಪು ಬಣ್ಣದ ಅಂಗಿಯನ್ನು, ಆದರೆ ತಾನಿಂದು ದೋಸೆ ಲಗಾಯಿಸುತ್ತಿರುವುದು ಸಿದ್ಧಾಂತಿಗಳ ಮನೆಯಲ್ಲಿ. ಆದ್ದರಿಂದ ಸಾತ್ವಿಕವಾಗಿ ಕಾಣುವುದು ಮುಖ್ಯ. ಅದೂ ಅಲ್ಲದೆ ನಖಶಿಖಾಂತ ಸಜ್ಜನಿಕೆ ಪ್ರಕಟಿಸುವುದು ಅನಿವಾರ್ಯವಾಗಿತ್ತು. ಎಲಿಜಬೆತ್ ಟೇಲರ್ ಹಿಂದೆ ರಿಚರ್ಡ್ ಬರ್ಟನ್ ನಡೆದ ರೀತಿಯಲ್ಲಿ ಹತ್ತು ಹೆಜ್ಜೆ ನಡೆಯುವುವಷ್ಟರಲ್ಲಿ ‘ಮಾಮಾ’ ಎಂಬ ಕೋಮಲ ದ್ವನಿ ಕೇಳಿ ಬಂತು. ಗಕ್ಕನೆ ನಿಂತ. ಅನಸೂಯಾ ಬಂದಳು. ವೀರ ಯೋಧನಿಗೆ ಸ್ತ್ರೀರತ್ನ ಶುಭ ಹಾರೈಸದಿದ್ದರಾದೀತೇ? ಅವನ ಹಣೆಗೆ ಶ್ರೀಗಂಧದ ಬೊಟ್ಟಿಟ್ತು, ಮುಂಗೈಗೆ ಅಟಕ್ ಪಿಟಕ್ ವಾಚು ಕಟ್ಟಿದಳು. "ಮಾಮಾಽಽ... ಅವಲಕ್ಕಿ ವಗ್ಗರಣೆಗೆ ಹೊಟ್ಟೇಲಿ ಒಂಚೂರು ಜಾಗ ಖಾಲಿ ಇರ್ಲಿ ಮಹರಾಯ... " ಎಂದು ಪಿಸುಗುಟ್ಟಿದಳು. ರುಕ್ಕಮ್ಮ ಸಿಡುಕಿ ಪಾಕಶಾಲೆಯಂ ಪೊಕ್ಕಳು. ಆಯ್ತು.. ಆಯ್ತು ಅನ್ನುತ್ತ ರಘು ತಲೆಹೊಸ್ತಿಲು ದಾಟಿದ.

ಕಿರ್ದಬಲ ಓಡಿ ಪದ್ದಕ್ಕ ಮುನ್ಸೂಚನೆ ನೀದಿದ್ದರಿಂದ ಸ್ವಾಗತಿಸಲು ಅಲುಮೇಲಮ್ಮ ಖುದ್ದ ತನ್ನ ಪುತ್ರರತ್ನವನ್ನು ಕಳಿಸಿದಳು. ದೋಸೆಯೂ, ಕ್ರಾಂತಿಕಾರಿಯೂ ಎಂಬ ಕವನವನ್ನು ತಲೆ ತುಂಬಿಟ್ಟುಕೊಂದಿದ್ದ ಶಾಮಾ ಶಾಸ್ತ್ರೀ ತುಳಸಿ ಗಿಡದ ಬಳಿ ಕಾಯುತ್ತ ನಿಂತಿದ್ದ. ತಾನು ಒಳಗೊಳಗೇ ಹೊಟ್ಟೆಕಿಚ್ಚು ಪಡುತ್ತಿರುವ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಬಂದುಬಿಡುವನು! ಹಸ್ತಲಾಘವದ ಮೂಲಕ ತನ್ನ ವ್ಯಕ್ತಿತ್ವವನ್ನು ಅಳತೆ ಮಾಡಿದರೇನು ಮಾಡುವುದು?.. ಹೀಗೆ ಯೋಚಿಸುವಷ್ಟರಲ್ಲಿ ರಘು ಮೂಗರಳಿಸಿಕೊಂಡು ಬಂದೇ ಬಿಡುವುದೇ! ‘ಹಲೋ ಶಾಮಾ ಶಾಸ್ತ್ರಿ’ ಎಂದು ತಾನೇ ಮುಂದುಬಿದ್ದು ಕೈಹಿಡಿದುಬಿಡುವುದೆ! ಕೀಲು ಸಡಿಲುವಂತೆ ಕುಲುಕಿಬಿಡುವುದೆ! "ನಿಮ್ಮ ಪರಿಚಯ ಆಗುತ್ತಿರುವುದರಿಂದ, ತುಂಬ ಸಂತೋಷವಾಗ್ತಿದೆ!" ಎಂದು ಅಸ್ಖಲಿತವಾಗಿ ನುಡಿದುಬಿಡುವುದೆ?

ಎಲ್ಲಿ ತಮ್ಮ ವಂಶೋದ್ಧಾರಕನ ಕೈ ದೇಹದಿಂದ ಬೇರ್ಪಟ್ಟಿತೋ ಎಂದು ಲಗುಬಗೆಯಿಂದ ಧ್ಯಾನಾಸಕ್ತರಾಗಿದ್ದ ಶಾಸ್ತ್ರಿಗಳು ಕೋಣೆಯಿಂದ ಓಡಿಬಂದರು.
‘ಬಾರಪ್ಪಾ ಬಾ’ ಎಂದು ಮೂರು ಮೊಳ ದೂರ ನಿಂತು ಬರಮಾಡಿಕೊಂಡರು.


೧೬೭

"ನಮಸ್ಕಾರ" ಅಂದ.
ಸಾಮಾಜಿಕ ಬದಲಾವಣೆಯನ್ನು ಬಿಲ್‌ಕುಲ್ ನಿರಾಕರಿಸುವಂಥ ಸನಾತನತೆಯಿಂದಲೇ ಮಾಡಲ್ಪಟ್ಟಂತಿರುವ ದಿವ್ಯ ಮೂರ್ತಿಯನ್ನು ನಖಶಿಖಾಂತ ದಿಟ್ಟಿಸಿದ.
ಶಾಸ್ತ್ರಿಗಳು ದಿಟ್ಟಿಸಿದರು.
ಭ್ರೂ ಮದ್ಯೆ ಸ್ರಕ್ಚಂದನ ತಿಲಕ!
ಮುಖದ ತುಂಬ ದೇದೀಪ್ಯ ಮಂದಹಾಸ!
ಸಾಕ್ಷಾತ್ ಶ್ರೀ ಮನ್ಮಹಾ ವಿಷ್ಣುವೇ ಶೂದ್ರ ರೂಪ ಧರಿಸಿ ತಮ್ಮ ಮುಂದೆ ನಿಂತಿರುವಂತೆ ಒಂದು ಕ್ಷಣ ಭಾಸವಾಯಿತು.
ತಮ್ಮ ಕಲ್ಪನೆಗೆ ತಾವೇ ಪಷ್ಚಾತ್ತಾಪಪಟ್ಟುಕೊಂಡರು.
ತಿಂಡಿಗೆ ಆಮಂತ್ರಿಸಿರುವ ಸೊಸೆಯನ್ನು ಮನದಲ್ಲಿ ಟೀಕಿಸಿದರು.
ಈ ಬಗ್ಗೆ ಸೊಸೆಗೂ ತಮಗೂ ಬ್ರಾಹ್ಮೀ ಮಹೂರ್ತದಲ್ಲಿ ನಡೆದ ಜಟಾಪಟ ಮರುಕಳಿಸಿತು. ದೈಹಿಕವಾಗಿ ದುರ್ಬಲಗೊಂಡಂತಹ ತಮ್ಮಂಥವರು ಕೇವಲ ದೃಷ್ಟಿಯುದ್ಧ ಮಾಡಲಿಕ್ಕೆ ಮತ್ತು ನಿಟ್ತುಸಿರು ಬಿಡಲಿಕ್ಕೆ ಮಾತ್ರ ಅರ್ಹರು.
ಪೌರೋಹಿತ್ಯದ ಸಾತ್ವಿಕ ಪರಿಮಳದೊಂದಿಗೆ ದೋಸೆಯ ಮಾದಕ ಪರಿಮಳವೂ ಬೆರೆತು ವಿಚಿತ್ರವಾದ ವಾಸನೆ ಸೃಷ್ಟಿಸಿದ್ದ ಹಾದಿಯಲ್ಲಿ ಹಿತಮಿತವಾದ ಹೆಜ್ಜೆ ಹಾಕುತ್ತ ನಡೆದು ಅವರು ಸೂಚಿಸಿದ ಜಾಗದಲ್ಲಿ ಕೂಡ್ರಲು ಒಪ್ಪಲಿಲ್ಲ. "ಛೇ, ಛೇ, ಹಿರಿಯರೂ ಪೂಜ್ಯರೂ ಆದ ತಮಗೆ ಸರಿಸಮಾನವಾಗಿ ಕೂತುಕೊಳ್ಳುವುದೇ" ಎಂದು ನೀಚ ಸ್ಥಾನದಲ್ಲಿ ಕೂತುಕೊಂಡ. ಬೆಂಗಳೂರಿನವನಾಗಿದ್ದರೂ ಎಷ್ಟೊಂದು ನಯ ವಿನಯ ಎಂದು ಶಾಸ್ತ್ರಿಗಳು ಮೈ ಸಡಿಲ ಬಿಟ್ಟರು.
‘ಏನು ಮಾಡ್ತಿ, ಏನು ಕಥೆ’ ಎಂದೆಲ್ಲ ಕೇಳಿದರು.
‘ಇಂಥದ್ದು ಮಾಡ್ತೀನಿ, ಇಂಥಾದ್ದು ಕಥೆ’ ಎಂದು ಸವಿವರವಾಗಿ ಹೇಳಿದ.
ಮರು ಕ್ಷಣ ಶಾಸ್ತ್ರಿಗಳ ಕಣ್ಣಲ್ಲಿ ಬೆಂಗಳೂರು ಕಣ್ಣಲ್ಲಿ ಮೈದಾಳಿ ಹಲೋ ಹಲೊ ಎಂದಿತು. ಬೆಂಗಳೂರು ಬಗ್ಗೆ ಏನಾದರೂ ಹೇಳಿಕೊಳ್ಳಬೇಕೆಂಬ ಆಸೆ ಶಾಸ್ತ್ರಿಗಳಿಗೆ ಬಹಳ ದಿನಗಳಿಂದ ಇತ್ತು. ವಿನಮ್ರತೆಯಿಂದ ಕೇಳೋರು ಕಲಿಕಾಲದಲ್ಲಿ ಸಿಗಬೇಕಲ್ಲ.

ಗುರುಹಿರಿಯರಿಯರಿಗೆ ಸಾಕಷ್ಟು ಗೌರವ ಕೊಡುವ ರಘು ತಾವು ಅರಸುತ್ತಿದ್ದ ಅನರ್ಘ್ಯ ರತ್ನವೆಂಬ ಭಾವನೆ ಬಂತು.

ಸನಾತನ ಧರ್ಮದ ಮೇಲೆ ಗುರುಹಿರಿಯರ ಮೇಲೆ ಸಾಕಷ್ಟು ಭಯಭಕ್ತಿ ಇದ್ದುದರಿಂದಲೇ ಮಾಗಡಿ ಕೆಂಪೇಗೌಡರಿಗೆ ಬೆಂಗಳುರು ಪಟ್ಟಣ ಸ್ಥಾಪನೆ ಮಾಡಲು ಸಾಧ್ಯವಾಯಿತೆಂದೋ, ಪೌರೋಹಿತ್ಯದ ಪುಣ್ಯದಿಂದಲೇ ಅದು ಬಿದಿಗೆ ಚಂದ್ರಮನಂತೆ ದಿನಕ್ಕೊಂದು ಚಂದದಲ್ಲಿ ಬೆಳೆದು ಜಂಬೂದ್ವೀಪದಾದ್ಯಂತ ಕೋಟ್ಯಾದೀಶ್ವರರನ್ನು ಸೂಜಿಗಲ್ಲಿನಂತೆ ನಿರಂತರ ಅಕರ್ಷಿಸುತ್ತಿರುವುದೆಂದೂ ಪ್ರವರ ಆರಂಭಿಸಿದರು. ಕೆಲವು ಸುಂದರ ಸ್ಥಳಗಳಿಗೆ ‘ಮ್ಲೇಚ್ಚ’ ಹೆಸರಿಟ್ಟಿರುವುದನ್ನು ಖಂಡಿಸಿದರು. ಲಾಲ್‌ಬಾಗ್ ಎಂಬುದಕ್ಕೆ ಬೃಹದಾರಣ್ಯಕವೆಂಬ ಹೆಸರನ್ನೂ; ಕಬ್ಬನ್ ಪಾರ್ಕ್ ಎಂಬುದಕ್ಕೆ ಬೃಂದಾವನವೆಂಬ ಹೆಸರನ್ನು ಇಡಬೇಕೆಂದು ಆಗ್ರಹಿಸಿದರು. ಆದರೆ ಆ ನಗರ ನಿವಾಸಿಗಳಾದ ಸುಶಿಕ್ಷಿತರು ಕೋಟು ಪ್ಯಾಂಟುಗಳೊಳಗೆ ಅವಿತುಕೊಂಡಿರುವ ಸನಾತನಿಗಳೆಂದು ನುಡಿದರು. ಬೀದಿಗೇಳೇಳು ದೇವಾಲಯಗಳನ್ನು ಕಟ್ಟಿಸಿ ಅವಕ್ಕೆ ಪವಿತ್ರ ಬ್ರಾಹ್ಮಣರನ್ನು


೧೬೮

ಅರ್ಚಕರನ್ನಾಗಿ ನೇಮಿಸಿ ಧರ್ಮ ರಕ್ಷಿಸಿಕೊಂಡು ಬರುತ್ತಿರುವ ಅಲ್ಲಿನ ಪ್ರತಿಯೊಬ್ಬ ವಿದ್ಯಾವಂತನಿಗೂ ‘ಹಿಂದೂ ಧರ್ಮ ಸುರತ್ರಾಣ’ ಎಂಬ ಬಿರುದು ಕೊಡುವಂತೆ ಎಲ್ಲರೂ ಸರಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿದರು.

"ಶಾಸ್ತ್ರಿಗಳೇ ನಿಮ್ಮವರೇ ಆದ ಮುಖ್ಯಮಂತ್ರಿಗಳಾಗಿರೋದು! ನಿಮ್ಮಂಥವರು ಒಂದು ಮಾತು ಹೇಳಿದರೆ ಅವರು ಕಾರ್ಯಗತ ಮಾಡೇತೀರುವವರು" ಪೂಸಿ ಹೊಡೆಯುವುದರಲ್ಲಿ ರಘು ನಿಷ್ಣಾತ. ಎಷ್ಟಿದ್ದರೂ ಅವನು ಬೆಂಗಳುರಿನ ನಿವಾಸಿಯಲ್ಲವೆ...
"ಹೌದಲ್ಲವಾ.. ಗುಂಡುರಾಯರು ನಮ್ಮವರೇ ಅಲ್ಲವೆ? ಅಬ್ಬಾ.. ಎಂಥ ವ್ಯಕ್ತಿತ್ವ ಅವರದ್ದು! ಎಂಥ ತೇಜಸ್ವಿ ಮುಖ ಅವರದು.. ಅಂಥವರು ಸುಖಾಸೀನರಾಗಿರೋದ್ರಿಂದ್ಲೆ ನಾಡು ಸುಭಿಕ್ಷವಾಗಿರೋದು" ಶಾಸ್ತ್ರಿಗಳು ಒಂದು ಕ್ಷಣ ಗುಂಡೂರಾಯರ ಭರ್ಜರಿ ವ್ಯಕ್ತಿತ್ವದ ಕಲ್ಪನೆಯಿಂದ ಅರ್ಧ ನಿಮಾಲಿತ ನೇತ್ರವದನರಾಗಿ ಸ್ವಲ್ಪ ಮುಂಜರುಗಿ ಪಿಸುಗುಟ್ಟುವ ರೀತಿಯಲ್ಲಿ ಹೇಳಿದರು. "ಅಂದ ಹಾಗೆ ನಮ್ಮಂಥ ಬಡ ಬ್ರಾಹ್ಮಣರಿಗೆ ಏನಾದರೂ ವ್ಯವಸ್ಥೆ ಮಾಡಿದ್ದಾರೋ ಅವರು"
"ಬ್ರಾಹ್ಮಣ ಸಮ್ಮವೇಶ, ಸಮ್ಮೇಳನಗಳಿರುವ ಕಡೇಲೆಲ್ಲ ಹೋಗಿ ‘ಬ್ರಾಹ್ಮಣರೇ ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಭಾಶಣ ಮಾಡ್ತಿದಾರೆ ಸ್ವಾಮಿ!"
"ಆ ಬ್ರಾಹ್ಮಣ ವಿರೋಧಿ ದೇವರಾಜ ಅರಸ ಹೇಗೆ?"
"ಅವರಂತೂ ಅಪ್ಪಟ ಶೂದ್ರರ ಪರ ಬಿಡಿ. ಉಳುವವನೇ ಭೂಮಿಗೆ ಒಡೆಯ ಎಂಬಂಥ ಕಾನೂನು ತಂದಿರೋದು ಅವರೇ ಸ್ವಾಮಿ"
"ಹೌದಲ್ಲ.. ಎಂಥ ಕಲಿಕಾಲ ಬಂಥಪ್ಪ ಅಂತೀನಿ.. ನಮ್ಮ ಬ್ರಾಹ್ಮಣರ ಇನಾಮು ಭೂಮಿಗಳೆಲ್ಲ ಶೂದ್ರರ ಪಾಲು ಮಾಡ್ತಿದ್ದಾರಲ್ಲ ಈ ಶೂದ್ರರು.. ನೀನು ಏನೇ ಹೇಳು ರಘುರಾಮ. ನೀನು ಪುರುಷೋತ್ತಮನಾದ ಶ್ರೀರಾಮನ ಹೆಸರು ಇಟ್ಟುಕೊಂಡಿದ್ದೀಯಂತ ಒಂದು ಮಾತು ಹೇಳಬೇಕೆಂದಿದ್ದೇನೆ.. ಈ ದೇಶದಲ್ಲಿ ಬ್ರಾಹ್ಮಣರಿಗೆ ಅನ್ಯಾಯ ಮಾಡೋ ಶೂದ್ರರಿಗೆ ಖಂಡಿತ ಒಳ್ಳೇದಾಗೋದಿಲ್ಲ ನೋಡ್ತಿರು.. ಬ್ರಾಹ್ಮಣರ ವಿರೋಧ ಕಟ್ಟಿಕೊಂಡ ಎಂಥೆಂಥ ಸಾಮ್ರಾಜ್ಯಗಳು ಮಣ್ಣು ಮುಕ್ಕಿದವು.. "

ಶಾಸ್ತ್ರಿಗಳು ತಮ್ಮ ದೈಹಿಕ ಸ್ಥಿತಿ ಅಲಕ್ಷಿಸಿ ಇನ್ನೂ ಎನೇನೋ ಹೇಳಲಿದ್ದರು. ಮದುವೆ ಆಗಲಿರುವ ಹುಡುಗನ ತಲೇನೆಲ್ಲ ಎಲ್ಲಿ ತಿಂದು ಬಿಡುವರೋ ಎಂಬ ಆತಂಕದಿಂದ ಅಲುಮೇಲಮ್ಮ ಕಳಿಸಿದ್ದರಿಂದ ಕರೆಯಲೆಂದು ಶಾಮಾಶಾಸ್ತ್ರಿ ಬಂದ.

ವಯೊವೃದ್ಧರೂ, ಜ್ಞಾನವೃದ್ಧರೂ ಆಡಿದ ಮಾತುಗಳನ್ನು ಕೇಳೀ ಕೇಳೀ ರಘು ಎಂಬ ಹುಲು ನರನಿಗೆ ದೋಸೆ ಬಗೆಗಿದ್ದ ಆಸಕ್ತಿ ಕುತೋಹಲ ಎಲ್ಲ ಕರಗಿ ಹೋಗಿತ್ತು. ಸಾಮಾಜಿಕ ಬದಲಾವಣೆಗಿರುವ ಅಡ್ಡಿ ಆತಂಕಗಳ ಒಂದು ಮುಖ ಅರ್ಥವಾಯಿತು.
"ಶಾಸ್ತ್ರಿಗಳೇ, ದೋಸೆ ಬಗ್ಗೆ ತಮ್ಮ ಅಭಿಪ್ರಾಯವೇನು>" ಎಂದು ರಘು ಅಚಾನಕ್ ಕೇಳಿಬಿಟ್ಟ. ಯಾವ ಮುನ್ಸೂಚನೆಯೂ ನೀಡದೆ ಅವನ ನಾಲಿಗೆ ಮಾತಾಡಿಬಿಟ್ಟಿತು. ಶಾಸ್ತ್ರಿಗಳಿಗಿಂತ ಮೊದಲು ಅವನೇ ಕಂಗಾಲಾದನು.
"ದೋಸೆ ಹಿಂದೂ ಧರ್ಮೀಯರ ಸೇವನೆಗೆ ಯೋಗ್ಯವಾದುದಲ್ಲ.. ಎಲ್ಲ ಅನಿಷ್ಟಗಳಿಗೂ ಮಸಾಲ ದೋಸೆಯೇ ಕಾರಣ.. ಎಲ್ಲಾ ನಮೂನೆಯ ದೋಸೆಗಳನ್ನು ಹಿಂದೂ ದೇಶದಿಂದ

೧೬೯

ಉಚ್ಛಾಟಿಸಬೇಕು" ಶಾಸ್ತ್ರಿಗಳ ಮೊಗ ಜಮದಗ್ನಿಯ ಮುಖದಂತೆ ಕಂಡಿತು ಒಂದು ಕ್ಷಣ.
ಅದನ್ನು ಕೇಳುತ್ತಲೆ ರಘೂನ ವೃಷಣಗಳು ಚಿಕ್ಕದಾಗಿಬಿಟ್ಟವು.
ಕೇಳಿ ಎಂಥ ಕೆಲಸ ಮಾಡಿಬಿಟ್ಟೆ ಎಂದುಕೊಂಡ.
"ಹಾಗಿದ್ರೆ ತಾವು ದೋಸೆಯನ್ನು.. "
"ಖಂಡಿತ ಇಲ್ಲ.. ಖಂಡಿತ ಇಲ್ಲ.. ದೋಸೆಯ ವಾಸನೆಯೇ ಹಿಂದೂ ಧರ್ಮದ ಬೆಳವಣಿಗೆಗೆ ಅಪಾಯಕಾರಿ. ಅದಕ್ಕೂ ನಮಗೂ ಎಣ್ಣೆ ಶೀಗೆಕಾಯಿ ಸಂಬಂಧ" ರಘೂನ ಮಾತನ್ನು ಮಾರ್ಗಮಧ್ಯದಲ್ಲಿ ತುಂಡರಿಸುತ್ತ ನುಡಿದರು.
"ತಾಬು ಅಪ್ಪಣೆ ಕೊಡಿಸಿದ್ದು ನೂರಕ್ಕೆ ನೂರರಷ್ಟು ಸತ್ಯ ನೋಡಿ. ಉದ್ದಿನ ಬೇಳೆ ಎಂಬ ದ್ವಿದಳ ಧಾನ್ಯದ ಸಹವಾಸ ಮಾಡಿ ಅಕ್ಕಿ ಕುಲಗೆಟ್ಟು ಹೋಯ್ತು ನೋಡಿ.. ಕೋಟ್ಯಂತರ ಹುಳಗಳನ್ನು ಹಿಟ್ಟಿನ ರೂಪದಲ್ಲಿ ಕಾವಲಿ ಮೇಲೆ ಬೇಯಿಸೋದೆಂದ್ರೇನು! ಅದೂ ತಮ್ಮಂಥ ಬಹುಶ್ರುತರ ಮನೆಯಲ್ಲಿ...ಶಾಂತಂ ಪಾಪಂ" ವಿವೇಕ ಚೂಡಾಮಣಿಯಂಥ ರಘು ತನ್ನ ಕೈಗಳಿಂದ ತನ್ನ ಕೆನ್ನೆಯನ್ನು ತಪತಪ ಬಡಿದುಕೊಂಡ.
ಹಾವಿನ ಸುಂದರ ಹೆಡೆಯನ್ನು ಸ್ಪರ್ಶಿಸಿದ ಅನುಭವವಾಯಿತು ಶಾಸ್ತ್ರಿಗಳಿಗೆ.
ಕೂಡಲೆ ಮೊಮ್ಮಗನ ಮುಖದೊಳಗೆ ಮುಖವಿಟ್ಟರು.
"ಕೇಳಿದೆ ಏನೋ.. ರಘು ವಾಲ್ಮೀಕಿ ಮಹರ್ಶಿಯಂತೆ ಮಾತಾಡ್ತಿರೋದನ್ನು.. ದೋಸೆ ಮಾಡಬಾರ್ದೂಂತ ಬಡಕೊಂಡೆವು. ನಮ್ಮ ಮಾತನ್ನು ಕೇಳಿದಿರಾ ನೀವೀರ್ವರು; ನಮ್ಮ ಆಚಾರ ವಿಚಾರ ಪರಂಪರೆಗಳನ್ನೆಲ್ಲ ಗಾಳಿಗೆ ತೂರಿ ದೋಸೆ ಮಾಡಲು ನಿರ್ಧರಿಸಿಬಿಟ್ಟಿರಿ. ದೋಸೆ ತಿನ್ನೋರು ನೀವು, ಮುಂದೆ ಅನುಭವಿಸುವವರು ನೀವು.. ಇಂದೋ ನಾಳೆಯೊ ವೈಕುಂಠ ವಾಸಿಗಳಾಗಲಿರುವ ನಮ್ಮ ಮಾತೆಂದರೆ ಅಷ್ಟು ಅಲಕ್ಷೆ.." ಇಡೀ ಜೀವಮಾನದಲ್ಲಿ ಶಾಸ್ತ್ರಿಗಳು ಅಪರೂಪಕ್ಕೆ ಕೋಪಾರುಣನೇತ್ರರಾಗಿದ್ದರು.
ಅವರ ದ್ವನಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ.. ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕುವುದನ್ನು ಬಿಟ್ಟು ಅಲುಮೇಲಮ್ಮ ಬೆಂಕಿ ಮೇಲೆ ಸುರಿದುಬಿಟ್ಟಳು. ಒಂದೇ ಕ್ಷಣದಲ್ಲಿ ಅದರ ಕರುಕು ವಾಸನೆ ಗೃಹವನ್ನವರಿಸಿ ಬಿಟ್ಟಿತು.
ವಯಸ್ಸದಂತೆಲ್ಲ ಮಾವನವರು ವಿಚಿತ್ರವಾಗಿ ಆಲೋಚಿಸುತ್ತಿರುವರಲ್ಲ.. ಎಂದು ನೊಂದಳು.
"ಹೋಗಪ್ಪಾ.. ಹೋಗು" ಎಂದು ಶಾಸ್ತ್ರಿಗಳು ಮುಂದೇನನ್ನೋ (ಬಹುಶಃ ತಿಂದು ಹಾಳಾಗಿ ಹೋಗು ಎಂದು ಹೇಳುತ್ತಿದ್ದರೇನೋ) ಹೇಳಲಿದ್ದರು.
ಅಷ್ಟರಲ್ಲಿ ಒಂದು ದೊಡ್ಡದು ಎನ್ನಬ್ನಹುದಾದಂತ ಗುಂಪೊಂದು ಕೇಕೆ ಶಿಳ್ಳಿ ಮೊದಲಾದ ನಾದ ನಿನಾದ ಮಾಡುತ್ತ ಬಂದು ಬೃಂದಾವನ ಕಟ್ಟೆಯ ಆಚೆ ಜಮಾಯಿಸಿಬಿಟ್ಟಿತು. ತಾರುಣ್ಯದ ಹೊಸ್ತಿಲ ಆಚೆ ಈಚೆ ಇದ್ದ ಹಲವರು ಶಾಸ್ತ್ರಿಗಳೇ ಶಾಸ್ತ್ರಿಗಳೇ ಎಂದು ಕೂಗುತ್ತಿದ್ದರು. ಒಂದು ಕ್ಷಣ ಏನೋ ಎಂತೋ ಎಂಬೊಂದು ಗಾಬರಿ ಆವರಿಸಿಬಿಟ್ಟಿತು.
ಶಾಮ ತನ್ನ ತಾತನವರ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ; ಶಾಸ್ತ್ರಿಗಳು ತಮ್ಮ ಕರುಳಿನ ಕುಡಿ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ ನೋಡಿದ ರಘು ಗುಂಪನ್ನು ವಿಚಾರಿಸುವ ಹೋಣೆ ಹೊತ್ತುಕೊಂಡು "ಏನ್ರಪ್ಪಾ? ಯಾಕ್ರಪ್ಪಾ?" ಎಂದು ಗುಂಪನ್ನು ವಿಚಾರಿಸಿದ.


೧೭೦

ಮೊನ್ನೆ ಮೊನ್ನೆಯವರೆಗೆ ಸರಕಾರಿ ಆಸುಪತ್ರೆಯ ರೋಗತುಲಿಕಾ ತಲ್ಪದ ಮೇಲೆ ವಾರ ದಿನಮಾನ ಮಲಗಿದ್ದು ಬಂದಿದ್ದ ಸಾಂಬ ಆ ಗುಂಪಿನ ಮುಖಂಡತ್ವ ವಹಿಸಿದ್ದ. ಆ ಸದರಿ ಗುಂಪು ಮಾಡಿದ್ದ ಘನಕಾರ್ಯ ಏನಪ್ಪಾ ಅಂದರೆ?
ಅದನ್ನು ಸವಿವರವಾಗಿ ಹೇಳಬೇಕೆಂದರೆ ದೊಡ್ಡ ಕಥಿಯೇ ಆಗುತ್ತದೆ.
ಶಾಸ್ತ್ರಿಗಲ ಮನೆಯಲ್ಲಿ ಮನೆ ಮಗಳಂತೆ ಕೋಷಿ ಎಂಬ ಬೆಕ್ಕೂ; ಅನಸೂಯಾಳ ಮನೆಯಲ್ಲಿ ಅರ್ಜುನ ಎಂಬ ಮಾರ್ಜಾಲವೂ ಇತ್ತಷ್ಟೆ. ಅವೆರಡೂ ಸಲೀಮ, ಅನಾರ್ಕಲಿಯಂತೆ ಅನ್ಯೋನ್ಯವಾಗಿದ್ದವಷ್ಟೆ. ಅವೆರಡು ಮಾರ್ಜಾಲ ಕುಲಕ್ಕೆ ಸೇರಿದವುಗಳಾಗಿದ್ದರೂ ಮಾನವಕುಲ ಹಿತಚಿಂತನೆಯನ್ನು ಸದಾ ಬಯಸುತ್ತಿದ್ದವಷ್ಟೆ! ಅದರಲ್ಲೂ ಶಾಮ ಮತ್ತು ಅನಸೂಯರ ಸಂಭಂದ ಬೆಸೆಯಲು ಅವೆರಡೂ ನಾನಾ ನಮೂನೆಯ ಹಿಕಮತ್ತುಗಳನ್ನು ಒಂದಾದ ಮೇಲೊಂದರಂತೆ ಪ್ರಯೋಗಿಸುತ್ತಿದ್ದವಷ್ಟೆ! ತಮ್ಮ ಗುರಿ ಮಣ್ಣುಗೂಡಿದ ಮೇಲೆ ಪರಸ್ಪರ ಸಂಧಿಸಿ ಮನುಷ್ಯರು ಕೃತಘ್ನರು ಎಂದು ತೀರ್ಮಾನಿಸಿದ್ದವಷ್ಟೆ! ಇಂಥದೊಂದು ಟೆನ್ಷನ್ನಿಂದಾಗಿ ಅದ್ಭುತ ಪ್ರೇಮಿಗಳಾಗಿದ್ದ ಅವಕ್ಕೆ ಕೆಲವು ದಿನಗಳಿಂದ ರತಿ ಕ್ರೀಡೆಯಲ್ಲಿ ಭಾಗವಹಿಸಲಾಗಿರಲಿಲ್ಲವಷ್ಟೆ!

ಈ ಕಾರಣಗಳಿಂದಾಗಿಯೋ ಅಥವಾ ಬೇರಾವ ಕಾರಣದಿಂದಾಗಿಯೋ ಅವೆರಡೂ ಸದಾ ಮಂಕಾಗಿರುತ್ತಿದ್ದವು. ತನ್ನ ಪ್ರಿಯತಮೆಯ ಬಳಿ ಏನೆಲ್ಲ ಹೇಳಿಕೊಳ್ಳುತ್ತಿದ್ದ ಅರ್ಜುನ ಕನಿಷ್ಟ ಅಟಕ್ ಪಿಟಕ್ ವಾಚಿನ ಬಗೆಗೂ ಹೇಳಿಕೊಂಡಿರಲಿಲ್ಲ. ವಾಚನ್ನು ನೋಡಲು ಹೋಗಿ ಅನಸೂಯಳಿಂದ ಒದೆ ತಿಂದಿತ್ತು. ಯಾಕೆ ತನ್ನ ಪ್ರಿಯತಮ ಮಂಕಾಗಿರುವನೆಂದು ಯೋಚಿಸೀ ಯೋಚಿಸೀ ಕೋಷಿ ತಾನೂ ಮಂಕಾಗಿತ್ತು.

ಹೀಗೆ ಮಂಕಾಗಿರುವ ಯಾವ ಪ್ರಾಣಿಗೂ ಅಪಾಯದ ಅರಿವು ಇರುವುದಿಲ್ಲವೆಂಬುದು ಅಂಗೈಯ ಹುಣ್ಣಿನಷ್ಟೆ ಸತ್ಯವೆಂಬುದನ್ನು ಸಾಧಿಸಿ ತೋರಿಸಲಿಕ್ಕಾಗಿಯೋ ಎಂಬಂತೆ ಹರಪನಹಳ್ಳಿ ಕಡೆಯ ಕೊರಚರಟ್ಟಿಯ ಅಲೆಮಾರಿ ತಂಡವೊಂದು ತಂಡೊಪತಂಡವಾಗಿ ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಚಿಕ್ಕ ಚಿಕ್ಕ ಜೋಪಡಿಗಳನ್ನು ಕಟ್ಟಿಕೊಂಡು ಬೀಡು ಬಿಟ್ಟಿತ್ತು. ವಯಸ್ಕ ಗಂಡಸರು ರಾತ್ರಿ ಹೊತ್ತು ಚಿಕ್ಕಪುಟ್ಟ ಕಳ್ಳತನಕ್ಕೆ ಹೋದರೆ ಹೆಂಗಸರು ಅವರಿವರ ಬಳಿ ಮಲಗಿಕೊಂಡು ನಾಲ್ಕು ಕಾಸು ಸಂಪಾದಿಸುವರು. ಮಾಂಸಪ್ರಿಯರಾದ ಅವರು ಕೋಳಿ ಕುರಿಗಿಂತ ಆಸೆಪಡುತ್ತಿದ್ದುದು ಬೆಕ್ಕು ಮತ್ತು ಇಲಿ ಮಾಂಸಕ್ಕೆ. ಇಂಥ ಆಹಾರ ಮೂಲಗಳನ್ನು ಹುಡುಕಲು ಅವರ ಪೈಕಿ ಅನೇಕರು ಕಂಕುಳಲ್ಲಿ ಚಿಕ್ಕಪುಟ್ಟ ಬಲೆ, ಪಂಜರಗಳನ್ನು ಹುದುಗಿಸಿಕೊಂಡು ಓಣಿ ಓಣಿ ಅಲೆಯುವರು. ಇಲಿಗಳಂತೆ ಸದ್ದು ಮಾಡಿ ಇಲಿಗಳನ್ನು ಆಕರ್ಷಿವುದು, ಅವು ಬಂದೊಡನೆ ಅರೆ ಜೀವ ಮಾಡಿ ಜೋಳಿಗೆಗೆ ಹಾಕಿಕೊಳ್ಳುವುದು, ಬೆಕ್ಕುಗಳಂತೆ ಸದ್ದು ಮಾಡಿ ಬೆಕ್ಕುಗಳನ್ನು ಆಕರ್ಷಿವುದು, ಅವು ಬಂದೊಡನೆ ಗೋಣು ತಿರುವಿ ಸಾಯಿಸಿ ಜೋಳಿಗೆಗೆ ಹಾಕಿಕೊಳ್ಳುವುದು. ತಮ್ಮ ಕ್ಯಾಂಪಿನ ಬಳಿಗೆ ಹೋಗಿ ಅವುಗಳನ್ನು ಬೆಂಕಿಯಲ್ಲಿ ಬೇಯಿಸುವುದು, ಹೆಂಗಸರು ಮೈಮಾರಿ ಗಳಿಸಿದ್ದಂಥ ಹಣದಲ್ಲಿ ಸಾರಾಯಿಯನ್ನೋ; ಹೆಂಡವನ್ನೋ ತರಿಸುವುದು, ಕುಡಿದು ತಿಂದು ಪರಸ್ಪರ ತೆಕ್ಕೆ ಮುರಿಬಿದ್ದು ದಿಕ್ಕುಗಳು ನಡುಗುವಂತೆ ಗಲಾಟೆ ಮಾಡುತ್ತ ಒಬ್ಬರ ಮೇಲೊಬ್ಬರು ಬಿದ್ದು ಉರುಳಾಡುವುದು, ಹಾಗೆ ಉರುಳುರುಳಾಡುತ್ತಲೇ ನಿದ್ದೆ ಹೋಗಿ ಗೊರಕೆ ಹೊಡೆಯಲಾರಂಭಿಸಿಬಿಡುವುದು. ಇದು ಇವರ ದಿನಚರಿ. ಆದರೂ ಇವರ ದಿನಚರಿ ಮಧ್ಯಮ ವರ್ಗದ ಮಂದಿ ಊಹಿಸಿಕೊಳ್ಳುವಷ್ಟು ಸುಲಭವಾಗಿರುವುದಿಲ್ಲ. ಇವರ ಪ್ರತಿಯೊಂದು


೧೭೧

ಚಟುವಟಿಕೆಯನ್ನು ನಿಯಂತ್ರಿಸುವಂಥ ಒಂದು ಪ್ರತಿಭಟನಾತ್ಮಕ ತಂಡ ಗ್ರಾಮದಲ್ಲಿ ಹುಟ್ತಿಕೊಂಡು ಬಿಟ್ತಿರುತ್ತದೆ. ಆ ನಾಗರೀಕರ ತಂಡದ ಸದಸ್ಯರು ಉಂಡಾಡಿ ಗುಂಡರೆಂದು ಹೆಸರು ಪಡೆದಿದ್ದರೂ ಸೀನ್ ಕಾನರಿ; ರೋಗರ್‌ಮೋರ್, ಟಿಮೋಟಿ ಡಲ್ಟನ್‌ರಂಥ ಜೇಮ್ಸ್ ಬಾಂಡರಿಗಿಂತ ಕಡಿಮೆ ಇರುವುದಿಲ್ಲ. ಈ ಜೇಮ್ಸ್‌ಬಾಂಡರು ಸದಾ ತಮ್ಮ ಕಣ್ಣುಗಳನ್ನು ಮೂಷಕ ಮಾರ್ಜಾಲ ಹಂತಕರ ಮೇಲೆ ಕಣ್ಣು ಇಟ್ತಿರುತ್ತದೆ. ಈ ಜೇಮ್ಸ್ ಬಾಂಡರೊಂದೇ ಅಲ್ಲದೇ, ಕಂದಾಯ ಅರಕ್ಷಕರೇ ಮೊದಲಾದ ಮಂದಿಯನ್ನು ಚಾಣಾಕ್ಷತನದಿಂದ ನಿಭಾಯಿಸುತ್ತಲೇ ಅಲೆಮಾರಿ ಮಂದಿ ತಮ್ಮ ಕಾರ್ಯ ಸಾಧಿಸಬೇಕು ಮತ್ತು ಬದುಕಬೇಕು. ಪರಿಸ್ಥಿತಿ ಹೀಗಿರುವಾಗ ಅಲೆಮಾರಿಯ ಒಂದಿಬ್ಬರು ಶಾಸ್ತ್ರಿಗಳಿದ್ದ ಓಣಿಯ ಆಚೆಬದಿ ಚೀವ್ ಚೀವ್ ಎನ್ನುತ್ತಲೋ; ಮ್ಯಾಂವ್ ಮ್ಯಾಂವ್ ಅನ್ನುತ್ತಲೋ ಕಾರ್ಯ ನಿರತರಾದರು. ಐದಾರು ಇಲಿ ಬುಡಕಗಳನ್ನು ಸುಲಭವಾಗಿ ಹಿಡಿದಿದ್ದೂ ಆಯಿತು. ಕಳೆದೆರಡು ದಿನಗಳಿಂದ ಆ ಓಣಿಗೆ ಎರಡು ಕಣ್ಣುಗಳಂತಿದ್ದ ಎರಡು ಬೆಕ್ಕು ಗಳ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರು. ‘ಇವತ್ತು ಹಿಡದೇ ತರಬೇಕಲೆ’ ಎಂದು ನಿರ್ಧರಿಸಿದರು. ಆಯಾ ಮನೆಗಳ ಆಜುಬಾಜುಗಳಲ್ಲಿ ಕೋಶಿಯಂತೆ ಸದ್ದು ಮಾಡಿ ಮಾರ್ಜಾಲ ಹಿಡಿದು ಸಾಯಿಸಿದರು. ಮಾರ್ಜಾಲದ ಥರ ಸದ್ದು ಮಾಡಿ ಕೋಷಿಯನ್ನು ಹಿಡಿದು ಸಾಯಿಸಿದರು. ಆದರೆ ಅವು ಅವರ ಕೈಗೆ ಬೀಳುವ ಮೊದಲು ಸಾಕಷ್ಟು ಪ್ರತಿರೋದ ಒಡ್ಡಿದವು. ಆದರೆ ಅವುಗಲ ಆಟ ನಡೆಯದಿದ್ದರೂ, ಅವು ಮರಣಾಂತಿಕವಾಗಿ ಮಾಡಿದ ಘನ ಘೋರ ಸದ್ದಿಗೆ ಜೇಮ್ಸ್ ಬಾಂಡುಗಳು ಎಚ್ಚತ್ತು ಬಂದು ‘ಬೆಕ್ಕು ತಿಂಭೋ ಸೂಳ್ಯಾ ಮಾಕ್ಳಾ’ ಎಂದು ಮುಗಿಬಿದ್ದು ಸಾಕ್ಷಿ ಸಮೇತ ಅವರನ್ನು ಹಿಡಿದುಬಿಟ್ಟರು. ತಾವು ಹಿಡಿದಂಥ ಎರಡು ಮುದ್ದಾದ ಬೆಕ್ಕುಗಳ ಕಳೇಬರಗಳೊಂದಿಗೆ, ಅಲೆಮಾರಿಗಳಿಬ್ಬರನ್ನು ಕೇಕಕಣ ಎಂದು ಮೆರವಣಿಗೆ ಮಾಡುತ್ತ ಶಾಸ್ತ್ರಿಗಳಮನೆ ಕಡೆ ಬಿಜಯಂಗೈದು ಬಂದಿದ್ದರು. ಅವರೆಲ್ಲರ ಉದ್ದೇಶ ಇದ್ದದ್ದು ಶಾಸ್ತ್ರಿಗಳ ಕೈಯಿಂದ ಪೂಜೆ ಮಾಡಿಸುವುದಲ್ಲದೆ ಹಿಡಿ ಹಿಡಿ ಶಾಪ ಹಾಕಿಸಬೇಕು ಮತ್ತು ಸದರೀ ಕಳೆಬರಗಳಿಗೆ ಇದೇ ಪವಿತ್ರ ವಾತಾವರಣದಲ್ಲಿ ಶಾಸ್ತ್ರೋಕ್ತ ಸಂಸ್ಕಾರ ನಡೆಯಬೇಕು ಎಂಬುದು. ಸತ್ತಿರುವ ಈ ಎರಡು ಬೆಕ್ಕುಗಳ ಜಾಯಮಾನ ಗ್ರಾಮಕ್ಕೇ ಗೊತ್ತಿರುವಂಥಾದ್ದು. ಇವೆರಡು ಅಪ್ಪಿತಪ್ಪಿ ಬೆಕ್ಕಿನ ಜನುಮ ಪಡೆದಿರುವವಷ್ಟೆ. ಇವೆರಡರೊಳಗಿದ್ದದ್ದು ಮಾನವ ಹೃದಯಗಳು; ಲೈಲಾ ಮಜ್ನೂ ಹೃದಯಗಳೆಂದರೂ ಸರಿಯೆ, ಈ ಮನೆಯಿಂದ ಆ ಮನೆಗೆ ಟಣಕ್ಕೆಂದು ಜಿಗಿದು ಮ್ಯಾಂವ್ ಗುಟ್ಟುವುದು. ಮ್ಯಾಂವ್ ಎಂಬ ಶಬ್ದ ಸಾಮಾನ್ಯದ್ದೇನು? ಬಿಲಾವರಿ ಅಸಾವರಿ ರಾಗಳಿಗಿಂತ ಕಡಿಮೆಯಿದ್ದಿರಲಿಲ್ಲ. ಅವೆರಡೂ ಮನೆಯ ಛಾವಣಿ ಏರಿ ಮ್ಯಾಂವ್ ಗುಟ್ಟಲಾರಂಭಿಸಿದರೆ ಸಿಂಗ್ ಬ್ರದರ್ಸ್‌ರವರ ಜುಗಲ್‌ಬಂದಿಗಿಂತ ಮಿಗಿಲಾಗಿರುತ್ತಿತ್ತು. ಇಂಥ ಅಪರೂಪದ ಬೆಕ್ಕುಗಳನ್ನು ಕೊರಚರಟ್ಟಿಯ ನರಮಾಂಸ ಭಕ್ಷಕರು ಕೊಲೆಮಾಡಿ ಬಿಟ್ಟಿರುವುರಲ್ಲಾ?.. ಇವತ್ತು ಈ ಬೆಕ್ಕುಗಳನ್ನು ತಿಂದವರು ನಾಳೆ ಹುಡುಗರುಪ್ಪಡಿಯನ್ನು ಬಿಡುವರೇನು? ನಾಳೆ ಹುಡುಗರುಪ್ಪಡಿಯನ್ನು ತಿನ್ನುವವರು ನಾಡಿದ್ದು ವಯಸ್ಕರನ್ನು ಬಿಡುವರೇನು?..
ನರಪೇತಲ ಸಾಂಬ ಆ ಒಂದು ಕ್ಷಣ ಕುಂತಕನೊಡನೆ ಮಮ್ಮಟ ಮೇಳವಿಸಿದಂತೆ ಅಭೂತಪೂರ್ವವಾಗಿ ಹೊಳೆಯತೊಡಗಿದ.
"ಶಾಸ್ತ್ರಿಗಳೆ.. ಈ ಘೋರ ಅನ್ಯಾಯವನ್ನು ಹೇಗೆ ಸರಿಪಡಿಸುವಿರಿ ಶಾಸ್ತ್ರಿಗಳೇ?"


೧೭೨

ಅಸು ನೀಗಿರುವ ಈ ಎರಡು ದುರಂತ ಕಾವ್ಯಗಳಿಗೆ ನಿಮ್ಮ ಮಂತ್ರಶಕ್ತಿಯಿಂದ ಮರುಜನ್ಮ ನೀಡಲಾರಿರೇನು?" ಹೃದಯ ತುಂಬ ವೀಕಾಗಿ ಬಿಟ್ಟಿರುವುದೆಂದೂ ತಿಂಗಳ ದಿನಮಾನ ಗಟ್ಟಿಯಾಗಿ ಆವೇಶದಿಂದ ಮಾತಾಡಬೇಡವೆಂದು ಸರಕಾರಿ ವೈದ್ಯ ರಾಮಪ್ಪ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಸಾಂಬ ವೀರಾವೇಶದಿಂದಲೂ; ವ್ಯಾಕರಣ ಶುದ್ಧವಾಗಿಯೂ ಏಕ್‌ಧಂ ಮಾತಾಡಿ ಕೊಕ್ ಕೊಕ್.. ಕೆಂ ಕೆಂ ಕೆಮ್ಮುತ್ತ ಎಲ್ಲರ ಕಡೆಗೊಮ್ಮೆ ಸಿಂಹಾವಲೋಕನ ಮಾಡಿದನು. ಗುಂಪಿನಲ್ಲಿದ್ದ ಆಪದ್ಭಾಂದವನೋರ್ವ ಜೋರಾಗಿ ಸೀಟಿ ಹಾಕಿ ಮೆಚ್ಚುಗೆ ಸೂಚಿಸಿದನು.
ರಘೂನ ಹಿಂದೆ ನಿಂತಿದ್ದ ಶಾಮನಿಗೆ ಸಾಂಬ ಕಾವ್ಯ ಗುರುವಿನಂತೆ ಗೋಚರಿಸಲು..
ವ್ಯಾಸಪೀಥವನ್ನು ಎಡಗಾಲಿಂದಿದೊದ್ದು ‘ಶಾಂತಂ ಪಾಪಂ’ ಅಂತ ಬಂದ ಶಾಸ್ತ್ರಿಗಳಿಗೆ ಶಂಕರಾಚಾರ್ಯ ಭಗವತ್ಪಾದರಿಗೆ ಎದುರಾದ ಶ್ವಪಚ ಚಂಡಾಲನಂತೆ ಗೋಚರಿಸಲು..
ಕಾವಲಿ ಮೆಲೆ ದೋಸೆ ಸೀದು ಹೋಗುತ್ತಿರುವುದನ್ನು ಲೆಕ್ಕಿಸದೆ ಎಡಗೈಲಿ ಸವುಟು, ಬಲಗೈಲಿ ಚುಚ್ಚಗ ಧರಿಸಿಕೊಂಡೇ ಬಂದ ಅಲುಮೇಲಮ್ಮನಿಗೆ ಶ್ರೀಕೃಷ್ಣಾವತಾರ ಸಮಾಪ್ತಿಯಾದೊಡನೆ ಉದಿಸಿ ಭೂದೇವಿಯನ್ನು ಶೋಕ ತಪ್ತೆಯನ್ನಾಗಿ ಮಾಡಿದ ಕಲಿಯಂತೆ ಗೋಚರಿಸಲು..
ಕಲಿಯುಗದ ಅಂತ್ಯದಲ್ಲಿ ಸಂಬಲವೆಂಬ ಗ್ರಾಮದ ವಿಷ್ಣುಯಶ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿ ಪರುಶುರಾಮನಿಂದ ವಿದ್ಯಾಭ್ಯಾಸ ಪಡೆದ ಕಲ್ಕಿ ಮಹಾಶಯನಂತೆ ಮುಂಚೂಣಿಯಲ್ಲಿದ್ದ ರಘುರಾಮನೆಂಬ ಕಾಮ್ರೇಡಿಗೆ ಸಾಂಬನು ಕ್ರಾಂತಿಯ ಬೆಳೆ ತೆಗೆಯಲು ಯೋಗ್ಯವಾದ ಫಲವತ್ತಾದ ಹೊಲವೇ ಮೈವೆತ್ತು ನಿಂತಿರುವಂತೆ ಗೋಚರಿಸಲು
"ಅಯ್ಯಯ್ಯೋ ನಿಮ್ಮನೆ ಹಾಳಾಗ ನಿಮ್ ಹೆಂಡ್ರು ರಂಡ್ಯಾಗ.. ಸತ್ತಿರೋ ಬೆಕ್ಕುಗಳ್ನ ಶಾಶ್ತ್ರಿಗಳ ಮನೆ ಬಾಗಿಲಿಗೆ ತಂದಿದ್ದೀರಲ್ಲೋ ನಿಮ್ ಕೈಗೆ ಕರಿನಗ್ರಾವ್ ಕಡಿಯಾ.. ತೊಲಗ್ರೋ ಆಚೆ.. ನಮ್ಮಪ್ನೋರ ಮನಸ್ಸಿಗೆ ನೋವಾದ್ರೆ ಊರಿಗೆ ಒಳ್ಳೇದಾಗೋದಿಲ್ಲ.." ಎಲ್ಲಿದ್ದಳೇನೋ ಪದ್ದಕ್ಕ ಒನಕೆ ಓಬವ್ವನಂತೆ ಸೀರೆ ಎತ್ತಿ ಕಚ್ಚೆ ಬಿಗಿದು ತೋರುತೊಡೆಗಳನ್ನು ಪುಟಿಸುತ್ತಾ ಸಾಂಬನ ಉಸಿರಳತೆಯಲ್ಲಿ ನಿಂತು ಹೇಷಾರವ ಮಾಡಲು ಎಲ್ಲರೂ ಒಂದು ಕ್ಷಣ ಮೂಗಿನ ಮೇಲೆ ಬೆರಳಿಟ್ಟು ಕೊಂಡರು.
"ಓಹೋ ಪದ್ಮಾವತಿಽಽ ಕಮಲನಯನೇ.. ಶಾಸ್ತ್ರಿಗಳ ಮನೆಯ ಹುಳಿಯ ಪ್ರಭಾವದಿಂದ ಅದ್ಭುತವಾಗಿ ಮಾತಾಡುತ್ತಿರುವೆಯಲ್ಲ.. ನೀನಾಡಿದ ಮಾತುಗಳಿಗೆ ಧಿಕ್ಕಾರವಿರಲಿ. ತೊಲಗಾಚೆ" ಹೀಗೆಂದು ಮಾತಾಡಿದ ಸಾಂಬ ಕೆಲ ವರ್ಷಗಳ ಹಿಂದೆ ಇದೇ ಪದ್ದಕ್ಕನನ್ನು ತೋಪಿನಲ್ಲಿ ಕೆಳಗೆ ಕೆಡವಿಕೊಂಡು ದೊಡ್ಡ ಸುದ್ದಿ ಮಾಡಿದ್ದನು. ತೊಡೆ ಮತ್ತು ಮೊಲೆಗಳ ಮೇಲೆ ನಖಕ್ಷತ ಮಾಡಿ ಆಕೆಯ ಗಂಡನಿಂದಲೂ; ಆಕೆಯ ಕಳ್ಳ ಪ್ರೇಮಿಗಳಿಂದಲೂ ಮೈ ಮೆತ್ತಗಾಗುವಂತೆ ಒದೆಸಿಕೊಂಡಿದ್ದನು. ಗತಕಾಲದ ತಾನು ಮಾಡಿದ ಗುರುತು ಆಕೆಯ ತೊಡೆಯ ಮೇಲೆ ಇರುವುದನ್ನು ಗಮನಿಸಿ ಭಗವಾನ್ ಬಾಹುಬಲಿ ವಿಗ್ರಹದಂತೆ ಮಂದಸ್ಮಿತನಾದನು. ಅವನ ಮೇಲೆ ಘಟ್ಟ ಸೋಪಾನಗಳ ಕೆಳಪಟ್ಟಿಯಲ್ಲಿ ದೇವದಾರು ಆ ಒಂದು ಕ್ಷಣ ಹಲೋ ಹಲೋ ಎಂದು ಮಿಸುಕಾಡಿತು.
"ನಂ ಅನಸೂಯಾಳ ಬೆಕ್ಕು ಕೊಂದೋನು ಯಾವನು ನನ್ನಾಟಗಳ್ಳ.. ಅವನ ಬೇರು ಬಗೆದು ಕೊಡ್ತೀನಿ ತೋರಿಸ್ರಿ ಅವನ್ನ.." ರುಕ್ಕಮ್ಮನ ಏಕಮೇವ ಪ್ರಥಿನಿಧಿಯಾದ ಭವಾನಿ ಗಂಗವ್ವ ಬುಸುಬುಸು ಬೀಡಿ ಎಳೆಯುತ್ತ ಇನ್ನೇನು ಅಲ್ಲಿ ಬರ್‍ತಿದಾಳೆನ್ನುವಷ್ಟರಲ್ಲಿ ಪದ್ದಕ್ಕನಿಗೂ ಸಾಂಬನಿಗೂ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿ ತೆಕ್ಕೆಮುರಿ ಬಿದ್ದು ಕೆಳಗೆ


೧೭೩

ಉರುಳಾಡಲಾರಂಭಿಸಿಬಿಟ್ಟಿದ್ದರು. ಅವರೀರ್ವರ ಜುಗಲ್ ಬಂದಿಯನ್ನು ಪ್ರೋತ್ಸಾಹಿಲೋಸುಗ ತಟ್ಟುತ್ತಿದ್ದ ಚಪ್ಪಾಳೆಗಲೆಷ್ಟೋ, ಹೊಡೆಯುತ್ತಿದ್ದ ಶಿಳ್ಳೆ ಸೀಟಿಗಳೆಷ್ಟೋ?

ಪರಿಶೆ ಪೈಕಿ ಪೈಲ್ವಾನಳಂತಿದ್ದ ಪದ್ದೆಕ್ಕಗೆ ದರ್ಭೆ ಕಡ್ಡಿಯಂತಿದ್ದ ಸಾಂಬ ಯಾವ ಲೆಕ್ಕ? ಸಾಂಬನೂ ಮಾಜಿ ಪೈಲ್ವಾನನೇ. ಕಂಡ ಕಂಡ ಹೆಂಗಸರೆದುರಿಗೆಲ್ಲ ತನ್ನ ದೇಹದ ಮುನ್ನೂರಾರವತ್ತೈದು ಮಾಂಸ ಖಂಡಗಳನ್ನು ಕುಣಿಸೀ.. ಕುಣಿಸೀ ಸೊರಗಿ ಕಡ್ಡಿಯಂತಾಗಿಬಿಟ್ತಿದ್ದಂಥವನು. ಕರಿಣಿಯಂಥ ಪದ್ದಕ್ಕ ಕ್ಷಣಾರ್ಧದಲ್ಲಿ ಚಿತ್ ಮಾಡಿದಳಲ್ಲದೆ; ಮಣ್ಣಿಗೆ ಬೆನ್ನು ಮಾಡಿದ ಅವನೆದೆಯ ಮೇಲೇರಿ ಕೂತು ಮುಖ್ಯವಾಗಿ ತನ್ನ ಮಾಲ್ಕಿನ್ ಅಲಮೇಲಮ್ಮನ ಕಡೆ ನೋಡಿದಳು. ತನಗೆ ಒಂದು ತುತ್ತು ಅನ್ನ ನೀದುವಾಕೆಯನ್ನೂ ಪರೋಕ್ಷವಾಗಿ ಬೆದರಿಸಲು ಈ ಸುವರ್ಣಾವಕಾಶವನ್ನು ಬಳಸಿಕೊಂದಿದ್ದಳು.
ಆಕೆಯ ಗಂಡುಬೀರಿತನಕ್ಕೆ ಪ್ರೇಕ್ಷಕರೆಲ್ಲ ಬೆರಗಾದರು.
"ಒನ್.. ಟೂ.. ತ್ರೀ.. ಫೋರ್.." ಬಾಕ್ಸಿಂಗ್ ರೆಫ್ರೀ ಥರ ಒಬ್ಬ ಲೆಕ್ಕಹಾಕತೊಡಗಿದ.
"ಥೂ ನಿನ್ನ ಮುಖಕ್ಕೆ ಮಂಗಳಾರತಿ ಎತ್ತ.. ಸೀರೆ ಉತ್ಕೊಂಡು ಬಳೆ ಹಾಕ್ಕೊಂಡು ಎಲ್ಲವ್ವನ ಗುಡಿಗೆ ಹೋಗೋ" ಎಂದೊಬ್ಬ ಛೀಮಾರಿ ಹಾಕಿದರೆ,
"ನಿನ್ನ ಬಾಸ್ ಅಂಥ ತಿಳ್ಕೊಂಡಿದ್ದಕ್ಕೆ ನಮ್ಮನ್ನ ನಾವು ಎಕ್ಕಡ್ದೀಲೆ ಹೊಡ್ಕೊಂತೀವಿ" ಎಂದು ಇನ್ನೊಬ್ಬ ಥೂ ಮಾಡಿದನು.
ಈ ಮುಂಡೆ ತನ್ನನ್ನು ಅಪಮೌಲ್ಯಗೊಳಿಸಿಬಿಟ್ಟಳಲ್ಲಾ!.. ಎಂದು ಚಿಂತಿಸುತ್ತ ಸಾಂಬ ಗತಪ್ರಾಣನಾಗುವವನಂತೆ ತುಂಬ ತಿಣುಕಾಡತೊಡಗಿದನು.
ಹಾಗೆ ಅವನು ತನ್ನ ಕಾಲ ಇಕ್ಕಳದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವಾಗ ಮೇಲೆ ಅಮರಿದ್ದ ಪದ್ದಕ್ಕ ಗತಕಾಲದ ದಿನಗಳನ್ನು ಮೆಲುಕು ಹಾಕಿದಳು. ಈ ರಾಸ್ಕಲ್ ತಾನು ತೋಪಿನಲ್ಲಿ ಹೋಗುತ್ತಿರುವಾಗ ಸರಕ್ಕನೆ ಬರಸೆಳೆದದ್ದು.. ಒಂದೇ ಏಟಿಗೆ ಕೆಳಗೆ ಕೆಡವಿಕೊಂಡು ಬಿಟ್ಟಿದ್ದು; ನಿಮಿಷಾರ್ಧದಲ್ಲಿ ವಸ್ತ್ರಗಳನ್ನು ತೊಲಗಿಸಿದ್ದು; ಖಾರಪುಡಿ ಕುಟ್ಟುವ ಮೆಷನ್ನಿನಂತೆ ದಢಡಧನೆ...ಇದನ್ನೆಲ್ಲ ತಾನು ಆಗಾಗ್ಗೆ ನೆನಪಿಸಿಕೊಂಡು ಬಿಸಿ ಏರಿದ್ದುಂಟು. ಅತೀವ ಸಂತೋಷ ರೋಮಾಂಚನ ಅನುಭವಿದ್ದುಂಟು. ಇಂಥ ಪುಣ್ಯಾತ್ಮ ಕಾಲಾನುಸಾರ ಬಡಕಲಾಗಿರಬಹುದು. ಇವನು ನೀಡಿದ ಅನುಭವಗಳನ್ನು ಮರೆತು ಕೆಳಗೆ ಕೆಳಗೆ ಕೆಡವಿಕೊಂಡು ಬಿಟ್ಟು ಅವಮಾನ ಮಾಡಿಬಿಟ್ಟಿರುವೆನಲ್ಲಾ! ಸಮಸ್ತ ಜನರೆದುರು ನಗೆಪಾಟಲು ಮಾಡಿರುವೆನಲ್ಲಾ!...ತಾವಿಬ್ಬರು ಒಮ್ಮೆ ಕೂಡಿದ್ದೆವೆಂದರೆ ಮುಗಿಯಿತು, ಸುಖ ದುಃಖಗಳೆರಡರಲ್ಲೂ ಕೂಡಿದಂತೆಯೇ ಲೆಕ್ಕ!..
ಹೀಗೆ ಯೋಚಿಸುತ್ತ ವೀರವನಿತೆಯಾದ ಪದ್ದಕ್ಕ ತಾನು ಕೆಳಗೆ ಅಂಗಾತವಾಗಿ ಮೇಲೆ ಸಾಂಬನನ್ನು ಎಳೆದುಕೊಂಡುಬಿಟ್ಟಳು. ಈ ಅಚಾನಕ್ ಘಟನೆಯಿಂದ ದಿಗ್ಭ್ರಾಂತನಾದ ಅವನು ಆಕೆಯ ಕಿವಿಯಲ್ಲಿ ಧನ್ಯವಾದಗಳು ಅಂತ ಹೇಳಿದವನು ಆಮೇಲೆ ಮುಖ ಎತ್ತಿ " ಈ ಸಾಂಬ ಶಿವನನ್ನು ಏನೆಂದು ತಿಳಿದುಕೊಂಡಿರುವಿರಿ ಎಲೈ ಕಾಂತೆ ಸುಗುಣವಂತೆ" ಎಂದು ಕೇಕೆ ಹಾಕಿದನು.
ಅವನ ಅಭಿಮಾನಿಗಳು ಶೀಟಿ ಹಾಕಿ ಉಘೇ ಅಂದರು.
ಇಂಥದೊಂದು ಚೋದ್ಯಕ್ಕೆ ಅದುವರೆಗೆ ಬೆರಗಾಗಿದ್ದ ಭವಾನಿ ಗಂಗವ್ವ ಸೀರೆಯನ್ನು ತುಸು ಮೇಲೇರಿಸಿದಳು. ಚುಟ್ಟವನ್ನು ತುಟಿಯ ಕೊನೆ ಮಗ್ಗುಲು ಸಿಕಿಸಿಕೊಂದು ಮೂಗು ಬಾಯಿಯಿಂದ ದಾವಾನಲ ಸಮಾನವಾದ ಹೊಗೆ ಬಿಟ್ಟಳು.
"ನಿಮ್ ಬಾಯಿಗೆ ನನ್ನಾಟುಯ್ಯಾ... ನಾಚ್ಕೆ ಹೇಸ್ಗೆ ಐತೊ ಇಲ್ರೋ ನಿಮ್ಗೆ.. ಇದೇನು ಓಣಿ


೧೭೪

ಅಂದ್ಕೊಂಡೀರೋ ಬಯ್ಲಾಟದ ಠೇಜು ಅಂದ್ಕೊಂಡೀರೋ.. " ಎನ್ನುತ್ತ ಮುಂದೆ ಮೂರು ಮಾರು ಕುಪ್ಪಳಿಸಿದಳು.
ಸಾಂಬನೆಂಬ ಜಿರಳೆಯನ್ನು ತನ್ನೆರಡೂ ಕೈಗಳಿಂದ ಮುಗಿಲೆತ್ತಿ ಅಲ್ಲೇ ಇದ್ದ ಕಿರುಗಟ್ಟೆಯ ಮೇಲೆ ಕುಕ್ಕರಿಸಲು ಆ ಮಹಾಶಯನು ವ್ಯಾಸಪೀಠವನ್ನಲಂಕರಿಸಿದ ಬಾಸನ ಊರುಭಂಗ ನಾಟಕದ ತಾಳೆಗರಿ ಕಟ್ಟಿನಂತೆ ಹೊಳೆದನು.
"ಎಲೇ ಚಿನಾಲಿ.. ನಿನೇನು ಹೆಣ್ಣೋ.. ಇಲ್ಲಾ ದೆವ್ವವೋ.. " ಕೆಳಗೆ ಅಂಗಾತ ಬಿದ್ದು ಕಾಳೋರಗದಂತೆ ಬುಸುಗುಟ್ಟಿತಿರ್ಪ ಪದ್ದಕ್ಕನ ಕೊರಳಿಗೆ ಕೈಹಚ್ಚಿ ಹಿಡಿದೆತ್ತಿದಳು. ಆಕೆಯ ಬಿಚ್ಚಿಕೊಂದಿದ್ದ ಕುಪ್ಪಸದ ಗುಂಡಿಗಳನ್ನು ಹಾಕಿದಳು. ತ್ರಿವರ್ಣ ದ್ವಜದಂತೆ ಹಾರಾಡುತ್ತಿದ್ದ ಸೆರಗನ್ನು ಎದೆ ತುಂಬ ಹೊದ್ದಿಸಿದಳು.
"ಅತ್ತೆಮ್ಮಾ.. ಬಿಡು ನನ್ನ.. ಆ ಸಾಂಬನಿಗೆಗೊಂದು ಗತಿ ಕಾಣಿಸುವೆನು" ಎಂದು ಕುಕಿಲ್ದ ಆಕೆಯ ಕೆನ್ನೆಗೆ ಪಟಾರನೆ ಒಂದು ಏಟು ಕೊಟ್ಟಳು.
ಬರಸಿಡಿಲಿನಂತೆರಗಿದ ಏಟಿಗೆ ತತ್ತರಿಸಿದ ಪದ್ದಕ್ಕ ತನ್ನ ವ್ಯಾಕರಣ ಶುದ್ಧವಾದ ಭಾಷೆಯನ್ನು ಆ ಕ್ಷಣವೇ ಕಳೆದುಕೊಂಡು "ಅಯ್ಯಯ್ಯೋ ಯಾರಾದ್ರು ಬಂದು ಬುಡುಸಿಕೊಳ್ರೆಪ್ಪೋ.. ಈ ಮುದಿ ದೆವ್ವ ನನ್ನ ಸಾಯಿಸಲಾಕ ಹತ್ಯಾತ್ರೆಪೋ" ಎಂದು ಲಭೋ ಲಭೋ ಬಾಯಿಬಡಿದುಕೊಳ್ಳತೊಡಗಿದಳು.
"ನನ್ನ ಮುದಿ ದೆವ್ವ ಅಂತೀ ಭೋಸೂಡಿ" ಅಂತ ಗಂಗವ್ವ ಮತ್ತೊಂದು ಕೆನ್ನೆಗೆ ಛಳೀರನೆ ಏಟು ಬಿಟ್ಟಳು.
"ಅಯ್ಯಯ್ಯೋ" ಅರಣ್ಯ ರೋಧನ ಮಾಡಲಾರಂಭಿಸಿದ ಪದ್ದಕ್ಕನನ್ನು ಆಲಂಗಿಸಿಕೊಂದು ಹುಚ್ಚಿ ಅಳಬ್ಯಾಡ ಸುಮ್ಕಿರು.. ಸಣ್ ಹುಡುಗರಂತೆ ಅಳತೀಯಲ್ಲೇ.. ಎಲ್ರ ಎದುರಿಗೆ ಆ ಸಾಂಬನನ್ನು ಮ್ಯಾಲೆಳೆಕೊಂಡೆಯಲ್ಲ ಇದು ಸರಿ ಏನು?" ಎಂದು ಪರಿಪರಿಯಾಗಿ ರಮಿಸುತ್ತ.. ಚೆಂಡಿಹಿಡಿದ ಮಗುವನ್ನು ತಾಯಿ ಸಮಧಾನಪಡಿಸುತ್ತಿರುವ ಹಾಗೆ.. ಕರೆದುಕೊಂಡು ತನ್ನ ಮನೆಯ ಕಡೆಗೆ ಹೋದಳು.
ಹೀರೋಯಿನ್ನೇ ಹೋದ ಮೇಲೆ ಸಿನಿಮಾ ನಡೆಯುವ ಬಗೆಯಾದರೂ ಹೇಗೆ?
ಸರಕಾರೀ ಪುರಾನ ಕಡತದಿಂದ ನುಜ್ಜುಗುಜ್ಜಾದ ಎವಿಡೆನ್ಸು ಹೊರಬರುವಂತೆ ಸಾಂಬನು ಕಿರುಗಟ್ಟೆ ಮೇಲಿಂದೆದ್ದೊಡನೆ ಬಿರುಗಾಳಿಗೆ ಸಿಕ್ಕ ವಯಸ್ಸಾದ ಅಡಿಕೆ ಮರದಂತೆ ವಾಲಾಡತೊಡಗಿದನು. ಎಲ್ಲಿ ತಮ್ಮ ಬಾಸು ಬೋರ್ಗೊಯ್ದು ಬಿಸುಟ ಎಳೆ ಬಳ್ಳಿಯಂತೆ ಭೂದೇವಿ ಮೇಲೊರಗಿ ಬಿಡುವನೋ ಎಂದು ಹೆದರಿದ ಸಿಬಿಐ ಕ್ಯಡರಿನ ಜೇಮ್ಸ್ ಬಾಂಡುಗಳು ತಮ್ಮ ಕೈಲಿದ್ದ ಬೆಕ್ಕುಗಳ ಕಳೆಬರಗಳನ್ನೆಸೆದು ಪೊಡರ್ವ ಸಿಡಿಲಿನ ರವಕೆ ಕೂಡೆಗಳೇಂ ತಡೆಪುವೆ ಎಂಬಂಥ ಒಸರುವ ಮಾತುಗಳನ್ನಾಡುತ್ತ ಓಡೋಡಿ ತಮ್ಮ ಬಾಸ್‌ನನ್ನು ಹಿಡಿದುಕೊಂಡರು. ಅವನು ಅವನಿಗೊರಗಿದರೆಲ್ಲಿ ಭೂಮಿ ಸುಟ್ಟು ರಾಗಿರೊಟ್ಟಿಯಾಗಿ ಬಿಡುವುದೋ ಎಂಬಂತೆ.
ಸಾಂಬ ಎಂಬ ಕರುವಿನ ಮೇಲೆ ಹತ್ತಾರು ಬೊಕ್ಕೆಗಳೆದ್ದಂತೆ ಅಭಿಮಾನಿಗಳು ಅವನನ್ನು ಹಾಗೆ ಅಮರಿಕೊಂಡು ಹಿಂದೆ ಬಂದರೆ ಒದೆಯಬೇಡಿ ಮುಂದೆ ಬಂದರೆ ಹಾಯಬೇಡಿ ಕಂದನಿವ ನಿಮ್ಮವನೆಂದು ಕಾಣಿರಿ ಎಂದು ಬೆಂದ ಹುಣ್ಣುಗಳಂಥ ಜನರ ನಡುವೆ ದಾರಿ ಮಾಡಿಕೊಂಡು ಹಾಗೇ ನಡೆಸಿಕೊಂಡು ನ.. ಡೆ.. ಸಿ.. ಕೊಂ.. ಡು ಮಣ್ಣಿನ ಮನೆಯನ್ನು ದಾಟಿ, ಓಣಿಗಳನ್ನು ದಾಟಿ ಸರಕಾರಿ ಆಸುಪತ್ರೆಯ ಕಡೆ ಹೋಗಲು..
ಮಾರ್ಜಾಲಕ್ಕೆ ತುಸು ಜೀವ ಬಂದು ಮಿಸುಕಾಡಿದಂತಾಯ್ತು..
ಆರೇನು ಮಾಡುವರು ಆರಿಂದೇನಹುದು! ಪೂರ್ವ ಜನ್ಮದ ಕರ್ಮವಿಧಿ ಬೆನ್ನು ಬಿಡದು! ಎಂಬರ್ಥ ಬರುವಂತೆ ಮ್ಯಾಂವ್ ಗುಟ್ಟಿ ತನ್ನ ಬಲಗಾಲನ್ನು ಪ್ರಿಯತಮೆ ಕಾಮೋಷಿಯ ಕಳೆಬರದ ಮೇಲೇರಿ ಒಂದು ಧೀರ್ಘ ಉಸಿರೆಳೆದು ಅದು ಬಿಟ್ಟ ಪ್ರಾಣವು ಕ್ಷಣಕ್ಕೊಂದು ಛಂದದಲ್ಲಿ ಊರ್ಧ್ವಮುಖವಾಗಿ ಚಲಿಸುತ್ತಾ ಚ.. ಲಿ.. ಸು.. ತ್ತಾ ಪರಮಾತ್ಮನ ಪೂರ್ನ ಕುಂಭದ ಜೀವ ಕಳಸದಲ್ಲಿ ಲೀನವಾಗಳು..
ನೆರೆದಿದ್ದ ಜನವು ಅವಧೂತರೋಪಾದಿಯಲ್ಲಿ ನಿಟ್ಟುಸಿರುಬಿಟ್ಟು ಹಗುರಾಗಲು..
ಪರಮೇಶ್ವರ ಶಾಸ್ತ್ರಿಗಳು ಆಪತ್ಕಾಲೇ ನಾಸ್ತಿ ಮರ್ಯಾದಾ ಎಂದು ಗೊಣಗುತ್ತಲಿರುವಾಗಲೇ ಅವರ ಸುಸಂಸ್ಕೃತ ಹೃದಯದ ಬಲ ಹೃತ್ಕವಾಟದ ಮಗ್ಗುಲ ಗುಗ್ಗುಳ ಕಾಂತಿ ಹೀನವಾಗತೊಡಗಿತು. ತಮ್ಮ ಬಾಳ ಸೊಡರದೆಲ್ಲಿ ಸದರಿ ಗ್ರಾಮದ ಪ್ರಜೆಗಳ ಬಿಸಿಯುಸಿರಿಗೆ ನಂದಿ ಬಿಡುವುದೋ ಎಂದು ಹೆದರಿ ಸಾಧ್ವಿ ಅಲುಮೇಲಮ್ಮ ತಮ್ಮ ಸುಪುತ್ರ ಶಾಮನ ಸಹಾಯ ಪಡೆದು ತಮ್ಮ ಮಾವನವರನ್ನು ಹಾಗೇ ಒಳಗಡೆ ನಡೆಸಿಕೊಂಡು ಹೋಗಿ ಹಂಸತೂಲಿಕಾ ತಲ್ಪದ ಮೇಲೆ ಮಲಗಿಸುತ್ತಿರಲು..
ಜನರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಬೆಣ್ಣೆಯ ಋಣ ತೀರಿಸಿದ ಎಣ್ಣೆಯಂತೆ
ವಸ್ತ್ರದ ಋಣ ತೀರಿಸಿದ ಅನ್ನದಂತೆ
ಹೆಣ್ಣಿನ ಋಣ ತೀರಿಸಿದ ಹೊನ್ನಿನಂತೆ
ಮಣ್ಣಿನ ಋಣ ತೀರಿಸಿದ ಕ್ಷಣದಂತೆ
ಅವರೆಲ್ಲ ಒಬ್ಬೊಬ್ಬರಾಗಿ ಅಲಿಂದ ಕರಗಿ ಹೋಗುತ್ತಿರಲು..
ಅದುವರೆಗೆ ಅದನ್ನೆಲ್ಲ ನೋಡುತ್ತ ನಿಂತಿದ್ದ ರಘೂಗೆ ನಶ್ವರ ಬದುಕು ನೀರಮೇಲಣ ಗುಳ್ಳೆ ಅನ್ನಿಸಿಬಿಟ್ಟಿತು. ಪ್ರಾಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತವರ ಸಂಗಡಿಗರ ಸರ್ವಾಧಿಕಾರಿ ಮನೋಭಾವದ ಜೊತೆಗೆ ವಿರೋಧ ಪಕ್ಷದವರ ಗದ ಮುರುಗಿ ಆಟ ಅಕ್ಬರ್‌ನಂಥವರ ನೇತೃತ್ವದ ಭೂಗತ ಚಟುವಟಿಕೆ ಎಲ್ಲ ಕಣ್ಣಿಗೆ ಕಟ್ಟಿದಂತೆ ನೆನಪಾದವು. ಸಾಮಾಜಿಕ ಬದುಕೇ ಸೀಳಿಹೋಗಿ ದ್ವಿದಳಧಾನ್ಯದೋಪಾದಿಯಲ್ಲಿ ಗತಪ್ರಾಣವಾಗಿ ಬಿದ್ದಿರುವ ರೀತಿಯಲ್ಲಿ; ಮಾನವ ಮನಸ್ಸಿನ ಎರಡು ದೇಹಗಳೇ ಉರುಳಿರುವ ರೀತಿಯಲ್ಲಿ ಬಿದ್ದಿರುವ ಆ ಎರಡು ಕಳೇಬರಗಳನ್ನು ತಿಂದಾದರೂ ತಂತಮ್ಮ ದೇಹದ ಪಂಚಭೂತಗಳನ್ನು ತಣಿಸಿಕೊಳ್ಳಲು ಆಸ್ಪದ ಮಾಡಿಕೊಡಬೇಕೆಂದರೆ ಕೊರಚರಿಬ್ಬರು ಆಗಲೆ ಅಲ್ಲಿಂದ ಪರಾರಿಯಾಗಿಬಿಟ್ಟಿರುವರು.
ಪದವೀಧರನೂ, ಉದಯೋನ್ಮುಖ ಬರಹಗಾರನೂ ಆದ ಶಾಮಾಶಾಸ್ತ್ರಿಯ ಸಹಾಯ ಪಡೆಯುವುದು ಅನಿವಾರ್ಯವಾಯಿತು. ಪದ್ದಕ್ಕಳ ರೌದ್ರಾವತಾರವನ್ನೆ ಕನ್ನಲ್ಲಿ ತುಂಬಿಕೊಂಡು ದಿಗ್ಭ್ರಮಿತಳಾಗಿ ತಾಯಿ ತಾತನವರ ಎಡಪಾರ್ಶ್ವದಲ್ಲಿ ಕೂತಿದ್ದರಿಂದ ಕಾವಲಿಗೆ ಸೀದು ಅಂಟಿಕೊಂಡಿದ್ದ ದೋಸೆಯನ್ನು ಬಿಡಿಸುವುದರಲ್ಲಿ ಮಗ್ನನಾಗಿದ್ದ ಶಾಮಾಶಾಸ್ತ್ರಿ ರಘುರಾಮನ ಒಂದೇ ಕೂಗಿಗೆ ಹೊರಬಂದನು.
ಹೊಸದಾಗಿ ಮದುವೆಯಾದ ಷೋಡಷಿ ಗಂಡನ ಲಘು ಸಂಜ್ಞೆಗೆ ಡವಗುಟ್ಟುವ ಎದೆಯೊಡನೆ ಹೊರಬರುತ್ತಾಳಲ್ಲ ಹಾಗೆ..


೧೭೬

"ನೀವು ಬೆಳಗಿನ ಉಪಹಾರಕ್ಕಾಗಿ ಬಂದಿರುವಾಗಲೇ ಈ ಅಹಿತಕರ ಘಟನೆ ನಡೆದುಬಿಡಬೇಕೆ!: ಎಂದು ಹೇಳಲಾಗದೆ ಕಂಪಿಸುವ ತುಟಿಗಳೊಡನೆ ಅವನು ಇವನನ್ನು ನೋಡಿದರೆ..
"ಮನುಷ್ಯನ ಜೀವನ ಒಂದು ಚುಂಬನ ಇದ್ದ ಹಾಗೆ.. ಹಂಚಿಕೊಡದಿದ್ದರೆ ಅದರಿಂದ ಏನೂ ಉಪಯೋಗವಿಲ್ಲ.. ನನ್ನಂಥ ಅತಿಥಿ, ನಿನ್ನಂಥ ಮೀನು ಎರಡು ಮೂರು ದಿನಗಳೊಪ್ಪತ್ತಿನಲ್ಲಿ ಕೊಳೆತು ನಾರದೆ ಇರುವುದಿಲ್ಲ" ಎಂದು ಏನೇನೋ ಅರ್ಥಗರ್ಭಿತವಾಗಿ ಹೇಳಲು ಪ್ರಯತ್ನಿಸುತ್ತ ಇವನು ಅವನ ಮುಖವನ್ನು ನೋಡಿದನು.
"ಥೂ! ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ...ಸತ್ತಿರೋದು ನಾವಲ್ಲ್ರೋ ನೀವು.. ಹಿಟ್ಟಿನ ಗೂಳಿಯಲ್ಲಿ ಮಾಡಿದ ಬೊಂಬೆಗಳಾದ ನೀವು ನಮ್ಮ ಹಾಗೆ ವಿಲವಿಲನೆ ಒದ್ದಾಡಿ ಸಾಯುವ ದಿನ ದೂರವಿಲ್ಲ" ಎಂದು ಅರ್ಥ ಬರುವಂತೆ ಆ ಎರಡು ಕಳೇಬರಗಳು ಅವರಿಬ್ಬರನ್ನು ಅಣಕಿಸಿದವು.
ಕಳೆದ ವಾರ ಓತಿಕ್ಯಾತ ಸತ್ತಿದ್ದಕ್ಕೂ ದೊಡ್ಡ ರಂಪಾಟ ಮಾಡಿದ್ದ ಅವಿವಾಹಿತೆ ಸಾವಿತ್ರಿ ಹೋಗಬೇಡೆ.. ಸತ್ತಿರೋವ್ನ ಕಂಡ್ರೆ ನಿನ್ನ ಬುದ್ಧಿ ನೆಟ್ಟಗಿರೋಲ್ಲ" ಎಂದು ಹೆತ್ತವರು ಹಾಕಿದ ಲಕ್ಶ್ಮಣ ಗೆರೆಯನ್ನು ಲೆಕ್ಕಿಸದೆ ಓಡಿ ಬಂದವಳೆ "ಅಯ್ಯಯ್ಯೋ ಏನು ಕರ್ಮ ಮಾಡಿದ್ರೋ, ಹೀಗೆ ಸಾಯೋಕೆ...ಬದಿಕಿರೋ ಮಟ ಒಬ್ಬರನ್ನೊಬ್ಬ್ರು ಹರಕೊಂಡು ತಿಂದ್ರಿ.. ಒಂದಿನ ನೆಟ್ಟಗೆ ಕುಂತು ಮಾತಾಡ್ಲಿಲ್ಲ ’ ಎಂದೇನೋ ಅಬ್ಬರಿಸತೊಡಗಿದಳು...ಆಕೆ ಅವುಚಿಕೊಂಡ ಕಾಮೋಷಿಯನ್ನು ಆಕೆಯನ್ನು ಬಿಡಿಸಿಕೊಳ್ಳುವಷ್ಟರಲ್ಲಿ ಸಾಕುಸಾಕಾಗಿಹೋಯಿತು ಅವರೀರ್ವರಿಗೆ..

ಆಕೆ ಲಭೋ ಲಭೋ ಬಾಯಿ ಬಡಿದುಕೊಳ್ಳುತ್ತಿದ್ದುದನ್ನು ಲೆಕ್ಕಿಸದೆ ಶಾಮ ಕಾಮೊಷಿಯನ್ನು ಕೈಗೆ ತೆಗೆದುಕೊಂಡವನೆ ಅರ್ಥವಾಗದ ನೆನಪುಗಳಿಂದ ಜಜ್ಜಿ ಹೋಗಿ ಕಣ್ಣು ತುಂಬಿಕೊಂಡು ಬಿಟ್ಟನು. ತನ್ನ ಹೃದಯವೇ ಅಂಗೈ ತುಂಬಿಕೊಂಡು ಬಿಟ್ಟಿರುವಂತೆ ಭಾಸವಾಯಿತು. ಮಸಾಲೆದೋಸೆ ಕಾವಲಿಗೆ ಸೀದು ಹೋದಂತೆ ಅವನ ಕಾಲುಗಳು ನೆಲಕ್ಕೆ ಕಿತ್ತಿಡಲಾರದಷ್ಟು ಅಂಟಿಕೊಂಡು ಬಿಟ್ಟವು. ನೆನಪುಗಳಿಗೆ ಅಕ್ಷರ ಮತ್ತು ಶಬ್ದ ರೂಪ ಕೊಟ್ಟರೆಲ್ಲಿ ರಘುವೇ ಮೊದಲಾದ ನರಮಾನವರು ತನ್ನನ್ನು ಅದೆಲ್ಲಿ ರಮಿಸಿ ತಮಗೆ ತಾವೇ ದೊಡ್ಡವರಾಗಿ ಬಿಡುವರೋ ಎಂದು ಅವುಡುಗಚ್ಚಿಕೊಂಡನು. ಅವುಡುಗಚ್ಚಿಕೊಂಡೇ ತನಗೆ ಸ್ವಾಂತನ ಶಿಕ್ಷಣ ನೀಡದೆ ಹೋದ ತಾತನನ್ನು; ತಾಯಿಯನ್ನು ಶಪಿಸಿದನು. ಇನ್ನೊಬ್ಬರಿಗೆ ಸಮಾಧಾನ ಹೇಳುವ ಪಾಠ ಕಲಿಯದ ತಾನು ಯಾವ ಪುರುಷಾರ್ಥಕ್ಕೆ ಬದುಕಿರುವುದೆಂದುಕೊಂಡನು.

ಕೈಯಲ್ಲಿ ಮಾರ್ಜಾಲದ ಕಳೇಬರ ಹಿಡಿದುಕೊಂಡಿದ್ದ ರಘು ಅವನ ಹೆಗಲ ಮೇಲೆ ಕೈ ಇರಿಸಿ ಧೈರ್ಯದಿಂದ ಮುಂದೆ ಹೆಜ್ಜೆ ಇರಿಸುವಂತೆ ಸನ್ನೆ ಮಾಡಿದನು.
ಆ ಸ್ಪರ್ಶದಿಂದಾಗಿ ಶಕ್ತಿ ಸಂಚಲನದಿಂದ ಒಂದೊಂದಾಗಿ ಹೆಜ್ಜೆ ಇಕ್ಕ ತೊಡಗಿದ ಅವನು ಮುಂದೆ ಮುಂದೆ.. ಮಹಾತ್ಮಾಗಾಂಧೀಜಿಯವರ ಶವ ಹೊತ್ತು ಕೊಂಡಿರುವವನಂತೆ.. ರಘುಪತಿ ರಾಘವ ರಾಜಾರಾಂ ಪದ ನೆನಪು ಮಾಡಿಕೊಳ್ಳುತ್ತಿರುವವನಂತೆ.. ಅದರೊಂದಿಗೆ ಸೋಹ್ನಿ ಮಹಿಪಾಲ್; ಹೀರಾ ರಾಂಜಾ; ಲೈಲಾ ಮಜ್ನೂ; ರೋಮಿಯೋ ಜೂಲಿಯಟ್ ಮುಂತಾದ ಅಮರ ಪ್ರೇಮಿಗಳ ಅಮರ ಪ್ರೇಮ ಕಥಾನಕಗಳನ್ನು ನೆನಪು ಮಾಡಿಕೊಳ್ಳುತ್ತಿರುವವನಂತೆ ಹಿಂದೆ ಹಿಂದೆ ಹೆಜ್ಜೆ ಇಕ್ಕಲಾರಂಭಿಸಿದ ರಘುರಾಮ..
ಅವರಿಬ್ಬರು ಮಾಳಿಗೆ ಮೇಲೆ ಬೀದಿ ಬದಿ; ಕಿಟಕಿ ಬಾಗಿಲೇ ಮುಂತಾದ ಕಡೆ ಬಾಯಿಗೆ ಬಟ್ಟೆ


೧೭೭

ಇಟ್ಟುಕೊಂಡು ನಿಂತಿದ್ದ ಮಂದಿಗೆ ಹೇಗೆ ಕಾಣುತ್ತಿದ್ದರಪ್ಪಾ ಅಂದರೆ ಸಂಪೂರ್ಣ ರಾಮಾಯಣವನ್ನು ಹಾಡಿನ ಮೂಟೆಯಲ್ಲಿ ಎದೆಯೊಳಗಿಟ್ಟುಕೊಂಡು ಒಂದು ಕೈಲಿ ಅಜೇಯವಾದ ಧನಸ್ಸು! ಇನ್ನೊಂದು ಕೈಲಿ ತಂಬೂರಿಯನ್ನಿಟ್ಟುಕೊಂಡು ಅಶ್ವಮೇಧದ ಅಂಕಣದ ಕಡೆ ನಡೆಯುತ್ತಿದ್ದ ಪುರಾಣ ಪ್ರಸಿದ್ಧ ಅವಳಿ ಜವಳಿಗಳಾದ ಲವಕುಶರು ನಡೆಯುತ್ತಿದ್ದಾರೇನೋ ಎಂಬಂತೆ.
ಜನ ಬಿಕ್ಕಿಬಿಕ್ಕಿ ನೋಡುತ್ತಿರುವಾಗ ಅವರು ನಡೆಯುತ್ತ ಬಸವನ ಬಾವಿ ತಗ್ಗಿನ ಕಡೆ ನಡೆದಿಳಿದು ಕಣ್ಮರೆಯಾದರು.
*
*
*
ಅರ್ಥ ಬರುವಂತೆ ಇವನು ಅವನನ್ನು ನೋಡಿದನು.
‘ಪೊನ್ನಂ ರನ್ನಂ ಕೂಡಿದೊಡೆನ್ನೀ ವಾಗ್ವಧುಗೆ ಭೂಷಣಂ ಪೆರತುಂಟೇ’
ಈ ಪ್ರಕಾರವಾಗಿ ತಂತಮ್ಮ ಕೈಗಳಲ್ಲಿ ಮೂಷಕ ವೈರಿಗಳ ಕಳೇಬರವನ್ನು ಕೈದು ಮಾಡಿಕೊಂಡು ಅವರು ಧೀರೋದಾತ್ತವಾದ ಹೆಜ್ಜೆ ಇಕ್ಕುವ ಪರಿಯನ್ನು ಓಣಿಯ ಮಂದಿ ಕಣ್ತುಂಬ ನೋಡಿದರು. ಅವಾವುದಕ್ಕೂ ಬೇಸರಿಸದೆ ಅವರು ದ್ವಿದಳ ಧಾನ್ಯ ಎರಡು ಹೋಳಾದ ಪರಿಯಂತೆ, ಒಂದು ಕಾವ್ಯದ ಅಲಂಕಾರ ಛಂದಸ್ಸುಗಳಂತೆ; ಒಂದು ಆತ್ಮದ ಎರಡು ದೇಹಗಳಂತೆ, ತಮ್ಮ ನಾಲ್ಕೂ ಪಾದಗಳಿಂದ ಭೂಮಿಯನ್ನು ಅಳೆಯುತ್ತಿರುವವರಂತೆ ತಮ್ಮ ಪಾಡಿಗೆ ತಾವು ನಡೆಯುತ್ತಿದ್ದರು.
ಆ ಓಣಿ ದಾಟಿ ಈ ಓಣಿಗೆ ಬಂದರು.
ತಂತಮ್ಮ ಕೈಗಳಲ್ಲಿರ್ದ ಕಳೇಬರಗಳಿಗೆ ತಾವೇ ಮುಖ ಸೊಟ್ಟ ಮಾಡಿಕೊಳ್ಳತೊಡಗಿದರು.
ತಂತಮ್ಮ ದೇಹಗಳನ್ನೇ ಕೈಲಿ ಹಿಡಿದುಕೊಂಡವರಂತೆ ಪ್ರತಿ ಹೆಜ್ಜೆಗೂ ಕಂಪಿಸತೊಡಗಿದರು.
ತಾವರಸುವ ತಿಪ್ಪೆ ದೂರ ಸರಿಯುವಂತೆ ಭಾಸವಾಯಿತವರಿಗೆ.
ಉರಿಯ ಸರಿಗೇರಿದ ಪತಂಗಗಳಂತೆ ಹೆಜ್ಜೆ ತಪ್ಪತೊಡಗಿದರು.
ಕುರುಡರು ಹಿಡಿದುಕೊಂಡ ಕನ್ನಡಿಯಂತೆ
ಮೂರ್ಖರ ಕೈಯಲ್ಲಿನ ದಂಡಿಯ ಕಾವ್ಯಾದರ್ಶ ಗ್ರಂಥದಂತೆ
ಹೋರಾಡಲರಿಯದವನು ತೊಟ್ಟ ಕವಚದಂತೆ..
ಹೆಬ್ಬುಲಿಯ ಕೂಸನು ಬೇಡುವ ಕೊಬ್ಬಿದ ನರಿಗಳಂತೆ..
ಅವನು ಹಿಂದೆ ಇವನು ಮರೆ ಮಾಚುತ್ತ, ಇವನ ಹಿಂದೆ ಅವನು ಮರೆಮಾಚುತ್ತ ಅಸ್ಪಷ್ಟ ಹೆಜ್ಜೆಯನ್ನಿಕ್ಕುತ್ತ ನಡೆಯುತ್ತೊರ್ದ ಅವರನ್ನು ಊರೇ ಹೊರಗೆ ನೂಕಿತೆಂಬಂತೆ ಸಾಕಷ್ಟು ಹೊರಗಡೆ ಬಂದಿರ್ದರು.
ಇವನ ಕಾಲಲ್ಲಿ ಸೊಂಟ ಊನ ಮಾಡಿಕೊಂಡಿದ್ದ ನಾರಾಣಿ ಮಸೀದಿ ಮೇಲೆ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಘ್ರಾಣೇಂದ್ರಿಯ ಚುರುಕುಗೊಂಡು ಆಲೆ ಕುಣಿಯೊಳಗೆ ದುತ್ತನೆ ನೆಗೆದು ಒಂದೇ ಓಟ ಪೂರೈಸಿ ಎದುರಿಗೆ ನಿಂತು ಗುರ್ ಗುಟ್ಟಲಾರಂಭಿಸಿತು.
‘ನಾರಾಯಣೊ ಹರಿಃ’ ಅಂತ ಒಂದು ಹೆಜ್ಜೆ ಹಿಂದಿಟ್ಟು ಉರುಳಿ ಬೀಳುವುದರಲ್ಲಿದ್ದ ಶಾಮನನ್ನು ರಘು ಗಟ್ಟಿಯಾಗಿ ಹಿಡಿದುಕೊಂಡ. ಅವನ ಕೈಲಿ ಸೈಂಧವನ ತಲೆಯಂತೆ ಅನಿಶ್ಚಿತ ಸ್ಥಿತಿಯಲ್ಲಿದ್ದ ಕಳೇಬರ ಗಾಳಿಗೊಡ್ಡಿದ್ದ ಸೊಡರಂತೆ ಹೊಯ್ದಾಡಿತು. ಅದು ಕೆಳಗೆ ಬಿದ್ದರೆಲ್ಲಿ ಭೂಮಿ ನಾಶವಾಗುವುದೋ ಎಂಬ ಆತಂಕದಿಂದ ನಾರಾಣಿ ಮತ್ತೊಮ್ಮೆ ಗುರುಗುಟ್ಟಿತು. ಜಿಗಿಯಲು


೧೭೮

ಮುಂದೆರಡು ಪಾದಗಳನ್ನು ನೆಲಕ್ಕೂರಿ ತನ್ನೆರಡು ಕಂಗಳಿಂದ ಕಾಳ್ಗಿಚ್ಚನ್ನು ಉಗುಳ ತೊಡಗಿತು. ಅರೆ! ಅದು ಇನ್ನೇನು ಬೊಗಳೇಬಿಟ್ಟಿತು! ಅರೆ! ಅದಿನ್ನೇನು ನೆಗೆದೇ ಬಿಟ್ಟಿತು! ಅರೆ! ಅದಿನ್ನೇನು ಕಳೇಬರಗಳ ಸಹಿತ ತಮ್ಮನ್ನೂ ಕಬಳಿಸಿಯೇ ಬಿಟ್ಟಿತು ಎಂದು ಆ ಕೂಡಲೆ ಭಾವಿಸಿದ ಆ ಸತ್ಕುಲ ಪ್ರಸುತರು ತಂತಮ್ಮ ಪ್ರಾಣಗಳನ್ನು ಅಂಗೈಲಿಟ್ಟುಕೊಂಡು ಜಲಧಿಯೊಳುಬ್ಬೆದ್ದ ತೆರಯಲಿ ಮಂದರ ಮುಳುಗುವಂದದಿ ನತದೃಷ್ಟ ಕಳೇಬರಗಳನ್ನು ನೆಲಕ್ಕೀಡಾಡಿ ಝಳದ ಜಾಡಿಗೆ ಹೆದರಿದ ರಾಹುಕೇತುಗಳಂತೆ ಓಡತೊಡಗಿದರೆಂಬಲ್ಲಿಗೆ ಕುಂವೀ ಎಂಬ ಹುಲು ನರ ವಿರಚಿತ ‘ಶಾಮಣ್ಣ’ ಎಂಬ ಮಹಾ ಕಥಾನಕದ ಪ್ರಥಮಾಶ್ವಾಸಂ ಸಮಾಪ್ತಿಯಾದುದು.
‘ಜಯ ಮಂಗಳಂ ನಿತ್ಯ ಶುಭ ಮಂಗಳಂ’
*
*
*

೧೭೯

ದ್ವಿತೀಯಾಶ್ವಾಸಂ
ಕಾಲ ಅನಂತವಾಹಿನಿ. ಅದು ಮುಂದು ಮುಂದಕ್ಕೆ ಪ್ರವಹಿಸುತ್ತಲೇ ಇರುತ್ತದೆ. ಬ್ರಹ್ಮಾಂಡದ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ. ಕಾಲ ಎಲ್ಲ ಒಳ್ಖೆಯದೂ ಕೆಟ್ಟದ್ದೂ ಎಲ್ಲವನ್ನು ಅರಗಿಸಿಕೊಲ್ಲುತ್ತದೆ. ಪ್ರತಿಯೊಂದು ಸಚರಾಚರ ಭೌತ ವಸ್ತುಗಳೊಳಗೆ ಸೂಕ್ತವಾದ ಬದಲಾವಣೆ ಮಾಡುತ್ತ ನಿರಂತರ ಚಲನೆ ಹೊಂದಿರುವ ಕಾಲವನ್ನು ಭೌತವಿಜ್ಞಾನಿಗಳು ಬಿಲ್ಲಿನಿಂದ ಚಿಮ್ಮಿದ ಬಾಣಕ್ಕೆ ಹೋಲಿಸಿರುವುದು ಸರಿಯಾಗಿದೆ. ಕಾಲ ಸ್ತಬ್ದವಾಗುವುದು ಆಯಾ ವ್ಯಕ್ತಿಗಳ ದೇಹದಲ್ಲಿ ಆವತ್ತಿನವರೆಗೆ ಪ್ರಾಣಪಕ್ಷಿ ವಾಸಮಾಡುತ್ತಿದ್ದು ಕೊನೆಗೊಮ್ಮೆ ಅದು ಹೇಳದೆ ಕೇಳದೆ ಪುರ್ರನೆ ಹಾರಿಹೋದೊಡನೆಯೆ, ಆದರೆ ಪ್ರಾಣಕಳೆದುಕೊಂಡ ವ್ಯಕ್ತಿಯ ಬದುಕು ಹಲವರ ಬಾಯಲ್ಲಿ ಒಂದು ಚಲನೆ ಪಡೆಯುತ್ತದೆ. ಅವನು ಹಂಗಿದ್ದ; ಹಿಂಗಿದ್ದ ಅಂತ ಮಾತಾಡಿಕೊಳ್ಳುತ್ತರೆ. ಭಾಷೆಯ ರೂಪ ಅವಧರಿಸಿ ಅವನು ಬದುಕುಳಿಯುತ್ತಾನೆ. ನಂತರ ಸತ್ತವನ ಯೊಗ್ಯತೆಗೆ ತಕ್ಕಂತೆ ಅವನ ಕಥೆಯೂ ಭೂತಕಾಲದ ದಫ್ತರು ಸೇರಿಬಿಡುತ್ತದೆ. ಆದ್ದರಿಂದ ಪ್ರಾಚೀನರು ‘ಕಾಲೋ ಅಶ್ವೋವಹತಿ’ ಎಂದು ಕಾಲವನ್ನು ನಿರಂತರವಾಗಿ ಸಂಚರಿಸುವ ಕುದುರೆಗೆ ಹೋಲಿಸಿದರು. ‘ಸಪ್ತರಶ್ಮೀ’ ಅಂತ ಅದಕ್ಕೆ ಏಳು ಕಿರಣಗಳನ್ನು ಸೃಷ್ಟಿಸಿದರು. ಸಹಸ್ರಾಕ್ಷೋ ಅಂತ ಸಾವಿರ ಕಣ್ಣುಗಳಿವೆ ಎಂದು ಹೇಳಿದರು. ಅಜರೋ ಅಂತ ಅದಕ್ಕೆ ಮುಪ್ಪಿಲ್ಲವೆಂದು ಘೋಷಿಸಿದರು. ಭೂರಿ ಶೀತಾಃ ಅಂತ ಅದರ ವೀರ್ಯಸಮೃದ್ಧಿತನಕ್ಕೆ ಪ್ರಾಮಾಣಪತ್ರ ದಯಪಾಲಿಸಿದರು. ಮತ್ತೂ ಮುಂದುವರೆದು ಕಾಲೇನ ಆಗತೇನ ಇಮಾಃ ಸರ್ವಾ ಪ್ರಜಾ ನಂದತಿ ಎಂದು ಹೇಳುವುದರ ಮೂಲಕ ದ್ವಂದಾತೀತವಾದ ಅನುಭವವನ್ನು ಕಾಲ ನೀಡುತ್ತದೆ ಎಂದು ಸಾರಿದರು. ಅದಕ್ಕೆ ದೈವಸ್ತಾನ ನೀಡಿ ಕಾಲಭೈರವ ಎಂದು ಹೆಸರಿಟ್ಟರು. ಕಾಲಭೈರವ ಉಗ್ರ ಶಾಸಕ. ಅವನಿಗೆ ಶಿಕ್ಷಿಸುವುದೂ ಗೊತ್ತು, ಶಿಕ್ಷಣ ಕೊಡುವುದೂ ಗೊತ್ತು. ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ; ಈಶತ್ವ ವಶಿತ್ವವೆಂಬುವೇ ಮೊದಲಾದವರನ್ನು ತೇದು ಕುಡಿದ ವಂಶದಿಂದ ಬಂದವನಾದ ಶಾಮಾಶಾಸ್ತ್ರಿಯ ಬದುಕನ್ನೂ, ಕಾರ್ಲಮಾರ್ಕ್ಸ್, ಏಂಗೆಲ್ಸ್, ಚೆಗುವೆರಾ ಇವರೇ ಮೊದಲಾದ ಎಡಪಂಥದವರನ್ನು ಅರೆದು ಕುಡಿದು ಅನ್ನನಾಳದಲ್ಲಿ ಪ್ರತಿಷಾಪಿಸಿಕೊಂಡಿರುವ ಕಾಂರೇಡ್ ರಘುರಾಮನ ಬದುಕನ್ನು ಹೇಗೆ ರೂಪಿಸಿದ ಎಂದು ಯೋಚಿಸುವುದು ಈ ಪೂರ್ವಾರ್ಧ ಕಥಾನಕದಲ್ಲಿ ಮುಖ್ಯ.

ಸಂಸ್ಕೃತ ಕಳೇಬರದಮೇಲೆ ಪದ್ಮಾಸನ ಹಾಕಿ ಪ್ರಾಣಾಯಾಮ, ಧ್ಯಾನ ಮಾಡುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಎಂಬ ಮೇಡ್ ಇನ್ ಇಂಡಿಯಾ ಅಥವಾ ಸನ್ ಆಫ್ ಇಂಡಿಯಾ ಎಂಬುವನು ಹೊಸಪೇಟೆಯ ಅಗ್ರಹಾರ ನಿವಾಸಿ ವೇದಾಂತಿ ರಾಜಗೋಪಾಲಾಚಾರ್ಯರ ಮೊಮ್ಮಗಳಾದ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ಶಾಸ್ಥ್ರೋಕ್ತವಾಗಿ ಮದುವೆ ಮಾಡಿಕೊಂಡು ಸುಖವಾಗಿ ಜೀವಿಸುತ್ತಿದ್ದ ಎಂದು ಹೇಳಿದರೆ ಮುಗಿಯುವುದಿಲ್ಲ. ಹಾಗೆಯೇ ಈ ಕಾದಂಬರಿಯ ಇನ್ನೊಂದು ಮುಖವಾದ ಕಾಮ್ರೇಡ್ ರಘುರಾಮನು ತನ್ನ ಸೋದರಮಾವ ರುದ್ರನಾಯಕನ ಏಕಮಾತ್ರ ಪುತ್ರಿ ಅನಸೂಯಾಳನ್ನು ಗಾಂಧರ್ವ ವಿವಾಹವಾಗಿ ಸುಖೀ ಜೀವನ ನಡೆಸುತ್ತಿದ್ದ ಎಂದು ಸರಳವಾಗಿ ಹೇಳಿ ಕಾದಂಬರಿಕಾರನಾದ ನಾನು ನನ್ನ ಆತ್ಮಸಾಕ್ಷಿಗಾಗಲೀ, ಓದುಗರಿಗಾಗಲೀ ಮೋಸ ಮಾಡಲಾರೆ. ಈ ಕಾಲದಲ್ಲಿ ಓದುಗರೇನು ಮುಗ್ಧರೆನ್ನುವಂತಿಲ್ಲ. ನೀವು ಲೇಖಕರಿಗಿಂತ


೧೮೦

ಜಾಣರಿರುತ್ತೀರಿ. ಲೇಖಕರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳು ನಿಮಗೆ ಗೊತ್ತಿರುತ್ತದೆ.ಓದುವ ಪ್ರತಿಯೊಂದು ಸಂಗತಿಯನ್ನು ಬದುಕಿನ ಸಹಜ ಘಟನಾವಳಿಗಳೊಂದಿಗೆ ತಾಳೆಹಾಕಿ ನೋಡುತ್ತೀರಿ. ಸಾಹಿತ್ಯದ ಪ್ರತಿಯೊಂದು ಅಂಗೋಪಾಂಗವನ್ನು ಪರಿಪೂರ್ಣ ಸಮಾಜದ ಮಗ್ಗುಲಿರಿಸಿ ತಾಳೆಹಾಕಿ ನೋಡುತ್ತೀರಿ. ಸರಿ ಇದ್ದರೆ "ಪರವಾ ಇಲ್ಲಪಾ" ಅಂತೀರಿ. ಇಲ್ಲದಿದ್ದರೆ ಡೋಂಗಿ ಗುರುತಿಸಿ ಆ ಲೇಖಕನನ್ನು ಭೂತದ ಕೊಚ್ಚೆಗೆಸೆದು ಬಿಡುತ್ತೀರಿ. ಆದ್ದರಿಂದ ಸಮಾಜದ ಎರಡು ಭಿನ್ನ ಧೃವಗಳಂತಿರುವ ಶಾಮ ಮತ್ತು ರಘುರವರ ವಿವಾಹೋತ್ತರ ಬದುಕನ್ನು ಅತ್ಯಂತ ಸಹಜವಾಗಿ; ಪ್ರಾಮಾಣಿಕವಾಗಿ ಚಿತ್ರಿಸುವ ಅಗತ್ಯ ಮತ್ತು ಜವಾಬ್ದಾರಿ ನನಗಿದೆ. ವಿವಾಹವೆಂಬುದು ಬದುಕಿನ ಒಂದು ಅರ್ಥಪೂರ್ಣ ಆರಂಭ. ಮದುವೆಯಾಗಿ ಎಲ್ಲರೂ ಸುಖವಾಗಿದ್ದರು ಎಂದು ಹುಸಿ ಸುಳ್ಳು ಹೇಳುವ ಧೈರ್ಯ ನನಗಿಲ್ಲ. ಹಾಗೆ ಹೇಳಿಬಿಟ್ಟೆನೆಂದರೆ ಸತ್ತು ಅತ್ತ ವೈಕುಂಠದಲ್ಲೂ ಇಲ್ಲದೆ, ಇತ್ತ ನರಕದಲ್ಲೂ ಇಲ್ಲದೆ ಕೊತ್ತಲೂರಿನ ರಂಗ ಕಲಾವಿದೆಯರ ಓಣಿಯ ಪಾತಾಳ ಗಂಗೆಯ ಹುಣಸೇ ಮರದಲ್ಲಿ ಪ್ರೇತವಾಗಿ ಜೋತುಬಿದ್ದು ತೂಗಾಡುತ್ತಿರುವ ಶಾಮಾಶಾಸ್ತ್ರಿ ಎಂಬ ಬ್ರಹ್ಮ ಪಿಶಾಚಿ ಕಥೆಗಾರನಾದ ನನ್ನನ್ನು ಒಂದು ಕೈ ನೋಡಿಕೊಳ್ಳದೆ ಇರಲಾರದು. ಅದು ಅಲ್ಲದೆ ಅವರ ನನ್ನ ಖಾಸಾ ದೋಸ್ತು. ಅವನು ನನಗಿಂತ ಮೂರುವರೆ ತಿಂಗಳು ದೊಡ್ಡವನು. ಅವನೂ ನಾನೂ ಒಂದೇ ಗ್ರವುಂಡಿನಲ್ಲಿ ಆಡಿ ಬೆಳೆದವರು. ಅವನಂತೆ ನಾನೂ ಒಂದೆರಡು ಕಥೆ ಕವಿತೆ ಬರೆದು ಹಲವು ಹುಡುಗಿಯರ ಹೃದಯ ಗೆಲ್ಲಲು ವಿಫಲನಾದವನು. ವಿರಹದುರಿಯ ಶಮನಕ್ಕಾಗಿ ಕಾವ್ಯ ಕನ್ನಿಕೆಯೆಂಬ ತಿಳಿಗೊಳದಲ್ಲಿ ನಿರ್ನಾಮ ಆದವನು. ಅವನ ಬದುಕಿನ ವಿವಿದ ಅವಸ್ಥೆಗಳನ್ನು ಗಮನಿಸುತ್ತ, ಪ್ರತಿಯೊಂದು ಅವಸ್ಥೆಗೆ ಸಾಹಿತ್ಯದ ಗರಂ ಮಸಾಲೆ ಹಚ್ಚಿ ಕಥೆ ಬರೆದರೆ ಹೇಗೆ? ಕವಿತೆ ಬರೆದರೆ ಹೇಗೆ? ಕಾದಂಬರಿ ಬರೆದರೆ ಹೇಗೆ ಎಂಬ ಗೊಂದಲಕ್ಕೀಡಾದವನು. ಕೊನೆಗೆ ಏನೂ ಬರೆಯಲಾಗದೆ ಬದುಕಿನ ನಲವತ್ತು ಆಷಾಢಗಳನ್ನು ಕಳೆದವನು. ಅವನ ಬದುಕಿನ ಪ್ರತಿಯೊಂದು ಪಂಚಾಯ್ತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಾನು ನನ್ನ ಪ್ರೀತಿಯ ಹಾಗು ಅಂಜುಬುರುಕ ಗೆಳೆಯ ಶಾಮಾಶಾಸ್ತ್ರಿಯು ಮದುವೆ ಆದ ನಂತರ ಸುಖವಾಗಿದ್ದ ಎಂದು ಹೇಳಿಬಿಟ್ಟಲ್ಲಿ ಅವನು ಖಂಡಿತ ಕ್ಷಮಿಸುವುದಿಲ್ಲ. ಶೂದ್ರನಾಗಿ ಹುಟ್ಟಿರುವ, ಯಾವ ಸೂಕ್ಷ್ಮ ಸಂವೇದನೆಗಳನ್ನು ರೂಢಿಸಿಕೊಳ್ಳದೆ ಕೇವಲ ಚತುಷ್ಪಾದಿಯಂತೆ ಏನೋ ಒಂದು ನಾಲ್ಕು ಸಾಲು ಕನ್ನಡವನ್ನು ಸಲೀಸಾಗಿ ಬರೆಯಬಲ್ಲ ನಿನ್ನಂತೆ ಎಲ್ಲರೂ ಸುಖವಾಗಿದ್ದಾರೇನು? ಎಂದು ಅವನ ಪ್ರೇತವೇ ಒಂದು ದಿನ ನನ್ನ ಮನೆ ಬಾಗಿಲಿಗೆ ಬಂದು ಟಪ್ ಟಪ್ ಎಂದು ಕದ ತಟ್ಟಿಬಿಡಬಹುದು. ಇನ್ನೊಂದು ತಮಗ ಅರಿಕೆ ಮಾಡಿಕೊಳ್ಳಬೇಕಿರುವ ಸಂಗತಿ ಎಂದರೆ ಅವನ ಹೆಂಡತಿ ನನ್ನ ಪಿತಾಶ್ರೀಗೆ ಮನೆ ಮಾರಿ ಎಲ್ಲಿಗೋ ಹೋಗಿ ಒಂದು ಅರ್ಥವಾಗದ ಖಾಯಿಲೆಯಿಂದ ನರಳುತ್ತಿದ್ದಳೆಂಬುದು. ಬ್ರಾಹ್ಮಣರು ವಾಸವಾಗಿದ್ದ ಮತ್ತು ಬ್ರಾಹ್ಮಣ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿರುವೀ ಮನೆಯ ವಾಸ್ತುವಿನ ಬಗ್ಗೆ ತಲೆ ಕೆಡೆಸಿಕೊಂಡು ಹತ್ತಾರು ವಾಸ್ತು ಶಾಸ್ತ್ರಿಗಳು ಮನೆಗಳಿಗಡ್ಡಾಡಿ ಈ ಸದರೀ ಮನೇಲಿರೋ ಯಾರೂ ಉದ್ದಾರವಾಗುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಬಂದು ಒಂದು ಪುಲ್ಲಿಂಗ ಜಾತಿಯ ಸಂತಾನ ಹೀನ ನಮ್ಮಜ್ಜಿ ಎಲ್ಲ ಪ್ರವರ ವಿವರಿಸಿ "ತಗೋಬ್ಯಾಡಾಂದ್ರೆ ತಗೋಬ್ಯಾಡ"ವೆಂದು ಪಟ್ಟು ಹಿಡಿದು ಕೂತಿದ್ದುಂಟು. ಶೃಂಗೇರಿಗೆ ಹೋಗಿ ಕೇಶ ತೆಗೆಸಿಕೊಂಡು, ನೂಲಿನ ಸೀರೆ ಉಟ್ಟು ಅಂತರ್ಧಾನಗೊಂಡ ಪತಿ ಶಾಮನ ಫೋಟೋದೆದರು ಕೂತು ‘ನನ್ ಬಾಯಿಗೆ ಮಣ್ಣು ಹಾಕಿ ಹೋದೆಯಲ್ಲೋ, ನಿನಗೆ ಕೈಹಿಡಿಯೋಕೆ ನಾನು ಯಾವ ಜನುಮದಲ್ಲಿ ಯಾವ ಪಾಪ ಮಾಡಿದ್ದೆನೋ


೧೮೧

ಎಂದು ಬಾಯಿಬಾಯಿ ಬಡಿದುಕೊಳ್ಳುವಾಗ್ಗೆ ಭೂತ ಬಿಡಿಸಲೆಂದು ನಮ್ಮಜ್ಜಿ ಹೋಗಿ ನಿಂತಿದ್ದಳು. ಅದೇ ಹೊತ್ತಿಗೆ ವ್ಯಾಸ ಪೀಠದಲ್ಲಿದ್ದ ಕಿಲುಬು ಹೊತ್ತಿಗೆಯಲ್ಲಿ ಕಳೆದುಕೊಂಡಿದ್ದ ಕಣ್ಣುಗಳನ್ನು ಭೂತಗನ್ನಡಿಗಳ ಸಹಾಯದಿಂದ ಹುಡುಕಾಡುತ್ತಿದ್ದ ಜರ್ಝರಿತ ದೇಹದ ಅಲುಮೇಲಮ್ಮ "ಏನೇ ಬಾಯಿಗೆ ಬಂದಂತೆ ಮಾತಾಡ್ತಿ. ರಾಮ ರಾಮ ಸತ್ತಿರೋ ತನ್ನ ಗಂಡನ್ನ ಬಾಯಿಗೆ ಬಂದಂಗ ಬಯ್ತಿದಾಳಲ್ಲ ದೇವರೇ!" ಎಂದು ದಿಗ್ಗನೆ ಎದ್ದು ಊರುಗೋಲಿನ ಆಸರೆಯಲ್ಲಿ ಪಡಸಾಲೆಗೆ ಬಂದು, ಅಟವಾಳಿಯ ಮುಖ್ಯ ಕಂಭಕ್ಕಾತು ನಿಂತಿದ್ದ ಕೆದರು ತಲೆಯ ನಮ್ಮಜ್ಜಿ ಕಡೆ ಕಣ್ಣುಹಾಯಿಸದೇ (ಅವಿದ್ದರೆ ತಾನೆ) ಜ್ಞಾಪಕ ಬಲದಿಂದ ಸೀದ ಖಾಲಿ ಹಣೆ ಬಡಿದುಕೊಳ್ಳಿತ್ತಿರ್ದ ಸೊಸೆ ಬಳಿಗೆ ಸಾರ್ದುದು ಹೆಂಗಿತ್ತಪ್ಪ ಅಂದರೆ ಹಗಲುಗುರುಡಿ ಗಾಂಧಾರಿ ಕುರುಕ್ಷೇತ್ರದ ರಣರಂಗದಲ್ಲಿ ‘ಸತ್ತ ಮಗಂದಿರ್ ಸತ್ತರ್ ನೀನೆಮಗುಳ್ಳೊಡೆ’ಎಂದು ಕೂಗುತ್ತ ಬಂದಂತಿತ್ತು. ಆಕೆ ಒಂದೊಂದು ಹೆಜ್ಜೆ ಇಡುತ್ತಿದ್ದುದು ಹೇಗಿತ್ತಪ್ಪ ಅಂದರೆ ಜಲಮಹಾನುಭಾವ ನಾಭಿಯೊಳಗುಳಿದ ಕಮಲ ಒದ್ದಾಡುವಂತಿತ್ತು. ತನ್ನ ವೃದ್ದಾಪ್ಯದ ಬದುಕಿನ ದುರ್ಬಲ ಊರುಗೋಲಿನಂತಳಿದುಳಿದಿರುವ ಕೇಶವಿಹೀನೆ ವಿಧವೆ ಸೊಸೆಯನ್ನು ಸ್ವೀಕರಿಸಲಾಗದೆ; ತಿರಸ್ಕರಿಸಲಾಗದೆ, ಗಂಟಲುಗ್ರಾಣದಲ್ಲಿ ಪೇರಿಸಿಟ್ಟ ಹಲವು ಮಾತಿನ ಲಡ್ಡುಗೆಗಳಿಗೆ ದ್ವನಿರೂಪ ಕೊಡಲಾಗದೆ, ಹಾಗೆ ನಡೆಯುತ್ತ ಬಂದು ಕೋಡುಬಳೆಯ ಡಬ್ಬವನ್ನೇ ತನ್ನ ಸೊಸೆ ಎಂದು ಭಾವಿಸಿ "ವೈಕುಂಠವಾಸಿಯಾಗಿರೋ ನನ್ನ ಮಗನನ್ನು ಬೈದು ನರಕಕ್ಕೆ ಹೋಗಬೇಡ ವರಲಕ್ಶ್ಮಿ" ಎಂದು ಪರಿಪರಿಯಾಗಿ ವಿನಂತಿಸಿಕೊಂಡದ್ದುಂಟು. ಸಿಂಬಳ ಕೊರೆದೆಸೆದ ಸವಂಡನಾಗಲಿ ಶಬ್ದವೇದಿ ವಿದ್ಯಾಪಾರಂಗತಳಂತೆ ಅತ್ತೆರಡು ಹೆಜ್ಜೆ ಇರಿಸಿ, ಮಾಡಿಕೊಂಡ ಪತ್ನಿಯಾದ ನೀನು ಸರಿಯಾಗಿದ್ದಲ್ಲಿ ಅವನ್ಯಾಕೆ ಸಾಯ್ತಿದ್ದ’ ಎಂಬೊಂದು ಮಾತು ಆಡುವುದರ ಮೂಲಕ ಪರಮ ಸಾಧ್ವಿಯಾದ ವರಲಕ್ಶ್ಮಿಯ ಹೃದಯವೆಂಬ ದೇಗುಲದಲ್ಲಿ ಬಿರುಗಾಳಿ ಎಬ್ಬಿಸಿದ್ದುಂಟು. ಜಗಳವಾಡುವಾಗೆಲ್ಲ ತುರುಬು ಕಟ್ಟಿಕೊಂಡಿದ್ದರೆ (ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯಮೇಲೆ ಇಳಿದಂತೆ ಇರುಳಾಮಾಲೆ) ಒಂದೇಟಿಗೆ ಬಿಚ್ಚಿ ಮುಖದ ಹಿಂದೆ ಪ್ರಭಾವಳಿಯಂತೆ ಇಳಿ ಬಿಟ್ಟುಕೊಂಡು ಭಲೈ ಸಾರಥಿ ನಾನು ದಾರೆಂದರೆ ಎಂದು ಗಡಗಡ ಗುಡುಗುತ್ತಿದ್ದಳು. ಕಪ್ಪುಗುರುಳು ಇಳಿಬಿಟ್ಟಿದ್ದರೆ ಅದರೊಳಗಿದು ಸಿಗಿಸಿ ಇದರೊಳಗದು ಸಿಗಿಸಿ ‘ಬರ್ರಲೆ ಒಂದು ಕೈ ನೋಡ್ಕೋತೀನಿ’ ಎಂದು ಎದುರಾಳಿಗೆ ಸವಾಲ್ ಹಾಕುತ್ತಿದ್ದಳು. ಕಟ್ಟಲೆಂದೋ ಬಿಚ್ಚಲೆಂದೋ ಕೈಗಳನ್ನು ಹಿಂದಕ್ಕೆ ಹಾಕಿದಳು. ಆದರೆ ಅವು ಅಲ್ಲಿದ್ದರೆ ತಾನೆ! ತಾನೆ ಮುಂಡೆಯಾಗಿರುವುದು, ಶೃಂಗೇರಿಯ ಹದಿಹರೆಯದ ಚಿಗುರುಮೀಸೆಯ ಹಜಾಮನ ಅಮೃತಹಸ್ತದಿಂದ ಮಂಡೆ ತೆಗೆದಿರುವುದು ಆ ಕ್ಷಣ ನೆನಪಾಯಿತು. ರೋಮಾಂಚನ, ಕೋಪ ಇವೆರಡೂ ಒಟ್ಟೊಟ್ಟಿಗೆ ಬಂದವು. ದಿಗ್ಗನೆ ಎದ್ದು, "ಯಾರ್ಯಾರ್ನೋ ಬಿಟ್ಟು ಯಾರ ಯಾರ್ನೋ ಕರಕೊಳ್ತಾನಲ್ಲ ಆ ದೇವ್ರು" ಅಂತ ಗೊಣಗಿದಳು. "ನಾನ್ಯಾಕೆ ನರಕಕ್ಕೆ ಹೋಗ್ಲಿ ಅತ್ತೆಮ್ಮ ... ಸಾಯ್ಲಿ ಅಂತ ನಾನೇನಾದ್ರು ನನ್ನ ಪತಿ ದೇವ್ರಿಗೆ ವಿಷಕೊಟ್ಟನೇನು? ನನ್ನಂಥ ಪರಮ ಪತಿವ್ರತೆಯಾದ ಹೆಂಡತೀನ ಇಟ್ಟುಕೊಂಡು ಮಾಡಬಾರದ್ದನ್ನ ಮಾಡಿ ಪ್ರತಿ ದಿನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ರಲ್ಲ ... ಆ ನಿನ್ ಮಗ್ನೀಗೆ ಬುದ್ಧಿಹೇಳಬೇಕಾಗಿತ್ತು; ಆಗ ನಿಮ್ಮ ನಾಲಿಗೆ ಬಿದ್ದು ಹೋಗಿತ್ತೇನು?" ಎಂದು ಅಶ್ರುಧಾರೆಯಿಂದ ವಕ್ಷಸ್ಥಳಕ್ಕೆ ಅಭಿಷೇಕ ಮಾಡಿದಳು. ಇದಕ್ಕೆ ಏನು ಉತ್ತರ ಕೊಡಬೇಕೆಂದು ವೃದ್ಧೆಗೆ ಆ ಕ್ಷಣ ಹೊಳೆಯಲಿಲ್ಲ. ಆದರೆ ಆಕಾರವಿಲ್ಲದ ಇಟ್ಟಿಗೆಗಳಿಂದಲೇ ಸುಂದರ ಗೋಡೆ


೧೮೨

ಕಟ್ಟುವ ನುರಿತ ಬೇಲ್ದಾರನಂತೆ ಮುಖರಹಿತ ಮಾತುಗಳನ್ನೇ ಕುಪ್ಪೆ ಮಾಡಿಕೊಂಡು "ನೀನ್ಯಾವ ಪತಿವ್ರತೆಯೇ ... ಒಂದುದಿನವಾದರೂ ಕೈ ಹಿಡಿದ ಗಂಡನ ಯೋಗಕ್ಷೇಮ ವಿಚಾರಿಸಿದ್ದುಂಟಾ.... ಸತ್ತೆಯಾ ಬದುಕಿದಿಯಾ ಎಂದು ಕೇಳಿದ್ದುಂಟಾ ... ಇರೋವಷ್ಟು ಕಾಲ ಅವನನ್ನು ಉರಿಸಿಕೊಂಡು ತಿಂದೆಯಲ್ಲೇ ..." ಎಂದು ದೃಷ್ಟಾಂತಗಳ ಸರಮಾಲೆಯನ್ನೇ ಪೋಣಿಸಿದಳು. ಅತ್ತೆಯಾಡಿದ ಮಾತುಗಳನ್ನು ಕೇಳಿ ಆ ನಲವತ್ತರಾಸುಪಾಸಿನ ಆಕೆಯ ಹೃದಯದಲ್ಲೆದ್ದ ಚಂಡ ಮಾರುತ ದಾವಾನಲದ ರೂಪ ಪಡೆಯಿತು. "ಅಯ್ಯಯ್ಯೊ ... ಈ ಮುದುಕಿ ಬಾಯಿಗೆ ಬಂದಂಗೆ ಮಾತಾಡ್ತಿದೆಯಲ್ಲ್ರಪ್ಪೋ! ನಾನ್ಯಾವ ಕರ್ಮ ಮಾಡಿದ್ದೆನೋ ಇಂಥ ಅತ್ತೆ ಪಡೆಯೋಕೆ! ನಾನ್ಯಾವ ಪಾಪ ಮಾಡಿದ್ದೆನೋ ಈ ಮನೆ ತುಂಬಿಕೊಳ್ಳೋಕೆ! ಈ ಹೊಟ್ಟೇಲಿ ಅವೊಂದೆರಡು ಹುಟ್ಟಿರದಿದ್ದಲ್ಲಿ ಅವತ್ತೇ ತುಂಗಾನದೀಲಿ ಬಿದ್ದು ಆತ್ಮಹತ್ಯೆ ಮಾಡ್ಕೊಳ್ತಿದ್ದೆ ... ಇನ್ನೂ ಏನು ಅನುಭವಿಸೋದಿದೆಯೋ ಈ ಅತ್ತೆ ಎಂಬ ರಾಕ್ಷಸಿ ಕೈಯಲ್ಲಿ .. ಓಹ್! ತಿರುಪತಿ ವೆಂಕಟರಮಣನೇ ಈ ಕೂಡಲೆ ನನಗಾದ್ರು ಸಾವು ಕೊಡು, ಇಲ್ಲವಾದಲ್ಲಿ ಈ ಮುದುಕಿನಾದ್ರು ನಿನ್ನ ಪಾದಾರವಿಂದಕ್ಕೆ ಸೇರಿಸ್ಕೋ ... ನನ್ನಂಥ ಪರಮ ಭಕ್ತೆಯ ಬದುಕಿನೊಂದಿಗೆ ಚೆಲ್ಲಾಟವಾಡೋದ್ನ ಇನ್ನಾದ್ರೂ ಸಾಕು ಮಾಡೋ ಜಗದ್ರಕ್ಷಕನೇ! ಈಕೆಯಂತೆ ನಾನೇನು ಯೌವನದಲ್ಲಿ ಗಂಡನನ್ನು ಕಳೆದುಕೊಂಡು ಚೆಲ್ಲಾಟವಾಡ್ತಿಲ್ವಲ್ಲ ..." ಎಂಬಿವೇ ಮೊದಲಾದ ಮಾತುಗಳು ಮಾವಿನಗುಂಡೆ ಜಲಪಾತದಂತೆ ದುಮ್ಮಿಕ್ಕಿದವು. ಇದನ್ನೆಲ್ಲ ಕೇಳಿಸಿಕೊಂಡು ಮುದುಕಿ ರಾಮಾ ...ರಾಮಾ ಅಂತ ಶ್ರವಣೇಂದ್ರಿಯಗಳ ಮೇಲೆ ಕರಕಮಲಗಳನ್ನು ಇರಿಸಿಕೊಂಡಿತು. ಈ ದುಷ್ಟೆಯಾಡಿದ ಮಾತುಗಳನ್ನು ಓಣಿಯಲ್ಲಿ ಯಾರಾದ್ರು ಕೇಳಿಸಿಕೊಂಡರೇನೋ! ಓಯ್ ...ಅಂತೂ ನನ್ನ ಕಣ್ಣುಗಳನ್ನು ನುಂಗಿ ನೀರು ಕುಡಿದೆಯಾ ತುಲಸೀ ರಾಮಾಯಣವೇ ... ಆಟವಾಳಿಗೆಯಲ್ಲಿ ಯಾರೋ ಅಜ್ಞಾತವ್ಯಕ್ತಿ ನಿಂತಿರುವಂತಿದೆ, ಗುರುತಿಸಲಕ್ಕಾಗುತ್ತಿಲ್ಲವಲ್ಲಾ ... ನಾರಾಯಣ ... ಹೀಗೆ ಯೋಚಿಸುತ್ತ ಮಂಗಳ ಗೌರಿಯಂತಿದ್ದ ವೃದ್ಧೆ ಚಾಮುಂಡಿಯಂತಾಗಿಬಿಟ್ಟಿತು. ಕೂಡಲೆ ಸೊಸೆಯ ದುರ್ಬಲ ನೂಲಿನಡುಗೆಗೆ ಕೈ ಹಾಕಿ "ಏನು ಮಾತಾಡ್ದೇಯೇ ರಾಜಗೋಪಾಲಾಚಾರಿ ಮೊಮ್ಮಗಳೇ ... ನನ್ನ ಏನಂತ ತಿಳ್ಕೊಂಡೀಯಾ? ನಿನ್ನಂತೆ ನಾನೇನಾದ್ರು ಮೊಲೆ ತೊರಿಸ್ಕೊಳ್ತಾ ಅಡ್ಡಾದ್ದುಂಟಾ ... ಅದೇನು ಕಂಡು ನನ್ ಪಾತಿವ್ರತ್ಯಕ್ಕೆ ಕಳಂಕ ತರುವಂಥ ಮಾತಾಡ್ದಿ... ಹೇಳಿ ಮುಂದಕ್ಕೆ ಹೋಗು" ಎಂದು ಹಿಡಿದುಕೊಂಡುಬಿಟ್ಟಳು.
ಪರಮಗ್ನೌ ಪುದೀಪ್ತೇತು ಪ್ರಾಣಾನಾಂ ಪರಿವರ್ಜನಂ
ನ ಚಾರಿ ಜನ ಸಂಸರ್ಗೇ ಮುಹೂರ್ತಮಪಿ ಸೇವನಂ ... ಎಂದು ಮುಂತಾಗಿ ತಾತಶ್ರೀ ಪದೇ ಪದೇ ಹೇಳುತ್ತಿರ್ದುದು ಸ್ಮರಣೆಗೆ ತಂದುಕೊಂಡ ವರಲಕ್ಷ್ಮಿಯ ಅಂಗೋಪಾಂಗಗಳೆಲ್ಲ ಕಿಡಿಕಿಡಿ ಕಾರತೊಡಗಿದವು. ಗರಿವಳಿದ ಪಾವಿನಂತೆ ಬುಸುಗುಟ್ಟತೊಡಗಿದಳು. ಅಲುಮೇಲಮ್ಮನೆಂಬ ಝಳದ ಝಾಡಿಗೆ ಹೆದರಿ ವರಲಕ್ಷ್ಮಿ ಎಂಬ ಸೂರ್ಯನಳುಕುವನೇನು?
"ಏನ್ರಮ್ಮಾ, ಅತ್ತೆ ಅಂತ ಬೆಲೆ ಕೊಟ್ಟರೆ ನಾಲಿಗೆ ಉದ್ದ ಬಿಡುವಿ ಏನು? ನನ್ನ ಗಂಡನ ಹೊರತಾಗಿ ಬೇರೊಬ್ಬ ಪರಪುರುಷನಿಗೆ ನಾ ನನ್ನ ಮೊಲೆ ತೋರಿಸಿದ್ದೇ ನಿಜವಾದಲ್ಲಿ ಏಗಲೇ ನನ್ನ ತಲೆ ಸಿಡಿದು ಸಾವಿರ ಚೂರಾಗಲೀ ... ಅದಾರಿಗೆ ನನ್ನ ಮೊಲೆಗಳನ್ನು ತೋರಿಸಿದೆ ... ಹೇಳ್ರಿ, ಹೇಳಿದ ಹೊರತು ಬಿಡೋದಿಲ್ಲ."
ದೇಹಕ್ಕೆ ತೊಲೆಯೊಡನೆ ಸಂಧಾನವೇನು? ಗಕ್ಕನೆ ತಾನು ವೃದ್ಧೆಯ ವಲ್ಕಲವನ್ನು ಗಟ್ಟಿಯಗಿ


೧೮೩

ಹಿಡಿದುಕೊಂಡಳು.
ನಮ್ಮಜ್ಜಿ ಹ್ಹಾ ಹ್ಹೂ ಅಂತ ಅನ್ನುವಷ್ಟರಲ್ಲಿ ಆ ಸಿಕ್ಸ್ಟೀ ಪ್ಲಸ್ಸೂ ಮತ್ತು ಫಾರ್ಟೀ ಪ್ಲಸ್ಸೂ ಪರಸ್ಪರ ಹಿಡಿದುಕೊಂಡು ಕೆಳಗಡೆ ಉರುಳಿದರು.
ಕುರುಕುಲಾಕ್ಷ್ಮಾಪಾಲ ಚೂಡಾಮಣಿಯೂ. ಫಣಿರಾಜ ಕೇತನೂ ಪರಸ್ಪರ ಮಲ್ಲಯುದ್ಧಕ್ಕೆ ತೊಡಕಿರುವಂತೆ ಆ ಕ್ಷಣ ಗೋಚರಿಸಿತು.
ತಾನಿನ್ನು ಮಧ್ಯ ಪ್ರವೇಶಿಸಿ ಅತ್ತೆ ಸೊಸೆಯರ ಜಗಳ ಬಿಡಿಸದಿದ್ದಲ್ಲಿ ಆ ವೃದ್ಧ ಅಲುಮೇಲಮ್ಮನವರ ಜರ್ಝರಿತ ದೇಹದಿಂದ ಪ್ರಾಣಪಕ್ಷಿ ಹಾರಿ ಹೋಗುವುದರಲ್ಲಿ ಸಂಶಯವಿಲ್ಲವೆಂದು ನಮ್ಮಜ್ಜಿ ಆ ಕ್ಷಣ ಯೋಚಿಸಿ ಕೂಡಲೆ ಕಚ್ಚೆ ಬಿಗಿಯಿತು. ತನಗೂ ಒಂದು ಗಂಡು ಮಗುವನ್ನು ಆ ದಯಾಮಯನಾದ ಭಗವಂತನು ಅಂದು ದಯಪಾಲಿಸಿದ್ದಲ್ಲಿ ತಾನು ಈ ಹೊತ್ತಿಗೆ ಎಷ್ಟು ಸಾರಿ ಜಗಳವಾಡುತ್ತಿದ್ದೆನೋ? ತನಗೇನಾದರೂ ಸೊಸೆಯಾದವಳು ಹೀಗೆ ಮಾತಾಡಿದ್ದಲ್ಲಿ ಅವಳ ನಾಲಿಗೆಯನ್ನು ಕಿತ್ತು ಎಲೆಅಡಿಕೆ ಚೀಲದಲ್ಲಿ ಇಟ್ಟುಕೊಂಡು ಬಿಡದೆ ಇರುತ್ತಿರಲಿಲ್ಲವು. ಸಮುದ್ರಕ್ಕೆ ಪಡಿ ಸಮುದ್ರವು, ಸಿಡಿಲ ಪೊಟ್ಟಣದಂಥ ವರಲಕ್ಷ್ಮಿಯ ಧೃತರಾಷ್ಟ್ರಾಲಿಂಗನದಿಂದ ಅಶ್ವತ್ಥಾಲ ಮರದಂಥ ಮುದುಕಿಯನ್ನು ರಕ್ಷಿಸದಿದ್ದಲ್ಲಿ ಆ ಮನೆ ದೇವರಾದ ಹಳೇಕೋಟೆ ವೀರಭದ್ರ ದೇವರು ತನ್ನನ್ನು ಕ್ಷಮಿಸಲಾರನು ಎಂದು ಮುಂತಾಗಿ ಯೋಚಿಸುತ್ತಾ ಜಗದೇಕಮಲ್ಲಿಯಾದ ನಮ್ಮಜ್ಜಿಯು ಕೂಡಲೆ ಸುಂಟರಗಾಳಿಯಂತೆ ಸುಳಿದು ಅಲುಮೇಲಜ್ಜಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ....
ಆಗ ಆ ಮುದುಕಿಯು "ಏಯ್ ಯಾರೆ ಅದು? ... ಓಹ್ ನೀನಾ .... ನಿಂಗವ್ವ, ಶೂದ್ರ ಹೆಂಗಸಾದ ನೀನು ಬ್ರಾಹ್ಮಣ ಹೆಂಗಸಾದ ನನ್ನನ್ನು ಮುಟ್ಟುವುದೆಂದರೇನು? ಮುಟ್ಟಿದ್ದೂ ಅಲ್ಲದೆ ಬಿಗಿಯಾಗಿ ಅಪ್ಪಿ ನನ್ನ ಮಡಿಯುಡಿಯನ್ನೆಲ್ಲ ಹಾಳುಮಾಡಿ ಬಿಟ್ಟೆಲ್ಲೇ ..." ಎಂದು ಆಕಾಶಕ್ಕೂ ಭೂಮಿಗೂ ಏಕಾಗಿ ಅಬ್ಬರಿಸಲು ....
ನಮ್ಮಜ್ಜಿಗೆ ಸಿಟ್ಟು ಬಂದು "ಯಾವ್ದೇ ಮಡಿ? ಏನೋ ಸೊಸೀ ಕೈಲಿ ಸಾಯ್ತಾಳಂತ ಬುಡುಸಿಕೊಳ್ಳಾಕ್ ಬಂದ್ರೆ ಮಡಿ ಹಾಳಾಯಂತೀಯಲ್ಲೇ" ಎಂದು ಕೊಸರಿ ದೂರ ತಳ್ಳಲು
"ಇದು ನಮ್ ಅತ್ತೆ ಸೊಸೆ ಜಗಳ .... ಇವತ್ತು ಹೊಡೆದಾಡ್ತೀವಿ .... ನಾಳೆ ಒಂದಾಗ್ತೀವಿ ... ಅದನ್ಯಾರೆ ನೀನು ಕೇಳೊಕೆ?" ಎಂದು ಅಲುಮೇಲಮ್ಮ ಗುಡುಗಲು ....
ನಮ್ಮಜ್ಜಿಗೆ ದಿಕ್ಕೇ ತೊಚದಂತಾಗಿ ... "ಯ್ಯೋನ್ರೇ ವಡದಾಡಿ ಸತ್ತೋಗ್ತಾರಂತ ಬಂದ್ರೆ ನನ್ಬಾಯೀಗೆ ಮಣ್ಣಾಕ್ತೀರಾ.... ಮಾಡ್ಕೆಂಡ ಗಂಡ್ರೂನು ನುಂಗಿ ನೀರ್ಕುಡುದ ಮುಂಡೇರು ನೀವು ..."ಎಂದು ತನ್ನ ಅಗ್ಗಿಣೀ ಗೋಳದಂಥ ತನ್ನ ಬಾಯಿ ಪ್ರದರ್ಶಿಸಿತು. ಊರಿನ ಎಲ್ಲ ತರಲೆಗಳನ್ನು ನೋವೇ ಮೊದಲಾದ ತಾಪತ್ರಯಗಳನ್ನು ತನ್ನ ಮೈ ಮೆಲೆಳೆದುಕೊಂಡು ವೀರಾವೇಶ ಪ್ರಕಟಿಸುವುದು ನಮ್ಮಜ್ಜಿ ವ್ಯಕ್ತಿತ್ವದ ಪ್ರಧಾನ ಅಂಗ. ಮಧ್ಯೆ ಪ್ರವೇಶಿಸುವುದರ ಮೂಲಕ ಸಣ್ಣ ಜಗಳವನ್ನು ದೊಡ್ಡದು ಮಾಡುವುದರಲ್ಲಿ; ದೊಡ್ಡ ಜಗಳವನ್ನು ಸಣ್ಣದು ಮಾಡುವುದರಲ್ಲಿ ನಮ್ಮಜ್ಜಿ ವಿಶ್ವವಿಖ್ಯಾತಳು. ಸಮಾಜದ ರಿಪೇರಿ ಮಾಡಲು ಹೋಗಿ ತನಗೇ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಮಾಜವನ್ನು ಮತ್ತಷ್ಟು ಹದಗೆಡೆಸಿ ತನೊಬ್ಬಳಿದ್ದಾಗ ಮರುಗುತ್ತಿದ್ದುಂಟು. ತನ್ನ ಬಾಯಿಯಿಂದ ಬಿಡುತ್ತಿದ್ದ ಪ್ರತಿಯೊಂದು ವಾಗ್ ಬಾಣವನ್ನು ಸಮರ್ಥಿಸಲು ಏನೆಲ್ಲ ರಂಪಾಟ ಮಾಡುತ್ತಿದ್ದಳು. ಆದರೆ ಈ ಸಂದರ್ಭದಲ್ಲಿ ತನಗರಿವಿಲ್ಲದಂತೆ ಸಿಕ್ಕಿಹಾಕಿಕೊಂಡಳು.


೧೮೪

"ಏನೀ ಮುದುಕೀ .... ನಾವು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಹೆಂಗಸರೂ ಅಂತ ಎಂಥೆಂಥ ಮಾತಾಡ್ತಿರುವೆಯಲ್ಲ... ನಮ್ಮ ಗಂಡನನ್ನು ನುಂಗಿ ನೀರುಕುಡಿದವರೂಂತ ಅಪವಾದ ಹೊರಿಸುತ್ತಿರುವಿಯಲ್ಲ ... ನೀನೂ ನಮ್ಮ ಹಾಗೆ ಯೌವನದಲ್ಲಿ ಗಂಡನನ್ನು ಕಳೆದುಕೊಂಡವಳಲ್ಲವೇನು?" ಸೊಸೆ ಹೇಗೋ ಪತ್ತೆ ಮಾಡಿ ಹೇಳಿದ್ದ ಸಂಗತಿಯನ್ನು ನೆನಪು ಮಾಡಿಕೊಂಡು ಏರು ದನಿಯಲ್ಲಿ ಅಲುಮೇಲಮ್ಮ ನುಡಿದುಬಿಟ್ಟಿತು.ವರಲಕ್ಷ್ಮಿ ತನ್ನತ್ತೆಯವರ ಸಮಯ ಪ್ರಜ್ಞೆಯ ಬಗ್ಗೆ ಮುಖದ ತುಂಬ ಮೆಚ್ಚಿಗೆ ಸೂಚಿಸಿದಳು.
ಆಕೆಯ ಮಾತಿನಿಂದ ನಮ್ಮಜ್ಜಿ ಒಂದು ಕ್ಷಣ ವಿಚಲಿತಗೊಂಡಿತು. ತನ್ನ ಬದುಕಿನ ಪುರಾತನ ಸಂಗತಿಗಳನು ಒಳಗೊಳಗೇ ಸಂಗ್ರಹಿಸಿ ಬಿಟ್ಟಿರುವರಲ್ಲ! ದೀಪ ನುಂಗೋ ಅತ್ತೆಗೆ ದೀವಟಿಗೆ ನುಂಗೋ ಸೊಸೆ ತಕ್ಕುದಾಗಿ ಗಂಟುಬಿದ್ದಿರುವಳಲ್ಲ.
"ನಿಮ್ಮ ಮಾತಿಗೆ ನನ್ ಶಾಟಾನೂ ಜುಮ್ಮೆನ್ನೊದಿಲ್ಲೇ ... ದೊಡ್ಡ ಮನುಶ್ಶೋಳಾಗೋದ್ಕೂ ಮೊದ್ಲು ನನ್ನ ಗಂಡ ಗೊಟಕ್ಕೆಂದಿದ್ದೂ ನಿಜ . ನಾನು ಗಂಡಸಿನಂಗ ಎದೆಸೆಟೆಸಿ ಬದುಕಿದ್ದು ಖರೇವು... ಹರೇದಾಗ ಮಿಂಡ್ರೂನ ಮಾಡಿದ್ದೂ ಖರೇವು... ಇಲ್ಲದಿದ್ರೆಲ್ಲಿ ಈಟೊಂದು ಆಸ್ತಿ ಸಂಪಾಸ್ಲಿಕ್ಕಾಗ್ತಿತ್ತು ... ನನ್ತಂಗೀ ಮಕ್ಳೂನೇ ನನ್ ಮೆಕ್ಳೂಂತ ತಿಳಕೊಂಡು ಪಾನಲೆ (ಪಾಲನೆ) ಪೋಣಣೆ (ಪೋಷಣೆ) ಮಾಡಲೂಕಾಗ್ತಿತ್ತೂ ... ನಿಮ್ಮಂಗೆ ನಾನೂ ಮಂಡೆ ಭೋಳಿಸ್ಕೊಂಡು ಮುಂಡೆಯಾಗಿ ಮೂಲಿ ಕೂಕೊಂಡಿದ್ರೆ ಈಟೆಲ್ಲ ಮಾಡಲಾಕಾಗುತ್ತಿತ್ತೇನು! ... ಅಲಲಲಾ ... ಯೋಳಾಕ ಬಂದುಬಿಟ್ರು ಹಳೇ ಪುಣಾರಾನ (ಪುರಾಣಾನ) ... ಯಿನ್ನೊಂದು ಮಾತು ಯ್ಯೋಳ್ತೀನಿ ನೆಪ್ಪಿಟ್ಕಳ್ರಭೇ ... ಭೋಸೂಢೇರಾ ... ನೂರೊಂದು ರ್‍ವಾಗ ಬೊಡುಕೊಂಡು ಮೊಣ್ಣೆತ್ತಿನ ಅಮಾಸಿ ದಿನ ಗೊಟಕ್ಕಂದ್ನಲ್ಲಾ ಆ ನಿಮ್ಮಾವ ಪರಮೇಸೂರ ಶಾತಿರಿ ... ಆ ಶಾತಿರೀನೂ ನನ್ನತ್ರ ಮಲಕ್ಕೊಂಡು ವ್ಯೋನೋ ಕಿಸಿಲಾರ್ದೆ ಹೋದವನೇ ..." ನಜಭಜ ಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲಾ ಎಂದವರ್ ಎಂದು ಮುಂತಾಗಿ ಆರಂಭಿಸುತ್ತಲೆ ಆ ಮಾದ್ಗೂಕ್ಯ ಗೋತ್ರದ ಅತ್ತೆ ಸೊಸೆಯರೆಂಬ ಸಾಹಸ ಗರ್ವಾಲಂಕೃತರೀರ್ವರು ಒಂದು ಕ್ಷಣ ಮೌನವೆಂಬ ವೈಶಂಪಾಯನ ಸರೋವರಂ ಪೊಕ್ಕು ಮರುಕ್ಷಣ ರಸೆಯಿಂ ಕಾಲಾಗ್ನಿರುದ್ರಂ ಪೊರಮೊಡೆವಂತೆ ಹೊರಬಂದು ಕೋಪಾರುಕ್ತನೇತ್ರರಾಗಿ "ಅಯ್ಯೋ ... ಅಯ್ಯೋ... ಅಯ್ಯಯ್ಯೋ ... ವೈಕುಂಠ ವಾಸಿಗಳಾಗಿರೋ ನಮ್ಮ ವಂಶದ ಹಿರಿಯರ ಮೇಲೆ ಗುರುತರ ಆಪಾದನೆ ಹೊರಿಸುತ್ತಿರುವುದಲ್ಲಾ ಈ ಮುದುಕಿ ... ಕಲಿಕಾಲದಲ್ಲಿ ಪಾಪಿಗಾಳಿಗೆ ದೀರ್ಘಾಯುಷ್ಯವನ್ನು ದಯಪಾಲಿಸಿರುವ ಓ ವೆಂಕಟರಮಣನೇ ... ನಿನ್ನ ದಡ್ಡತನವನ್ನು ಎಷ್ಟೆಂದು ವರ್ಣಿಸುವುದು ... ಇರಲಿ ... ಬಯ್ದವರ ಹೆಸರ ಮಗನಿಡಬೇಕೆಂದು ದಾಸವರೇಣ್ಯರೇ ಹೇಳಿದ್ದಾರೆ ... ಈ ಶೂದ್ರ ಮುದುಕಿ ಎದುರು ತತ್ವ ಜ್ಞಾನದ ಕಿನ್ನರಿ ಭಾರಿಸುವುದರಿಂದೇನು ಉಪಯೋಗ?... " ಎಂದು ಅಲುಮೇಲಮ್ಮನಿಗೆ ಕೆಮ್ಮು ದಮ್ಮು ಒಂದೇಟಿಗೆ ಒತ್ತರಿಸಿ ಬಂದಿತು. ಸೊಸೆ ವರಲಕ್ಶ್ಮಿ ಮಾತಿನ ಸಾರಥ್ಯವನ್ನು ತಾನು ವಹಿಸಿಕೊಂಡಳು. "ಅತ್ತೆಮ್ಮಾ ಇಂಥ ಅನಾಗರೀಕರ ಎದುರು ಮಾತಾಡಿ ನಾಲಿಗೆ ಮೈಲಿಗೆ ಮಾಡಿಕೊಳ್ಳುವುದೇಕೆ?" ಎಂದು ತನ್ನ ವಜ್ರಾಯುಧದಂಥ ಬಾಚಿ ಹಲ್ಲುಗಳನ್ನು ಝಳಪಿಸಿದಳು. "ಅಮ್ಮಾ ತಾಯಿ ... ಏನೆಲ್ಲ ಮಾತಾಡಿ ಪುಣ್ಯ ಕಟ್ಟಿಕೊಂಡಿದ್ದು ಸಾಕಮ್ಮಾ ... ನಿನ್ನ ಮಾತು ಮಾಡಿರುವ ಮೈಲಿಗೆ ತೊಳೆಯಲು ಸಾಕ್ಷಾತ್ ಶೃಂಗೇರಿ ಜಗದ್ಗುರುಗಳೇ ಬರಬೇಕು ... ದಯವಿಟ್ಟು ಇನ್ನು ಹೊರಡಮ್ಮಾ ಹೊರಡು" ಎಂದು ಅಂಜಲೀಬದ್ಧಳಾಗಿ ಕೇಳಿಕೊಂಡಳು.


೧೮೫

"ಅಲಲಲಾ ತಾಟಗಿತ್ತೀ .... ನಿನ್ಮಡಿ ಆಚಾರಕ್ಕೆ ಬೆಂಕಿ ಬೀಳ್ಲಿ ... ಆ ಸತ್ತ ನಿನ್ಗಂಡ ಶಾಮಣ್ಣ ನನ್ ಮೊಮ್ಮಗ ಜತಿಗಾರಾಂತ ಈ ಮಾತ್ನ ಯ್ಯೋಳ್ತಿದ್ದೀನಿ... ಗ್ವಂಡನ್ನ ಕಳಕೊಂಡಿದ್ದಾಯ್ತು ... ಸೋಬಾಗ್ಯಾನೆಲ್ಲ ಕಳಕೊಂಡಿದ್ದಾಯ್ತು ...ಮಾ ಮರುವಾದಸ್ತರಂಗ ಅದೆಂಗ ಬೊದುಕ್ತೀಯೋ ಬೊದುಕಲೇ ಲವುಡೀ ... ನಾನೂ ನೋಡ್ತೀನಿ ... ಮಂಡೆ ಬೋಳಿಸ್ಕೊಂಡ ಮಾತ್ರಕ್ಕೆ ನಿನ್ನ ಪತಿವ್ರತೀ ಅಂತಾರ್‌ಯೋನೇ ... ವಳಗಿಂದು ಬೋಳಿಸ್ಕೋಬೇಕು ವಳಗಿಂದು ... ವರ್ಷೋಪ್ಪತ್ನಲ್ಲಿ ನೀನು ಹಾದಿಬುಟ್ಟು ನಡೀಲಿಲ್ಲಾಂದ್ರೆ ಮೂಗಿಗೆ ಕವಡೆ ಕಟ್ಕೋತೀನಿ... " ಎಂದು ನಮ್ಮಜ್ಜಿ ಮಾಡಿದ ಶಪಥಕ್ಕೆ ಕುಲಗಿರಿಗಳ್ ಅಲ್ಲಾಡಿದವು.
"ವಿಧವೆ ವರಲಕ್ಶ್ಮಿ ಹಾದಿ ತಪ್ಪದಂತೆ ನೋಡು ಜಗದ್ರಕ್ಷಕನೇ ... ನಿಂಗಮ್ಮಜ್ಜಿ ಮೂಗಿಗೆ ಕವಡೆ ಕಟ್ಟಿಕೊಳ್ಳದಂತೆ ನೋಡಿಕೊಂಡು ಇರುವೆ ಎಂಬತ್ನಾಲ್ಕುಕೋಟಿ ಜೀವರಾಶಿಯ ಪ್ರಾಣ ಕಾಪಾಡು ಭಗವಂತನೇ" ಎಂದು ಕದನ ಕುತೋಹಲಿಗಳಾದ ದೇವಾನ್ ದೇವತೆಗಳು ತ್ರಿಪುರಾಂತಕನನ್ನು ಬೇಡಿಕೊಳ್ಳುತ್ತಿರುವಾಗ ....
ನಮ್ಮಜ್ಜಿಯು ಒಂದೊಂದು ಹೆಜ್ಜೆಗೆ ಭೂಮಿಯನ್ನು ಗಡ್‌ಗಡಾ ನಡಗಿಸುತ್ತ ಅಲ್ಲಿಂದ ವಾಪಸಾದಳು. ಎಂಬಲ್ಲಿಗೆ ಈ ಪ್ರಕರಣ ಈ ಪುರಾಣ ಮುಕ್ತಾಯವಾಗಲಿಲ್ಲವೆಂದು ಹೇಳುವುದಕ್ಕೆ ವೀಕ್ಷಕ ವಿವರಣಾಕಾರನಾದ ನನ್ನ ಮನಸ್ಸಿಗೆ ನೋವಾಗುತ್ತಿದೆ. ಸಹೃದಯ ವಾಚಕರಾದ ನಿಮ್ಮ ಮನಸ್ಸಿಗೂ ನೋವನ್ನುಂಟು ಮಾಡುವುದಕ್ಕೆ ಶತಕೋಟಿ ಕ್ಷಮೆ ಯಾಚಿಸುತ್ತಿರುವೆನು.
ಮುಂದೇನಾಯ್ತು ಅಂತ ನೀವು ಕೇಳ್ತಿದೀರಂತ ತಿಳಕೊಂಡು ನಾನು ಹೇಳ್ತಿದೀನಿ. ದಯವಿಟ್ಟು ಆಲಿಸುವಂಥವರಾಗಿ.
ತುರ್ತು ಪರಿಸ್ಥಿತಿ ಎಂಬುದು ಹಂಗ ಬಂದು ಹಿಂಗ ಹೋದ ಮೇಲೆ ದೇಶದ ಜೀವನ ಶೈಲಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳಾಗಿರುವುದನ್ನು ನಿಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಸಾಕು ನಾಯಿಗಳ ಬೆಲೆಯೂ ಜಾಸ್ತಿಯಾಗಿರುವಂತೆ ನಾಯಿಗೆ ತಿನ್ನಿಸುವ ಬಿಸ್ಕತ್ತುಗಳನ್ನು ವಿದೇಶೀ ವಿನಿಮಯದ ನೆಪದಲ್ಲಿ ಅಮೇರಿಕಾದಿಂದ ತರಿಸಿಕೊಳ್ಳುವುದು ನಿಮಗೆ ಗೊತ್ತಿರಲು ಸಾಕು. ಫ್ಯೂಡಲಿಸಮ್ಮೂ; ಕ್ಯಾಪಿಟಲಿಸಮ್ಮೂ ಇಂಥವೆಲ್ಲ ಸಮಾಜವಾದದ ನೆಪದಲ್ಲಿ ಚೂಚು ಚೂರಾಗಿವೆ; ಪ್ರತಿಯೊಬ್ಬರ ಮನಸ್ಸಿನಲ್ಲಿ ವಾಸಮಾಡಲಾರಂಭಿಸಿವೆ. ಹೊರಗಡೆ ಮುಗ್ಧನಂತೆ ಕಾಣುವ ಮನುಷ್ಯ ಒಳಗಡೆ ಕ್ರೌರ್ಯ ರೂಢಿಸಿಕೊಂಡಿದ್ದಾನೆ. ಮುಗುಳ್ನಗೆಯನ್ನು ಅಸ್ತ್ರದಂತೆ ಬಳಸಿಕೊಂಡಿದ್ದಾನೆ. ನಯವಿನಯದಿಂದ ನಿರಾತಂಕವಾಗಿ ಬೇಟೆಯಾಡುತ್ತಿದ್ದಾನೆ. ಪ್ರತಿಯೊಂದು ಹೆಜ್ಜೆಯನ್ನು ಸುಪಿರಿಯಾರಿಟಿ ಕಾಂಪ್ಲೆಕ್ಸಿನಿಂದ ಇಡುತ್ತಿದ್ದಾನೆ. ಪ್ರತಿಕ್ಷಣ ಕ್ರಯ, ವಿಕ್ರಯದ ಬಗ್ಗೆ ಆಲೋಚಿಸುತ್ತಿದ್ದಾನೆ. ಇಂಥದ್ದೊಂದು ಆಲೋಚನಾಕ್ರಮದ ಒಂದು ಚಿಕ್ಕ ಘಟಕ ನಮ್ಮಪ್ಪ.
ನಮ್ಮಪ್ಪ ಸ್ವಾತಂತ್ರ ಪೂರ್ವದಲ್ಲಿ ಹಗರಿ ಸಾಲಿನಲ್ಲಿ ತಾನು ಮಾಡಿದ ತುಡುಗಿನ ಕಾರಣಕ್ಕೆ ಊರಿಂದೂರಿಗೆ ಅಲೆದೂ ಅಲೆದು ನಿಂಗಮ್ಮಜ್ಜಿಯ ತಂಗಿಯ ದ್ವಿತೀಯ ಪುತ್ರಿಯನ್ನು ಮದುವೆಯಾಗಿ ಒಂದುಕಡೆ ನೆಲೆ ನಿಂತವನು. ಪರಿಸರವನ್ನು ಪಂಚೇಂದ್ರಿಯಗಳ ತುಡುಗಿನಿಂದ ಮೇದು ದಕ್ಕಿಸಿಕೊಂಡವನು. ಭಯದಿಂದ ಹುಸಿ ವಾತಾವರಣವನ್ನು ನಿರ್ಮಿಸಿಕೊಂಡು ಅದರಲ್ಲಿ ಎಲ್ಲರನ್ನೂ ಕೂಡಿಟ್ಟವನು. ತನಗೆ ಹೆದರುತ್ತಿದ್ದವರೇ ತನ್ನನ್ನು ಹೆದರಿಸಲು ಪ್ರಯತ್ನಿಸುತ್ತಾರೆ ಎಂದು ಅರಿವಾದಾಗ ತನ್ನ ಕುಟುಂಬದ ಸಹಸದಸ್ಯರನ್ನು ತನಗಿಷ್ಟ ಬಂದಂತೆ ಕುಣಿಸತೊಡಗಿದಂಥವನು. ಆದರೆ ಇಷ್ಟೆಲ್ಲ ಇರುವ ನಮ್ಮಪ್ಪನಿಗೆ ಅನಾದಿ ಕಾಲದಿಂದ ತಿರುಗಿ ಬಿದ್ದ ಗಂಡುಗಲಿ ಎಂದರೆ ನಮ್ಮ


೧೮೬

ನಿಂಗಮ್ಮಜ್ಜಿ ಎಂದು ಹೇಳಬೇಕಾಗಿಲ್ಲ. ತಂಗಿಯ ಮಗಳನ್ನು ಕೊಟ್ಟು ಮನ್ತನಕ್ಕೆ ಇಟ್ಟುಕೊಂಡ ಕ್ಷಣದಿಂದ ಅದಕ್ಕು ಆತಗೂ ಎಣ್ಣೆಶೀಗೆಕಾಯಿ ಸಂಭಂಧ. ತಲಾ ಒಂದೊಂದು ತೊಡೆ ತಟ್ಟುವವರೇ; ತಲಾ ಒಂದೊಂದು ವಿಶೇಷಾಲಂಕೃತ ಮಾತುಗಳನ್ನು ಎರಚಾಡುತ್ತಿದ್ದವರೇ , ಪ್ರತೀ ಸೋಲನ್ನು ಗೆಲುವೆಂದು ಭಾವಿಸಿದಂಥವರೇ.
"ಏನೋ ಬ್ರಾಂಬ್ರು ... ಗಂಡನ್ನ ಕಳೆದುಕೊಂಡಿರೋ ವಿಧವೆಯರು. ಅವರ ಬದುಕು ನಿಸೂರಾಗುವುದಾದರೆ ತಾನಾ ಮನೆಯನ್ನು ಕೊಂಡುಕೊಳ್ಳುವುದರಲ್ಲಿತಪ್ಪೇನು" ಎಂದೋ?; ಅದ್ಭುತ ಘಟನಾವಳಿಗಳ ಸರಮಾಲೆ ಹೊಂದಿರುವ ಮನೆಗೆ ತಾನು ವಾರಸುದಾರನಾದಲ್ಲಿ ಸಮಾಜದಲ್ಲಿ ತನ್ನ ವರ್ಚಸ್ಸು ಹೆಚ್ಚುತ್ತದೆ ಎಂದೋ; ಜೇಬಿನಲ್ಲಿ ಘಟ್ಟಿ ಐದು ರುಪಾಯಿಇಲ್ಲದಿದ್ದರೂ ಆ ಭಯಂಕರ ಆತ್ಮ ವಿಶ್ವಾಸಿ ಆ ಮನೆಯನ್ನು ಖರೀದಿಸಲು ಕಂಕಣಬದ್ಧನಾಗಿದ್ದ. ಈ ಬಗ್ಗೆ ನಾನೂನೂವೆ ಒಳಗೊಳಗೆ ಖುಷಿಪಟ್ಟಂಥವನೇ ಆಗಿದ್ದೆ. ಎಷ್ಟಿದ್ದರೂ ಅದು ನನ್ನ ಖಾಸಾ ಗೆಳೆಯನ ಮನೆ ಅಲ್ಲವೆ?
"ಲೋ ತಮ್ಮಾ ಹಾಲಪ್ಪೋ ... ಈಗೇನಾತಂಥೀಯಾ? ಆಗಬಾರದ್ದೆಲ್ಲ ಆಗಿ ಹೋತೂ; ಅನ್ನಬಾರದ್ದನ್ನೆಲ್ಲ ಅಂದುಬಿಟ್ರು ಕಣಪ್ಪಾ... ಅವು ಹೆಂಗಸ್ರಲ್ವೇ ಅಲ್ಲ. ಲವುಡೇರು ಗಂಡ್ರಿಲ್ಲ ಈಟುರಿತಾರ... ಇದ್ದಿದ್ದ್ರೆ ಯೇಟುರಿತಿದ್ದ್ರೋ ... ನಾನೊಂದ ಮಾತಾಡ್ತೀನಿ ... ತಗದುಹಾಕ್ಬಾರ್ದು. ನಿಂಗೆ ತಾಯಂದ್ರು ನಾನೇ ... ಅತ್ತೆ ಅಂದ್ರೂ ನಾನೇ ... ಆ ಬ್ರಾಂಬ್ರು ಮನಿ ತಂಟೆಗೆ ಹೋಗಬ್ಯಾಡ ..." ಎಂದು ನಿಂಗಮ್ಮಜ್ಜಿ ಒಂದೇ ಉಸಿರಿಗೆ ಹೇಳೋದನ್ನೆಲ್ಲ ಹೇಳಿ ಕೋಳೋದನ್ನು ಕೇಳಲಿಕ್ಕಾಗದೆ ... ನತದೃಷ್ಟ ಬ್ರಾಹ್ಮಣ ವಿಧವೆಯರನ್ನು ಬಯ್ಯುತ್ತ ಬಯ್ಯುತ್ತ ಒಳಗಡೆ ಬಿರುಗಾಳಿಯಂತೆ ಹೋಗಿ ಬರೀ ಮಾತಿನಿಂದ ಅವರೆಂಥೋರು? ಇವರೆಂಥೋರು? ಎಂದು ಅಷ್ಟಾದಶ ಪುರಾಣ ಒರೆಯತೊಡಗಿತು.
ಮೊದಮೊದಲು ‘ಟೋಪಿ’ ಸೇದುತ್ತಿದ್ದ ನಮ್ಮಪ್ಪ ಇಂದಿರಾಗಾಂಧಿ ಪದಚ್ಯುತಳಾದ ಮೇಲೆ ಎರಡ್ರುಪಾಐ ಕೇಜಿ ಸಕ್ರೀ ಎಂಬ ಸಂತೊಷದ ಭರದಲ್ಲಿ ‘ಆನೆ’ ಸೇದಲಾರಂಭಿಸಿದ. ಇಂದಿರಾ ಗಾಂಧಿಯ ಕಗ್ಗೊಲೆಯ ನೋವನ್ನು ತಾಳಲಾರದೆ ‘ಚಾರ್ಮಿನಾರ್’ಗೆ ಬಂದ. ರಸಾಯನಿಕ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರತೊಡಗಿದ ಮೇಲೆ ‘ಬರಕ್ಲೀ’ಗೆ ಬಂದ. ರಾಜೀವ್ ಗಾಂಧಿಯನ್ನು ಒಬ್ಬ ಯಕಃಶ್ಚಿತ್ ಮಹಿಳೆ ಕೊಲೆಮಾಡುವುದೆಂದರೇನು ಎಂದು ಯೋಚಿಸುತ್ತ ಯೋಚಿಸುತ್ತಾ ಗಣೇಶನ ಮೊರೆ ಹೊಕ್ಕ. ಇಂಥಪ್ಪ ಛಪ್ಪನ್ನಾರು ಅಸಂತುಷ್ಟ ನೋವುಗಳಿಂದಾಗಿ ಆತನ ಸಣ್ಣ ಕರುಳಲ್ಲಿ ವೃಣ ತೊಂದರೆ ಕೊಡಗಿತು. ಏಕಕಾಲಕ್ಕೆ ಅಲೊಪತಿ ಮತ್ತು ಹೋಮಿಯೋಪತಿ ಬಳಸತೊಡಗಿ ಮತ್ತಷ್ಟು ತೊಂದರೆಗೀಡಾಗಿ ತನ್ನ ವಂಶದ ಭೀಕರ ಹಿರಿಯರನ್ನು ಅವರ ಘನ ಕಾರ್ಯಗಳನ್ನು ಕಂಡ ಕಂಡವರಿಗೆಲ್ಲ ಅಪೂರ್ವ ಲವಲವಿಕೆಯಿಂದಲೂ; ವಿಚಿತ್ರಾವೇಶದಿಂದಲೂ ವಿವರಿಸತೊಡಗಿದ. ಆ ಸಂದರ್ಭದಲ್ಲಿಯೇ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಮಾಯವಾಗಿ, ಆಗಷ್ಟೆ ಎಳ್ಳುನೀರು ಬಿಡಿಸಿಕೊಂಡಿದ್ದ ಬಸಪ್ಪನೆಂಬ ನಮ್ಮ ಸಂಬಂಧಿಕನೋರ್ವ ಸಾಧು ವೇಶದಲ್ಲಿ ಪ್ರತ್ಯಕ್ಷನಾಗಿ ‘ಮಾವಾ, ಈ ದೇಹ ನಶ್ವರ, ಈ ಬದುಕು ನಶ್ವರ ಇದರಿಂದ ಮುಕ್ತಿ ಪಡೆಯಬೇಕಾದರೆ ಕಾವಿ ಉಡು ... ಗಾಂಜಾ ಸೇದು’ ಎಂದು ಪುಸಲಾಯಿಸತೊಡಗಿದ್ದು. ಎಂಥೆಂಥೋರ ಯಾವ ಬಣ್ಣದ ಮಾತುಗಳನ್ನು ಎಂದೂ ಕಿವಿ ಮೇಲೆ ಹಾಕಿಕೊಳ್ಳದಂಥ ನಮ್ಮಪ ಆತನ ಥಳುಕಿಲ್ಲದ ಮಾತುಗಳಿಗೆ ಮರುಳಾಗಿಬಿಡುವುದೆ? ಬಸಪ್ಪನನ್ನು


೧೮೭

ಹಿಂದೊಮ್ಮೆ ನಮ್ಮಪ್ಪ ಹಿಗ್ಗಾಮುಗ್ಗಾ ಒದ್ದೋಡಿಸಿದ್ದುಂಟು. ಕೆಲವು ದಿನಗಳಲ್ಲಿ ನಮ್ಮಪ್ಪನೆಂಬ ಕುರುಕುಲ ವಿಲಯೋತ್ಪಾತಕೇತು ಕಾವಿ ತೊಡುವುದರ ಬಗ್ಗೆ; ಗಾಂಜಾ ಸೇದುವ ಬಗ್ಗೆ ಮುನ್ಸೂಚನೆ ಕೊಡತೊಡಗಿದ.ಈ ಸಂದರ್ಭದಲ್ಲಿಯೇ ನಿಂಗಮ್ಮಜ್ಜಿಯ ಮಾತು ಕೇಳಿಸಿಕೊಂಡಿದ್ದು. ಮೊದಲೇ ಅವರಿಬ್ಬರ ಜಾಯಮಾನ ಪರಸ್ಪರ ವಿರುದ್ಧ. ಆತ ವತಿ ಅಂದರೆ ಆಕೆ ಪ್ರೇತಿ ಅನ್ನುವಂಥವಳು. "ನೋಡಬಾರದ್ಯಾಕೆ ... ನಾನು ನಮ್ಮಪ್ಪನ ಮಗನಾಗಿದ್ದಲ್ಲಿ ಆ ಮನೆಯನ್ನು ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ" ಎಂದು ಗಣೇಶನ ಹೊಗೆಯನ್ನು ತನ್ನ ಹೆಂಡತಿ ದೊಡ್ಡಮ್ಮನ ಕಾಲರುಳಿನಂಥ ಮುಖಕ್ಕೆ ಬಿಟ್ಟು ಮೊದಲೆ ಅಸಹಾಯ ಶೂರ ಪರಾಕ್ರಮಿಯೂ; ಬಾಯೊಳಗೆ ತಾಂಬೂಲದುಂಡೆಯೊಡಲಲ್ಲಿ ತರಾವರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಂಥವಳೂ ಆದ ನಿಂಗಮ್ಮಜ್ಜಿ ಆ ಕ್ಷಣ ರುದ್ರಾವತಾರ ತಾಳಿ "ಎಲವೋ ದುರುಳ ... ಯಿಂದಿಗೆ ನನ್ನ ನಿನ್ನ ರುಣ ತೀರ್ತು ...ನಿನ್ನ ದಾರಿ ನಿನ್ಗೆ ... ನನ್ನ ದಾರಿ ನನ್ಗೆ ..." ಎಂದು ಹೇಷಾರವ ಮಾಡಿದಳು, ಅಷ್ಟದಿಕ್‌ಪಾಲಕರನ್ನು ದುರುಗುಟ್ಟಿ ನೋಡಿ.
"ಯ್ಯೋನಲೋ ಸಾಕಿ ಸಲವಿದ ನನ್ನ ಮಾತ್ನೇ ಧಿಕ್ಕರಿಸ್ತೀಯಾ ... ನಿನ್ ಚಲುವಿಕೆಗೆ ಮಳ್ಳಾಗಿ ಮೊಗಳ್ನಕೊಟ್ಟಿದ್ಕೆ ಸರ್‍ಯಾಗಿಯೇ ಮಾತಾಡ್ತೀ ... ನೀನು ಯಾವೂರ ಕಾಗೆ ಎಬ್ಬಿಸಾಕೆ ಹ್ವಾದ್ರೆ ನಂಗೇನು? ನಂಗೆ ನನ್ಮೊಗ್ಳೂ ...ಮೊಮ್ಮಕ್ಳೂ ಮುಕ್ಯಾ ..." ಎಂದು ಆಕೆ ತನ್ನ ಡೊಂಕು ಕಾಲಿಗೆ ಅಡರಿಕೊಂಡಿದ್ದ ರಾಂಪುರದ ಹದಿನೆಂಟು ಮೊಳದ ಸೀರೆಯನ್ನು ಸ್ವಲ್ಪ ಮೇಲೆತ್ತಿ ಕಟ್ಟಿಕೊಂಡಳು.
ಅದೇ ಹೊತ್ತಿಗೆ ಅಡುಗೆ ಮನೆಯಿಂದ ನಮ್ಮಪ್ಪನ ಧರುಮ ಪತನಿಯೂ; ಮುತ್ತಾನ ಸೂಳೆ ಗಿರಿಜೆಯೂ ಎಲೆ ಅಡಿಕೆ ಹಾಕಿಕೊಳ್ಳುವುದನ್ನು ಬಿಟ್ಟು ಎದ್ದು ಬಂದು ಬಿಟ್ಟರು, ಎರಡು ನಮೂನೆಯ ಸುಂಟರಗಾಳಿಗಳು ಒಂದಾದಂತೆ.
"ಯ್ಯೋನೆ ... ಬಾಯಿಗೆ ಬೊಂದಂತೆ ಮಾತಾಡ್ತಿ! ... ನಾವೇನಾರ ಆಗಲಿ ... ಯಣ್ಣು ಮೂಳಾದ ನಿಂಗ್ಯಾಕೆ ಬೇಕೆ? ... ನನ್ನ ಗಂಡನ್ನ ಕಾಗೆ ಎಬ್ಬಿಸಾಕೆ ಹೋತಾನೆಂತೀಯ ... ನಿನ್ನ ನಾಲ್ಗೆ ಸೇದಿಹೋಗ! ಎಂದು ನಮ್ಮವ್ವನೂ ...
ಅದ್ಯಾವ ಜನುಮದಾಗ ಅದೇನಾಗಿ ವುಟ್ಟಿದ್ದೆಭೇ ಅತ್ತೆ ... ಗಂಡಸರಂದ್ರೆ ಭಯ ಇಲ್ಲ ಭೀತಿ ಇಲ್ಲ ..." ಎಂದು ನಮ್ಮಪ್ಪನ ಪ್ರಿಯತಮೆಯೂ ...
ಆಗ ನಮ್ಮಜ್ಜಿ ಚಕ್ರವ್ಯೂಹದಲ್ಲಿ ಸಿಕ್ಕಿ ನತದೃಷ್ಟ ಅಭಿಮನ್ಯುವಿನಂತಾದಳು.
ಮುಧೋಳದ ಬೇಟೆ ನಾಯಿಗಳಂತೆ ನಿಂತಿರುವ ಅವರ ಪೈಕಿ ಮೊದಲು ಯಾರನ್ನು ಎದುರಿಸುವುದು? ಸಿಂಹ ವಿಷ್ಟರದ ಮೇಲೆ ಕದನ ಕುತೋಹಲಿಯಾಗಿರುವ ಅಳಿಯನಿಗಾದರೂ ಬುದ್ಧಿಬೇಡವೆ?... ತಾನು ಬೆಳಗಾಗೆ ಎದ್ದು ಯಾರ ಮುಖ ನೋಡಿದನೆಂಬುವುದರ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದೆ ... "ನನ್ನ ಅತ್ತೆ ಅಂತೀಯೇನೆ ಬಿಕನಾಸಿ ಮುಂಡೆ ... ಇಟಗಂಡ ಸೂಳೆಯಾಗಿದ್ದೇ ಯೀಟು ಮಾತಾಡ್ತೀ ... ಯಿನ್ನು ಯೀ ಭಾಡಖಾವು ಕಟ್ಟಿಕೊಂಡಿದ್ರೆ ಯಿನ್ನೇಟು ಮಾತಾಡ್ತಿದ್ದೆಯೇ" ಎಂದು ಮಾತಾಡದಿದ್ದಲ್ಲಿ ನಮ್ಮಪ್ಪನಿಗೆ ಸಿಟ್ಟು ಬರುತ್ತಿರಲಿಲ್ಲ.
ಹಾಯಟೆಕ್ ಧೂಮಕೇತುವಿನಂತೆ ಎದ್ದು ಭದ್ಧ ಭ್ರುಕುಟಿಯಾಗಿ ಮುಖವನ್ನು ಗುಗ್ಗುಳ ಮಾಡಿಕೊಂಡನು. "ಯೇನೆ ಮುದಿ ಕತ್ತೆಯೇ ... ಹೆಂಡ್ತಿಗಿಂತ ಹೆಚ್ಚಾಗಿಟ್ಟುಕೊಂಡಿರೋಳ್ನ ಸೂಳೆ ಅಂತಿದ್ದೀಯಲ್ಲ! ನಿನ್ನ ಮ್ಯ್ಯಾಗ ಎಷ್ಟಿದ್ದೀತು ಕೊಬ್ಬು? ... ಮೊದ್ಲು ನಿನ ಮೈಯೊಳಗಿನ ಎಲುಬು ಮುರುದೇ ನಾನು ಮನೆ ತಂಟೆಗೋಗೋದು" ಎಂದು ತೋಳೇರಿಸಿದನು.


೧೮೮
ಅದೆಲ್ಲಿ ತಮ್ಮ ವಂಶದ ಮೋಟುಗೂಟದಂಥ ನಿಂಗವ್ವ ನಿರ್ನಾಮವಾಗಿ ಬಿಡುವಳೊ ಎಂದೂಹಿಸಿ ಆಕೆಯ ತಂಗಿ; ತಂಗಿಯ ಇನ್ನೊಬ್ಬ ಮಗಳು; ಮತ್ತಿನ್ಯಾರ್ಯಾರೋ ಎಲ್ಲಿಂದಲೋ ಬಂದು ಕೋಟೆಯಂತೆ ರಕ್ಷಣೆ ಒದಗಿಸಿದರು. ಹವುದೋ ... ಅಲ್ಲವೋ ಎಂಬಂತೆ ಮಾತಾಡುತ್ತ ಆಕೆಯನ್ನು ಜೋಪಾನವಾಗಿ ನಡೆಸಿಕೊಂಡು ಹೋದರು.

ಅಂದು ನಡೆದ ಆ ಜಗಳ ಬಹು ದೊಡ್ಡ ಘಟನೆಗೆ ಸುಶ್ರಾವ್ಯವಾಗಿ ನಾಂದಿ ಹಾಡಿತು. ಇತಿಹಾಸ ಪ್ರಸಿದ್ಧ ದ್ವಿದಳ ಧಾನ್ಯವೊಂದು ಅಂದು ವಿಭಜನೆಗೊಂಡದ್ದು ಮತ್ತೆ ಕೂಡಲೇ ಇಲ್ಲ.

ನಿಂಗಮ್ಮಜ್ಜಿ ತನ್ನ ಸಂಗಡಿಗರೊಂದಿಗೆ ಬೇರೊಂದು ಮನೆ ಮಾಡಿ, ಬೇರೊಂದು ಒಲೆ ಹೂಡಿಬಿಟ್ಟಿತು. ಅದು ಹೂಡಿದ ಒಲೆಯಲ್ಲಿ ಅರಷಡ್ವರ್ಗಗಳು ಧಗಧಗಿಸತೊಡಗಿದವು. ಪ್ರತಿದಿನ ಕಾಲು ಕೆದರಿ ಜಗಳ ತೆಗೆಯ ತೊಡಗಿತು.
ಅಂಥ ಜಗಳದಲ್ಲಿ ಉಲ್ಲೇಖಾರ್ಹವಾದುದೆಂದರೆ ಶಾಸ್ತ್ರಿಗಳ ಮನೆ ಬಗ್ಗೆ ಅದು ಹಬ್ಬಿಸಿದ ರೋಚಕ ಕಥೆಗಳು ... ಕರ್ಮ ಕಾಂಡಗಳು ... ಒಂದೇ ಎರಡೇ ... ಅದರ ಜೊತೆಗೆ ಅಕ್ಕಪಕ್ಕದ ಮನೆಯವರನ್ನೂ ಪೈಪೋಟಿಗಿಳಿಸಿ ಪುಣ್ಯ ಕಟ್ಟಿಕೊಂಡಳು. ಆ ಮನೆಯೊಳಗೆಲ್ಲೋ ಗುಪ್ತ ನಿಧಿ ಎಂದು ಹೇಗೋ ಹಬ್ಬಿದ ಸುದ್ದಿಯನ್ನು ದಡ್ಡತನಕ್ಕೆ ಹೆಸರಾದ ಅಕ್ಕಪಕ್ಕದ ಮನೆಯವರು ನಂಬಿಬಿಟ್ಟರು. ಹಾಲಪ್ಪ ಕೊಡೋ ರಖಮ್ಮಿಗಿಂತ ಎರಡರಷ್ಜ್ಟು, ಮೂರರಷ್ಟು ಕೊಡುವುದಾಗಿ ಹೇಳುತ್ತ ಶಾಸ್ತ್ರಿಗಳ ಸ್ಥಿರ, ಚರ ಸಂಪತ್ತಿನ ಉತ್ತರಾಧಿಕಾರಿಗಳ ಬಗೆಗೆ ದಟ್ಟಂಡಿ ದಾರಂಡಿ ಅಲೆಯತೊಡಗಿದರು.

ಹಾಗೆ ಬಂದವರನ್ನು ನೋಡಿದಾಗಲೆಲ್ಲ ಆ ಸಾಧ್ವಿಮಣಿ ಸೊಸೆ ‘ಅಸಂತುಷ್ಟಾ ದ್ವಿಜಾ ನಷ್ಟಾಃ’ ಎಂದು ಆರ್ಯೋಕ್ತಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಳು. ಮನೆಯ ಸುತ್ತ ವಾಸಿಸುವ ಅಷ್ಟದಿಗ್ಗಜಗಳೆಲ್ಲ ತಿಳುವಳಿಕೆ ಇಲ್ಲದವರೆಂದು ವರಲಕ್ಷ್ಮಿಗೆ ಗೊತ್ತು. ಪರಪುರುಷರನ್ನು ಮನೆ ಒಳಗಡೆ ಬಿಟ್ಟುಕೋಬೇಡ ಎಂದು ಅತ್ತೆ ಮಂಚದ ಮೇಲಿಂದಲೇ ಕೂಗುತ್ತಿದ್ದರೂ, ಸೊಸೆ ಬಂದಂಥವರನ್ನು ಅಟವಾಳಿಗೆ ವರೆಗೆ ಬಿಟ್ಟುಕೊಳ್ಳುತ್ತಿದ್ದಳು., ‘ಅಜ್ಞಃ ಸುಖಮಾರಾಧ್ಯ’ ಎಂಬ ಪ್ರಾಚೀನರ ಮಾತನ್ನು ನೆನಪು ಮಾಡಿಕೊಳ್ಳುತ್ತಲೇ ಕೋಸುಂಬರಿ ಪಾನಕ ನೀಡಿ ಸತ್ಕರಿಸುತ್ತಿದ್ದಳು. ‘ವೃಕ್ಷ ಮೂಲಾನಿ ದೂರತಃ ಪರಿವರ್ಜಯೇತ್’ ಎಂಬ ಮಾತಿನಂತೆ ದೂರ ನಿಲ್ಲುತ್ತಿದ್ದಳು. ಸಾರಿಗೆ ವಗ್ಗರಣೆ ಹಾಕಿದಂತೆ; ವಗ್ಗರಣೆಯಲ್ಲಿ ಇಂಗು ಹಾಕಿದಂತೆ ಎಷ್ಟು ಬೇಕೋ ಅಷ್ಟು ಮಾತಾಡುತ್ತಿದ್ದಳು. ‘ನೋಡೋಣ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದಳು. ‘ದೀರ್ಘಾಯುಷ್ಮಾನ್‌ಭವ’ ಎಂದು ಆಶೀರ್ವಾದ ಮಾಡಿ ಸಾಗಹಾಕುತ್ತಿದ್ದಳು. ಮನೆ ಕ್ರಯಕ್ಕೆ ಕೊಂಡು ಆಕೆ ಉಡಿ ತುಂಬ ಹಣ ತುಂಬಲು ಬಂದವರು ಆಕೆ ಭಾಷೆಯನ್ನಾಗಲೀ ಮಾತಿನ ಅರ್ಥವನ್ನಾಗಲೀ ಅರ್ಥಮಾಡಿಕೊಳ್ಳುವಲ್ಲಿ ಸೋತು ಒಂಥರಾ ಮುಖ ಮಾಡಿಕೊಂಡು ಹೋಗುತ್ತಿದ್ದರು.

ಅವರು ಅತ್ತ ಹೋಗುತ್ತಲೆ ಇತ್ತ ಅತ್ತೆ ಸೊಸೆಯರ ನಡುವೆ ಜಟಾಪಟಿ; ಗಂಡಾಗುಂಡಿಯೂ ಯಥಾಲಾಪದೊಂದಿಗೆ ಶುರುವಾಗುತ್ತಿತ್ತು. ಅತ್ತೆ ಅಲುಮೇಲಮ್ಮ ವ್ಯಾಸಪೀಟಕ್ಕೆ ಕೈಕೊಟ್ಟು ಅದು ಮುರಿಯುವಂತೆ ಮೇಲೆದ್ದು ಗರ್ವಾಲಂಕೃತಳಾಗಿ ಬರುತ್ತಿರುವಾಗಲೇ ಸೊಸೆ ವರಲಕ್ಷ್ಮಿ ‘ರಾಮರಾಮಾ, ಯಾವ ಮುಖ ಹೊತ್ತು ಈಶೂದ್ರರ ನಡುವೆ ಬದುಕುವುದೋ ಕೃಷ್ಣ ಕೃಷ್ನಾ’ ಎಂದು ಜಗಳದ ಮಂಜ್ರಾ ಆರಂಭಿಸುತ್ತಿದ್ದಳು.


೧೮೯

"ಮನೆ ಮಾರೋದು ಬೇಡ ... ಮಾಮನವರು ಶ್ರದ್ಧಾಭಕ್ತಿಯಿಂದ ವಿಷ್ಣುಪುರಾಣ ಮನನ ಮಾಡಿಕೊಂಡ ಪವಿತ್ರ ಜಾಗ ಇದು. ಇದನ್ನು ಮಾರಿದವರಿಗೆ ಒಳ್ಳೇದಾಗಲ್ಲ ... ಮೊಮ್ಮಕ್ಕಳಾದರೂ ಪಾಪಲೇಶವಿಲ್ಲದೆ ಬದುಕೋದು ಬೇಡವೇ" ಅಲುಮೇಲಮ್ಮ ತನ್ನೆಡಗೈಯನ್ನು ಟೊಂಕಕ್ಕೆ ದತ್ತುಕೊಟ್ಟು ಬಲಗೈಯನ್ನು ಪ್ರತಿಭಾ ಪ್ರಹ್ಲಾದ್ರವರ ದೇಹದಂತೆ ತಿರುಗಿಸುತ್ತ ಹೇಳಲು ...
"ಯಾವತ್ತು ಈ ಶೂದ್ರಕೇರಿಲಿರೋ ಮನೇಲಿ ವಸಿಸಲಿಕ್ಕೆ ಹತ್ತಿದ್ರೋ ಅವತ್ತೆ ಫಲ್ಗುಣೀ ನದೀಲಿ ಪಿಂಡ ಪ್ರದಾನ ಮಾಡ್ದಂತಾಯ್ತು ಕಣ್ರತ್ತೆ. ಈ ರಂಡೇಮುಖಾನ ಹೊತ್ತು ಈ ತಾಮಸಾಹಾರಿಗಳ ನಡುವೆ ಹೆಂಗತ್ತೆ ಬದುಕೋದು? ನೀವಂತೂ ಇಂದೋ ನಾಳ್ಯೋ ವೈಕುಂಟಕ್ಕೆ ಪಯಣ ಮಾಡಲಿರೋರು ... ಬಾಳಕಾಲ ಬದುಕಿರೋ ನನ್ನ ಗತಿ ಏನು! ... ಈ ತಾಮಸಿಗಳು ಹರಿದು ಮುಕ್ಕದೆ ಬಿಟ್ಟಾರೇನು! ಇದ್ಕೊಂದು ಮನಿ ಮಾರದಿದ್ರೆ ಮಕ್ಕಳ ಕೈಯಲ್ಲಿ ಗೋಪಾಳ ಬುಟ್ಟಿ ಕೊಡೋದೆ" ವರಲಕ್ಷ್ಮಮ್ಮ ಮೈಕೇಲ್ ಜಾಕ್ಸನ್‌ನಂತೆ ಇಡೀ ಮೈ ಒನೆಯುತ್ತ ನಾಲಿಗೆಗೆ ಆದಿಶಕ್ತಿ ಸ್ವರೂಪ ಕೊಟ್ಟು ಉತ್ತರ ಕೊಡಲು ...
ಇದರಿಂದ ವೃದ್ಧೆ ಕ್ರುದ್ಧೆಯಾಗಿ "ಅದೇನೆ ಹಂಗಾಡ್ತಿದೀಯಾ? ... ನನ್ ಮಗ ಶಾಮೂ ನಿನಗಾಗಲೀ ನಿನ್ನ ಮಕ್ಕಳಿಗಾಗಲೀ ಮಾಡಿರುವ ಅನ್ಯಾಯವಾದರೂ ಏನೆ?" ಎಂದು ಕರಾಟೇಕಲಿಯಂತೆ ಬಲಗೈಯ ತುದಿ ಬೆರಳುಗಳಿಂದ ಸೊಸೆಯ ಮುಂದಿನ ಬಾಚಿಹಲ್ಲುಗಳಿಗೆ ತಿವಿದಳು.
ದಂತಪಂಕ್ತಿ ಜುಮ್ಮೆಂದು ಬಿಟ್ಟವು ಆ ಕ್ಷಣ. ಕೋಪವೆಂಬುದು ಕೆಂಪು ರಕ್ತಕಣಗಳಲ್ಲಿ ಪ್ರವಹಿಸಿತು. ತಿವಿದೂ ತಿವಿದೂ ಹಲ್ಲುದುರಿಸಿ ಅಕಾಲ ವೃದ್ಧಾಪ್ಯ ತುರುಕಲು ಅತ್ತೆ ನಿರ್ಧರಿಸಿರುವಳೆಂದು ಬಗೆದು ವರಲಕ್ಷ್ಮಿ-
"ಅದೇನು ಅತ್ತೆ ... ಹಂಗ ತಿವೀತೀರಲ್ಲ ... ನಿಮ್ಮವೇನು ಕೈಯ್ಯೋ ... ನಾಗರಹಾವಿನ ಹೆಡೆಯೋ ... ನಿನ್ನ ಮಗ ನಿನಗೂ, ನನ್ನ ಮಕ್ಕಳಿಗೂ ಮಾಡಿರುವ ಅನ್ಯಾಯ ಒಂದೇ ಎರಡೇ ... ಅವರು ಬದುಕಿರುವಾಗಲೂ ಸುಖ ಕಾಣ್ಲಿಲ್ಲ ... ಸತ್ತ ಮೇಲೂ ಸುಖ ಕಾಣಲಿಲ್ಲ ... ಅವರು ಮಾಡಿರೋ ಅನ್ಯಾಯ ಇಡಿ ತಾಲ್ಲೂಕಿಗೆ ಗೊತ್ತು ... ಬಿಡಿಸಿ ಹೇಳಿ ನಾನ್ಯಾವ ನರಕಕ್ಕೆ ಹೋಗ್ಲಿ ..." ಎಂದು ತಲೆಯ ಮೇಲಿದ್ದ ಸೆರಗನ್ನು ತೊಂಕಕ್ಕೆ ಸಿಕ್ಕಿಸಿಕೊಂಡು ಮುಂದುವರಿದು ಹೇಳಿದಳು-
"ಇದು ನನ್ನ ಗಂಡನ ಆಸ್ತಿ ... ನಾನು ಬೇಕಾದ್ದು ಮಾಡ್ತೀನಿ ... ಅದನ್ನು ಕೇಳೊಕೆ ನೀವ್ಯಾರು ಅಂತೀನಿ? ... "
ಸೊಸೆಯಾಡಿದ ಈ ಮಾತಿನಿಂದ ಅತ್ತೆಮ್ಮನ ತಾಯ್ತನ ವಿಲಿವಿಲನೆ ಒದ್ದಾಡಿತು. ತಾನು ಬದುಕುತ್ತಿರುವ ಕ್ರಮಕ್ಕೆ ತಾನೇ ಅಸಹ್ಯ ಪಟ್ಟುಕೊಂಡಳು.
"ನನ್ನ ಯಾರು ಅಂತೀಯ್ಹೇನೆ? ಇಂಥ ಮಾತಾಡೋಕೆ ಎಷ್ಟು ಧೈರ್ಯ ಕಣೆ ನಿನಗೆ ... ಸತ್ಕುಲಸಂಜಾತೆಯಾಗಿದ್ರೆ ಇಂಥ ಮಾತು ನಿನ್ನ ಬಾಯಿಂದ ಬರುತ್ತಿದ್ದವೇನು!
"ಹ್ಹಾಂ ... ನನ್ನ ಕುಲಕ್ಕೇ ಅವಮಾನ ಮಾಡುತ್ತೀರಲ್ಲಾ ... ಅಯ್ಯಯ್ಯೋ ... ತಾತನವರೇ ನನ್ನನ್ನು ಈ ದರಿದ್ರದವರ ಮನೆ ತುಂಬಿಸಿ ಎಷ್ಟು ಅನ್ಯಾಯ ಮಾಡಿದ್ದೀರಲ್ಕ್ಲಾ ..." ಅಂಜಲೀಬದ್ಧಳಾಗಿ ವೈಕುಂಠದ ಕಡೆ ಆರ್ತತೆಯಿಂದ ನೋಡಿದಳು.
"ಎಂಥ ಸೊಸೆ ಗಂಟುಬಿದ್ದಿರುವಳಲ್ಲ ರಾಮ ರಾಮಾ ... ನಮ್ಮನ್ನ ದರಿದ್ರದವರು


೧೯೦

ಅಂತೀಯಾ ...ನಿನಗೆ ರೌರವ ನರಕ ಪ್ರಾಪ್ತವಾಗಲೀ ... ನೀನು ದರಿದ್ರ ... ನಿನ್ನ ಅಪ್ಪ ದರಿದ್ರ ... ನಿನ್ನ ಒಡಹುಟ್ಟಿದವರು ದರಿದ್ರದವರು..." ಅಲುಮೇಲಮ್ಮ ಲಟಲಟಾಂತ ಲಟ್ಟಿಗೆ ತೆಗೆದಳು.
ವರಲಕ್ಷ್ಮಿಯ ದೇಹವೆಂಬುದು ಧಗಧಗ ಉರಿಯತೊಡಗಿತು. ಕುಪ್ಪಳಿಸಿ ಎಗರಿ ಅತ್ತೆಯ ದುರ್ಬಲ ಸೆರಗು ಹಿಡಿದುಕೊಂಡಳು.
"ಅದೇನು ಕಂಡು ನಮ್ಮ ವಂಶದವರನ್ನ ದರಿದ್ರ ಅಂತೀಯ ಮುದುಕೀ ... ನಿನ್ನ ಗಂಡ ಅಂದ್ರೆ ನಮ್ಮ ಮಾವನಂತೆ ಅಮೇಧ್ಯ ತಿಂದು ಭ್ರಷ್ಟರಾದವರುಂಟೇನು? ... ಮದ್ಯ ಸೇವಿಸಿ ಕುಲಗೌರವ ಹಾಳುಮಾಡಿದವರುಂಟೇನು?" ತನ್ನ ಹಿಡಿತ ಮತ್ತು ಜಗ್ಗಾಟವನ್ನು ಭದ್ರಪಡಿಸುತ್ತ ಮುಂದುವರಿದು ಹೇಳಿದಳು " ಆ ಮಾತು ವಾಪಸ್ಸು ತೊಕ್ಕೊಳ್ಳದಿದ್ದರೆ ಬಿಡೋದಿಲ್ಲ"
ಆಕೆಯ ಹಿಡಿತಕ್ಕೆ ವೃದ್ದೆ ಅಲ್ಲಾಡಿ ಹೋದರೂ ವಿಚಲಿತಳಾಗಲಿಲ್ಲ.
"ನಿನ್ನ ಅಣ್ಣ ತಮ್ಮಂದಿರು ಮಾಡಬಾರದ ಪಾಪ ಮಾಡಿ ಅಕಾಲ ಮರಣಕ್ಕೆ ತುತ್ತಾದುದು ನನಗೆ ಗೊತ್ತಿಲ್ಲಾಂಥ ಅಂದುಕೊಂಡಿರುವೆಯೇನೆ? ಇನ್ನು ನಿಮ್ಮ ತಾತನವರ ಬಗೆಗೆ ..."ಎಂದಿನ್ನೇನೋ ಹೇಳುವಷ್ಟರಲ್ಲಿ ...
"ನಮ್ಮ ತಾತನವರ ಬಗೆಗೇನಾದರೂ ಒಂದು ಮಾತು ಆಡಿದಿರೀ ಅಂದ್ರ ನಿಮ್ಮ ನಾಲಿಗೆಗೆ ಹುಳು ಬೀಳ್ತವೆ... ಎಷ್ಟೊ ಪಾಪಾತ್ಮಗಳಿಗೆ ಮುಕ್ತಿ ದಯಪಾಲಿಸಿದ ಧರ್ಮಾತ್ಮರು ಅವರು ... ಅವರೇನು ... ನಿಮ್ಮ ಮಾವನವರಂತೆ ಮಲಗಿದಲ್ಲೇ ಮಲ ಮೂತ್ರ ಬಳಿಸಿಕೊಂಡು ವಿಲವಿಲನೆ ಒದ್ದಾಡಿ ಸಾಯಲಿಲ್ವಲ್ಲಾ ... ಅವರ ಹಾಗೆ ತಾತನವರೇನು ಪೋಲೀಸರ ಕೂಡ ಒಡೆಸಿಕೊಂಡು ಜಾತಿಭ್ರಷ್ಟರಾಗಿದ್ದಿಲ್ಲಲ್ಲ ..." ಎಂದು ತನ್ನ ಬಾಯಲ್ಲಿದ್ದ ಲಾಲಾರಸವನ್ನು ತುಂತುರು ಹನಿಗಳಾಗಿ ಮಾರ್ಪಡಿಸಿ ಅತ್ತೆಯವರ ಮುಖದ ಸುಕ್ಕುಗಳ ಮೇಲೆಲ್ಲ ಅಲಂಕಾರ ಮಾಡಿದಳು.
ವೃದ್ಧೆ ವರಲಕ್ಷ್ಮಿ ಮಾಡಿದ ಒಂದೊಂದು ಮಾತುಗಳಿಂದ ಜರ್ಝರಿತಳಾಗಿಬಿಟ್ಟಳು.
ಇದು ಲಕ್ಷಾಗೇಹಕ್ಕಿದು, ವಿಶಮ ವಿಶಾನ್ನಕ್ಕಿಳಿದು; ನಾಡ ಜೂದಿಗಿಂದು, ಪಂಚಾಲಿ ಪ್ರಪಂಚಕಿದು ... ಎಂದು ಮೊದಲಾಗಿ ಭೀಮನು ಗದಾದಂಡದಿಂದ ದುರ್ಯೋಧನನ ಮೈಗೆ ತದಕುತ್ತ ಮೂದಲಿಸಿದನಲ್ಲ ಹಾಗೆ ...
ಸೊಸೆ ವಕ್ಷಸ್ಥಳದ ಮೇಲಿದ್ದ ಹಿಡಿತವನ್ನು ಬಿಗಿಗೊಳಿಸಿದರೆ, ಅತ್ತೆಯೂ ಎಗರಿ ಸೊಸೆಯ ಕಿವಿಗಳೆರಡನ್ನು ಎರಡೂ ಕೈಗಳಿಂದ ಕಪಿಮುಷ್ಟಿ ಚುರುಕುಗೊಳಿಸಿದಳು.
"ಅಯ್ಯಯ್ಯೋ ... ನಿನ್ನ ಗಂಡ ಕುಡಿದಿರೋವ್ರು ಅನ್ನೊ ಕಾರಣಕ್ಕಾಗಾದರೂ ಬಿಡಬಾರ್ದೇನೇ ... ತಾಯಿ ಎದೆ ಹಾಲು ಕುಡಿದೋಳಾಗಿದ್ರೆ ಹೀಗೆ ಹಿಡಿದುಕೊಳ್ತಿದ್ದೆ ಏನೇ? ... ಅದ್ಕೆ ನಿನ್ನ ಮೊಲೆಗಳು ಹಾಲಿಲ್ಲದೆ ಗೊಡ್ಡು ಬಿದ್ದಿರೋದು" ಮುದುಕಿ ನಾಲಿಗೆಯಿಂದ ಕುಟುಕಿತು.
ಕೆಣಕಿದಳು ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದ ವೋಲ್.
"ಅಯ್ಯಯ್ಯೋ ... ಚಿತೆ ಏರೋ ವಯಸ್ಸಿನಲ್ಲೂ ಹೇಗೆ ಮಾತಾಡ್ತಿದೆಯಲ್ಲಾ ಈ ಮುದಿ ರಾಕ್ಷಸಿ ... ನನ್ನ ಹಾಗೆ ಎರಡು ಹಡೆದುಕೊಂಡಿದ್ರೆ ಇನ್ನೆಷ್ಟು ಮಾತಾಡ್ತಿತ್ತೋ ... ಹೊಟ್ಟೇಲಿ ಎರಡು ಮಕ್ಕಳನ್ನು ಇಟ್ಟ ಆ ದೇವರು ಆ ದೇವರು ಮೊಲೇಲಿ ಎರಡು ಮಿಳ್ಳೆ ಹಾಲು ಇಡಲಿಲ್ಲವಲ್ಲಾ ... ಇದರಲ್ಲಿ ನನ್ನ ತಪ್ಪೇನಿದೆ ಮುದುಕಿ... ನನ್ನ ಕಿವಿಗಳನ್ನು ಒಳ್ಳೆ ಮಾತಿಂದ ಬಿಡ್ತೀಯೋ ಇಲ್ವೋ ..."
ನೀನು ಮೊದಲು ಬಿಡು ಅಂತ ಈಕೆ


೧೯೧

ನೀನು ಮೊದಲು ಬಿಡು ಅಂತ ಆಕೆ ...
ಯಾರೂ ಸೋಲಲೊಲ್ಲರು!
ಯಾರೂ ಗೆಲ್ಲಲೊಲ್ಲರು!
ಇಂಥ ವಿಷಮ ಪರಿಸ್ಥಿತಿಯಲ್ಲಿ ದೇವರು ಸಹಾಯ ಮಾಡದೆ ಇನ್ನಾರು ಸಹಾಯ ಮಾಡಲು ಸಾಧ್ಯ!
ಆರನೆ ಇಂದ್ರಿಯಗಳು ಜಾಗೃತಗೊಂಡು ಬೆಲ್ ಹೊಡೆಯುವುದಕ್ಕೂ ಮೊದಲೆ ಶಿವರಾಮಶಾಸ್ತ್ರಿ ತಲೆನೊಯ್ಯುವುದೆಂತಲೂ; ಅಶ್ವಥ್‌ನಾರಾಯಣ ಹೊಟ್ಟೆ ನೋಯುವುದೆಂಥಲೂ ನೆಪಒಡ್ಡಿ ಸಂಥೆಯೊಳಗೋಂದು ಮನೆಮಾಡಿ ಶಬ್ದಂಕ್ಕಂಜದೆ ಆಕಳಿಸುತ್ತ ಕೂತಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಚನ್ನವೀರಪ್ಪ ಮಾಸ್ತರರ ಪರಮಿಷನ್ ಗಿಟ್ಟಿಸಿಕೊಂಡು ತರಗೆಲೆಗಳೇ ಓಡುತ್ತಿರುವವೋ ಎಂಬಂತೆ ಓಡುತ್ತಬಂದು ಅಮ್ಮಾ; ಅಜ್ಜೀ ಎನ್ನುತ್ತ ಒಳಪ್ರವೇಶಿಸಲು ಅವರಿಬ್ಬರು ತಮ್ಮ ಪಟ್ಟು ಸಡಲಿಸಿ; ಉದಕದಲ್ಲಿ ಅಗ್ನಿ ಬಿಡುಗಡೆಗೊಳ್ಳುವಂತೆ; ಔಷಧದಿಂದ ವ್ಯಾಧಿ ಬಿಡುಗಡೆ ಗೊಳ್ಳುವಂತೆ ಮಂತ್ರ ಪ್ರಯೋಗದಿಂದ ವಿಷ ಬಿಡುಗಡೆಗೊಳ್ಳುವಂತೆ ಅವರಿಂದ ಇವರು, ಇವರಿಂದ ಅವರು ಬಿಡುಗಡೆಗೊಂಡು ರಾಮಾ; ಕೃಷ್ಣಾ ಅಂತ ಭವನ್ನಾಮ ಸ್ಮರಣೆ ಗೈಯುತ್ತ ಪಡಸಾಲೆಯ ಮೂಲೆಗಳನ್ನು ತಲಾ ಒಬ್ಬೊಬ್ಬರು ಆಕ್ರಮಿಸಿಕೊಂಡು ಕೂತುಕೊಳ್ಳಲು ಅದೇ ಪಡಸಾಲೆಯ ಇನ್ನೊಂದು ಮೂಲೆಯಲ್ಲಿ ನಿಘೂಡವಾಗಿ ವಾಸಿಸುತ್ತಿದ್ದ ಶಾಮಾಶಾಸ್ತ್ರಿಯ ಆತ್ಮವು ನಿಟ್ಟುಸಿರು ಬಿಟ್ಟಿತು. ಹಾಂಗೆ ಬಂದು ನೋಡಿಕ್ಕೊಂಡು ಹೀಂಗೆ ಹೋಗಿ ಬಿಡಬೇಕೆಂದು ಯೋಚಿಸಿ ಕೆಲ ಸಮಯದ ಹಿಂದೆ ಬಂದಿತ್ತು. ಬೆಳ್ಳಿ ತೆರೆಯ ಮೇಲಿನ ಘಟನೆಗಳನ್ನು ನೋಡಿ ಆನಂದಿಸಿ; ಉದ್ಗರಿಸಬಹುದಾಗಿತ್ತೇ ವಿನಃ ಚಲನಶೀಲ ಕಥೆಯೊಂದಿಗೆ ತಾದ್ಯಾತ್ಮ ಹೊಂದುವುದು ಸಾಧ್ಯವಿಲ್ಲವೆಂದು ಸತ್ತ ಮರು ಘಳಿಗೆಯೇ ಶಾಮಾಶಾಸ್ತ್ರಿಗೆ ಅರ್ಥವಾಗಿತ್ತು. ದೇಹ ತ್ಯಜಿಸಿದವರಿಗಿರುವ ಒಂದು ಅನುಕೂಲವೆಂದರೆ ಲೀಲಾಜಾಲವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು; ಯಾವುದೇ ರಹದಾರಿಯ ಹಂಗು ಇರುವುದಿಲ್ಲ. ವಿಸರ್ಜನಾಂಗಗಳಿಗೆ ಪೂರ್ಣ ಪ್ರಮಾಣದ ವಿಶ್ರಾಂತಿ, ಹೀಗಾಗಿ ಸೂಕ್ಷ್ಮ ಪ್ರವೃತ್ತಿಯ ಶಾಸ್ತ್ರಿ ನಗುತ್ತಿದ್ದ; ಮರುಗುತ್ತಿದ್ದ ... ಆದರೆ ಅವನ ಯಾವುದೇ ಸಂವೇದನೆಗೆ ಬದುಕಿರುವ ಯಾರೂ ಭಾಧ್ಯಸ್ಥರಾಗಿರಲಿಲ್ಲ ... ಆದರೆ ಆಸ್ತಿಗೆ ಸಂಭಂಧಿಸಿದಂತೆ ಸಂಭಂದ ಕಡಿದುಕೊಳ್ಳುವುದು ಸತ್ತನಂತರವೂ ಅಸಾಧ್ಯವೆಂಬುದಕ್ಕೆ ಅವನೇ ಸಾಕ್ಷಿ; ಯಾವ ಜೀವ ಇರದಿದ್ದರೂ ಪ್ರೇತದಂತೆ ಮನುಷ್ಯರ ಸಂಭಂದಗಳನ್ನು ವಿಘಟಿಸುವ; ಬೆಸೆಯುವ ಚರಾಸ್ತಿ ಎಂಬ ಸವರ್ಣ ಧೀರ್ಘ ಸಂದಿ ಬಗ್ಗೆ ಅವನು ಅಷ್ಟು ತಲೆ ಕೆಡೆಸಿಕೊಂಡುದುದಿಲ್ಲ. ಅವನನ್ನು ಕಾಡತೊಡಗಿದುದು ಸ್ಥಾವರಲಿಂಗೋಪಾದಿಯಲ್ಲಿ ಗ್ರಾಮದ ನಕ್ಷೆಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮನೆ ಎಂಬ ಸ್ಥಿರಾಸ್ತಿ - ‘ಈ ಮನೆಯಲ್ಲಿ ವಾಸಿಸುವುದು ಪೂರ್ಣಾವಧಿ ಬದುಕನು ಬದುಕುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ ಕಣಯ್ಯಾ’ ಎಂದು ಪರಮೇಶ್ವರ ಶಾಸ್ತ್ರಿಗಳು ತಮ್ಮ ಬದುಕಿನ ಎಂಬತ್ನಾಲ್ಕು ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾನವ ಲೋಕವನ್ನು ಉದ್ಧೇಶಿಸಿ ಮಾತನಾಡುತ್ತಾ ಅಪ್ಪಣೆ ಕೊಡಿಸಿದ್ದರು. ಅವರೇ ಇಂಥವರು ನೂರಾರು ವಸಂತಗಳನ್ನು ಕಂಡರೆ ಮನುಕಲವನ್ನು ಕಾಪಾಡುವವರ್ಯಾರು? ಎಂಬ ಲೆಕ್ಕಾಚಾರದಿಂದ ಮೃತ್ಯು ಅವರ ಹೃದಯದ ಬಾಗಿಲು ತಟ್ಟಿತ್ತು. ಅವರ ಮಾತನ್ನು ಸುಳ್ಳು


೧೯೨

ಮಾಡಲೆಂದಲ್ಲವೆ ತಾನು ಅಲ್ಪಾಯುಷಿಪಟ್ಟವನ್ನೇರಿದ್ದು? ಪ್ರತಿ ಕ್ಷಣ ಮೃತ್ಯುವನ್ನು ಆಲಂಗಿಸಿದ್ದು. ಕಾಡಿ ಬೇಡಿ ದಿನಕ್ಕೊಂದು ಚೂರು ಚೂರು ಸಾಯತೊಡಗಿದ್ದು. ಬ್ರಾಹ್ಮಣ್ಯವನ್ನು ತಾನು ಇಷ್ಟೊಂದು ದ್ವೇಶಿಸಬಹುದೆಂದು ಹತ್ತಿರದವರ್ಯಾರೂ ಅಂದುಕೊಂಡಿರಲಿಲ್ಲ. ಇಂಥ ಕಥೆ ಕಾದಂಬರಿಗಳನ್ನು ಓದಬೇಡಾಂತ ನಾರಾಯಣ ಪ್ರಾಗ್ ಜೋತಿಷಿ ಕೈಲಿದ್ದ ಸಂಸ್ಕಾರವನ್ನು ಕಿತ್ತೆಸೆದದ್ದುಂಟು. ‘ಬ್ರಾಹ್ಮಣರು ಬರೆದಿರೋದ್ನ ಓದದಿದ್ರೆ ಹೇಗಯ್ಯಾ’ ಎಂದು ತಾನು ಸಮರ್ಥಿಸುದ್ದುಂಟು. "ಇಂಗ್ಲೀಷ್ ಕಲ್ತ ಕೂಡ್ಲೆ ಬ್ರಾಹ್ಮಣ್ಯ ಬಿಡುತ್ತಾರೆಂಬುದಕ್ಕೆ ಅದ್ನ ಬರೆದವರೇ ಸಾಕ್ಷಿ ಕಣಪ್ಪ. ಕಿರಸ್ತಾನರ ಹುಡುಗೀನ ಮದುವೆಯಾಗಿ ಕಟ್ಟಾ ಸಂಪ್ರದಾಯಸ್ತರ ವಿರೋಧ ಕಟ್ಟಿಕೊಂಡ ... " ಹೀಗೆ ನುಡಿದ ಪ್ರಾಗ್ಜೊತಿಷಿ ಅವರ ದೂರದ ಸಂಬಂಧಿಯಂತೆ ತಮ್ಮವರು ಎಂಬ ಅಭಿಮಾನವಾದರೂ ಇರುವುದು ಬೇಡವೆ? ಇದರಿಂದ ತನಗೆ ಸಿಟ್ತು ಬಂದಿತ್ತು. ‘ಎಂಥ ಮಾತಾಡ್ತಿದೀ ನಾರಾಯಣ? ... ಒಬ್ಬ ಲೇಖಕನ ಸಂವೇದನಾ ಶೀಲತೆ ಒಬ್ಬ ಲೇಖಕ ಓಡುಗನಾದ ಮಾತ್ರ ಅರ್ಥವಾಗುತ್ತದೆ ಎಂಬುದಕ್ಕೆ ನಾನೇ ನಿದರ್ಶನ ನೋಡು. ಸಂಸ್ಕಾರ ಓದದೆ ಮಾತಾಡ್ತಿದೀಯಲ್ಲ! ಕಾದಂಬರಿಯಲ್ಲಿರೋ ಕ್ರಾಂತಿಕಾರಿ ನಾರಾಯಣಪ್ಪನ ಹೆಸರಿಟ್ಟುಕೊಂಡು ಹೀಗೆ ಮಾತಾಡೋದು ಯಾವ ನ್ಯಾಯವಪ್ಪಾ ... ಕಟ್ಟಾ ಸಂಪ್ರಯಸ್ಥರೂ; ವಿವೇಕಿಗಳೂ ಆದ ಪ್ರಾಣೇಶಾಚಾರ್ಯರು ಶೂದ್ರ ಹೆಂಗಸು ಚಂದ್ರಿಯನ್ನು ಸಂಭೋಗಿಸಿ ಸನಾತನತೆಯ ಲಕ್ಷ್ಮಣ ರೇಖೆ ದಾಟಿದ್ದು ಕ್ರಾಂತಿ ಅಲ್ಲವೇನು?" ಎಂದು ತಾನು ಸ್ದ್ವೋಪಜ್ಞತೆಯನ್ನು ಪ್ರದರ್ಶಿಸುದ್ದುಂಟು. ಅದಕ್ಕೆ ನಾರಾಯಣ ಅದ್ಭುತನಗೆ ನಕ್ಕು " ಆ ನಿಮ್ಮ ಪ್ರಾಣೇಚಾರ್ಯರಿಗೆ ತಮ್ಮ ಸಂಭೋಗ ತೀಟೆ ತೀರಿಸಿಕೊಳ್ಳಲು ಶೂದ್ರ ಮಹಿಳೆ ಚಂದ್ರಿಕೆಯೇ ಬೇಕಾಯ್ತೇನು?" ಎಂದಾಡಿದ್ದುಂಟು. ಇಂಥ ಮಾತಾಡುತ್ತಿದ್ದ ಪ್ರಾಗ್ಜೋತಿಷಿ ತುಂಬ ಬುದ್ಧಿವಂಥನಿದ್ದ. ಸಮರ್ಥ ವೈದ್ಯ ಶವ ಪ್ರರೀಕ್ಷೆ ಮಾಡುವ ರೀತಿಯಲ್ಲಿ ಒಂದು ಕೃತಿಯನ್ನು ಓದಿ ಅರಗೈಸಿಕೊಳ್ಳುತ್ತಿದ್ದ. ಬಹುತೇಕ ಸಂದರ್ಭದಲ್ಲಿ ಅವನು ತುಸು ಹೆಚ್ಚು ಮಾತಾಡುತ್ತಿದ್ದುದು ತನ್ನೊಂದಿಗೆ ಮಾತ್ರ. ಅವನ ಅಂತರಂಗದಲ್ಲಿರುತ್ತಿದ್ದ ವೈಚಾರಿಕ ಕೊಂಪೆಯನ್ನು ಸಮಯ ಸಂದರ್ಭ ನೋಡಿ ಲೂಟಿ ಮಾಡುತ್ತಿದ್ದುದೆಂದರೆ ತಾನು ಮಾತ್ರ. ಅವನ ವರ್ತನೆ ಕೆಲವೊಮ್ಮೆ ತನಗೆ ಇರುಸುಮುರುಸಾಗುತ್ತಿದ್ದುದುಂಟು. ಎಲಾ? ಇವನು ಎಲ್ಲ ಬಿಟ್ಟು ಬಿಟ್ಟಿದ್ದಾನಲ್ಲವೆಂದು ದಿಗ್ಭ್ರಮೆಗೊಳ್ಳುತ್ತಿದ್ದುದುಂಟು. ಅವನನ್ನು ಹತ್ತಿರವಿಟ್ಟುಕೊಳ್ಳಲಾರದೆ ದೂರವಿಡಲಾರದೆ ಒದ್ದಾಡುತ್ತಿದ್ದ ಸಂದರ್ಭದಲ್ಲಿಯೇ ಅವನು ಯಾರನ್ನೋ ರಕ್ಷಿಸಲಿಕ್ಕೆ ಹೋಗಿ ಅವರನ್ನು ಬದುಕಿಸಿ ತಾನು ಸತ್ತಿದ್ದ. ಸಾಯುವ ಒಂದು ಕ್ಷಣ ಹಿಂದೆ ಮೈ ಎಲ್ಲ ಸುಟ್ಟು ಕರಟಿದ್ದರೂ ಅವನು ನಗುನಗುತ್ತ ಮಾತಾಡಿಸಿದ್ದ. ಮತಾವ ಕೃತಿ ಓದಿದೆಯೋ? ಎಂದು ಕೇಳಿದ್ದ. ಕೃತಿಯ ಉದ್ದೇಶಕ್ಕೆ ಓದುಗನನ್ನು ಬಲಿ ತೆಗುದುಕೊಳ್ಳುವ ಲೇಖಕನ ಬಗ್ಗೆ ಎಚ್ಚರದಿಂದಿರಬೇಕೆಂದು ತೊದಲಿದ್ದ. ವೈಯಕ್ತಿಕ ಬದುಕನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕೆ ಕೃತಿಯ ನೆರವು ಪಡೆಯುವುದು ಯಾಕೆ? ಎಂದು ಪ್ರಶ್ನಿಸಿದ್ದ. ನಿನ್ನನ್ನು ನೀನು ಅರ್ಥಮಾಡಿಕೋಽಽ ಸಮಾಜದಲ್ಲಿ ; ಕುಟುಂಬದಲ್ಲಿ ನಿನ್ನ ಪಾತ್ರ ಅರ್ಥಮಾಡಿಕೋ ಎಂದು ಹೇಳುತ್ತ ಅವಧೂತನಂತೆ ಕಣ್ಣು ಮುಚ್ಚಿದ್ದ. ಅವನ ಸಾವು ತನ್ನನ್ನು ಕಾಡಿದ್ದು ನಿಜ, ಅವನ ಮಾತುಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗದೆ ತಾನು ಒದ್ದಾಡಿದ್ದು ಸತ್ಯ. ಕುಟುಂಬದಲ್ಲಾಗಲೀ; ಸಮಾಜದಲ್ಲಾಗಲೀ ತನ್ನ ಅಸ್ತಿತ್ವದ ದೌರ್ಬಲ್ಯದ ಬಗ್ಗೆ ಯೋಚಿಸುತ್ತ ಕಂಗಾಲಾಗಿದ್ದು ನಿಜ. ತನ್ನನ್ನು ತಾನು ತನ್ನೊಳಗೆ ಮರೆಮಾಚಿಕೊಳ್ಳುವುದಕ್ಕಾಗದೆ ತಾನು ಕಲಿಬಾರದಿದ್ದನ್ನೆಲ್ಲ ಕಲಿತದ್ದು ನಿಜ, ಘನಘೋರ್ ನರಕ ಯಾತನೆಯ ಸುಳಿಗೆ ಸಿಲುಕಿ ಪ್ರಜ್ಞೆ


೧೯೩

ಕಳೆದುಕೊಂಡು ಹಳಹಳಿಸುತ್ತ ಮಲಗಿದ್ದ ತಾನು ಸತ್ತದ್ದೇ ತಿಳಿದಿರಲಿಲ್ಲ, ಬಹುದಿನಗಳವರೆಗೆ ... ತನ್ನವರೆಂಬುವವರ ಆಳ ಎತ್ತರಗಳನ್ನು ಅಳೆದು ಮೂಕ ವಿಸ್ಮಿತಗೊಳಿಸುವುದಕ್ಕೆ ಸಾದ್ಯವಾದದ್ದು ಪಾಳುಗೋಡೆಯಂಥ ದೇಹವನ್ನು ಸುಟ್ಟು ಸುಡುಗಾಡಿಗೆ ಕಳಿಸಿದ ನಂತರವೇ. ಕೆಟ್ಟದಾಗಿ ಬಾಲ್ಯ ಕಳೆಯುತ್ತಿರುವ ತನ್ನ ಮುದ್ದು ಮಕ್ಕಳ ಮುಖದ ವಿಷಣ್ಣತೆಯನ್ನು ನೋಡಿದಾಗ, ಗತಕಾಲದ ಒಂದೊಂದು ನೆನಪಿನ ಗಾಢ ಆಸರೆಯೊಂದಿಗೆ ಬದುಕುತ್ತಿರುವ ತನ್ನ ವೃದ್ಧ ಮಾತೆಯನ್ನು ನೋಡಿದಾಗ; ಪಾತಿವ್ರತದ ಮುಖವಾಡದೊಳಗೆ ಸದಾ ಅವಿತುಕೊಂಡಿದ್ದು ವಿಲವಿಲನೆ ಒದ್ದಾಡಿದ ಹೆಂಡತಿಯನ್ನು ನೋಡಿದಾಗಲೆಲ್ಲ ದುಃಖ ಧುಮ್ಮಿಕ್ಕಿ ಬರುವುದು. ತುಸು ಸ್ವಾಂತನ ತರುವ ನೆನಪೆಂದರೆ ತಂಬಾಕಿಯ ಉಂಡೆಯನ್ನು ದವಡೆಯೊಳಗೆ ಆತ್ಮಲಿಂಗೋಪಾದಿಯಲ್ಲಿ ಇಟ್ಟುಕೊಂಡು ಭೀಕರ ವಾಸ್ತವದ ಮೇಲೆ ಪದ್ಮಾಸನ ಹಾಕಿಕೊಂಡಿದ್ದು, ತನ್ನನ್ನು ಹೆತ್ತ ಮಗನಿಗಿಂತ ಹೆಚ್ಚಾಗಿ; ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಾಗಿ ಅನುಗಾಲ ನೋಡಿಕೊಂಡ ಅನಸೂಯಾಳದ್ದು. ಅವಳ ಋಣವನ್ನು ಪೆಂಡೆ ಪೆಂಡೆ ಕಟ್ಟಿಕೊಂಡೇ ದೇಹದಿಂದ ನುಣುಚಿಕೊಂಡೆನಲ್ಲ ತಾನು!

"ಶಾಸ್ತ್ರಿ ... ಅಳಬ್ಯಾಡೋ ಆ ಯಮ ಎಂಭೋನು ನಿನ್ನ ಪಿರಾಣನ ಅದೆಂಗ ಹೊಯ್ತಾನ ನಾನೊಂದು ಕೈ ನೋಡ್ಕಂತೀನಿ" ಎಂದು ಆಕೆ ತನ್ನ ತೊಡೆ ಮೇಲೆ ತಲೆ ಇರಿಸಿಕೊಂಡು ಮಾತ್ರೆಗಳನ್ನು ನುಂಗಿಸುತ್ತಿದ್ದಳು. ಔಷದವನ್ನು ಕುಡಿಸುತ್ತಿದ್ದಳು. ತನ್ನ ಜೀವಚ್ಛವವನ್ನು ಬಚ್ಚಲಿಗೆ ಎತ್ತೊಯ್ದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಬಟ್ಟೆ ಬರೆ ತೊಡಿಸಿ; ಮಂಚದ ಮೇಲೆ ಮಲಗಿಸಿ ಓದಲು ಪುಸ್ತಕಗಳನ್ನು; ಪತ್ರಿಕೆಗಳನ್ನು ಪಕ್ಕದಲ್ಲಿಡುತ್ತಿದ್ದಳು. ತಾನು ಅಂಥ ಅವಸ್ಥೆಯಲ್ಲಿದ್ದಾಗ ಕುಂ. ವೀರಭದ್ರಪ್ಪನೂ ಬಂದು ನೋಡಿಕೊಂಡು ಹೋಗಿದ್ದುದಿಲ್ಲ; ಎರಡು ಗುಟುಕು ಎಳೆನೀರು ಕುಡಿಸಿದ್ದುದಲ್ಲ. ಶವ ಸಂಸ್ಕಾರದ ಬಗ್ಗೆ ಮಾತಾಡಿದ್ದ. ಪ್ರಪಂಚದ ವಿಭೂತಿ ಪುರುಷರು ಹೇಗೆ ಹೇಗೆ ಸತ್ತರು? ಹೇಗೆ ಹೇಗೆ ಶವ ಸಂಸ್ಕಾರ ಮಾಡಿಸಿಕೊಂಡು ಇತಿಹಾಸದಲ್ಲಿ ಅಜರಾಮರರಾದರು ಎಂದು ವರ್ಣಿಸಿದ್ದ. ನಮ್ಮ ದೇಶದಲ್ಲಿ ಸಹಜ ಮರಣಗಳು ಬೆಲೆ ಕಳೆದುಕೊಂಡಿವೆ ಎಂದೂ ದುರ್ಮರಣಕ್ಕೀಡಾದವರು ತಮ್ಮ ಜನಪ್ರಿಯತೆಯನ್ನು ಮುಂದುವರಿಸಿಕೊಂಡು ಬರುತ್ತಿರುವರೆಂದೂ; ಸಾಯುವ ಕ್ಷಣದಲ್ಲಿ ಅಲೌಕಿಕವಾದ ಥ್ರಿಲ್ ಅನುಭವಿಸುತ್ತಾರೆ ಮತ್ತು ವಿತರಿಸುತ್ತಾರೆಂದೂ ವಿಚಿತ್ರ ತರ್ಕ ಮಾಡಿದ್ದ. ನಾನು ಬರೆಯಬಹುದಾದ ಕಾದಂಬರಿ, ನೀನು ಸಾಯುವ ಕ್ರಮವನ್ನವಲಂಬಿಸಿರುವುದೆಂದು ಹೇಳಿದ್ದ. ಅವನು ಹಾಗೆ ಮಾತಾಡದಿದ್ದಲ್ಲಿ ತಾನಿನ್ನು ಒಂದಿಷ್ಟು ಕಾಲ ಬದುಕುತ್ತಿದ್ದನೇನೋ! ಅವನಿಂದ ಕಾದಂಬರಿ ಬರೆಯಿಸಿಕೊಳ್ಳಬೇಕೆಂದೇನೋ ತಾನು ಆ ಪರಿ ಸತ್ತಿದ್ದು.

ಆತ್ಮವೂ ನಿಟ್ಟುಸಿರಿಟ್ಟಿತು. ಸುಂಟರ ಗಾಳಿಯನ್ನು ಹುಟ್ಟು ಹಾಕುವಂತಿತ್ತಾ ನಿಟ್ಟುಸಿರು. ಅದಕ್ಕೇ ಇರಬೇಕು ನಾನು ಬರೆಯುತ್ತಿದ್ದ ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಹಾಳೆಗಳು ಇದ್ದಕ್ಕಿದ್ದಂತೆ ಚಲ್ಲಾಪಿಲ್ಲಿಯಾಗುತ್ತಿದ್ದುದು. ಚಲಿಸದ ಫ್ಯಾನನ್ನೋ! ಮುಚ್ಚಿದ ಕಿಟಕಿ; ಬಾಗಿಲುಗಳನ್ನೋ; ಹೆಂಡತಿಯ ಬಿಸಿಯುಸಿರನ್ನೋ ಬಯ್ಯುತ್ತಿದ್ದೆ. ಯಾವ ಚಿಮುಟಿಗೂ ಅವನ ವ್ಯಕ್ತಿತ್ವ ಸಿಕ್ಕದಾಗಿತ್ತು. ಅಕ್ಷರದ ಅಭಯಹಸ್ತಕ್ಕೆ ನಿಲುಕದೆ ದೂರ ಬಹುದೂರ ಸರಿದುಬಿಡುತ್ತಿದ್ದ ಮೃಗಜಲದಂಥ ಅವನ ಸತ್ತ ನಂತರವೇ ಅರ್ಥವಾದದ್ದು. ಜೇಡರ ಬಲೆಯಂಥ ಅವನ ನೆನಪಿನಿಂದ ನಾನು ಬಿಡುಗಡೆಯಾಗಬೇಕಾದರೆ ಅವನ ಕರುಳಿಗೆ ಸಂಬಂಧಿಸಿದ ಎಲ್ಲರೂ ನನ್ನ ಕಣ್ಣ


೧೯೪

ಪರಿಧಿಯಿಂದ ಬಹು ದೂರ ಹೋಗಿಬಿಡಬೇಕು, ಅಪ್ಪ ಅವರ ಚರಾಸ್ತಿ ಕೊಳ್ಳುವುದರ ಮೂಲಕ ಅವರವರ ದಾರಿ ಹಿಡಿಯಬೇಕು. ಕಣ್ಣಿಗೆ ಕಂಡಿದ್ದೆಲ್ಲ ತನ್ನದಾಗಬೇಕೆಂಬ ಹಠದ ಅಪ್ಪ ನನ್ನ ಆಲೋಚನೆಯ ಚದುರಂಗದಾಟಕ್ಕೆ ದಾಳವಾಗಿದ್ದ. ಆ ಅದ್ಭುತ ದಾಳದ ಚಲನೆಗೆ ನನ್ನ ಶಕ್ತಿಯ ಅಗತ್ಯವಿರಲಿಲ್ಲ. ತನ್ನ ಪಾಡಿಗೆ ತಾನು ನಿರಂತರವಾಗಿ; ನಿರ್ವಿರಾಮವಾಗಿ ಚಲಿಸುವ ದಾಳ ಅದಾಗಿತ್ತು. ರಕ್ತ ಹಂಚಿಕೊಂಡಿರುಚ ನೆಪದಲ್ಲಿ ಅದರೊಂಡಿಗೆ ನಾನೂ ಕದನ ಕುತೋಹಲತನದಿಂದ ನಾನೂ ಚಲಿಸುತ್ತಿದ್ದೆ. ಜಮೀನ್ದಾರಿಕೆ ಗತ್ತು ಠೇಂಕಾರಗಳನ್ನು ಮತ್ತದರ ವರಸೆಗಳನ್ನು ಕಲಿಸುವುದಕ್ಕಾಗಿಯೇ ಅಪ್ಪ ಸದಾ ನನ್ನನ್ನು ತನ್ನ ಹಿಂದಿಟ್ಟುಕೊಂಡಿದ್ದ. ಈಶ್ವರನ ಮುಂದೆ ಬಸವನಂತೆ; ಮಾಕಾಂಬಳಮ್ಮನ ಹಿಂದಿನ ಬನ್ನಿ ಮರದಂತೆ; ಚಹದಂಗಡಿ ಮುಂದಿನ ಬೀಡಿ ಅಂಗಡಿಯಂತೆ ಒಮ್ಮೊಮ್ಮೆ ನನ್ನ ಅಂತರಂಗ ಮಸೀದಿಯಂತೆ ಬಿಕೋ ಎನ್ನುತ್ತಿತ್ತು. ಬಿಕೋತನವನ್ನು ಧ್ಯಾನಮುದ್ರೆಯಿಂದ ಪರಿಗ್ರಹಗೊಳಿಸುತ್ತಿದ್ದೆ.

ಹಗಲೆಲ್ಲ ಹೊಲ ಮೇರೆಗಳಲ್ಲಿ; ತಿಟ್ಟೆ ತಗ್ಗುಗಳಲ್ಲಿ ತಿರುಗಾಡಿ ಹೊಟ್ಟೆ ತುಂಬಿಸಿಕೊಂಡು ತಮ್ತಮ್ಮ ಕೊಟ್ಟಿಗೆಗಳಿಗೆ ಮರಳುವಾಗ ಎಬ್ಬಿಸಿದ ಧೂಳು ಆ ಸಂಜೆಯ ಹೊಂಬೆಳಕಲ್ಲಿ ಕಾವ್ಯಮಯವಾಗಿತ್ತು. ಎದ್ದಿದ್ದ ಅದು ನಿಧಾನವಾಗಿ ನೆಲವನ್ನು ತಬ್ಬಿಕೊಳ್ಳುವ ಕ್ಷಣಾದಲ್ಲಿ ಅಪ್ಪ ಅವರ ಮನೆಗೆ ಹೊರಡುವಾಗ ಸಂಗಡ ನನ್ನನ್ನೂ ಕರೆದೊಯ್ದು - ಅದಕ್ಕೂ ಮೊದಲು ನಿಂಗಮ್ಮಜ್ಜಿ "ಅಲಲಲಾ" ಅಂತು. ಆಗ್ರಾಕ್ಕೆ ಹೋಗಿ ಗೂಬೆ ತಂದಂಗಾಯ್ತಲ್ಲಾ ಅಂತು. ಇದೆಲ್ಲ ನೋಡಾಕೆ ಯಾಕೆ ಬೊದಕಿರಬೇಕಪ್ಪಾ ... ಎಂದು ನಿಟ್ಟುಸಿರುಬಿಟ್ಟಿತು. ಇದನ್ನೆಲ್ಲ ಲೆಕ್ಕಿಸದೆ ನಾವು ಅವರ ಮನೆಗೆ ಹೋದೆವು. ಪ್ರಾಚೀನ ಸ್ಮಾರಕದಂತಿದ್ದ ಆ ಮನೆಯನ್ನು ಪ್ರವೇಶಿಸಿದ್ದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು. ನಾವು ಹೋಗುತ್ತಲೆ ಅಲುಮೇಲಮ್ಮಜ್ಜಿ "ರಾಮ ರಾಮ" ಅಂತ ಮರೆಗೆ ಸರಿದುಕೊಂಡರೆ ವರಲಕ್ಷಮ್ಮ "ಶಿವ ಶಿವ" ಆಂತ ಹೊರಗೆ ಕಾಣಿಸಿಕೊಂಡಳು. ಗೌರವದಿಂದ ಮಾತಾಡಿಸಿ ಕೂಡ್ರಲು ಪೀಠ ಹಾಕಿದಳು. ನಾವು ಕೂತುಕೊಂಡ ನಂತರ ಕಾಫಿ ತಂದುಕೊಟ್ಟಳು. ಹತ್ತಿರ ಬಂದ ಪರಮೇಶ ಅಶ್ವಥ್ ನಾರಾಯಣರ ಮೈದಡವಿದ ಅಪ್ಪ, ಬಾಗಿಲ ಪರದೆಯ ಮರೆಯಲ್ಲಿ ಆಕೆ ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡತೊಡಗಿದಳು. ಪುರುಷ ಪ್ರಧಾನ ಸಮಾಜವ್ಯವಸ್ಥೆಯ ವಿರುದ್ಧ ನೊಂದ ಮಹಿಳೆ ನಿರ್ಭಿಡೆಯಿಂದ ಮಾತಾಡುತ್ತಿರುವಂತೆ ಭಾಸವಾಯಿತು. ಸೊಸೆಯಾಡುತ್ತಿದ್ದುದನ್ನೆಲ್ಲ ಮರೆಯಲ್ಲಿ ಅಡಗಿದ್ದ ಮುದುಕಿ ಗುಟ್ಟಾಗಿ ಕೇಳಿಸಿಕೊಳ್ಳುತ್ತಿದ್ದುದು ಅದು ಪ್ರ್ತಿಕ್ರಿಯಿಸಿದಾಗ ಬಯಲಿಗೆ ಬಿತ್ತು.

‘ನಮೋ ಸ್ವ್ತನಂತಾಯ ಸಹಸ್ರ ಮೂರ್ತಯೆ’ ಅಂತ ಒಂದು ನಿಟ್ಟುಸಿರು ಬಿಟ್ಟಿತು. ಸಹಸ್ರ ಪಾದಾಕ್ಷಿ ಶಿರೋರು ಬಾಹುವೇ ಅಂತ ಗಂಟಲು ಸರಿಪಡಿಸಿಕೊಂಡಿತು. ಶ್ರೀ ಸಹಸ್ರ ಕೋಟಿ ಯುಗ ಧಾರಿಣೀ ನಮಃ ಅಂತ ಮಾತು ಆರಂಭಿಸಿ ಬಿಟ್ಟಿತು.
"ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ವೋ ಹಾಲಣ್ಣನವ್ರೇ ... ಈ ನರಜನ್ಮದಲ್ಲಿ ಇದನ್ನೆಲ್ಲ ಅನುಭವಿಸೋಕೆ! ನೀವು ನೋಡದೆ ಇರೋದೇನಿದೆ? ಅವರನೂ ಕಳೆದುಕೊಂಡೆ ಇದ್ದೊಬ್ಬ ಮಗನನ್ನೂ ಕಳಕೊಂಡೆ ... ಮೊಮ್ಮಕ್ಕಳನ್ನು ಆಡಿಸೋ ಭಾಗ್ಯನೂ ಕಳಕೊಂಡು ಹೇಗಪ್ಪಾ ಬದುಕೋದು"
ಅತ್ತೆಯಾಡಿದ ಮಾತು ಕೇಳಿ ಸೊಸೆ ತನ್ನ ಮುಖದಲ್ಲಿ ಪುಜಾಂ ದ್ರವಿಣಂ ಬ್ರಹ್ಮವರ್ಚಸ್ಸು ಆವಹಿಸಿಕೊಂಡು,


೧೯೫

"ಹಾಲಣ್ಣಾ, ಮಾವನವರು ಬೇರೆ ಅಲ್ಲ ನೀವು ಬೇರೆ ಅಲ್ಲ ಅಂತ ಒಂದು ಮಾತು ಹೇಳ್ತೀನಿ ... ನಾನು ಪಟ್ಟ ಕಷ್ಟದಲ್ಲಿ ಇವರು ತಿಲ ಮಾತ್ರ ಕಷ್ಟಪಟ್ಟಿರುವರೇನು? ದೈನಾತಿ ದೈನ್ಯದಿಂದ ಬದುಕಿದ್ದನ್ನು ನೀವೇ ಕಣ್ಣಾರೆ ನೋಡಿರುವಿರಿ ... ಅವರು ಮಾಡಿದ ಕರ್ಮಕ್ಕೆ ನಮ್ಮನ್ನೆಲ್ಲ ಬಲಿ ಮಾಡಿ ಅವರು ಹೊರಟು ಹೋದರು. ಈ ಪುಟಗೋಸಿ ಮನೆ ಇರೋ ನೆಪಕ್ಕೆ ಇಲ್ಲೆ ಇದ್ದುಕೊಂಡು ಅದ್‌ಹೇಗ್ರಿ ಮಕ್ಕಳನ್ನು ಜೋಪಾನ ಮಾಡ್ಲಿ ... ನಾನೇನು ಇವರನ್ನು ಕೈಬಿಡ್ತೀನಾ ... ಅತ್ತೆ ಅಂದ್ರೂ ಇವರೇ ... ತಾಯಿ ಅಂದ್ರೂ ಇವರೇ ಅಲ್ವಾ?"
"ನನ್ನ ತಾಯಿ ಅಂತ ತಿಳಿದುಕೊಂಡವಳಾಗಿದ್ರೆ ಗಂಡ ಸತ್ತ ಒಂದು ವಾರಕ್ಕೆ ಕೋರ್ಟು ಕಛೇರಿ ಅಂಥ ಅಲೆದು ಈ ಮನೇ ಮಠನೆಲ್ಲ ನಿನ್ನ ಹೆಸರಿಗೆ ಮಾಡಿಸ್ಕೊಳ್ಳುತ್ತಿದ್ದೇ ಏನು?"
"ನಾನು ಧೈರ್ಯದಿಂದ ಅಡ್ಡಾಡಿ ಮಾಡಿಸಿಕೊಳ್ಳದಿದ್ದಲ್ಲಿ ಇರೋ ಒಂದು ಮನೆ ಆ ದುಗ್ಗಾಣಿ ಸೂಳೆಯ ಪಾಲಾಗ್ತಿತ್ತು ... ನಾನೂ ನನ್ನ ಮಕ್ಕಳೂ ಕೆರೆನೋ ಭಾವೀನೋ ನೋಡಿಕೊಳ್ಳಬೇಕಿತ್ತು" ಎಂದು ವರಲಕ್ಷ್ಮಮ್ಮ ಸೆರಗನ್ನು ಮೈತುಂಬ ಹೊದ್ದು ಎರಡು ಕಣ್ಣುಗಳನ್ನು ಮಾತ್ರ ಪಿಳಿಪಿಳಿ ಬಿಡತೊಡಗಿದಳು.
ಅತ್ತೆ ಸೊಸೆಯರಿಬ್ಬರಾಡಿದ ಮಾತುಗಳನ್ನು ತೂಗಿ ನೋಡಿದೆ. ಸಮರ್ಥನೀಯವಾಗಿದ್ದವು. ಎಲ್ಲ ಆಸರೆಗಳಿಂದ ವಂಚಿತಗೊಳ್ಳುತ್ತ್ತಿರುವ ಅಸಹಾಯಕತೆಯಿಂದ ಅಲುಮೇಲಮ್ಮಜ್ಜಿ ವಿಲವಿಲನೆ ಒದ್ದಾಡುತ್ತಿದ್ದಳು. ಎಲ್ಲ ಸಂಭಂಧಗಳನ್ನು ಕಡಿದುಕೊಂಡು ಕರುಳ ಕುಡಿಗಳೊಂದಿಗೆ ಬದುಕನ್ನು ಜೋಡಿಸುವ ಒತ್ತಡದಿಂದ ವರಲಕ್ಷ್ಮಮ್ಮ ವೈಧವ್ಯ ಪ್ರಾಪ್ತವಾದ ಮರುಕ್ಷಣದಿಂದ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಕಠೋರವಾಗಿ ವರ್ತಿಸುತ್ತಿದ್ದಳು.
ಬೆಣ್ಣೆ ತೂಗುವ ಪ್ರಾಣಿ ಬುದ್ಧಿಯ ಜಾಟಗೆರೆ ಸತ್ಯಪ್ಪನ ಸಹಾಯ ಹಸ್ತ ಯಾಚಿಸಿದ್ದು ಈಕೆ ಮಾಡಿದ ದೊಡ್ಡ ತಪ್ಪು. ಜಿಡ್ಡು ಹಸ್ತದ ಸತ್ಯಪ ಎಂಥವನೆಂಬುದು ಸಮಸ್ತ ಊರಿಗೆಲ್ಲ ಗೊತ್ತಿರುವ ಸಂಗತಿ. ಮಹಾ ದೈವಾಂಶ ಸಂಭೂತನಂತೆ ಸೂರ್ಯೋದಯಕ್ಕೆ ಪೂರ್ವದಿಂದಲೇ ವರ್ತಿಸುವುದಕ್ಕೆ ಶುರು ಮಾಡುವ ಆ ಸಜ್ಜನ ಮೈಬಗ್ಗಿಸಿ ಎಂದೂ ದುಡಿದವನಲ್ಲ. ಈ ಕಡೆಯ ಕಸವನ್ನು ಆ ಕಡೆ ಹಾಕಿದವನಲ್ಲ. ಆದರೂ ಎಲ್ಲರಿಗಿಂತ ಸುಖವಾಗಿರುವ ನರಮಾನ್ನವನೆಂದರೆ ಅವನೊಬ್ಬನೆ.
‘ಆಗಿರೊದಾದರೂ ಏನು? ಸ್ವಲ್ಪ ತಡಿ’ ಅಂತ ಓಣಿಯ ಕೆಲವರು ಆಕೆಯನ್ನು ಅವನ ಬಳಿಗೆ ಹೋಗದಂತೆ ತಡೆಯಲೆತ್ನಿಸಿದರು. ನಿಷ್ಟುರವಾದಿ ವರಲಕ್ಶ್ಮಿ ಯಾರ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ, ಯಾವ ಗಾಳಿಗೂ; ಯಾವ ಚಳಿಗೂ ಹೆದರದೆ ನೀರಿನಲ್ಲಿ ಮುಳುಗಿದವಳಂತೆ ವರ್ತಿಸಿದಳು. ಇವರೂ ಸಹಾಯ ಮಾಡೊಲ್ಲ! ಮಾಡಬೇಕೆಂದೋರನ್ನೂ ಬಿಡೊದಿಲ್ಲ ಎಂದು ಗೊಣಗಿದಳು. ಅವನು ಮಹಾ ಕಚ್ಚೆ ಹರುಕ ... ಅದ್ಯೇನೆ ಅವನು ಆ ಹೆಸರಿಟ್ಟುಕೊಂಡಿರೋದು ಎಂದೊಬ್ಬರಾಡಿದ ಮಾತು ಕೇಳಿದ ಮರು ದಿನವೇ ತನ್ನ ದೂರದ ಸಂಭಂದಿ ವೆಂಕಟರಮಣಪ್ಪನೊಂದಿಗೆ ಶೃಂಗೇರಿಗೆ ಹೋಗಿ ಕೇಶವಿಹೀನಳಾಗಿ ಊರಿಗೆ ಮರಳಿದ್ದಳು. ನಿಲುಗನ್ನಡಿ ಮುಂದೆ ಕಾಲು ತಾಸು ನಿಂತುಕೊಂಡು ತನ್ನೀ ರೂಪ ಯಾವ ಗಂಡಸಿನಲ್ಲೂ ಕಾಮವಾಂಛೆಯನ್ನುಂಟು ಮಾಡಲಾರದೆಂಬ ಆತ್ಮವಿಶ್ವಾಸ ತಳೆದಿದ್ದಳು. ಯಾವ್ಯಾವ ಪೌರಾಣಿಕ ಹೆಂಗಸನ್ನು ತಡೆವಿ ಯಾವ್ಯಾವ ಪೌರಾಣಿಕ ಪುರುಷ ಶಾಪಕ್ಕೀಡಾದನು ಎಂಬಿವೇ ಮೊದಲಾದ ಕಥೆಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ಸತ್ಯಪ್ಪ ಪ್ರಯಾಣ ಮಾಡುವಾಗಲೆಲ್ಲ ನೆನಪು ಮಾಡಿಕೊಳ್ಳುತ್ತ ಮತ್ತು ಪ್ರಸ್ತಾಪಿಸುತ್ತ ಪವಿತ್ರ ವಿಧವೆಯನ್ನು ಕಟ್ಟಿಕೊಂಡು ಈ ಊರಿನಿಂದ ಆ


೧೯೬

ಊರಿಗೆ; ಆ ಊರಿನಿಂದ ಈ ಊರಿಗೆ ಅಲೆದಾಡಿದ. ಕೆಲವು ಕಡೆ ಒಂದೆರಡು ರಾತ್ರಿ ಆತ ಆಕೆಯೊಡನೆ ಒಂಟಿಯಾಗಿ ಕಳೆದಿರುವುದುಂಟು. ಆದರೆ ಜಖಂ ಮಾಡುದುದಿಲ್ಲ. ಅಕ್ಕಾ; ಅಮ್ಮಾ; ತಾಯಿ; ತಂಗೀ ಎಂದು ಸಂಭೋದಿಸುವವನು ಜಖಂ ಮಾಡುವುವುದಾದರೂ ಹೇಗೆ? ಕಾಮವಾಂಛೆಗೆ ಸಂಬಂಧಿಸಿದಂತೆ ಉತ್ತಮಪುರುಷದಲ್ಲಿ ಹೇಳುವುದಾದರೆ ಮೇಲುಪ್ಪರಿಗೆ ಮನೆಯ ಸತ್ಯಪ್ಪನೆಂಬ ದ್ವಿಪಾದಿಯು ಪರಾಕಾಷ್ಟೆ ತಲುಪಿದಾಗ ಗಾರ್ಧಬಿಣಿ, ಮಹಿಷಿಣಿಯೇ ಮೊದಲಾದ ಚತುಷ್ಪಾದಿಗಳನ್ನು ಬಿಟ್ಟಲ್ಲಿ ಯಾವುದೇ ನಿಷ್ಪ್ರಯೋಜಕ ವಾದ್ಯದಲ್ಲೂ ಅಪರೂಪದ ನಾದ ಹೊರಡಿಸಿ ಸವಿಯಬಲ್ಲ ಮಹಾ ಚತುರ ಸತ್ಯಪ್ಪ ಪ್ರತಿವಾಕ್ಯದಲ್ಲಿ ಗೌರವ ವಿಶೇಷಣಗಳನ್ನು ನಿರಾತಂಕವಾಗಿ ಪ್ರಯೋಗಿಸುತ್ತಿದ್ದುದುದನ್ನು ನೋಡಿ ಜನ ದಿಗ್ಭ್ರಮಿತರಾಗಿದ್ದುಂಟು. ಒಪ್ಪಂದದ ಮೇರೆಗೆ ಒಂದು ಕೈನೋಡಿಕೊಂಡಿರುತ್ತಾನೆಂದು ವಿನಾಕಾರಣ ಆಡಿಕೊಂಡರು. ಆ ಬಗ್ಗೆ ಪ್ರಸ್ತಪಿಸಿದರೆ ಸತ್ಯಪ್ಪನ ಮನಸ್ಸಾಕ್ಷಿ ಖಂಡಿತ ಇಲ್ಲ ಎಂದು ಹೇಳುತ್ತದೆ. ಹೌದು! ಅದು ಹೇಳುವುದು ಸರಿ! ಕೀ|| ಶೇ|| ಪರಮೇಶ್ವರ ಶಾಸ್ತ್ರಿಗಳು ಅವನ ದರಿದ್ರ ನೋಡಲಾರದೆ ಕೇವಲ ನೂರ ಒಂದು ರುಪಾಯಿಗೆ ತೆಂಗಿನಕಾಯಿ ಮಂತ್ರಿಸಿ ಅವನ ಮನೆಯ ತಲೆ ಬಾಗಿಲಿಗೆ ಕಟ್ಟದಿದ್ದಲ್ಲಿ ಅವೆನೆಲ್ಲಿ ಈ ಮಟ್ಟಕ್ಕೆ ತಲುಪುತ್ತಿದ್ದ? ಆ ನೆನಪಿಗೆ ಅವನು ಶಾಸ್ತ್ರಿಗಳ ಭಾವಚಿತ್ರವನ್ನು ಪಡಸಾಲೆಗೆ ನೇತು ಹಾಕಿಕೊಂಡಿರುವನು. ’ಏನಯ್ಯಾ? ... ನಮ್ಮ ಮೊಮ್ಮಕ್ಕಳಾದ ಶಾಮಾಶಾಸ್ತ್ರಿಗಳ ವಿವಾಹ ಮಹೋತ್ಸವಕ್ಕೆ ಕಾಣಿಕೆ ಏನು ಕೊಡುತ್ತೀಯಾ?’ ಎಂದು ಶಾಸ್ತ್ರಿಗಳು ಕೇಳಿದ್ದಕ್ಕೆ ಸಾವಿರದಾ ಒಂದು ಎಂದುಬಿಟ್ಟಿದ್ದನು. ಹಾಗೆಯೇ ತಳಿರು ಚಪ್ಪರದ ಕೆಳಗೆ ಕಾಣಿಕೆ ಒಪ್ಪಿಸಿ ಪರಮಾನ್ನ, ಪುಳಿಯೋಗರೆ ಉಂಡು ಹತ್ತು ಹೆಜ್ಜೆಗೊಮ್ಮೆ ಡೆಗುತ್ತ ಮರಳಿ ಮನೆತುಂಬ ಧನ್ಯತಾಭಾವ ಪಸರಿಸಿದ್ದನು. ಹೀಗಾಗಿ ಸತ್ಯಪ್ಪ ವೈಯಕ್ತಿಕವಾಗಿ ಎಷ್ಟೇ ಬ್ರಷ್ಟನಿದ್ದರೂ ಶಾಸ್ತ್ರಿಗಳ ಕುಟುಂಬದ ಸರ್ವ ಸದಸ್ಯರ ಮೇಲೆ ಎಣೆ ಇಲ್ಲದಷ್ಟು ಗೌರವ ಇಟ್ಟುಕೊಂಡಿದ್ದನು. ‘ನಿಮ್ಮ ಮದುವೆಗೆ ಯಾರೂ ಕೊಡದಷ್ಟು ಕಾಣಿಕೆ ಕೊಟ್ಟಿರೋನು ಕಣಪ್ಪ ... ಅದಕ್ಕೆ ಒಂದು ಮಾತ್ನ ಕೇಳ್ತಿದ್ದೀನಿ. ಇದೆಲ್ಲ ನಿಮ್ಮಂಥ ಬ್ರಾಂಬ್ರಿಗೆ ಸರಿಹೋಗಲ್ಲ ಬಿಟ್ ಬಿಡಿ’ ಎಂದು ಜಿಲ್ಲಾ ಮುಖ್ಯ ಸ್ಥಳದ ಮುಖ್ಯ ಬೀದಿಯಲ್ಲಿ ಶಾಮಾಶಾಸ್ತ್ರಿಗೆ ಬುದ್ಧಿ ಹೇಳಿದಂಥವನು ಮತ್ತು ಅವನಿಂದ "ಏನಪ್ಪ ನಿನ್ನ ತಿಪಟೂರುಕಡೆ ಬುದ್ಧಿ ನನ್ನ ಹತ್ರ ತೋರಿಸಬೇಡಪ್ಪ ... ನಿನ್ನ ಎಲೆಯೊಳಗೆ ಕತ್ತೆ ಸತ್ತಿರೊದ್ನ ಬಿಟ್ಟು ನನ್ನ ಎಲೇಲಿರೊ ನೊಣದ ಬಗ್ಗೆ ಹೇಳೋಕೆ ಬಂದಿದ್ದೀಯ" ಎಂದು ಮುಂತಾಗಿ ವಾಮಾಚಾರವಾಗಿ ಬಯ್ಯಿಸಿಕೊಂಡವನು. ನನ್ನ ಮುಂದೆ ನನಗಿಂತ ಚಿಕ್ಕವರು ಸಾಯೋದನ್ನು ನೋಡಲಿಕ್ಕಾಗದೆ ಬುದ್ಧಿ ಹೇಳಿದೆ ಎಂದೊಂದು ದಿನ ಪಶ್ಚಾತ್ತಾಪಪಟ್ಟ ತಿಪಟೂರು ಮೂಲದ ಮೇಲುಪ್ಪರಿಗೆ ಮನೆಯ ಸತ್ಯಪ್ಪ ಶವಸಂಸ್ಕಾರಕ್ಕೆಂದು ಓಡಿ ಬಂದಾಗ ಕಣ್ಣ ತುಂಬ ನೀರು ತಂದುಕೊಂಡಿದ್ದನು. ದೈವಾಂಶ ಸಂಭೂತರಾದ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ ಶಾಮಾ ಶಾಸ್ತಿಗಳು ಸತ್ತ ಮೇಲೆ ಶೂದ್ರರಿಗಿಂತ ಅತ್ತತ್ತವಾಗಿ ಶವ ಸಂಸ್ಕಾರ ಮಾಡಿಸಿಕೊಳ್ಳಬೇಕಾಗಿ ಬಂದಿತಲ್ಲ ... ಅವರೇನು ಪಾಪ ಮಾಡಿದ್ರು? ... ಇದನ್ನೆಲ್ಲ ಅನುಭವಿಸೋಕೆ ನೀನಿನ್ನು ಬದುಕಿದ್ದೀಯಲ್ಲ ತಾಯಿ" ಎಂದು ವರಲಕ್ಶ್ಮಮ್ಮನೆದುರು ಸ್ವಾಂತನ ಹೇಳಿದ್ದನು. "ಅವರು ಸತ್ತು ಲೌಕಿಕ ವ್ಯವಹಾರ ಚುಕ್ತಾ ಮಾಡಿಕೊಂಡ್ರು ... ನಮ್ಮದಿನ್ನು ಯಾವತ್ತೋ" ಎಂದು ನಿಟ್ಟುಸಿರುಬಿಟ್ಟ


೧೯೭

ಆಕೆಗೆ "ಹೆದರಬೇದ ತಾಯಿ ನೀವು ಗಂಡಸಿನಂತೆ ಬದುಕುವಂತಾಗಬೇಕು. ಇದ್ಕೆ ನನ್ನಿಂದ ಯಾವ ಸಹಾಯವನ್ನದ್ರೂ ಪಡೀಬೌದು" ಎಂದು ಹೇಳಿ ಬಂದಿದ್ದನು. ಇಷ್ಟೊಂದು ಹಿನ್ನೆಲೆ ಇರುವ ಸತ್ಯಪ್ಪ ವರಲಕ್ಶ್ಮಮ್ಮನ ಕಡೆಗೆ ಕೆಟ್ಟ ಕಣ್ಣಿನಿಂದ ನೋಡುವವನಾದರೂ ಹೇಗೆ?

ಈತನ ಪ್ರತ್ನಕ್ಕಿಂತ ಮುಖ್ಯವಾಗಿ ವರಲಕ್ಶ್ಮಮ್ಮ ಬ್ರಾಹ್ಮಣಳಾಗಿದ್ದುದು; ಗಂಡನನ್ನು ಕಳೆದುಕೊಂದ ಕೆಲವೇ ದಿನಗಳಲ್ಲಿ ಕೇಶವಿಹೀನಳಾಗಿ ನಾರುಮಡಿಯುಟ್ಟಿದ್ದುದು ತುಂಬಾ ಸಹಾಯಾಕ್ಕೆ ಬಂದಿತು. ಅದೂ ಅಲ್ಲದೆ ಪ್ರತಿಯೊಂದು ಆಫೀಸು, ಕಛೇರಿಗಳಲ್ಲಿ ಎಲ್ಲಿ ನೋಡಿದರೂ ಬ್ರಾಂಹ್ಮಣ ಸಂಜಾತರೇ ತುಂಬಿಕೊಡಿದ್ದುದು ಹೆಚ್ಚಿನ ಸಹಾಯಕ್ಕೆ ಬಂದಿತು. ಸತ್ಯಪ್ಪನ ಸುಗಂಧಯುಕ್ತ ಮಾತುಗಳು ಬೇರೆ .. ಇದೆಲ್ಲ ಒಳ್ಳೆಯ ಪರಿಣಾಮ ಬೀರದೆ ಇರಲಿಲ್ಲ. ಅಯ್ಯೋ ಪಾಪ ಎನ್ನುವವರೆಷ್ಟೋ? ನಾವು ನಮ್ಮವರಿಗೆ ಸಹಾಯ ಮಾಡದಿದ್ರೆ ಹೇಗ್ರಿ ಎನ್ನುವವರೆಷ್ಟೊ? ಹೀಗಾಗಿ ಕೊಡಲೀಲಿ ಹೋಗೋ ಕೆಲಸ ಉಗರಿಂದಾಯಿತು.

ಅಂದ ಮಾತ್ರಕ್ಕೆ ಸತ್ಯಪ್ಪ ವರಲಕ್ಷ್ಮಮಗಷ್ಟೇ ನಿಷ್ಠನಾಗಿರಲಿಲ್ಲ. "ಹೀಗೆಲ್ಲ ಮಾಡ್ತಾ ಇದ್ದೀನಿ ಅಮ್ಮಾ ... ಇದ್ಕೆ ನಿಮ್ಮ ಅಭ್ಯಂತರವಿಲ್ಲವಷ್ಟೆ" ಅಂತ ಮಾತೋಶ್ರೀ ಅಲುಮೇಲಮ್ಮನವರನ್ನು ಸಂಧಿಸಿದ್ದ. ಅವನ ಮುಖದರ್ಶನ ಮಾಡಿಕೊಳ್ಳುತ್ತಲೆ ಆಕೆ ವಯ್ಯವಯ್ಯಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಳು. ಸೂತಕ ಹೋಗಲಾಡಿಸಲಿಕ್ಕೇನು ಮಾಡುವುದಪ್ಪಾ ಅಮ್ಮಾ ... ಎಂದು ಪೇಚಾಡಿದ್ದಳು. ಇದರಿಂದ ತಿಲಮಾತ್ರ ಬೇಸರಕ್ಕೀಡಾಗಲಿಲ ಸತ್ಯಪ್ಪ ... ದೊಡ್ಡವರು ಯಾವಾಗ್ಲೂ ಹೀಗೆಯೇ ಎಂದುಕೊಂಡುಬಿಟ್ಟ ...
"ನನ್ ಮಾತ್ರ ಅಪಾರ್ಥ ಮಾಡ್ಕೋಬೇಡಿ ಅಮ್ಮಾ ... ಹಿರೇ ಶಾಸ್ತ್ರಿಗಳ ಋಣದಲ್ಲಿರೋನು ನಾನು ... ತಾಯಿ ಸಮಾನರಾದ ನಿಮ್ಮ ಮನ ನೋಯ್ಸಿ ನಾನ್ಯಾವ ನರಕಕ್ಕೆ ಹೋಗ್ಲಿ ... ವರಲಕ್ಷಮ್ಮನವರಿಗೂ ಹಕ್ಕಿರುವಂತೆ ಯಾವತ್ತೂ ಆಸ್ತಿಮೇಲೆ ನಿಮ್ಗೂ ಹಕ್ಕಿದೆ. ಎಷ್ಟಿದ್ರೂ ನೀವು ಶಾಮಣ್ಣನ್ನ ಹೆತ್ತೋರು" ಎಂದು ತೂಕದ ಮಾತುಗಳನ್ನಾಡಿದ.
ಅದರಿಂದ ಅಲುಮೇಲಮ್ಮ ಎಷ್ಟೊ ಕರದಿಬಿಟ್ಟಳು.
"ಅರ್ಥ ಆಯ್ತಪ್ಪಾ... ನೀನು ಹೇಳೋದು ಲೌಕಿಕವಾಗಿ ಸರಿ ಇರಬೌದು ... ಕಾಗದ ಪತ್ರಗಳಿಗೆ ಸಹಿ ಹಾಕಿ ನಾನ್ಯಾವ ನರಕಕ್ಕೆ ಹೋಗ್ಲಿ ... ಬೇಡ ... ಬೇಡ ... ಹೆಂಡತಿ ಅಂಬೋಳೆ ಎಲ್ಲಾ ಅನುಭವಿಸ್ಲಿ ... ನನಗೆ ನನ್ನ ಮಗನ ಕವಡೆ ಕಾಸುಬೇಡ" ನೊಂದ ಮನಸ್ಸಿನಿಂದ ಬಿಲ್ಕುಲ್ ನುಡಿದಿಬಿಟ್ಟಿದ್ದಳು ಆ ವೃದ್ಧೆ.
ಪ್ರಾರಬ್ಧ ಬಗೆಹರಿಯಿತೆಂದು ಸತ್ಯಪ್ಪ ಮನೆಗೆ ಮರಳಿದವನೆ ತಲೆ ಸ್ನಾನ ಮಾಡಿ ಅಂದು ಶನಿವಾರವಾದ್ದರಿಂದ ಹನುಮಂತ ದೇವರ ಗುಡಿಗೆ ಹೋಗಿ ತುಪ್ಪದ ದೀಪ ಮುಡಿಸಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿ " ನನ್ನದೇನೇ ತಪ್ಪಿದ್ರು ಹೊಟ್ಟೇಲಿ ಹಾಕಿಕೊಂಡು ಕಾಪಾಡು ಪ್ರಾಣದೇವರೇ" ಎಂದು ನಿರುಮ್ಮಳವಾಗಿದ್ದುಬಿಟ್ಟಿದ್ದನು.

ಅತ್ತೆ ಸೊಸೆಯರ ನಡುವೆ ರಾಜಿ ಕುದುರಿಸಲು ಅಪ್ಪ ಹಲವು ರೀತಿಯ ಪ್ರಯತ್ನ ಮಾಡಿದ. ವಿಧವೆಯರು ನಿಟ್ಟುಸಿರು ಬಿಡುವಂತಾಗಬಾರದೆಂಬುದೇ ಆತನ ಧ್ಯೇಯವಾಗಿತ್ತು. "ರಂಡಮುಂಡೇರು ಕಣ್ಣೀರು ಹಾಕಿದ್ರೆ ಈ ದೇಶಕ್ಕೆ ಒಳ್ಳೇದಾಗೋದಿಲ್ಲ" ಅಂತ ಆತ ಮಾತು ಮಾತಿಗೆ ಅಂತಿದ್ದ. ಆದರೆ ನಮ್ಮವರೇ ಆಗಿದ್ದ ಮುವ್ವರು ರಂಡೆಮುಂಡೆಯರಿಗೂ ಆತನಿಗೂ ಆಗುತ್ತಿರಲಿಲ್ಲ. ಅವರ ಹೆಸರು ಎತ್ತಿದರೆ ಮುಂಗುಸಿಯಂತೆ ಸರ್‍ಪರ್ ಸದ್ದು ಮಾಡುತ್ತಿದ್ದುದು ವಿಚಿತ್ರವಾಗಿತ್ತು.


೧೯೮

ವಂಶ ಸರ್ವನಾಶಣವಾಗಬಾರದೆಂಬ ಸದುದ್ದೇಶದಿಂದನಿಂಗಮ್ಮಜ್ಜಿ ಆ ಮನೆಯನ್ನು ನಮ್ಮ ಅಪ್ಪ ಯಾ ತನ್ನ ಏಕಮಾತ್ರ ಅಳಿಯ (ಅಳಿಯ ಅಂದರೂ ಅವನೆ; ಮಗ ಅಂದರು ಅವನೆ) ಖರೀದಿಸದಂತೆ ರಚಿಸಿದ್ದ ಅನೇಕ ವ್ಯೂಹಗಳನ್ನು ಲೀಲಾಜಾಲವಾಗಿ ಭೇದಿಸಿ ಮುನ್ನಡೆಯುತ್ತಿದ್ದ ಆ ಧೀರ್ಘ ಕಾಯನನ್ನು (ಅಭಿಮನ್ಯು ಕಾಳಗದಲ್ಲಿ ಸೈಂಧವನ ಪಾತ್ರ ಮಾಡಿ ಫೇಮೋಸಾಗಿದ್ದ) ತಡೆಯುವವರಾರು? ಅತ್ತೆ ಸೊಸೆಯರ ನಡುವೆ ರಾಜಿಕುದುರಿಸಲು ಸತ್ಯಪ್ಪನ ನೆರವು ಪಡೆದರೆ ವಾಸಿ ಎಂದು ಸಂಸಾರ ಸಾಗರಕ್ಕೆ ರೋಸಿ ಭೋಧೆ ಸ್ವೀಕರಿಸಲು ಗುರುಸಾಂತಪ್ಪ ಸಲಹೆ ಮಾಡಿದ ಕೋಡಿಹಳ್ಳಿ ದೊಂಬಿ ಖಟ್ಲೆಯಲ್ಲಿ ತನ್ನ ವಿರುದ್ಧ ಸಾಕ್ಷಿ ನುಡಿದಿದ್ದ ಸತ್ಯಪ್ಪನ ಬಳಿಗೆ ಹೋಗುವುದಾದರೂ ಎಂತ್? "ಲೇ ತಿಪಟೂರುಕಡೆಯ ಕೊಳೆತ ತೆಂಗಿನಕಾಯಿಯೇ ... ನನ್ ವಿರುದ್ಧ ಸಾಕ್ಷಿ ಹೇಳುವಷ್ಟು ಧೈರ್ಯ ಬಂತು ನಿನಗೆ... ತಿಂಗಳೊಪ್ಪತ್ತಿನಲ್ಲಿನಿನ್ನ ಊರಿನಿಂದ ಓಡಿಸದಿದ್ದರೆ ನಾನು ಶರಣನ್ನ ಮಗ್ನೇ ಅಲ್ಲ" ಎಂದು ಆತ ಶಪಥ ಮಾಡಿದ್ದುದು ನನ್ನ ನೆನಪಿನಲ್ಲಿತ್ತು. ಜಮೀನ್ದಾರಿಕೆ ನಶಿಸಿಹೋಗಿ ಅದರ ಗತ್ತು ಮಾತ್ರ ಉಳಿದುಕೊಂಡಿರುವ ಅಪ್ಪನಿಗೆ ಆ ತಾಕತ್ತು ಇಲ್ಲವೆಂದು ನನಗೆ ಆಗಿನಿಂದಲೇ ಗೊತ್ತು! ನಾನು ಅಂದುಕೊಂಡಿದ್ದಂತೆ ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. "ಅವನ ಕರುಮಕ್ಕೆ ಅವನೋಗ್ತಾನೆ ಬುಡು" ಅಂತ ಅಜ್ಜಿಯೇ ಸಮಾಧಾನ ಹೇಳಿತ್ತು. ಈ ಕಾರಣದಿಂದ ಅಪ್ಪ ಒಲ್ಲದ ಮನಸ್ಸಿನಿಂದ ಅನುಕೂಲ ಸಿಂಧು ಸತ್ಯಪ್ಪನ ಬಳಿಗೆ ತಾನಾಗಿಯೇ ಹೋಗುವುದು ಸಾಧ್ಯವಿರಲಿಲ್ಲ. ಅವಧೂತ ಗುಸಾಂತಪ್ಪ (ಗುಪ್ತರೋಗಗಳ ತಂಗುದಾಣವೆಂದು ಹೆಸರಾದ)ನೇ ಗಾಂಜಾ ಕೊಳ್ಳುವ ನೆಪದಲಿ ಮೇಲುಪ್ಪರಿಗೆ ಮನೆ ತಲುಪಿದ. ಎರಡು ಚೀಟಿ ಕೊಂಡು ಸೊಂಟದ ಮೂಲೆಯಲ್ಲಿ ಭದ್ರಪಡಿಸಿಕೊಂಡ. ಭವಬಂಧನದ ಬಗ್ಗೆ ರಾಜಕಾರಣದ ಬಗ್ಗೆ ಮಾತಾಡುತ್ತಡುತ್ತ ಶಾಸ್ತ್ರಿಗಳ ಮನೆ ತಗಾದೆ ತಲುಪಿದ. ನತದೃಷ್ಟೆ ವಿಧವೆಯರ ಬಗೆಗೂ ಮಾತೆದ್ದಿದ. ಮುತ್ತು ಪೋಣಿಸಿದಂತೆ ಖರೀದಿದಾರ ಹಾಲಪ್ಪನ ಬಗೆಗೂ ಸಹ ಏನು ಮಾಡಲೂ ಹಿಂಜರಿಯದ ಹಾಲಪ್ಪನೆಂಬ ಪ್ರವಾಹ ವಿರುದ್ಧ ಈಜುವುದು ದಡ್ಡನಲ್ಲದ ಸತ್ಯಪ್ಪ ಅಪ್ಪನ ಪರೋಪಕಾರೀ ಬುದ್ಧಿಯನ್ನು ಹಾಡಿ ಹೊಗಳಿದ. ಅಂತಹ ಒಬ್ಬ ಪರಾಕ್ರಮಿ ತನಗೆ ಶರಣಾಗಬೇಕೆಂದೇ ಕೊಲ್ಲೂರುಸ್ವಾಮಿಗಳಿಂದ ಮಂತ್ರಿಸಿ ತಂದುಕಟ್ಟಿದ್ದ, ಗಣೇಶನನ್ನು ಹೋಲುವ ಎಕ್ಕೆ ಗಿಡದ ಬೊಡ್ಡೆ ಇದ್ದ ತೊಲೆ ಕಡೆ ಭಕ್ತಿಪೂರ್ವಕವಾಗಿ ನೋಡಿ ಸಮಾಧಾನದ ಉಸಿರು ಬಿಟ್ಟು ಅದಕ್ಕೇನು ತಾತ ... ಇದ್ಕೇನು ತಾತ ಅಂತ ನಯಸ್ಸಾಗಿ ಮಾತಾಡಿದ. ಅಜಾತಶತ್ರು ಹಾಲಪ್ಪನ ಮನೆಗೆ ಖುದ್ದು ತಾನೇ ಹೋಗುವುದಾಗಿ ವಚನ ನೀಡಿದ. "ತಪ್ಪಿಸಿಕೊಂಡೀಯಾ" ಅಂದಿದ್ದಕ್ಕೆ "ತಿಪಟೂರು ಕಡ್ಯೋರು ಎಂದು ಕೊಟ್ಟ ಮಾತಿಗೆ ತಪ್ಪೋದಿಲ್ಲ ತಾತಾ" ಎಮ್ದು ಸಮರ್ಥಿಸಿಕೊಂಡ.

ಬೋದಿ ವೃಕ್ಷದಂಥ ಗುರುಸಾಂತಪ್ಪ ನೀಡಿದ ಮಾಹಿತಿ ಆಧಾರದ ಮೇಲೆ ಮುಖ್ಯವಾಗಿ ಹೃದಯ ಬಡಿತ ಹೆಚ್ಚಿಸಿಕೊಂಡ ಈಕೈಕ ವ್ಯಕ್ತಿ ಎಂದರೆ ನಾನೆ. ಪುಸ್ತಕಗಳನ್ನು ಓದುತ್ತ ಲೇಖಕನಾದವನಲ್ಲ ನಾನು. ಮನುಷ್ಯನ ಮೇಲೆ ನಿಗಾ ಇಡುವುದೆಂದರೆ ಮೃಷ್ಟನ್ನ ಭೋಜನ ಮಾಡಿದಂಥ ಅನುಭವ ನೆನಪಾಗುವುದು. ಅಪ್ರತಿಮ ಸಾಹಿತಿಗಳೆಂದರೆ, ಕ್ರಾಂತಿಕಾರಿಗಳೆಂದರೆ ಮನುಷ್ಯರೆ. ಒಬ್ಬ ಓದಿದಂತೆಯೇ ಲೆಕ್ಕ. ಆದರೆ ನನಗೆ ಭಾರತೀಯ ಮನುಷ್ಯನ ಜಾಯಮಾನ. ನನಗಾಗಲೀ; ನನ್ನ


೧೯೯

ಬರಹವಾಗಳಿ ಇದಕ್ಕೆ ಹೊರತಲ್ಲ. ಭಾರತೀಯ ಮನುಷ್ಯನು ಕೆಟ್ಟವನು, ಒಳ್ಳೆಯವನು ಅಂತ ನಾನು ವಿಭಜಿಸಲು ಹೋಗುವುದಿಲ್ಲ. ಇಡೀ ದೇಹವೆಂಭೋ ದೇಹಕ್ಕೆ ಕುಷ್ಟರೋಗ ಹತ್ತಿರುವಾಗ ಒಂಚೂರು ಬೆರಳು ಆರೋಗ್ಯಕರವಾಗಿರಬೇಕೆಂದು ಊಹಿಸುವುದು ಎಷ್ಟು ಅಸಂಜಸ? ಸುಲಭವಾಗಿ ಬದುಕಲಿಕ್ಕೆ ಭಾರತದ ಮನುಷ್ಯ ಒಳದಾರಿ ಕಂಡುಕೊಳ್ಳುವುದರಲ್ಲಿ ಚಾಣಾಕ್ಷ. ಇನ್ನೊಬ್ಬರನ್ನು ಬಲಿ ಕೊಟ್ಟಾದರೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳದೆ ಇರಲಾರ. ಇಂಥವರ ಪೈಕಿ ಮೇಲುಪ್ಪರಿಗೆ ಮನೆಯ ಸತ್ಯಪ್ಪನೂ ಒಬ್ಬ. ಈತನ ಅವಗುಣಗಳನ್ನು ಲೇಖಕನಾಗಿ ನಾನು ತುಂಬ ಇಷ್ಟಪಡುವೆನು. ನಾನೀತನನ್ನು ಮೈ ಎಲ್ಲ ಕಣ್ಣಾಗಿ ಗಮನಿಸುತ್ತ ಬಂದಿರುವೆನು. ಈತನ ಬಗೆಗಿನ ಉಪಕಥೆಗಳನ್ನು ಕೇಳುತ್ತ ಬಂದಿರುವೆನು. ಪ್ರತಿಯೊಂದು ಕಥೆಗೂ ರೋಮಾಂಚನದ ಕಾಣಿಕೆ ನೀಡಿರುವೆನು. ಸದ್ವಿನಿಯದಿಂದಲೇ ಮಾಡಲ್ಪಟ್ಟಂಥ ಸತ್ಯಪ್ಪನ ಬಗ್ಗೆ ಆಲೋಚಿಸುವಾಗ ನನಗೆ ಪಂಚತಂತ್ರದ ಒಂದು ಮಾತು ನೆನಪಿಗೆ ಬರುತ್ತದೆ. ಅದೂ ಮಿತ್ರ ಭೇದಕ್ಕೆ ಸಂಬಂಧಿಸಿದ್ದು.ಅವನು ಹೇಳಿದ್ದಾನೆ ಮುಖಂ ಪದ್ಮದಲಾಕಾರಂ ಅಂದರೆ ಮುಖವು ಪದ್ಮದಳದಂತೆ ಸೊಗಸಾಗಿರುತ್ತದೆ. ವಾಣಿ ಚಂದನ ಶೀತಲಾ ಅಂದರೆ ಮಾತು ಚಂದನದಂತೆ ತಂಪು ನೀಡುತ್ತದೆ. ಹೃದಯಂ ಕರ್ತರೀತುಲ್ಯಂ ಅಂದರೆ ಅವನ ಹೃದಯವು ಕತ್ತರಿಯಂತೆ ಇರುತ್ತದೆ. ಪಂಚತಂತ್ರದ ಕರ್ತೃ ಸತ್ಯಪ್ಪನಂಥವನನ್ನು ನೋಡೇ ಈ ಶ್ಲೋಕ ರಚಿಸಿದ್ದಾನೆಂದು ಹೇಳಬಹುದು. ಸತ್ಯಪ್ಪ ದುಷ್ಟ ಅಂಥ ಗೊತ್ತಿದ್ದರೂ ಅವನ ಸ್ನೇಹವನ್ನು ದೂರ ಮಾಡುವುದು ಎಂಥವರಿಗೂ ಸಾದ್ಯವಿಲ್ಲ. ಅವನ ಬಗ್ಗೆ ಸಾವಿರ ಕೆಟ್ಟ ಮಾತನ್ನಾಡುವವರೆಲ್ಲ ಅವನ ಬಳಿ ಬಾಲಕ್ಕೆ ಬೆಣ್ಣೆ ಹಚ್ಚಿಕೊಂಡು ಕುಂಯ್ ಕುಂಯ್ ರಾಗಾಲಾಪನೆ ಮಾಡುತ್ತ ಬೀಸುತ್ತಲೇ ಇರುತ್ತಾರೆ. ಆದರೆ ನಮ್ಮ ತೀರ್ಥರೂಪ ಮಾತ್ರ ಇದಕ್ಕೆ ಅಪವಾದ. ಅಂದ ಮಾತ್ರಕ್ಕೆ ನಮ್ಮ ತೀರ್ಥರೂಪ ಮಹಾ ಸಜ್ಜನನೆಂದರ್ಥವಲ್ಲ. ಆತ ಹೌದೆಂದರೆ ಹೌದು ಅಲ್ಲ ಅಂದರೆ ಅಲ್ಲ. ಮಾತು ಏಕ್ಮಾರ್ ದೋ ತುಕಡಾ. ನನ್ನ ತಾತ ಮುತ್ತಾತ ಜಮೀನ್ದಾರರಾಗಿದ್ದರು ಅನ್ನೋ ಕಾರಣಕ್ಕೆ ಅದರ ಗತ್ತನ್ನು ಮಾತ್ರ ಉಳಿಸಿಕೊಂಡಿದ್ದ ನನ್ನಪ್ಪ ಅದನ್ನು ತನ್ನ ಪ್ರತಿ ನಡುವಳಿಕೆಯಲ್ಲೂ ಪ್ರಕಟಿಸುತ್ತಿದ್ದ. ಎಲ್ಲರೂ ತನ್ನ ಅಡಿಯಾಳಗಿರಬೇಕೆಂದುಕೊಳ್ಳುತ್ತಿದ್ದ. ಏಷ್ಟೊ ಸಂದರ್ಭದಲ್ಲಿ ಹಾಗಾಗದಿದ್ದಾಗ ಒಳಗೊಳಗೇ ಕೆಟ್ಟದಾಗಿ ನರಳುತ್ತಿದ್ದ. ಹೆಂಡಿರು ಮಕ್ಕಳ ಮೆಲೆ ಕೋಪ ಹರಿಸುತ್ತಿದ್ದ. ಸದೆಯುತ್ತಿದ್ದ. ಹೀಗಾಗಿ ಅವನ ದೇಹದ ಸಣ್ಣ ಕರುಳಿನಲ್ಲಿ ಹೈಡ್ರೋಕ್ಲೋರಿಕ್ ಆಯ್ಸಿಡ್ ಅಗತ್ಯಕ್ಕಿಂತ ಹೆಚ್ಚಾಗಿ ಸ್ರವಿಸಿ ಅಲ್ಲೊಂದು ಇಲ್ಲೊಂದು ಹುಣ್ಣು ಮಾಡಿತ್ತು. ಅದು ಆತನ ಕೋಪಕ್ಕೆ ಕಳಸಪ್ರಾಯವಾಗಿತ್ತು. ‘ಲೇ ಬಣಜಿಗ ನೀನೆ ನನ್ನ ಮನೆ ಬಾಗ್ಲಿಗೆ ಬರೋಹಂಗ ಮಾಡ್ತೀನಿ’ ಅಂತ ಹಿಂದೆ ಒಮ್ಮೆ ಶಪಥ ಮಾಡಿದ್ದ. ಇಷ್ಟು ಟೈಮಿಗೆ ಸರ್ಯಾಗಿ ಸತ್ಯಪ್ಪ ಬರುವನೆಂದು ಗುರುಸಾಂತಪ್ಪ ವಿನಯಪೂರ್ವಕವಾಗಿ ಹೇಳಿದಾಗ ಸಹಜವಾಗಿ ಅಪ್ಪ ಉಬ್ಬಿ ಹೋದ. ಎದುರಾಳಿಯನು ಮಣಿಸುವದ್ರಲ್ಲಿ ಆತ ತುಂಬ ನಿಷ್ಣಾತನಾಗಿದ್ದ. ದಿಗ್ಭ್ರಮೆ ಎಂಬ ಬಲೆಯಲ್ಲಿ ಕೆಡವಿ ಮೂಕ ಪಶು ಚೇತರಿಕೊಳ್ಳದಂತೆ ಮಾಡಿ ಬಿಡಲು ಆತವೇನು ಮಾರಕಾಸ್ತ್ರಗಳನ್ನು ಉಪಯೋಗಿಸುತ್ತಿರಲಿಲ್ಲ. ಸಂಬೋಧನೆಗೆ ಅಗತ್ಯವಾದ ಧ್ವನಿಗೆ ಸ್ವಲ್ಪ ಗತ್ತು ಸೇರಿಸುತ್ತಿದ್ದ. ಗರಿಗರಿ ರೇಶಿಮೆ ಅಂಗಿ ಪರಮಸುಖ್ ಪಂಚೆಯನ್ನು ತೊಡುತ್ತಿದ್ದ. ನುಣ್ಣಗೆ ಬೋಳಿಸಿದ ಮುಖಕ್ಕೆ ಆಫ್‌ಘಾನ್ ಸ್ನೋ ಪೌಡರ್ ಹಚ್ಚುತ್ತಿದ್ದ. ಗಂಧೆಣ್ಣೆ ಹಚ್ಚಿ ಡಬ್ಬಲ್ ಕ್ರಾಪ್ ಬಾಚುತ್ತಿದ್ದ. ಹತ್ತು ಬೆರಳುಗಳ ಪೈಕಿ ನಾಲ್ಕು ಬೆರಳುಗಳಿಗೆ ಉಂಗುರ ತೊಡುತ್ತಿದ್ದ. ಅಲ್ಲದೆ ಘಮಘಮ ಎಣ್ಣೆಯಲ್ಲಿ ಅದ್ದಿ ಒಂಚೂರು


೨೦೦

ಅರಳೆಯನ್ನು ಬಲಗಿವಿಯ ಮೂಲೆಯಲ್ಲಿ ಅಡಗಿಸಿಟ್ಟು ಉನ್ನತಾಸನದ ಮೇಲೆ ಹನಿಡ್ಯೂ ಸಿಗರೇಟು ಹಚ್ಚಿ ಭಲೆ ಸ್ಟೈಲಿನಿಂದ ಕೂಡುತ್ತಿದ್ದ. ಶ್ರೀಕೃಷ್ಣ ಪಾಂಡವೀಯಂ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ಎನ್‌ಟಿಆರ್‌ಗೆ ನಮ್ಮಪ್ಪನನ್ನು ತೀರ ಸಹಜವಾಗಿಯೇ ನನ್ನಂಥವರು ಹೋಲಿಸುತ್ತಿದ್ದುದುಂಟು. ಆ ದಿನ ಅಪ್ಪ ಅದೇರೀತಿ ಕೂತುಕೊಂಡ ಕಾಲು ಗಂಟೆಯನಂತರ ಬಿಜಯಂಗೈದ ಮೇಲುಪ್ಪರಿಗೆ ಮನೆ ಸತ್ಯಪ್ಪ ಇದಕೆ ತದ್ವಿರುದ್ಧವಾಗಿದ್ದ. ನಿರ್ಗತಿಕನಂತಿದ್ದ. ವಿಷೇಶ ಗೌರವ ಸೂಚಕವಾಗಿ ಮಾತಾಡುತ್ತ ಬಂದ ಅವನನು ಅಪ್ಪ ನೀಚ ಸ್ಠಾನದಲ್ಲಿ ಕುಳ್ಳರಿಸಿದ. ನನ್ನ ಆಶೀರ್ವಾದದಿಂದಲೇ ನಿನಗೆ ಒಂದು ತುತ್ತು ಕೂಳು ಸಿಗುತ್ತಲಿರುವುದು ಎಂಬ ಧಿಮಾಕಿನಿಂದಲೇ ಅಲ್ಲಡಿಸುತ್ತಿದ್ದ. ತನಗೆ ಶರಣಾದವರಿಗೆ ತುತ್ತು ಪ್ರಸಾದ ಕರುಣಿಸುವುದರಲ್ಲಿ ಅಪ್ಪನ ಒಂದು ಕೈ ಮುಂದು. ಮನೆಯಲ್ಲಿ ಕೂಳು ದುರ್ಬಲವಾಗಿದ್ದರೂ ಪ್ರಸಾದ ಮಾತ್ರ ಅಲಂಕೃತವಾಗಿರುತ್ತಿತ್ತು. ಅದೂ ಅಲ್ಲದೆ ಅಪರೂಪಕ್ಕೆ ಸತ್ಯಪ್ಪ ಬಂದಿದ್ದಾನಂತ ಅವ್ವ ಘಮಘಮ ಪರಿಮಳ ಕಾರುವಂಥ ಉಪ್ಪಿಟ್ಟು ಮಾಡಿದ್ದಳು. ತಿನ್ನೊದು ತಿಂದಾಮೇಲೆ, ಕುಡಿಯೋದು ಕುಡಿದಾದ ಮೇಲೆ ಮಾಅತು ಶಾಸ್ತ್ರಿಗಳ ಮನೆ ವಿಷಯಕ್ಕೆ ಬಂತು. ಎಂಥಾ ಮನೆ? ಎನ್ಕಥೆ? ಅಂಥ ಹೊಗಳಿದರು. ಹಾಗೆಯೇಆ ಮನೆಯ ಪೂರ್ವೇತಿಹಾಸ ಕೆದರಿದರು. ನಮ್ಮಪ್ಪನಾಗಲೀ, ಸತ್ಯಪ್ಪನಾಗಲೀ ಸ್ಥಳಿಯರಾಗಿರಲಿಲ್ಲ. ನೂರು ಮೈಲಿ ದುಉರದೂರಗಳಿಂದ ತಲಾ ಒಂದೊಂದು ತುಗುಡು ಮಾಡಿ ಅದರಿಂದ ಬಚಾವಾಗಲು ಸದರೀ ಉರಿಗೆ ಬಂದು ಯಾರದೋ ಆಸ್ತಿ ಮೇಲೆ ವಿಜಯ ಪತಾಕೆ ಹಾರಿಸಿದಂಥವರು. ತುಡುಗಿನ ವಿಷಯದಲ್ಲಿ ನಮ್ಮಪ್ಪ ಒಂದು ಹೆಜ್ಜೆ ಮುಂದು. ಸರ್ಕಲ್ ಇನ್ಸೆಕ್ಟರ್ ಮಗಳನ್ನ ಲವ್ ಮಾಡಿ ಓಡಿ ಬಂದಿರೋ ನಮ್ಮಪ್ಪನ ಬಗ್ಗೆ ಬರೆದರೆ ತ್ರಿಶಂಕು ಸ್ಥಿತೀಲಿರೋ ಶಾಮನ ಆತ್ಮ ವಿಲಿವಿಲಿ ಒದ್ದಾಡುವುದು ಗ್ಯಾರಂಟಿ. ‘ನಿಮ್ಮಪ್ಪನ ಘನ ಕಾರ್ಯಗಳ ಬಗ್ಗೆ ನಾನೊಂದು ಕಾದಂಬರಿ ಬರೀತೀನಿ ನೋಡ್ತಿರು’ ಎಂದು ಆತ ಅಂತಿದ್ದುದು ನೆನಪಾಗುತ್ತದೆ. ಬೇರೆಯವರ ಬಗ್ಗೆ ಅಷ್ಟು ಆಸಕ್ತಿ ಇರದಿದ್ದ ಅವನಿಗೆ ಮೇಲುಪ್ಪರಿಗೆ ಮನೆ ಸತ್ಯಪ್ಪನ ಬಗ್ಗೆ ಅಷ್ಟು ಗೊತ್ತಿಲ್ಲ. ನಾನು ಶೋಧಿಸಿರುವ ಪ್ರಕಾರ ಆತ ತಿಪಟೂರಿನಲ್ಲಿ ತೆಂಗಿನಕಾಯಿ ಸಗಟು ವ್ಯಾಪಾರಿಯಾಗಿದ್ದ. ಆತನ ಇಬ್ಬರುಹೇಂಅತಿಯರೂ ಅನುಮಾನಸ್ಪದವಾಗಿ ಸತ್ತಿದ್ದರು. ಭೈರಪ್ಪನವರ ಸಾಕ್ಷಿ ಕಾದಂಬರಿಯ ನಾಯಕನಂತಿದ್ದ ಆತ ಸದರೀ ಊರಿಂದ ಮೇಲುಪ್ಪರಿಗೆ ಮನೆಯ ಶಾಂತಪ್ಪ ತೆಂಗಿನಕಾಯಿ ಖರೀದಿಗೆ ತಿಪಟೂರಿಗೆ ಹೋದಾಗಲೆಲ್ಲ ಸತ್ಯಪ್ಪನ ಮನೇಲಿ ಉಳಕೊಳ್ತಿದ್ದ. ನ್ಯಾಸ್ತ ಬೆಳೆಸಿದ. ಗಇ ನ್ಯಾಸ್ತ ಅದು. ಸದರೀ ಊರಿಗೂ ಬರ್ತಿದ್ದ.. ಹೋಗ್ತಿದ್ದ. ಒಂದು ದಿನ ಶಾಂತಪ್ಪ ಅರಗಿಣಿಯಂಥ ಹೆಂಡತಿಯನ್ನೂ; ಲಕ್ಷ ಸುಮಾರುಆಸ್ತಿಯನ್ನು ಬಿಉಹೇಳದೇ ಕೇಳದೆ ಪರಲೋಕಕ್ಕೆ ಹೊರಟುಹೋದ. ಮಣ್ಣಿಗೆ ಅಂತ ಬಂದ ತಿಪಟೂರಿನ ಸತ್ಯಪ್ಪ ಮೇಲುಪ್ಪರಿಗೆ ಮನೆ ಸತ್ಯಪ್ಪನಾದ. ಆ ಕಡೆಯೂ ತಲೆ ಅಲ್ಲಾಡಿಸುವುದೂ ಈ ಕಡೆಯೂ ತಲೆ ಅಲ್ಲಾಡಿಸುವುದು, ಕಸುಬು ಮಾಡಿಕೊಂಡ. ಅಂದರಿಕಿ ಮಂಚಿವಾಡು ಅನ್ನಿಸಿಕೊಂಡ. ಇಷ್ಟು ಈತನ ಸಂಕ್ಷಿಪ್ತ ಚರಿತ್ರೆಯು.
ಅಪ್ಪನೂ ಸತ್ಯಪ್ಪನೂ ಹೇಳೋದನ್ನೆಲ್ಲ ಹೇಳಿದರು, ಕೇಳೊದನ್ನೆಲ್ಲ ಕೇಳಿದರು. ಹ್ಳುತ್ತ ಕೇಳುತ್ತ ಅದ್ಭುತ ಮಿತ್ರರಾಗಿ ಮಾರ್ಪಾಡು ಹೊಂದಿಬಿಟ್ಟಿದ್ದರು.
"ಹಾಲಪ್ಪಣ್ಣಾ ... ಈಗ ನನ್ನ ಮನಸ್ಸಿಗೆ ಹಾಲು ಅನ್ನ ಊಟ ಮಾಡ್ದೊಷ್ಟು ಸಂತೋಷ ಆಯ್ತು

೨೦೧

ಕಣಪ್ಪಾ ... ನಿಮ್ಮ ಬಲವಂದಿದ್ರೆ ಇಡೀ ಊರ್‍ನೇ ಬೆಂಕಿ ಪೊಟ್ಟಣದಲ್ಲಿಟ್ಟು ನಿಮ್ಗೆ ನಜರೊಪ್ಪಿಸೇನು ಕಣಣ್ಣಾ ... ಆ ಮನೇಲಿ ಹುಟ್ಟಿದ್ದ್ರಿಂದ್ಲೆ ತಾನೆ ದುರ್ಗಪ್ಪ ಹಾಲು ಮೊಸರ್ನಲ್ಲಿ ಕೈಕಾಲು ತೊಳೀತಿರೋದು. ಆ ಮನೇಲಿವಾಸ ಮಾಡಿದ ಮೇಲೆ ತಾನೆ ಪರಮೇಶ್ವರ ಶಾಸ್ತ್ರಿಗಳ ನಾಲಿಗೆಗೆ ದೈವೀ ಶಕ್ತಿ ಲಭಿಸಿದ್ದು ... ಆ ಮನೇಲಿ ಇಲಿ ಹೋದ್ರೆ ಹುಲಿ ಆಗ್ತದೆ ಕಣಪ್ಪಾ ... ನೋಡ್ತಿದೀರಲ್ಲಾ ಆ ಅತ್ತೆ ಸೊಸೆ ಆಡ್ತಿರೋದ್ನ ... ನೀವೇನುಚ್ ಚಿಂತೆ ಮಾಡಬೇಡಿ ... ಅವರಿಬ್ರು ನಾನು ಹಾಕ್ದ ಗೆರೆ ದಾಟೋದಿಲ್ಲ. ನಿಟ್ಟುಸಿರು ಬಿಡ್ದ ಹಾಗೆ ಆ ಮನೇನ ನಿಮಗೆ ಕೊಡಿಸೋ ಹಾಗೆ ಮಾಡ್ತೀನಿ ... ನಿಮ್ಮಂಥ ದೊಡ್ಡ ಮನಸ್ಸು ಈ ಊರಲ್ಲಿ ಯಾರಿಗೆದ್ದೀತು ಹಾಲಣ್ಣ? ... ಬೇರೆಯವರಾಗಿದ್ರೆ ಹೀಗೆ ಯೋಚಿಸ್ತಿದ್ದ್ರಾ? ..." ಇನ್ನೂ ಏನೇನೋ ತಿಪಟೂರು ತೆಂಗಿನಕಾಯಿಯಂಥ ಮಾತುಗಳನ್ನು ನಿರರ್ಗಳವಾಗಿ ಹೊಡೆದ.
ಆ ಮಾತುಗಳನ್ನು ಕೇಳುತ್ತಿದ್ದ ನನಗೆ ಹಂಪಿ ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿರುವ ಶ್ರೀಕೃಷ್ಣ ದೇವರಾಯನನ್ನು ಹಾಡಿ ಹೊಗಳುವ ಶಿಲಾಶಾಸನ ನೆನಪಾಯಿತು.

ಶ್ರೀಕೃಷ್ಣ ಭೂಪಾಲನಂತೆಯೇ ನಮ್ಮ ಅಪ್ಪಾಜಿ ಉಬ್ಬಿಹೋದ. ಮೊದಲೇ ಜಮೀನ್ದಾರೀ ಮನಸ್ಸಿನ ವ್ಯಕ್ತಿ.
ಅಲ್ಲಿಂದ ಹೋದ ಸತ್ಯಪ್ಪ ಅತ್ತೆ ಸೊಸೆಯರಿಗೆ ಏನು ಮೋಡಿ ಮಾಡಿದನೋ? ಏನೋ! "ನೀನು ಹೆಂಗೆ ಹೇಳ್ತೀಯೋ ಹಂಗೆ ಕೇಳ್ತೀವಿ" ಎಂದಿಬ್ಬರು ರಾಜಿಗೆ ಬಂದುಬಿಟ್ಟಿದ್ದೊಂದು ಸೋಜಿಗ. ಹಾಗೆ ಒಪ್ಪಿಕೊಂಡಿದ್ದೂ ಅಲ್ಲದೆ ಪರಮಾನ್ನ; ಅನ್ನ ಹುಳಿ ಸಮಾರಾಧನೆ ಮಾಡಿದರಂತೆ ... ತಾಂಬೂಲ ಸ್ರಕ್ಚಂದನ ನೀಡಿ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ಅಂತ ಶರಣಾಗತ ಭಾವೋನ್ಮುಖರಾಗಿ ಬೀಳ್ಕೊಟ್ಟರಂತೆ.
ಅವರಿಬ್ಬರನ್ನು ಹೇಗೆ ಒಂದು ಮಾಡಿದಿ ಅಂತ ಒಬ್ಬರು ಯಾರೋ ಕೇಳಿದ್ದಕ್ಕೆ ಸತ್ಯಪ್ಪ ಬಾದಾಮು ಕಲ್ಲರಿನ ಅಂಗಿ ಎತ್ತಿ ವೃಕೋದರದ ತಪ್ಪಲಲ್ಲಿ, ಎಂದರೆ ಎರಡುವರೆ ದಶಕದಿಂದ ಸೊಂಟಕ್ಕೆ ಕಟ್ಟಲ್ಪಟ್ಟಿರುವ ಉಡುದಾರಕ್ಕೆ ಕಟ್ಟಲ್ಪಟ್ಟು; ಒಂದೊಂದು ಹೆಜ್ಜೆಗೆ ಒಂದೊಂದು ರೀತಿಯಲ್ಲಿ ನರ್ತನಂಗೈಯುವ ಎರಡೂವರೆ ಇಂಚುದ್ದದ ತಾಯಿತವನ್ನು ತೋರಿಸಿದನಂತೆ. ಅದನ್ನು ಸಾಕ್ಷಾತ್ ಕಲಿಯುಗದ ಯೋಗವಾಸಿಷ್ಠ್ರೆರೆಂದೇ ಹೆಸರಾಗಿದ್ದ ಪರಮೇಶ್ವರ ಶಾಸ್ತ್ರಿಗಳೇ ಮಂತ್ರಿಸಿ ತಮ್ಮ ಕೈಯಾರೆ ಕಟ್ಟಿರುವರಂತೆ ... ಅವರು ಕಟ್ಟಿರದಿದ್ದಲ್ಲಿ ಕೀ.ಶೇ.ಶಾಂತಪ್ಪನ ಹುಲಿಯಂಥ ಭಾವಮೈದುನರೈವರು ಕೊಟ್ಟೂರು ಕೆರೆಯ ತೂಬಿನಲ್ಲಿ ಸತ್ಯಪ್ಪನನ್ನು ಬಚ್ಚಿಟ್ಟುಬಿಡುತ್ತಿದ್ದರಂತೆ... ಅದು ಸೊಂಟದಲ್ಲಿವವರೆಗೆ ಯಾರೂ ತಾನ ಸ್ಯಾಟವನ್ನು ಹರಿದುಕೊಳ್ಳುವುದು ಸಾಧ್ಯವಿಲ್ಲವಂತೆ... ಮುಟ್ಟು ನಿಂತಿರುವ ಯಾರಾದರೂ ಅದನ್ನು ಸ್ಪರ್ಶಿಸಿದರೆ ಸುಟ್ಟುಭಸ್ಮವಾಗುವರಂತೆ... ಆದ್ದರಿಂದ ಆತ್ಮಲಿಂಗೋಪಾದಿಯಲ್ಲಿರುವ ಅದನ್ನು ತಾನು ಪ್ರಾಣಕಿಂತ ಹೆಚ್ಚಾಗಿ ಕಾಪಾಡಿಕೊಳ್ಳುತ್ತಿರುವನಂತೆ... ಹೀಗೆ ಒಂದು ಪುರಾಣವನ್ನೇ ಬಿಚ್ಚುವ ಸತ್ಯಪ್ಪ ಸದಾ ದೇಶಾವರಿ ನಗೆಯನ್ನು ಮುಖದ ತುಂಬ ಮೆತ್ತಿಕೊಂಡಿರುವನು... ಅಂತೂ ಅವನ ಪ್ರಭಾವದಿಂದಾಗಿಯೋ; ಆತ ಕಟ್ಟಿಕೊಂಡಿರುವ ತಾಯಿತದ ನಿಘೂಡ ಶಕ್ತಿಯ ಪ್ರಭಾವದಿಂದಾಗಿಯೋ ವಿಶಿಷ್ಟ ಚಕ್ಕು ಬಂದಿಯ ಕೀ.ಶೇ.ಶಾಮಾಶಾಸ್ತ್ರಿಯ ಪಿತ್ರಾರ್ಜಿತ ಮನೆ ಅಪ್ಪನಿಗೆ ಇಂತಿಷ್ಟೂಂತ ವಿಲೇವಾರಿಯಾಯಿತು.

"ಗೃಹಾಂತ ದ್ರವ್ಯ ಸಂಘಾತಾ" ಹಣವನ್ನು! ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ ಅಂತ ವಿಷ್ಣುಪುರಾಣ ಸಾರಿ ಸಾರಿ ಹೇಳಿದೆ. ಆದರೆ ವಿಧವೆಯರು ಹಣಕ್ಕಾಗಿ


೨೦೨

ಮನೆಯನ್ನೇ ಮಾರಿದ್ದು ಎಂಥ ವಿಚಿತ್ರ! ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸಿತೆಂಬುದಕ್ಕೆ ಅತ್ತೆ ಸೊಸೆಯರಿಬ್ಬರೂ ಬಂದ ಹಣ ಹಂಚಿಕೊಳ್ಳಲು ಕಚ್ಚಾಡದೇ ಇರಲಿಲ್ಲ. ಬಂದ ಹಣಕ್ಕೇನು ಗೊತ್ತು? ಇವರಲ್ಲಿ ಒಳ್ಳೆಯವರ್‍ಯಾರು ಕೆಟ್ಟವರ್‍ಯಾರೂಂತ. ಯಾರ ಹತ್ತಿರ ಬಲ ಇರುತ್ತೋ ಅವರನ್ನು ಸೇರೋದು ಅದರ ಜಾಯಮಾನ. ‘ನಾಂತರಜ್ಜಾ ಶ್ರೀಯೋ ಜಾತು ಪ್ರಿಯೈರಾಸಾಂ ನಭೂಯತೆ’ ಸಂಪತ್ತಿಗೆ ನೀಚ ಮತ್ತು ಉತ್ತಮ ಎಂಬ ತರತಮ ಭೇಧವಿರುವುದಿಲ್ಲ. ಸಂಪತ್ತು ನಮ್ಮನ್ನು ಪ್ರೀತಿಸ್ತಿದೆ ಅಂತ ಮೂರ್ಖರು ಮಾತ್ರ ತಿಳಕೊಂಡಿರ್‍ತಾರೆ ... ಚಪಳೆ ಸೊಡರ ಕುಡಿಯುಂ ಪೋಳ್ವಲ್ ಅಂಥ ನಮ್ಮ ಮಾರ್ಗ ಕವಿ ನಯಸೇನ ಹೇಳಿರೋದು ಅಕ್ಷರಶಃ ನಿಜ. ಅದು ಯಾರೊಬ್ಬರ ಜೇಬಿನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೊಗೊಳ್ಳೋ ಜಾಯಮಾನದ್ದಲ್ಲ. ಪಟಾಕಿಯಂತೆ ನಿಶ್ಶಬ್ದವಾಗಿ ಚಟಚಟ ಸಿಡಿಯುತ್ತಲೇ ಇರುತ್ತದೆ. ತನಗೆ ಆಶ್ರಯ ನೀಡಿದವರಿಗೆ ಹೊಸ ಹೊಸ ಪ್ರೇರಣೆಗಳನ್ನು ನೀಡುತ್ತಲೇ ಇರುತ್ತದೆ. ಹೆಣಗಳ ಹಿಂದೆ ಸದ್ದು ಮಾಡುವ ರೀತಿಯಲ್ಲಿ; ಮಂಗಳಾರತಿ ತಟ್ಟೆ ಮೇಲೂ ಶಬ್ದ ಮಾಡುತ್ತದೆ, ಮನುಷ್ಯ ಮನುಷ್ಯನ ನಡುವೆ ಸಮಾಜ ಸಮಾಜಗಳ ನಡುವೆ ದೇಶ ದೇಶಗಳ ನಡುವೆ ಗೆರೆ ಎಳೀತದೆ; ಗೋಡೆ ಕಟ್ಟುತ್ತದೆ, ಇನ್ನೇನೆಲ್ಲ ಮಾಡುತ್ತದೆ ಮಾಡಿಸುತ್ತದೆ. ಪ್ರಪಂಚದಾದ್ಯಂತ ಅದು ಒಂದೇ ಭಾಷೆಯಲ್ಲಿ ಮಾತಾಡುತ್ತದೆ. ಎಂಥೆಂಥವರನ್ನೂ ಮಣ್ಣು ಮುಕ್ಕಿಸಿದ ಅದಕ್ಕೆ ಈ ವಿಧವೆಯರು ಯಾವ ಲೆಕ್ಕ?

"ನನ್ನ ಪಾಲಿಗೆ ಬರೋದನ್ನು ಕೊಟ್ಟು ಬಿಡು ವರಲಕ್ಶ್ಮೀ ... ಮುದುಕೀನ ಗೋಳು ಹುಯ್ಕೊಂಡರೆ ನಿನಗೆ ಒಳ್ಳೇದಾಗೋದಿಲ್ಲ" ನೀರು ತುಂಬಿದ ತಾಮ್ರದ ತಂಬಿಗೆಯನ್ನು ನೆಲದ ಮೇಲೆ ಕುಕ್ಕಿ ಮುದುಕಿ ತಲೆಗೆ ಕೈಹೊತ್ತು ಕೂತುಬಿಟ್ಟಿತು.
"ಅಯ್ಯೋ ರಾಮ ರಾಮ ... ಈ ವಯಸ್ಸಿನಲ್ಲಿ ಹಣ ತಗೊಂಡೇನು ಮಾಡ್ತಿದ್ದೀತು ಇದು?" ಗಟ್ಟಿಯಾಗಿಯೇ ಗೊಣಗಿದಳು ಸೊಸೆ.
"ನಾನೇನಾರ ಮಾಡ್ಕೋತೀನೇ ... ಅದನ್ನ ಕೇಳೊಕೆ ನೀನ್ಯಾರೆ?"
"ನಾನ್ಯಾರಂತೀರಲ್ಲ ... ನಾನು ನಿಮ್ಮ ಸೊಸೆ."
"ನನ್ ಮಗ ಯಾವತ್ತು ಸತ್ನೋ ... ಅವತ್ತೇ ನನ್ನ ನಿನ್ನ ಋಣ ತೀರ್‍ತು."
"ಎಹ್ಟು ಹಗುರಾಗಿ ಮಾತಾಡ್ತಿದೀರಲ್ಲ ... ನಾನು ನಿಮ್ಮ ಸೊಸೆ ಅಲ್ವೇ?"
"ಸೊಸೆ ಆಗಿದ್ರೆ ... ಇಡೀ ಗಂಟು ನನ್ನ ಕೈಲಿ ಕೊಟ್ಟು ಹಿರೇಳಾದ ನಾನು ಹೇಳ್ದಂಗೆ ಕೇಳ್ಕೊಂಡು ಬಿದ್ದಿರ್‍ತಿದ್ದಿ ಕಣೆ"
"ಬಿದ್ದಿರೋಕೆ ನಾನೇನು ನಾಯಿಯಲ್ಲ"
"ಹಾಗಿದ್ರೆ ಕೊಟ್ಟು ಬಿಡು ನನ್ನ ಪಾಲಿಂದು"
"ತಗೊಂಡೇನ್ಮಾಡ್ತೀರಂತ"
"ಹಾಳುಭಾವಿಗೆ ಬೀಳ್ತೀನಿ ಕಣೇ"
ಹಣ ಹಂಚಿಕೊಳ್ಳುವ ವಿಷಯದಲ್ಲಿ ಅತ್ತೆ ಸೊಸೆಯರ ಜಗಳ ಯಶಸ್ವಿಯಾಗಿ ಒಂದು ದಿನ ಪೂರೈಸಿತು. ಒಂದೆರಡು ವರ್ಷಗಳಲ್ಲಿ ವೈಕುಂಠವಾಸಿಯಾಗಲಿರುವ ಅತ್ತೆಗೆ ಇಡೀ ಗಂಟು ಕೊಡುವುದೆಂದರೇನು? ಕೊಟ್ಟಲ್ಲಿ ಅದು ಮತ್ತಿನ್ನಾರ ಬಾಯಿಗಿಡುವುದೋ? ಬದುಕಿರೋವಷ್ಟು ಕಾಲ ಮೊಮ್ಮಕ್ಕಳೊಂದಿಗೆ ಆಡಿಕೊಂಡಿದ್ದು ಪ್ರಾಣ ಬಿಡುವುದಕ್ಕೇನಾಗಿದೆ ಧಾಡಿ! ಕೊನೆಗಾಲಕ್ಕೆ ಬಾಯಲ್ಲಿ ಗಂಗಾಜಲ ಬಿಡಲಿಕ್ಕಾದರೂ ತಾವು ಬೇಡವೇನು? ಸೊಸೆ ವರಲಕ್ಷ್ಮಿ ಪರಿಪರಿಯಾಗಿ


೨೦೩

ಯೋಚಿಸಿದರೂ ಅತ್ತೆ ರಾಜಿಯಗುವ ಲಕ್ಷಣ ಕಂಡು ಬರಲಿಲ್ಲ. ತನ್ನ ಪಾಲಿಂದು ತನ್ನ ಹಸ್ತಗತವಾಗದ ಹೊರತು ಜಪ್ಪಯ್ಯ ಅಂದರೂ ಕದಲದೆ ಇರುವ ಅತ್ತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ವರಲಕ್ಷ್ಮಮ್ಮ ಮತ್ತೆ ಮೇಲುಪ್ಪರಿಗೆ ಸತ್ಯಪ್ಪನ ಸಹಾಯ ಯಾಚಿಸಿದಳು. ಅದರಲ್ಲಿ ನೀನೆಷ್ಟು ಪರ್ಸೆಂಟು ಕಮೀಷನ್ ಹೊಡೆದೆ ಎಂದು ಒಂದೆರಡು ದಿನಗಳಿಂದ ಅವರಿವರು ಒಂದೇ ಸಮನೆ ಕೇಳುತ್ತಿದ್ದುದರಿಂದ ಸತ್ಯಪ್ಪ ಶಿವಪುರದ ಗವಿಮಠದಲ್ಲಿ ಕಳೆದ ವಾರದಿಂದ ನಡೆಯುತ್ತಿದ್ದ ಕೊಟ್ಟೂರೇಶ್ವರ ಪುರಾಣ ಕೇಳಲು ನಾಳೆಯೇ ಹೊರಡಬೇಕೆಂದು ನಿಶ್ಚಯಿಸಿ ಒಂದು ವಿಭೂತಿ ಉಂಡೆಯನ್ನು ನೂರು ರುಪಾಯಿ ಸಂಗಡ ಖಲ್ಲೀ ಜೇಬಿನಲ್ಲಿ ಇಟ್ಟುಕೊಂಡಿದ್ದ. ಅಷ್ಟರೊಳಗೆ ಶಾಸ್ತ್ರಿಗಳ ಮನೆ ಬೆಳಗಿದ ಸೊಸೆ ಬಂದು ಎಂದುಬಿಡುವುದೇ! ಧರ್ಮಸಂಕಟಕ್ಕಿಟ್ಟುಕೊಂಡಿತು ಆತನಿಗೆ. ಯೋಚಿಸುತ್ತ ಯೋಚಿಸುತ್ತ ಅದನ್ನು ಎರಡು ಮೂರು ಕಡೆ ಎತ್ತಿಟ್ಟೂ ಎತ್ತಿಟ್ಟೂ ಒಪ್ಪಿಕೊಂಡ. ಸದರೀ ಪಟ್ಟಣದಲ್ಲಿ ತಾನು ಮತ್ತಷ್ಟು ಭದ್ರವಾಗಿ ನೆಲೆಗೊಳ್ಳುವಂತಾಗಲು ಹಾಲಪ್ಪನ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳಲು ಇದೇ ಸುವರ್ಣಾವಕಾಶವೆಂದು ಬಗೆದ. ಇನ್ನು ಮೂರು ವರ್ಷಗಳಲ್ಲಿ ಬರಲಿರುವ ಪಂಚಾಯ್ತಿ ಚುನಾವಣೆಗಳಲ್ಲಿ ಹನ್ನೊಂದನೆ ವಾರ್ಡಿನಲ್ಲಿ ಸಾಗುವಾನಿ ಮರದಂತಿರುವ ಹಾಲಪ್ಪನವರ ಸಹಾಯ, ಸಹಕಾರ ಇರದಿದ್ದಲ್ಲಿ ಆದೀತೇನು? ಹನ್ನೊಂದನೆಯ ವಾರ್ಡಿನಲ್ಲಿ ಹರಿಯೋ ಹಾವು ಕೂಡ ಹಾಲಪ್ಪನವರ ಹೆಸರು ಕೇಳಿದೊಡನೆ ಒಂದೈದು ನಿಮಿಷ ರೆಸ್ಟ್ ತಗೊಂಡೇ ಮುಂದುವರಿಯಬೇಕು.

ಸತ್ಯಪ್ಪ ಅಂದುಕೊಂಡಂತೆ ಹಾಲಪ್ಪನನ್ನು ಭೇಟಿಯಾದ, ಉಭಂ ಶುಭಂ ಹೇಳಿದ. ಹಾಗೆಯೆ ಅತ್ತೆ ಸೊಸೆಯರ ನಡುವೆ ಉದ್ಭವಿಸಿರುವ ಹೊಸ ಸಮಸ್ಯೆ ಬಗೆಗೂ, ಸತ್ಯಪ್ಪ ಮತ್ತು ಹಾಲಪ್ಪ ಬೇರೆ ಬೇರೆ ಅವಧಿಯಲ್ಲಿ ಅತ್ತೆ ಸೊಸೆಯರೀರ್ವರನ್ನು ಅಲಾಯಿದಾಗಿ ಬೆಟ್ಟಿಯಾಗಿ ಕೂಲಂಕುಷ ಚರ್ಚೆ ನಡೆಸಿದರು. ಹಣವೇ ಸರ್ವ ದುಃಖಕ್ಕೆ ಮೂಲವೆಂದು ಕಾವಿ ನಿಲುವಂಗಿ ತೊಟ್ಟ ಕ್ಷಣದಿಂದ ಏರು ದನಿಯಲ್ಲಿ ಮಾತಾಡುವ ಗುರುಸಾಂತಪ್ಪನೂ ನದಿಯನ್ನು ಹಳ್ಳ ಸೇರಿಕೊಳ್ಳುವಂತೆ ನಡುವೆ ಸೇರಿಕೊಂಡ. ಒಂದೇ ದೇಹದ ಮೂರು ಮುಖಗಳಂತೆ ಅವರು ನಡೆದೂ ನಡೆದೂ ಸದರೀ ಮನೆಯನ್ನು ತಲುಪಿದರು.

ಆಗಲೇ ಸಾಕಷ್ಟು ಮಾತುಗಳನ್ನು ಕಂಠಪಾಠ ಹಾಕಿದ್ದ ವರಲಕ್ಷ್ಮಮ್ಮ ಬಾಗಿಲಲ್ಲಿ ಕಂಡಳು. ಪರೀಕ್ಷಾರ್ಥವಾಗಿ ಪರಮ ಸಾಧ್ವಿ ಅನಸೂಯಳ ಸ್ತನ್ಯಪಾನ ಮಾಡಲು ಬಂದಿರುವ ತ್ರಿಮೂರ್ತಿಗಳಂತೆ ಅವರು ಗೋಚರಿಸಿದರು. ಎದೆ ತುಂಬ ಸೆರಗು ಹೊದ್ದು ಸ್ವಾಗತಿಸಿ ಆಟವಾಳಿಗೆಯಲ್ಲಿ ಚಾಪೆ ಹಾಸಿ ಕೂಡ್ರಿಸಿ ಕುಡಿಯಲೆಂದು ಒಂದು ತಂಬಿಗೆ ನೀರು ಒಂದು ಲೋಟ ಇಟ್ಟಳು. ನಡೆದೂ ನಡೆದೂ ಸುಸ್ತಾಗಿದ್ದ ಅವರು ದಾಹಪರಿಹಾರಾರ್ಥವಾಗಿ ನೀರು ಕುಡಿದು ಎರಡು ಗುಟುಕು ಗಂಟಲಲ್ಲಿರಿಸಿಕೊಂಡು ವಿಷಪ್ರಾಶನ ಮಾಡಿದ ಪರಮೇಶ್ವರನಂತೆ ಮುಖ ಸಿಂಡರಿಸಿಕೊಂಡರು. ಮಹಾ ಸಾಧ್ವಿಯೂ ವ್ಯವಹಾರ ಕುಶಲಿಯೂ ಆದ ಆಕೆ ಬೇಕೆಂದೇ ಹಿಂದೂ ಮಹಾ ಸಾಗರವೆ ನೆಲೆ ಪಡೆದಿರುವ ಬಸವನ ಬಾವಿಯ ನೀರು ಅದರಲ್ಲಿ ತುಂಬಿದ್ದಳು. ಮನೆ ಕೊಡೋದು ಕೊಟ್ಟಾಗಿದೆ, ಪಡೆಯೋದು ಪಡೆದಾಗಿದೆ ಇನ್ನು ಇವರ ಮುಲಾಜು ಯಾಕೆ ಎಂಬ ಭಾವನೆಗಿಂತ ಮುಖ್ಯವಾಗಿ ತಾವು ದೂರದ ಬಾವಿಯಿಂದ ಸಿಹಿನೀರು ತರಲಾರದಷ್ಟು ಅಬಲೆಯರು ಎಂಬುದನ್ನು ಸಾಬೀತುಪಡಿಸಲಿಕ್ಕಾಗಿ ಇರಬಹುದು. ಅದೇ ಉಪ್ಪು ನೀರನ್ನು ಕುಡಿದೂ ಕುಡಿದೂ


೨೦೪

ಗಂಟಲ ತುರಿ ಹೆಚ್ಚಿಸಿಕೊಂಡ ವಯೋವೃದ್ಧೆಯೂ, ಜ್ಞಾನವೃದ್ಧೆಯೂ ಆದ ಅಲುಮೇಲಮ್ಮಜ್ಜಿ ಒಂದೇ ಸಮನೆ ಕೊಕ್ ಕೊಕ್ ಕೆಮ್ಮುತ್ತ ತಾವಿನ್ನೂ ಬದುಕಿರುವ ಸೂಚನೆ ನೀಡಿತಲ್ಲದೆ, ಗೀರ್ವಾಣ ಭಾಷಾ ಸದೃಶವಾದ ಸದ್ದಿನ ಮೂಲಕ ಪಂಚಾಯ್ತಿ ನೆಪದಲ್ಲಿ ತನಗೇನಾದರೂ ಅನ್ಯಾಯ ಮಾಡಿದಲ್ಲಿ ರೌರವ ನರಕ ಪ್ರಾಪ್ತವಾಗುತ್ತದೆ ಎಂಬ ಸೂಚನೆಯನ್ನೂ ನೀಡುತ್ತ ಹೊರಬಂದಿತು. ವೈರಾಗ್ಯ ಶತಕದ ಈ ಮುಂದಿನ ಶ್ಲೋಕವೇ ವೃದ್ಧೆಯ ರೂಪ ಧರಿಸಿ ನಡೆದು ಬರುತ್ತಿರುವುದೆಂಬಂತೆ ಸೊಸೆಗೆ ಗೋಚರಿಸಿತು.
ವಲೀಭೀರ್ಮು ಖಿಮಾಕ್ರಾಂತಂ, ಅಂದರೆ ಸುಕ್ಕುಗಳಿಂದಲೇ ತುಂಬಿರುವ ಮುಖ
ಪಲಿತೈರಂ ಶಿರಃ, ಅಂದರೆ ನರೆ ಕೂದಲಿಂದ ತುಂಬಿರುವ ತಲೆ
ಗಾತ್ರಾಣಿ ಶಿಥಿಲಾಯಂತೇ, ಅಂದರೆ ಶಿತಿಲಾಥಿ ಶಿಥಿಲವಾಗಿರುವ ಅಂಗಾಂಗಳು
ತೃಷ್ಣೈಕಾ ತರುಣಾಯಂತೇ, ಅಂದರೆ ಆಸೆಯೊಂದೇ ಯೌವನದಿಂದ ಕೂಡಿದೆ
‘ಬರ್ರಿ ಅತ್ತೆಮ್ಮ ಬರ್ರಿ’ ನಾಟಕೀಯವಾಗಿ ಸ್ವಾಗತಿಸಿದ ವರಲಕ್ಷ್ಮಿ ಕೂಡ್ರಲೊಂದು ಮಣೆ ಹಾಕಿ ಅದರ ಮೇಲೆ ದರ್ಭೆ ಚಾಪೆಯ ತುಂಡನ್ನು ಹೊದ್ದಿಸಿ ವಿಧೇಯತೆಯಿಂದಲೇ ಮಾಡಲ್ಪಟ್ಟಿರುವಳಂತೆ ತುಸು ದೂರದಲ್ಲಿ ನಿಂತಳು.
ಆಕೆಯು ತಾಲೀಮು ನೀದಿದ್ದರಿಂದ ಇಬ್ಬರು ಮಕ್ಕಳು ಖಟ್ಲಿಗೆ ಹೊಸ ತಿರುವು ನೀಡುವ ಸಾಕ್ಷಿಗಳಂತೆ ಒಂದೊಂದೆ ಹೆಜ್ಜೆ ಇಕ್ಕುತ್ತ ಬಂದು ತನ್ನನ್ನು ಹೆತ್ತಾಕಿಯ ಎರಡೂ ಪಕ್ಕದಲ್ಲಿ ನಿಂತವು. ಭಲೆ ಭಲೆ ಎಂಬಂತೆ ಆಕೆ ಮಕ್ಕಳ ಮೈದಡವಿದಳು.
ಸ್ವಲ್ಪ ಹೊತ್ತು ಮೌನವೆಂಬುದು ತಂತಾನೆ ನೆಲೆಸಿತು. ತ್ರಿಮೂರ್ತಿಗಳು ಮೊದಲು ಪರಸ್ಪರ ಮುಖ ನೋಡಿಕೊಂಡರು. ನಂತರ ಅವರಿಬ್ಬರ ಮುಖ ನೋಡಿದರು, ನಿಟ್ಟುಸಿರು ಬಿಟ್ಟರು. ನಂತರ ತಾವಿಲ್ಲಿಗೆ ಹೊರಡುವ ಮುನ್ನ ಸೇವಿಸಿದ ಆಹಾರ ನೆನಪಿಸಿಕೊಂಡರು. ಮುಖ ಕಿವಿಚಿಕೊಂಡರು. ಹೋಬ್ಬ ಅಂತ ತಲಾ ಒಂದೊಂದು ಡೇಗುಗಳನ್ನು ಡೇಗಿ ವಾತಾವರಣಕ್ಕೆ ವಿಶೇಶ ಮುದ ನೀಡಿದರು.
ಯಾರು ಮೊದಲು ಮಾತು ಆರಂಭಿಸಬೇಕೆಂಬುದೇ ಪ್ರಮುಖ ಸಮಸ್ಯೆಯಾಯಿತು.
‘ಏನಮ್ಮಾ ನಿಮ್ಮ ಸಮಸ್ಯೆ? ಸಿರಿಯ ಸಂಪದದಿಂದ ಬಾಳ್ವವ ಮರಣ ಮದ್ದನು ಕುಡಿಯಬಹುದೆ?... ಚಂಚಲೆಯಾದ ಲಕ್ಷ್ಮಿಯ ಕಾರಣದಿಂದ ನೀವಿನಿತು ಜಗಳವಾಡ್ವದು ನ್ಯಾಯವೇನ್ರಮ್ಮಾ? ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು ನ್ಯಾಯದಿಂ ಸಾಮರಸ್ಯದಿಂ ಬಾಳ್ವುವುದೇಕಾಗಬಾರದ್ರಮ್ಮಾ?" ಸ್ವಲ್ಪ ಹೊತ್ತಿನ ಹಿಂದೆ ಎಳೆದಿದ್ದ ಗಾಂಜಾದ ನಿಶೆಯಿಂದಾಗಿ ಗುರುಸಾಂತಪ್ಪ ವಿಶಿಷ್ಟ ರೀತಿಯಲ್ಲಿ ಭಾಷಾ ಪ್ರಯೋಗ ಮಾಡಿ ಗಡ್ಡ ನೀವಿಕೊಂಡ.
ತ್ರಿಮೂರ್ತಿಗಳ ಪೈಕಿ ಉಳಿದಿಬ್ಬರು ನೆಮ್ಮದಿಯಿಂದ ಉಸಿರುಬಿಟ್ಟರಾದರೂ ಅವಧೂತನಾಡಿದ ಮಾತಿನ ತಳಬುಡ ಅರ್ಥವಾಗಲಿಲ್ಲ.
"ಹ್ಯಾಗ್ರಿ ತಾತ? ... ಸಾಮರಸ್ಯದಿಂದ ಬಾಳುವೆ ಮಾಡೂದು? ಅವರೊಂದಿಗೆ ನಾನೂ ಮಕ್ಕಳನ್ನು ಕಟ್ಟಿಕೊಂಡು ತುಂಬಿದ ಕೆರೇಲಿ ಬಿದ್ದಿದ್ರೆ ಅತ್ತೆಮ್ಮ ನೆಮ್ಮದಿಯಿಂದ ಇರುತ್ತಿದ್ದರೇನೋ..." ಸೆರಗನ್ನು ಬಯಿಗಡ್ಡ ಇಟ್ಟುಕೊಂಡು ಬಿಕ್ಕಿದಳು.
ಪೀಠ ನಿರಾಕರಿಸಿ ಅದರ ಪಕ್ಕ ಕೂತಿದ್ದ ಮುದುಕಿ ಗಂಟಲಲ್ಲಿದ್ದ ಕಫವನ್ನು ಬಾಯಿಗೆ ತಂದುಕೊಂಡುರುಳಾಡಿಸಿ ಮತ್ತೆ ನುಂಗಿ ಅದರಿಂದ ಹೊಸ ತೇಜಸ್ಸು ಪಡೆದು ನಿಗಿನಿಗಿ


೨೦೫

ಉರಿಯುತ್ತ ...
ಇನ್ನಾದ್ರೂ ಸಾಕು ಮಾಡೇ ನಾಟಕದ ಮಾತಾಡೋದನ್ನು ... ಕೆರೆ ಭಾವಿ ನೋಡ್ಕೊಳ್ಳೋಳಾಗಿದ್ರೆ ಇನ್ನೂ ಬದುಕಿರೋ ನನಗೆ ದ್ರೋಹ ಮಾಡುತಿದ್ದೆಯೇನು? ಯಾವತ್ತು ಈ ಮನೆ ಮಾರಿದೆಯೋ ಅವತ್ತೆ ನನ್ನ ನಿನ್ನ ಋಣ ತೀರ್‍ತು..." ಕೈ ಅಡ್ಡ ಅಡ್ಡ ತಿರುವಿ ಮಾತಾಡಿತು.
"ಛೇ! ಛೇ! ಎಂಥ ಮಾತಾಡ್ತೀರಲ್ಲ ನೀವು ... ನಿಮ್ಮ ಒಪ್ಪಿಗೆ ಇಲ್ದೆ ನಾನೀಮನೆ ಮಾರಿದ್ದೇನು! ಈ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳ್ತೇನಿ ... ನಿಮ್ಮ ಒಪ್ಪಿಗೆ ದೊರೆತ ಮೇಲಲ್ವೆ ಮನೆ ವಿಲೇವಾರಿ ಮಾಡಿದ್ದು ... ಈಗೇನಾಯ್ತು ... ತಡೀರಿ ..." ಮಕ್ಕಳನ್ನು ಎರಡು ದಿಕ್ಕೆಗೆ ದೂಡಿ ದುಡುದುಡು ಒಳಗೆ ಓಡಿ.. ದಟ್‌ಪುಟ್ ಸದ್ದು ಮಾಡುತ್ತ ಪೆಟಾರಿ ತೆಗೆದು "ಮುಚ್ಚಿ" ಸುಂಟರಗಾಳಿಯಂತೆ ಹೊರ ಬಂದು ಕೈಯಲ್ಲಿದ್ದ ಹಣದ ಕಂತೆಯನ್ನು ತ್ರಿಮೂರ್ತಿಗಳ ಮುಂದಕ್ಕೆ ಕುಕ್ಕಿ ಮುಂದುವರಿದು ಈ ಪ್ರಕಾರವಾಗಿ ಹೇಳಿದಳು,
"ಹಾಲಪ್ಪಣ್ಣಾ ... ನಿಮ್ಮ ಹಣ ತೊಗೊಂಡು ಈ ಮನೇನ ಮುದುಕಿ ಹೆಸರೀಗೆ ಬರೆದುಕೊಟ್ ಬಿಡಿ ... ನಾನೀ ಕ್ಷಣನೇ ನಾನೂ ನನ್ ಮಕ್ಳೂ ವಿಷಪ್ರಾಷನ ಮಾಡಿ ಸತ್ತು ಹೋಗ್ತೀವಿ. ಈ ಮುದುಕಿ ಮುಂದೊಂದು ದಿನ ಸತ್ತ ಮೇಲೆ ಮನೆಯೊಳ್ಗೆ ಸಮಾಧಿ ಮಾಡಿ ಬೃಂದಾವನ ಕಟ್ಟಿಸಿ ಉಸ್ತುವಾರಿ ನೊಡ್ಕೊಳ್ಳೋಕೆ ಸಂಪ್ರದಾಯಸ್ಥ ಬ್ರಾಹ್ಮಣರನ್ನು ನೇಮಿಸಿಬಿಡಿ ..." ಇಷ್ಟು ಅಂದದ್ದೇ ಎರಡು ಕಣ್ಣುಗಳಿಂದ ಎರಡು ವಿಧದ ಜಲಪಾತ ಸುರಿಯುತ್ತ ಗಂಡ ಸತ್ತ ಮೇಲೆ ಬದುಕಿರಬಾರ್ದೂ ಅಂತ ಬದುಕಿನ ಒಂದೊಂದು ರೋಚಕ ಕ್ಷಣಗಳಿಗೆ ಒಂದೊಂದು ಹೊಸ ರೂಪ ಕೊಡತೊಡಗಿದಳು.
"ನೋಡಿದ್ರ್ಯಾ ... ನೋಡಿದ್ರ್ಯಾ ... ಇವ್ಳು ಈ ಮುದಿ ಅತ್ತೆ ಮೇಲಿಟ್ತಿರೋ ಪ್ರೀತೀನ ..." ಎಂದು ಹೇಳುತ್ತಲೇ ಎದ್ದು ನಿಂತು ಮೊಣಕಾಲಿಗೆ ಮುಂಗೈಯೂರಿ ಇನ್ನೊಂದು ಮುಂಗೈಯನ್ನು ಮೇಲೆತ್ತಿ ತಿರುವುತ್ತ "ನಾನು ಸಮಾಧಿ ಆಗಿ ಅದ್ರ ಮೇಲೆ ಬೃಂದಾವನ ಎದ್ರೆ ಸಂತೋಷ ಪಡ್ತಾ ನೀನಿಲ್ಲೇ ಇರುವಿಯಂತೆ ... ಹೇಳಿದ್ನೋ ಬಿಟ್ಟಿದ್ನೋ ... ಅಂತೂ ಮನೆ ಮಾರಿ ಪುಣ್ಯ ಕಟ್ಟಿಕೊಂಡೆಯಲ್ಲ ... ನನ್ಗೆ ಬರೋದನ್ನ ನನಗೆ ಕೊಟ್ಟುಬಿಡು ... "
ಮುದುಕಿಗೆ ಯಾಕೆ ಹಣದ ವ್ಯಾಮೋಹ ಬಂತೆಂಬುದರ ತಳಬುಡ ತ್ರಿಮೂರ್ತಿಗ್ಳಿಗೆ ಅರ್ಥವಾಗಲಿಲ್ಲ. ..
ಪ್ರಳಯ ಸ್ಥಾನದಲ್ಲಿ ಹಾಲಪ್ಪನೇ ಮಾತಾಡಿದ.
"ಮಾರಿದ್ದಾಯ್ತು ನಾನು ತಗೊಂಡಿದ್ದಾಯ್ತು ... ಇನ್ಯಾಕೆ ಇದ್ರ ಬಗ್ಗೆ ಚರ್ಚೆ ..."
ಸ್ಥಿತಿಸ್ಥಾನದಲ್ಲಿದ್ದ ಸತ್ಯಪ್ಪ ಪುಡಾರಿ ಗತ್ತಿನಲ್ಲಿ ನಿರ್ಧರಿಸಂತೆ ಮಾತಾಡಿದ.
"ನೀವಿಬ್ರು ಭಾರತದ ಕುಟುಂಬ ವ್ಯವಸ್ಥೆಯ ಎರಡು ಆದರ್ಶ ಮಾದರಿಗಳು ... ಹನ್ನೊಂದನೇ ವಾರ್ಡಿಗೆ ಎರಡು ಕಣ್ಣುಗಳಿದ್ದ ಹಾಗೆ ... ಮತ್ತೆ ... ಮ...ತ್ತೆ" ಕಂಠಪಾಠ ಮಾಡಿದ್ದ ಮುಂದಿನ ಮಾತುಗಳ ‘ಫೀಜು’ನಡುವೆ ಎಗರಿಹೋಯಿತು.
ಸೃಷ್ಟಿ ಸ್ಥಾನದ ಗುರುಸಾಂತಪ್ಪಗೆ ಜವಾರಿ ಭಾಷೆಯಲ್ಲಿಯೇ ಮಾತಾಡಿದರೆ ಇವರಿಗೆ ರಾಮಬಾಣವಾದೀತು ಎಂದು ಊಹಿಸಿದ.
"ವೋಗ್ರವ್ವಾ ... ವೋಗ್ರಿ ... ದೇಸದಾಗೆಲ್ಲೂ ಇಲ್ಲದೆ ಅತ್ತೆ ಸೊಸೀ ನೀವೇ ಐದೀರೋ ಹೆಂಗೆ ... ಹಿಂಗ ಕಿತ್ತಾಡೊರ್ನ ನನ್ನ್ಯಾ ದೇಸದಾಗೂ ನೋಡಿಲ್ಲ ಬುಡ್ರಿ ... ಕಿಸಿಲಾರದ ರೊಕ್ಕಕ್ಕ ಹಿಂಗ


೨೦೬

ಕಿತ್ತಾಡಿದ್ರೆ ದೇವ್ರು ಮೆಚ್ತಾನೇನು? ನಿಮ್ಗೂ ಕೆಲಸ ಬೊಗಸೆ ಇಲ್ಲಾಂದ್ರೆ ನಮ್ಗೂ ಇಲ್ಲಾಂತ ತಿಳ್ದೀರೋ ಹೇಗೆ? ನೀವು ಮೇಲಾಗಿ ಬ್ರಾಂಬ್ರು ... ಒಳ್ಳೆದು ಕೆಟ್ಟದ್ದು ತಿಳ್ದಂಥೋರು. ನಿಮ್ಮಂಥೊರು ನಮ್ಮಂಥೊರ್ಗೆ ಬುದ್ಧಿ ಹೇಳ್ಬೇಕು ... ಅದು ಬಿಟ್ಟು ನಿಮ್ಮ ನ್ಯಾಯ ಬಗೆ ಹರ್ಸಕ್ಕೆ ನಾವೇ ಬರ್ಬೇಕಾ ... ಏಯ್ ಹಾಲಪ್ಪ ... ಈಟು ವಯಸ್ಸಾದ್ರು ನಿಂಗಿನ್ನು ಆಸ್ತಿ ಮಾಡೋ ಹುಚ್ಚು ಬಿಡ್ಲಿಲ್ಲ ... ಇದ್ನೆಲ್ಲ ಸತ್ತಾಗ ಹಿಂದು ಒಯ್ತಿ ಯೇನು? ಈ ಮನಿ ನಡುವಳಿಕೆಗೆ ನಿನ್ಗೆ ಹತ್ತಿ ಬರೋವಂಗಕಾಣುವಲ್ದು. ನಿನ್ನ ರೊಕ್ಕ ನೀನು ತಗೋ ... ಹೊಂಟು ಬಿಡೋಣ" ಎಂದು ಒಂದೇ ಉಸಿರಿಗೆ ಮಾತಾಡಿ ಗಾಂಜಾದ ಗುಳಿಗೆಯೊಂದನ್ನು ಬಾಯಿಗೆ ಹೊಕ್ಕಂಡು ದವಡೇಲಿ ಪ್ರತಿಷ್ಟಾಪಿಸಿ ಬಿಟ್ಟನು.

ತನ್ನ ಸಂಭಂದೀ ಮಾತುಗಳಿಂದ ಹಾಲಪ್ಪ ಒಂದು ಕ್ಷಣ ದಿಗ್ಭ್ರಮೆಗೊಂಡ.ಚೇತರಿಸಿಕೊಂಡು" ಹೋಗ್ಲಿ ಬಿಡು ಗುರುಸಾಂತ ... ಪ್ರಪಂಚ ಅರೀದ ಹೆಣ್ಮಕ್ಕಳ ಮಾತಿಗೆ ಬೇಸರ ಮಾಡ್ಕೊಂಡ್ರೆ ಹೆಂಗೆ? ... ಸಂಪತ್ತಿನ ವಿಷಯದಾಗ ಎಂಥೆಂಥ ದೇವಾನುದೇವತೆಗಳೇ ಜಗಳಾಡಿದ್ದಾರೆ... ಇನ್ನು ಈ ಹೆಣ್ಣು ಮಕ್ಕಳ ಪಾಡೇನು?" ಎಂದು ವರಲಕ್ಷ್ಮಿ ಕಡೆ ತಿರುಗಿ "ನೀನೂ ನನ್ತಂಗಿ ಇದ್ದಂಗೆ ಅಂತ ತಿಳ್ದು ಹೇಳ್ತೀನಿ ... ನಿನ್ ಮನಸ್ಸಿನಾಗದೇನೈತೆ ಹೇಳಿ ಬಿಡು ತಾಯಿ" ಎಂದ.
ಶೂದ್ರರಾಡುತಿರುವ ಗ್ರಾಮ್ಯ ಭಾಷೆಯಿಂದ ತನ್ನ ಕಿವಿ ಸಂಸ್ಕಾರವೇ ಹಾಳಾಯಿತೆಂಬಂತೆ ಮುಖ ಮಾಡಿದ್ದ ಅತ್ತೆ ಕಡೆ ನೋಡಿದ ವರಲಕ್ಷ್ಮಿ ತಾನೂ ಗ್ರಾಮ್ಯ ಭಾಷೆಯಲ್ಲಿಯೇ ಮಾತಾಡಿ ತ್ರಿಮೂರ್ತಿಗಳ ಕೃಪೆಗೆ ಪಾತ್ರಳಾಗಬೇಕೆಂದು ಯೋಚಿಸಿದಳು.

"ಹೇಳೋದೇನೈತ್ರಿ ತಂದೆ?... ನಾನು ಮೊದ್ಲೇ ಗಂಡ ಸತ್ತಾಕೆ. ಇರೋ ಎಲ್ಡು ಮಕ್ಕಳನ್ನು ಕಟ್ಟಿಕೊಂಡು ಒಳ್ಳೇದು ಕೆಟ್ಟದ್ದೂ ನೋಡ್ಕೋತ ಬಾಳಿ ಬದುಕಬೇಕಾಗಿರೋಳು. ಈ ಅತ್ತೆಗೀ ವಯಸ್ನಲ್ಲಿ ನೋಡ್ಕೊಳ್ಳೋರು ಯಾರಿದ್ದಾರೆ ... ಅಕೀಗೆ ಮಗ ಅಂದ್ರೂ ನಾನೇ ಸೊಸೆ ಅಂದ್ರೂ ನಾನೇ ... ತೆಪ್ಪಗೆ ನಮ್ಮ ಜೊತೆ ಬಂದು ಬೇಕಾದ್ದು ಮಾಡಿಸಿಕೊಂಡು ತಿಂದು ಬಿಡ್ಲಿ... ಕೊನೆಗಾಲಕ್ಕೆ ನಾನಗದೆ ಬೇರೆ ಯಾರಾದಾರೂ? ..." ಅನಸೂಯಳೊಂದಿಗೆ ವಾರಕ್ಕೊಂದು ಸಾರಿಯಾದರೂ ಜಗಳ ಆಡೀ ಆಡೀ ಗ್ರಾಮ್ಯ ಭಾಷೆ ರೂಡಿಸಿಕೊಂಡಿದ್ದರಿಂದ ಈ ಪ್ರಕಾರವಾಗಿ ಸಲೀಸಾಗಿ ಮಾತಾಡಿದ್ದಳು. ಆಕೆಯ ಅಸ್ಖಲಿತ ಮಾತುಗಳನ್ನು ಕೇಳಿ ತ್ರಿಮೂರ್ತಿಗಳು ತಲೆದೂಗಿದರು.

ಆದರೆ ಮುದುಕಿ ಅದುವರೆಗೆ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಬಿಟ್ಟಿತ್ತು. ಇಂಥ ಸೊಸೆಯನ್ನು ಹುಡುಕಿ ತಂದುಕಟ್ಟಿದ ಆಕೆಯ ಮಾಮಾಶ್ರೀಯನ್ನು ಮನಸ್ಸಿನಲ್ಲಿ ಕಣ್ಣುಮುಚ್ಚಿ ಶಪಿಸುತ್ತಿತ್ತು. ತನ್ನ ಪ್ರಾರಬ್ಧವೇ ಸೊಸೆಯ ರೂಪಧರಿಸಿ ಬಂದು ಕಾಡುತ್ತಿರುವುದೆಂದೂ ... ಇದರಿಂದ ಬಿಡುಗಡೆಯಾಗಿ ಯಾವುದಾದರೂ ಪವಿತ್ರ ನದಿ ಹುಡುಕಿಕೊಂಡು ಹೋಗಿ ದೇಹ ತ್ಯಜಿಸಬೇಕೆಂದೂ ಕೃತು ನಿಶ್ಚಯ ಮಾಡಿತು.
ತಾನಿದುವರೆಗೆ ಈ ಶನಿಯೊಂದಿಗೆ ಬಾಳುವೆ ಸಾಗಿಸಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಸ್ವಲ್ಪೇ ಸದ್ದು ಮಾಡುತ್ತ ...
ಚಂದ್ರೋದ್ಭಾಸಿತ ಶೇಖರೇ ಸ್ಮರಹರೇ ಗಂಗಾಧರೇ ಶಂಕರೇ ಸರ್ಪೈ| ರ್ಬೂಷಿತ ಕರ್ಣಕಂಠಕಂ ಹರೇ ನೇತ್ರೋತ್ಥ ವೈಶಾನರೇ! ದಂತಿತ್ವಕೃತ ಸುಂದರಾಂಬಧರೇ ತ್ರೈಲೋಕ್ಯಸಾರೇ ಹರೇ ಮೋಕ್ಷಾರ್ಥಂ ಕುರು ಚಿತ್ತ ಯಮಲಾಮ್ಮಂತ್ರೈಸ್ತು ಕಿ ಕಮ್ರ್ಮಭಿಃ ಕ್ಷಂತವ್ಯೋ ... ಎಂದು ಸರ್ವಾಪರಾಧವನ್ನು ಕ್ಷಮಿಸುವಂತೆ ಪರಮೇಶ್ವರನನ್ನು ಪ್ರಾರ್ಥಿಸಿ ಸ್ವಲ್ಪ ಸ್ವಲ್ಪೇ ಕಿವಿಗಳ ಮೇಲಿದ್ದ
-

೨೦೭
ಕೈಗಳನ್ನೂ; ರೆಪ್ಪೆಗಳನ್ನೂ ಬಿಚ್ಚಿ ವಾಯು ಮಂಡಲದ ಸಮಸ್ತ ಪ್ರಾಣಶಕ್ತಿಯನ್ನು ಕುಂಡಲಿನೀ ಬಾಂಡಲೆಗೆ ತುಂಬಿಕೊಳ್ಳಲಿರುವಳಂತೆ ನಿಡಿದಾಗಿ ಉಸಿರೆಳೆದುಕೊಳ್ಳುತ್ತಿರುವಾಗ ಗುರುಸಾಂತಪ್ಪನು ಇದೇ ಸುಸಮಯವೆಂದೂಹಿಸಿಕೊಂಡು ...
"ವಯಸ್ಸಗ ಚಿಕ್ಕವಳಾಗಿದ್ರೂ ವರಲಕ್ಷ್ಮಮ್ಮ ಮುತ್ತಿನಂಗ ಮಾತಾಡಿದ್ಳು ಬಿಡಿ ... ನಮ್ಮಂಥ ಗುರುಬೋಧ ತಗೊಂಡೋರು ಹಿಂಗೆ ಮಾತಾಡ್ಲಿಕ್ಕೆ ಸಾಧ್ಯವಿಲ್ಲ. ಅಜ್ಜಿ ಸೊಸೀ ಮಾತ್ನ ಕೇಳಿಸಿಕೊಳ್ತೋ ಇಲ್ವೋ ... ಕೇಳಿಸಿಕೊಂಡಿದ್ರೆ ನಂ ಪುಣ್ಯ ..." ಎಂದು ಹವಿಸ್ಸು ಎರೆದನು.
ಅಲುಮೇಲಮ್ಮ ಬಾಗಿರ್ದ ಸೊಂಟಮಂ ತುಸುವೇ ಮೇಲೆತ್ತಿ ಕಣ್ಣುಗಳಿಂದ ಪ್ರಜ್ವಲಿಸುತ್ತ "ಏನ್ರೋ ನೀವು ಮಾತಾಡ್ತಿರೋದು? ನ್ಯಾಯ ಹೇಳೊ ಲಕ್ಷಣವೇನಿದು? ಈಗ್ಲೆ ಇಷ್ಟು ಮಾತಾಡ್ತಿರೋ ಇವಳು ನನ್ನ್ ಜುಟ್ಟ ಇವಳ ಕೈಗೆ ಸಿಕ್ಕ ಮೇಲೆ ಹುರಿದು ಮುಕ್ಕದೆ ಬಿಡುವಳೇನು? ... ಬಂಗಾರದಂಥ ನನ್ನ ಮಗನನ್ನೇ ನುಂಗಿ ಆಚಮನ ಮಾಡಿಧೋಳಿಗೆ ನಾನ್ಯಾವ ಲೆಕ್ಕ ... ನನ್ನ ಹಣೇಲಿ ವಿಧಿ ಬರೆದಂತಾಗ್ತದೆ ... ನನ್ನ ದಾರಿ ನಾನು ನೋಡ್ಕೋತೀನಿ ... " ಲತಗು ಪುಟುಗು ಲಟ್ಟಿಗೆ ಮುರಿದದ್ದು ವಾದಕ ಶ್ರುತಿಪಡಿಸಿಕೊಳ್ಳಲು ತಬಲದ ಮೇಲೆ ಸದ್ದು ಮಾಡುವಂಥ ಸದ್ದಾಯಿತು.
ತ್ರಿಮೂತಿಗಳು ಅಸಹಾಯಕತೆಯಿಂದ ವರಲಕ್ಶ್ಮಿಯ ಮುಖ ನೋಡಿದರು. ಆಕೆಯೂ ನಿಟ್ಟುಸಿರುಬಿಟ್ಟು ತುಟಿಗಳನ್ನು ಎಡಕ್ಕೂ ಬಲಕ್ಕೂ ಹೊರಳಾಡಿಸಿ ಅಸಂತೃಪ್ತಿ ಸೂಚಿಸಿದಳು. ತುಸು ಹೊತ್ತು ಆ ಮುವ್ವರು ಚರ್ಚಿಸಿ ತಮ್ಮ ನಿರ್ಧಾರವನ್ನು ವರಲಕ್ಶ್ಮಿಗೆ ಸೂಚಿಸಿದರು. ಆಕೆ ಭಾರವಾದ ಉಸಿರು ಬಿಟ್ಟು ಒಪ್ಪಿದಳು. ಸೃಷ್ಟಿ ಮತ್ತು ಸ್ಥಿತಿಗಳ ಸಲಹೆಯಂತೆ ಲಯ ಪ್ರಸ್ತಾಪಿಸುವುದೆಂದು ತೀರ್ಮಾನವಾಯಿತು.
"ಅಮ್ಮಾ ... ತಾಯಿ ... ಜಗನ್ಮಾತೆ ... ಆದಿಶಕ್ತಿ ..." ಎಂದು ಪಲ್ಲವಿ ಹಾಡಿ ಲಯ ಮುಂದುವರಿದು ಹೇಳಿತು. "ನೀವು ನಮ್ಗೆಲ್ಲ ತಾಯಿ ಇದ್ದಂತೆ ... ಈ ಇಳಿವಯಸ್ಸಿನಲ್ಲಿ ನೀವು ದುಡ್ಡು ತಗೊಂಡೇನ್ಮಾಡ್ತೀರೋ ದೇವ್ರೀಗೆ ಗೊತ್ತು! ನೀವು ಮನಸ್ಸಿಗೆ ನೋವು ನೋವು ಮಾಡ್ಕೊಂಡ್ರೆ ನಮಗಾಗ್ಲಿ; ನಿಮ್ಮ ಸೊಸೆ ಮೊಮ್ಮಕ್ಕಳಿಗಾಗ್ಲಿ ಒಳ್ಳೆದಾಗೊಲ್ಲ... ಅದ್ಕೆ ನಾವೆಲ್ರು ಒಂದು ನಿರ್ಧಾರಕ್ಕೆ ಬಂದಿದೀವಿ... ಅದನ್ನು ನೀವು ದೊಡ್ಡ ಮನಸ್ಸು ಮಾಡಿ ಒಪ್ಕೋಬೇಕು."
"ನೋಡಪ್ಪಾ ... ಎಂದೂ ಇಲ್ಲದ ಹೊಗಳಿಕೆಗೆ ಉಬ್ಬೋಳಲ್ಲ ನಾನು... ಅದೇನು ಹೇಳಬೇಕೆಂತಿಯೋ ಅದನ್ನು ಬಿಚ್ಚಿ ಹೇಳಿ ಬಿಡಪ್ಪಾ!" ತಾನು ಹೊತ್ತಿರುವ ಆಕಾಶ ಎಲ್ಲಿ ಕದಲಿ ಹೋಗುವುದೋ ಎಂದು ತಲೆಗೆ ಒಂದು ಕೈ ಇಟ್ಟು ಹೇಳಿತು.
ಶ್ರೀಕೃಷ್ಣ ಪರಮಾತುಮ ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿದ ರೀತಿಯಲ್ಲಿ ಲಯದ ಬೆನ್ನುಬು ನಿಸೂರು ಮಾಡಿಕೊಂಡು ಅಲಮೇಲಮ್ಮಜ್ಜಿ ಪಕ್ಕದಲ್ಲಿದ್ದ ಈಶಾನ್ಯದ ಕಡೆ ದೃಷ್ಟಿ ನೆಟ್ಟು-
"ನಮ್ಗೂ ನಿಮ್ ವಯಸ್ನಾಕಿ ಅಕ್ಕ ಅದಾಳ ... ನಿಮ್ಮೆದುರೂಗೆ ಹೊರಗೊಂದು ಒಳಗೊಂದು ಮಾತಾಡಿದ್ರೆ ದೇವ್ರು ಮೆಚ್ಚಾಣಿಲ್ಲ . ನಿಮ್ಗೂ ನಾಕು ಮಂದಿಗೆ ಜ್ಞಾನ ಹೇಳೊವಷ್ಟು ಬುದ್ಧಿ ಐತೆ. ನಮ್ಮಂಥ ಮೂಳಗಳಿಂದ ಹೇಳಿಸಿಕೊಳ್ಳೋದು ಸರಿ ಅಲ್ಲ ... ನಾವೆಲ್ರು ಒಂದು ತೀರ್ಮಾನಕ್ಕೆ ಬಂದೀವಿ ... ಅದೇನಪಾಂದ್ರೆ ವರಲಕ್ಷ್ಮಮ್ಮನಿಂದ ಹತ್ತು ಸಾವ್ರ ಕೊಡಿಸಿಬಿಡ್ತೀವಿ ... ರಾಮಾ ಕೃಷ್ಣಾ ಅಂತ ನಿಮ್ಮ ದಾರಿ ನೀವು ನೋಡ್ಕೊಂಡು ನಮ್ಮನ್ನಿಲ್ಲಿಂದ ಬಿಡುಗಡೆ ಮಾಡಿ ಪುಣ್ಯ ಕಟ್ಟಿಕೊಳ್ಳ್ರಿ" ಎಂದು ತುಸು ವ್ಯಂಗಭರಿತ ದ್ವನಿಯಲ್ಲಿ ಹೇಳಿದ್ದನ್ನು ಕೇಳಿ ಮುದುಕಿ ಯಜ್ಞಕುಂಡದಂತೆ ಧಗ್ಗೆಂದಿತು.
"ಏನ್ರೋ ಮುಟ್ಠಾಳರ... ನನ್ನೇನಂತ ತಿಳಿದುಕೊಂಡಿರೋ ... ನಾನೇನು ಭಿಕ್ಷೆ


೨೦೮
ಕೇಳ್ತಿದೀನ? ಸರೀಗರ್ಧ ಕೊಟ್ಟ್ರೆ ಸರಿ ... ಇಲ್ಲಾಂದ್ರೆ ನಾನೀ ಮನೆ ಬಿಟ್ಟು ಕದಲೋದಿಲ್ಲ ಎಂದು ಪದ್ಮಾಸನ ಹಾಕಿಬಿಟ್ಟಿತು.
ಅದನ್ನು ಕೇಳಿ ರೊಚ್ಚಿಗೆದ್ದ ವರಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಹಿಗ್ಗಾಮುಗ್ಗಾ ಸದೆಬಡಿಯತೊಡಗಿದಳು. "ಹಾಳಾದೋವೆ ... ಈ ದರಿದ್ರದೋಳ ಹೊಟ್ಟೀಲಿ ಯಾಕೆ ಹುಟ್ಟಿದ್ರೋ? ... ನಿಮ್ಮಪ್ಪನ ಹಿಂದೆ ನೀವೂ ಸಾಯಬಾರ್ದಾಗಿತ್ತೆ? ... ಇಲ್ಲಾ ... ನಾನಿನ್ನು ಬದುಕಿರೊದಿಲ್ಲ ... ಇನ್ನು ಇಪ್ಪತ್ನಾಲ್ಕು ತಾಸ್ನಲ್ಲಿ ವಿಷ ಕುಡ್ದು ಪ್ರಾಣ ಬಿಡ್ಲಿಲ್ಲ ನಾನು ನಮ್ಮಪ್ಪನ ಮಗಳೇ ಅಲ್ಲ " ಎಂದು ಒಂದು ಕಣ್ಣು ಮೂಗಿನಿಂದ ಒಂದೇ ಸಮನೆ ಹಳ್ಳ ತೋಡಗಿದಳು ... ಆ ಮೂರನೆ ಇಯತ್ತೆ ಒಂದನೇ ಇಯತ್ತೆ ಕಂದಮ್ಮಗಳು ಆಕಾಶ ಬೀಳುವಂತೆ ಹೋ ಎಂದು ಅಳತೊಡಗಲು ಇಡೀ ಓಣಿಗೆ ಓಣಿಯೇ ಮನೆಯ ಸುತ್ತ ನೆರೆಯಿತು.
ಪ್ರೇಕ್ಷಕರ ಎದುರಿಗೆ ಮುಂದಿಟ್ಟ ಕಾಲು ಹಿಂದಿಟ್ಟರಾಗುವುದೇನು!
ಮುದುಕಿ ದಿಗ್ಗನೆದ್ದು ಹೋಗಿ ಆಕೆಯ ಧಾಳಿಗೆ ತುತ್ತಾಗಿರ್ದ ತನ್ನ ಮೊಮ್ಮಕ್ಕಳನ್ನು ಬಿಡಿಸಿ ಎದೆಗವುಚಿಕೊಂಡಿತು.
" ಅದ್ಯಾಕೆ ಹಂಗ ಮಕ್ಕಳನ್ನು ದನಕ್ಕೆ ಬಡಿದ ಹಾಗೆ ಶೂದ್ರರ ಥರ ಬಡೀತೀಯಾ? ... ನೀನು ಮಾಡಿರೋ ತಪ್ಪಿಗೆ ಇವನ್ಯಾಕೆ ದಂಡಿಸ್ತಿದೀಯಾ? ... ಒಳ್ಳೆ ಕುಟುಂಬದಿಂದ ಬಂದಿರೋಳಾಗಿದ್ರೆ ಹಿಂಗ ಹೊಡೀತಿದ್ದೆ ಏನೆ!..." ಎಂದು ಮಾತಿನ ಮೊನೆಗೆ ಬ್ರಾಹ್ಮಣಿಕೆ ಲೇಪಿಸಿ ಪ್ರಯೋಗಿಸಿತು. ...
"ಅತ್ತೆ ... ಮರ್ಯಾದೆ ಕೊಟ್ಟು ಮರ್ಯಾದೆ ತೊಗೊಳ್ರಿ ... ನನ್ನ ಮಕ್ಕಳ್ನ ನಾನೇನಾದ್ರೂ ಮಾಡ್ತೀನಿ ... ಅದ್ನ ಕೇಳೋಕೆ ನೀವ್ಯಾರು?"
"ನಾವ್ವ್ಯಾರಂತೀ ಏನೆ? ..." ನಿನ್ನ ನಾಲಿಗೆಗೆ ಹುಳ ಬೀಳ್ಲಿ ... ನಾನು ಹೆತ್ತೋನ್ನಲ್ವೇನೆ ನೀನು ಕಟ್ಕೊಂಡು ನಾಲ್ಕಾಲ ಬಾಳುವೆ ಮಾಡಿದ್ದು? ಹಿಂಸೆಯ ಅರ್ಥ ಮಾಡ್ಕೊಂಡಿದ್ದೆ ಅವ್ನು ನಿನ್ನ ಕಟ್ಟ್ಕೊಂಡ ಮೇಲೆ"
"ಏನೆಲ್ಲ ಮಾತಾಡಿ ನನ್ನ ತಲೆ ಕೆಡಿಸಬೇಡ್ರಿ ... ನಿಮ್ಮ ಮಗನ್ನ ಮದ್ವೆ ಮಾಡ್ಕೊಂಡು ಅನುಭವಿಸಿದ್ದು ಅಷ್ಟರಲ್ಲೆ ಇದೆ ... ನನ್ನಂಥ ಪತಿವ್ರತೆಗೆ ದ್ರೋಹ ಮಾಡಿ ಯಾವತ್ತು ನಿಮ್ಮ ಮಗ ಆ ಕುಲಟೆ ಅನಸೂಯಳ ಸೆರಗಲ್ಲಿ ಬಿದ್ನೋ ಅವತ್ತೆ ನನ್ನ ನರಕ ನಾನು ಕಂಡುಕೊಂಡ ..."
"ಪಾತಿವ್ರತ್ಯದ ನೆಪದಲ್ಲಿ ನೀನು ಅವನನ್ನು ಕುಂತರೂ ಸೇರಲಿಲ್ಲ. ನಿಂತೂ ಸೆರಲಿಲ್ಲ. ಬ್ರಾಹ್ಮಣಿಕೆ ಜೊತೆಗೆ ಪಾತಿವ್ರತ್ಯ ಸೇರ್ಕೊಂಡ್ರೆ ಏನಾಗ್ತದೆ ಎಂಬುದಕ್ಕೆ ನೀನೇ ಸಾಕ್ಷಿ ಕಣೆ ... ನಿನು ಸರಿಯಾಗಿದ್ರೆಯಾಕೆ ನನ್ನ ಮಗ ಅನಸೂಯಾಳ ಸೆರಗಿಗೆ ಬೀಳ್ತಿದ್ದ ... ನಿನ್ಕಿಂತ ಅವಳೆ ಎಷ್ಟೋ ವಾಸಿ ಅಂತ ನನಗೀಗ ಅನ್ನಿಸ್ತಾ ಇದೆ ಕಣೆ."
ವರಲಕ್ಷ್ಮಿ ಅಸಹಾಯಕತೆಯಿಂದ ಎದೆಎದೆ ಬಡಿದುಕೊಂಡು ಅಳತೊಡಗಿದಳು ... ಆಕೆಯ ರೋಧನದ ಬಗ್ಗೆ ತಲೆಕೆಡೆಸಿಕೊಳ್ಳದೆ ಮುದುಕಿ ವಿಜಯದ ನಗೆ ಬೀರುತ್ತ, ತನ್ನ ಗೊಡವೆಗೆ ಬಂದವರಿಗೆ ಉಳಿಗಾಲವಿಲ್ಲ ಎಂಬ ದೃಷ್ಟಿ ಬೀರುತ್ತ ಸೊಂಟದ ಮೂಲೆಯಿಂದ ಭಾರತ ಸರಕಾರದ ಚಲಾವಣೆಯ ಎರಡು ನೋಟುಗಳನ್ನು ತೆಗೆದು ಮೊಮ್ಮಕ್ಕಳ ಕೈಲಿ ಇರಿಸುತ್ತ, "ಅಷ್ಟಾವಧಾನಿ ಗೋವಿಂದರಾಯರಂಗಡಿಗೆ ಹೋಗಿ ಏನಾದ್ರು ಕೊಂಡುಕೊಳ್ಳಿ" ಎಂದು ಹೇಳಿತು. ಅವು ಏಳು ಕೊಪ್ಪರಿಗೆ ಚಿನ್ನವೇ ದೊರಕಿತೆಂದೆಂಬ ರೀತಿಯಲ್ಲಿ ಹಣ ಹಿಡಿದುಕೊಂಡು ಅಮರಕೋಶದ ಶ್ಲೋಕದ ಜೊತೆಗೆ ಬಾಬಾ ಬ್ಲಾಕ್ ಶೀಪ್ ಕವಿತೆ ಬೆರೆಸಿ ವಿಚಿತ್ರ ರೀತಿಯಲ್ಲಿ ಉಷಾಉತ್ತಪ್ಪ ಥರ ಹಾಡುತ್ತ


೨೦೯

ಅಂಗಡಿ ಕಡೆ ಓಡಿದವು ...
ತನ್ನ ಹದಿನೆಂಟ್ಯ್ ಅಕ್ಷೋಹಿಣಿ ಸೈನ್ಯವೇ ತನ್ನಿಂದ ದೂರವಾಯಿತೆಂಬ ಮತ್ತಷ್ಟು ಅಸಹಾಯಕತೆಯಿಂದ ನಲುಗಿ ಹೋದ ವರಲಕ್ಷ್ಮಿಯನ್ನು ಸಂತೈಸಲು ತಾ ಮುಂದು ನಾ ಮುಂದು ಅಂತ ಮೂರಡಿ ದೂರದಿಂದಲೇ ಪ್ರಯತ್ನಿಸಿದರು. ದುಃಖವೆಂಬುದು ಎಷ್ಟು ಹೊತ್ತು ಇರಲು ಸಾಧ್ಯ! ಸ್ವಲ್ಪ ಹೊತ್ತಿನಲ್ಲಿ ಒಂದು ತಹಬಂದಿಗೆ ತಂದಿತು.

"ಹಂಗಂದ್ರೆ ಎಷ್ಟು ಕೊಡಿಸ ಬೇಕಂತೀರಿ ಅಮ್ಮಾ" ಎಂದು ನಮ್ಮಪ್ಪನೇ ಕೇಳಿದ.
"ಮೂವತ್ತು ಸಾವಿರ ... ಅದ್ಕೂ ಒಂದು ದಮ್ಮಡಿ ಇದ್ರೆ ಮುಟ್ಟೋಳಲ್ಲ ನಾನು" ವಿಜಯದ ಉತ್ತುಂಗ ಶಿಖಿರದಲ್ಲಿ ವಿರಾಜಮಾನಳಾಗಿದ್ದ ಅಲುಮೇಲಮ್ಮಜ್ಜಿ ಅಶರೀರವಾಣಿಯಂತೆ ನುಡಿಯಿತು.

"ಅಷ್ಟೊಂದು ತಗೊಡೇನ್ಮಾಡ್ತೀರಿ? ... ಕಾಲ ಬೇರೆ ಸುಮಾರೈತಿ ... ಒಂದು ಹೋಗಿ ಇನ್ನೊಂದಾಗಿ ಬಿಟ್ಟ್ರೇನ್ಮಾಡ್ತೀರಿ?... ಅದ್ಕೆ ಯೋಚ್ನೆ ಮಾದಿ ಓಂದು ನಿರ್ಧಾರಕ್ಕೆ ಬನ್ನಿ" ವರಲಕ್ಷ್ಮಿ ಪರ ಹೃದಯ ಕರಗಿ ಹಾಲಪ್ಪ ಮೆಲು ದನಿಯಲ್ಲಿ ಕೇಳಿಕೊಂಡ.
"ನಾನು ಅದ್ನೆಲ್ಲ ದಾರೀಲಿ ಹೋಗೋ ಶೂದ್ರರ ದೇವತೆಗೆ ಕೊಡ್ತೀನಪ್ಪಾ ... ಅದ್ನೆಲ್ಲ ಏನು ಕೇಳೊದು! ನೋಡು ತಮ್ಮಾ... ನಾನು ಬದುಕ್ನಲ್ಲಿ ನಾನಾ ಕಷ್ಟ ಅನುಭವಿಸಿದೋಳು.... ಪಾಪ ಎಷ್ಟು ಮಾಡಿದ್ದೀನೋ! ಪುಣ್ಯ ಎಷ್ಟು ಮಾಡಿದ್ದೀನೋ!... ಕಾಶೀ, ಕೇದಾರ, ಬದರೀಗೆ ಹೋಗಬೇಕೂಂತಿದ್ದೀನಿ ... ಗಂಗೋತ್ರಿಲಿ ದೇಹ ತ್ಯಾಗ ಮಾಡಿ ಲೌಕಿಕ ವ್ಯಾಪಾರ ಮುಗಿಸಬೇಕೆಂದು ದೃಢ ನಿಶ್ಚಯ ಮಾಡಿದ್ದೀನಿ... ಇದೆಲ್ಲ ಶೂದ್ರರಾದ ನಿಮಗೆ ಹೇಗೆ ಅರ್ಥ ಆದೀತು... ಇದ್ನೆಲ್ಲ ಕಟ್ಕೊಂಡು ನೀವು ಮಾಡೊದ್ದರು ಏನಿದೆ? ನಾನೇನು ಬೇರೆಯವರ ಸೊತ್ತಿಗೆ ಆಸೆ ಪಡ್ತಾ ಇಲ್ವಲ್ಲ... ಇದೆಲ್ಲ ನನ್ನ ಗಂಡ ಸಂಪಾದಿಸಿದ್ದು ಕಣ್ರಪ್ಪಾ... ನ್ಯಾವವಾಗಿ ಇದೆಲ್ಲ ನನಗೆ ಸೇರಬೇಕಾದದ್ದೇ. ನಾನೇನು ಆಕೆ ಗಂಡನ ಆಸ್ತೀಲಿ ಪಾಲು ಕೇಳ್ತಿಲ್ವಲ್ಲ... "ಅಲೌಕಿಕ ಜ್ಞಾನದೊಂದಿಗೆ ಲೌಕಿಕ ಜ್ಞಾನವನ್ನೂ ಬೆರೆಸಿ ಪಟಪಟನೆ ಮಾತಾಡಿದಳು.

"ಯಾವ ಪುರುಷಾರ್ಥಕ್ಕೆಂಥ ಮೂವತ್ತು ಸಾವಿರ ಕೊಡೋದು... ಊರು ಹೋಗು ಅನ್ನೋ ವಯಸ್ಸು; ಸುಡುಗಾಡು ಬಾ ಅನ್ನೋ ವಯಸ್ಸು ... ಅಬ್ಬಾ ಇದರ ಆಸೆಯೇ ... ಈ ಕೊನೆಗಾಲದಲ್ಲೂ ಹೇಗೆ ಕಾಡ್ತಿದೆಯಲ್ಲ... ವರಲಕ್ಷ್ಮಿ ಎದೆಯನ್ನು ದಬ್ ಅಂತ ಗುದ್ದಿಕೊಂಡಳು.
ಎರಡು ನಮೂನೆಯ ಹರತಾಳಗಳ ನಡುವೆ ತ್ರಿಮೂರ್ತಿಗಳು ನ್ಯಾಯ ಬಗೆಹರಿಸಲಾಗದೆ ಬಸವಳಿದವು. ಮುಂದಿರಿಸಿದ ಕಾಲು ಹಿಂದಿರಿಸುವಂತಿಲ್ಲ. ತಾವು ಹನ್ನೊಂದನೆ ವಾರ್ಡಿನ ಮಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬೇಕಾದವರು! ನ್ಯಾಯ ಬಗೆ ಹರಿಸದೆ ಹೋದಲ್ಲಿ ಜನರಾದರು ಏನೆಂದುಕೊಂಡಾರು! ಹನ್ನೊಂದನೆ ವಾರ್ಡನ್ನೇ ಮೂಲ ಬಂಡವಾಳವನ್ನಾಗಿ ಇಟ್ಟು ಭವಿಷ್ಯತ್ತಿನಲ್ಲಿ ಸಾಕಷ್ಟು ಬೇಯಿಸಿಕೊಳ್ಳುವುದಿದೆ! ಅವರೆಲ್ಲ ಕದನ ಕುತೋಹಲಿಗಳಾಗಿ ನೆರೆದಿರುವವರು.

ತ್ರಿಮೂರ್ತಿಗಳು ಸೋಲರಿಯದ ಛಲದಂಕ ಮಲ್ಲರಂತೆ ತತ್‌ಕ್ಷ್ಣಣ ಕಾರ್ಯೋನ್ಮುಖರಾದರು. ತಾಸು ಪರ್ಯಂತ ಸಂಧಾನ ನಡೆಸೀ, ನಡೆಸೀ ... ದೇವರ ದಯೆಯೋ ಎಂಬಂತೆ... ಒಂದು ಹಂತ ತಲುಪಿದರು. ವೇದ ಪಾರಾಯಣಂಗಳ ಫಲದಿಂದಾಗಿಯೋ ... ಗಂಗಾದಿ ತೀರ್ಥಸ್ನಾನ ಫಲದಿಂದಾಗಿಯೋ ... ಕೃರ್ಛಾಧಿ ತಪಸ್ಸಿನ ಫಲದಿಂದಾಗಿಯೊ ಎಂಬಂತೆ ಅಲುಮೇಲಮ್ಮನೇ ಐದು ಸಾವಿರ ಕಡಿಮೆ ಮಾಡಿಕೊಳ್ಳಲು ಬೇಷರತ್ತಾಗಿ ಒಪ್ಪಿಕೊಂಡಳು. ಸೊಸೆಯೂ ಅದಕ್ಕೆ


೨೧೦

ಸಮ್ಮತಿಸಿದಳು. ತನ್ನ ತಪೋ ಶಕ್ತಿಯ ಸಿಂಹ ಪಾಲನ್ನೇ ಧಾರೆ ಎರೆದುಕೊಡಲಿರುವವಳಂತೆ ಸಾವಿರ ಎಣಿಸಿಕೊಟ್ಟಳು. "ಹೋಗಿ ಬರ್‍ತೀವಮ್ಮಾ ... ಇನ್ನು ಮುಂದೆ ನೀವು ನಿಮ್ಮ ನಿಮ್ಮ ಸಂಬಂಧ ಉಳಿಸಿಕೊಳ್ತೀರೋಬಿಡ್‌ತೀರೋ... ಅದು ನಿಮ್ಗೆ ಸೇರಿದ್ದು... ಇದರಲ್ಲಿ ನಮ್ಮಿಂದೇನಾದ್ರು ತಪ್ಪಾಗಿದ್ರೆ ಹೊಟ್ಟೇಲಿ ಹಾಕ್ಕೊಳ್ಳ್ರಿ" ಎಂದು ಹೇಳಿ ತ್ರಿಮೂರ್ತಿಗಳು ತಂತಮ್ಮ ಅಂಡು ಕೆಳಗೆ ಹಾಕಿಕೊಂಡಿದ್ದ ಟವೆಲ್ಲುಗಳನ್ನು ಕೊಡವಿ ಹೆಗಲಮೇಲಿಳಿಬಿಟ್ಟುಕೊಂಡು ಹೊರನಡೆದವು.
ಹೊರಗಡೆ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತ ನಿಂತಿದ್ದ ಮಹಾನ್ ಜನತೆಯನ್ನು ಉದ್ದೇಶಿಸಿ "ಇಲ್ಲಿ ಏನು ಕರಡಿ ನರಿ ಕುಣಿತಾವೇನು? ಎಲ್ಲ ಮುಗೀತಲ್ಲ ... ಇನ್ನು ನೀವು ನಿಮ್ಮ ಮನೆಗೆ ನೀವು ಹೊರಡ್ರಿ" ಎಂದು ಹೇಳಿದ ಅಪ್ಪನ ಕಂಚಿನ ಕಂಠಕ್ಕೆ ಬೆಲೆ ಕೊಟ್ಟುಅವರೆಲ್ಲ ಹಣಕ್ಕೂ ಮನುಷ್ಯರಿಗೂ ಇರುವ ಅನೂಹ್ಯ ಸಂಬಂಧ ಕುರಿತು ತಲಾ ಒಂದೊಂದು ಮಾತಾಡುತ್ತ ಅಲ್ಲಿಂದ ಕಾಲು ಕಿತ್ತರು.

ಮಾಘ ಶುದ್ಧ ಪಂಚಮಿಯಂದು ನಾವು ಆ ಮನೆ ಪ್ರವೇಶ ಮಾಡುವುದಕ್ಕೂ ಮೊದಲು ಸಾಕಷ್ಟು ವಿದ್ಯಮಾನಗಳು ನಡೆದವು. ಈಷ್ಟೆಲ್ಲ ಜಗಳ ಆಡಿದ ಅತ್ತೆ ಸೊಸೆಯರಿಬ್ಬರು ತಲಾ ಒಂದೊಂದು ಉತ್ತರಾದಿ; ದಕ್ಷಿಣಾದಿ ದಾರಿ ಹಿಡಿಯುವರೆಂದು ಜಗಳ ಹರಿದ ಮರುಕ್ಷಣ ಅಂದುಕೊಂಡಿದ್ದೆ. ಕಥೆಗಾರನಾಗಿ ಅವರ ಪೂರ್ವೋತ್ತರ ಬದುಕಿನ ಬಗ್ಗೆ; ಶೇಷಾಯುಷ್ಯ ಕಳೆಯುವ ಬಗ್ಗೆ ಸಾಕಷ್ಟು ಆತಂಕಗೊಂಡು ಆಲೋಚಿಸಿದ್ದೆ. ಆದರೆ ನನ್ನ ಸೃಜನಶೀಲಾತ್ಮಕ ಊಹೆ, ಆತಂಕಗಳೆಲ್ಲ ತಲೆಕೆಳಗಾದವು.

ವಿಚಿತ್ರವೇನೆಂದರೆ ಅತ್ತೆ ಸೊಸೆಯರಿಬ್ಬರು ನಂತರ ದಿನಗಳಲ್ಲಿ ತುಂಬ ಅನ್ಯೋನ್ಯವಾಗಿದ್ದರು. ದೂರದ ಸಂಬಂದಿಯೋರ್ವನು ಹಚ್ಚಿಕೊಟ್ಟಿದ್ದರಿಂದಾಗಿಯೇ ಅಲುಮೇಲಮ್ಮಜ್ಜಿ ಜಿದ್ದಾಜಿದ್ದಿ ಆಡಿತೆಂದು ಅರ್ಥವಾಯಿತು. ನೀಳಕಾಯದ; ಪರಮ ಸಾತ್ವಿಕ ತೇಜಸ್ಸಿನ ಮುಖದ ಆ ದೂರದ ಸಂಬಂಧಿ ನನ್ನ ನೀಳ್ಗಥೆಯ ಯಾವ್ಯ್ದೋ ಮೂಲೆಯ ಪಾತ್ರವೆಂದು ನನಗರ್ಥವಾಯಿತು. ಈ ಬಗ್ಗೆ ನಾನು ತಲೆ ಕೆಡೆಸಿಕೊಳ್ಳದೆ ಇರಲಿಲ್ಲ. ತನ್ನ ಮಗಳನ್ನು ಶಾಮನಿಗೆ ಗಂಟು ಹಾಕಲು ಪ್ರಯತ್ನಿಸಿದ ಹರಪನಹಳ್ಳಿ ಅಗ್ರಹಾರದ ಕಡೆಯ ಶಾನುಭೋಗ ಶಿವರಾಮರಾಯರು ಅಂತ ಕೆಲವರೆಂದರೆ; ಮತ್ತೆ ಕೆಲವರು ಒಂದು ಕಾಲದಲ್ಲಿ ಅಲುಮೇಲಮ್ಮನನ್ನು ಮಾಡಿಕೊಳ್ಳಬೇಕೆಂದು ತಲೆಕೆಡೆಸಿಕೊಂಡಿದ್ದ ಸೂಲದೇವರಹಳ್ಳಿ ಶಾನುಭೋಗರ ಮಗ ಶೀನಪ್ಪ ಅಲಿಯಾಸ್ ಶ್ರೀನಿವಾಸಾಚಾರ್ಯರೆಂದು ಆಡಿಕೊಂಡರು.

ಅಲುಮೇಲಮ್ಮನವರಿಂದ ತಿರಸ್ಕೃತಗೊಂಡ ನಂತರ ಶೀನಪ್ಪ ಶ್ರೀನಿವಾಸಾಚಾರ್ಯರಾಗಿದ್ದೊಂದು ದೊಡ್ಡ ಕಥೆ. ಹೆಂಡತಿ ತೀರಿಕೊಂಡ ನಂತರ ರಮಣ ಮಹರ್ಷಿಗಳ ಆಶ್ರಮದಲ್ಲಿದ್ದು ಮೂರು ತಿಂಗಳಕಾಲ ಮೌನೋಪಾಸನೆ ಮಾಡಿದನಂತೆ, ಉಪಾಸನೆ ಪೂರ್ಣಗೊಂಡ ಕ್ಷಣವೇ ಅಲುಮೇಲಮ್ಮ ಶಂಖ ಚಕ್ರ, ಗದಾ ಹಸ್ತೆಯಾಗಿ ಮಹಾಲಕ್ಷ್ಮಿ ರೂಪದಲ್ಲಿ ದರುಶನ ನೀಡಿದಳಂತೆ. ಅದೂ ಅರೆ ಜಾಗೃತಾವಸ್ಥೆಯಲ್ಲಿ ಬಿದ್ದ ಕನಸಿನಲ್ಲಿ... ಪ್ರತಿ ಶನಿವಾರ ಗೋಧೂಳಿ ಮಹೂರ್ತದಲ್ಲಿ ಪ್ರಾಣ ದೇವರ ದೇವಸ್ಥಾನದಲ್ಲಿ ಬಂದು ಅಲುಮೇಲಮ್ಮಜ್ಜಿಯನ್ನು ಕಂಡು ಮಮ್ಮಲನೆ ಮರುಗಿ ಮಾತಾಡಿಸಿಕೊಂಡು ಹೋಗುತ್ತಿದ್ದನಂತೆ... ಅಕಾಲ ಮರಣಕ್ಕೆ ತುತ್ತಾಗಿದ್ದವವರ ಕೈ ಹಿಡಿದು ಏನು ಸಾಧಿಸಿದೆ? ದೀರ್ಘಾಯುಷಿಯಾದ ನನ್ನ ಕೈ ಹಿಡಿಯಬಾರದಿತ್ತೆ? ಅಂತ ಮಮ್ಮಲನೆ ಮರುಗುತ್ತಿದ್ದನಂತೆ... ಇದೆಲ್ಲ ಜನರು ನನ್ನ ಕಿವಿಗೆ ಬೀಳುವ ಹಾಗೆ ಮಾತಾಡಿಕೊಳ್ಳುತ್ತಿದ್ದರು.


೨೧೧

ಇದರಲ್ಲಿ ಹಾಲೆಷ್ಟೊ? ನೀರೆಷ್ಟೋ? ಆದರೆ ಸಾಮಾನ್ಯ ಜನರು ಮಾತ್ರ ನನಗಿಂತ ಹೆಚ್ಚು ಸೃಜನಶೀಲರಾಗಿದ್ದುದು ನಿಜ. ಮುಂದೆ ಯಾರ್ಯಾರ ನಡುವೆ ಏನೇನು ನಡೆಯಿತೋ ಏನೋ...! ತೆರೆಮರೆಯಲ್ಲಿ ಹಲವರು ಮುದುಕಿಯ ಹಣ ಲಪಟಾಯಿಸಲು ಪ್ರಯತ್ನಿಸಿರಬಹುದು. ಅಷ್ಟರಲ್ಲಿ ಮುದುಕಿ ಎಚ್ಚತ್ತುಕೊಂಡಿರಬಹುದು. ಆಕೆ ಮುಂದೆ ಸೊಸೆಯ ಸಾನ್ನಿಧ್ಯವೇ ಪರಮ ಪುಣ್ಯ ಕ್ಷೇತ್ರವೆಂದು ಭಾವಿಸಿರಬಹುದು! ಮೊಮ್ಮಕ್ಕಳೇ ಸಾಕ್ಷಾತ್ ದೈವ ಸ್ವರೂಪವೆಂದೇ ಭಾವಿಸಿರಬಹುದು. ಅಂತೂ ಅದೇ ಮನೆಯಲ್ಲಿ ಮಾಘಮಾಸದವರೆಗೆ ಅತ್ತೆ ಸೊಸೆ ತಮ್ಮ ಕರುಳ ಕುಡಿಗಳೊಂದಿಗೆ ಅನ್ಯೋನ್ಯವಾಗಿದ್ದರು. ಹನ್ನೊಂದನೇ ವಾರ್ಡಿನಲ್ಲಿ ನಡೆಯುತ್ತಿದ್ದ ಅತ್ತೆ ಸೊಸೆ ಜಗಳವನ್ನು ತಾವು ನಯವಾದ ಮಾತುಗಳಿಂದ ಬಗೆಹರಿಸುತ್ತಿದ್ದರು. ಮುಂದೊಂದು ದಿನ ಅವರೆಲ್ಲ ಯಾವುದೋ ಊರಿಗೆ ಪ್ರಯಾಣ ಬೆಳೆಸಿದರು. ಪ್ರಾಯಶಃ ಹೊಸಪೇಟೆ ಇರಬಹುದು. ಹನ್ನೊಂದನೇ ವಾರ್ಡಿನ ಅನೇಕ ಹಿರಿಯರೊಂದಿಗೆ ನಮ್ಮಪ್ಪನೇ ನಿಲ್ದಾಣಕ್ಕೆ ಹೋಗಿ ಬಸ್ಸು ಹತ್ತಿಸಿ ಬಂದನು.

ಮಾಘ ಮಾಸದ ಐದನೆ ದಿನದಂದು ಆ ಮನೆ ಸೇರಿಕೊಂಡೋಡನೆ ನನ್ನನ್ನು ಶಾಮಾಶಾಸ್ತ್ರಿಯ ನೆನಪು ಆವರಿಸಿತು. ಅವನ ಮರಣಾನಂತರ ಸಂಭವಿಸಿದ ಅನೇಕ ಘಟನೆಗಳನ್ನು ಇದಕ್ಕೆ ಪೂರಕವಾಗಿಯೇ ನಾನು ಪ್ರಸ್ತಾಪಿಸಿರುವುದು. ಪ್ರಾಣಕ್ಕಿಂತ ಹೆಚ್ಚಗಿ ಪ್ರೀತಿಸುತ್ತಿದ್ದ ತಾಯಿ, ಪುರಾಣಗಳಲ್ಲಿ ಕಂಡರಿಯದ ಪತಿವ್ರತೆಯಾದ ಹೆಂಡತಿ, ಸಿನಿಮಾ ಬಾಲನಟರಂತಿದ್ದ ಇಬ್ಬರು ಗಂಡು ಮಕ್ಕಳು, ಕೈ ತುಂಬ ಪಗಾರ ಕೊಡುತ್ತಿದ್ದ ನೌಕರಿ, ಇಷ್ಟೆಲ್ಲ ಇದ್ದು ಸುಖವಾಗಿ ಬದುಕಲು ಯಾಕೆ ಅವನಿಂದ ಸಾಧ್ಯವಾಗಲಿಲ್ಲ? ಆ ಅನಸೂಯಳ ಗೊಡವೆಗೆ ಯಾಕೆ ಹೋಗಬೇಕಿತ್ತು? ಇಂಥ ಎಷ್ಟೋ ಬ್ರಹ್ಮಗಂಟುಗಳನ್ನು ಬಿಡಿಸದಿದ್ದಲ್ಲಿ; ಬದುಕಿನೊಳಗೆ ಮೊಟ್ಟೆ ಇಡುತ್ತಿದ್ದ ನಿಗೂಡ ಒಗಟುಗಳನ್ನು ಭೇದಿಸುವುದು ನನ್ನ ಜವಾಬ್ದಾರಿ. ನನ್ನ ಪರಮಾಪ್ತ ಗೆಳೆಯನಾದ ಅವನ ಬಗ್ಗೆ ನೀವು ಅಪಾರ್ಥ ಕಲ್ಪಿಸಿಕೊಳ್ಳಲು ದಾರಿಯಾಗಬಹುದು! ಅವನ ಮತ್ತು ನನ್ನ ನಡುವೆ ಒಂದು ಅಂತರ ಇತ್ತು. ಒಂದು ನಿರ್ದಿಷ್ಟ ದೂರದಿಂದಲೇ ಅವನ್ನು ಗ್ರಹಿಸುವ ಪ್ರಯತ್ನ ನಡೆಸಿದ್ದೆ. ಇಂಥ ಒಬ್ಬ ತನ್ನನ್ನು ಗ್ರಹಿಸುತ್ತಿದ್ದಾನೆಂದು ಅವನು ಅರ್ಥ ಮಾಡಿಕೊಂಡನೇನೋ? ಅಥವಾ ಸಾಹಿತ್ಯದ ಬಗೆಗಿನ ಅಭಿರುಚಿ ಆ ಅಂತರವನ್ನು ಅಳಿಸಿ ಹಾಕಿತೇನೋ? ಅಂತೂ ಹಂತ ಹಂತವಾಗಿ ನಾವಿಬ್ಬರು ಒಂದಾದೆವು. ನನಗೆ ಎಷ್ಟೋ ಸಂದರ್ಭಗಳಲ್ಲಿ ಗೆಳೆಯನಿಂತ ಹೆಚ್ಚಗಿ ಸೋದರನಂತೆ ವರ್ತಿಸುತ್ತಿದ್ದ. ನಾನು ಅಷ್ಟೆ. ಕ್ರಮೇಣ ಅವನ ಬದುಕಿನಲ್ಲಿ ಕಾಣಿಸಿಕೊಂಡ ತಿರುವುಗಳು ನನ್ನನ್ನು ಮೂಕವಿಸ್ಮಿತಗೊಳಿಸಿದವು. ಸರಿತಪ್ಪುಗಳ ಬಗ್ಗೆ ನನ್ನಿಂದ ಯೋಚಿಸುವುದಾಗಲಿಲ್ಲ ... ಕೆಲವೊಮ್ಮೆ ನಾನು ಅವನನ್ನು ತಿದ್ದಲು ಪ್ರಯತ್ನಿಸಿದ್ದುಂಟು. ಅವನು ಪ್ರತಿಕ್ಷಣ ಸೋಲುತ್ತಿದ್ದಾನಲ್ಲ ಎಂದು ಮಮ್ಮಲನೆ ಮರುಗುತ್ತಿದ್ದುದುಂಟು. ಆದರೆ ಸೋಲು ಅವನದಾಗಿರಲಿಲ್ಲ. ನನ್ನದಾಗಿರುತ್ತಿತ್ತು. ಅದೂ ಅಲ್ಲದೆ ನೂರಾರು ಕಿಲೋ ಮೀಟರು ದೂರದೂರಿನಲ್ಲಿದ್ದು ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ನನಗೆ ಅವನನ್ನು ಪೂರ್ಣ ಹಚ್ಚಿಕೊಳ್ಳುವುದು ಸಾಧ್ಯವಾಗದೆ ಹೋಯಿತು. ಪ್ರತಿ ಸಾರಿ ಬಂದಾಗಲೆಲ್ಲ ವಿಷಾದಕ್ಕೆ ತುತ್ತ್ತಾಗುತ್ತಲೋ, ವೇದನೆಯ ನಿಟ್ಟುಸಿರು ಬಿಡುತ್ತಲೋ, ಕೆಟ್ಟದಾಗಿ ಬಂಡಾಯದ ಬಗ್ಗೆ ಯೋಚಿಸುತ್ತಲೋ ಹೋಗಿಬಿಡುತ್ತಿದ್ದೆ. ನನಗೆ ಅರ್ಥವಾಗದಷ್ಟು ಅವನ ಬದುಕಿನ ವಿದ್ಯಮಾನಗಳು ಒಂದು ಕ್ಷಣ ಪ್ರಖರವಾಗಿ ಕೋರೈಸಿ ಮತ್ತೆ ಅಂತರ್ಧಾನವಾಗಿಬಿಡುತ್ತಿದ್ದವು. ಬೆಳಕಿಗೆ ಮಬ್ಬು ಕವಿದು ವಿವೇಚನಾ ಶಕ್ತಿ ಕಳೆದುಕೊಳ್ಳುತ್ತಿದ್ದ
-

೨೧೨
ಕಣ್ಣುಗಳಾಳದಿಂದ ಸ್ತ್ರೀಮೂರ್ತಿಯೊಂದು ಮೂಡತೊಡಗಿತ್ತು. ಅದು ಎಲ್ಲ ಮಾನವೀಯ ಸಂದೇಶಗಳಿಗಿಂತ ಮಿಗಿಲಾಗಿತ್ತು. ಈ ಎಲ್ಲ ಸಿಕ್ಕುಸಿಕ್ಕಾಗಿರುವ ಅನುಭವಗಳನ್ನು ಒಂದೊಂದಾಗಿ ಬಿಡಿಸಿ ಅವಕ್ಕೆಲ್ಲ ಅಕ್ಷರ ರೂಪ ಕೊಟ್ಟು ದೃಶ್ಯಾವಳಿಯಾಗಿರುವ ಕೆಲಸವನ್ನು ಮುಂದೆ ಮಾಡಲಿರುವೆ ಎಂಬಲ್ಲಿಗೆ ಕುಂ. ವೀ. ಎಂಬ ಹುಲುನರವಿರಚಿತ ಶಾಮಣ್ಣ ಎಂಬ ಕಥಾನಕದ ದ್ವಿತೀಯಾಶ್ವಾಸಂ ಸಮಾಪ್ತಿಯಾದುದು.

ಜಯಮಂಗಳಮ್ ನಿತ್ಯ ಶುಭಮಂಗಳಂ

೨೧೩

ತೃತೀಯಾಸ್ವಾಸಂ
ನನಗೆ ಶಾಮ ಇಷ್ಟವಾಗಲಿಕ್ಕೆ ಕಾರಣ ಅವನು ಹೆಚ್ಚು ಗಲಿಬಿಲಿಗೊಳ್ಳುತ್ತಿದ್ದುದು. ಗಲಿಬಿಲಿಯ ಕಾರ್ಯ ಕಾರಣ ಹೆಚ್ಚು ಅಸ್ಪಷ್ಟವಾಗಿತ್ತು. ಲೇಕಖ ಸಹಜ ಸ್ವಭಾವದಿಂದ ಅವನ ಗೊಂದಲಪೂರ್‍ಣ ವ್ಯಕ್ತಿತ್ವದ ಮಹತ್ವದ ಅನ್ವೇಷಕನಾಗಿದ್ದೆ. ಸ್ತ್ರೀಲಿಂಗವಾಚಕ ನುಡಿದ ಕಡೆ ಪುಲ್ಲಿಂಗ ನುಡಿದುಬಿಡುತ್ತಿದ್ದ; ಕರ್‍ತು ಇರಬೇಕಾದ ಕಡೆ ಕರ್ಮವೋ; ಕರ್ಮ ಇರಬೇಕಾದ ಕಡೆ ಕರ್ತೃ ಪ್ರಯೋಗವಾಗಿಬಿಡುತ್ತಿತ್ತು. ಕೂಡ್ರ ಬೇಕಾದ ಕಡೆ ನಿಲ್ಲುತ್ತಿದ್ದ ನಿಲ್ಲಬೇಕಾದ ಕಡೆ ಕೂಡ್ರುತ್ತಿದ್ದ. ಇನ್ನೊಂದು ವಿಚಿತ್ರವೆಂದರೆ ಅಳ್ಬೇಕಾದ ಕಡೆ ನಗುತ್ತಿದ್ದುದು ನಗಬೇಕಾದ ಕಡೆ ವಿಷಾದದ ಕವಚದೊಳಗೆ ಮುಖವನ್ನು ಮರೆಮಾಚಿಕೊಳ್ಳುತ್ತಿದ್ದನು. ಸಾರ್ವಜನಿಕವಾಗಿ ಅವನು ನಗೆಪಾಟಲಿಗೀಡಾಗಿ ಬಿಡುತ್ತಿದ್ದುದು ನನಗೆ ಅಸಹನೀಯವಾಗುತ್ತಿತ್ತು. ಇತರರಂತೆ ನಾನು ಅ ವನನ್ನು ವಿಕ್ಷಿಪ್ತರ ಪಟ್ಟಿಗೆ ಸೇರುಸಿತ್ತಿರಲಿಲ್ಲ. ದೋಸೆಗೆ ರಘು ಮಹಾಶಯ ಐತಿಹಾಸಿಕ ಮಹತ್ವ ನೀಡಲು ಕಾರಣವಾಗಿದ್ದ ಉಡುಪಿ ಶ್ರೀಕೃಷ್ಣಭವನಕ್ಕೋ; ಜಠರ ಸಂಬಂಧೀ ವ್ಯಾದಿಗಳ ತವರಾದ ವಗ್ಗರಣೆ, ಮೆಣಸಿನ ಖ್ಯಾತಿಯ ನಾಗಣ್ಣನ ಚಹಾದಂಗಡಿಗೋ; ಗುಹ್ಯ ಸಂಬಂಧೀ ರೋಗಗಳನ್ನು ತೊಡೆ ನಡುವಿರಿಸಿಕೊಂಡು ನರಳಿ ಸಜೀವ ಸಮಾಧಿಯಾಗಿದ್ದ ಜಗದ್ಗುರುವಿನ ಹೆಸರಲ್ಲಿದ್ದ ಉದ್ಯಾನವನಕ್ಕೋ ಕರೆದೊಯ್ದು ಅಂಟಿಕೊಂಡಂತೆ ಕೂತು ಸಾಹಿತ್ಯದ ಆಗುಹೋಗುಗಳ ಕುರುತಿ ಚರ್ಚಿಸುತ್ತಿದ್ದೆ. ಆರಂಭದಲ್ಲಿ ಅನಕ್ಷಸ್ಥರಂತೆ ತೇಜೋಹೀನನಂತೆ ವರ್ತಿಸುತ್ತಿದ್ದ ಅವನು ಕ್ರಮೇಣ ಚರ್ಚೆಯಲ್ಲಿ ಪಾಲ್ಗೊಳ್ಲುತ್ತಿದ್ದ. ಮುಖ್ಯವಾಗಿ ಕಾವ್ಯದ ಫಾರಂ ಬಗ್ಗೆ ಪ್ರಖರವಾಗಿ ಮಾತಾಡುತ್ತಿದ್ದ. ಕುವೆಂಪು ಕವಿತೆಗಳನು ಓದಲಿಷ್ಟಪಡುತ್ತಿದ್ದ. ಬೇಂದ್ರೆ ಕವಿತೆಗಳನ್ನು ಹಾಡುವ ರೀತಿಯಲ್ಲಿ ಗೊಣಗುತ್ತಿದ್ದ. ಕುಮಾರವ್ಯಸನ ನಂತರ ಕನ್ನದದಲ್ಲಿ ಮಹತ್ವದ ಕವಿ ಹುಟ್ಟಲಿಲ್ಲ ಎಂದು ಮಿದುಕುತ್ತಿದ್ದ; ಅನೇಕ ಪಾಶ್ಚಿಮಾತ್ಯ ಕವಿಗಳ ಮೂಲಕ ಕುವೆಂಪುರವರು ಯಾಗೆ ಗ್ರೇಟೂ ಅಂತ ನಾನು ವಾದಿಸಲು ಪ್ರಯತ್ನಿಸುವ ಭರದಲ್ಲಿ ಇಂಗ್ಲೀಷ್ ಕವಿತೆಯ ಚೂರುಗಳನ್ನು ಕೋಟ್ ಮಾಡಿದ್ನೆಂದರೆ ಅವನು ಜೀವ ಕಳೆದುಕೊಂಡವನಂತೆ ಕೂತು ಬಿಡುತ್ತಿದ್ದ. ಪರಾವರ್ತಿತ ಕ್ರಿಯೆಯಿಂದ ಹೊರಬಂದು ನಾನು ಡೈರೆಕ್ಟಾಗಿ ಬೇಂದ್ರೆ ಎಂಬ ಕಿನ್ನರ ಲೋಕಕ್ಕೆ ಹೋಗಿಬಿಡುತ್ತಿದ್ದೆ. ಅವನು ಚೇತರಿಸಿಕೊಳ್ಳುತ್ತಲೇ ಇರಲಿಲ್ಲ. ಅದಕ್ಕೆ ತುಂಬ ಸಮಯ ಹಿಡಿಯುತ್ತಿತ್ತು. ಆ ಅವಧಿಯಲ್ಲಿಯೇ ಅವನು ತನಗರಿಯದಂತೆ ಮಾತು ಮತ್ತು ಬರಹದಲ್ಲಿ ಪರಪಾಟುಗಳನ್ನು ಮಾಡುತ್ತಿದ್ದುದು. ಈ ಅವಧಿಯಲ್ಲಿಯೇ ನಾನು ಫ್ರಾಯ್ಡನನ್ನು ಮೊರೆ ಹೋಗಿದ್ದು. ಸ್ಲಿಪ್ ಆಫ್ ಟಂಗ್, ಸ್ಲಿಪ್ ಆಫ್ ರೈಟಿಂಗ್; ಸ್ಲಿಪ್ ಆಫ್ ರೀಡಿಂಗ್ ಹೀಗೆ ಅನೇಕ ರೀತಿಯಲ್ಲಿ ಫ್ರಾಯ್ಡ್ ವ್ಯಾಖ್ಯಾನಿಸಿದ್ದು ನನಗೆ ಓದಲು ಸಾಧ್ಯವಾಗಿದ್ದು ಶಾಮನ ನಡುವಳಿಕೆಯ ಪ್ರೇರಣೆಯಿಂದಲೇ. ಈ ರೀತಿಯ ಭಾವನೆಗಳ ಪರಾವರ್ತಿತ ಸ್ಖ್ಲಲನಗಳಿಗೆ ಮೂಲ ಕಾರಣ ಹುಡುಕುವ ಪ್ರತ್ನದಿಂದಲೇ ಅವನಿಗೆ ನಾನು ಮತ್ತಷ್ಟು ಹತ್ತಿರವಾದದ್ದು. ಶಾಮನ ಮಾನಸಿಕ ಅಸಮತೋಲನ ಹೆಚ್ಚುತ್ತಿರುವುದನ್ನು ಗುರುತಿಸಿಯೇ ನಾನವನನ್ನು ಅದೇ ಇನ್ನು ವಾರಪತ್ರಿಕೆಯೊಂದನ್ನು ಆರಂಭಿಸಿದ ಡಾಕ್ಟರ್ ಕಮಲಾಕರನಿಗೆ ಪರಿಚಯಿಸಿದ್ದು. ಆಂಧ್ರ ಮೂಲದವನದ ಕಮಲಾಕರ ಚೆನ್ನಾರೆದ್ದಿ ನೇತೃತ್ವದ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಭಾಗವಹಿಸಿ, ಹೋರಾಡುತ್ತಲೇ ತ್ರಿಪುರನೇನಿ ಶ್ರೀನಿವಾಸ್‌ರವರ ‘ಗಾಯಂ ಪಡ್ಡ ಗುಲಾಬಿ’ ಕವಿತಾ
-

೨೧೪

ಸಂಕಲನವನ್ನು ಕಆಂಕುಳಲ್ಲಿಟ್ಟುಕೊಂಡುನಕ್ಸಲೈಟಾಗುವ ಕನಸು ಕಾಣುತ್ತ, ಕನಸಿನೊಳಗೆ ಪೋಲಿಸರಿಗೆ ಅರೆಸ್ತಾಗುತ್ತಾ; ತಪ್ಪಿಸಿಕೊಳ್ಳುತ್ತ; ಪ್ರತಿನಿತ್ಯ ಪೋಲೀಸ್ ಎನ್‌ಕೌಂಟರಲ್ಲಿ ಸಾಯುತ್ತ, ಇನ್ನೇನು ಕ್ರಾಂತಿಯ. ಸಂಪೂರ್ಣ ಸಮಾಜ ಬದಲಾವಣೆಯ ಹುಚ್ಚು ಹಿಡಿದು ತೆಲಂಗಾಣದ ಪ್ರತಿ ಬೀದಿ ಬೀದಿಯಲ್ಲಿ ನಿರ್ನಾಮವಾಗುತ್ತಾನೆ ಎನ್ನುವಾಗ ಸದರಿ ಗ್ರಾಮದ ತನ್ನ ಒಡಹುಟ್ಟಿದ ಅಕ್ಕನ ಮನೆಗೆ ಸೇರಿಕೊಂಡು ಬಿಟ್ಟಿದ್ದ. ತನ್ನ ಮಗಳನ್ನು ಮದುವೆ ಮಾಡಿಕೊಂಡರೆ ಕೋಟಿ ಗಾಯಾಲ ವೀಣಾ ತೆಲಂಗಾಣ ತಮ್ಮನ ಮನಸ್ಸಿನಿಂದ ಉದುರಿ ಹೋಗಬಹುದೆಂಬ ಆಸೆಯಿಂದ ಒಡಹುತ್ತಿದ ಅಕ್ಕ ಗತಿಸಿದ ತನ್ನ ಗಂಡನ ಗ್ರಾಚ್ಯೂಟಿ, ಪಿಎಫೂ ವಗೈರೆಯನ್ನೆಲ್ಲ ತಮ್ಮನ ಮುಂದಿಟ್ಟು ಸ್ವಂತ ಉದ್ಯೋಗ ಆರಂಭಿಸಿ ನಿನ್ನ ಕಾಲ ಮೇಲೆ ನೀನು ನಿಂತುಕೊಂಡು ಕನ್ಯಾದಾನ ಸ್ವೀಕರಿಸು ಎಂದು ಗೋಗರೆದಿದ್ದ್ದ್ದಳು. ಆ ಹಣವನ್ನು ಬಂಡವಾಳವಾಗಿರಿಸಿಕೊಂಡು ‘ಕಮಲಾಕರ ಖಡ್ಗ’ ಎಂಬೊಂದು ವಿಚಿತ್ರ ಹೆಸರಿನ ವಾರಪತ್ರಿಕೆಯನ್ನು ಶುರು ಮಾಡಿದ್ದ. ಭ್ರಷ್ಟರಿಗೆ ಸಿಂಹಸ್ವಪ್ನ, ಕ್ರಾಂತಿಯ ಕೈಗನ್ನಡಿ ಇತ್ಯಾದಿ ಘೋಷಣೆಗಳಿಂದಾಗಿಸದರೀ ನಗರದ ಉಳ್ಳವರು ಪರ್ಸಿನೊಂದಿಗೆ ಪತ್ರಿಕೆಯನ್ನು ಇರಿಸಿಕೊಳ್ಳತೊಡಗಿ ಅದಕ್ಕೊಂದು ನೆಲೆ ಕಲ್ಪಿಸಿದ್ದರು. ಪ್ರತಿ ಪತ್ರಿಕೆಯೊಂದಿಗೆ ಆತ ತನ್ನ ಬಗ್ಗೆ ತಾನೇ ಒಂದೊಂದು ರೀತಿಯ ಗಾಸಿಪ್ ಹಬ್ಬಿಸಿಕೊಳ್ಳುತ್ತಿದ್ದ. ಪೋಲಿಸರನ್ನೇ ಕೊಂದಿರುವನೆಂದೋ ಹೀಗೆ ಒಂದಲ್ಲಾ ಒಂದು ಮುದ್ರಿಸಿದ ಪತ್ರಿಕೆಯ ಪ್ರತಿಯೊಂದುಸಂಚಿಕೆಯೂ ಜನರ ಜೇಬಿನೊಳಗೆ ಆಶ್ರಯ ಪಡೆಯುತ್ತಿದ್ದವು. ಸಮಾಜದ ಭಯ ಮತ್ತು ಕೀಳಭಿರುಚಿಯನ್ನೇ ಬಂಡವಾಳವಾಗಿಟ್ಟುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡ. ಳು ಸಾವಿರ ರೂಪಾಯಿ ಬೆಲೆ ಬಾಳುವ ಕೂಲಿಂ ಗ್ಲಾಸ್ ಧರಿಸಿಕೊಂಡೇ ಶೌಚ ಇತಾದಿ ಕೆಲಸ್ ಕಾರ್ಯ ಪೂರೈಸುತ್ತಿದ್ದ. ಅಂಬಾಸಾಡರ್ ಕಾರು ಖರೀದಿಸಿದ್ದ. ನಾಕು ಮಂದಿ ಕಣ್ಣಿಗೆ ಹುಳ್ಳಗೆ ಬೆಳ್ಳಗೆ ಕಾಣುತ್ತಿದ್ದ.. ಅನಸೂಯಾ, ರಘು, ಶಾಮನನ್ನು ಕೇಂದ್ರವಾಗಿರಿಸಿಕೊಂಡು ರೋಮಾಂಟಿಕ್ಕಗಿರೋ ಕಾದಂಬರಿ ಬರೆದುಕೊಡು ಎಂದೂ, ಕೈತುಂಬ ಸಂಭಾವನೆ ಕೊಡುವೆನೆಂದೂ ನನಗೆ ಪುಸಲಾಯಿಸುತ್ತಿದ್ದ. ಅಂಬರೀಷ್, ಲಕ್ಷ್ಮೀ, ವಿಷ್ಣುವರ್ಧನ್ ಹಾಕ್ಕೊಂಡು ತಾನೇ ಸಿನಿಮಾ ಮಾಡುವುದಾಗಿಯೂ ಆಸೆ ತೋರಿಸುತ್ತಿದ್ದ. ನಾನೀ ವಸ್ತುವನು ಇಟ್ಟುಕೊಂಡು ಕಾದಂಬರಿ ಬರೆಯುವ ಪ್ರಯತ್ನ ಮಾಡಿದ್ದುಂಟು. ಆದರೆ ಕೈ ನನಗರಿವಿಲ್ಲದಂತೆ ಕಮಲಾಕರನ ಬಗ್ಗೆ ಬರೆಯಲು ಮುನ್ನುಗ್ಗುತ್ತಿತ್ತು. ಗಣೇಶನನ್ನು ಮಾಡಲು ಹೋಗಿ ಅವರ್ಪ್ಪನನ್ನು ಮಾಡಿದರೆ ಎಂಬ ಫಜೀತಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾಅರಂಟಿ ಅಂತ ನಾನು ಬರೆದ ಹಾಳೆಗಳನ್ನು ಚೂರು ಚೂರು ಮಾಡಿ ನಮ್ಮ ಓಣಿಯ ಇಥಿಹಾಸ ಪ್ರಸಿದ್ಧ ಬಸವನ ಬಾವಿಯಲ್ಲಿ ಹಾಕಿ ನಿರಮ್ಮಳವಾಗಿದ್ದು ಬಿಟ್ಟೆ. ಶಾಮ ತನ್ನ ಬಗ್ಗೆ ತಾನೆ ಬರೆಯಲೆಂಬ ಇರಾದೆ ನನಗಿತ್ತು. ಆದರೆ ಶಾಮನನ್ನು ಅವನಿಗೆ ಪರಿಚಯಿಸಲು ನಾನೆಂದೂ ಪ್ರಯಿತ್ನಿಸ್ದಿದವನಲ್ಲ. ತುರ್ತು ಪರಿಸ್ಥಿತಿ ವಿರೋಧಿ ಕವಿ ಸಮ್ಮೇಳನದಲ್ಲಿ ಶ್ರೀಶ್ರೀಯವರ ಕವಿತೆಯೊಂದನ್ನು ಅನುವಾದಿಸಿ ಓದಲಿಕೆಂದು ಬಂದಿದ್ದ ಕಮಲಾಕರ ಪುಣ್ಯಕ್ಕೆ ಶಾಮನ ಪಕ್ಕದಲ್ಲಿ ಕೂತಿದ್ದ. ಬೆಕ್ಕಿನ ಮಗ್ಗುಲು ಕೂತ ಇಲಿಯಂತೆ ಜಾಗ ಬದಲಾಯಿಸಲು ಶಾಮ ಪ್ರಯತ್ನಿಸುತ್ತಿರುವುದನ್ನು ನೂರಕ್ಕೆ ನೂರರಷ್ಟು ರಾಜಕಾರಣಿಯಾಗಿದ್ದ ಗೊಬ್ಬರದಂಗಡಿ ಜಲಜಾಕ್ಷಿ ಗಮನಿಸುತ್ತ ನನ್ನ ಕಿವಿಯಲ್ಲಿ ಪಿಸಿಪಿಸಿ ಗುನುಗಿ ಕಿಸಕ್ಕನೆ ನಕ್ಕಳು. ನಾನು ಜಲಜಾಕ್ಷಿಯೊಡನೆ ಸೇರಿಕೊಂಡು ತನ್ನ ವಿರುದ್ಧ ಮಸಲತ್ತು ಮಾಡುತ್ತಿರುವನೆಂದು ಅನಗತ್ಯ ಅರ್ಥಮಾಡಿಕೊಂಡು ಶಾಮ ಕವಿತೆ ಇದ್ದ ಹಾಳೆಯನ್ನು


೨೧೫

ತಿರುಗುಮುರುಗಾಗಿ ಹಿಡಿದುಕೊಂಡಿದ. ಕವಿತೆ ಸಾದರ ಪಡಿಸುವಾಗಲೂ ಹಾಳೆಯಲ್ಲಿ ತಲೆಕೆಳಗಾಗಿರುವ ಅಕ್ಷರಗಳಿಗೆ ತಾನೆ ಬೆರಗಾದನೆ ಹೊರತು ಸರಿಪಡಿಸಿಕೊಳ್ಳುವ ಸಾಮಾನ್ಯ ಜ್ಞಾನ ಅವನಿಗೆ ಹೊಳೆಯಲಿಲ್ಲ. ಅವನು ಆ ಒದ್ದಾಟದಲ್ಲಿರುವಾಗಲೇ ತಲೆಯಿಂದ ಮೂಡಿದ ಬೆವರು ಅಕ್ಷರಗಳ ಮೇಲೆ ಬಿದ್ದು ಅಸ್ಪಷ್ಟತೆಯನ್ನು ದ್ವಿಗುಣಗೊಳಿಸಿದವು. ಇದರಿಂದ ಕಾವ್ಯ ರಸಿಕರು ರೋಸಿ ಹೋ ಹೋ ಅಂದರು. ಸಿಳ್ಳೆ ಕೇಕೆ ಹಾಕಿದರು. ಜೇಬಲ್ಲಿದ್ದ ಕರವಸ್ತ್ರ ತೆಗೆದು ಬೆವರೊರೆಸಿಕೊಳ್ಳುವ ನೆಪದಲ್ಲಿ ಗಲಭೆ ಪೀಡಿತ ಮುಖ ಮರೆಮಾಚಿಕೊಳ್ಳಬೇಕೆಂಬ ಸಾಮಾನ್ಯ ಜ್ಞಾನದಿಂದ ವಂಚಿತನಾಗಿ ಮತ್ತೆ ಇಲಿಯಂತೆ ಮುದುಡಿ ಕಮಲಾಕರನ ಮಗ್ಗುಲು ಕುಳಿತುಕೊಂಡ. ತನ್ನೊಳಗಿನ ಸಾಹಿತ್ಯ ಸೃಜನಶೀಲತೆಯನ್ನು ನಿರ್ನಾಮ ಮಾಡುವ ಮಸಲತ್ತು ಗುಟ್ಟಾಅಗಿ ನಡೆದಿರುವುದೆಂದೂ; ನಾನೇ ಆ ಮಸಲತ್ತಿನ ನೇತೃತ್ವ ವಹಿಸಿರುವುದಾಗಿಯೂ ಅನುಮಾನಿಸಿದ. ಇದನ್ನು ಪೂರ್ವಭಾವಿಯಾಗಿ ಅರ್ಥಮಾಡಿಕೊಂಡು ನಾನಲ್ಲಿಗೆ ಎದ್ದುಹೋದೆ. ನನ್ನೊಂದಿಗೆ ಗರಿಗರಿ ಖಾದಿ ಸೀರೆ ಉಟ್ಟಿದ್ದ ಜಲಜಾಕ್ಷಿಯೂ ಎದ್ದುಬಂದಳು. ಕಮಲಾಕರನ ಮಾತಿಗೆ ಕಟ್ಟುಬಿದ್ದು ಕವಿ ಸಮ್ಮೇಳನವನ್ನು ಅದರ ಪಾಡಿಗೆ ಅದನ್ನು ಬಿಟ್ಟು ನಾವು ನಾಲ್ಕು ಮಂದಿ ಒಂದೆರಡು ಗುಟುಕು ಚಹ ಕುಡಿದು ನಮ್ಮ ನಮ್ಮ ತನುವ ಸಂತೈಸಿಕೊಳ್ಳಲೆಂದು ನಾಗಣ್ಣನ ‘ಈರಸೈವ ತೀ ಕಾಫಿ ಕ್ಲಬ್ಬಿ’ಗೆ ಹೋದೆವು. ಕ್ರಾಂತಿಯ ಆತ್ಮ ಕಾವ್ಯವೆಂದೋ, ಕಾವ್ಯದ ಆತ್ಮ ಕ್ರಾಂತಿಯೆಂದೋ ಕಮಲಾಕರನೂ; ಕಾವ್ಯದ ಸೂಕ್ಷ್ಮ ಶರೀರದೊಳಗೆ ರಾಕ್ಷಾಕಾರದ ಕ್ರಾಂತಿಯನ್ನು ತುರುಕಿ ಕಾವ್ಯವನ್ನು ಕುರೂಪ ಗೊಳಿಸಿರುವುದು ಸಲ್ಲದೆಂದು ವಾದಮಾಡತೊಡಗಿದೆವು. ಕವ್ಯದ ಎರಡು ನಮೂನೆಗಳು ತಾವೇ ಎಂಬಂತೆ ಜಲಜಾಕ್ಷಿ ಮತ್ತು ಶಾಮ ಮಿಕಿ ಮಿಕಿ ನೋಡುತ್ತಿದ್ದರು.ಟೇಬಲ್ ಕೆಳಗೆ ಒಂದು ಕಾಲಿನಿಂದ ಶಾಮನನ್ನೂ; ಇನ್ನೊಂದು ಕಾಲಿನಿಂದ ಕಮಲಾಕರನನ್ನೂ ತುರಿಸಿ ಸುಪ್ತ ಬಯಕೆಗಳನ್ನು ಉದ್ದೀಪಿಸುವ ತುಂಟ ಪ್ರಯತ್ನದಲ್ಲಿದ್ದ ಜಲಜಾಕ್ಷಿ ಮಮ್ಮಟ, ಆನಂದವರ್ಧನ, ಕುಂತಕರೇ ಸ್ತ್ರೀ ವೇಶ ದರಿಸಿರುವಂತೆ, ಲೌಕಿಕ ಮಹಾಕವ್ಯವೇ ಸ್ತ್ರೀ ರೂಪ ಧರಿಸಿರುವಂತೆ; ಅಪುರ್ವ ತೇಜಸ್ಸಿನಿಂದ ಗೋಚರಿಸುತ್ತಿದ್ದಳು. ಪಾದ ಸ್ಪರ್ಶದಿಂದ ಉತ್ತೇಜಿತನಾದ ಸಂಪಾದಕ ಆಕೆಯ ಮಗ್ಗುಲು ಬಂದು ಕೂತ. ನಾನು ಮಾಡೋ ಕೇಟಿ ಮುಂದೆ ಕವಿತೆ ಏನು ಮಹಾ ಎಂಬ ಅಹಂಕಾರದಿಂದ ನಾಗಣ್ಣ ಮಾತಾಡುತ್ತಿದ್ದ. ಹೀಗಾಗಿ ವಾತಾವರಣ ಗೋಜಲಾಯಿತು. ಪೋಲೀಸರೇ ನಾಗಣ್ಣನ ರೂಪದಲ್ಲಿರುವರೇನೋ ಎಂಬ ಅನುಮಾನದಿಂದಾಗಿ ಚಹದಂಗಡಿ ಮಾಲಿಕನ ಮಾತನ್ನು ಸಾರಾ ಸಗಟು ತಿರಸ್ಕರಿಸುವುದು ಸಧ್ಯವಿರಲಿಲ್ಲ. ಹೀಗಾಗಿ ಎದ್ದು ಬಂದೆವು. ಸಂಪಾದಕ ಮಿತ್ರ ಶಾಮನನ್ನು ತಮ್ಮ ಪತ್ರಿಕೆಗೆ ಏನಾದರೂ ಬರೆದುಕೊಡುವಂತೆ ಕೇಳಿಕೊಂಡ. ಬೆವರಿನಿಂದ ಒದ್ದೆಯಾದ ಕವಿತೆಯನ್ನು ಪರಿಷ್ಕರಿಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಇಸಿದುಕೊಂಡ. ಕಮಲಾಕರನೂ; ಜಲಜಾಕ್ಷಿಯೂ ಕಥೆ, ಕಾದಂಬರಿಗಳಂತೆ ಅತ್ತ ಹೊರಟರೆ ತಾನೂ ಶಾಮನೂಎರಡು ದುರ್ಬಲ ಕವಿತೆಗಳಂತೆ ಇತ್ತ ಹೊರೆತೆವು. ದಾರಿ ಉದ್ದಕ್ಕೂ ಅವನು ಮಂಕಾಗಿದ್ದ. ಆ ಮಂಕನ್ನು ಭೇದಿಸುವ ಪ್ರಯತ್ನದಲ್ಲಿ ನಾನು ಏನೇನೋ ಮಾತಾಡುತ್ತಿದ್ದೆ. ಬಹಳ ಹೊಟ್ಟಿನ ತನಕ ಮೌನವಾಗಿದ್ದ. ಅವನು ಇದ್ದಕ್ಕಿದ್ದಂತೆ ಕಮಲಾಕರನಿಗೂ , ಜಲಜಾಕ್ಷಿಗೂ ನಡುವೆ ಅನೈತಿಕ ಸಂಬಂಧ ಇರುವುದಂತೆ ನಿಜವಾ ಎಂಬೊಂದು ಅದ್ಬುತ ವಾಕ್ಯ ಉದುರಿಸಿದ. ಶಾಕ್ ಆದರೂ ನಾನದನ್ನು ತೋರಗೊಡಲಿಲ್ಲ. ಆದ್ದರಿಂದ ನನಗೆ ಆಶ್ಚರ್ಯವ್ವಗಲೀ; ಬೇಸರವಾಗಲೀ ಆಗಲಿಲ್ಲ. ನಾನು ಮೌನವಹಿಸಿದೆ. ಅವನು ಗ್ರಾಮಫೊನ್ ರಿಕಾರ್ಡಿನಂತೆ ಕಾನೂನು ಬಾಹಿರ ಲೈಂಗಿಕ ಚಟುವಟಿಕೆಗಳಿಂದ ಸಮಾಜ ಹಾಳಾಗುತ್ತಿರುವ ಬಗ್ಗೆ


೨೧೬

ಮಾತಾಡತೊಡಗಿದ. ಕನಿಷ್ಟ ನನ್ನಿಂದ ಆತ ಹ್ಹಾಂ ... ಹ್ಹೂ... ಬಯಸಿದ್ದ. ನಾನು ಗೊಂಬೆಯಂತೆ ನಡೆದೆ.
ವಾರೊಪ್ಪತ್ತಿನಲ್ಲಿ ‘ಕಮಲಾಕರ ಖಡ್ಗ’ ಪತ್ರಿಕೆಯಲ್ಲಿ ಶಾಮನ ‘ಊಸರವಳ್ಳಿ’ ಎಂಬೊಂದು ಕಥೆ ಪ್ರಕಟವಾಯಿತು. ಊರಿನ ಪ್ರತಿಯೊಬ್ಬ ಗಣ್ಯ ವ್ಯಕ್ತಿ ಇದು ತನ್ನ ಕುರಿತು ಬರೆದದ್ದೆ ಎಂದು ಆರೋಪಿಸಿಕೊಳ್ಳತೊಡಗಿದ. ನಂತರವೇ ನಾನದನ್ನು ಗಮನಿಸಿದ್ದು. ಒಂದೇ ಉಸುರಿಗೆಓದಿಸಿಕೊಂಡಿತು. ಸೀತಾರಾಮನ ಪಾತ್ರದಲ್ಲಿ ನಾನಿದ್ದೇನೆ ಅಂತ ಒಂದು ಕ್ಷಣ ಅನ್ನಿಸಿಬಿಟ್ಟಿತು. ಎಷ್ಟೊಂದು ಒಳ್ಳೆಕಥೆ ಬರೆಯಲು ಸಾಧ್ಯವಾಗಿದೆ ಈ ಕುಂಬಾರ ಹುಳು ಮನಸ್ಸಿನ ಶಾಮನಿಗೆ ಅಂತ ಅಂದುಕೊಂಡೆ. ಕವಿಗೆ ಕವಿ ಮುನಿವಂ ಅನ್ನುವಂತೆ ಅವನ ಬಗ್ಗೆ ಹೊಟ್ಟೆ ಎಂಬ ಹುಲ್ಲುಮೆದೆಯೊಳಗೆ ಈರ್ಷೆ ಒಂಬ ಬೆಂಕಿಯ ಚೂರು ಕಾಣಿಸಿಕೊಂಡಿತು. ನನ್ನ ಬಗ್ಗೆ ನನಗೇ ಅಸಹ್ಯ ವಾಯಿತು. ಪೊಡೆಯೊಳ್ ಪಂಕ ತುಂಬಿಟ್ಟು ಕೊಂಡು ಅವನ ಬಳಿಗೆ ಹೋಗುವುದು ಅಭಿನಂದಿಸುವ ನಾಟಕವಾಡುವುದು ಸರಿ ಕಾಣಲಿಲ್ಲ. ಅವನು ಅಪರೂಪಕ್ಕೆ ಬರೆದಿರುವ ಒಳ್ಳೆಯ ಕಥೆ, ಸೃಜನಶೀಲತೆಗೆ ಪ್ರೇರಣೆ ನೀಡುವುದೇ ಅದರ ದೊಡ್ಡ ಗುಣ. ನಾನೂ ಒಂದು ಕಥೆ ಬರೆಯಬೇಂದುಕೊಂಡೆ. ಇಂಥ ಪತ್ರಿಕೆಯಲ್ಲಿ ಇಂಥದೊಂದು ಕಥೆ ಬಂದಿದೆ ಗಮನಿಸಿ, ಚರ್ಚಿಸಿಅಂತ ಅನೇಕ ಬರಹಗಾರ ಮಿತ್ರರಿಗೆ ಪತ್ರ ಬರೆದೆ. ದೊಡ್ಡ ಮನಸ್ಸಿನ ಕೆಲವರು ಓದಿ ಅವನಿಗೂ; ನನಗೂ ಪತ್ರ ಬರೆದರು. ಅಂಥ ಕೆಲವು ಪ್ರಶಂಸಾ ಪತ್ರಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದ. ನಾನು ಅಭಿನಂದಿಸಿದೆ. ಇದು ಅವರ ಬಗ್ಗೆ ಇರಬೌದಾ? ಇವರ ಬಗ್ಗೆ ಇರಾಬೌದಾ? ಅಂತ ಕೇಳಿದೆ ಚಪಲಚಿತ್ತನಾಗಿ. ಜ್‌ಆಡರ ಗೋವಿಂದ, ಸಣ್ರುದ್ರ, ಮಾಜಿ ಛೇರ್ಮನ್ನು ವೆಮ್ಕಟೇಶ ಇಂಥ ಕೆಲವರು ಅಟ್ಯಾಕ್ ಮಾಡಲು ಪ್ರಯತ್ನಿಸಿದರೆಂದೂ; ಲೌಕಿಕ ಕಥೆ ಬರೆದುದಕ್ಕೆ ಮತ್ತು ಮುಂದೊಮ್ದು ದಿನ ತನ್ನ ಬಗ್ಗೇಗೆ ಬರೆದುಬಿಡಬಹುದೆಂದೂ ತಾತನವರು ಬೇಸರ ಮಾಡೊಕೊಂಡಿರುವರೆಂದೂ ವಿವರಿಸಿದ. ಯಾವುದೇ ಒಂದು ಒಳ್ಳೆಯ ಕಥೆಯ ಯಶಸ್ಸು ಇದೇ ಎಂದು ಮತ್ತೆ ಅಭಿನಂದಿಸಿದೆ. ಕಮಲಾಕರನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆಯೇ ‘ಊಸರವಳ್ಳಿ’ ಎಂದು ಶಾಮ ನನ್ನ ಕಿವಿಯಲ್ಲಿ ಪಿಸುಗುಟ್ತಿದ. ಓದಿದ ಕಥೆ ಮತ್ತೊಂದು ಕಣ್ಣೊಳಗೆ ಬಿಚ್ಚಿಕೊಂಡಿತು. ಅವನು ಹೇಳಿದ್ದು ಸರಿ ಅನ್ನಿಸಿತು. ಕಮಲಾಕರ ಮತ್ತು ಜಲಜಾಕ್ಷಿಯ ನಡುವೆ ಅನೈತಿಕ ಸಮ್ಬಂಧ ಇರುವುದೆಂಬ ಕಲ್ಪನೆಯೇ ಒಂದು ಕಥೆಯನ್ನು ಹುಟ್ಟು ಹಾಕಿತ್ತು. ತಾನು ಯಾರ ಬಗ್ಗೆ ಬರೆದಿರುವೆನೋ ಅವನೇ ತನ್ನ ಪತ್ರಿಕೆಯಲ್ಲಿ ಪ್ರಕತಿಸಿ ನೂರೈವತ್ತು ರುಪಾಯಿ ಸಂಭಾವನೆ ಕಳುಹಿಸುರುವನೆಂದಮೇಲೆ ಇದು ಶಾಮನ ದೊಡ್ಡ ಸಾಧನೆಯೇ ಸರಿ ಅಂದುಕೊಂದೆ. ನಂತರ ಗೊತ್ತಾಯಿತು. ಬೇರೆ ಬೇರೆ ಉಪನಾಮಗಳನ್ನಿಟ್ಟುಕೊಂಡು ನಾಡಿನ ಹತ್ತಾರು ಲೈಂಗಿಕ ಕಾಮ ಪ್ರಚೋದಕ ಮಾಸ ಪತ್ರಿಗೆಗಳಿಗೆ ಲೇಖನಗಳನ್ನು ಅವನು ಬರೆಯುತ್ತಿದ್ದುದು. ಕೆಲವನ್ನು ಓದಿದೆ. ನಿಸ್ಸಂದೇಹವಾಗಿ ಕಾಮ ಪ್ರಚೋದಿಸುವಂತಿದ್ದವು. ನನಗೆ ತಿಳಿದಮಟ್ಟಿಗೆ ಅವನು ಒಮ್ಮೆ ಕೂಡ ಸಂಭೋಗ ಮಾಡಿದವನಲ್ಲ. ಬೆಳಕಿನಲ್ಲಿ ತನ್ನ್ ಶಿಶ್ನವನ್ನು ತಾನು ನೋಡಿ ಆನಂದಿಸುತ್ತ ಮುಷ್ಟಿಮೈಥುನ ಮಾಡಿಕೊಂಡವನಲ್ಲ. ಅಂಥವನು ಕಾಮದ ಬಗ್ಗೆ ಇಷ್ಟೊಂದು ಕರಾರುವಾಕ್ಕಾಗಿ ಆಲೋಚಿಸಿ ಬರೆಯುವುದೆಂದರೇನು? ಯವುದರ ಬಗ್ಗೆ ತನಗೆ ಗೊತ್ತಿಲ್ಲವೋ? ದೌರ್ಬಲ್ಯವಿರುವುದೋ? ಪೂರ್ವಾಗ್ರಹ ಭಾವನೆ ಇರುವುದೋ? ಅದನ್ನು ಮರೆಮಾಚಲೋಸುಗ ಮನುಷ್ಯ ಪ್ರಪಂಚಕ್ಕೆ ಪೋಜು ಕೊಡುತ್ತಿರುವನೆಂಬ ಅನುಮಾನ ಬಂತು.


೨೧೭

ಅವನು ಅಶ್ಲೀಲವನ್ನು ವೈಭವೀಕರಿಸಿ ಬರೆಯುತ್ತಿದ್ದಾಗ ತನ್ನನ್ನೂ; ತನ್ನ ಹೆಸರನ್ನೂ ಮರೆಮಾಚುತ್ತಿದ್ದಾನೆಂದು ತದನಂತರ ಗ್ರಹಿಸಿದೆ. ಸಂಭೋಗದ ಸುಖ ಅನುಭವಿಸಿದನೆಂದರೆ ನಿರಮ್ಮಳವಾಗಿರುತ್ತಾನೆಂದುಕೊಂಡೆ. ಜುಟ್ಟು ಜನಿವಾರವನ್ನು ಅದುಮಿಡುವ ರೀತಿಯಲ್ಲಿ ಅದೂ ಆಗಿತ್ತು. ಹೇಗಾದರೂ ಮಾಡಿ ಅವನನ್ನು ಸಂಭೋಗಕ್ಕೆ ತೊಡಗಿಸಬೇಕೆಂದು ನಿರ್ಧರಿಸಿದ ಮರುದಿನವೇ ಪೋಸ್ಟ್‌ಮ್ಯಾನ್ ತನಾ ಲಟುಕಾಪುಟುಕಾ ಸೈಕಲ್ ಮೇಲೆ ಏದುಸಿರು ಬಿಡುತ್ತ ಬಂದ. ಯಾವುದಾರೊಂದು ಪತ್ರಿಕೆಯವರು ನನ್ಗೆ ಕಥೆ ಕೇಳಿದ್ಯಾರೇನಂತ "ಏನ್ರಾಮಣ್ಣ? ಯಾವಾರ ಲೆಟರ್ಸು, ಅದಾವಂತ" ಕೇಳಿದೆ. ಕೂಡಲೆ ಚಂದಾ ಸಂದಾಯ ಮಾಡತಕ್ಕದ್ದು. ಈ ನೋಟೀಸು ಮುಟ್ಟಿದ ಹದಿನೈದು ದಿನಗಳೊಳಗಾಗಿ ನಿಮ್ಮಿಂದ ಚಂದಾಹಣವಾಗಲೀ; ಬಿಟ್ಟಿಯಾಗಿ ಪತ್ರಿಕೆ ಓದುತ್ತಿರುವುದರ ಬಗ್ಗೆ ಹೇಳಿಕೆ ಓಳಗೊಂಡ ಪತ್ರವಾಗಲೀ ಬಾರದಿದ್ದ ಪಕ್ಷದಲ್ಲಿ ನೀವು ಈ ಭೂಮಿಮೇಲಿಲ್ಲವೆಂದು ಪತ್ರಿಕೆಯ ಆಡಳಿತ ವರ್ಗ ಭಾವಿಸಿ ಪತ್ರಿಕೆ ಕಳುಹಿಸುವುದನ್ನು ನಿಲ್ಲಿಸಲಾಗುವುದೆಂದು ಒಕ್ಕಣಿಕೆ ಇದ್ದ ಚಂದಾದಾರರ ಪತ್ರವನ್ನು ಅವನ ಕೈಗಿತ್ತ. ಅದರಲ್ಲಿರುವ ಒಕ್ಕಣಿಕೆಯನ್ನು ಓದಿರದ ರಾಮಣ್ಣನ ಕಡೆ ಕೃತಜ್ಞತಾಪೂರ್ವಕವಾಗಿ ನೋಡುತ್ತಿರಲು ಅವನು "ಎಲ್ಲಿ ಸಾರ್ ನಿಂ ಫ್ರೆಂಡು ಕವಿಗಳು ಕಾಣಿಸ್ತಿಲ್ಲ ..." ಅಂತ ಕೇಳಿದ. ಆಗಲೇ ಮನೆಗೆ ಹೋಗಿ ಬಂದಿರಬಹುದಾಗಿದ್ದ ಅವನನ್ನು "ಯಾಕಪ್ಪಾ ಏನ್ಸಮಾಚಾರ" ಎಂದು ಕೇಳಿದೆ. ಅರ್ಧ ಕೇಟಿ ಕುಡಿಸಿದರೆ ಯಾರ ಪತ್ರವನ್ನಾದರೂ ಯಾರಿಗಾದರೂ ಕೊಡುವ ಸ್ವಭಾವದ ಅವನು ಸದರೀ ಗ್ರಮದಲ್ಲಿ ಗುಟ್ಟಗಿ ನಡೆಯುತ್ತಿದ್ದ ಅನೇಕ ಪ್ರೇಮ ಪ್ರಕರಣಗಳನ್ನು ಬಟಾಬಯಲು ಮಾಡಿದ್ದ. ಹೀಗಾಗಿ ಯಾವ ಪ್ರೇಮಿಯೂ ತಲೆಎತ್ತಿ ನಿಸೂರಗಿ ಅಡ್ಡಾಡುವುದು ಅಸಾಧ್ಯವಾಗಿತ್ತು. ಅಂಥ ಅವನು ಪಂಚರಂಗೀ ಲಕೋಟೆಯನ್ನು ತನ್ನ ಬತ್ತಳಿಕೆಯಿಂದ ಝಳಪಿಸಿದ. ಅವನಿಗೆ ಯಾರೂ ಪ್ರೆಮಪತ್ರ ಬರೆಯಲಾರರು ಎಂಬ ಖಾತ್ರಿಯಿಂದಲೂ; ಅದು ಸರ್ಕಾರಿ ದಫ್ತರೊಳಗಿಂದ ಎದ್ದು ಬಂದಂತಿರುವುದೆಂಬ ನಂಬಿಕೆಯಿಂದ ನಾನೇ ಪಡೆದುಕೊಂಡೆ. ಬಾಲ ವಿಧವೆಯೂ, ಸಕೇಶಿಯಾದ, ಶಿಕ್ಷಕಿಯೂ ಆದ ರಮಾಬಾಯಿಗೆ ಬಂದಂಥ ಪ್ರೇಮಪತ್ರವನ್ನು ಅದನ್ನು ಬರೆದವನ ಹೆಂದತಿಯೂ; ಆರು ಮಕ್ಕಳ ತಾಯಿಯೂ ಆದಫ ದಕ್ಷಾಣಮ್ಮನಿಗೆ ಕೊಟ್ಟು ಗಂಡ ಹೆಂದಿರೆ ಶೋಭನದ ಮಂಚವನ್ನು ಇಬ್ಬಾಗ ಮಾಡಿ ಈಗ ಒದೆಯಿಸಕೊಳ್ಳಬಹುದು. ಆಗ ಒದೆಯಿಸಿಕೊಳ್ಳಬಹುದೆಂಬ ಚಿಂತೆಯಿಂದಲ್ಲೇ ಪ್ರತಿಕ್ಷಣಗಳನ್ನು ದೂಡುತ್ತಿದ್ದ ರಾಮಣ್ಣ, "ಕಟ್ಟೇಮನಿ ಕೊತ್ರೇಶಿಗೊಂದೀಟು ಬುದ್ಧಿ ಹೇಳ್ರಿ ... " ಎಂದು ಪ್ರತಿಯಾಗಿ ಹೇಳಿದನು. "ನನ್ನೆಂಡ್ತೀನ ನನ್ನಿಂದ ದೂರ ಮಾಡಿರೋ ರಾಮಣ್ಣೀ ಊರಾಗಿರ್ಬೇಕೊಂದು, ಇಲ್ಲಾ ನಾವಿರ್ಬೇಕೊಂದು" ಎಂದು ಪ್ರತಿಜ್ಞೆ ಮಾಡುವ ಪೂರ್ವದಲ್ಲಿ ಮಧ್ಯ ವಯಸ್ಕ ಕೊಟ್ರೇಶಿ ತನ್ನ ಶ್ವೇತವರ್ಣದ ಮೀಸೆ ತಿರುವಿದ್ದ ನನ್ನೆದುರಿಗೆ. "ಯಾರು ಯಾರಿಗಾದ್ರೂ ಲವ್ ಲೆಟ್ಟ್ರು ಬರ್‍ಕೊಳ್ಳಿ? ... ಈ ರಾಮಣ್ಣ ಯಾಕ ಇಉದ್ರಾಗ ತಲೆತೂರಿಸೋದು" ಅಂತ ಊರ ಮಂದಿ ಕನಿಷ್ಟ ಮಟ್ಟದ ಅನುಕಂಪ ವ್ಯಕ್ತಪಡಿಸದಿದ್ದಾಗಲೇ ರಾಮಣ್ಣ ನನಗೀ ಮಾತು ಹೇಳಿದ್ದು. "ಎಂಥೆಂಥ ಲವ್ ಲೆಟ್ಟ್ರು ಬರ್ತಾವಂತೀರಿ? ... ಒಂದೊಂದು ಲೆಟ್ಟ್ರೋದಿ ಒಂದೊಂದ್ಕಥಿ ಬರೆದು ಬಿಡ್ತೀರಿ ನೋಡ್ರಿ ... ಬೇಕಂದ್ರೆ ತಂದು ತೋರಿಸ್ತೀನಿ" ಎಮ್ದು ಹೇಳಲು ನಾಚಿಕೆ ಪಟ್ಟಿರದ ರಾಮಣ್ಣಗೆ ಧೈರ್ಯ ಃಏಳಿಕಳುಹಿಸಿದೆ.

ಶಾಸ್ತ್ರಿಗಳ ಒತ್ತಾಯಕ್ಕೆ ಪ್ರಾಣಾಯಾಮ ಕಲಿಯಲು ಎರಡು ದಿನಗಳ ಹಿಂದೆಯೇ ಹತ್ತಿರದ ವೆಂಕಟಾಪುರಕ್ಕೆ ಹೋಗಿದ್ದ ಶಾಮ ಇವತ್ತು ಸಂಜೆಯ ಹೊತ್ತಿಗೆ ಬರಬಹುದೆಂದು ಅಲುಮೇಲಮ್ಮ


೨೧೮

ನವರು ಆರು ಮೊಳ ದೂರದಿಂದಲೆ ಹೇಳುತ್ತಲೆ ವಾಪಸಾದೆ. ಮಹಿಳಾ ಸಂಘಟನೆ ಪುರುಷ ಚೈತನ್ಯದ ಸಹಕಾರವಿಲ್ಲದಿದ್ದರೆ ದುರ್ಬಲವಾಗುತ್ತದೆ ಎಂದು ಧೃಡವಾಗಿ ನಂಬಿದ್ದ ಜಲಜಾಕ್ಷಿ ತಾಲೂಕು ಮಟ್ಟದ ಕಾರ್ಯಕ್ರಮವೋಂದರಲ್ಲಿ ಬೋರ್ಡ್‌ಮೆಂಬರಾಗಿ ಭಾಗವಹಿಸಿ ಅದೇ ತಾನೆ ಬಂದಿಳಿದಿದ್ದಳು. ತಾನು ಭಾಷಣ ಮಾಡ್ತಿರೋ ಫೋಟೋ ಕೊಡಲಿಕ್ಕೇಂತ ‘ಖಡ್ಗ’ದ ಪತ್ರಿಕೆಯ ಕಛೇರಿಗೆ ಬಂದಾಗಲೇ ಅಲ್ಲಿದ್ದ ನನ್ನನ್ನು ಭೇಟಿಯಾಗಿದ್ದು. ಪುರುಷ ಮತ್ತು ಸ್ತ್ರೀ ಚೈತನ್ಯವೊಂದರ ಎರಡು ಮುಖಗಳು ಎಂದು ವಾದಿಸುತ್ತಲೆ ನನ್ನ ಕೈಲಿದ್ದ ಲಕೋಟೆ ನೋಡಿ ‘ಹೊಸ್ದೇನೋ ಬರ್‍ಕೊಂಡು ಬಂದಂಗದೀರಿ?... ಅದೇ ನಮ್ಮಿಂದ್ರಾ ಗಂಧೀನ ಬಯ್ದು ಕವಿತಾ ಬರೆದಂಗಿದೀರಿ ಹೌದಲ್ಲೊ’ ಎಂದು ಇಸಿದುಕೊಂಡು ‘ಓಹ್ ... ರಸಿಕ ರಾಜ ಶಾಮನ್ದು’ ಎಂದು ಉದ್ಗರಿಸಿದಳು. "ಹೆಣ್ಣಿನ ಮನಸ್ಸು ಅರ್ಥ ಮಾಡ್ಕೊಳ್ಳದವನು ಅದೆಂಗ ಬ್ಯಾಂಕನಲ್ಲಿ ರೊಕ್ಕ ಎಣಿಸ್ತಾನ್ರಿ" ಎಂದು ಮತ್ತೆ ಲಕೋಟೆ ತುಂಬಿಸಿದಳು. ಆಕೆಯ ಮಾತು ಒಂಚಣ ಗಲಿಬಿಲಿ ಗೊಳಿಸಿತು. ಯೋಚಿಸಿದ್ದಷ್ಟು ಅರ್ಥ ಪರಂಪರೆ ಬಿಚ್ಚಿಕೊಳ್ಳುವಷ್ಟು ಮಾತು. ಆಕೆ ಹೇಳಿದ್ದು ನಿಜ. ಹೆಣ್ಣು ತಟ್ಟಿದರೆ ತಡೆಯಲಾರದ ಬಾಗಿಲುಳ್ಳವನು, ಹೆಣ್ಣಿನ ಹೃದಯದವರೆಗೆ ಹೋಗಿ ವಾಪಸ್ಸು ಬಂದು ಬಿಡುವ ಸಂಚೋಚ ಪ್ರವೃತ್ತಿಯವನು ನಮ್ಮ ಶಾಮ ... ತಮ್ಮ ಮೊಮ್ಮಗ ಅಪ್ಪಟ ಬ್ರಹ್ಮಚಾರಿ ಎಂದೇ ನಂಬಿರುವ ಶಾಸ್ತ್ರಿಗಳು ಪ್ರಕಾಂಡ ಪಂಡಿತರೇನೋ ನಿಜ. ಆದರೆ ಬ್ರಹ್ಮಚಾರಿ ಎಂಬ ಪದದ ಸುಳುಹು ಹೊಳಹುಗಳೇ ತಿಳಿದಿಲ್ಲವಲ್ಲ ಅವರಿಗೆ. ಃಡಿಚಿhmಚಿಛಿhಚಿಡಿಥಿಚಿ meಚಿಟಿs sexuಚಿಟ ಚಿbsಣiಟಿeಟಿಛಿe ಎಂದೇ ನಂಬಿರುವ ಅನೇಕರಂತೆ ಅವರೂ ಕೂಡ, ಃಡಿಚಿhmಚಿಛಿhಚಿಡಿಥಿಚಿ meಚಿಟಿs veಜಚಿ, ವೇದವನ್ನು ಕರಗತ ಮಾಡಿಕೊಂಡಿರುವವನೆಂಬುದು ಒಂದು ಅರ್ಥವಾದರೆ, ಅದರ ಇನ್ನೊಂದು ಅರ್ಥ ಆಯುರ್ವೇದದಲ್ಲಿ ಅರ್ಥಪೂರ್ಣವಾಗಿ ಹೇಲಲ್ಲಗಿದೆ.ಹೆಂಡತಿಯೊಂದಿಗೆ ಮಾತ್ರ ಆಕೆಯ ಫಲವಂತಿಕೆ ಸಮಯದಲ್ಲಿ ಸಂಭೋಗಿಸುವುದು. ಆದರೆ ಪ್ರತಿರಾರಿ ಸಂಭೋಗದ ಕನಸು ಕಾಣುತ್ತ, ಹೊಸಕಾಡುತ್ತ, ಸ್ಖಲಿಸುತ್ತ ಆನಂದಿಸು ಶಾಮ ಅದು ಹೇಗೆ ಬ್ರಹ್ಮಚಾರಿಯಾದಾನು!
ಯಾವ ನಾಯಕನನ್ನು ಆ ದೇಶದ ಯಾವ ಯಾವ ಸೆರೆಮನೆಗಳಲ್ಲಿರಿಸಿದ್ದಾರೆ ಎಂಬ ವಿವರ ಪಡೆಯಲು ಕಮಲಾಕರ ಹೋದೊಡನೆ ಜಲಜಾಕ್ಷಿ ತುಟಿ ಚಲಿಸಿದಳು, ಸಣ್ಣ ಪತ್ರಿಕೆಯ ಸಂಪಾದಕನ ಕೊಠಡಿಯಂತೆಯೇ ಗೊಂದಲದಿಂದ ತುಂಬಿರುವ ಆಕೆ ಮತ್ತು ನಾನು.
"ಅವನು ಇಂಟರ್ವ್ಯೂ ಹೇಗೆ ಫೇಸ್ ಮಾಡ್ತಾನೋ ಆ ದೇವ್ರಿಗೇ ಗೊಟ್ಟು? ಯಾರಾದ್ರು ದೃಷ್ಟಿಸಿ ನೋಡಿದ್ರೆ ಎದುರಿಸಲಾರ್ದೋನವ್ನು ಅಲ್ಲೊಂದೇ ಅಲ್ಲ ... ಎಲ್ಲೂ ಸಕ್ಸಸ್ಸಾಗೋಲ್ಲ ನೋಡ್ತಿರಿ" ಎಂದಳು.
"ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರಗಡೆ ಬಂದ್ರೆ ಇದೆಲ್ಲ ಸಾಧ್ಯವಾಗುತ್ತೆ" ಎಂದೆ.
"ಈದೇಶದಲ್ಲಿ ಈ ಕಾಂಪ್ಲೆಕ್ಸಿರೋದೆ ಎರಡು ನಮೂನಿ ಮಾಂದಿಗೆ ಮಾತ್ರ. ಒಂದನೆಯದಾಗಿ ಬ್ರಹ್ಮಚಾರತ್ವದ ಸೋಗಿನಲ್ಲಿ ಮುಷ್ಟಿಮೈಥುನ ಮಾಡ್ಕೊಳ್ತಿರೋರ್ಗೆ ಎರಡನೆಯದಾಅಗಿ ಇಂಗ್ಲೀಷ್‌ನಲ್ಲಿ ಮಾತಾಡ್ಲಿಕ್ಕಾಗದವರಿಗೆ. ಇವೆರಡು ಅವನಿಗೆ ಅಪರಿಚಿತ" ಎಂದಳು.
"ಮತ್ತೆ ಅವನನ್ನು ಹೇಗೆ ಸರಿಪಡಿಸಬೌದಂತೀಯಾ?"
"ನನ್ಜೊತೆ ಅವನೊಂದ್ನಾಲ್ಕು ದಿನ ಇರ್ಲಿ ನೋಡು ... ಮೈಚಳಿ ಬಿಡಿಸಿ ಕಳಿಸ್ತೀನಿ" ಎಂದು ನಕ್ಕಳು.
ಎಂಎಲ್ಲೆ ಮಸಾಲೆಯವರು ಇಂಥ ಚಾಣಾಕ್ಷೆಯನ್ನು ಕಟ್ಟಿಕೊಂದು ಅದು ಹೇಗೆ


೨೧೯

ಏಗುತ್ತಿರುವರೋ ಎಂದಿತ್ಯಾದಿ ನಮ್ಮಂಥ ಮಧ್ಯಮವರ್ಗದ ಮಂದಿ ಯೋಚಿಸುವುದು ಸುಲಭ.
ಅವನು ಹೋಮೋ ಸೆಕ್ಸುಯಲ್ಲಂಥ ಏನೋ ಹೇಳುತ್ತಿರುವಾಗ ಅಮ್ಮಾವ್ರೇ ಅಂತ ಕಾರಿನ ಚ್ಚಲಕ ಕಂಚುಕೋಟಿ ಬಂದ. ಕೂಲಿಂಗ್ ಗ್ಲಾಸ್ ಧರಿಸುತ್ತ "ನೋಡಿ ... ನೀವು ಹುಶಾರಾಗಿರ್ರಿ ... ನಿಮ್ಮಿಬ್ರ ಸಂಬಂಧದ ಬಗ್ಗೆ ಮಂದಿ ಏನೇನೋ ಆದ್ಕೋತಾರೆ ... ಒಟ್ನಲ್ಲಿ ನೀವು ಅವನ್ನ ದಾರೀಗೆ ತರ್ತೀರೋ ... ದಾರಿ ತಪ್ಪಿಸ್ತೀರೋ ... ಕಾದು ನೋಡ್ತೀವಿ ..." ಎಂದು ಭಾರಿ ಜಘನದ ಆಕೆ ಹೋದಳು.
ಆಕೆಗೆ ಶಾಮನಿಗೊಂದೇ ಅಲ್ಲದೆ ಮಾತಿನ ಬುತ್ತಿಯನ್ನು ನನ್ನ ಬುಡಕ್ಕೂ ಇಟ್ಟಿದ್ದಳು. ಸದಾ ಮುದುಡಿಕೊಂಡಿರುವ ಮನುಷ್ಯನನ್ನು ಹಚ್ಚಿಕೊಳ್ಳುವುದು ಬೇರೆಯವರಿಗೊಂದೇ ಅಲ್ಲ ... ನನಗೂ ಇಷ್ಟವಿರಲಿಲ್ಲ ... ಆದರೆ ಬೇರ್ಪಡಿಸಲಾಗದಂಥ ಕಕ್ಕುಲಾತಿ ಬೆಳೆದುಬಿಟ್ಟಿರುವುದು. ಯಾರ್ಯ್ ಏನೇ ಅನ್ನಲಿ? ಏನೇ ಅರ್ಥ ಕಲ್ಪಿಸಿಕೊಳ್ಳಲಿ? ಅವನಲ್ಲಿ ಮನೆಮಾಡಿಕೊಂಡಿರುವ ಹಿಂಜರಿಕೆ ಹೋಗಲಾಡಿಸಿದ ಕೀರ್ತಿಯ ಭಾಜನಕ್ಕೆ ನಾನು ಪಾತ್ರನಾಗಲೇಬೇಕೆಂದು ನಿರ್ಧರಿಸಿದೆ.
ಕೈಯಲ್ಲಿ ಒಂದಿಷ್ಟು ಹಾಳೆ ಹಿಡಿದುಕೊಂಡು ಬಂದು "ಬರೋ ಸಂಚಿಕೆಯ ಗುಪ್ತ ಸಮಾಲೋಚನೆ ಸೆಕ್ಷನ್ನ ಸ್ವಲ್ಪ ನಿಭಾಯಿಸ್ತೀಯಾ? ಜಲಜಾಕ್ಷಿ ಇದ್ದಿದ್ರೆ ಆಕೆಗೆ ವಹಿಸಬೌದಿತ್ತು." ಎಂದು ಶುರು ಮಾಡಿದ ಕಮಲಾಕರನಿಗೆ ಗುದ್ದುವಷ್ಟು ಸಿಟ್ಟು ಬಂತು.
ಬರುವಾಗ ಒಂಥರಾ ಇದ್ದು ಹೋಗುವಾಗ ಇನ್ನೊಂಥರಾ ಆಗಿದ್ದ ನಾನು ತಲೆ ಸಿಡಿಯುತ್ತಿರುವ ನೆಪ ಹೇಳಿ ಜಾರಿಕೊಂಡೆ.
ಜಲಜಾಕ್ಷಿ ವ್ಯಕ್ತಪಡಿಸಿದ ಸ್ವಚ್ಛ ಅಭಿಪ್ರಾಯಗಳನ್ನು ಉಗುಳಲಾರದೆ; ನುಂಗಲಾರದೆ ವಿಲವಿಲ ಒದ್ದಾಡುತ್ತಿದ್ದ ’ಸಿಂಹಮಂ ಮೊಲ ಕೊಂದ ಕಥೆ’ ಓದಲಿಕ್ಕಾಗಲಿಲ್ಲ. ಜಗತ್ತಿನ ಏಕಾಗ್ರತೆಯನ್ನು ಕದಡಲಿಕ್ಕೆಂದೇ ಹುಟ್ಟುರುವಂತಿದ್ದ ನಮ್ಮಜ್ಜಿ ಒಂದೇ ಸಮನೆ ವಟವಟ ಹಚ್ಚಿಬಿಟ್ಟಿತ್ತು. ಕಳೆದ ಮೂವತ್ತು ವರ್ಷಗಳಿಂದ ತಾನು ಜೋಪಾನ ಮಾಡಿಕೊಂಡು ಬಂದಿದ್ದ ಸೂಜಿಯನ್ನು ಆಕೆಯ ತಂಗಿ ಅಂದರೆ ನಮ್ಮ ತಾಯಿಯ ತಾಯಿ ಎದುರು ಮನೆಯ ಜಮ್ಬೂರು ನಾಗವ್ವೆಗೆ ಕೊಟ್ಟದ್ದು ಮತ್ತು ಆಕೆ ಅದನ್ನು ಮುರಿದು ಎರಡು ತುಂಡು ಮಾಡಿಕೊಟ್ಟುದ್ದುದೆಲ್ಲ ಆಕೆ ಕೆರಳುವುದಕ್ಕೆ ಕಾರಣವಾಗಿತ್ತು. ಅನೇಕಾನೇಕ ಜೀವಂತ, ನಿರ್ಜೀವಂತ ಅವಶೇಷಗಳಿಂದಲೇ ತುಂಬಿರುವ ನಮ್ಮನೆಯ ಛೀಫ್ ಕ್ಯೂರೇಟರ್ ನಿಂಗವ್ವಜ್ಜಿಯನ್ನು ನಮ್ಮ ದೊಡ್ಡವ್ವ ಪುರಾತನ ಸೀರಣಿಗೆ ವಿಚಾರ ಪ್ರಸ್ತಾಪಿಸಿ ಮತ್ತಷ್ಟು ಕೆರಳಿಸಿದಳು... ಮಾತಿಗೆ ಮಾತು ಬೆಳೆದು ಒಬ್ಬೊಬ್ಬರು ಒಂದೊಂದು ಮೂಲೆ ಹಿಡಿದು ಕುಳಿತುಕೊಳ್ಳಲು ಬೆಕ್ಕು ಒಲೆಯ ಬೂದಿಯನ್ನು ಮುಂಗಾಲುಗಳಿಂದ ಕೆರೆಯತೊಡಗಿತು. ವಿವಿಧ ಹಂತಗಳಲ್ಲಿ ತಲುಪಿದ್ದ ಮೂರು ಕಥೆಗಳ ಹಸ್ತಪ್ರತಿಗಳು ಹಲಗೆ ಸಂದಿಯಿಂದ ಬೀಸಿದ ಗಾಳಿಗೆ ಕೋಣೆ ತುಂಬ ಚಲ್ಲಾಪಿಲ್ಲಿಯಾದವು. ಅವುಗಳೊಳಗಿನ ಪತ್ರಗಳೆಲ್ಲ ತಮ್ಮ್ ಅಬಗ್ಗೆ ಕಥೆಗಾರ ಇಷ್ಟೊಂದು ತಿರಸ್ಕಾರ ಭಾವನೆ ಉಳ್ಳವನಾಗಿದ್ದಾನಲ್ಲ ... ನಾವೇ ಇರದಿದ್ದರೆ ... ಬ್‌ಏಕಾದ ಹಾಗೆ ಬಾಗದೆ ಹೊಗಿದ್ದಿದ್ದರೆ ಇವನನ್ನು ಯಾರು ಮೂಸುತ್ತಿದ್ದರು ಎಂದಾಲೋಚಿಸುತ್ತ ಎದ್ದು ಬಂದು ನನ್ನ ಸುತ್ತ ಮಂಡಿಯೂರಿ ಕೂತು ಹಿಡಿ ಹಿಡಿ ಶಾಪ ಹಾಕುತ್ತಿರುವಂತೆ ಭಾಸವಾಯಿತು. ಕೂಡಲೆ ಆ ಕಥೆಯೊಳಗೆ ಈ ಕಥೆ ಸೇರಿಸಿ ಈ ಕಥೆ ಕಥೆಯೊಳಗೆ ಆ ಕಥೆ ಸೇರಿಸಿಟ್ಟು ಅದರ ಮೇಲೆ ಮ್ಯಾಕ್ಡ್ವ್‌ವ್ಲು ವ್ಹಿಸ್ಕಿಯ ಪೇಪರ್ವೇಟ್ ಇರಿಸಿದೆ.


೨೨೦

ಅದೇ ಹೊತ್ತಿಗೆ ಸರಿಯಾಗಿ ಕಂಕುಳಲ್ಲಿ ‘ಯಾಜ್ಞವಲ್ಕ್ಯ ಸ್ಮೃತಿ’ಯ ಹೆಬ್ಬೊತ್ತಿಗೆ ಇರಿಸಿಕೊಂದು ಶಾಮ ‘ಇದಾನೇನಜ್ಜಿ’ ಅಂತ ಬಂದ.ಅವನೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಗೌರವ. ಮಗ ಅಂದ್ರೆ ಶಾಮನಂತಿರಬೇಕು. ಎಂದು ನನ್ನ ವಾರಿಗೆ ಹುಡುಗರಿಗೆಲ್ಲ ಹೇಳುತ್ತಿತ್ತು. ಉಳ್ಳವರು ಶಿವಾಲಯ ಮಾಡುವರೆಂಬುದು ಆ ಪ್ರಾಚೀನ ಅವಶೇಷಕ್ಕೆ ಹೇಗೆ ಗೊತ್ತಾಗಬೇಕು? ತಾತ, ಮೊಮ್ಮಗ ಮಂತ್ರಿಸಿ ಕೊಟ್ಟಿರುವ ತಾಯಿತಗಳನ್ನು ಸೊಂಟಕ್ಕೂ; ರಟ್ಟೆಗೂ ಏಕಪ್ರಕಾರವಾಗಿ ಕಟ್ಟಿಕೊಂಡಿರುವ ಮುದುಕಿ "ಬಾ ಸ್ವಾಮಿ ಬಾ ..." ಅಂತ ಕರೆದು ಕರಿ ಕಂಬಳಿ ಹಾಸಿ ಕುಂಡ್ರಿಸಿ ನನ್ನನ್ನು ಕೂಗಿ ಕರೆಯಿತು. ತಗಲಿಕೊಂತುಂತ ಹೊರಬಂದು ನನ್ನ ಪ್ರಾಣ ಮಿತ್ರನನ್ನು ನಖಶಿಖಾಂತ ನೋಡಿದೆ. ಪ್ರಾಣಾಯಾಮವನ್ನು ಗಾಯತ್ರೀ ಮಂತ್ರೊಚ್ಚರಣೆ ಮೂಲಕ ಕಲಿಯಲು ಪ್ರಯತ್ನಿಸೀ ಪ್ರಯತ್ನಿಸಿ ಸೊರಗಿ ಅಂಗ ವಿಕೃತಿ ಮಾಡಿಕೊಂಡು ಬಂದಿದ್ದ. ಅಂಗಿ ಚಲ್ಲಾಣ ಸಿಕ್ಕಿಸಿಕೊಂಡು ಒಂದೊಂದು ಗಳಿಗೇಗೆ ಒಂದೊಂದು ನಮೂನಿ ವರ್ತಿಸುತ್ತಿದ್ದ. ಅವನೊಡನೆ ಅಂಗಳ ದಾಉವ ಮೊದಲು ಲಕೋಟೆಇದ್ದ ಜೇಬು ಮುಟ್ತಿಕೊಂಡೆ. "ಗಂಡಹೆಂಡ್ರಂಗೆ ಹೊಂಟ್ರಪ್ಪ ಹೊರಾಗೆ" ಅಂತ ಆಡಿಕೊಳ್ಳುತ್ತಿರುವವರಂತೆ ನಮ್ಮ ಮನೆಗಳನ್ನು ದಾಟೀ ದಾತೀ ಊರಮ್ಮನ ಬಯಲೀಚೆ ಬೀದಿಗೆ ಬಂದೆವು ... ಹಂಗ ಹೋಗೋದು ಬ್ಯಾಡ ... ಈ ಕಡೆಯಿಂದ ಹೋಗೋಣ ಎಮ್ದ ಶಾಮು ... ಅನಸೂಯಾಳ ಮನೆ ಆ ಕಡೆ ಇದ್ದುದರಿಂದ ಹಾಗೆ ಹೇಳಿದನೆಂದುಕೊಂಡೆ. ಅದೂ ಅಲ್ಲದೆ ಆಕೆ ಗಂಡನೊಡನೆ ಬಂದು ಎರಡು ದಿನಗಳೇ ಕಳೆದಿರುವವಂತೆ. ತನ್ನನ್ನೆಲ್ಲಿ ಆಕೆಯಾಗಲೀ ಆಕೆಯ ಗಂಡನಾಗಲೀ ಮಾತಾಡಿಸಿ ಬಿಡುವರೋ ಎಂಬ ಹಿಂಜರಿಕೆಯಿಂದಾಗಿಯೇ ಅವನು ತಾತನ ಮಾತಿಗೆ ಮಣೆ ಹಾಕಿ ಪ್ರಾಣಾಯಾಮದ ತರಗತಿಗೆ ತಗುಲಿಕೊಂಡಿದ್ದಂತೆ... ತುಂಬು ತೊಡೆಯ ಗಾಯತ್ರಿ ಎಂಬ ಶ್ರೀಮಂತ ತರುಣಿಯ ವಕ್ಷಸ್ಥಳದ ಏರಿಳಿತಕ್ಕೆ ಬೆವರಿಳಿದು ಶಾಮ ಒಂದು ದಿನ ಮೊದಲೇ ಬಂದುಬಿಟ್ಟಿರುವನಂತೆ. ಅನಸೂಯಳೂ ... ಆಕ್ಜೆಯ ಗಂದನೂ ಮಾತಾಡಿಸಿಕೊಂದು ಹೋಗುವುದಕ್ಕೆ ಬೃಂದಾವನದ ಬಳಿ ಕಾಣಿಸಿಕೊಳ್ಳುತ್ತಲೆ ಶಾಮ ಹಿತ್ತಿಲ ಬಾಗಿಲ ಮೂಲಕ ತಪ್ಪಿಸಿಕೊಂಡು ಬಂದುಬಿಟ್ಟಿರುವನಂತೆ... ತಪ್ಪಿಸಿಕೊಳ್ಳುವುದನ್ನೇ ಬದುಕಿನ ಪರಮ ಮೌಲ್ಯವೆಂದು ಭಾವಿಸಿರುವ ಶಾಮ ಬಜಾರ ಸಮೀಪಿಸಿದಂತೆ ಕ್ರಾಪಿನೊಳಗೆ ಜುಟ್ಟನ್ನೂ; ಅಂಗಿಯೊಳಗೆ ಜನಿವಾರವನ್ನೂ ಮರೆಮಾಚಿಕೊಂಡ. ಚಿಂಪಾಂಜಿಯನು ಚುಂಬಿಸುತ್ತಿರುವ ಬೋಡೆರೆಕ್‌ಳ ನಗನ ದೃಶ್ಯದ ಪೋಸ್ತರ್ ಕಡೆಗೆ ಕಳ್ಳನೋಟ ಬೀರಿ ಎಡವಿದ. ಮತ್ತೆ ಸಾವರಿಸಿಕೊಂಡು ನಡೆಯತೊಡಗಿದ.
ಗ್ರಾಮದ ಹತ್ತಾರು ನಾಯಿಗಳು ಹಿಂಗಾಲೆತ್ತಿ ಉಚ್ಚೆ ಹೊಯ್ದು ನೆಲ ಗೆಬರಿ ಹೋಗುವ ಜಾಗವನ್ನು ಒಂದುವರೆ ಕಿಲೋಮೀತರ್ ನಡೆದು ತಲುಪುವ ಹೊತ್ತು ನೆಟ್ಟಗಿರಲಿಲ್ಲ. ಅವರು ತಮ್ಮನ್ನು ಗಮನಿಸುತ್ತಿರಬಹುದೇ/ ಇವರು ನಮ್ಮನ್ನು ಗಮನಿಸುತ್ತಿರಬಹುದೇ? ಎಂದು ಯೋಚಿಸುವುದರ ಜೊತೆಗೆ ತಾನು ಎಲ್ಲರನ್ನು ಗಮನಿಸುತ್ತ ನನ್ನೊಂದಿಗೆ ನವ ವಧುವಿನಂತೆ ಲಜ್ಜಾಭರಣಾಲಂಕಾರ ಮಾಡಿಕೊಂಡು ನಡೆಯುತ್ತಿದ್ದ ಶಾಮ ಮಾತಾಡುವ ಶಾಸ್ತ್ರಕ್ಕೆ ಅದು ಇದು ಪ್ರಸ್ತಾಪಿಸಲು ಪ್ರಯತ್ನಿಸಿದ. ಗ್ರಾಮದ ಕಳ್ಳ ಪ್ರೇಮ ವ್ಯವಹಾರಗಳ ಬಗೆಗೋ ಅಥವಾ ಬಂಡಾಯದ ಬಗ್ಗೆ ಹೀಗೆ ಏನಾದರೊಂದು ಅವನು ಮಾತಾಡಲಿರುವುದನ್ನು ಅದಕ್ಕೂ ಮೊದಲೇ ಅವನ ಮುಖ ಹೇಳಿಬಿಡುತ್ತಿತ್ತು. ಆದ್ದರಿಂದ ಅವನ ಮಾತುಗಳಲ್ಲಿ ನನಗೆ ಆಸಕ್ತಿ ಇರದಿದ್ದರೂ ಸುಮ್ಮನೆ ಹೂಂಗುಟ್ತುತ್ತಿದ್ದೆ. ಮದುವೆ ಆಗಿರೋರೂ ಕಳ್ಳ ವ್ಯಭಿಚಾರ ಮಾಡ್ತಿದ್ರೆ ದೇಶ ಉಳಿದೀತಾ


೨೨೧

ಅಂತಂದ. "ಅದು ಅವರವರ ವೈಯಕ್ತಿಕ ವಿಷಯ ... ಅದ್ರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳೋದು ಬಿಡಯ್ಯ" ಅಂತಂದುದಕ್ಕೆ ಅವನು ಮುಖವನ್ನು ಇಷ್ಟಗಲ ಮಾಡಿಕೊಂಡ. "ಹಾಗಿದ್ರೆ ನೀನು ಯಾರ್ನಾದ್ರೂ ಪ್ರೇಮಿಸಿದ್ದೀಯಾ" ಎಂದು ಪ್ರಶ್ನೆ ಹಾಕಿದ. "ಹೂಂ ಅಂತ ಇಟ್ಕೋ ಅದ್ರಲ್ಲಿ ತಪ್ಪೇನೀಗ" ಎಂದೆ ಬೇಸರದಿಂದ, ನಿಟ್ಟುಸಿರು ಬಿಟ್ಟ. ಅವನಿಗೆ ಬೇಸರವಾಯಿತೆಂದುಕೊಂಡು, "ಪ್ರೇಮ, ಕಾಮ ಇವೆಲ್ಲ ಮನುಷ್ಯರ ಸಹಜ ವ್ಯಾಪಾರಗಳು ಕಣಯ್ಯಾ ... ಅದಿರ್ಲಿ ... ನಿನ್ಗೆ ಗೊತ್ತು ಮಾಡಿರೋ ಹುಡುಗಿ ಮನೆಗೆ ಏನಾದ್ರೂ ಹೋಗಿದ್ಯಾ?" ಎಂದು ಕೇಳಿದೆ. ಇದ್ಯಾಕೆ ಇವನಿಗೆ ಬೇಕಿತ್ತು ಎಂಬಂತೆಯೋ; ಇಂಥ ಪ್ರಶ್ನೆಯನ್ನು ಕೇಳಲು ಯಾಕಿಷ್ಟು ತಡ ಮಾಡ್ದಿ ಎಂಬಂತೆಯೋ ಮಖ ಮಾಡಿಕೊಂಡು ನನ್ನ ಕಡೆ ನೋಡಿ ಕ್ರಮೇಣ ಪ್ರಕಾಶ ಹೆಚ್ಚಿಸಿಕೊಳ್ಳುವ ದೀಪದಂತೆ ಗೆಲುವಾದ. "ಹೋಗಿದ್ದೆ ಆದ್ರೆ ಮನೆ ಒಳಗಡೆ ಮತ್ರ ಹೋಗಲಿಕ್ಕಾಗದೆ ವಾಪಸಾಗಿಬಿಟ್ಟೆ." ಎಂದು ಮತ್ತೊಂದು ನಿಟ್ಟುಸಿರು ಬಿಟ್ಟ. "ಹಾಗಿದ್ರೆ ನೀನು ಹುಡುಗಿನಾದ್ರು ಬೆಟ್ಟಿ ಆದ್ಯಾ" ಎಂದು ಅಡ್ಡ ಪ್ರಶ್ನೆ ಹಾಕಿದೆ. "ಇಲ್ಲಪ್ಪಾ ... ನನ್ ಪುಣ್ಯಕ್ಕೆ ಆಕೆ ಅಂಗಳದಲ್ಲಿ ರಂಗೋಲಿ ಹಾಕ್ತಿದ್ಳು ... ಮಾತಾಡಿಸಿದ್ರೆ ಏನಾದ್ರಂದ್ಕ್ಕೊಂಡಾಳಂತ ಬಂದುಬಿಟ್ಟೆ" ಎಂದ. ನನಗೆ ಅಯ್ಯೋ ಎನಿಸಿತು. "ಹೋಗ್ಲಿ ಒಂದು ಪತ್ರವನ್ನಾದರು ಹಾಕ್ಬೇಕಿತ್ತು" ಎಂದು ಕೇಳಿದೆ. ಜೇಬಿನಿಂದ ಒಂದು ಲಕೋಟೆ ತೆಗೆಯುತ್ತ " ಇನ್ನೂ ಪೂರ್ಣಗೊಳಿಸ್ಲಿಕ್ಕಾಗದೆ ಇಟ್ಕೊಂಡು ತಿಂಗಳ ಮೇಲಾತು" ಎಂದು ಕೊಟ್ಟ. ಓದಲು ಹಿಂಜರಿದ ನಾನುಅವನ ಒತ್ತಾಯಕ್ಕೆ ಮಣಿದು ನೋಡ್ತೀನಿ ... ಕೇವಲ ‘ಪ್ರೀತಿಯವರೂ’ ಅಂತ ಮಾತ್ರ ಇರುವುದು ಕಂಡು ಆಶ್ಚರ್ಯವಾಯಿತು. ಎರಡು ಶಬ್ದಗಳನ್ನೂ ಸ್ಪಷ್ಟವಾಗಿ ಬರೆಯಲಾಗಿಲ್ಲ. ಕಾಟು ಹೊಡ್ದೂ ಹೊಡ್ದೂ ಅಂತು ಅಷ್ಟು ಬರೆದಿದ್ದ "ಉಳಿದಿದ್ಯಾಕ ಬರೆದಿಲ್ಲ?" ಅಂತ ಕೇಳಿದ್ದಕ್ಕೆ ಉಗುಳು ನುಂಗಿದ. ಕವರ್ ಕೊಟ್ಟೆ. ಹೃದಯವೆಂಬಂತೆ ಜೋಬಲ್ಲಿ ಭದ್ರಪಡಿಸಿದ.
ಹೀಗೆ ಮಾತಾಡ್ತಾ ಮಾತಾಡ್ತಾ ಅಂತೂ ಇಂತೂ ನಮ್ಮ ನಿರ್ದಿಷ್ಟ ಜಾಗ ತಲುಪಿದೆವು. ಅಲ್ಲಿ ಆಗಲೆ ಕೆಲವು ಕಾಲೇಜು ವಿದ್ಯಾರ್ಥಿಗಳು ಕೂತುಕೊಂಡಿದ್ದರು. ಅವರು ಬೇಗ ಇಲ್ಲಿಂದ ಕದಲಬಾರದೆ! ಎಂಬಂತೆ ಅವರತ್ತ ನೋಉತ್ತಿದ್ದ. ಅವರು ನಗುತ್ತಿದ್ದುದು, ಮಾತಾಡುತಿದ್ದುದು, ನೋಡುತ್ತಿದ್ದುದು ತನ್ನ ಕುರಿತೇ ಎಂದು ಭಾವಿಸಿದಂತಿತ್ತು. ಹೊತ್ತು ಪೂರ್ತಿ ಮುಳುಗಿ ಬೆಳಕು ಬಟಾಬಯಲಾಗುತ್ತಲೆ ಅವರು ಶಿಳ್ಳೆ ಹಾಕುತ್ತ ಹೋದರು. ಅವರು ಸೆಕ್ಸ್ ಬಗ್ಗೆ ಚರ್ಚಿಸಿರಬಹೆದೆಂದುಕೊಂದ. ಶೈಕ್ಷಣಿಕ ವ್ಯವಸ್ತೆ ಕೆಟ್ಟು ಹೋಯ್ತುಂತ ನಿಟ್ಟುರು ಶ್ರೀನಿವಾಸರಾಯರ ಥರ ಗೊಣಗಿದ. ನಾನು ಪ್ರತಿಕ್ರಿಯಸದಿದ್ದಾಗ ರಾಮಣ್ಣ ಹೇಳ್ದಾ ಅಂದ ... ಕೈಚಾಚಿದ. ಅವರಿವರ ಗುಪ್ತ ವ್ಯವಹಾರಗಳನ್ನು ಚರ್ಚಿಸಲಿಕ್ಕೆ ತಕ್ಕ ವ್ಯಕ್ತಿ ಶಾಮಶಾಸ್ತ್ರಿ ಎಂದುಕೊಂಡಿರಬಹುದಾದ ರಾಮಣ್ಣ ಹೇಳಿದ್ದರಲ್ಲಿ ಆಶ್ಚರ್ಯವಿಲ್ಲವೆಂದುಕೊಂಡೆ. ಯಾವುದೇ ಲಕೋಟೆಯನ್ನು ಭೇದಿಸದೆ ಓದುವ ನಿಷ್ಣಾತ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮಣ್ಣನೂ; ಒಂದು ಎಳೆ ದೊರಕಿದ ಕೂಡಲೆ ಅದಕ್ಕೆ ಅದ್ಭುತ ರೀತಿಯಲ್ಲಿ ದ್ಡೆಕೊರೇಟ್ ಮಾಡಿಬಿಡುವ ಶಾಮಾಶಾಸ್ತ್ರಿಯೂ ...
ಓದುತ್ತಿದ್ದಂತೆಯೇ ಶಾಮ ಕಂಪನಕ್ಕೀಡಾದ ... ಬರೋ ಹನ್ನೊಂದಕ್ಕೆ ಇಂತ್ರು ಇರುವುದರಿಂದ ಹಾಗೆ ಅವನಲ್ಲಿ ನಡಕ ಹುಟ್ಟಿದ್ದು. ಅವತ್ತು ತ್ರಯೋದಶಿ ಬೇರೆ. ಆದಿನ ತಾನು ಅಂಗಳ ತುಳಿಯುವಂತಿಲ್ಲ. ತಾತ ಏನಂತಾರೋ ಏನೋ? ... ಪಂಚಾಂಗವೇ ಪ್ರಪಂಚವೆಂದು ಭಾವಿಸಿರುವ ಆ ಸನಾತನಿಯನ್ನು ಹೇಗೆ ಒಪ್ಪಿಸುವುದು? ಒಂದು ಪಕ್ಷದಲ್ಲಿ ಅವರು


೨೨೨

ಒಪ್ಪಿದರೆಂದಿಟ್ಟುಕೊಂಡರೆ ಬಳ್ಳಾರಿಯಂಥ ದೂರದ ದೇಶಕ್ಕೆ ಹೋಗಿಬರುವುದಾದರೂ ಹೇಗೆ> ಒಂದು ಪಕ್ಷದಲ್ಲಿ ಹೋದೆ ಅಂತ ಇಟ್ಟುಕೊಂಡರೆ ನಡೆಯುವ ಸಂದರ್ಶನ್ವನ್ನು ಹೇಗೆ ಎದುರಿಸುವುದು?

"ನಮ್ಮ ಮನೆಯವರ್ನ ನೀನೆ ಒಪ್ಪಿಸಬೇಕು" ಎಂದು ಶರತ್ತು ವಿಧಿಸಿದ. ಚೂರುಪಾರು ಸಂಸ್ಕೃತ ಸ್ಲೋಕಗಳನ್ನು ಉದುರುಸುತ್ತಿದ್ದ ನನ್ನ ಮಾತಿಗೆ ಶಾಸ್ತ್ರಿಗಳು ಬೆಲೆ ಕೊಡುವರೆಂಬ ಭರವಸೆ ನನಗಿದ್ದುದರಿಂದ ನೀನೇನು ಯೋಚ್ನೆ ಮಾಡಬೇಡವೆಮ್ದು ಹೇಳಿ ಧೈರ್ಯ ತುಂಬಿದೆ.
ಶವಸಂಸ್ಕಾರ ಮುಗಿದೊಡನೆ ಊರ ಕಡೆ ಹೆಜ್ಜೆ ಹಾಕುತ್ತಾರಲ್ಲ ಹಾಗೆ ನಾವಿಬ್ಬರು ದಾರಿ ಎಂಬ ಸರಳರೇಖೆ ಗುಂಟ ಹೆಜ್ಜ ಹಾಕಿ ಊರಮ್ಮನ ಬಯಲ ಕವಲ ಕವಲ ಹಾದಿ ತಲುಪಿದೆವು. ನಿಯಾನ್ ದೀಪದ ಬೆಳಕಿನಲ್ಲಿ ಸುಂಕ ವಸೂಲಿ ಮಾಡುವವರಂತೆ ಸಣ್ಣೀರವ್ವನ ಮೊಂಡು ಬಾಲದ ನಾಯಿ ನಮ್ಮನ್ನು ಅಡ್ಡ ತರುಬಿ ಗುರ್ ಗುಟ್ಟತೊಡಗಿತು. ಹೆದರಿ ನನ್ನ ಬೆನ್ನ ಹಿಂದೆ ಅವಿತುಗೊಳ್ಳುವ ಪ್ರಯತ್ನದಲ್ಲಿದ್ದ ಅವನನ್ನೀಚೆಗೆ ಎಳೆದು ಕಲ್ಲು ತಗೊಂಡು ಹಾಕು ಎಂದು ಇಷ್ಟಲಿಂಗೋಪಾದಿಯಲ್ಲಿ ಬಿದ್ದದ್ದ ಕಲ್ಲನ್ನು ತಗೊಂಡು ಅವನ ಕೈಗೆ ಕೊಟ್ಟೆ. ಹೀಗೆ ಹೊಡೆಯುವುದು ಅಹಿಂಸೆ ಎಂದೋ? ನಾಯಿಯ ರೋಷ ಹನ್ನೆರಡು ವರ್ಷ ಎಂದೋ! ಯೋಚಿಸುತ್ತ ನಿಂತಿದ್ದ ಅವನತ್ತ ದುರುಗುಟ್ಟಿ ಗುರ್‍ಗುಡತೊಡಗಿತು. ಪಾಪ - ಪುಣ್ಯ ಧರ್ಮ - ಕರ್ಮಗ್ಳ ಸೂಕ್ಷ್ಮ ಅರಿತಿರುವ ನಾನಿರುವಾಗ ಅವನ್ಯಾಕೆ ಯಃಕಶ್ಚಿತ್ ಶ್ವಾನೋಪಸುಂದನಿಗೆ ಹೆದರುವುದು! ಮನಸ್ಸಿನಲ್ಲಿ ಇಷ್ಟ ದೈವ ಪ್ರಾರ್ಥಿಸಿ ಅಭಿಮಂತ್ರಿಸಿ ಎಸೆದುಬಿಟ್ಟ. ಶರವೇಗದಲ್ಲಿ ಎರಗಿದ ಕಲ್ಲಿನೇಟು ಡುಬ್ಬಕ್ಕೆ ತಗಲಲು ಅದು ಕುಯ್ಯೊ ಮರ್ರೊ ಎಂದು ರಾಗಾಲಾಪನೆ ಮಾಡುತ್ತ ಪುರಸಭಾ ಗಟಾರಕ್ಕೆ ಮೂತ್ರ ವಿಸರ್ಜನೆ ಮಾಅಲು ಕುಳಿತಿದ್ದ ಬಾಯಿ ಬಡುಕಿ ಸಣ್ಣೀರವ್ವನ ಬಳಿಗೆ ‘ಪಾಹಿಮಾಂ’ ಅಂತ ದೂರು ಕೊಂಡೊಯ್ದಿತು. ತನ್ನ ನಾಯಿ ತನ್ನ ಸಣ್ಣಕರುಳೊಳಗೆ ಸಮ್ಕಟಕ್ಕೆ ಈಡಾಗಿರುವುದೆಂದು ಭಾವಿಸಿದ ಆಕೆ "ಯಾವಾನಲೋ ನನ್ನಾಟಗಳ್ಳ ... ನನ್ನಾಯಿ ಹೊಡ್ದೋನು?" ಎಂದು ಗರ್ಜಿಸುತ್ತ ಬದ್ಧ ಭ್ರುಕುಟಿಯಾಗಿ ನಮ್ಮೆದರು ನೆಲಮುಗಿಲಿಗೇಕಾಗಿ ನಿಂತಳು. ಬೊಂಬಾಯಿಗಿಂತಲೂ ಅಗಲವುಳ್ಳ ಬಾಯಿಗೆ ಒಡತಿಯಾದ ನಿಂಗಮ್ಮಜ್ಜಿಯ ಮೊಮ್ಮಗ ಇವನೆಂತಲೂ; ನವಗ್ರಹಗಳನ್ನು ಅಂಗೈಯಲ್ಲಿತ್ತುಕೊಂಡಿರುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಅವನೆಂತಲು ಭಾವಿಸಿ ತಣ್ಣಗಾಗಿ ... "ನಾಯಿ ನಾರಾಯಣಿದ್ದಂಗ್ರಪ್ಪಾ ... ಹೊಡೀಬಾರ್ದು" ಎಂದು ಹಿತವಚನ ನುಡಿದು ನಮ್ಮನ್ನು ಬೀಳ್ಕೊಟ್ಟಳು.
ನಾಯಿ ಹೊಡೆಯುವುದರ ಮೂಲಕ ವಂಚೂರು ಆತ್ಮವಿಸ್ಜ್ವಾಸದಿಂದ ಗೆಲುವಾದ ಶಾಮ ಖಚಿತವಾದ ಹೆಜ್ಜೆ ಇಡುತ್ತ ತನ್ನ ಮನೆ ಕಡೆಗ್ರ್ ತಾನೂ; ಶಿಲ್ಪಗಳಿಗೆ ಕುಷ್ಟರೋಗ ಎಂಬ ಸಚಿತ್ರ ಲೇಖನವನ್ನು ಪೂರ್ಣಗೊಳಿಸಬೇಕೆಂದಿದ್ದ ನಾನೂ ನಮ್ಮ ದಾರಿ ಹಿಡಿದೆವು.
ಕೋರಿಶೆತ್ರು ಸಣ್ಣೀರಜ್ಜ ದೆವ್ವವಾಗಿ ತಾನು ಹೂತಿಟ್ಟಿರೋ ಗುಪ್ತಧನವನ್ನು ಕಾಯುತ್ತಿದ್ದಾನೆಂಬ ವದಂತಿಗಳಿಂದಲ್‌ಏ ತುಂಬಿರುವ ಪಾಳುಮನೆ ಸಂದಿಯಲ್ಲಿ ತುರುಗುವಾಗ್ಗೆ ನಿಂಗಮ್ಮಜ್ಜಿ ಕಚ್ಚೆ ಬಿಕ್ಕೋತ ಎದುರಾಗಿ "ನನ್ನಾಟಗಿತ್ತಿ ಕುಂಟ್ನಳ್ಳಿ ಸಣ್ಣಿ ನಿನ್ತಡವಿದಂಳಂತಲ್ಲೆಲೋ ... ನಿಂಗೇನಂದ್ಲಾ ನನ ಗಂಡನ ಸೂಳೆ" ಎಂದು ನನ್ನನ್ನು ಕಕ್ಕಾವಿಕ್ಕಿ ಗೊಳಿಸಿತು. ಅದರವು ನಾಯಿ ಕಿವಿ ಅಂದುಕೊಂಡೆ. "ಆಕೆ ನಂಗೇನು ಅಂದಿಲ್ಲ ಬಿಟ್ಟಿಲ್ಲ ... ಸುಮ್ಮನ್ಯಾಕೆ ಕಾಲ್ಕೆದರಿ ಜಗಳಾಓಕೆ ಹೊಂಟಿ. ನಡೆಯಬೇ ನಡೆ" ಎಂದು ರಟ್ಟೆ ಹಿಡಿಯಲು ಹೋದರದು ಕೊಸರಿ, "ಎಮ್ಥ ಸೂಗದಿಯಲ್ಲೋ ...ರಂಡೆ


೨೨೩

ಮುಂಡೇರ ಕೂಡಾ ಅನಬಾರ್ದು ಅನ್ನಿಸಿಕೊಂಡು ಬಂದ್ ಬಿಟ್ಯಾ ... ಕೇರು ಬಡಿಯೋದು ಬಿಟ್ಟು ... ನನ ಬಿಡು ... ಈ ಓಣ್ಯಾಗ ಆಕೆ ಇರಬೇಕೊಂದು ಇಲ್ಲ್ ನಾವಿರಬೇಕೊಂದು ... ಈ ಎಲ್ಲಾರಿಗೊಂದು ಪೈಸಲ್ಲು ಆಗ್ಲ್ರ್ಬೇಕು ಇವತ್ತು" ಎಂದು ಹಠವಂ ಮಾಡುತ್ತಿರಲು ಆಕೆಯ ಗೂನು ಬೆನ್ನು ತಂಗಿ "ಹ್ಹಾ ... ಹ್ಹಾ ... ಜಗಳಾಡೋಕೆ ಹೊಂತಾಳ ... ಪರಾಕ್ರಮಿ... ಕೈಯ ಹಿಡ್ದ ಗಂಡನ್ನ ನುಂಗಿ ನೀರ್ಕುಡ್ದ್ದಾಕಿ. ಇನ್ನಾ ತಾಟಗಿತ್ತಿ ಸಣ್ಣೀನ ಬಿಟ್ಟೀಯ ನೀನು ... ನಿನ ಬೊಂಬಾಯಿ ಬಂದ್ ಮಾಡ್ಕೊಂಡು ಮನೀಗೆ ಹೊಂಡವ್ವ ಹೊಂಡು ... ಉದುಕಾ ಮುದ್ದಿ ತಣ್ಣಗಾತತೆ" ಎಂದು ಸಮ್ಮೋಹನಾಸ್ತ್ರ ಬೀರಿತು. ಉದುಕಾ ಮುದ್ದೆ ಎಂದರೆ ಮೂಗು ಕುಯ್ಯಿಸಿಕೊಳ್ಳುವ ನಿಂಗಮ್ಮಜ್ಜಿ ಬಾಯಿ ತುಂಬಿದ ಜೊಲ್ಲನ್ನು ಪಿಚಕ್ಕಂತಾಚೆ ಉಗುಳಿ ಎದೆ ಸೆಟಿಸಿ ಮುಖ ಮುಗಿಲಿಗೆತ್ತಿ "ಲ್ಯೇ ಸಣ್ಣಿ ... ಇವತ್ತು ನೀ ಬದ್ಕೊಡಬೇ ... ಇನ್ನೊಂದ್ಸಾರಿ ನನ್ನ ಮೊಮ್ಮಗನ ತಂಟೆಗೆ ಬಂದಿ ಅಂದ್ರ ನಿನ ಸಾಮಾನಿಗೆ ಕೇಉ ಬಡ್ಡೇನು" ಎಂದು ಹೇಷಾರವ ಮಾಡಲು ನಮ್ಮ ಷೇಕ್ಯಾಂಡ್ನಾಯಿ ಕಲ್ಡಿ ಬೊವ್ವೋ ಅಂತ ಬೊಗುಳಿ ಮೆಚ್ಚಿಗೆ ಸೂಚಿಸಿತು. ಬೀಸತೊಡಗಿದ ಗಾಳಿಗೆ ಕೂಲಾಗುತ್ತ ಇಡೀ ಸತಮಾನದ ತಾಳೆಗರಿ ಗ್ರಂಥಗಳಿಂದ ಆ ಇಬ್ಬರು ಜ್ಞಾನ ವೃದ್ಧೆಯರೊಂದಿಗೆ ನಾನು ಕಾಲು ಹಾಕಿದೆ.

ಕುಂಟ್ನಳ್ಳಿ ಸಣ್ಣಿಗೂ, ಕುಂಬಾರ ನಿಂಗಮ್ಮಜ್ಜಿಗೂ ಫೈಟಿಂಗು ನಡೆಯುತ್ತದೆ ಎಂಬ ಭರವಸೆಯಿಂದ ಅಂಗಳದ ತುಂಬ ನಿಂತಿದ್ದ ಕುಂಟು ಬಸವಿ, ಅಂಬೂರಿ ಸಿದ್ದಿ; ಸುಡುಗಾಡು ರುದ್ರಿಯೇ ಮೊದಲಾದ ಓಣಿಯ ಶಾಕಿಣಿ, ಡಾಕಿಣಿಯರು ಒಲ್ಲದ ಮನಸ್ಸಿನಿಂದ ನಮ್ಮ ನಿಂಗಮ್ಮಜ್ಜಿಯನ್ನು ಸ್ವಾಗತಿಸುತ್ತ, :ಓಣ್ಯಾಗ ಆ ಸಣ್ಣೀದುರುವಣ್ಗಿ ಹೆಚ್ಚಾಗೇತಿ ... ಆಕೀದು ಉದುರು ಬಡ್ಡು ಬರ್ಬೇಕಿತ್ತಬೇ ... ಆವಾಗ ಸೈ ಅಂತಿದ್ವಿ. ಗಂಡ ಉಳ್ಳ ಮಗ್ಳೂನ ತುರುಕ್ರೋನ್ಗೆಮಲಗಾಕಿರೋದಲ್ದೆ ಈಗ ನಮ್ಮಿಬ್ಬರಬದ್ರೀಗೆ ಕಲೆ ಬಿದ್ದಾಳೇನು! ... ಬಸವನ ಬಾವಿಗೆ ನೀರಿಗೋದಾಗ ಏನೋ ಗುಸುಗುಸು ಮಾತಾಡ್ತಿದ್ನೇ ಮುಂದುಮಾಡ್ಕೊಂಡು ... ಏನೋ ಹರೇದ ಹುಡುಗಿ ಮಾತಾಡಿಸ್ತೂಂತ ನಮ್ಮೋನು ಮಾಡಿರಬೌದು ಬಿಡು"... ಎಂದು ನಿಂಗಮ್ಮಜ್ಜಿ ಸಿಟ್ಟಿಗೆ ಹೊಸ ಆಯಾಮ ನೀಡಿದರು... "ಏನಲೋ ಔದಾ" ಅಂತ ಮೂರನೇ ಕಣ್ಣನ್ನು ನನ್ನತ್ತ ತಿರುಗಿಸಿತು. ಮಹಿಳಾ ಮಣಿಗಳ ಪತ್ತೆ ತರದೂದು ಅರ್ಥವಾಗದೆ ನಾನು ಬಾಯಿ ಬಾಯಿ ಬಿಟ್ಟೆ. ಸಣ್ಣಿರವ್ವನ ಮಗಳು ಸರಸಿಯನ್ನು ನಾನು ಮೂರನೆ ಇಯತ್ತೆ ಓದುವಾಗ ಗುಟ್ಟಗಿ ಲವ್ ಮಾಡುತ್ತಿದ್ದುದೇನೊ ಖರೆ, ಆಕೆಯೂ ಅಷ್ಟೆ. ಮಾದರ ಶಿವಣ್ಣ ಕಪಲಿ ಭಾವಿಯಲ್ಲಿ ಲಂಗ ಮೇಲಕ್ಕೆತ್ತಿ ‘ಮಾಡಲೇ ಮಾಡು’ ಎಂದು ಪುಸಲಾಯಿಸಿದಾಗ ನಾನು ಇಷ್ತಗಲ ಕಂಣು ಬಿಟ್ಟುಕೊಂಡು ಆ ಜಾಗ ನೋಡಿ ಅಲ್ಲಿ ಏನೂ ಕಾಣದಿದಾಗ ಜಲಜಲ ಬೆವತು ವಲ್ಲೆವ್ವೋ ವಲ್ಲೆ ಎಂದು ಕೂಗುತ್ತ ವಾಪಸಾಗಿದ್ದೆ. ಆ ಒಂದು ಘಟನೆ ಬಿಟ್ಟರೆ ಸರಸಿಯೊಂದಿಗೆ ನನ್ನ ಯಾವುದೇ ಅನೈತಿಕ ಸಂಭಂದ ಮಾನಸಿಕವಾಗಿ; ದೈಹಿಕವಾಗಿ ಇಲ್ಲ. ಲೈಗಿಕವಾಗಿ ದುರ್ಬಲ ಇರುವ ಕಂಪ್ಲಿ ಲಿಂಗಮೂರುತಿಯನ್ನು ಮದುವೆ ಮಾಡಿಕೊಂಡಿರುವ ಆಕೆ ದೇಹದ ತಣುವಿಕೆಗಾಗಿ ಯಾರೊಂದಿಗಾದರೂ ಮಲಗಿಕೊಳ್ಳಲಿ! ಅದು ಇವರಿಗೇಕೆ ಬೇಕು? ಒಂತಿಯಾಗಿ ಸಿಕ್ಕ ಸಂದರ್ಭದಲ್ಲಿ ನಾವಿಬ್ಬರು ಮಾತಾಡುತ್ತಿದ್ದ ಮಾತ್ರಕ್ಕೆ ಸಂಬಂಧ ಕಲ್ಪ್[ಇಸುವುದೇ? ... ಈ ಪ್ರಕಾರವಾಗಿ ಕಕ್ಕಾಬಿಕ್ಕಿಯಾಗಿರುವ ನನ್ನನ್ನು ಕಾಪಾಡಲೆಂದು ಅಡುಗೆಮನೆಯಲ್ಲಿ ಮುದ್ದೆ ತಟ್ಟುತ್ತಿದ್ದ್ದ ದೊಡ್ಡವ್ವ ರವುಷದಿಮ್ದ ಹೊರಬಂದು ‘ನನ ಮಗ ಗಂಡ್ಸು ಯಾರತ್ರಾರ ಮಕ್ಕಂಬ್ಲಿ ... ನಿಮಗ್ಯಾಕ ಬೇಕ್ರಬೇ ನೀವೇನು ಸುದ್ದಾ" ಎಂದು ಆರ್ಭಟಿಸಲು ಅವರೆಲ್ಲ ತಂತಮ್ಮ ಹಾದಿ ಹಿಡಿದರು...


೨೨೪

ರುಚಿಯಾಗೇ ಇದ್ದರೂ ನಾನು ಒಂದು ಮುದ್ದೆ ನುಂಗಿ ಕೈತೊಳೆದುಕೊಂಡು ನನ್ನ ರೂಮು ಸೇರಿಕೊಂಡೆ. ಹಾಳೆಗಳ ,\ಮೇಲೆ ಮುಂಗಾಲು ನೆಕ್ಕಿಕೊಳ್ಳುತ್ತ ಮಲಗಿದ್ದ ಬೆಕ್ಕು ಹಲೋ (ಮ್ಯಾಂವ್) ಅಂತು. ಎದುರುಗಡೆ ನೇತುಹಾಕಿದ್ದ ಹೆಮಮಾಲಿನಿ ಫೋಟೊ ಸಣ್ಣಿರವ್ವನ ಫೋಟೋ ಆದಂಗಾಯಿತು. ಅದರ ಪಕ್ಕದಲ್ಲಿ ... ಇನ್ನೊಂದು ಪಕ್ಕದಲ್ಲಿ; ಹಿಂದುಗಡೆ ಹೀಗೆ ಅನೇಕ ಕಡೆಗಳಲ್ಲಿದ್ದ ರೇಖಾ, ಮ್ರ್ಲಿನ್ ಮನ್ರೋ; ಸೊಫಿಯಾ ಇವರೆಲ್ಲ ಓಣಿಯ ಹೆಂಗಸರ ಮುಖವಾಡ ಧರಿಸಿರುವಂತೆ ಭಾಸವಾಯಿತು. ಅವಿವಾಹಿತ ತರುಣ ರಾಜಕುಮಾರ್ವನೋರ್ವನಿಗೆ ಸಾರ್ವಜನಿಕರ ಸಮಕ್ಷಮ ಚುಂಬಿಸಿ, ಎದೆಗಾರಿಕೆ ಪ್ರಕಟಿಸಿ ದಿನಬೆಳಗಾಗುವುದರೊಳಗೆ ಅಂತರಾಷ್ಟ್ರೀಯಖ್ಯಾತಿ ಗಳಿಸಿದ ಮಧ್ಯಮ ವರ್ಗದ ಹದಿಹರೆಯದ ಹುಡುಗಿ ಶಶಿಕಲಾಳ ಒಳಗಿಂದ ಸರಸ್ವತಿ ಒಡಮೂಡುತ್ತಿರುವಳೆಂದು ಭಾವಿಸಿ ಚಾಪೆ ಮೇಲೆ ಮೈಚೆಲ್ಲಿ ಕಣ್ಣು ಮುಚ್ಚಿದೆ. ನನ್ನ ಮತ್ತು ನನ್ನಂಥವರ ಅಂತರಂಗ ಮತ್ತು ಬಹಿರಂಗಗಳ ಎಲ್ಲ ಮಗ್ಗುಲುಗಳ ಮೇಲೆ ಸದಾ ನಿಗಾ ಇಟ್ಟು ಸದುವು ಸಿಕ್ಕರೆ ಆಕ್ರಮಣ ಮಾಡಲು ಓಣಿಯ ಅನೇಕರು ಹೊಂಚು ಹಾಕಿರುವರೆಂದು ಅಚಾನಕ್ ಅಂದುಕೊಂಡೆ. ಗಲಿಬಿಲಿಗೀಡಾದೆ. ’ಬಗಸಿ ನುಗ್ಗೆಸೊಪ್ಪಿನ ಉದುಕಾ ಮಾಡಿದ್ರು ಉಣ್ಣಿಲ್ವಲ್ಲೋ ನೀನು’ ಎಂದು ದೊಡ್ಡವ್ವ ಕಲ್ಡಬತ್ತದೊಳಗೆ ಎಲೆಅಡಿಕೆ ಹಾಕಿ ಕುಟ್ಟತೊಡಗಿದ. ಸದ್ದು ಕೇಳಿಸಿಕೊಳ್ಳುತ್ತಲೆ ಈ ಊರು ಯಾವಾಗ ಬಿಡುವೆನೋ ಎಂದೆನಿಸಿತು. ಊರನ್ನು ಶಾಮ ಬಿಟ್ಟರೂ ನನ್ನೊಳಗೆ ಬೆಚ್ಚಗಿರುವ ಉರಿನಿಂದ ಬಿಡುಗಡೆಯಾಗಬೇಕಲ್ಲ! ಪರಿತ್ಯಕ್ಕ್ತತೆ ಎಂಬುದೇ ಭ್ರಮೆ ಎನಿಸಿತು. ಆ ಭ್ರಮೆಯೊಳಗೆ ಕರಗಿ ಹೋದೆ ... ಕವಿದ ನಿದ್ದೆಯೊಳಗೆ ಕಂಡ ಕನಸಿನಲ್ಲಿ ಸರಸಿಯೊಂದಿಗೆ ಸಂಭೋಗ ಮಾಡಿದಂಥ ಕನಸು ಬಿದ್ದಿತೆಂದು ಅರ್ಥವಾದಾಗ ಒದ್ದೆಯಿಂದ ಊರುಗಳೊಂದು ಬೆಸೆದುಕೊಂಡಿದ್ದವು. ಅದರ ವಾಸನೆಗೆ ಮೂಗು ಹಿಗ್ಗಲಿಸಿಕೊಂಡು ಮಹಾ ಮಳ್ಳಿಗನಂತೆ ಮೈಹೊಸಕುತ್ತ ಬಂದ ಬೆಕ್ಕು ಅಂಗಾಲಿಗೆ ತಗುಲಿದಾಗ ಮೃತ್ಯು ಸ್ಪರ್ಶಿಸಿದಂತೆ ದಿಗ್ಗನೆಚ್ಚರಗಿ ಅದನ್ನಾಚೆ ಜಾಡಿಸಿದೆ. ಅದು ನಾನು ಸ್ಖಲಿಸಿಕೊಂಡ ಸಮಾಚಾರವನ್ನು ಬಿತ್ತರಿಸುವ ರೀತಿಯಲ್ಲಿ ಅರಚುತ್ತ ಹೋಯಿತು.

"ಬೆಕ್ಕನ್ಯಾಕೆ ಹೊಡ್ದ್ಯೋ ... ದೇವ್ರಿದ್ದಂಗದು ... ಅದು ನೊಂದ್ಕೊಂಡ್ರೆ ಪಾಪ ಬರತೈತಿ" ಎಂದು ಸಿದ್ದಮ್ಮಜ್ಜಿ ಬಾಯಲ್ಲಿ ಮುಂಗೈ ಇಉ ಕೂತಲ್ಲಿಂದ ಕೂಗಿತು.
ಮಲಗುವುದೋ! ಏಳುವುದೋ ! ಎಂಬ ಗೊಂದಲದಲ್ಲಿದ್ದ ನಾನು ಮಲಗುವುದು ಸಾಧ್ಯವಿಲ್ಲವೆಂಬಂತೆ ಹೊತ್ತು ಮಾರುದ್ದ ಏರಿತ್ತು; ಮೈ ಮುರಿದೆದ್ದು ಆಕಳಿಸುತ್ತ ಕೋಣೆಯೊಳಗಿಂದೀಚೆ ಬಂದೆ.

ಬೆಳಗಿನ ಸಮಯವನ್ನು ನಮ್ಮೋಣಿಯ ಹೆಂಗಸರು ಅನುಭವಿಸುವುದನ್ನು ನೋಡುವುದೇ ಒಂದು ಸೋಜಿಗದ ಸಂಗತಿ. ಸಿದ್ದವ್ವ ಕಾಲು ಕಿಸಿದು ಕೂತುಕೊಂಡು ಎಡಗೈಯ ಅರ್ಧ ಭಾಗ ಗಂಅಲ ಮಟ ತೂರಿಸಿ ಕಫ ಕಿತ್ತು ಸಾರಣೆ ಮಾಡತೊಡಗಿದ್ದುದು ಅರ್ಧ ಊರಿಗೆ ಕೇಳಿಸುತ್ತಿತ್ತು. ಇನ್ನೊಂದು ಕಡೆ ಗಂಡಸತ್ತ ಆರು ತಿಂಗಳಿಗೆ ಹುಟ್ಟಿದ ತನ್ನ ಮೂರು ವರ್ಷದ ಮಗನನ್ನು ಅಂಗಳದ ಕಲ್ಲ ಮೇಲೆ ಕೂಡ್ರಿಸಿಕೊಂಡು ಬಸವಿ ಇಟ್ಟಿಗೆ ಹುಡಿಯಿಂದ ಹಲ್ಲುಜ್ಜುವ ಬಗ್ಗೆ; ನಾಲಿಗೆ ಕೆರೆಯುವ ಬಗ್ಗೆ; ಗಂಟಲಿನಿಂದ ಕಫ ಕೀಳುವ ಬಗೆ ಬಗ್ಗೆ ಎಂದಿನಂತೆ ತರಬೇತಿ ಕೊದಲಾರಂಭಿಸಿದ್ದಳು. ಉರಿಸಿಕೊಂಡು ತಿಂದು ಸತ್ತ ಗಂಡನ ಮೇಲಿನ ಕೋಪವನ್ನು ಆ ನೆಪದಲ್ಲಿ ತನ್ನ ಮಗನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಇನ್ನೊಂದು ಕಡೆ ಇನ್ನೊಂದು ನಮೂನಿ ಸೀನು ... ಇಂಥಪ್ಪ ಹಲವು


೨೨೫

ಸೀನುಗಳನ್ನು ತಂತಮ್ಮ ನಿಗದಿತ ಜಾಗಗಳಲ್ಲಿ ಕೂತುಕೊಂಡು ಆನಂದಿಸುತ್ತಿದ್ದ ನಾಯಿಗಳು; ಕಾಗೆಗಳು ಇತ್ಯಾದಿ ... ಮುಖ ತೊಳೆದುಕೊಳ್ಳುವವರ ವಕ್ಷ ಸ್ಥಳಗಳನ್ನು ಕಳ್ಳ ಕಿಂಡಿಂದಿಣುಕಿ ನೋಡುತ್ತಿದ್ದ ಕನ್ನಡ ಪಂಡಿತರು ಪಕ್ಕದ ಮನೆ ಜಾಲರಿ ಮರೆಯಲ್ಲಿ; ಹಿತ್ತುಲಲ್ಲಿ ಹೆಂಡತಿ ತಮ್ಮನ್ನು ಸಾಪಳಿಸುತ್ತ ಇರುವಳು ಎಂಬ ಪರಿವೆಯ್ ಇಲ್ಲದೆ.

ಚಾವತ್ತು ಪೂರ್ಣ ಪ್ರಮಾಣದಲ್ಲಿ ಕೋಣೆ ಬಿಟ್ಟು ಹೊರ ಬರಲಾಗಲಿಲ್ಲ. ಕನಸು ಕಂಡಿರೋ ಅಳುಕು. ನಾನು ಕಂಡಿರೋ ಕನಸು ಅವರಿಗೆ ಗೊತ್ತಾಗಿದೆ ಎಂಬ ಅಳುಕು, ಊರುಗಳ ನಡುವಿನ ಅಂಟನ್ನು ಬೆಕ್ಕು, ನಾಯಿಗಳು ಘ್ರಾಣಿಸಿವೆ ಎಂಬ ಅಳುಕು, ಶಾಮನ ವ್ಯಕ್ತಿತ್ವ ನನ್ನಲ್ಲಿ ಪುನರಾವರ್ತನೆಯಾಗುತ್ತಿರುವ ಅನುಮಾನ ಬಂತು, ಎಲ್ಲ ಬಿಟ್ಟುಕೊಟ್ಟು ಓಡಬೇಕು, ವಾಯು ಮತ್ತು ಮನಸ್ಸಿಗಿಂತ ಮಿಗಿಲಾಗಿ ... ಅಸಹನೀಯವದದ್ದನ್ನು; ಅಶ್ಲೀಲವಾದುದನ್ನು ಎಲ್ಲವನ್ನು ಕೂಡಲೆ ವಿಸರ್ಜಿಸಿ ನಿರುಮ್ಮಳತೆ ಸಾಧಿಸಬೇಕೆಂಬ ಉತ್ಕಠೇಚ್ಛೆ ... ಹೊರಟೆ ... ಪವಿತ್ರ ಗಂಗಾಜಲದೊಂದಿಗೆ. ಹಸಿರು ಮೊಗೆಯುತ್ತಿರುವ ಗದ್ದೆಗಳ ನಡುವೆ ಮೇರೆಗಳ ಮೇಲೆ; ಪಾರ್ಥೇನಿಯಂ ಮರೆಯಲ್ಲಿ ಕೆಮ್ಮುತ್ತ ಕ್ಯಾಕರಿಸುತ್ತ ವಿಸರ್ಜನಾಸೀನರಾಗಿರುವ ತರಾವರಿ ಮಂದಿ ... ಮೂವ್ವತ್ತೆರಡು ವರ್ಷದ ಮಗನ ತಂದೆಯಾಗಿದ್ದು ಒಂದೂವರೆ ವರ್ಷದ ಮಗನಿಗೂ ತಂದೆಯಾಗಿರುವ ಹಾಯಸ್ಕೂಲು ಕಿಲಾರ್ಕು ಗುರುಸಿದ್ದಪ್ಪ್ಪ ವಿಸರ್ಜನಾಂಗದಿಂದ ಮೊಳೆ ವ್ಯಾಧಿಯನ್ನೂ; ಬಾಯಿಂದ ಶ್ವಾಸಕೋಶದ ವ್ಯಾದಿಯನ್ನೂ ಏಕ ಕಾಲಕ್ಕೆ ಪ್ರಕಟಿಸುತ್ತ ಕೂತು ಎಷ್ಟು ಹೊತ್ತಾಗಿರುವುದೋ! ಆತ ಎದ್ದು ಬರುವುದು ಸೆಕೆಂಡ್ ಬೆಲ್ ಹೊಡೆಯುವ ಮೇಲೆಯೇ; ಪರಮೇಶ್ವರ ಶಾಸ್ತ್ರಿಗಳು ಆತನನ್ನು ಕಲಿಯುಗದ ಧೃತರಾಷ್ಟ್ರನಿಗೆ ಹೋಲಿಸಿರುವುದ ಸಮಂಜಸವಾಗೇ ಇದೆ. ಎಲ್ಲಾ ಸೈರಿಸಿಕೊಂಡು ...

ಹೇಗೋ ಒಂದು ಮುಗಿದಿ ಬುಡ್ಡೇಕಲ್ಲು ದಾಟಿ ಕೋಟೆ ಗೋಡೆ ಏರಿ ಮೇಲೆ ಬರುವುದಕ್ಕೂ ಶೂದ್ರತ್ವ ಬ್ರಾಹ್ಮಣತ್ವಗಳನ್ನು ಏಕಕಾಲಕ್ಕೆ ಪ್ರಕಟಿಸುತ್ತ ಉಗ್ಗು ನಾರಾಣಿ ಎದುರಿಗೆ ಬರುವುದಕ್ಕೂ ಸರಿಹೋಯಿತು. ಜೋಕುಮಾರನನ್ನು ಬಚ್ಚಿಡುವ ಹಾಸುಗಲ್ಲಿನ ಯಜಮಾನ ವೆಂಕೋಬನ ಹಿರೇಮಗನಾದ ನಾರಾಣಿ ಶಾಸ್ತ್ರಿಗಳ ಮನೆ ಮೈಲಿಗೆ ಸಹವಾಸ ಮಾಡಿದಂದಿನಿಂದ ತುಸು ಗ್ರಾಂಥಿಕವಾಗಿ ಮಾತಾಡುವುದನ್ನು ಅಭ್ಯಾಸ ಮಾಡಿಕೊಂಡಿರುವಂಥ ಸಭ್ಯಸ್ಥ "ಏನ್ರೀ ಶೋಮಿ ... ಯಶ್ಟು ಹೊಟ್ತಿನಿಂದ ತಮ್ಮನ್ನು ಹುಡುಕುವುದು? ಮನೆಗೆ ಹೋಗಿದ್ದೆ ಮನೆಯಲ್ಲಿರಲಿಲ್ಲ ... ಅಜ್ಜಿ ಮಾತು ಕಟ್ಟಿಕೊಂಡು ಕೋಣೆಯಲ್ಲಿಣುಕಿದೆ. ನಿಮ್ಮ ಲುಂಗಿ ನೆಕ್ಕುತ್ತಿದ್ದ ಬೆಕ್ಕು ದುರುಗುಟ್ಟಿ ನೋಡಲು ಹೆದರಿ ಬಸವನ ಬಾವಿ ಕಡೆ ಬಂದೆ. ಅಲ್ಲಿ ಕೂತಿರುವುದು ನೀವೆ ಅಂದುಕೊಂಡು ಕಾದೆ ಕಾದೆ. ಅಂತೂ ದೇವರ ದಯೆಯಿಣ್ದ ಎದ್ದು ಬಂದಿರಿ ... ದೇವರು ದೊಡ್ಡವನು... ಯಾಕೆಂದರೆ ನೀವು ಕೂತಿದ್ದ ಜಾಗದಲ್ಲಿ ನಾನು ಹಿಂದೊಮ್ಮೆ ಘಟಸರುಪ ನೋಡಿದ್ದೆ ... ಅದರ ಮೈ ಮೇಲೆ ಗೇಣುದ್ದದ ಕೂದಲಿದ್ದವು... ಅಬ್ಬಾ! ಅದರ ಸೀಳು ನಾಲಿಗೆ ..." ಮಾತಿಂದಲೇ ನನ್ನ ಕೊಲೆ ಮಾಡಲಿಕ್ಕೆಂದೇ ಬಂದಿರುವನೆನ್ನಿಸಿ "ಅದೇನು ಹೇಳಬೇಕೆಂದಿದ್ದೀಯೋ ಅದ್ನೆರ್ಡು ಮಾತ್ನಲ್ಲಿ ಹೇಳಿ ಪುಣ್ಯ ಕಟ್ಕೋ ಮಾರಾಯ ...ತಲೆ ತಿನ್ಬೇಡ" ಎಂದು ಕೇಳಿದೆ. ಕೂಡಲೆ ಶಾಸ್ತ್ರಿಗಳನ್ನು ಕಾಣಬೇಕಂತೆ ಎಂದು ಹೇಳಿದ. "ಬರ್ತೀನಿ ನೀನು ಹೋಗು!" ಎಂದೆ. ಅವನು ಹೋದ. ಒಂದೇ ಪ್ರಮಾಣದಲ್ಲಿರದ ಎರಡು ಕಾಲುಗಳಿಂದ ಅವನು ಬೀಸು ಹೆಜ್ಜು ಹಾಕಿದ.
ನಾನು ಬಂದೊಡನೆ ಕೂಡಲೆ ಕೋಣೆಗೆ ನುಗ್ಗಿ ನೋಡುತ್ತೇನೆ. ಹಾಳಾದ ಬೆಕ್ಕು ಲುಂಗಿಯೊಡನೆ


೨೨೬

ಚಿನ್ನಾಟ ಆಡುತ್ತಿರುವುದು.ಲುಂಗಿಯನ್ನು ಬಚ್ಚಲಿಗೆಸೆದು ಜಗಳ ಮಾಡುತ್ತಿದ್ದಾಗ ಮುದುಕಿ "ಲೋ ನೀನಿವತ್ತು ಹುಟ್ಟಿದ್ದಿನ ... ಐದು ನಮೂನಿ ಎಣ್ಣ್ಯಾಗ ಮಾರಿ ನೋಡಿಕ್ಯಾ ... ಹಂಗೆ ಹನ್ಮನ್ನ ಗುಡಿಗೋಗಿ ತುಪ್ಪ ದೀಪ ಹಚ್ಚಿ ... ಸಣ ಮಾಡಿಕ್ಯಾ... ನಿನ್ನ ಗ್ರಹಗತಿ ಸುದ್ದಿಲ್ಲಾಂತೆ ... ಹಿರೇರ ಮಾತ್ನ ಮೀರಬೇಡ... ಎಂದಾರಂಭಿಸಿ ಯಾವ ಯಾವ ನಮೂನಿ ಎಣ್ಣೆಯನ್ನು ಎಲ್ಲೆಂದ ಜೋಡಿಸಿಕೊಂಡು ಬಂದುದರ ಬಗ್ಗೆ ಹೊಸ ವ್ಯಾಖ್ಯಾನ ಮಂಡಿಸಿತು. ಒಂದೊಂದು ಎಣ್ಣೆಗೆ ಸಂಭಂದಿಸಿದ ಒಬ್ಬೊಬ್ಬ ವ್ಯಕ್ತಿಯ ಕುಲಗೋತ್ರ ಜಾಲಾಇಸಿತು. ನಿರಂತರವಾಗಿ ಮಾತಾಡುತ್ತಿದ್ದ ಅದನ್ನು ಅದರಪದಿಗೆ ಬಿಟ್ಟು ನಾನು ನನ್ನ ಕೆಲಸ ಮುಗಿಸಿಕೊಂಡು ಹೊರಗೆ ಬಿದ್ದೆ.

ಸರಸಿ ಕಣ್ಣಿಗೆ ಬಿದ್ದಾಳೆಂಬ ಭಯದಿಂದ; ಅಂತೂ ಕನಸಿನಲ್ಲಾದ್ರೂ ನನ್ನ ಸಂಭೊಗಿಸಿದೀಯಲ್ಲ ಎಂದು ಕಂಣಿಂದ ಕೇಳ್ಯಾಳೆಂಬ ಆತಂಕದಿಂ, ಅವರ ಸಾಕು ನಾಯಿ ಗುರುಗುಟ್ಟಿ ಸಣ್ಣಿರವ್ವನ ಗಮನವನ್ನು ನನ್ನ ಕಡೆಗೆ ಸೆಳೆದೀತೆಂಬ ಅಂಜಿಕೆಯಿಂದ ... ಇನ್ನೇನು ಊರಮ್ಮನ ಬಯಲು ಪ್ರವೇಶಿಲಿದ್ದ ನಾನು ಹೊರಳಿ ನನ್ನ ಜವಳಾಕಾರ್ಯ ಮಾಡಿದ್ದ ಕೆಲಸೇರ ಗುರವಪ್ಪನ ಮೂರು ಗೋಡೆ ಮನೆಯ ಮುಂದೇಸಿನಿಂದ ಹಾದು ರುದ್ರ ನಾಯಕನ ಆಟವಾಳಿಗೆ ಮನೆ ಮುಂದೆ ತೇಲಿ ನಡುಗೆ ಮಂದಗೊಳಿಸಿದೆ. ನಾನೆಂದೂ ಮಾತಾಡಿಸಿರದಿದ್ದರೂ ಮುಖ ಪರಿಚಯವಿರುವ ಅನಸೂಯಳ ಗಂಡನಾದವನು ಹೇಗಿರುವನೆಂಬ ಕುತೋಹಲದಿಂದ ಹಾಗೇ ವಾರೆಗಣ್ಣಿನಿಂದ ನೋಡಿದೆ. ... ಬಾಯಿತುಂಬ ನೊರೆ ಇಟ್ಟುಕೊಂಡು ಬ್ರಷ್ ಮಾಡುತ್ತಿರುವ ಮಟ್ಟಸ ವ್ಯಕ್ತಿಯೇ ಆಕೆಯ ಗಂಡನಿರಬೇಕೆಂದುಕೊಂಡೆ... ಆತನೂ ಚಿರಪರಿಚಿತನಂತೆ ನನ್ನತ್ತ ನೋಡಿದ. ಅದೇ ಹೊತ್ತಿಗೆ ಹಿತ್ತಲ ಲಘು ಬೆಳಕಿನಲ್ಲಿ ತಲೆ ಒಣಗಿಸಿಕೊಂದು ಹೊರಗಡೆ ಬಂದ ಅನಸೂಯಾ "ರ್ರೀ... ರ್ರೀ..." ಎಂದು ಕೂಗಿದ್ದು ಕೇಳಿಸಿತು. ನನ್ನನ್ನೇ ಆಕೆ ಕೂಗಿದ್ದು ಎಂದು ಖಾತ್ರಿ ಮಾಡಿಕೊಂಡ ನಂತರ ನಿಂತೆ. ಒಳಗೆ ಕರೆದಳು. ಹೋದೆ. ಕೂಡ್ರಲು ಕುರ್ಚಿ ತೋರಿಸಿದಳು. ಕೂತೆ.... ಮುಖ ತೊಳೆದುಕೊಂಡು ಬಂದ ಗಂಡನನ್ನು ಪರಿಚಯಿಸಿದಳು. ಕೈ ಕುಲುಕಿದ... ನಾನೂ ಅಷ್ಟೆ. ಬೆಂಗಳೂರಲ್ಲಿ ಒಂದು ಸ್ವಂತ ಚಿಕ್ಕ ಉದ್ದಿಮೆ ಸ್ಥಾಪಿಸಬೇಕೆಂದಿರುವುದು ಮತ್ತು ಅದು ದೋಸೆಗೆ ಸಂಬಂಧಪಟ್ಟಿದ್ದೇ ಆಗಿರಬಹುದೆಂದು ಇತ್ಯಾದಿ ಕಲ್ಮಷವಿಲ್ಲದೆ ಹೇಳಿದ. ನಾನು ನನ್ನ ಬಗ್ಗೆ ಏನು ಹೇಳಿಕೊಳ್ಳುವುದು? ಅಷ್ಟರಲ್ಲಿ ಅನಸೂಯಾ ಕಳೆದ ಮಾಹೆಯ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಕಥೆಯೊಂದರ ಬಗ್ಗೆ ಗಂಡನ ಗಮನ ಸೆಳೆದು ನೆನಪಿಸಿದಳು. ಆತ ‘ಹೊ’ ಎಂದ. ..ನನ್ನ ಕಥೆಯ ನಾಯಕನೊಂದಿಗೇ ಮಾತಾಡಬೇಕಾಗಿ ಬಂದಿದ್ದರಿಂದ ಮಾತುಗಳಿಗಾಗಿ ತಡವರಿಸಿದೆ. ಕ್ರಾಂತಿ ಎಂಬ ಶೀರ್ಷಿಕೆಯಡಿ ಉಡುಪಿ ಹೋಟಲ ಮಾಸಾಲೆ ದೋಸೆ ಕಡೆ ಗ್ರಾಮದ ಗಮನವನ್ನು ಸೆಳೆಯುವುದರ ಮೂಲಕ ಬದಲಾವಣೆಗೆ ಕಾರಣನಾಗುವ ಯುವಕ ಪಾತ್ರ ಅದ್ದಗಿತ್ತು.
"ಶಿವ ಪೂಜೆ ಕೊಟ್ರ ಗೌಡ್ರು ಜೀವ ಬಿಡೋ ಒಂದು ಗಳಿಗೆ ಮೊದಲು ಹೋಟ್ಲಿಂದ ಮಸಾಲೆ ತರಿಸ್ಕೊಂಡಿದ್ರಂತೆ ಹೌದೆ?" ಎಂದು ರಘು ನನ್ನ ಕೇಳಿದ.
ನನಗೆ ಆಶ್ಚರ್ಯವಾಯಿತು.
ಶಿವಪೂಜೆ ಕೊಟ್ರ ಗೌಡ ನಮ್ಮ ಮನೆತನಕ್ಕೆ ಅಷ್ಟು ದೂರದವನೇನೂ ಅಲ್ಲ. ಆಸ್ತಿ ಅಂತಸ್ತು ಕಾರಣದಿಂದ ಊರಿಗಿಂತ ಭಿನ್ನವಾಗಿ ಊಳಿದ ಅವರು ತಮ್ಮ ಇಳಿವಯಸ್ಸಿನಲ್ಲಿ ಹೆಂಡತಿ ಮಕ್ಕಳು ಸೊಸೆಯರಿಂದ ಬೇಬಿಷ್ಠೆಗೊಳಗಾಗಿದ್ದರೆಂದು ಕೇಳಿದ್ದೆ. ಲಕ್ವಾ ಹೊಡೆದು ಮಂಚಕ್ಕೆ ಸೋಪ್ತಿಯಾಗುವ ಮೊದಲು ಅವರು ಸಂಜೆಯಾಯಿತೆಂದರೆ ಜೀತದಾಳಿನಿಂದ ಬಾಡಿಗೆ ಪಡೆದ


೨೨೭

ಗೊಂಗಡಿಯೊಳಗೆ ಮರೆ ಮಾಚಿಕೊಂಡು ಉಡುಪಿ ಹೋಟಲನ್ನು ಹಿಂಬಾಗಿಲಿಂದ ಪ್ರವೇಶಿಸಿ ಗುಟ್ಟಾಗಿ ದೋಸೆ ತಿಂದು ಉದ್ರಿ ಬರೆಸಿ ಹೋಗುತ್ತಿದ್ದರೆಂಬುದು ಗೊತ್ತಾದದ್ದೇ ಅವರು ಲಿಂಗೈಕ್ಯರಾದ ಮೇಲೆ ...
" ನಿಮ್ಮ ತಂದೆಯವರು ಇಷ್ಟು ದೋಸೆ ತಿಂದದ್ದು ಇಷ್ಟು ಕೊಡಬೇಕಾಗಿದೆ ಮಹಾರಾಯ್ರೇ" ಎಂದು ಮನೇ ಬಾಗಿಲಿಗೇ ಬಂದ ಭಟ್ಟರನ್ನು ಗೌಡರ ಮನೆಮಂದಿಎಲ್ಲ ಭೂತ ಬಿಡಿಸಿದ್ದು ಜಗಜ್ಜಾಹಿರಾದ ಮೇಲೆಯೇ. ಜೀತದಾಳು ಲಸುಮ ದೊಡ್ಡ ಗೌಡರಿಗೆ ತನ್ನ ಗೊಂಗಡಿ ಬಾಡಿಗೆ ಕೊಟ್ಟಿದ್ದ ಮೊತ್ತವನ್ನು ಹೇಗೆ ವಸೂಲು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಭಟ್ಟರು ಕೋರ್ಟಿನಲ್ಲಿ ದಾವೆ ಹಾಕಿರುವರಂತೆ... ಐನೂರು ಚಿಲ್ಲರೆ ಮುಖದ ಮೇಲೆ ಎಸೆಯದಿದ್ದರೆ ಈ ಪೀಕಲಾಟವೇ ಇರುತ್ತಿರಲಿಲ್ಲವೆಂದು ಪ್ರತಿವಾದಿಗಳಿಗೆ ವಕೀಲರು ಬುದ್ಧಿ ಹೇಳಿದ್ದೂ ಉಂಟಂತೆ... ಕೊಡಗಿನ ಅಂತಿಮ ಅರಸ ಚಿಕ್ಕವೀರ ರಾಜೇಂದ್ರ ತಾನು ಭ್ರಷ್ಟನಾದ ಮೇಲೆ ಈಸ್ಟ್ ಇಂಡಿಯಾ ಕಂಪನಿ ಮೇಲೆ ಹೂಡಿದ್ದ ಖಟ್ಲೆಗೂ ಇದಕ್ಕೂ ಅಷ್ಟು ವ್ಯತ್ಯಾಸವಿಲ್ಲವೆಂದು ವಾದ ವಿವಾದ ಕೇಳುವಾಗ ಮುನಸೀಫರು ಸ್ವತಃ ಅಭಿಪ್ರಾಯ ಪಟ್ಟರಂತೆ... ಖಟ್ಲೆ ನಡೆಯುತ್ತಿರುವಾಗ ಶಿವಪೂಜೆ ಗೌಡರೂ; ಮಸಾಲ ದೋಸೆಯೂ ಎಂಬೊಂದು ಲೇಖನವನ್ನು ಕಮಲಾಕರ ಖಡ್ಗ ಪ್ರಕಟಿಸಿ ಸದರೀ ಗ್ರಾಮದಲ್ಲಿ ಹೊಸ ಜಿಜ್ಞಾಸೆಯನ್ನೇ ಸೃಷ್ಟಿಸಿತು ಎಂಬುದು ಗಮನಾರ್ಹ ಸಂಗತಿ. ಐಬಿ ಹತ್ತಿರ ಡ್ರಾಗನ್ ಹಾರ್ಟ್ ಬಾರಂಡ್ರೆಸ್ಟೋರೆಂಟ್ ಸುರು ಮಾಡಿದ ಮೂರನೆ ವಾರದಲ್ಲಿಯೇ ಶಿವಪೂಜಾ ಸುರೇಶ ಗೌಡರು "ಲೇ ಕಮಲಾಕರ... ನಮ್ತಂದ್ಯೋರು ಮಸಾಲೆ ತಿಂತಿದ್ರೂಂತ ಸುಳ್ಳು ಬರ್ದು ಮರ್ಯಾದೆ ಕಳಿತೀಯೇನೊ... ಡೆಫಮೇಷನ್ ಕೇಸ್ ಹಾಕಿ ಸೊಂಟ ಮುರೀತೀನಿ ನೋಡ್ತಿರು" ಎಂದು ರೋಫ್ ಹಾಕಿ ಹೋದನು. ಅದಕ್ಕೆ ಕಮಲಾಕರ ಎಳ್ಳಷ್ಟೂ ವಿಚಲಿತನಾಗಲಿಲ್ಲ. ಮರುದಿನ ... ಖಡ್ಗದ ಮುಖಪುಟದಲ್ಲಿ ಬಳ್ಳಾರಿ ಬ್ರೀಜ್ ಹೋಟಲಲ್ಲಿ ಶಿವಪೂಜೆ ಸುರೇಶ್ ಗೌಡರು ಬೀಫ್ ತಿನ್ನುತ್ತಿರುವ ಫೋಟೋ ಪ್ರಕಟವಾಗಿ ಬಿಡಬೇಕೆ? ಆ ಫೋಟೊ ಇದ್ದ ಸಂಚಿಕೆ ಕಾಳಸಂತೆಯಲ್ಲಿ ಮಾರಾಟವಾಗಿದ್ದೊಂದು ಸಣ್ಣ ಪತ್ರಿಗೆಗಳ ಇತಿಹಾಸ ಸಂಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿ. ಅವನಿಗೆ ಹೆಣ್ಣು ಕೊಟ್ಟ ಮಾವ ಮುನ್ನೂರು ಮೈಲಿ ದೂರದೂರಿಂದ ಬಿರುಗಾಳಿಯಂತೆ ಬಂದು ಅತ್ತು ರಂಪಾಟ ಮಾಡುತ್ತಿದ್ದ ನಾಲ್ಕು ಮಕ್ಕಳ ತಾಯಿಯಾದ ತಮ್ಮ ಮಗಳನ್ನು ಸಂತೈಸುತ್ತ "ನೀನೂದ್ಕೊಂಡಿದ್ದುದು ನೋಡಿ ಕೋಳಿ ತಿಂತಿರ್ಭವುದೆಂದ್ಕೊಂಡಿದ್ನೇ ಹೊರ್ತು ಈ ದೇಶದ ಪವಿತ್ರ ಪ್ರಾಣಿಯನ್ನೂ ತಿಂತಿ ಅಂತ ಅಂದ್ಕೊಂಡಿರ್‍ಲಿಲ್ವೋ ಅಳಿಯನೆಂಬ ಮುಠ್ಥಾಳ, ನಿನ್ ತಂದೆಯವರು ಭಟ್ರೋಟ್ಳ ಮಸಾಲೆ ತಿಂತಿದ್ಕೇನೆ ಅಷ್ಟು ಎಗರಾಡ್ತಿದ್ಯಲ್ಲಾ... ಈಗವ್ರು ಬದುಕಿದ್ರೆ ನಿಂಗ್ಯಾವ ಶಿಕ್ಷೆ ಕೊಡ್ತಿದ್ರೋ... ಇನ್ನು ನಿನ್ಗೂ ನನ್ ಮಗ್ಳಿಗೂ ಯಾವ ಸಂಬಂಧ ಇಲ್ಲ... ದೈವರ್ಸ್ ಫಾರಂ ಕಳಿಸ್ತೀನಿ ಮುಕ್ಳಿಬಾಯಿ ಮುಚ್ಕೊಂಡು ಸೈನ್ ಹಾಕಿ ಕಳಿಸು..." ಎಂದು ಮೊದಲೇ ರಾಜಕೀಯ ವರ್ಚಸ್ಸಿನ ವ್ಯಕ್ತಿಯಾದ ಅವರು ಮಗಳು; ಮೊಮ್ಮಕ್ಕಳೊಂದಿಗೆ ಪ್ರಾಯಶ್ತಿತ್ತಕ್ಕೆಂದು ಲಿಂಗಾನಂದ ಸ್ವಾಮಿಗಳ ಆಶ್ರಮವಿರುವ ಕಲಘಟಗಿ ಕಡೆಗೆ ಹೋದರು.

ಇದೆಲ್ಲ ನಡೆಯುವುದಕ್ಕೂ ಮೊದಲೇ ಅಂದರೆ ಕೊಟ್ರಗಊಡರು ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿರುವಾಗ ಎಷ್ಟು ಹೊತ್ತಾದರೂ ಪ್ರಾಣ ಹೋಗಲಿಲ್ಲವೆಂಬುದಾಗಿ ಕೇಳಿದ್ದೆನೆಯೆ ಹೊರತು ಅಂತಿಮ ಕ್ಷಣದಲ್ಲಿ ಮಸಾಲೆ ಬಯಸಿದ್ದರೆಂಬುದಲ್ಲ... ಕೇವಲ ಮುನ್ನೂರಾ ನಲವತ್ತೆಂಟು


೨೨೮

ಗಜಗಳಷ್ಟು ದೂರವಿರುವ ಮನೆಯ ವಿದ್ಯಮಾನಗಳು ಭೂತಗನ್ನಡಿ ಹಿಡಿದುಕೊಂಡು ಕೂತಿರುವ ನನಗೆ ಗೊತ್ತಾಗುವುದಕ್ಕಿಂತ ಮೊದಲು ನೂರಾರು ಮೈಲಿ ದೂರದ ನಗರದಲ್ಲಿರುವ ನವ ವಿವಾಹಿತ ತರುಣನಾದ ರಘುರಾಮನೆಂಬ ಮಹಾಶಯನಿಗೆ ಹೇಗೆ ತಿಳಿಯಲು ಸಾಧ್ಯ? ಎಂದು ಮಂಡೆ ತುರಿಸಿಕೊಂಡೆ.
ಅನಸೂಯ ತಂದುಕೊಟ್ಟ ಕಾಫಿ ಕುಡಿಯುತ್ತಿರುವಾಗ್ಗೆ ಅವನೆ ದೋಸೆಯನ್ನು ತನ್ನ ಚಪ್ಪಟೆ ಆತ್ಮಕ್ಕೆ ಹೋಲಿಸಿಕೊಂಡ. ಈ ದೇಶದ ದುಡಿಯುವ ಪ್ರತಿಯೊಬ್ಬರಿಗೆ ಕಡಿಮೆ ಬೆಲೆಯ ರುಚಿರುಚಿಯಾದ ಮಸಾಲೆ ದೋಸೆಯನ್ನು ಸಪಲೈ ಮಾಡುವಂಥ ಘನ ಸರಕಾರ ಎಂದು ಬರುವುದೋ ಎಂದು ನಿಟ್ಟುಸಿರು ಬಿಟ್ಟ. ಅನಸೂಯ ಒಳಗೆ ಹೋದೊಡನೆ ಹತ್ತಿರ ಜರುಗಿ ... "ನಿಮ್ಗಿನ್ನು ಗೊತ್ತಿಲ್ಲ... ದಿನಕ್ಕೊಂದು ಮಸಾಲೆ ತಿನ್ನೋರ್ಗೆ ಕಾಯಿಲೆ ಕಸಾಲೆ ಬರೊಲ್ಲ ... ಶೀಘ್ರ ಸ್ಖಲನ, ಸ್ವಪ್ನಸ್ಖಲನ ಮೊದಲಾದ ಲೈಂಗಿಕ ದೌರ್ಬಲ್ಯಗಳು ದೂರ ಆಗ್ತವೆ" ಎಂದು ಪಿಸುಗುಟ್ಟಿದ.
ಅದನ್ನು ಕೇಳಿ ನನಗೊಂಥರಾ ಆಯಿತು. ನನಗರಿವಿಲ್ಲದಂತೆ ನಾನು ಉಗುಳು ನುಂಗಿದ್ದನ್ನು ಗ್ರಹಿಸಿದ ಆ ಸೂಕ್ಷ್ಮಮತಿ " ಅನೂ ... ಅನೂ ... ಅರ್ಧ ಕೇಜೀದು ದೋಸೆ ಪಾಕೆಟ್ ತಗೊಂದ್ಬಾ" ಎಂದು ಕೂಗಿದ... ಓಣಿಗೆಲ್ಲ ಕೇಳಿಸುವಂತೆ...
ಆಕೆ ತಂದುಕೊಡುತ್ತ, "ಸರಿ ಹೋಯ್ತು ತಗೊಳ್ಳಿ" ಎಂದಳು.
ಅದೊಂದು ಆಕರ್ಷಕವೂ ಬಣ್ಣ ಬಣ್ಣದ ಪಾಕೆಟ್ಟೂ ಅದಾಗಿತ್ತು... :ಎಚ್ಚರಿಕೆಯಿಂದ ಓದ್ಕೊಳ್ಳಿ ದೋಸೆ ತಯಾರಿಕೆಗೆ ಸಂಬಂಧಪಟ್ಟ ಲಿಟರೇಚರ್ ದಕ್ಷಿಣ ಭಾರತದ ಐದು ಭಾಷೆಗಳಲ್ಲಿದೆ ..." ಎಂದು ಸೂಚಿಸಿದ.
ಓದುತ್ತಿದ್ದಂತೆ ನನಗೆ ಆಶ್ಚರ್ಯವಾಯಿತು.
ಅನಸೂಯ ಹೊಸ ಸೀರೆ ಉಟ್ಟು ಲಕ್ಷ್ಣಣವಾಗಿ ಗಂಡನ ಪಕ್ಕ ಕೂತುಕೊಂಡು-
"ಹೇಗಿದ್ದಾನ್ರೀ? ... ನಿಮ್ಮ ಫ್ರೆಂಡು ... ನಮ್ಮೆಜಮಾನರನ್ನು ಪರಿಚಯ ಮಾಡಿಸೋಣಾಂದ್ರೆ ಅವನು ಸಿಕ್ಕೇ ಇಲ್ಲ ... ಕದ್ದು ಮುಚ್ಚಿ ಓಡಾಡ್ತಿದ್ದಾನೆ. .. ಬೆಂಗಳೂರಿಗೆ ಬಂದ್ರೆ ಬಂದು ನಮ್ಮನೇಲಿರೊದಕ್ಕೆ ಹೇಳಿ ... ನೀವೂ ಅಷ್ಟೆ ... ಸುಮ್ನೆ ಲಾಡ್ಗಿಗೆ ಹಣ ಸುರಿಯೋದ್ಯಾಕೆ?" ಎಂದು ಹೇಳಿ ವಿಳಾಸ ಇರೋ ಕಾರ್ಡು. ಫೋನು ನಂಬರು ಕೊಟ್ಟಳು.
ಶಾಮನ ಬಗ್ಗೆ ಏನೂಂತ ಪ್ರತಿಕ್ರಿಯಿಸುವುದು? ಉತ್ತರ ರೂಪದಲ್ಲಿ ನಿಟ್ಟುಸಿರು ಬಿಟ್ಟೆ.
ಹನ್ನೊಂದು ಗಂಟೆಯ ಬಸ್ಸಿಗೆ ಹೊರಡಲಿದ್ದ ಅವರಿಗೆ ಶುಭ ಹಾರೈಸಿ ದೋಸೆ ಪಾಕೆಟ್ಟಿನೊಂದಿಗೆ ಮನೆ ದಾಟಿದೆ.
ರಘುರಾಮ ವೆರ್ರಿ ಇಂಟರೆಸ್ಟಿಂಗ್ ಅಂಡ್ ಜನರಸ್ ಪರ್ಸನ್ ಅನಿಸಿತು. ದೋಸೆಯ ಕಲ್ಪನೆ ಆತನ ಭವಿಷ್ಯವನ್ನು ಹೇಗೆ ರೂಪಿಸುವುದೋ ಕಾದು ನೋಡಬೇಕು! ಒಟ್ಟಿನಲ್ಲಿ ಅನಸೂಯಳಿಗೆ ಒಳ್ಳೇ ಗಂಡ ದೊರಕಿದ್ದಾನೆ... ದೇವರು ಅವರಿಬ್ಬರನ್ನು ಸುಖವಾಗಿಡಬೇಕು...
ಬೃಂದಾವನ ದಾಟುತ್ತಿರುವಾಗ ಎದುರಾದ ಶಾಮ ನನ್ನ ಕಡೆಗೊಮ್ಮೆ; ಕೈಲಿದ್ದ ದೋಸೆ ಪಾಕೆಟ್ಟಿನ ಕಡೆಗೊಮ್ಮೆ ನೋಡಿ ನಿಟ್ಟುಸಿರುಬಿಟ್ಟ. ನಿಷೇದಿತ ಪ್ರದೇಶಕ್ಕೆ ಹೋಗಿ ಬಂದಿರುವೆಯಲ್ಲ ಎಂಬಂತೆ ದುರುಗುಟ್ಟಿನೋಡಿದ. ಮೌನವಾಗಿ ಒಳಗೆ ಕರೆದೊಯ್ದ.
ವ್ಯಾಸಪೀಠದ ಮೇಲಿದ್ದ ಕಂದುವರ್ಣದ ಹೆಬ್ಬೊತ್ತಿಗೆಯಲ್ಲಿ ಕಣ್ಣಿಟ್ಟಿದ್ದ ಶಾಸ್ತ್ರಿಗಳು ಮುಖ


೨೨೯

ಎತ್ತದೇನೆ ಕೂಡ್ರುವಂತೆ ಸೂಚಿಸಿದರು. ಕೂತುಕೊಂಡೆ. ಅನತಿ ದೂರದಲ್ಲಿದ್ದ ಬಾಗಿಲ ಮರೆಯಲ್ಲಿ ಅಲುಮೇಲಮ್ಮ ನಾರುಮಡಿಯೊಳಗೆ ತಮ್ಮಿಡಿ ದೇಹ ಮರೆಮಾಚಿ ಪಿಳಿಪಿಳಿ ಕಣ್ಣು ಬಿಡುತ್ತ ಕೂತುಕೊಂಡರರು. ಇನ್ನೊಂದು ಮೂಲೆಯಲ್ಲಿ ಶಾಮ ಸದ್ವಿನಯಶಾಲಿಯಂತೆ ನ್ಯಾಯಾಧೀಶನೆದುರು ಆರೋಪಿಯಂತೆ ನಿಂತುಕೊಂಡ. ಅಲ್ಲೆ ಒಂದು ಪಕ್ಕ ಬ್ಯಾಂಕ್ ರಿಕ್ರೂಟ್‌ಮೆಂಟ್ ಕಮಿಟಿಯಿಂದ ಬಂದಿದ್ದ ಕವರು ದೇಹವನ್ನರುಸುವ ದ್ರೋಣಾಚಾರ್ಯರ ಆತ್ಮದಂತೆ ವಿಲವಿಲನೆ ಒದ್ದಾಡುತ್ತಿತ್ತು.

ತೆಂಗಿನಕಾಯಿ ಅಭಿಮಂತ್ರಿಸಿ ಕಟ್ಟಿದ್ದ ಮಾಡಿನಡಿ ಕೂತಿದ್ದ ಬೆಕ್ಕು ಮ್ಯಾಂವ್ (ಮಾತಾಡ್ರಯ್ಯ ಯಾಕೀ ಮೌನ?) ಎಂದಿತು. ಅಲುಮೇಲಮ್ಮ ನಿಮಿಷಕ್ಕೊಂದಾರ್ತಿ ಬಿಡುತ್ತಿದ್ದ ನಿಟ್ಟುಸಿರು ಗೋಡೆಗಳಿಗೆಟೆದು ಮಾರ್ದನಿಸುತ್ತಿತ್ತು. ಶಾಮ ಕ್ರಮೇಣ ಕಂಪನಕ್ಕೀಡಾದುದನ್ನು ಗ್ರಹಿಸಿದೆ. ಇಂಥ ಹಲವು ಚಕ್ಕುಬಂದಿಗಳ ನಡುವೆ ಮ್ಲಾನವದನರಾಗಿದ್ದ ಶಾಸ್ತ್ರಿಗಳ ನೋಡಿದೆ... ಚರ್ಮ ಮಡಚಿಕೊಂಡು ಮೂಳೆಗಟ್ಟಿರುವ ಕೃಶ ಶರೀರದ ಮೇಲೆ ವೃದ್ಧಾಪ್ಯದ ಕೇತುಗಳಂತೆ ಮಿಸುಗುತ್ತಿರುವ ರೋಮಾವಳಿ. ಗ್ರಂಥ ಪುಟವನ್ನು ಖಚಿತವಾಗಿ ತೆರೆಯಲಾಗದ ದುರ್ಬಲ ಬೆರಳುಗಳು... ಕಂಣನ್ನು ಕಿರಿದಾತಿ ಕಿರಿದು ಮಾಡಿಕೊಂಡು ಅಕ್ಷರಗಳನ್ನು ಗುರುತಿಸುವ ರೀತಿಯೇ ಅನನ್ಯವಾಗಿ ಕಂಡಿತು. ಸೊಸೆಗಾಗಿಯೋ; ಮೊಮ್ಮಗನಿಗಾಗಿಯೋ ಮೃತ್ಯುವನ್ನು ನೂಕುತ್ತಿರುವವರಂತೆ ಕಂಡರು.
"ಯಾಕೆ ಶಾಸ್ತ್ರಿಗಳೇ ಬರ್ಹೇಳಿದಿರಂತೆ!: ಮೌನ ಅಸಹನೀಯವಾಗಿ ನಾನೇ ನುಡಿದೆ.
ನೀನು ಹೀಗೆ ಮಾತಾಡಿ ಯಜಮಾನರ ಮೌನ ಕದಡಬಾರದಿತ್ತೆಂಬಂತೆ ಶಾಮ ನನ್ನ ಕಡೆ ವಾರೆಗಣಿಂದ ನೋಡಿದ.
ನೀನು ಮಾಡಿದ್ದು ಸರಿ ಎಂಬಂತೆ ಪರದೆ ಮರೆಯಿಂದ ಅಲುಮೇಲಮ್ಮನವರು ನನ್ನ ಕಡೆ ನೋಡಿದರು.
ಶಾಸ್ತ್ರಿಗಳು ನಿಧಾನವಾಗಿ ಹೊತ್ತಿಗೆಯಿಂದ ಮುಖ ಎತ್ತಿ ನನ್ನ ಕಡೆ ವಶೀಕರಣ ಮಾಡಲಿರುವವರಂತೆ ಒಂಚಣ ನೋಡಿದರು. ನಿಡುಸುಯ್ದರು. ವರ್ತಮಾನದ ಮೂರು ತಿಂಗಳ ಮಗುವಿನಂತಿರುವ ಅವರು ಏನು ನುಡಿವರೋ? ಏನೋ?
"ಯಾವ ಘನಂದಾರಿ ಕೆಲಸ ಕಡಿಯೋಕೆ ಲಾಂಗ್ ಲೀವ್ ಹಾಕ್ತಿದ್ದೀಯಯ್ಯಾ? ... ಕೈ ಕಾಲು ಸುಮ್ನೆ ಇಟ್ಕೊಳ್ಳೊ ಹುಡುಗನಲ್ಲ ನೀನು! ಇಷ್ಟೇ ಇಷ್ಟು ತಲೆನೋವಾದೋನು ನೀನು ಇನ್ನು ಊರಿಗೆ ಹೋದಮೇಲೆ ಏನೇನು ಮಾಡ್ತೀಯೋ! ಯಾರಾರ್ನ ಎದುರಾಕ್ಕೊಳ್ತೀಯೋ ಆ ದೇವ್ರಿಗೇ ಗೊತ್ತು!"... ಎಂದು ಬಿಡಿಸಿ ಸಾಹೇಬರು ಪಿತೃ ಸ್ತಾನದಲ್ಲಿ ಕುಂತು ಹಿತವಚನ ನುಡಿದು ರಜೆ ಮುಂಜೂರು ಮಾಡಿದ್ದು ನೆನಪಾಯಿತು.
"ಮಾ ಬಡಿನಿ ಮಾಲಮಾದಿಗೋಳ್ಳು ಉಂಡೇ ಕೇರಿಕಿ ತೀಸ್ಕೋ ಪೋಯಿನವಾಡು ಮಾ ಚೇತಿಕಿ ದೊರಕ್ಕ ಪೋತಾಡಾ... ವಾಡಂತು ಚೂಸ್ಕೊಂಟಾಮು... ರೇಪೋ ಎಲ್ಲುಂಡೊ ವಾಡಿಕಿ ಪೂಜಾಲು ಪುನಸ್ಕಾರಾಲು ಜರಿಪಿಸ್ತಾಮು" ಎಂದು ಊರಿನ ಮುಖಿಯಾ ಜಗನ್ನಾಥ ರೆಡ್ಡಿ ಶಪಥ ಮಾಡಿದ್ದರಿಂದಲ್ಲವೆ ತಾನು ಅವರಿವರ ಮಾತಿಗೆ ಕಟ್ಟು ಬಿದ್ದು ಲಾಂಗ್ ಲೋವ್ ಅಪ್ಲೆ ಮಾಡಿದ್ದು.
ಅಲ್ಲಿಯದು ಒಂದು ನಮೂನಿ ಬದುಕು! ಇಲ್ಲಿಯದು ಇನ್ನೊಂದು ನಮೂನಿ ಬದುಕು. ಸನಾತನತೆಯನ್ನು ಪೊರೆದು ಪೊಷಿಸುತ್ತಿರುವ ಆ ಜಮೀನ್ದಾರರ ಊರುಗಳಲ್ಲಿದ್ದಿದ್ದರೆ ಶಾಸ್ತ್ರಿಗ್ಳು


೨೩೦

ಇಲ್ಲಿಗಿಂತ ಹೆಚ್ಚು ಸುಖವಾಗಿರುತ್ತಿದ್ದರೆಂದುಕೊಂಡೆ.
ಕಣ್ಸನ್ನೆಗೆ ಮಣಿದು ಶಾಮ ಲಕೋಟೆಯನ್ನು ಅವರ ಕೈಗೆ ಕೊಟ್ಟ.
ಅದರಲ್ಲಿದ್ದುದು ಅವರಿಗೆ ಅರ್ಥವಾದರೆ ತಾನೆ!
ನನಗೆ ಓದಿ ಹೇಳುವಂತೆ ಸೂಚಿಸಿದರು. ಓದಿ ಟೀಕಾತಾತ್ಪರ್ಯ ಸಹಿತ ವಿವರಿಸಿದೆ. ದಿನಾಂಕ ಸಮಯ ಸಮಯ ಎಲ್ಲವನ್ನು ಪಂಚಾಂಗದ ಭಾಷೆಗೆ ಪರಿವತಿಸಿ ಗುಣಿಸಿ ಭಾಗಿಸಿ ಕೂಡಿ ಕಳೆದು ಒಂದು ನಿಟ್ಟುಸಿರು ಬಿಟ್ಟರು.
ಲಕೋಟೆ ಕೈಗೆಟಗಿದ ತೇದಿ ಸಮಯ ಇತ್ಯಾದಿ ಎಲ್ಲವನ್ನೂ ಸಹ ಬೇರೆ. ದಿನಕ್ಕೆ ಹೋದರಾಗದೆ? ಆ ದಿನವೇ ಹೋಗಬೇಕೆ? ಒಂದು ದಿನ ಮೊದಲು ಹೋಗಿ ಬಂದರಾಗದೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು, ಸಂದೇಹಗಳು! ಅವಕ್ಕೆಲ್ಲ ಏನೆಂದು ಉತ್ತರಿಸುವುದು! ಆ ದಿನ ಹಾಜರಿರಬೇಕಾದ ಅಗತ್ಯ ತಿಳಿಸಿದೆ. ಇರಲಿಕ್ಕೊಂದು ಮನೆ ಬಿಟ್ಟರೆ ಬೇರೆ ಇರುವುದಾದರೂ ಏನು? ಚರಾಸ್ತಿ ಎಂದರೆ ಇದೊಂದೆ ಚಿರಾಸ್ತಿ ಎಂದರೆ ಇದೊಂದೆ. ಮದುವೆ ಆಗಲಿರುವ ಹುಡುಗನಿಗೊಂದು ನೌಕರಿ ಇರದಿದ್ದರೆ ಹೇಗಂತ.

ಅದಕ್ಕೂ ಒಂದೆರಡು ದಿವಸ ಮೊದಲು ಹೊಸಪೇಟೆಯ ಹೆಣ್ಣಿನ ಕಡೆಯವರಿಂದಲೂ ಬಂದಿದ್ದ ಪತ್ರದಲಿ ಇದನ್ನೇ ಪ್ರಸ್ತಾಪಿಸಲಾಗಿತ್ತಂತೆ.
ಸರ್ಕಾರಿ ನೌಕರಿ ಸೇರೋದು ನಿನಗಿಷ್ಟ ಇದೆಯಾ ಎಂದು ಶಾಸ್ತ್ರಿಗಳು ಶಾಮನನ್ನು ವಿಚಾರಿಸಿದರು. ಅವನೆ ತಲೆ ಅಲ್ಲಾಡಿಸಿದ್ದು ಕಂಡು ಕೋಪಗೊಂಡರು. ಒಂದಿಷ್ಟು ವೈದಿಕ ಕಲ್ತುಕೊಂಡಿದ್ದ್ರೆ ಗೌರವದಿಂದ ಬದುಕಬಹುದಿತ್ತಾ? ಎಂದು ಶುರು ಮಾಡಿದರು. ಗತಕಾಲವನ್ನು ಕೆದರುತ್ತಲೇ ಹೋದರು. ಕೆದರಿದ ಆಳದಲ್ಲಿ ಶಾಮನನ್ನು ಹೂತು ಹಾಕುತ್ತಿರುವವರಂತೆ ಕಂಡರು. ರಾಹು ವಾಸ ಮಾಡುತ್ತಿರುವ ದಿಕ್ಕಿನಲ್ಲಿರೋ ನಗರಕ್ಕೆ ಹೇಗೆ ತಮ್ಮ ಮೊಮ್ಮಗನನ್ನು ಕಳಿಸುವುದೆಂದೂ; ಅದೂ ಅಲದೆ ನಾಮ ನಕ್ಷತ್ರ ಇರೋ ದಿನ ತ್ರಯೋದಶಿ ಕೂಡ ... ಅಪ್ಪಿತಪ್ಪಿ ಹಿರಿಯರೂ; ಜ್ಯೋತಿಷ್ಯಾಸ್ತ್ರವೇ ಮೊದಲಾದ ಗ್ರಂಥಗಳು ಖಡಾಖಂಡಿತವಾಗಿ ಹೇಳಿರುವುದೆಂದು ಅವರು ಮಂಡಿಸಿದ ಹೊಸ ವ್ಯಾಖ್ಯಾನದಿಂದಾಗಿ ನಖಶಿಖಾಂತ ಕಂಪಿಸಿದೆ. ಇನ್ನು ಇವರನ್ನು ಒಪ್ಪಿಸುವುದು ಅಸಾಧ್ಯವೆಂಬ ಭಾವನೆ ಮೂಡಿತು.

"ಶಾಸ್ತ್ರಿಗಳೇ ನೀವು ದೊಡ್ಡವರು ... ತಿಳಿದಂಥೋರು ... ಇವೆಲ್ಲದರ ಜೊತೆಗೆ ಅವನ ಭವಿಷ್ಯದ ಬಗ್ಗೆ ಯೋಚಿಸೋದೂ ಮುಖ್ಯ ... ಮತ್ತೊಂದು ಇಂಟ್ರೂ ಬರ್ತದೆಂದು ನಂಬ್ಲಿಕ್ಕಾಗದು ... ನೀವು ಮಾಡಿದ ಪುಣ್ಯದಿಂದ ಹೇಗೋ ಬಂದಿದೆ... ಇದರ ಮೇಲೆ ನಿಮ್ಮಿಷ್ಟ" ಎಂದು ನಾನು ನಿಟ್ಟುಸಿರು ಬಿಟ್ಟೆ.
"ಲೋ ಈ ಸಾರಿ ಏನಾದ್ರು ಪಂಚಾಂಗ ಗಿಂಚಾಂಗಾಂತ ಮಿಸ್ ಮಾಡ್ಕೊಂಡಿ ಅಂದ್ರೆ ನೀನು ಜನ್ಮದಲ್ಲೇ ಉದ್ಧಾರಾಗೋಲ್ಲ" ಎಂದು ನಾನು ಅವನಿಗೆ ಹಿಂದಿನ ದಿನವೇ ಹೇಳಿದ್ದನ್ನು ಕಣ್ಸನ್ನೆ ಮೂಲಕ ನೆನಪಿಸಿಕೊಟ್ಟೆ.
ದೇಹದ ಸಮಸ್ತ ಶಕ್ತಿಯಾನ್ನು ನಾಲಿಗೆಗೆ ತಂದುಕೊಂಡಂತವನಂತೆ ಅವನು -
" ಇಲ್ಲ ತಾತ... ಇದೊಡ್ಸಾರಿ ಒಪ್ಕೊಂಡು ಸಹಕರಿಸಿ ... ನಾನು ಇಂಟ್ರೂಗೆ ಹೊಗ್ಲೇಬೇಕು"


೨೩೧

ಎಂದು ಅವನು ನುಡಿದಿದದ್ದು ನನಗೆ ಆಶ್ಚರ್ಯ ಮತ್ತು ಗಾಬರಿ ಒಟ್ಟೊಟ್ಟೊಗೆ ಆದವು.
ಶಾಸ್ರಿಗಳು ಅಸಹಾಯಕತೆಯಿಂದ ನೋಡಿದರು.
ಪರದೆಯಿಂದೀಚೆ ಬಂದು ಅಲುಮೇಲಮ್ಮ ಮಾವನವ್ರೇ ... ಕಾಲ ಬದಲಾಗಿದೆ ... ಅದ್ಕೆ ತಕ್ಕಂತೆ ಹೊಂದ್ಕೊಂಡ್ರೇನೆ ಬದುಕು. ... ದಯವಿಟ್ಟು ತುಂಬು ಹೃದಯದಿಂದ ಮಗೂಗೆ ಆಶೀರ್ವಾದ ಮಾಡಿ ಕಳಿಸಿ ... ನನ್ ಮಗ್ನೂ ನಾಲ್ಕು ಮಂದಿ ಮಕ್ಳಂಗೆ ಸುಖವಾವಿ ಬಾಳಬೇಕು... ದೇವರಿಟ್ಟಂತಾಗ್ತದೆ" ಎಂದದ್ದು ಕೂಡ ಬಹುದೊಡ್ಡ ಪವಾಡವೇ ಎಂದುಕೊಂಡೆ ...
"ಆಯ್ತು" ಎಂದವರೆ ಶಾಸ್ತ್ರಿಗಳು ಸೀದ ಒಳಗಡೆ ನಡೆದು ಮಂಚದ ಮೇಲೆ ಒರಗಿಕೊಂಡರು. ಅವ್ರು ಮರುಗುವಾಗ ಕೀರ್ಕು ಕೀರ್ಕು ಎಂಬ ಸದ್ದು ಬಂತು.
ಶಾಸ್ತ್ರಿಗಳು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟಿರುವುದರಿಂದ ಅವರಿಬ್ಬರ ಪೈಕಿ ಯಾರ ಮುಖವೂ ಗೆಲುವಾಗಿರಲಿಲ್ಲ ... ಆತಂಕದ ಕ್ಷಣಗಳನ್ನು ಎಣಿಸುತ್ತಿರುವವರಂತೆ ಅವರು ಗೋಚರಿಸಿದರು. ಶಾಮನ ಭುಜದ ಮೇಲೆ ಕೈಯಿಟ್ಟು ಧೈರ್ಯ ಹೇಳಿದೆ.
ಬೃಂದಾವನ ಕಟ್ಟೆ ದಾಟುವಾಗ ಬೇರೊಂದು ಬಾಗಿಲಿಂದ ಬಂದ ಅಲುಮೇಲಮ್ಮ ನನ್ನ ಕೈ ಹಿಡಿದು ಕಂಣಲ್ಲಿ ನೀರು ತಂದುಕೊಂಡರು.
"ನೀನೂ ನನ್ನ ಮಗ ಇದ್ದಂಗೆ ಕಣಪ್ಪ ... ಶಿವ ಅಂದುಕೊಂಡಂತಾಗಲಿ ... ಸರ್ಕಾರಿ ನೌಕರಿ ಸಿಗದಿದ್ರೆ ಅವನು ಸಂಸಾರ ತೂಗಿಸೋದಾದ್ರು ಹ್ಯಾಗೆ?" ಎಂದು ಕಣ್ಣೊರೊಸಿಕೊಂಡು,
ಇನ್ನೊಬ್ಬ ಮಗ ಇದ್ದಿದ್ರೆ ವೈದಿಕ ಕಲಿಸಬೌದಿತ್ತಪ್ಪಾ ... ಆದ್ರೆ ಏನು ಮಾಡೋದು ಹೇಳು!" ಎಂದು ಗದ್ಗದಿತಳಾದಳು.
ಮಂಗಳಾರತಿ ಕೊಟ್ಟರೆ ಉಷ್ಣ; ತೀರ್ಥ ಕೊಟ್ಟರೆ ನೆಗಡಿ ಎಂಬ ಸ್ವಭಾವದ ನಾನು ಒಂದು ಕ್ಷಣ ವಿಚಲಿತನಾದೆ. ಕಂಠ ಕಟ್ಟಿ ಬಂದು
"ನೀವೇನು ಚಿಂತೆ ಮಾಡ್ಬೇಡ್ರಮ್ಮಾ ... ದೇವ್ರಿದ್ದಾನೆ" ಎಂದು ಅವರ ಭಾಷೆಯಲ್ಲಿ ಹೇಳಿದೆ.

ಅಷ್ಟು ದೂರದವರೆಗೆ ಶಾಮ ನನ್ನ ಜೊತೆಗೆ ಬಂದ. "ನನ್ನ ಜೊತೆ ನೀನೂ ಬರಬೇಕು" ಎಂದು ನನ್ನನ್ನು ಪೇಚಿನಲ್ಲಿ ಸಿಕ್ಕಿಸಿದ. ಉತ್ತರಿಸಲಾಗದೆ ಉಗುಳು ನುಂಗಿದೆ. ತ್ರಯೋದಶಿ ದಿನವೇ ನಾನು ನನ್ನ ಮೇಲಿನ ಸಂಪೂರ್ಣ ಅಧಿಕಾರದಿಂದ ದೂರವಾಗುತ್ತಿರುವುದು. ರಜೆ ಅಂದಿಗೆ ಮುಗಿಯುತ್ತಿದೆ. "ಆ ರೋಜು ನುವ್ವು ಡ್ಯೂಟಿಕಿ ರಿಪೋರ್ಟ್ ಚೇಸುಕುಂಟೇನೇ ತೆಸರಿ. ಲೇಕಪೋತೆ ಉದ್ಯೋಗಂ ಪೋಗೊಟ್ಟುಕೊಂಟಾವು... ಉಪ್ಪು ತಿನ್ನೋಡು ನೀಳ್ಳು ತ್ರಾಗವಲಸಿಂದೇ" ಎಂದು ಬಿಡಿಓ ಸಾಹೇಬರು ಕಡ್ಡಿ ಮುರಿದಂತೆ ಹೇಳಿದ್ದು ನೆನಪಾಯಿತು. ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡರೆ "ನೀ ಅಂತು ಚೂಸ್ಕುಂಟಾನು" ಎಂದು ಶಪಥ ಮಾಡಿರುವ ಜಗನ್ನಾಥ ರೆಡ್ಡಿ ನೆನಪಾದ. ಯಾವ ಕಡೆಗಂತ ಸಾಯುವುದು? ಇದನ್ನೆಲ್ಲ ಬಿಡಿಸಿ ಹೇಳಿದರೆ ಶಾಮ ಅರ್ಥ ಮಾಡಿಕೊಳ್ಳುವ ಪೈಕಿಯಲ್ಲ. ಒಂದು ನಮೂನಿ ಮನುಷ್ಯ.

"ಶಾಮ ನನಗವತ್ತು ಬರ್ಲಿಕ್ಕಾಗ್ತದೋ ಇಲ್ವೋ?... ಅವತ್ತು ನಾನು ಡ್ಯೂಟಿಗೆ ರಿಪೋರ್ಟ್ ಮಾಡ್ಕೊಳ್ಳದಿದ್ದ್ರೆ ಮತ್ತೆ ಅಂತರ್ ಪಿಶಾಚಿ ತರ ಅಲೆಯಬೇಕಾಗುತ್ತೆ. ಕಟ್ಟಿದ ಬುತ್ತಿಯಂಥವನು ನಾನು. ಜೊತೆಗೆ ಜಲಜಾಕ್ಷಿಯನ್ನು ಕರೆದುಕೊಂಡು ಹೋಗು... ನೀನು ಒಂದು ಕಡೆ ಸೆಟಲ್ ಆಗಬೇಕೂಂತ ಅವಳಿಗೂ ಆಸೆ ಇದೆ..." ಎಂದೆ.
"ಆಕೆ ಬೇಡ" ಒಂದು ನಿಟ್ಟುಸಿರು ಬಿಟ್ಟು ಹೇಳಿದ. "ಸರೆ ಬಿಡು... ನಾನೊಬ್ನೆ ಹೋಗಿ


೨೩೨

ಬರ್ತೀನಿ... ಏನಾಗ್ಬೇಕೋ ಅದಾಗ್ತದೆ ಅಷ್ಟೆ" ಎಂದು ದುರ್ದಾನ ತೆಗೆದುಕೊಂಡವನಂತೆ ಹೋಗಿಬಿಟ್ಟ.
ಅವನು ಮರೆಯಾಗುವವರೆಗೆ ನಿಂತಿದ್ದು ನಾನು ಮನೆಗೆ ವಾಪಸಾದೆ...

ಸಾವಿರ ಸಾವಿರ ಕಥೆ ಕಾದಂಬರಿಗಳಿಗೆ ಒಮ್ಮೆಗೆ ಜೀವ ಬಂದು ಮಾತಾಡಲಾರಂಭಿಸಿದರೆ ಕೇಳುಗರ ಪರಿಸ್ಥಿತಿ ಹೇಗಾಗಬೇಡ? ನಮ್ಮ ಓಣಿಯ ಜಾಯಮಾನವೇ ಅಂಥಾದ್ದು. ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಎಂಬ ಬೃಹತ್ಕಾದಂಬರಿಯ ಎಲ್ಲ ಪಾತ್ರಗಳನ್ನು ಸಮಗ್ರವಾಗಿ ಪ್ರಕಟಿಸುತ್ತಿರುವ ರೀತಿಯಲ್ಲಿ ನಮ್ಮ ನಿಂಗಮ್ಮಜ್ಜಿಯ ವರ್ಣನೆ, ಓಣಿಯ ಸಚರಾಚರ ಕ್ರಿಯೆಗಳ ಮೇಲೆ ಸದಾ ಹತೋಟಿ ಸಾಧಿಸಿ ವಟಗುಟ್ಟುತ್ತಲೇ ಇರುತ್ತದೆ... ಸಮಾಜದ ಬದುಕನ್ನೇ ನಿರ್ದೇಶಿಸುವ ಅದರ ವರ್ತನೆ ವಿಸ್ಮಯಕರವಾದುದು. ಇವರನ್ನೆಲ್ಲ ಅವರವರ ಪಾಡಿಗೆ ಬಿಟ್ಟುಕೊಟ್ಟು ನೂರಾರು ಮೈಲಿ ದೂರದ ಆ ಊರಿಗೆ ನಾನು ಓಡಿಬಿಡಬೇಕು. ಬದುಕುವುದಾದರೆ ಅಲ್ಲೆ ಬದುಕಬೇಕು. ಸಾಯುವುದಾದರೆ ಅಲ್ಲೆ ಸಾಯಬೇಕು... ಹೋಗಿ ಹೆಚ್ಚಲು ನಾನು ಸವತೆಕಾಯಿಯಲ್ಲ ಎಂಬುದನ್ನು ಹಲಾಲ್‌ಟೋಪಿ ಜಗನ್ನಥ ರೆಡ್ಡಿಗೆ ಮನವರಿಕೆ ಮಾಡಿಕೊಡಬೇಕು. ಕನಸಿನಲ್ಲಿ ಮನಸ್ಸಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವ ಸಿಂಬಳಗೊಣ್ಣಿ ಮಕ್ಕಳನನ್ನು ಸಂತೈಸಬೇಕು... ಇಲ್ಲಿ ಬದುಕುವುದಕ್ಕಿಂತ ಅಲ್ಲಿ ಸಾಯುವುದು ಎಷ್ಟೋ ಮೇಲು ಎಂದುಕೊಂಡೆ.

ಅಲ್ಲಿದ್ದ ಎರಡು ಮೂರು ದಿನಗಳಲ್ಲಿ ಯಾವುದೇ ಕರೆ ಶಾಸ್ತ್ರಿಗಳ ಮನೆಯಿಂದ ಬರಲಿಲ್ಲ. ಶಾಮನೂ ನನ್ನನ್ನು ಕಾಣುವ ಪ್ರಯತ್ನ ಮಾಡಲಿಲ್ಲ... ಬಾಂಬೆ ಟೈಲರಿಮಾಮು "ಕ್ಯಾಜಿ ಮಾಸ್ತರು ... ನಿಮ್ ಜಿಗ್ರಿ ದೋಸ್ತು ಶಾಮರಾವ್ ಪ್ಯಾಂಟ್ ಶರ್ಟೂ ಹೊಲಿಯಾಕ ಕೊಟ್ಟಿರುವರೆ’ಂದು ಹೇಳಿದ. "ಯಾರಿಗೂ ಹೇಳಬೇಡ ಸಾಬು" ಎಂದು ಹೇಳಿರುವುದಾಗಿಯೂ ಹೇಳಿದ... ಆ ಉಡುಪಿನಲ್ಲಿ ಅವನನ್ನು ಕಲ್ಪಿಸಿಕೊಂಡು ಸಂತೋಷಪಟ್ಟೆ, ಆಧುನಿಕವಾಗಿ ಸಮಾಜಕ್ಕೆ ಗೋಚರಿಸಲು ಅವನು ಪ್ರತ್ನಿಸುತ್ತಿರುವುದೇ ಸಂತೋಷದ ಸಂಗತಿ. ಬಾಯಾರಿದ ಕುದುರೆ ತಾನೇ ನೀರು ಹುಡುಕಿಕೊಂಡು ಹೋಗಬೇಕೆ ಹೊರತು ನೀರೇ ಬಾಯಾರಿದ ಕುದುರೆಯನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ. ಅವನು ತನ್ನ ಬದುಕನ್ನು ತಾನು ರೂಪಿಸಿಕೊಳ್ಳುತ್ತಾನೆ... ಸದ್ಯದ ಪ್ರಪಂಚದಲ್ಲಿ ತನ್ನ ಅಸ್ತಿತ್ವವನ್ನು ತಾನು ಭದ್ರಪಡಿಸಿಕೊಳ್ಳುವುದು ಅವನಿಗೆ ಅನಿವಾರ್ಯ. ನನ್ನಂಥವರು ಹತ್ತಿರವಿದ್ದಷ್ಟೂ ಅವನಿಗೆ ತೊಂದರೆ! "ಅವನ ಬಗ್ಗೆಯಾಕೆ ಅಷ್ತೊಂದು ಹಚ್ಕೊಂತಿ... ಅವನ ಪಾಡಿಗೆ ಅವನನ್ನು ಬಿಟ್‌ಬಿಡು... ಜುಟ್ಟು ಮರೆಮಾಚಲಿಕ್ಕೆ ಕ್ರಾಪು ಬಿಡು ಅಂತ ನಾವ್ಯಾರಾದ್ರು ಅವನಿಗೆ ಹೇಳಿದ್ವಾ? ಇಂಥ ಇಬ್ಬಂದಿ ಮನುಷ್ಯರು ಹೆತ್ತವರ ಬೆನ್ನಿಗೆ ಭಾರಾಗ್ತಾ ಹೋಗ್ತಾರಯ್ಯಾ... ಒಂದು ಸಾರಿ ಅನುಕಂಪದ ರುಚಿ ನೋಡ್ದೋರು ಮತ್ತೆ ಮತ್ತೆ ಅದನ್ನೇ ನಿರೀಕ್ಷಿಸ್ತಾ ಇರ್ತಾರೆ... ಅನುಕಂಪ ಸೂಚಿಸೋದೇ ಕ್ಷಮಿಸಲಾರದ ಅಪರಾದ" ಎಂದು ಕಮಲಾಕರನೂ ನಿಷ್ಠುರವಾಗಿ ಹೇಳಿದ... "ಇಂಥವರು ತಾವಿರೋ ವ್ಯವಸ್ಥೇನ ಸ್ಪಿಲ್ಟ್ ಮಾಡ್ತಾನೇ ಇರ್ತಾರೆ... ಇಂಥೋರಿಂದಲೇ ಲೆಫ್ಟ್ ಮೂವ್‌ಮೆಂಟ್ಸು ಯಾರ್ಗೂ ಅರ್ಥ ಆಗದಂಗಾಗಿರೋದು... ಈ ಸಮಾಜಕ್ಕೆ ಅಗತ್ಯ ಇರೋದು ಇಂಥ ಮೃದ್ವಂಗಿಗಳೇ ಹೊರತು ನನ್ನಂಥೋರು ನಿನ್ನಂಥೊರಲ್ಲ ... ನೋಡ್ತಿರು, ಮುಂದೆ ನಮ್ಮೆಲ್ಲರಿಗಿಂತ ಶಾಮ ಸಮಾಜದ ಎಲ್ಲ ವರ್ಣಗಳ ಜನರಿಗೆ ಬೇಕಾದೋನಾಗಿ ಸುಖವಾಗಿರ್ತಾನೆ... ಅಂದರಿಕೆ ಮಂಚೋಡು ಅಂತ ಅನ್ನಿಸ್ಕೋತಾನೆ... ಇದ್ನೆಲ್ಲ ಬಿಟ್ಟುಕೊಟ್ಟು ನೀನು ನಿನ್ನ ಕೆಲಸ ಮಾಡ್ತಿರೋ ಊರಿಗೆ ಬದುಕಾದ್ರೂ ಬದುಕು.


೨೩೩

ಇಲ್ಲಂದ್ರೆ ಕೊಲೆ ಆದ್ರು ಆಗು...ನನ್ ಪತ್ರಿಕೆಗೆ ಒಂದೊಳ್ಳೆ ನ್ಯೂಸಾದ್ರು ಸಿಗ್ತದೆ... ಸಾಯ್ಲಿಕ್ಕಿಷ್ಟ ಇರದಿದ್ದ್ರೆ ... ಇಲ್ಲದ ರಿಸ್ಕ್ ತಗೊಂಡು ಬದುಕಲಿಕ್ಕೆ ಇಷ್ಟ ಇರದಿದ್ರೆ ರಾಜಿನಾಮೆ ಬಿಸಾಕಿ ಬಂದುಬಿಡು... ನನ್ ಪತ್ರಿಕೇಲಿ ವಾರಕ್ಕೊಂದಿಷ್ಟು ಬರೆವಂತೆ. ಹೆಚ್ಚಿನರದಿದ್ರೂ ... ನೀನು ಸಾಯದ ಹಾಗೆ ನೋಡ್ಕೋತೀನಿ... ಹ್ಹ...ಹ್ಹ... ಹ್ಹ..." ಎಂದು ನಗಾಡಿದ...ಕಮಲಾಕರ ಶಾಮನ ಉತ್ತರಾರ್ಧದ ಬದುಕಿಗೆ ಪೂರ್ವ ಪೀಠಿಕೆ ಬರೆಯುತ್ತಿದ್ದಾನೆಂದುಕೊಂಡೆ... ಆದರೆ ಶಾಮನನ್ನು ಆತ ಮೃದ್ವಂಗಿ ಹೋಲಿಸಿದ್ದು ನನಗೆ ಅಷ್ಟು ಸರಿ ಕಾಣಲಿಲ್ಲ... ಇನ್ನೊಬ್ಬರು ಅವನಲ್ಲಿ ಸುಲಭವಾಗಿ ಅವಿತುಕೊಳ್ಳಬಹುದಿತ್ತು... ಆದರೆ ಅದು ಸುರಕ್ಷಿತ ತಾಣವಲ್ಲವೆಂಬುದು ಸುಸ್ಪಷ್ಟ.

ಅದೇ ಹೊತ್ತಿಗೆ ಹೇಳಿಕಳಿಸಿದಂತೆ ಜಲಜಾಕ್ಷಿ ಬಂದಳು. ಮಹಿಳಾ ಮತ್ತು ಮಕ್ಕಳ ಸಂಕ್ಷೇಮಾಭಿವೃದ್ಧಿಯ ಜಿಲ್ಲಾ ಮೆಂಬರಾಗಿ ಕಳೆದ ವಾರವಹ್ಟೆ ನೇಮಕಗೊಂದಿದ್ದ ಆಕೆ ಹೆಚ್ಚು ಲವಲವಿಕೆಯಿಂದಿದ್ದಳು. ಅಭಿನಂದಿಸಿದ್ದೂ ಆಯಿತು. ಸ್ವೀಕರಿಸಿದ್ದೂ ಆಯಿತು. ಊರಿಗೆ ಹೊರಟಿದ್ದೀಯಂತೆ ಅಂದಳು. ಹ್ಹೂಂ ಅಂದೆ. ಮತ್ತೆ ಎಂದು ಬರ್ತೀಯಾ? ಎಂದಳು. ಬದುಕಿದ್ರೆ ದಸರೆ ರಜೆಗೆ ಎಂದೆ. "ಯಾಕೆ ಡೌಟಾ" ಅಂದಳು. "ಹ್ಹೂಂ" ಅಂದೆ. "ಯಾಕಪ್ಪಾ" ಅಂದಳು... ಅದೆಲ್ಲ ಒಂದೆರಡು ಮಾತ್ನಲ್ಲಿ ಹೇಳಕ್ಕಾಗೊಲ್ಲ ಮಾರಾಯ್ತಿ" ಅಂದೆ. "ಅಷ್ಟು ಡೇಂಜರಸ್ಸಾ ನೀನಿರೋ ವಿಲೇಜು" ಅಂದಳು.... "ಇಡ್ನಾಪ್ ಮಾಡೋರ ಥರಾ ಆಡ್ಡಾಡ್ತಿರೋ ಮಂದಿಯಿಂದ್ಲೇ ತುಂಬಿರೋ ಟಿಪಿಕಲ್ ವಿಲೇಜು ಕಣಮ್ಮಾ" ಅಂದೆ. "ನಿಮ್ಮಂಥ್ರು ಎಲ್ಲೂ ಉದ್ಧಾರಾಗೊಲ್ಲ... ರಿಜೈನ್ ಮಾಡ್ಬಿಟ್ಟು ಲೋಕಲ್ ಪಾಲಿಟಿಕ್ಸ್ ಸೇರ್ಕೋ" ಅಂದಳು... ನಾನು ನಕ್ಕೆ. ‘ಅದಿರ್ಲಿ ... ನನ್ನ ಜೊತೇಲಿ ಕರ್ಕೊಂಡು ಹೋಗೂಂತ ಆ ಪುಕ್ಕಲಿಗೆ ನೀನೆ ಹೇಳಿದೆಯಂತೆ ಹೌದಾ’ ಎಂದು ಕೇಳಿದಳು. ‘ಹೌದು ಇದ್ನ ನಿನಗ್ಯಾರು ಹೇಳಿದ್ರು?’ ಅಂದೆ.

‘ಅವ್ನೆ ಊರ್ತುಂಬ ಹೇಳ್ಕೊಂಡು ಅಡ್ಡಾಡ್ತಿದಾನೆ’ ಎಂದಳು. "ಕರೆದ್ರೆ ಹೋಗಿಬಾ ಜಲಜಾಕ್ಷಿ..." ಎಂದೆ. ಮೈಚಳಿ ಬಿಟ್ಟು ಕರೀಲಿ ಹೋಗಿ ಬರ್ತೀನಿ... ಹೇಗೋ ನನ್ಗೂ ಕೆಲಸ ಇದೆ ಅಲ್ಲಿ’ ಎಂದಳು. ಅವನು ಅಷ್ಟು ಸುಲಭವಾಗಿ ಕರೆಯುವ ಪೈಕಿ ಅಲ್ಲ ಅಂದುಕೊಂಡೆ. ಕರೆಯುವಂತೆ ಪ್ರೇರೇಪಿಸುವ, ಅಂಥ ಮಾನಸಿಕ ಸ್ಥಿತಿಯನ್ನು ನಿರ್ಮಾಣ ಮಾಡುವುದು ಕೂಡ ಅಷ್ಟು ಸುಲಭ ಸಾಧ್ಯವಿಲ್ಲವೆಂದುಕೊಂಡೆ.

ಪತ್ರಿಕಾ ಕಛೇರಿಯಿಂದ ಹೊರಗಡೆ ಬಂದಾಗ ಶಿವಪೂಜೆ ಸುರೇಶ್ಗೌಡ ಸಿಕ್ಕು "ಎಷ್ಟು ಜನರನ್ನ ಹಾಳುಮಾಡ್ಬೇಕೂಂತ ಮಾದ್ಯಾನ್ರಿ ಆ ನಿಮ್ಮ ಫ್ರೆಂಡು... ನಾನು ಬೇಯ್ಸಿದ ಗೆಣಸು ತಿಂಥಾ ಇದ್ದುದ್ನೇ ಫೋಟೊ ತೆಗೆಸಿ ಬೀಫ್ ತಿಂತಿದ್ದೇಂತ ಅಪಪ್ರಚಾರ ಮಾಡಿದ ಅವನ್ನ ನಾನು ಸುಮ್ನೆ ಬಿಟ್ಟೇನಾ... ನೋಡ್ತಿರಿ ಏನು ಮಾಡ್ತೀನಂತ..." ಎಂದು ಹಲ್ಲು ಕಡಿದ. ಮಿಲಿಟರಿ ಹೋಟಲಲ್ಲಿ ಬೇಯಿಸಿದ ಗೆಣಸೂ ಮಾರಾಟಮಾಡುವರೆಂಬ ಅಪರೂಪದ ಸಂಗತಿ ತಿಳಿಸಿದ ಆ ಮಹಾಶಯನಿಗೆ ಮನದಲ್ಲಿ ಧನ್ಯವಾದಗಳನ್ನು ಅರ್ಪಿಸಿ ಹೇಳಿದೆ. "ಹಾಗೇನಾದ್ರೂ ಅವನ ತಂಟೆಗೆ ಹೋದೀರಾ ಗೌಡ್ರೆ... ಅವನು ಮೊದಲೇ ಮಾಜಿ ನಕ್ಸಲೈಟು... ಇಂಥದ್ನೆಲ್ಲ ಕೇರ್ ಮಾಡೊ ಮನುಷ್ಯನಲ್ಲ... ಪ್ರಾಯಶ್ಚಿತ್ತ ಮಾಡಿಸಿಕೊಂಡು ಹೆಂಡ್ತೀನ ಕರ್ಕೊಂಡು ಬಂದು ಸುಖವಾಗಿರ್ರಿ" ಎಂದೆ. ಮತ್ತೆ ಕಿಡಿಕಿಡಿ ಆದ... "ಅದೊಂದು ಮಾತ್ನ ಮಾತ್ರ ಹೇಳ್ಬೇಡ್ರಿ ... ಮೇಸ್ಟ್ರೇ... ಉಗುಳಿದ ತಂಬೂಲಾನ ಮತ್ತೆ ಬಾಯಲ್ಲಿಟ್ಕೊಂಡು ನಮ್ಮ ಸಿವ ಪೂಜೆ ಮನತನಕ್ಕೆ ಅವಮಾನ ಮಾಡೋನಲ್ಲ ಈ ಸುರೇಶಗೌಡ..." ಎಂದು ಮೀಸೆ ತಿರುವಿದ... "ಇಂಥೋರ ಸಾವಾಸ ನಿಮ್ಮಂಥೋರಿಗೆ ಸರಿ ಅಲ್ಲ...


೨೩೪

ದೂರ ಇದ್ದು ಬಿಡಿ... ಈ ಕಮಲಾಕರ ನಿಮ್ಮ ಮೇಲೂ ಏನಾದ್ರೂ ಬರೀಬೌದು..." ಎಂದು ಬುದ್ಧಿ ಹೇಳಿ ಗರಂ ಮಸಾಲೆ ದಿನಸಿಗೆ ಹೆಸರಾದ ನಾಅಣೆಕೇರಿ ಶೆಟ್ರು ಅಂಗಡಿ ಕಡೆ ಹೋದ...

ನಾನು ಹೊರಡುವ ದಿನ ಹತ್ತಿರವಾದಂತೆ ನನ್ನ ನೌಕರಿಯ ಸ್ಥಳವಾದ ವಾಗಿಲಿ ಗ್ರಾಮದ ಸಾವಿರಾರು ಮುಖಗಳು ಕನಸಿನಲ್ಲಿ ಪ್ರಕಟವಾಗತೊಡಗಿದವು. ಕಾಲು ಹಾದಿಯಲ್ಲಿ ಕೆಸರಲ್ಲಿ ಬಲಗಾಲ ಬಾಟಾ ಕಳೆದುಹೋದಂತೆ, ರಿಜರು ಜಾಲಿ ಮರೆಯಿಂದ ಐದಾರು ಮಂದಿ ಒಮ್ಮೆಗೆ ಮುಗಿಬಿದ್ದಂತೆ, ಸಣಕಲು ನಾಯಿ ಅಟ್ಟಿಸಿಕೊಂಡು ಬಂದಂತೆ...ಜಗನ್ನಾಥ ರೆಡ್ಡಿಯ ಗುಳಾಪು ಕಂಣುಗಳ ಝಳಪಿಗೆ ಹಾದಿ ಮಂಕಾಗಿ ತಡವರಿಸಿದಂತೆ... ಬುರ್ರ ಕಥೆಯ ಬಾಬಯ್ಯ ಮತ್ತು ಸಂಗಡಿಗರುಬಿದ್ದು ಬಿದ್ದು ನಗುತ್ತಿರುವಂತೆ. ನಾನೇ ನನ್ನ ಚದುರಿಹೋದ ಅಂಗಾಂಗಗಳನ್ನು ಜೋಡಿಸಿ ಒಪ್ಪ ಓರಣ ಮಾಡುತ್ತಿರುವಂತೆ... ಸಮುದ್ರದ ಪೆಟ್ರೋಲಿಯಂ ರಾಡಿಯೊಳಗೆ ಹಾರಲಾಗದೆ ಒದ್ದಾಡುತ್ತಿರುವ ಭಾರಿ ರೆಕ್ಕೆಯ ಹಕ್ಕಿಯಂತೆ...

ಅತ್ತ ಹೊರಗಡೆ ಚುಮು ಚುಮು ನಸುಕಿನಲ್ಲಿ ಹನುಮಕ್ಕ ಹುಂಜವನ್ನು ಅಷ್ಟು ದೂರ ಅಟ್ಟಿಸಿಕೊಂಡು ಹೋಗಿ ಬಂದ ದಣಿಕೆಯಲ್ಲಿ ತನ್ನ ಮೊಮ್ಮಗನಾದ ಇನ್ನು ಗೃಹಸ್ತಾಶ್ರಮದ ಬಗ್ಗೆ ಅದೇ ತಾನೆ ಕಕ್ಕಸ್ಸು ಮುಗಿಸಿಕೊಂಡು ಬಂದಿದ್ದ ಶಂಬಯ್ಯನವರ ಬಳಿ ಉದ್ದೋಕೆ ಅಡ್ಡ ಬಿದ್ದು ಪ್ರವರಾಲಾಪನೆ ಶುರು ಮಾಡಿತ್ತು. "ಅದ್ನ ತೋರ್ಸಿದ್ರೆ ಅದನ್ನೊಪ್ಪಕೊಳ್ಳವಲ್ಲ...ಇದ್ನ ತೋರ್ಸಿದ್ರೆ ಇದನ್ನೊಪ್ಪಕೊಳ್ಳವಲ್ಲ... ಇವ್ನೀಗೆ ಹೆಂಡ್ತಿ ಆಗೋಳು ಈ ದೇಸದಾಗ ಯಾವ ಮೂಲ್ಯಾಗದಾಳಾ ಸೋಮಿ... ಸಣ್ಣೀಯ ಗಂಡನ ಬಿಟ್ಟ ಮಗ್ಳು ಗಂಟು ಬಿದ್ದಾಳಂತ... ದಿನಾಲು ಸವತ್ತಿಗೆ ಬಂದು ಮಕ್ಕಂಡು ಸಿಂಬಳದಾಗ ಬಿದ್ದ ನೊಣ ಒದ್ದಾಡದಂಗ ಒದ್ದಾಡ್ತಾನೆ ಸೋಮಿ... ಸರ್ಯಾಗಿ ಉಂಬುವಲ್ಲ... ಸರ್ಯಾಗಿ ನಿದ್ದೆ ಮಾಡುವಲ್ಲ... ಇವಂದೊಂದೂ ಅರ್ಥವಾಗವಲ್ದು. ರವ್ವೋಟು ಗ್ರಹಗತಿ ಇಚಾರಿಸಿ...ಹೊತ್ತುಟ್ಟುತ್ಲೇ ಜಾತಕ ಕುಂಡ್ಲಿ ತಗಂಬಂದು ತೋರಿಸ್ತೀನಿ..." ಎಂದೆಂದೇ ಸಮನೆ ನಾಲಗೆ ಬಡಕೊಳ್ಳತೊಡಗಿತ್ತು. ಅದಕ್ಕೆ ಪ್ರತಿಯಾಗಿ ಶಂಬಯ್ಯನವರು ನಿಟ್ಟುಸಿರುಬಿಟ್ಟು... "ನೀನೂ ನಾನೂ ಮಾಡೊದಿದರಾಗೇನೈತೆ ನಿಂಗವ್ವಾ... ಒಂದು ದೇವರ ನಂಬವೊಲ್ಲ... ಒಂದು ದಿಂಡರು ನಂಬುವಲ್ಲ... ಗುರಿ ಹಿರೇರ ಮೇಲೆ ಭಕುತಿ ಎಂಬುದು ಮೊದಲೇ ಇಲ್ಲ... ಇಂಥೊರ್ಗೆ ಹೇಳೇದು ಕೇಳೋದು ಉಂಟೇನು... ನಾಳೆ ಅಮ್ಮಾಸ್ಯೆ ಒಳ್ಗೆ ಬೆಳ್ಳಿ ಆಕಳ ಮಾಡಿಸಿ ನಮ್ಗೆ ದಾನ ಕೊಡು ಎಲ್ಲ ಸರಿಹೋಗತೈತಿ... ನೀನು ಎಮ್ಮೆ ಕರ ತೋರಿಸಿದ್ರು ಕಣ್ಮುಚ್ಚಿ ತಾಳಿ ಕಟ್ತಾನೆ ಹೇಳಿಲ್ಲಾಂದಿ ಕೇಳಿಲ್ಲಾಂದಿ ಮತ್ತೆ.. ಹ್ಹಾಂ!" ಎಂದಂದರು. ಅದಕ್ಕೆ ಮುದುಕಿ ಸಂತೋಷದಿಂದ ಉಬ್ಬಿ ಹೋಗಿ "ಹಂಗೆ ಮಾಡು ಶಿವಾ... ಅವನಂಗ ತಾಳಿ ಕಟ್ಟಿದಾಂದ್ರೆ ಬೆಳ್ಳೀದು ಯಾಕೆ ಬಂಗಾರದ್ದು ಮಾಡಿಸಿಕೊಟ್ಟೇನು!... ಹೆಂಗಾರ ಮಾಡಿ ನಮ್ಮ ಗಾಳೆಪ್ಪನ ಮಗ್ಳು ಚಂಬಸ್ವೀನ ಮದ್ವೆ ಆಗೋಂಗ ಮಾಡಿಬಿಡ್ರಿ... ಅದು ಕೈಯಿಗೆ ಬಂದು ಬರೋಬ್ಬರಿ ಎಳ್ಡು ತುಂಬಿ ಮೂರು ತಿಂಗಳಾಗ ಬಿದ್ದೈತಿ... ಎಲ್ಡು ಮೂರು ಸಾವ್ರ ಖರ್ಚು ಮಾಡಿ ಮನಿ ಮುಂದ ಕನ್ಯಾದಾನ ಮಾಡಿಕೊಡ್ತೀನಂತ ಒಂದೇ ಸಮ್ನೆ ಗಂಟು ಬಿದ್ದೈತಿ ನಮ್ ಗಾಳೆಪ್ಪ..." ಎಂದು ರಾಗ್ ಎಳೆಯಿತು. ಅದಕ್ಕಿದ್ದು ಶಂಭಯ್ಯನವರು "ಯಾರು ಬೇಡಂತಾರ ನಿಂಗವ್ವಾ... ಇನ್ನು ಒಳ್ಳೆದಾತಲ್ಲ... ಏನು ಬಿಟ್ರು ಕಳ್ಳುಬಳ್ಳಿ ಬಿಡಬಾರ್ದು ನೋಡು... ಅವನ್ಗೆ ಜಳಕಾಪಳಕಾ ಮಾಡ್ಸಿ ನಮ್ಮತ್ರ ಕರ್ಕೊಂಡ್ಬಾ...ನವಗ್ರಹದ ಅಂತ್ರ ಮಂತ್ರಿಸಿ ಕಟ್ಟಿ ನಾಕು ಬುದ್ಧಿ ಮಾತು ಹೇಳ್ತೀನಿ..." ಎಂದು ಅಪ್ಪಣೆ ಮಾಡಿ ಮತ್ತೆ ಕಕ್ಕಸ್ಸು ಜೋರಾಗಿ ಬರಲು ವಿಸರ್ಜನೆಗೆಂದು ಮತ್ತೆ ಬಸವನ ಬಾವಿ ತಗ್ಗಿನ ಕಡೆ ಓಡಿದರು. ನಮ್ಮ


೨೩೫

ಓಣಿಯ ಗಡಿಯಾರವೆಂದೇ ಹೆಸರಾಗಿರುವಾಸಿಯಾಗಿರುವ ಅವರು ಒಂದೊಂದು ವರ್ತನೆ ದಿನದ ನಿರ್ದಿಷ್ಟ ಸಮಯವನ್ನು ಟಾಂ ಟಾಂ ಹಾಕುವುದು. ನಸುಕಿನಲ್ಲಿ ಜಿರಕೂ ಪುರಕೂ ಸದ್ದು ಮಾಡುತ್ತ ತಂಬಿಗೆಯೊಡನೆ ಹೋಗುವುದು ಬೆಳ್ಳಿ ಚುಕ್ಕಿ ಉದಿಸಿದ ಸೂಚನೆಯನ್ನು ನೀಡಿದರೆ ರಾತ್ರಿ ಲಿಂಗಮುದ್ರೆ ಕಲ್ಲಿಗೆ ಎರಉ ಕೈಗಳನ್ನೂರಿ ಬಲವಾಗಿ ತಿಣುಕಿ ಡರ್ರೋಽಽ ಎಂದು ಜಘನಗಳಿಂದ ಭುಂಗಾ ಊದಿದರೆ ಹತ್ತು ಗಂಟೆ ದಾಟಿದೆ ಎಂದೇ ಅರ್ಥ. ಹೀಗೆ ಒಂದೊಂದು ಸಮಯಕ್ಕೆ ಒಂದೊಂದು ಸವಂಡು ಮಾಡುತ್ತ ಓಣಿಯ ದಿನಚರಿಯನ್ನು ನಿರ್ದೇಶಿಸುವ ಅವರೆಂದರೆ ನಮ್ಮ ನಿಂಗಮ್ಮಜ್ಜಿಯೇ ಮೊದಲಾಗಿ ಎಲ್ಲರಿಗೂ ವಿಶೇಷ ಗೌರವ. ಆದರೆ ನಾನು ಮಾತ್ರ ಮಂಡೆ ಸೋರೆ ಕಾಯಿಗೆ ಬುದ್ಧಿ ಬಂದಂದಿನಿಂದ ನನ್ನ ಪವಿತ್ರ ಮಸ್ತಿಷ್ಟವನ್ನುಅಂಟಿಸಿದವನಲ್ಲ... ಊರಿಗೆ ಬಂದವನು ನೀರಿಗೆ ಬಾರದಂಗಿರ್ತೀಯಾ ಎಂದು ಅವರೂ ಕಾಯುತ್ತಿರುವರು... ಅದಕ್ಕೆ ನಮ್ಮಜ್ಜಿಯ ಸಪೋರ್ಟು ಬೇರೆ...

ಇವರ ಡೈಲಾಗುಗಳಿಂದಾಗಿ ಕನಸುಗಳೆಲ್ಲ ಚದುರಿ ಹೋಗಿ ಎಷ್ಟೋ ನಿರುಮ್ಮಳವಾದೆ... ಇಲ್ಲಿ ಬದುಕುವುದಕ್ಕಿಂತಾ ಅಲ್ಲಿ ಕೊಲೆಯಾಗುವುದನ್ನೇ ಚಲೋ ಎಂದು ಮತ್ತೆ ಅಂದುಕೊಂಡೆ... ತನ್ನಾಯುಷ್ಯದ ಕಾಲು ಭಾಗವಿರುವ ನನ್ನ ಸಂಸ್ಕಾರ ಕೈಯಾರ ನೆರವೇರಿಸಿದ ನಂತರವೇ ಮುದುಕಿ ತನ್ನ ನಾಲಿಗೆಯನ್ನು ಲಾಕರಿನಲ್ಲಿ ಭದ್ರಪಡಿಸುವುದು. ಸತಿ ಹೋಗುವ ಮಹಿಳೆ ಚಿತೆ ಏರುವ ಪೂರ್ವದಲ್ಲಿ ವರ್ತಿಸುತ್ತಾಳಲ್ಲ ಹಾಗೆ ನಾನು ನನ್ನ ಕಿವಿತಳ ತಮಟೆಗೆ ಅಟೆಯುತ್ತಿದ್ದ ಯಾವ ಶಬ್ದಕ್ಕೂ ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ ಮಠದಲ್ಲಿ ಎರಡನೆ ಪೂಜೆ ಮುಗಿವ ವೇಳೆಗೆ ನನ್ನ ಯಾವತ್ತೂ ಕಾರ್ಯಕ್ರಮಗಳನ್ನು ಪೂರೈಸಿದೆ... ಮುವ್ವರು ಮನೆಯ ಒಂದೊಂದು ಮೂಲೆ ಹಿಡಿದು ಬಿಸಿಯುಸಿರು ಬಿಡತೊಡಗಿದ್ದರು.

"ಲೋ ಸೋಮೇರ್ಗೆ ಅಡ್ಡಬಿದ್ದು ಹೋಗೋ... ಹೋಗೋದು ಹೋಗ್ತಿ" ಎಂದು ನಿಂಗಮ್ಮಜ್ಜಿ ಪರಪರ ತಲೆ ತುರಿಸಿಕಂತು.
"ಸುಮ್ನಾಗಿರಾಕ್ನು ಗಂಟ್ತಗಂತೀಯಬೇ ನಮ್ಮವ್ವಾ, ಆ ಹುಡುಗನ ಜೀವ ಯಾಕ ತಿಂತೀ?" ಎಂತು ಅದರ ತಂಗಿ...
"ಹೋಗಿ ಹೋಗಿ ಆ ಘನವಾದಾಕೀನ್ಯಾಕ ತಡವ್ತೀಯೇ...ಆಕೆಂಗಾರ ಮಾತಾಡ್ಕಳ್ಳಿ... ನೀನೊಂದೆ ಬಾಯಿ ಬಡ್ಕಂಡಿರು" ಅಂತಂದಳು ನಮ್ಮ ದೊಡ್ಡವ್ವ...
ಕೆರೆದು ಕೇರು ಬಡಿಸಿಕೊಂಡಂತಾಗಿ ನಿಂಗಮ್ಮಜ್ಜಿ ದಿಗ್ಗನೆದ್ದು ಬದ್ಧಭ್ರುಕುಟಿಯಾಗಿ ನನ್ನ ಮೇಗಣ ಸಿಟ್ಟನ್ನೆಲ್ಲ ಕ್ರೋಡೀಕರಿಸಿ " ನನ್ನೇ ಘನುವಾದಾಕಿ ಅಂತಿ ಏನಬೇ" ಎಂದು ಖಾಸಾ ತಂಗಿಯ ಮೇಲೆ ಏರಲು ಹೋಗಲು ಧರ್ಮರಕ್ಷಣೆಗಾಗಿ ಕುರುಕ್ಷೇತ್ರ ಆರಂಭವಾಯಿತೆಂದೂಹಿಸಿ ನಾನು ಬ್ಯಾಗೆಂಬ ಬೇತಾಳವನ್ನು ಹೆಗಲಿಗೆ ನೇತು ಹಾಕಿಕೊಂದು ಸಿಂಹದ ಗವಿಯೊಳಗಿಂದ ಹರಿಣ ಓಡುವಂತೆ ಮನೆಯಿಂದ ಹೊರಬಿದ್ದೆ. ಕಣಗಿಲೆ ಮತ್ತು ದಾಸವಾಳ ಗಿಡಗಳ ನಡುವೆ ಶತಪಥ ಹಾಕುತ್ತಿದ್ದ ಶಂಬಯ್ಯರನ್ನು ಹಾದು ಶರಣ ಗುರುಬಸವ ಮಗುವಾಗಿ ಆಡಿ ಬಂಜೆಯೋರ್ವಳ ತಾಯ್ತನ ಪೊರೆದನೆನ್ನಲಾದ ತೊಟ್ಟಿಲು ಮಠದ ಮುಂದಿನಿಂದ ಕರಗಲ್ಲು ದಾಟಿ ತೇರು ಬೀದಿಯಲ್ಲಿ ತೇಲಿದಾಗ ಊರಿಗೆ ತಲೆನೋವಾಗಿರುವ ಕೆರೆಕಟ್ಟೆ ಪಕ್ಕೀರ ರಂಗಾರಿಯರ ಹುಡುಗಿಯನ್ನು ಚುಡಾಯಿಸಿ ಬೀದಿಜಗಳಕ್ಕಿಳಿದಿರುವ ದೃಶ್ಯ ಎದುರಾಯಿತು. ಬಾಯಿ ಸತ್ತ ಪಾಂಡುರಂಗ "ಇಂಥೋರೆ ಊರಲ್ಲಿದ್ರೆ ನಮ್ಮಂಥೋರು ಬಾಳುವೆ ಮಾಡುವುದಾದ್ರು ಹೆಂಗ್ರೀ... ನೀವಾರ ಆ


೨೩೬

ಲುಚ್ಛಾಗೆ ಬುದ್ಧಿ ಹೇಳ್ರಿ ಎಂದು ಕಲೆ ಬಿದ್ದ..." ನನ್ನನ್ನು ಊರಿಗೆ ಹೋಗದ ಹಾಗೆ ತಡೆದು ನಿರ್ನಾಮ ಮಾಡುವ ಸಂಚೊಂದು ನಡೆಯುತ್ತಿರುವುದೆಂದು ಭಾವಿಸಿ "ನಿಮ್ಗೆ ನೀವು ಮೆಡುವ ಚಡಾವು ಎಲ್ಲಿವರ್ಗೂ ಅರ್ಥ ಆಗಲ್ವೋ ಅಲ್ಲಿವರ್ಗೆ ನೀವು ಎದೆ ಸೆಟ್‌ಎಸಿ ಬದುಕಲಾರಿರಿ" ಎಂದು ನಾನಾದರೂ ಯಾಕೆ ಹೇಳಬೇಕು? ಎಂದು ಅವನನ್ನು ತಳ್ಳಿಕೊಂಡು ದಲಿತ ಮಹಿಳೆ ಶರಣೆಗೆ ತುಪ್ಪದಾರತಿ ಬೆಳಗುವ ಬಯಲಿಗೆ ಬಂದಾಗ ರೈತರ ದಾಂಧಲೆಯಲ್ಲಿ ನಡೆದ ಗೋಲಿ ಬಾರಿನಲ್ಲಿ ಎಡಗಾಲನ್ನು ಕಳೆದುಕೊಂದಿರುವ ಸ್ವಾತಿ ಸ್ಟೋರಿನ ಚಂಬಸಪ್ಪ "ರೀ ಸಾರೂ...ಎಲ್ಲೋ ಹೊಂಟಂಗೈತೆ" ಬರುವುದು ಕಂಡು ಎದೆ ಧಸಕ್ಕಂತು. ಅರೆ ಇವನು ಬಾಕಿ ಕೇಳ್ತಾನೆಂದುಕೊಂಡು ಕೇಳಿಸಿಯೂ ಕೇಳದವನಂತೆ ಲಗುಬಗೆಯಿಂದ ಹೆಜ್ಜೆ ಹಾಕಿ ಹೇಗೋ ಒಂದು ರೀತಿ ಗುಜರೀ ಸ್ವರೂಪ ತಳೆದಿದ್ದ ಬಸ್‌ಸ್ಟ್ಯಾಂಡ್ ತಲುಪಿ ನೆಮ್ಮದಿಯ ಉಸಿರು ಬಿಟ್ಟೆ... ಬಸ್ಸು ಹೋಗದಿದ್ದರೆ ಎಂಬಾತಂಕ ಮರುಕ್ಷಣ ಆವರಿಸಿಬಿಟ್ಟಿತು... ಪುರ್ವ ದಿಕ್ಕಿನ ಕಡೆ ಹೊರಡುವ ಯಾವುದೇ ಬಸ್ಸು ಹತ್ತಿ ಕೊಂಕಣ ಸುತ್ತಿಯಾದರೂ ಮೈಲಾರ ತಲುಪಿ ಕೊಡಲಿ ಕುಡುಗೋಲುಗಳಿಗೆ ಎದೆಯೊಡ್ಡಿ ನಿಲ್ಲಬೇಕೆಂದು ನಿರ್ಧರಿಸಿದೆ. ಯಾರಾದರೂ ಬಂದು ನಿನ್ನ ಕೊನೆಯಾಸೆ ಏನೆಂದು ಕೇಳಿಯಾರೆಂಬ ಭಯದಿಂದ ಅವರು ಬಂದರೆ ಇತ್ತ ತಿರುಗಿದೆ. ಇವರು ಬಂದರೆ ಅತ್ತ ತಿರುಗಿ ಹೇಗೋ ಒಂದು ರೀತಿ ಬಚಾವಾಗುತ್ತಿರುವಾಗ ಮುಗಿಲು ಮಟ ಧೂಳೆಬ್ಬಿಸಿಕೊಂಡು ಬಂದ ಬಸ್ಸನ್ನು ಅದು ನನ್ನಪ್ಪನ ಮನೆಯ ಆಸ್ತಿ ಎಂದು ಭಾವಿಸಿ ಒಂದರಲ್ಲಿ ನುಗ್ಗಿ ಮೂಲೆಯಲ್ಲಿ ಅಡಗಿ ಕೂತೆ. ನೈರುತ್ಯ ವಲಯದ ಯೂನಿಯನ್ನವರು ಕಳೆದೆಂಟು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹದ ಬಗ್ಗೆ ಡ್ರೈವರು ಡ್ರೈವರುಗಳೊಂದಿಗೆ; ಕಂಡಕ್ಟರು ಕಂಡಕ್ಟರುಗಳೊಂದಿಗೆ ಚರ್ಚಿಸುತ್ತಿರುವಾಗ ಚಾಕಲಿ ನಾರಾಣಿ ಕಣ್ಣವಪೆ ಒದ್ದೆಗೆ ಬೀದಿ ಧೂಳು ಅಂಟಿಸಿಕೊಂದು ಬಂದು ಅಂತೂ ಇಂತೂ ನನ್ನನ್ನು ಪತ್ತೆ ಹಚ್ಚಿ "ಇಂಥ ಸಮಯದಲ್ಲಿ ನಿಮಗೆ ಹೇಗೆ ಮನಸು ಬಂತು ಮಾರಾಯರೆ; ಯಜಮಾನರು ಅನ್ನ ಮುಟ್ಟುವಲ್ಲರು; ನೀರು ಮುಟ್ಟುವಲ್ಲರು. ಹಾಸಿಗೆ ಹಿಡಿದು ಮಲಗವರೆ... ಮೃತ್ಯುಂಜಯ ಮಂತ್ರ ಜಪಿಸಿರೆಂದು ಅಮ್ಮ ಹೇಳಿದರೆ ಕಿವಿಮೇಲೆ ಹಾಕ್ಕಳ್ಳರು... ಒಂದೊಂದು ಕ್ಷಣ ಬದುಕುತ್ತಿರುವ ತಪ್ಪಿಗೆ ನಿಟ್ಟುಸಿರು ಇಡುತ್ತಿರುವರು... ಶಾಮಣ್ಣರನ್ನು ತಡೆಯಬಾರ್ದೇನು? ಪಾಲನೆ ಪೋಷಣೆ ಮಾಡಿದ ತತನವರಿಗಿಂತ ಅವರಿಗೆ ನೌಕರಿ ಸೇರುವ ಹಂಬಲವೇ ಹೆಚ್ಚಾಗರುವಂತಿದೆ ಸ್ವಾಮಿ... ನಿಮ್ಮ ಮೈಲಿಗೆ ಮಡಿ ಮಾಡಿ ನಿಮ್ಮ ಋಣ ತೀರಿಸೇನು! ದಯವಿಟ್ಟು ಬಸ್ಸು ಇಳಿದುಬಿಡಿ ನನ್ನಪ್ಪಾ... ನಾನು ಹೇಳುತ್ತಿರುವುದು ಸತ್ಯ... ಸತ್ಯವನ್ನಲ್ಲದೆ ಬೇರೇನೂ ಹೇಳುತ್ತಿಲ್ಲ... ದೇವರ ಮೇಲೆ..."

ಬಸ್ಸು ಒಮ್ಮೆಗೆ ವೇಗ ಹೆಚ್ಚಿಸಿಕೊಂಡು ಹೊರಟು ಬಿಟ್ಟಿತು. ಕಿಟಕಿಯಲ್ಲಿ ತಲೆ ಚಾಚಿ ಹಿಂತಿರುಗಿ ನೋಡಿದೆ. ಕುಲು ಕಣಿವೆಯ ಬೆಳಗ ಮಬ್ಬಿನೊಳಗೆ ಬಿರಿದ ಪುಷ್ಪ ನೆಲದ ಪಾಲಾಗಿರುವಂತೆ, ಪಾರಿಜಾತ ವೃಕ್ಷದ ತರಗೆಲೆಯಂತೆ ವ್ಯಾವಹಾರಿಕ ಲಾಭ ಕಳೆದುಕೊಂಡಿರುವ ಅನುನಾಸಿಕ ವಿಸರ್ಗ್ರಾಕ್ಷರದಂತೆ.
ಹುಚ್ಚು ಸೂಳ್ಯಾ ಮಕ್ಕಳು... ಇವರಿಗೂ ಕೆಲಸ ಬೊಗುಸೆ ಇಲ್ಲವೆಂದರೆ ನನಗೂ ಇಲ್ಲವೆಂದು ತಿಳಿದುಕೊಂಡಿದ್ದಾರೆ... ಎರವಲು ತಂದ ಸ್ವಾಂತನದ್ ಮೇಲೆ ಬದುಕುವ ಬದುಕೆ? ನಿಟ್ಟುಸಿರುಬಿಟ್ಟೆ.
*
*
*
೨೩೭

ನ ಕಾಲಸ್ಯ ಪ್ರಿಯಃ ಕಶ್ಚಿನ್ನ ದ್ವೇಷಃ ಕುರುಸತ್ತಮ
ನ ಮಧ್ಯಸ್ಥಃ ಕ್ವಚಿತ್ ಕಾಲಃ ಸರ್ವಂಕಾಲಃ ಪ್ರಕರ್ಷತಿ||
ಎಂಬೊಂದು ಮಾತು ಮಹಾಭಾರತದಲ್ಲಿ ಬರುತ್ತದೆ. ಕಾಲನಿಗೆ ಪ್ರಿಯರೆಂಬುದಾಗಲೀ ಶತ್ರುಗಳೆಂಬುವವರಾಗಲೀ ಇರುವುದಿಲ್ಲ. ಅವನೆಂದೂ ಮೀಡಿಯೇಟರು ಕೆಲಸ ಮಾಡುವುದಿಲ್ಲ... ಎಲ್ಲರನ್ನೂ; ಎಲ್ಲವನ್ನೂ ತೆಕ್ಕೆಗೆಳೆಕೊಂಡು ಹೋಗುತ್ತಿರುತ್ತಾನೆ.
*
*
*
ಈ ದೇಶದಲ್ಲಿ ಒಳ್ಳೆಯದಾಗಲೀ; ಕೆಟ್ಟದ್ದಾಗಲೀ ಅರ್ಥಪೂರ್ಣವಾಗಲೀ ಏನೊಂದೂ ನಡೆಯಲು ಸಧ್ಯವಿಲ್ಲವೆಂಬುದಕ್ಕೆ ವಾಗಿಲಿ ಸೇರಿಕೊಂಡು ಹಲವು ದಿನಗಳು ಕಳೆದರೂ ನನ್ನ ದೇಹದ ಒಂದೇ ಒಂದು ರೋಮ ಕೊಂಕದಿರುವುದೇ ನಿದರ್ಶನ. ನಾನು ದೀರ್ಘಾವದಿ ರಜೆಯ ಮೇಲೆ ಹೋದ ಕೆಲವು ದಿನಗಳಲ್ಲಿ ವಾಗಿಲಿ ಮತ್ತು ಪುಲಿಕುರ್ತಿ ಬೆಸೆಯದ ಹಳ್ಳಗಳ ಕೊರಕಲಲ್ಲಿ ಕೊಳೆತು ಊದಿಕೊಂಡು ಬಿಸಿಲಿಗೆ ಡಮಾರೆಂದು ಒಳಗಿನದೆಲ್ಲ ಹೊರಗಡೆ ಬಂದು ಅಕರಾಳವಿಕರಾಳವಾಗಿದ್ದ ಹೆಣವೊಂದು ಪತ್ತೆಯಾಯಿತಂತೆ... ಕಳ್ಳ ಸಂಭೋಗಕ್ಕೆ ಅನುವಾದ ಜಾಗ ಅರಸಿಕೊಂಡು ಪರಗುಣಿ ಮಾಗಿಯ ನವಣೆ ಸಾಲಿನೊಳಗಿಂದ ಕವುರಟ್ಲು ನಿಂಗಿಯೂ; ತರಗುಣಿ ಬೋಗಿಯ ಬಿಳಿ ಜೋಳದ ಬೆಳಸೆ ಸಾಲಿನೊಳಗಿಂದ ಪರುವುಟ್ಲು ಸಾಂಬಿಯಾನೂ ಚತುಷ್ಪಾದಿಗಳಂತೆ ತೆವಳುತ್ತ ಬಂದು ಹಳ್ಳ ತಲುಪಿ ನಿಸೂರಾದರು... ಇಲ್ಲಿ ಮಲಿಕ್ಕೊಂಡ್ರೆ ಅವರಿಗೆ ಕಾಣಬೌದು. ಅಲ್ಲಿ ಮಲಿಕ್ಕೊಂಡ್ರೆ ಇವರಿಗೆ ಕಾಣಬೌದಂತ ರಿಜರಿ ಜಾಲಿ ಅಡೀಕೆ ತೆವಳುತ್ತ ಸಾಗಿರಲು ನಿಂಗಿ ಮೂಗುನಿಗರಿಸಿಕೊಂಡು ಇಲ್ಲೆಲ್ಯಾರೋ ಬುತ್ತಿ ಇತ್ತಂಗೈತೆ ಹುಳಿ ಮೊಸ್ರು ಬಾನ ಕಲಸಿಟ್ಟಂಗೈತೆ... ಬದ್ನೆಕಾಯಿಪದಾರ್ರ; ಹುಂಚ್ಕಾಯಿ ಸಟ್ಟಣಿ ಅದರೊಟ್ಟಿಗಿಟ್ಟಂಗೈತೆ ಅಂಬಲು ಸಾಂಬಿಯಾನು ದೋತರ ಮೇಲೆತ್ತಿ ಈ ಸುಡುಗಾಡಾಗ್ಯಾರು ಅದ್ನೆಲ್ಲೆ ತಂದಿಟ್ಟಿದ್ದಾರೋ ಮೂಳಿ... ಸುಮ್ಕೆ ಮಲಿಕ್ಕ ಎಂದು ಗದರಿ ಕೆಳಗೆ ಕೆಡವಿಕೊಂಡನು. ಅದಕ್ಕೆ ಅರಳದೆ ನಿಂಗಿಯು "ನಾನು ಸುಳ್ಳೇಳಿದ್ರು ನನ್ ಮೂಗು ಸುಳ್ಳೇಳಲ್ಲೆಲ್ಲೋ ಸಾಂಬಿ... ಖರೇವಂದ್ರು ಬುತ್ತಿ ವಾಸಣೆ ಬರಲಿಕ್ಕತ್ತೈತೆ... ಅದ್ಯಾರ್ಯಾರ ಆಗಿರ್ಲಿ... ಮೊದ್ಲುಂಬಾಂಣು... ಹೊಟ್ಟೆ ಹಸಿದೈತೆಲೋ... ಬಾಡ್ಕಾವ್ ಅದ್ಯಾಕಂಗವಸ್ರ ಮಾಡ್ತಿ... ನೀನೇನು ಉಂಬಾಕ್ಕಿಡ್ತೀಯಾ... ತಿಂಬಕಿಡ್ತೀಯಾ... ಬಡ್ಕೊಂಡ್ ಹೋತಿ... ನನ್ ಕಸ್ಟ ನೊಂಗೊತ್ತು?... ನಿಂಗೇನು ಸೆಂಟ ಗೊತ್ತಾತ್ತೈತಿ?... ಮದ್ಲೆನದಂತ ನೋಡ್ಕಬರಾಣು..."

ಬಾಯಾಗಿಟ್ಕಂಬಾದಾಗಿದ್ರೆ ಉಂಡು ಬಿಡಾಣು... ಒಡ್ಲಾಗ ಕೂಳಿದ್ರೆ ಏನು ಮಾಡಿದ್ರು ಛಂದಿರತೈತಿ... ನಾನು ಹೆಣ ಮಲಿಕ್ಕಂಡಂಗೆ ಮಲಿಕ್ಕಂಬಾದು... ನಿಂದು ನೀನು ತೀರಿಸ್ಕೊಂಡು ಪೆಂಟೆ ಕಿತ್ತೋದಂದ್ರೆ ಹೆಂಗೆ?..." ಅಂತ ಎದ್ದು ಕುಂತು ಕಂಣಿಗೆ ನೀರು ತಂದುಕೊಂಡು ಬತ್ತಿದ್ದ ಹಳ್ಳದ ಗೌರವ ಕಾಪಾಡಿಕೊಂಡಳು.
ಆಕೆ ಯಾವತ್ತೂ ಹಿಂಗ ಮಾಡಿದಾಕಿಯಲ್ಲ... ಒಡಲಾಗೆ ಕೂಳಿಲ್ಲದ್ದು ಹಿಂಗೆ ಮಾತಾಡಿಸ್ತದೆ... ನಾನೆಂದೂ ಒಂದು ಹಿಡಿ ಬಾನ ಕೊಟ್ಟು ಒಡಲು ಕೈ ಹಿಡಿದು ನಡಿಸಿದೋನಲ್ಲ... ಈಕೆ ಮಾತಿಗೆ ಗೌರವ ಕೊಡೋಣಂದರೆ ಬುತ್ತಿ ವಾಸಣೆ ಒಂಚೂರು ಮೂಗಿಗಟೀವಲ್ಲದು...
"ವಯ್... ಬುತ್ತಿ ವಾಸಣೆ ಯಲ್ಲೈತಭೇ ನಿನ್ನೌವ್ನ... ಏನೋ ನೆವತಕ್ಕೋಡು ಸವದೋತನ್ನಂಗೆ


೨೩೮

ಮಾಡ್ತಿಯಲ್ಲೆ..." ಎಂದು ಮೂಸಿ ಮೂಸಿ ಹೇಳಿದನು...
"ಯಯ್ ಹಿಂಗಾಕಾಯ್ತಲೋ ನಿನ್ಮೂಗು... ಅದನ್ನ ಕುಯ್ದು ಕುರ್‍ಕುಂದಿ ನಾಗ್ನೀಗೆ ಕೊಡು... ಒಂದ್ ಜತಿ ಕಾಲ್ಮರಿ ಕೊಡ್ತಾನೆ..." ಎಂದು ಸೋಟಿ ತಿವಿದಳು.
"ನಗಡ್ಯಾಗಿ ಮೂಗು ಕಟ್ಕೊಂಡೈತಿ ಬಿಡು... ಅದ್ಕೆ ವಾಸ್ಣೆ ಹಿಡಿವಲ್ದು ಹಾಳಾದ್ದು... ಬೇಕಾರ ಮೂಗ ತೊಗ್ಲು ಕುಯ್ದು ಕಾಲ್ಮರಿ ಮಾಡ್ಸಿ ನಿಂಗೇ ತೊಡಿಸ್ತೀನಿ... ಬಾಯಿ ಮುಚ್ಕೊಂಡು ಬಿದ್ಕ... ಇಂಥೊತ್ನಾಗೆ ಬುತ್ತಿ ಯಾಕ ಬಗಸ್ತಿ... ಜ್ವಾಳದ ಬೆಳ್ಸಿ ಸುಟ್ ಕೊಡ್ತೀನಂತ ಅಮ್ಯಾಕ" ಎಂದು ಆಕೆಯ ಮೊಲೆಗಳನ್ನು ಎಲ್ಡು ಕಯ್ಯಿಗಳಿಂದ ಹಿಚುಗಲತ್ತಿ ಕಿಪ್ಪ್ಪೊಟ್ಟೆ ಮೇಲೆ ಕೂಕಂಡನು...

ಬಲವಾದ ಮನುಶ್ಯೋಳಾದ ನಿಂಗಿ ಒಮ್ಮೆಗೆ ಜಾಡಿಸಿ ತಳ್ಳೂತ್ತಲೆ ಅವನು ಅಷ್ಟು ದೂರ ಅಂಗಾತಲೆ ಬಿದ್ದನು.
"ನೀನೇನೋ ಮಣುಸೋನೋ...ರಾಕ್ಷಸನೋ... ಬುತ್ತಿ ವಾಸಣೆ ಬಡುದ್ರೆ ನಂಗೊಂದ ನಮೂನಿ ಆಕೈತೆಲೋ ಬಾಡ್ಯಾ... ಉಂಡರೆ ಸೈ... ಇಲ್ಲಾಂದ್ರಿಲ್ಲ" ಎಂದು ಎದ್ದು ನಿಂತು ಪರಪರಾಂತ ತೊಡೆ ಸಂದಿ ಕೆರೆದುಕೊಂಡಳು.

ಅಷ್ಟುದ್ದ ಇದ್ದೋನು ಇಷ್ಟುದ್ದದವನಾಗಿ ಅವನು ಮಕ್ಕಂಡಲ್ಲಿಂದ ಎದ್ದು ಬಂದು... ಆಯ್ತಲೇ ಆತು... ನಿನ ಮಯ್ಯಿ ಬೆವರ ವಾಸಣೆಯಂಥ ಇನ್ನೊಂದು ವಾಸಣೆ ಮೂಗಿಗೆ ತಗುಲವಲ್ದು... ನಿನಂದಂಗಾಗ್ಲಿ ಹುಡುಕೋಣು ನಡೆ" ಎಂದು ಆಕೆಯ ‘ಸೆಗಲ ಬಂಟಕ್ಕೆ’ ಕಯ್ಯಿ ಹಾಕಿದನು.
ಅವರೀರ್ವರು ಬೇಟೆಗಾರರಂತೆ ದೇಹವೆಂಭೋ ದೇಹಗಳನ್ನು ತುಸುವೇ ಬಗ್ಗಿಸಿ ನಾಟ್ಯಗತಿಯಲ್ಲಿ ಹೆಜ್ಜೆಹಾಕತೊಡಗಿದರು ಮುಂದು ಮುಂದಕ... ಅವರೀರ್ವರ ಮೂಗುಗಳೆಂಭೋ ಮೂಗುಗಳು ರಾಯಲಪಾಡು ಜಾತಿ ನಾಯಿಗಳಂತೆ ಅವರನ್ನು ಬಿಟ್ಟು ಮುಂದು ಮುಂದಕ ಹೋಗಿದ್ದವು...
ಒಂದೊಂದೆ ಹೆಜ್ಜೆಗೆ ವಾಸನೆ ಎಂಬೋದು ಒಂದೊಂದು ರೂಪ ಧಾರಣ ಮಾಡತೊಡಗಿತು. ಒಂದೊಂದು ನಾಡಿ ಬಡಿತಕ್ಕೆ ಒಂದೊಂದು ನಮೂನಿ ಸಂವೇದನೆ ರವಾನಿಸತೊಡಗಿತು... ಅರಳಿದ್ದ ಮೂಗುಗಳನ್ನು ಅಕುಂಚನಗೊಳಿಸಬೇಕೆಬುವಷ್ಟರಲಿ ನರಿಗಳೆರಡು ಹೋ ಹೋ ಹೋ ಎಂದರಚುತ್ತ ಆಕ್ರಮಣ ಮಾಡುವಂತೆ ಎದುರಿಗೆ ಸಾಮು ತೆಗೆಯತೊಡಗಿದವು. ಸಾಂಬಿಯಾ ನಿನ್ನೌವ್ನ ಅಂತ ಕಯ್ಯಿಗೆ ಸಿಕ್ಕ ಕಲ್ಲೊಂದನ್ನು ಎತ್ತಿ ಪ್ರಯೋಗ ಮಾಡಲು ಅವು ಹ್ಹೋ ಹ್ಹೋ ಹ್ಹೋ "(ನಮ್ಮಾಟು ತಿಂಬಲಾಕ ಬಂದೀರ... ನಿಮ್ಮ ಕಳ್ಳೆವವಾರಾನ ಯಲ್ರಿಗೂ ಟಾಂಟಾಂ ಹಾಕ್ತೀವಿ" ಎಂಬಂತೆ) ತಂತಮ್ಮ ಮುಕುಳಾಗ ಬಾಲ ತುಂಬಿಕೊಂಡು ಓಡಿ ರಿಜರಿ ಪೊದೆಯೊಳಗೆ ಅಂತರ್ಧಾನವಾದವು.

ಇದೇನು ಕರುಮವೋ ಅಂತ ಮೂಗುಗಳನ್ನು ಮುಚ್ಚಿಕೊಳ್ಳುವಷ್ಟರಲ್ಲಿ ರಣ ಹದ್ದೊಂದು ಬಾಯಲ್ಲಿ ಎಂಥದೋ ಒಂದು ಕಚ್ಚಿಕೊಂಡು ಕೇಕಕಣ ಅಂತ ಸಬುದ ಮಾಡುತ್ತ ವಿಮಾನದಂಗೆ ರೆಕ್ಕೆ ಬಿಚ್ಚಿಕೊಂಡು ಮುಗುಲಿಗೆ ನೆಗೆಯಿತು.
ಸಾಮಾನು ಮುದುಡಿ ಹಿಂಗಿ ಹೋಗಿ ಎದೆ ಮೂಲಕ ಬಾಯಿಗೆ ಬಂದಂದಾಗಿ ಸಾಂಬಿಯು "ನನ್ನೆದಿ ಬಡಕಂತತಿ... ಓಗ್ಗಿ ಬಿಡಾಣು ಬಾರೇ ನಿಂಗಿ" ಎಂದು ಒಂದೆರಡು ಹೆಜ್ಜೆ ಹಿಂದೆ ಇಟ್ಟ.
"ಅದ್ಕಾರ ಎದಿ ಬಡ್ಕಳ್ಳಲ್ಲ... ಇದಕಾರ ಬಡಕಂತತ... ನೋಡೇ ತಿರಾಣು... ಮುಕ್ಕಿ ಮುಚ್ಕೊಂಡು ಬಾರಲೋ ನನ್ನಾಟಗಳ್ಳ" ಎಂದು ನಿಂಗಿ ಗದರಿಸಿದೇಟಿಗೆ ಹಿಂದೆ ಬಂದನು...


೨೩೯

ಅವರು ಹಂಗೆ ಸಪ್ತಪದಿ ತುಳಿದು ಮುಂದೆ ಹೋಗಿ ನೋಡಲು ಹೆಣವೆಂಬುದು ಹೊಟ್ಟೆ ಹೊಡಕಂಡು ಬಕಬಾರಲೆ ಬಿದ್ದಿತ್ತು... ಅಲ್ಲಲ್ಲಿ ಹರಕೊಂಡಿದ್ದ ತವುಜರೊಳಗಿಂದ ಮಿಡಿ ನಾಗರ ಬುಸ್ಸಂತ ಹೆಡೆ ಬಿಚ್ಚುತ್ತಲೆ ಬುಳ್ಳಂತ ಮೂತ್ರ ವಿಸರ್ಜಿಸಿಕೊಂಡು ಅರ್ಧಬಲ ಓಡಿದರು.

ನೀವಿಬ್ಬರು ಯಾಕ ಹೋಗಿದ್ದೀರಿ ಎಂಬ ಪ್ರಶ್ನೆ ಕೇಳುವುದರ ದ್ವಾರ ಯಾರಾದರು ತಮ್ಮ ಹಾದರ ಬಟಾ ಬಯಲ ಮಾಡ್ಯಾರೆಂಬ ಅದುರಿಕೆಯಿಂದ ನಿಂಗಿ ಬಾಯಿಗೆ ಅರಿವೆ ಇಟ್ಟುಕೊಂಡಿರಲು ಸಾಂಬಿಯಾನು "ಕಟ್ರಳ್ಳದಾಗ ಹೆಣ ಬಿದ್ದೈತಿ" ಎಂದು ಕೂಗುತ್ತಾ ಕರಗಲ್ಲಿನಿಂದ ಚಾವಡಿ ಕಟ್ಟೆವರೆಗೆ ಹೋಗಲು...
ವಾಗಿಲಿ ಮಂದಿ ಕಿವಿ ಬಾಯಿಗೆ ತಂದುಕೊಂಡೋ; ಕಿವಿಗೆ ಬಾಯಿ ತಂದುಕೊಂಡೋ ಹುಟ್ಟು ಮಾರ್ಗದರ್ಶೀಲೆ ಕಟ್ರಳ್ಳ ಎಲ್ಲೈ ತೆಲ್ಲೈತಂತ ಓಡಿ ಹೆಣದ ದರುಶನ ಪಡೆದು ಅದರ ಕುರಿತು ತರಾವರಿ ಕಥೆ ಪೇರಿಸಿ ಘನವಾದ ಭವನ ನಿರ್ಮಿಸಿತು. ಕ್ರಮೇಣ ಕಟ್ಟುದ ಕಟ್ಟಿ ಅದರೊಳಗೆ ವೀರಭದ್ರಪ್ಪನೆಂಬಭಿದಾನದ ನನ್ನನ್ನು ಪ್ರತಿಷ್ಟಾಪನೆ ಮಾಡಿತು.

ಅಂತು ಚೂಸುಕುಂಟಾನು ಎಂಬ ಭೀಷ್ಮ ಪ್ರತಿಜ್ಞೆ ಮಾಡಿದ್ದ ಜಗನ್ನಾಥರೆಡ್ಡಿಯು ತಲೆ ಮರೆಸಿಕೊಂಡು ಅಂತರ್ಧಾನನಾದನು. ಕುಲಕರ್ಣಿ ರಾಘಪ್ಪ; ಬಡಿಗೇರ ಮಾನಪ್ಪ; ಕುಂಟುಗೌಡರೆಂಬುವರೇ ಮೊದಲಾದವರ ಸಮಕ್ಷಮದಲ್ಲಿ ಎಸೈ ಮಾರ್ತಾಂಡ ಸಾಹೇಬನು ಪಂಚನಾಮೆ ನಡೆಸಿ ಅದರ ನಕಲುಪ್ರತಿಗಳನ್ನು ಹತ್ತು ತೆಗೆಸಿ ಹತ್ತು ಕಡೆ ಕಳುಹಿಸಿದನು...
ಅಸಿಸ್ಟೆಂಟು ಟೀಚರು ತಿಮ್ಮಯ್ಯ ಶೆಟ್ಟಿ ಗಹಗಹಿಸಿ ನಗುತ್ತ ನಡೆಸಿದ ಸಂತಾಪ ಸೂಚಕ ಸಭೆಯಲ್ಲಿ ನನ್ನ ಗುಣಗಾನ, ಸೊಕ್ಕು, ಸೆಡವು ವರ್ಣಿಸಿದ್ದೇ ವರ್ಣಿಸಿದ್ದಂತೆ...

ಅಡ್ಡ ದಾರೀಲಿ ಕೆಂಪು ಬಸ್ಸಿನಿಂದಿಳಿದು ನಡೆದು ಬರುವಾಗ ದಾಸರಯಂಕೋಬ ‘ಇಂಕಾ ಮೀರು ಬ್ರತಿಕೇ ಉನ್ನಾರಾ’ ಎಂದು ಪ್ರಶ್ನೆ ಕೇಳಿದ್ದಕ್ಕೂ ಮೊದಲು ಬಿಡಿಓ ಪರಂಧಾಮಯ್ಯ ‘ಪೀಡೆ ಕಳೀತಂತ ಇಟ್ಕೊಂಡು ಎಲ್ರಿಗೂ ಒಳ್ಳೆಯವನಾಗಿ ಕೆಲಸ ಮಾಡ್ಕೊಂಡು ಹೋಗಪ್ಪಾ’ ಎಂದು ಆಶೀರ್ವಾದ ಮಾಡಿದ್ದ. ದಾಸರವ ಹಿಂಗ್ಯಾಕ ಕೇಳುತ್ತಿರುವನೆಂದೊಂದು ಕ್ಷಣ ಅರ್ಥವಾಗದೆ ಮಿಕಿಮಿಕಿ ನೋಡಿ ಮುಂದುವರಿದಿದ್ದೆ. ನಾನು ಬದುಕಿರುವ, ಮತ್ತು ಬದುಕಿರುವ ಸಂಗತಿ ಕಿವಿಗೆ ಬೀಳುತ್ತಲೆ ತಳವಾರ ಗುರುವನ ಮೂಲಕ ರಿಂದಮ್ಮ ನನ್ನನ್ನು ಉಪ್ಪರಿಗೆ ಮನೆಗೆ ಕರೆಸಿಕೊಂಡು ಕಾಫಿ ಕೊಟ್ಟು ಸನ್ಮಾನ ಮಾಡಿ ದೇವರು ದೊಡ್ಡವನೆಂದು ವೆಂಕಟರಮಣನ ಪಟದ ಮುಂದೆ ತುಪ್ಪದ ದೀಪ ಹಚ್ಚಿ ಕೈ ಮುಗಿದಳು. ಆಕೆಯ ತವರೂರಿನ ಮೂರು ಹರಿದಾರಿ ವಿಸ್ತೀರ್ಣದ ಹೊಲದ ನಡುವೆ ಬವಣೆಯೊಳಗೆ ಮನೆ ಮಾಡಿಕೊಂಡು ತಲೆಮರೆಸಿಕೊಂಡಿದ್ದ ತನ್ನ ಪತಿ ಪರಮೇಶ್ವರ ಜಗನ್ನಾಥ ರೆಡ್ಡಿಯನ್ನು ಕರೆತರಲು ಸಾರೋಟನ್ನು ಕಳಿಸುವ ವ್ಯವಸ್ಥೆ ಮಾಡಿದಳು. ಅವತ್ತು ರಾತ್ರಿಯೇ ಜೀವಾವಧಿ ಕೈದಿತನ ಅನುಭವಿಸಿದವನಂತೆ ಮೊಳವರೆ ಗಡ್ಡ ಬಿಟ್ಟುಕೊಂಡು ಬಂದ ಜಗನ್ನಾಥ ರೆಡ್ಡಿಯ ಕರ್ಮಕ್ಕೆ ನಾದಿರ ಗೋವಿಂದ ಬೇರೆ ಹೆಂಡತಿ ನೋವು ತಿಂಥಿದ್ದಾಳೆಂದು ಕೈರುಪ್ಪಳಿಗೆ ಹೋಗಿದ್ದ. ಅವನು ಬಂದು ಬೋಳಿಸಿದ ನಂತರವೇ ರೆಡಿ ಚಾವಡಿ ಕಟ್ಟೆ ಮೇಲೆ ಸಮಾಧಾನದ ಉಸಿರು ಬಿಡುತ್ತ ವಿರಾಜಮಾನನಾಗಿದ್ದು. "ಯಾವೋನು ಯಾವ ಬಾವಿಗಾದ್ರು ಬಿದ್ಕಳ್ಳಿ... ನನ್ನ ಗಂಟೇನು ಹೋಗ್ತದೆ?" ಎಂದು ಸ್ವಇಚ್ಚೆಂದ ನುಡಿದದ್ದಲ್ಲದೆ ಬೇಕು


೨೪೦

ಬೇಕಾದವನ್ನು ಕರೆಸಿ ಹೋಳಿಗೆ ಊಟ ಹಾಕಿಸಿದ್ದು..

ನಿಂಗಿಯೂ ಸಾಂಬಿಯೂ ದಿನಗಳ ಮೇಲೆ ಕಟ್ರಳ್ಳದಲ್ಲಿ ಕಾಣಿಸಿಕೊಂಡ ಶವ ನನ್ನ ಕನಸಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿತು. ಅದು ನನ್ನದೇ ಯಾಕಾಗಿರಬಾರದು ಎಂಬ ಅನುಮಾನ ಕಾಡತೊಡಗಿದ ಏಳನೆ ದಿನಕ್ಕೆ ನನ್ನ ಸ್ವಾಸ್ಥಿಯಿಂದ ಜಲಜಾಕ್ಷಿ ಬರೆದ ಸುದೀರ್ಘ ಪತ್ರ ಬಂತು. ಬರಲಿರುವ ಶಾಸನ ಸಭಾ ಚುನಾವಣೆಯಲ್ಲಿ ತನಗೇ ಟಿಕೆಟ್ ಕೊಡುವುದೆಂದು ಹೈಕಮಾಂಡು ನಿರ್ಧರಿಸಿರುವ ಬಗ್ಗೆ; ಸುರೇಶ ಗೌಡ ಬೀಫ್ ತಿನ್ನುವ ಹುಡುಗಿಯನ್ನು ಮದುವೆಯಾಗಿ ಜಾಗ ಖಾಲಿ ಮಾಡಿರುವ ಬಗ್ಗೆ; ಖಡ್ಗದ ಸಂಸ್ಥಾಪಕ ಸಂಪಾದಕ ಕಮಲಾಕರಗೆ ಪತ್ರಿಕಾ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿರುವ ಬಗ್ಗೆ; ಲೈಂಗಿಕ ಪುಷ್ಟಿಗೆ ‘ಅರ’ ಅನಸೂಯಾ ರಘುರಾಮ) ಕಂಪನಿಯ ದೋಸೆ ತಿನ್ನಿರಿ ಎಂದು ವೃತ್ತ ಪತ್ರಿಗೆಗಳಲ್ಲಿ ಪ್ರಕಟವಾಗುತ್ತಿರುವ ಜಾಹಿರಾತುಗಳ ಬಗ್ಗೆ; ಮಾತಾಡಿಸುವ ನೆಪದಲ್ಲಿ ಶಾಮ ಮನೆಗೆ ಹೋಗಿ ಅನಸೂಯಾ ದಂಪತಿಗಳ ಬೆಂಗಳೂರು ವಿಳಾಸ ಬೆದಕಾಡಿ ಪಡೆದುಕೊಂಡಿರುವ ಬಗ್ಗೆ; ಪರಮೇಶ್ವರ ಶಾಸ್ತ್ರಿಗಳು ಪಾರ್ಶವಾಯು ಪೀಡಿತರಾಗಿಮಲಗಿರುವ ಬಗ್ಗೆಸುದೀರ್ಘವಾಗಿ ಬರೆದ ನಂತರ ಮೂಲೆಯಲ್ಲಿ ಚಿಕ್ಕದಾಗಿ ಶಾಮನಿಗೆ ಪ್ರಸಿದ್ಧ ಬ್ಯಾಂಕೊಂದರಲ್ಲಿ ಅಪಾಂಟ್ಮೆಂಟ್ ಆಗಿದ್ದು ಅವನು ಸದ್ಯಕ್ಕೆ ಇಪ್ಪತ್ತೊಂದೂವರೆ ಕಿಲೋಮೀಟರು ದೂರದಲ್ಲಿರುವ ಕೊತ್ತಲಿಗೂ ಕೊಟ್ಟೂರಿಗೂ ಡೇಲಿ ಅಪ್ ಅಂಡ್ ಡೌನು ಮಾಡುತ್ತಿರುವನೆಂದೂ; ಎಷ್ಟೇ ಕೆಲಸವಿದ್ದರೂ ಒಂದೆರಡು ದಿನಗಳಮಟ್ಟಿಗಾದರೂ ಬಿಡುವುಮಾಡಿಕೊಂಡು ... ತೇದಿಯಂದು ನಡೆಯಲಿರುವ ‘ಸ್ತ್ರೀಶಕ್ತಿಯೇ ದೇಶದ ಶಕ್ತಿ’ ಎಂಬ ಮಹಾಸಮ್ಮೇಳನದಲ್ಲಿ ಬಂದು ಭಾಗವಹಿಸಿ ವಂದನಾರ್ಪಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದೂ ಬರೆದಿದ್ದಳು.

ಹೆಲ್ತು ವರ್ಕರು ಇಮಾಮನಿಂದಾಗಿ ಇಂಗ್ಲೀಷಿನ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ಮಕ್ಕಳಿಗೆ ‘ಕಮಲಳ ಊಟ, ಬಸವನ ಆಟ’ ಹತ್ತು ಸಲ ಬರೆಯುವಂತೆ ಸೂಚಿಸಿ ಹರಳೆಣ್ಣೆ ಮುಖದ ತಿಮ್ಮಯ್ಯ ಶೆಟ್ಟಿಗೆ ಅದರ ಉಸ್ತುವಾರಿ ವಹಿಸಿ ಜಲಜಾಕ್ಷಿಯ ಪತ್ರವನ್ನು ಒಂದೊಂದು ನಮೂನಿ ಅರ್ಥಮಾಡಿಕೊಳ್ಳುತ್ತ ಕೂತೆ... ಹುಣುಸೆಹಣ್ಣು ಗೊತ್ತಿರದ ಹುಡುಗರು ಎಪಿಪಿಎಲ್‌ಇಯಾಪಿಲ್ ಬರೆದಂತೆ ಕಟ್ಟಾಜ್ಞೆ ವಿಧಿಸುವ ನೆಪದಲ್ಲಿ ಹಿಂದೆ ಮುಂದೆ ತಿರುಗಾಡುತ್ತಾ ಶೆಟ್ಟಿ ನಾನು ಓದುತ್ತಿದ್ದ ಪತ್ರದಲ್ಲಿ ಇಣುಕಿ ನೋಡುತ್ತಿದ್ದ. ಮಧ್ಯರಾತ್ರಿಯಲ್ಲಿ ಎದ್ದು ಬಂದು ತನ್ನ ಮುಖದ ಒಂದು ಭಾಗವನ್ನು ಬಳಪ ಮಾಡಿಕೊಂಡು ಶಾಲಾ ಗೊಡೆಯ ಮೇಲೆ ಜಲಜಾಕ್ಹಿಗೆ ವೀರಭದ್ರಪ್ಪ ಎಂದು ಬರೆದಾನೆಂಬ ಭಯದಿಂದ ಬಂದಿದ್ದ ಪತ್ರವನ್ನು ನಿಸ್ಸಂಕೋಚವಾಗಿ ಓದುವಂತೆ ಅವನಿಗೆ ಕೊಟ್ಟೆ, "ನಿಮ್ಮ ಪರ್ಸನಲ್ ಮ್ಯಾಟ್ರು" ಎಂದು ಮೊದಮೊದಲು ಹಿಂಜರಿದ ಅವನು ಕೊನೆಗೂ ಇಸಿದುಕೊಂಡು ಓದಲು ಪ್ರತ್ನಿಸಿದ. ಈಸ್ಟ್ ಇಂಡಿಯಾ ಕಂಪೆನಿ ಕಾಲದ ದಸ್ತಾವೇಜು ಓದುತ್ತಿರುವ ರೀತಿಯಲ್ಲಿ ಅಂತೂ ಇಂತೂ ಓದಿ ಮುಗಿಸಿ ಮುಖದಿಂದ ಮತ್ತಷ್ಟು ಎಣ್ಣೆ ಬಸಿದು ನಿರಾಶನಾಗಿ ಹಿಂದಿರುಗಿಸಿ ಜೀವ ಕಳೆದುಕೊಂಡವನಂತೆ ಸ್ಟೂಲಿನ ಮೇಲೆ ಹೋಗಿ ಕೂತುಕೊಂಡ.

ಆ ಪತ್ರದಲ್ಲಿದ್ದ ಯಾವ ಪಾಯಿಂಟ್ ಬಗ್ಗೆ ಆಲೋಚಿಸುವುದು ಮತ್ತು ಬರೆಯುವುದು! ಮಂಕಾಗಿ ಒಂದು ಕ್ಷಣ ಊರುಕುಂದಿ ಮಗಳು ತಿಮ್ಮಿಯ ಸಿಂಬಳ ತುಂಬಿಕೊಂಡಿದ್ದ ಮೂಗನ್ನೇ ಶೂನ್ಯವೆಂದು ಭಾವಿಸಿ ನಿಟ್ಟಿಸುತ್ತ ಕೂತುಕೊಂಡೆ.
"ಸಾಲ್ಯಾಗ ಯಸ್ರು ಬರಿಸಿ ಬರೋಬ್ಬರಿ ಮೂರ್ತಿಂಗ್ಳು ತುಂಬ್ಕಂತು... ಯಲ್ಡಕ್ಕಸರ


೨೪೧

ಕಲಿಸಿದ್ದೊಂದು ಬುಟ್ರೆ ... ಗೊರುಮೆಂಟಿನೋರು ಕಡೀಲಿಂದ ಏನು ಬಾನ ಕೊಡಿಸಿದ್ದು ಅರಿವೇ ಕೊಡಿಸಿದ್ನಾ... ಇಲ್ಲದ್ನೇಳಿ ಕರ್ಕಂಡ್ಬಂದು ಸೇರಿಸ್ಕೊಂಡ್ನಲ್ಲ... ಪಿಳ್ಳೇನ ಗೋಡ್ರು ವಲಕೆ ಗುಬ್ಬಿ ಕಾಯಲಾಕ ಕಳಿಸಿದ್ದಿದ್ರೆ ಯಲ್ಡೊಪ್ಪತ್ತು ಪಿಳ್ಳೇಗೆ ಬಾನನಾರ ಸಿಕ್ತಿತ್ತು..." ಹೊರಗಡೆ ಊರಮ್ಮನ ಬೇವಿನ ಮರದ ಬುಡದಲ್ಲಿ ಉದ್ದೋಕೆ ನಿಂತ್ಕಂಡು ಉರುಕುಂದಿ ನನ್ಗೆ ಕೇಳಿಸ್ಲೀ ಅಂತ ಗಟ್ಟಿಯಾಗಿ ಮಾತಾಡುತ್ತಿದ್ದ...

"ಸಾಲೆ ಬ್ಯಾಡ ಕಸಾಲೆ ಬೇಡ... ಸಿಲೇಟು ವಕ್ಕಟ್ಟು ಬಂದ್ಬಿಡೆವ್ವೋ ಥಾಯಿ... ಸಾಲಿ ಕಲ್ತು ನೀನೇನಾಫೀಸರಾಗೋದೈತಿ" ಎಂದು ನನ್ನ ಪಿತಾಶ್ರೀ ಧಮಕಿ ನೀಡುತ್ತಿದ್ದುದಕ್ಕೆ ಪ್ರತಿಯಾಗಿ ಅಕ್ಕಸರ ತಲೀಗೆ ಹತ್ತುವುದೆಂಗ? ಈ ಹೊತ್ಗೆ. ಕುಡ್ದು ಬಂದೈತೆ ಮೂಳ ನಾಡ ಮೂಳ" ಎಂದು ಗೊಟಗುಟ್ಟುತ್ತ ತಿದ್ದುತ್ತಿತ್ತು.
ಸೋಲೂಪ ಹೊತ್ತಿನಲ್ಲಿ ಸುಂಕಲಿ ತನ್ನ ಬೀಸೋ ಕಲ್ಲು ಗಾತ್ರದ ತುರುಬನ್ನು ಎತ್ತೆತ್ತಿ ಕುಣಿಸುತ್ತ "ವ್ಯೋನೇ... ಗೋಡನತ್ರ ಅಯವತ್ತಿಸ್ಕಂಡ್ಬಂದು ಕುಡುದ್ರಿಂದ ಬಾಯಿಗೆ ಬಂದಂಗ ಅನಲಾಕತ್ತಿಯಲ್ಲ... ಅಯಪ್ಪಾದ್ರ ಸುಮಕದಾನ... ನಾನಾದ್ರ ಬಾಯಾಗ ಉಚ್ಚೆ ವಯ್ತಿದ್ದೆ... ಮಗು ಸಾಲಿ ಕಲೀಲಿ... ಅದ್ನ ನೋಡಿ ಸಂತೋಷಪಡೋದು ಬಿಟ್ಟು ಬಾನ್ ಕ್ವಡ್ಲಿಲ್ಲ... ಬಟ್ಟೆ ನೋಡ್ಲಿಲ್ಲ... ಅನಲಕತ್ತೀಯಲ್ಲ... ಅಯಪ್ಪೇನು ನಿನಗಂಟ್ತಿಂದಾನೇನು?" ಇವೇ ಮೊದಲಾದ ವಾಗ್‌ಪಾಶಗಳಿಂದ ತನ್ನ ಗಂಡನನ್ನು ಹೆಡ ಮುರಿಗೆ ಕಟ್ಟಿಎಳೆದೊಯ್ದಳು.
ಇಂಥ ಕುಸುಮ ಬಾಲೆಯರು ಎಷ್ಟೋ? ಕುಡಿದಾಗೊಂದು ನಮೂನಿ; ಕುಡಿಲಿಲ್ಲದಾಗೊಂದು ನಮೂನಿ... ಯಾರಾದರೂ ಹಚ್ಚಿಕೊಟ್ಟಾಗೊಂದು ನಮೂನಿ; ತಮ್ಮ ಪಾಡಿಗೆ ತಾವು ನಿಸೂರಿಕಿದ್ದಾಗೊಂದು ನಮೂನಿ...

ನನ್ನೀ ವಾಲಿಗ್ರಾಮ ಈ ದೇಶದ ನೂರು ವಿಶ್ವವಿದ್ಯಾಲಯಗಳಿಗೆ ಸಮ... ಒಂದು ವಿಶ್ವವಿದ್ಯಾಲಯದಲ್ಲಿ ಒಬ್ಬ ಮನುಷ್ಯ ನೂರು ವರ್ಷ ಕಲಿಯುವುದನ್ನು ಈ ಸುಗ್ರಾಮ ಕೇವಲ ಹತ್ತೇ ದಿನಗಳಲ್ಲಿ ಗ್ರಾಮ ಭಾರತದ ವಿರಾಟ್ರೂಪವನ್ನು ತೋರಿಸಿಬಿಡುತ್ತದೆ. ಅಬ್ಸರ್ವೇಷನ್ ಕೆಪೇಸಿಟಿ ಇರುವವರ್ಯಾರೇ ಆಗಲಿ ಬಂದೀ ಸದರೀ ಗ್ರಾಮದಲಿದ್ದ ಪಕ್ಷದಲ್ಲಿ ಬರಹಗಾರ ಅಥವಾ ಸಮಾಜ ಶಾಸ್ತಜ್ಞ; ಅಥವಾ ಮಾನವ ಶಾಸ್ತ್ರಜ್ಞ ಅಥವಾ ಜಾನಪದ ವಿದ್ವಾಂಸ... ಹೀಗೆ ಯಾವುದೊಂದಾದರೊಂದು ಜ್ಜಾನ ಶಾಖೆಯಲ್ಲಿ ಪ್ರಭುತ್ವ ಸಾಧಿಸಬಹುದು.... ಒಂಚೂರಾಗಲೀ ಯಾವುದೇ ಮಾಲಿನ್ಯವಿರದೀ ಪ್ರದೇಶದಲ್ಲಿದ್ದು ಆರೋಗ್ಯವಂತನಾಗಬಹುದು.. ಅಥವಾ ಕಂದಾರೆಮ್ಮನ ಗುಡಿಯೊಳಗಿರುವ ಕಲ್ಲು ಗುಂಡುಗಳನ್ನೆತ್ತಿ ಬಾಡಿ ಬಿಲ್ಡರಾಗಿಬಿಡಬಹುದು ಅಥವಾ ಆಯತಪ್ಪಿ ರೂಕ್ಷ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಅತ್ಯುತ್ತಮ ಕೊಲೆಗಾರನಾಗಿ ಬಿಡುವ ಅವಕಾಶವನ್ನು ತಳ್ಳಿಹಾಕುವಂತಿಲ್ಲ.

"ಯಂಥೋಥೋರ್ಗೆ ಇಲ್ಲಿ ಎಂಟ್ದಿನ ಇರಲಿಕ್ಕಾಗಿಲ್ಲ... ನೀನಿಲ್ಲಿದ್ದು ಸಾಲೆ ಹೇಳಿಂದೇನು ಕಡ್ದು ಗುಡ್ಡ ಹಾಕ್ತೀಯೋ ನಾ ಬೇರೆ ಕಾಣೆ. ಸುಮ್ನೆ ಗೌಡ್ರು ಜೊತೆ ಇಸ್ಪೀಟಾಡ್ತಾ ಕಾಲ ಕಳೆ... ಸಾಲಿ ಹೇಳೊ ಮನಸ್ಸಿದ್ದ ಪಕ್ಷದಲ್ಲಿ ಗೌಡ್ರು ಮಕ್ಕಳಿಗೊಂದೆ ಸಾಲೆ ಹೇಳಿ ಶಾಣೇರ್ನ ಮಾಡು ಬ್ಯಾಡನ್ನಲ್ಲ... ಇದು ಮೊದ್ಲೇ ರೌಡಿ ಕೊಂಪೆ... ಒಂದು ಹೋಗಿ ಇನ್ನೊಂದಾಗಬಾರ್ದು. ನೀನಿನ್ನು ಮುಂದೆ ಮದ್ವಿ ಪದ್ವಿ ಆಗಿ ಸಂಸ್ಕಾರ ಮಾಡೋ ಹುಡುಗ... ಕಾಟಿಗ್ರು ಮುಂಡೇವ್ಕೆ ಇದ್ಯೆ ಹೊತ್ತೋದಿಲ್ಲ... ಹತ್ತಿದ್ರೆ ಅವು ದೊಡ್ಡೋರು ಸಣ್ಣೋರನ್ನದಂಗೆ ತಲೆಮ್ಯಾಲತ್ತಿಕುಂಡ್ರುತಾವ"


೨೪೨

ಎಂದು ಕಲಕರ್ಣಿ ಸಾಂಪ್ರತು ಹೇಳಿದ್ದ ಮಾತು ನೆನಪಾಗುವುದು.

ಅದಕ್ಕೆ ಪ್ರತಿಯಾಗಿ ಜಗ್ನಾತ್ರೆಡ್ಡಿ "ನಾನು ಬಡ್ಕೊಂಡೆ ರಾಘವಪ್ಪ... ಮೇಸ್ಟ್ರೂನ ಹಾಕಂಗಿದ್ರೆ ಬ್ರಾಂಬ್ರೂನ ಹಾಕ್ರೀಂತ ಬಿಡಿಓಗೆ ಹೇಳ್ದೆ... ಅವ್ನು ಕೇಳಿದ್ನಾ... ಇರ್ಲಿ... ಇರ್ಲಿ... ಅದೆಷ್ಟು ದಿನ ಉರೀತಾನೋ ಉರೀಲಿ... ನೋಡೋಣು" ಎಂದು ಬಿಸಿಯುಸಿರೆಂಬ ಸರುಪಾಸ್ತ್ರ ಬಿಟ್ಟಿದ್ದ.

ಇಂಥ ತರಾವರಿ ಮಾರಕಾಸ್ತ್ರಗಳಿಂದ ತಪ್ಪಿಸಿಕೊಳ್ಳುತ್ತ ಹೇಗೋ ಒಂದು ರೀತಿಯಲ್ಲಿ ಬದುಕಿರುವ ಬದುಕುತ್ತಿರುವ ಇಂಥ ಹಳ್ಳಿಗಲಿದ್ದರೆ ಮಾತ್ರ ಜಲಜಾಕ್ಷಿಯಂಥವರು ಮಾಡುವ ಸಂಘಟನೆಗಳಿಗೆ ಅರ್ಥ ಬರುತ್ತದೆ. ತಲೆಗೊಂಚೂರು ಎಣ್ಣೆ ಕಾಣದೆ, ಹೊಟ್ಟೆಗೊಂಚೂರು ಬೆಣ್ಣೆ ಕಾಣದೆ ಅಬಡಾ ದಬಸ್ಡಾ ಪಶುಗಳಿಂದತತ್ತ ಬದುಕುತ್ತಿರುವ ಗ್ರಾಮೀಣ ಮಹಿಳೆಯರನ್ನು ದೂರ ಇಟ್ಟು ಅದ್ಯಾವ ಸಂಘಟನೆ ಮಾಡ್ತಾಳೋ ನಾಬೇರೆ ಕಾಣೆ! ಇಂಥ ಕ್ಷುದ್ರ ಬದುಕಿನೊಂದಿಗೆ ಒಡನಾಡಿರುವ ನನ್ನಂಥವರಿಂದ ಒಂದುಪನ್ಯಾಸ ಕೊಡಿಸಲಿಕ್ಕೇನಾಗಿತ್ತು ಧಾಡಿ ಅಂತ. ನನಗೆ ವಂದನಾರ್ಪಣೆ ಕೆಲಸಕ್ಕೆ ಆಕೆ ಸೋಪ್ತಿ ಮಾಡಿರುವುದು ಕಂಡು ನಗಬೇಕೋ? ಅಳಬೇಕೋ? ಒಂದೂ ಅರ್ಥವಾಗಲಿಲ್ಲ. ಬರಲಿರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲಿಕ್ಕೆ ಸಂಘಟನೆ; ಸಮ್ಮೇಳನದಂಥ ಗಿಮಿಕ್ ಶುರು ಮಾಡಿದಾಳೆಂದು ಅರ್ಥಮಾಡಿಕೊಳ್ಳಲು ತ್ರಾಸು ಪಡಬೇಕಾಗಿಲ್ಲ.

ಅದೇ ಹೊತ್ತಿಗೆ ಹೆಲ್ತುವರ್ಕಮಾಮು "ಹೆಲ್ಲೋ ಗುಡ್‌ಮಾರ್ನಿಂಗೂ... ಹೌ ಆರ್ ಯು" ಎಂದು ತನ್ನ ಮಾಮೂಲು ಇಂಗ್ಲೀಷು ವರಸೆಯಿಂದ ವಕ್ಕರಿಸುತ್ತ ನನ್ನ ಕೈಲಿದ್ದ ಪತ್ರದೊಳಗಿಣುಕಿ ನೋಡಿದ... ಲವ್ವು ಲೆಟರಸ್ಸೂನ ಬರೆಯೋಕೆ ಇಂಗಲೀಸು ಲ್ಯಾಂಗವೇಜೇ ಚಲೋ ಐತೆ ನೋಡ್ರಿ... ಈ ಇಲೇಜರ ಸೂ ಥೆಪ್ಟ್ ಮಾಡಿದ್ರೆ ನಿಮ್ಮಂಥೋರ ಕರಿಯರ್ರೇ ಹಾಳಾಗಿ ಬಿಡ್ತದೆ ನೋಡ್ರಿ..." ಎಂದು ತಲೆ ತಿನ್ನ ತೊಡಗಿದ ಅವನ ಮುಖಕ್ಕೆ ಉಗಿದು ಓಡಿಸುವ ಆಸೆ ಆಯಿತು. ದುರುಗುಟ್ಟಿ ನೋಡಿದೆ. ಆಗ ಅವನು ಉಗುಳು ನುಂಗಿ "ಹೆಲೋ ಮೈ ಡಿಯರ್ ರಿಕೆಟ್ಟೂ; ಹೆಲ್ಲೊ ಮೈ ದಿಯರ್ ಬೆರ್ರಿ ಬೆರ್ರಿ" ಎಂದುಮಕ್ಕಳಿಗೆ ರೋಗಗಳ ಹೆಸರಿಟ್ಟು ಹೆಲ್ತು ಚೆಕಪ್ಪಿಗೆ ತೊಡಗಿದ. ಅವನು ತಮ್ಮನ್ನು ಇಂಗ್ಲೀಷ್ ಭಾಷೆಯಿಂದ ಗುರುತಿಸುತ್ತಿದ್ದುದರಿಂದ ಮಕ್ಕಳು ರೋಮಾಂಚನಗೊಂಡು ಪ್ರತಿಕ್ರಿಯಿಸುತ್ತಿದ್ದೆವು.

"ನೋಡು ಇಮಾಮು... ರೋಗಗಳ ಹೆಸರಿಟ್ಟು ಹುಡುಗರ್ನ ಕರೀಬ್ಯಾಡಾಂತ ಎಷ್ಟ್ ಸಾರಿ ಹೇಳ್ಬೇಕು: ಎಂದು ಗದರಿದೆ.
ತಮ್ಮಕ್ಕನನ್ನು ಬಿಡಿಓಗೆ ಅಡ್ಡ ಹಾಕಿರುವ ಅವನ ವರ್ತನೆಯನ್ನು ವಿರೋಧಿಸುವ ಗೋಜಿಗೆ ಹೊಗುತ್ತಿರಲಿಲ್ಲ.
"ವಾಡ್ ದೂ ಯು ಮೀನ್?" ಅಂದ.
"ವಾಟು ಇಲ್ಲ ಮೀನೂ ಇಲ್ಲ ಕಣಪ್ಪಾ... ನಿನ್ನೆಲ್ತು ಚೆಕ್ಕಪ್ ಸಾಕು ಮಾಡಿ ಹೊರಗ್‌ಹೋಗು" ಅಂದೆ. ಎಲ್ಲ ಇದ್ದೂ ಇಲ್ಲದಂತಿರುವ ಅಥವ ಇರದಿದ್ದರೂ ಇದ್ದಂತೆ ವರ್ತಿಸುವ ಹೆಡ್ಲಾಂಗ್‌ಫೆಲೋ (ಇಮಾಮ ಇಟ್ಟಿರುವ ವಿಶೇಷಣ) ಲಕ್ಹ್ಮಿರೆಡ್ಡಿ ಇದ್ದ ಎರಡು ಹಲ್ಲುಗಳ ನಡುವೆ ಒಂದು ಕೋರೆ ಗಣೇಶ ಸಿಕ್ಕಿಕೊಂಡು ಬಂದ ರವುಡೂರು ಲಕ್ಷ್ಮಿ ರೆಡ್ದಿ "ಹೋಗ್ಲಿ ಬುಡ್ರಿ ಮೇಷ್ಟರೇ... ಯಲ್ತಿಲ್ದಿದ್ರೆಂಗ ವುಡ್ರು ಥೇಲೀಗೆ ಓದು ಅತ್ತತೈತಿ" ಎಂದು ಅಡ್ಡ ಬಾಯಿ ಹಾಕಿದ.
ಊರಾಳುವ ಜಗನ್ನಾಥರೆಡ್ಡಿಯ ಸಾರೋಟಿನ ಸಾರಥಿಯಾಗಿ ಕಾರ್ಯನಿರ್ವಹಿಸುತ್ತ ಇಪ್ಪತ್ತಾರು ವರ್ಷಗಳನ್ನು ನುಲಿ ಮುಪ್ಪಾಗಿರುವ ಆತಗೆ ಟವುಜರು ಹಾಕಿಕೊಂಡು ಟಸ್ಸಾಪುಸ್ಸಾಂತ


೨೪೩

ಇಂಗ್ಲೀಶು ಮಾತಾಡುವವರೆಂದರೆ ಎಲ್ಲಿಲ್ಲದ ಮೋಜು.
"ಲಕ್ಷ್ಮೀ ರೆಡ್ಡಿ ... ಸ್ವಲ್ಪ ಬಾಯ್ಮುಚ್ಕೊಂಡೋಗ್ತೀಯಾ..." ಎಮ್ದು ಗದರಿಸಿದೆ.
ತನ್ನ ಏಕಮಾತ್ರ ಅಭಿಮಾನಿಯಾದ ಲಕ್ಷ್ಮಿರೆಡ್ಡಿಯನ್ನು ಗದರಿಸಿದ್ದು ಇಮಾಮನಿಗೂ ಹನುಮಂತ ದೇವರಂತಿರುವ ತನ್ನನ್ನು ಗದರಿಸಿದ್ದರಿಂದ ಲಕ್ಷ್ಮೀರೆಡ್ಡಿಗೂ ಏಕಕಾಲಕ್ಕೆ ಸರಿಬರಲಿಲ್ಲ.
ಎಲಾ ನಿನ್ನ ನೋಡ್ಕೋತೀವಿ ಎಂಬಂತೆ ಮುಖ ಮಾಡಿಕೊಂಡರು.
ಸಹ ಶಿಕ್ಷಕರು, ಮಕ್ಕಳು ಬೆರಗಿನಿಂದ ನೋಡುತ್ತಿದ್ದಂತೆಯೇ ಆ ದಮನಕ, ಕರಟಕರು ಪರಸ್ಪರ ಕೈ ಹಿಡಿದುಕೊಂಡು ದಪ್‌ದಪ್ ಹೆಜ್ಜೆ ಹಾಕುತ್ತ ಅಲ್ಲಿಂದ ಕದಲಿದರು.
ನಾವು ಕೆಲಸ ಮಾಡುತ್ತಿರುವುದೇ ಪನಿಷ್ಮೆಂಟ್ ಪ್ಲೇಸಾದ್ದರಿಂದ ಯಾರಿಗೆ ಯಾಕೆ ಸೊಪ್ಪು ಹಾಕುವುದು? ಅದೂ ಅಲ್ಲದೆ ನಾನು ದೋಂಟ್ ಕೇರ್ ಮಾಸ್ಟರೆಂದೇ ಹೆಸರಾಗಿರುವವನು ಬೇರೆ! ಆದ್ದರಿಂದ ಅಸ್ಟು ಸುಲಭವಾಗಿ ಇಂಥಿಂಥ ಕಂಟಕ ಎದುರಾಗುತ್ತದೆ ಎಂದು ಬುದ್ಧಿ ಹೇಳುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ.

ಜಗನ್ನಥರೆಡ್ಡಿಯಿಂದ ಬುಲಾವ್ ಮಾಡಿಸಿ ಲಕ್ಷ್ಮಿರೆಡ್ಡಿ ತಕ್ಕಶಾಸ್ತಿ ಮಾಡಿಸುತ್ತಾನೆ ಲಕ್ಷ್ಮೀರೆಡ್ಡಿ ಎಂದೇ ನನ್ನ ಸಹೋದ್ಯೋಗಿಗಳೆಲ್ಲ ಪರಿಭಾವಿಸಿದರು. ಊರ ಕರಗಲ್ಲಿನಂತಿರುವ ಲಕ್ಶ್ಮೀರೆಡ್ಡಿ ಮಾಡಬಾರದ್ದನೆಲ್ಲವನ್ನು ಮಾಡಿ ರವಡೂರು ತ್ಯಜಿಸಿ ವಾಲಿಗೆ ಬಂದು ಆಶ್ರಯ ಪಡೆದಿರುವಂಥ ವ್ಯಕ್ತಿ, ಸಕಲ ಜೀವಂಗಳಿಗೆ ಸದಾ ಕೇಡು ಬಯಸುವ ಆತ ಗುಣಸ್ವಭಾವದಲ್ಲಿ ಸರ್ಪಕ್ಕಿಂತಲೂ ಮಿಗಿಲು, ಜಗನ್ನಥರೆಡ್ಡ್ಡಿಯನ್ನು ಎದುರು ಹಾಕ್ಕೊಂಡು ಬದುಕಬಹುದಾದರೂ ಲಕ್ಷ್ಮೀರೆಡ್ಡಿಯನ್ನು ಎದುರು ಹಾಕಿಕೊಂಡರೆ ತಾಪತ್ರಯಗಳ ಸರಮಾಲೆಯನ್ನೇ ಎದುರು ಹಾಕಿಕೊಂಡಂತೆಯೇ ಲೆಕ್ಕ. ನನ್ನ ಎದೆಯ ಬಾಂಡಲೆಯೊಳಗೆ ಲಕ್ಷ್ಮೀರೆಡ್ಡಿ ಎಂಬ ದ್ವಿದಳ ಧಾನ್ಯ ಬೇಯುವುದೋ ಇಲ್ಲವೋ ನೋಡೇ ಬಿಡಬೇಕು ಎಂದು ನಿರ್ಧರಿಸಿದೆ.

ಮತ್ತೆ ಮತ್ತೆ ಓದಿಸಿಕೊಂಡಿತು ಜಲಜಾಕ್ಷಿಯ ಪತ್ರ. ಒಂದೊಂದು ಒಂದೊಂದು ಕಥಾ ಸಂಕೀರ್ತನ ಮಾಡುವ ಪತ್ರ. ಬರುವಾಗ ಶಾಸ್ತ್ರಿಗಳನ್ನು ಮಾತಾಡಿಸಿ ಬಂದಿದ್ದರೆ ಹಗುರಾಗಿ ಬದುಕಬಹುದಿತ್ತು. ಶಾಮ ಪ್ರಥಮಬಾರಿಗೆ ಅವರ ಮಾತು ಉಲ್ಲಂಘಿಸಿ ಇಂತ್ರೂ ಹೋಗಿದ್ದು; ನೌಕರಿ ಸಿಕ್ಕಿದ್ದು ಇತ್ಯಾದಿ ಅವನ ವರ್ತನೆ ವಿವರದಲ್ಲಿ ನನ್ನ ಪಾತ್ರವಿದೆ ಎಂದು ನಂಬಿದ್ದರೆ ಅದು ನನ್ನ ಕರ್ಮ. ಅದಕ್ಕೆ ನಾನು ಹೇಗೆ ಕಾರಣ?
ನನಗೆ ಎರಡು ಕೋಣೆಯ ಮನೆ ಬಾಡಿಗೆಗೆ ಕೊಟ್ಟಿರುವ ಗುರುವಪ್ಪ ಆತಂಕದಿಂದ ಬಂದು "ವ್ಯೊನ್ರಿ ಮೇಷ್ಟ್ರೆ ಆ ಮೂಳ ಲಚ್ಚಿಮೀ ರೆಡ್ಡೀನ ಯಾಕೆ ತಡುವಾಕೋದ್ರಿ... ಅವನೊಂದಿದ್ರೆ ನಾಕು ವ್ಯೋಳೋ ಮನುಸ್ಯಾ... ಪೀಡೆ ಬಗೆ ಅರೀತು... ಆರಾಮಿರ್ತೀರಿ ಅಂದ್ಕಂಡಿದ್ದೆ... ಯೀಗ್ನೋಡ್ರಿ ಮತ್ತೊಂದ್ತಲಿನವ್ವು ತಂದ್ಕಂಡೀರಿ" ಎಂದು ನಿಟ್ಟುಸಿರು ಬಿಟ್ಟ.

ನನಗೆ ಮತ್ತೆ ತಲೆ ಚಿಟ್ಟಂತು. ಈ ಗುರಪ್ಪನೂ ಅಷ್ಟೆ, ಇಲೀನ ಹುಲಿ ಅನ್ನೋ ಮನುಷ್ಯ... ಅದು ಯಾವ ಧೈರ್ಯದಿಂದ ಕಪಟ್ರಾಳ್ ವೆಂಕಟರೆಡ್ಡೀನ ಕಡಿದನೋ ಏನೋ?...

"ಏನು ಗುರಪ್ಪಾ... ಅದೇನಾಯ್ತೂಂತ ಹಿಂಗ ಮಾತಾಡ್ತಿದ್ದೀ... ಆ ಲಕ್ಷ್ಮೀರೆಡ್ಡಿಯ ತಳಬುಡ ಎಲ್ಲ ಗೊತ್ತು ನನ್ಗೆ... ಇಂಥ ಕೊಂಪೇಲಿ ಆ ಧೈರ್ಯ ಇರೋದ್ರಿಂದ್ಲೇ ನಾನು ಕೆಲಸ ಮಾಡ್ತಿರೋದು... ಅದೇನಾಯ್ತು? ಹೇಳು" ಅಂದೆ... ಉಸ್ತಾದನೆಂಬ ಗೌರವ ಕೊಟ್ಟು.
ಬರೀ ಮನಸ್ಸೊಂದೆ ಪೆಡಸಿದ್ರೆ ಇಂಥಲ್ಲೆಲ್ಲ ಜೀವ್ನ ಮಾಡೋದು ಕಷ್ಟ ಮೇಷ್ಟ್ರೇ... ನಿಮ್ಮೆತ್ರಕ್ಕೆ


೨೪೪

ಸರಿಯಾಗಿ ಮೈನೂ ಗಟ್ಟಿಮುಟ್ಟಾಗಿ ಮಾಡ್ಕೋಬೇಕು ಎಂದು ಬಂದ ಹೊಸತರಲ್ಲಿ ನನ್ನಿಂದ ಬಗೆಬಗೆ ಕಸರತ್ತು ಮಾಡಿಸಿದ್ದ; ಹೊಟ್ಟೆ ಸೊಂಟದ ಮಾಂಸವನ್ನು ತೋಳಿಗೆ ರವಾನಿಸಿದ್ದ... ಅಂಥವನು ಏಳರ ಜ್ವರ ಹುಟ್ಟಿಸುವುದೆಂದರೇನು.
ಅರ್ಜುನ ನೆಲಮೂಸುತ್ತ ಬಂದು ನಮ್ಮಿಬ್ಬರ ನಡುವೆ ಮೈಚಾಚಿ ಮಲಗಿಕೊಂಡಿತು. ಅದರ ಮೈ ನೇವರಿಸುತ್ತ ಗುರಪ್ಪ "ಅದೇನೆಂಬುದು ನಂಗೊಂದು ಗೊತ್ತಿಲ್ಲ ಮೇಷ್ಟ್ರೇ... ರೆಡ್ಡಿ, ಗೌಡ, ಕುಲಕರ್ಣಿ ಎಲ್ಲಾರು ಕಾಯಾಕ ಹತ್ಯಾರಂತೆ... ನೀವು ಲಗೂನ ಹೋಗ್ಬೇಕಂತೆ..." ಎಂದೊಂದು ನಿಟ್ಟುಸಿರುಬಿಟ್ಟು ನಿಮ್ಮ ಯಿಂದಕ ನಾನೂ ಬರ್ತೀನಿ. ಯದರ್ಕೋಬೇಡ್ರಿ" ಎಂದ ಧೈರ್ಯ ತುಂಬುವವನಂತೆ.
"ಕರ್ಯೋರಾದ್ರು ಯಾರು?"
"ಲಚ್ಚುಮೀರೆಡ್ಡಿ"
"ಎಲ್ಲಿದಾನೆ"
"ಬಚ್ಚಲ ಕಟ್ಟೆತಾವ"
"ನೀವೇ ವಾದ್ರೆ ಬೇಷಿತ್ತು?"
"ಗುರಪ್ಪ... ಹೇಳ್ದಷ್ಟು ಮಾಡು" ಎಂದೆ ನಿಷ್ಟುರತೆಯಿಂದ...
ಆತ ಒಲ್ಲದ ಮನಸ್ಸಿನಿಂದ ಹೋದ, ಚಾವತ್ತಿನಲ್ಲಿ ಲಕ್ಷ್ಮೀರೆಡ್ಡಿಯೊಂದಿಗೆ ಬಂದ. ಏನ್ಸಮಾಚಾರವೆಂಬಂತೆ ಆ ಮಾಜಿ ಜಮೀನ್ದಾರನ ಕಡೆ ನೋಡಿದೆ.
"ಬರ್ಬೇಕಂತೆ ಮೇಷ್ಟ್ರೆ" ಎಂದ ಗಡುಸು ಧ್ವನಿಯಿಂದ
"ಬರ್ತೀನಿ ನೀನು ಹೋಗು" ಎಂದೆ ಅಷ್ಟೇ ಗಡುಸಿನಿಂದ. ಅವನು ಹತ್ತು ಹೆಜ್ಜೆಗೊಮ್ಮೊಮ್ಮೆ ಕ್ಯಾಕರಿಸಿ ಉಗುಳಿ ಒಂದೊಂದು ಮೈಲಿಗಲ್ಲು ಸೃಷ್ಟಿಸುತ್ತ ಹೋದ.
ಕನಸಿನಲ್ಲಿ ಬಸುರಾಗಿ ಬೆಳಗಾಗುತ್ತಲೆ ಹಡೆಯಲು ಕೌದಿ ಹುಡುಕಾಡುವ ಗ್ರಾಮದ ಅನೇಕರ ಪೈಕಿ ಇವನೂ ಒಬ್ಬ.
ಗುರಪ್ಪನನ್ನು ಅಲ್ಲೆ ಕುಂಡ್ರಿಸಿ ನಾನೊಬ್ಬನೆ ಹೊರಟೆ... ಓಣಿಯ ಜನ ಆಯಕಟ್ಟಾದ ಜಾಗದಲ್ಲಿ ನಿಂತು ನೋಡುತ್ತಿದ್ದರು.
ಜಗನ್ನಾಥ ರೆಡ್ಡಿಒಯ ಉಪ್ಪರಿಗೆ ಮನೆಯನ್ನು ಹೊರ ವಲಯದ ಐದು ಕಿಲೋಮೀಟರು ದೂರದಿಂದಲೇ ಗುರುತಿಸುವುದು ಸುಲಭ. ನೂರಾರು ಮಂದಿ ಏಳೆಂಟು ವರ್ಷ ಕಷ್ಟಪಟ್ಟು ಕಟ್ಟಿರುವ ಮನೆಯಂತೆ ಅದು.
ಐದುಮಂದಿ ತುಂಬು ಗರ್ಭಿಣಿಯರನ್ನು ಬಲಿಕೊಟ್ಟು ಅದನ್ನು ಶಾಂತಿ ಮಾಡಲಾಗಿರುವುದಂತೆ. ಹೀಗೆ ಎಷ್ಟೆಷ್ಟೋ ಕಥೆಗಳನ್ನು ಒಳಗೊಂಡಿರುವ; ಸೃಷ್ಟಿಸುತ್ತಿರುವ ಆ ಮನೆ ಕೈ ಬೀಸಿ ಕರೆಯುತ್ತಿರುವಂತೆ ಹತ್ತಿರವಾದೆ.
ಮನೆಯ ಮಹಾದ್ವಾರದ ಮುಂದೆ ಏಳೆಂಟು ಮಂದಿ ಕಟ್ಟಾಳುಗಳು ತಲಾ ಒಂದೊಂದು ಬಡಿಗೆ ಹಿಡಿದುಕೊಂಡು ಕೆಕ್ಕರಿಸಿ ನೋಡುತ್ತಿದ್ದುದರ ಕಡೆ ಕೇರು ಮಾಡದೆ ಬಾಗಿಲು ದಾಟಿದೆ.
ಜಗನಾಥರೆಡ್ಡಿ ಪಡಸಾಲೆ ಮೇಲಿದ್ದ ಆ ಮನೆಯಷ್ಟೆ ಹಳೆಯದಾದ ಸಾಗುವಾನಿ ಮರದ ಕುರ್ಚಿಯಲ್ಲಿ ಕೂಕಂಡಿದ್ದ. ಗೋಡೆ ಮೇಲೆ ಅಲಂಕಾರಕ್ಕೆ ನೇತು ಹಾಕಿದ್ದ ಕತ್ತಿ ಗುರಾಣಿ,


೨೪೫

ತುಪಾಕಿಗಾಳು... ಅವುಗಳನ್ನು ಬಳಸಿ ಎಷ್ಟು ದಿನವಾಯಿತೋ ಏನೋ? ಗಿರಿಜಾ ಮೀಸೆಯ ಮುಖದ ತಾತ ಮುತ್ತಾತಂದಿರ ಫೋಟೋಗಳು ಅಷ್ಟೇ ಜೇಡೆಣೆದು ಬೇಬಿಷ್ಟೆಗೆ ಒಳಗಾಗಿದ್ದವು.

ಕೆಳಗಡೆ ಅಲ್ಲಲ್ಲಿ ಊರು ಮಡುವ ಗೌಡ, ಕುಲಕರ್ಣಿ ಮುಂತಾದವರು ಮುಖ ಬಿಕ್ಕೊಂಡು ಅಲ್ಲಲ್ಲಿ ಕೂತಿದ್ದರು. ನನ್ನ ಕಡೆ ದುರುಗುಟ್ಟಿ ನೋಡಿದರು. ಲಕ್ಷ್ಮೀರೆಡ್ಡಿ ಜೋಡು ನಳಿಗೆಯ ಬಂದೂಕೇ ತಾನೆಂಬಂತೆ ಒಂದು ಮೂಲೆಯಲ್ಲಿ ಕೂತುಕೊಂಡ.

ನಾನು ಸೀದ ಪಡಸಾಲೆ ಮೇಲೇರಿ ರೆದ್ದಿಯ ಪಕ್ಕದಲ್ಲಿ ಮತ್ತೊಂದು ಕರಿಮತ್ತಿ ಕುರ್ಚಿಮೇಲೆ ಕೂತುಕೊಂಡೊಡನೆಎಲ್ಲರ ಹೃದಯಗಳ ಬಡಿತ ದ್ವಿಗುಣಗೊಂಡಿತು. ಎಷ್ಟು ಸೊಕ್ಕಿದ್ದೀತಪ್ಪಾ ಇವ್ನೀಗೆ... ಮೇಷ್ಟ್ರಾಗೆ ಇಷ್ಟು ಧಿಮಾಕು ತೋರ್ಸ್ತಿದಾನೆ. ಇನ್ನು ಕಲೆಕ್ಟ್ರು ಆಗಿದ್ರೆ ಇನ್ನೆಷ್ಟು ಧಿಮಾಕು ತೋರಿಸ್ತಿದ್ನೋ ಎಂಬಂತೆ ನನ್ನ ಕಡೆ ನೋಡುತ್ತಿದ್ದವರು ವಾಸ್ತವಾಗಿ ಅಂಥವರಲ್ಲ. ರೆಡ್ಡಿ ಸಮಕ್ಷಮ ಹಾಗೆ ವರ್ತಿಸುತ್ತಿದ್ದರೋ?
ಧಡೂತಿ ಬೆಕ್ಕೊಂದು ರೆಡ್ಡಿಯ ಕಾಲಸಂದಿಯಲ್ಲಿ ಹೊಸೆಯುತ್ತ ಮ್ಯಾಂಗುಟ್ಟತೊಡಗಿದಾಗ ಪರದೆ ಆಚೆಕಡೆ ‘ಬಾ ಕೋಶ್’ ಎಂದು ಹೆಣ್ಣು ಬಹುಳಃ ಅವರ ಅವಿವಾಹಿತ ಮಗಳು ಮೂವತ್ತು ವಯಸ್ಸಿನ ಪುಷ್ಪವತಿ ಇರಬಹುದು. ಬಾಗಿಲ ಮರೆಯಲ್ಲಿ ತಲೆತುಂಬ ಸೆರಗು ಹೊದ್ದು ಕೂತಿರುವ ತುಂಬು ಗರ್ಭಿಣಿ ಹೆಂಗಸು ಬಹುಶಃ ರೆಡ್ಡಿಯ ಐದನೆ ಪತ್ನಿ ಇರಬಹುದು. ಅದೇ ತಾನೆ ಕೆಮ್ಮುತ್ತ; ಮೀಸೆಗಂಟಿದ್ದನ್ನು ನಾಲಿಗೆಯಿಂದ ಒರೆಸಿಕೊಳ್ಳುತ್ತ ಬಂದ ಮೂವತ್ತೆಂಟು ವಯಸ್ಸಿನ ವ್ಯಕ್ತಿ ರೆಡ್ಡಿಯ ದ್ವಿತೀಯ ಸುಪುತ್ರ ಪುರುಷೋತ್ತಮ ರೆಡ್ಡಿ ವಿಧೇಯತೆಯಿಂದ ಒಂದು ಮೂಲೆಯಲ್ಲಿ ಕೂತುಕೊಂಡ. ಕರ್ಚಿಕಾಯಿ ಕಡಿಯುತ್ತ ತೊದಲುಗಾಲು ಇಡುತ್ತ ಬಂದ ರೆಡ್ಡಿಯವರ ಹದಿಮೂರನೆಯ ಸುಪುತ್ರ ರಘುನಂದನರೆಡ್ಡಿ ತಳವಾರನ ಮೇಲೆ ಬುಳ್ಳನೆ ಉಚ್ಚೆ ಹೊಯ್ದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ.

ಮೇಷ್ಟ್ರನ್ನ ಇಲ್ಲೆ ಜೀವ ಸಮಾಧಿ ಮಾಡಿಬಿಡುವುದೇ? ಅಂಗ ಊನ ಮಾಡಿ ಹೊರಗೆ ಸಾಗಹಾಕುವುದೆ? ಎಂಬಂತೆ ಪರಸ್ಪರ ಮುಖ ನೋಡಿಕೊಳ್ಳುವುದರಿಂದ ಬೇಸತ್ತು "ಏನ್ರೆಡ್ಡಿಯವ್ರೆ ಬರಹೇಳಿದ್ದರಂತೆ" ಎಂದು ನಾನೆ ಮೌನ ಮುರಿದೆ.
ರೆಡ್ಡಿ ನನ್ನತ್ತ ದುರುಗುಟ್ಟಿ ಒಂಚಣ ನೋಡಿ ಮರುಕ್ಷಣ ಕಣ್ಣಾಲಿ ಸಡಿಲಿದರು. "ನಿಮ್ಮೂರ್ಯಾವುದಂದ್ರಿ?" ಎಂದು ಕೇಳಿದರು.
"ಕೊಟ್ಟೂರು! ಯಾಕೆ?" ಎಂದೆ ಆಶ್ಚರ್ಯದಿಂದ.
"ಬಳ್ಳಾರಿ ತಾಲ್ಲೂಕು ಕೂಡ್ಲಿಗಿ ಜಿಲ್ಲೇಲಿರೋ ಕೊಟ್ಟುರು ತಾನೆ?" ಎಂದು ಕೇಳಿದ ಮಾನಪ್ಪಾಚಾರಿ ಸಾಮಾನ್ಯನಲ್ಲ. ದೇವಿ ಪುರಾಣ ನಾಲಿಗೆ ತುದಿ ಮೇಲಿಟ್ಟುಕೊಂಡಿರುವ ಪ್ರಚಂಡ ವ್ಯಕ್ತಿ.
"ಅಲ್ಲ... ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕ್ನಲ್ಲಿರೋ ಕೊಟ್ಟುರು" ಎಂದು ವ್ಯಂಗ ಸರಿಪಡಿಸಿದೆ.
"ನಿಮ್ಮೂರಾಗ ಯಾರೋ ಬ್ಯಾಂಬ್ರು ವಳ್ಳೆತ್ನಾಗ ಜೋತಿಷ್ಯ ಹೇಳ್ತಾರಂತಲ್ಲ"ಎಂದು ಕೆಳಗೇರಿ ಮುಖಿಯಾ ಚೌಡಪ್ಪ ತಾನು ಕೂತಿದ್ದ ಚಪ್ಪಲಿ ಗೂಡಿನಿಂದ ನುಡಿದ.
"ಇರಬೌದು!" ಎಂದೆ ಆಸಕ್ತಿ ತೋರದೆ...
"ನೀನೂ ಅವ್ರ ಮೊಮ್ಮಗ್ನೂ ಗೆಣೆಕಾರರಂತೆ!" ಎಂದು ಸೊಟ್ಟ ಮೂತಿ ನಾಗಪ್ಪ ಬಗೆದ.


೨೪೬

ನನ್ನ ಪೂರ್ವಾಪರ ತಿಳಿದುಕೊಂಡೇ ಚರ್ಚೆಗೆ ಆರಂಭಿಸಿರುವರೆಂದು ಊಹಿಸಿದೆ. ಆಷ್ಟರಲ್ಲಿ ಗುರುವಪ್ಪ ಬಂದು ಒಂದು ಕಡೆ ಕೂತುಕೊಂಡ. ಅವನ ಆಗಮನದಿಂದ ನನಗೆ ಬಲಬಂದಂತಾಯಿತು.
"ಇರಬೌದು" ಎಂದೆ.
ಮತ್ತೆ ಅವರೆಲ್ಲ ಪರಸ್ಪರ ಮೂತಿ ನೋಡಿಕೊಂಡರು.
"ನಿಮ್ಮ ಗೆಣೆಕಾರ ಕೊತ್ತಲಗಿ ಬ್ಯಾಂಕಿನಾಗ ಅದಾನಂತೆ..." ಎಂದ ಸುರವತ್ತಿ ಸಿದ್ರಾಮಜ್ಜ.
"ಇರಬೌದು!" ಅಂದೆ...
"ಇರಬೌದಿರಬೌದಂದ್ರೆ ಹೆಂಗ ಮೇಸ್ಟ್ರೇ ಸೊಲೂಪ ಬುಡುಸಿಯ್ಯೋಳ್ರಲ್ಲ!" ಎಂದು ಪುರುಷೋತ್ತಮರೆಡ್ಡಿ ಕೂಕಂಡಲ್ಲಿಂದ ಘೀಂಕರಿಸಿದ.
ಅವರ ಉಡಾಫೆ ಪ್ರಶ್ನೆಗಳಿಂದ ಮೊದಲೇ ರೋಸಿದ್ದ ನಾನು -
"ಹಿಂಗೆಲ್ಲ ಸುತ್ತೀಬಳ್ಸ್ ಕೇಳಿ ಕೇಳಿ ನನ್‌ತಲೆ ತಿನ್‌ಬ್ಯಾಡ್ರಿ... ಅದೇನು ನಿಮ್ ಮನಸ್ನಲ್ಲೈತೋ ನೇರವಾಗಿ ಕೇಳಿಬಿಡ್ರಿ" ಎಂದು ಒಂದೇ ಏಟಿಗೆ ಅವರನ್ನು ಅವಕ್ಕಾಗಿಸಿದೆ.

ಮಾನಪ್ಪಚಾರಿಯೇ ಕೂಕಂಡಲ್ಲಿಂದ ಎದ್ದು ಬಂದು ಸುತ್ತಾನ್ನಾಕಡೆ ಪರೀಕ್ಷಾರ್ಥವಾಗಿ ನೋಡಿ ಗುಟ್ಟುರಟ್ಟಾಗಬಾರಲೆಂದು ಖಚಿತಪಡಿಸಿಕೊಂಡು ಒಂದು ಕ್ಷಣ ಕಣ್ಣುಮುಚ್ಚಿ ದೇವಿಕುರಿತು ಧೇನಿಸಿ ತೆರದ.
"ನೋಡಪ್ಪಾ ಮೇಸ್ಟ್ರೇ... ನೀನು ಮಾಡಿದ್ದೆಲ್ಲ ನಾವು ಹೊಟ್ಟೇಲಿ ಹಾಕ್ಕಂತಿವಿ... ನಾವು ಮಾಡಿರೋದೆಲ್ಲ ನೀನೂ ಹೊಟ್ಟೇಲಿ ಹಾಕ್ಕೊಂಡು ನಮ್ ಸಾವ್ಕಾರ್ರಿಗೆ ಒಂದ್ ಸಾಯ್ ಮಾಡ್ಬೇಕಪ್ಪಾ" ಎಂದ.
"ಆಯ್ತು...ಬಿಡ್ಸಿ ಹೇಳ್ರಿ?" ಅಂದೆ.
"ಈವ್ಯವಹಾರ ಬಲು ಸೂಕ್ಷ್ಮ ಐತೆ ಮೇಸ್ಟ್ರೇ... ನಿಮ್ಗೆ ಹೆಂಗ ಹೇಳ್ಬೇಕೋ ಅರ್ಥ ಅಗುವಲ್ದು... ನಮ್ಮ ಸಾವುಕಾರ್ರು ಜಗ್ನಾಥ್ರೆಡ್ಡಿ ಎಂಥೋರಂತ ನಿಮ್ಗೆ ಬಿಡಿಸಿ ಹೇಳಬ್ಕಾಗಿಲ್ಲ... ತಲೆಮಾರಿನಿಂದ ನಡೆದ ಮನ್ತನೆ... ಇವ್ರು ತಂದೆಯೋರು ಸೀತಾರಾಮ್ರೆಡ್ಡಿಯೋರು ಕೆಮ್ಮಿದ್ರೂಂದ್ರೆ ಊರಿಗೆ ಊರೇ ಗಪ್ಚಿಪ್... ಅವ್ರು ಸಾರೋಟನಾಗೆ ಬಂದ್ರೂ ಅಂದ್ರ ಮನುಷ್ಯರೊಂದೆ ಯಾಕೆ ನಾಯಿ ಬೆಕ್ಕು ಕೂಡ ಓಡಿ ತಲೆ ಮರೆಸ್ಕೊಂಡ್ತಿದ್ವೂಂದ್ರೆ ನೀವೇ ಲೆಕ್ಕ ಹಾಕಿ... ಇನ್ನಿವರ ತಾತ ಸರ್ದಾರ್ ಪಾಪಿರೆಡ್ಡಿಯವರಂತೂ ತಮ್ ಮೀಸೆಮ್ಯಾಲೆ ಮೂರ್ಮೂರುನಿಂಬೆ ಹಣ್ಣು ಕುಂದ್ರಿಸುತ್ತಿದ್ರು... ಅವ್ರು ಇಪ್ಪತ್ತೂರ್ನ ಆಳ್ತಿದ್ದಿದ್ನ ನೋಇ ಕುಂಪಿಣಿ ಸರಕಾರ ಮೂಗಿನ ಮೇಲೆ ಬೆರಳಿಟ್ಟ್ಕೊಂಡ್ತು ಅಂದ್ರೆ ನೀವೇ ಲೆಕ್ಕ ಹಾಕ್ರಿ... ಎಡಗೈಲಿ ತಗಂತಿದ್ರು ಬಲಗೈಲಿ ಕೊಡ್ತಿದ್ರು. ಎಷ್ಟ್ ಜನ್ರ ತಲೆ ಕಡಿಸಿದ್ರು ಏನ್ಕಥೆ?..."

ರಾಘಪ್ಪ ಮುಂದೇನೋ ಹೇಳ್ಬೇಕೆಂದಿರುವಾಗ ರೆಡ್ಡಿ ಕೆಮ್ಮಿ ಮಾತು ದಾರಿ ತಪ್ದಿದೆ ಎಂದು ಸೂಚಿಸಿದರು.
"ಆ ಕಾಲಾನೇ ಹಂಗಿತ್ತು... ನೀವ್ ನೋಡ್ರಿ... ಗೋಡೆ ಮೇಲೆ ಹೆಂಗದಾರೆ..." ಎಂದು ಒಂದೊಂದು ಸ್ಥಿರ ಚಿತ್ರಗಳ ಪರಿಚಯ ಮಾಡಿಕೊಟ್ಟ.
ನಾನು ಕೂತಿದ್ದ ಕುರ್ಚಿಗೆ ಮುಳ್ಳು ಮೂಡುತ್ತಿರುವಂತೆ ಭಾಸವಾಗಿ ಮಿಸುಕಾಡತೊಡಗಿದೆ.


೨೪೭

ಅಷ್ಟರಲ್ಲಿ ನಪುಂಸಕಲಿಂಗಕ್ಕೆ ಹೆಸರಾಗಿದ್ದ ಶಿವಲಿಂಗಯ್ಯ ವಯ್ಯಾರದಿಂದ ಒಳಗಡೆ ಬಂದು ಎಲ್ಲರಿಗೂ ಕೊಟ್ಟ, ನನಗೂ ಸಹ.
ರೆಡ್ಡಿಯ ಸೂಚನೆಯಂತೆ ಮಾನಪ್ಪಾಚಾರಿ
"ಲೇ ಗುರುವ... ಪರಗುಣಿ ಮಾಗಿ ಹೊಲಕ್ಕೋಗಿ ಆಳುಗಳೇನೇನು ಮಾಡ್ತಾರನೋಡ್ಕೊಂಡ್ಬಾ ಹೋಗು" ಎಂದು ಹೇಳಿದ.
ಅವನೊಂಚೂರು ಮಿಸುಕಾಡಲಿಲ್ಲ.
"ಆತ ನಮ್ಮವ... ಇರ್ಲಿ... ನೀವು ಹೇಳೋದು ಹೇಳ್ರಿ ಪರವಯಿಲ್ಲ..."ಎಂದೆ.
ರಾಘಪ್ಪಾಚಾರಿ ಒಂದು ದಮ್ಮು ಬುಡ್ಡಾ ವಂಶಾವಳಿಯನ್ನು ವರ್ಣನೆ ಮಾಡಿ ಹೇಳಿದ್ದಾದ ಮೇಲೆ ಮುಖ್ಯ ವಿಷಯಕ್ಕೆ ಬಂದ.

ಬುಡ್ಡಾ ಜಗನ್ನಾಥರೆಡ್ಡಿಯವರಿಗೂ ತಂಗರಡೋಣಿ ತಮ್ಮಾರೆಡ್ಡಿಯವರಿಗೂ ತಲೆತಲೆ ಮಾರುಗಳಿಂದ ಇರುವ ದ್ವೇಶದ ಬಗ್ಗೆ, ತಮ್ಮಾರೆಡ್ಡಿಯ ಭಾವಮೈದುನ ತಿರುವೆಂಗಳರೆಡ್ಡಿ ಆಳುವ ಪಕ್ಷದ ಎಮ್ಮೆಲ್ಲೆಯಾಗಿರುವ ಬಗ್ಗೆ; ಅವನ ವಶೀಲಿಯಿಂದ ತಮ್ಮ ದೂರದ ಸಂಭಂದಿಯಾದ ರಾಮಕ್ರಿಷ್ಣಾರೆಡ್ಡಿ ಎಂಬ ಸಬ್‌ಇನ್ಸ್ಪೆಕ್ಟರನ್ನು ತಂದು ಕೂಡಿಸಿರುವ ಬಗ್ಗೆ; ಒಂದು ಚಿಕ್ಕ ಅಪರಾಧ ಸಿಕ್ಕರೆ ಸಾಕು ಜಗನ್ನಾಥರೆಡ್ಡಿಯನ್ನು ಅರೆಸ್ಟ್ ಮಾಡಿ ದರ ದರ ಎಳೆದೊಯ್ದು ಲಾಕಪ್ಪಿಗೆ ಕೂಡುವುದಾಗಿ ಆ ಎಸೈ ಶಪಥ ಮಾಡಿರುವ ಬಗ್ಗೆ, ದೊಡ್ಡ ಜಮೀನ್ದಾರರಾಗಿ ಜಗನ್ನಥರೆಡ್ಡಿ ಅಪರಾಧ ಮಾಡದೆ ಹೇಗೆ ಇರಲು ಸಾಧ್ಯ ಎಂಬ ಬಗ್ಗೆ; ತಮ್ಮಾರೆಡ್ಡಿ ಕರ್ನೂಲಿನಿಂದ ಐದುಮಂದಿ ಬಾಡಿಗೆ ಕೊಲೆಗಾರರನ್ನು ಕರೆಸಿ ಜಗನ್ನಾಥರೆಡ್ಡಿಯನ್ನು ಮುಗಿಸಲು ಸಂಚು ಮಾಡಿರುವ ಬಗ್ಗೆ ಎಲ್ಲವನ್ನು ಸೂರು ಕಡಿಮೆ ಮಾಡಿಕೊಂಡು ರಾಘಪ್ಪ ವರ್ಣನೆ ಮಾಡಿ ಹೇಳಿ ಮುಗಿಸಿದ.

ಜಗನ್ನಾಥರೆಡ್ಡಿ ತನ್ನ ಹೃದಯವೆಂಬ ಅಗ್ಗಿಷ್ಟಿಕೆಯಲ್ಲಿ ತಮ್ಮಾರೆಡ್ಡಿಯನ್ನು ಜೀವಂತ ದಹಿಸುತ್ತ ಉಸಿರಮೇಲೆ ಉಸಿರು ಬಿಟ್ಟ.
ವಾಗಿಲಿಯ ಬುಡ್ಡಾ ಕುಟುಂಬಕ್ಕೂ; ತಂಗರದೋಣಿ ಪೊಬ್ಬಾತ್ತಿ ಕುಟುಂಬಕ್ಕೂ ಎಣ್ಣೆ ಸೀಗೇಕಾಯಿ ಸಂಬಂಧವಿದೆ ಎಂದು ನನಗೆ ಗೊತ್ತಿತ್ತು.
ನಾನು ದೀರ್ಘಾವದಿ ರಜೆ ಮೇಲೆ ಊರಿಗೆ ಹೋಗಿದ್ದಾಗ ನಾನೇನಾದರೂ ತಂಗರದೋಣಿ ರೆಡ್ಡಿಯವರಿಂದ ಸಹಾಯ ಯಾಚಿಸಿರಬಹುದೇ ಎಂದು ಇವರು ತಮ್ಮ ಜವಾರಿ ಪತ್ತೆದಾರರಿಂದ ವಿವರ ತಿಳಿದುಕೊಂಡಿರುವುದೂ ಗೊತ್ತಿತ್ತು.

ರೆಡ್ಡಿ ಯಕಶ್ಚಿತ್ ಕೊಲೆಯೊಂದರ ಪಂಚನಾಮೆಗೆ ಹೆದರಿ ಬೀಗರೂರರ ಬಣವೆಯೊಳಗೆ ತಲೆ ಮರೆಸಿಕೊಂಡಿದ್ದಾಗ ಗುರವಪ್ಪ ಪಕಪಕ ನಗಾಡಿ ಇವನು ಇವನು ನಿಜವಾಗಿ ಸೀತಾರಾಮರೆಡ್ಡಿಗೆಹುಟ್ಟಿದವನಲ್ಲವೆಂದೂ, ಅವನ ತಾಯಿ ಅಗಸರ ಯಂಕೋಬಿಯನ್ನು ಇಟ್ಟುಕೊಂಡಿದ್ದಳೆಂದೂ ಹೇಳಿದ್ದು ನೆನಪಾಗಿ ತಲೆ ಎತ್ತಿ ಸೀತಾರಾಮರೆಡ್ಡಿಯವರ ಫೋಟೊದಲ್ಲಿ ಮಗ್ಗುಲಿದ್ದ ಮಧ್ಯವಯಸ್ಕ ಮಹಿಳೆಯ ಫೋಟೊ ಕಡೆ ನೋಡಿ ತಲೆ ತಗ್ಗಿಸಿದೆ.
ಜಗನ್ನಾಥರೆಡ್ಡಿಯವರಿಗೂ ತಮ್ಮ ಜನನದ ಪೂರ್ವಾಪರ ಇವನಿಗೆ ಗೊತ್ತಾಗಿರಬಹುದೇ? ಪ್ರಚಂಡ ಗುರುವನೇನಾದರೂ ಗುಟ್ಟು ಬಿಟ್ಟುಕೊಟ್ಟಿರಬಹುದೇ ಎಂದು ಯೋಚಿಸಿ ನಮ್ಮಿಬ್ಬರ ಕಡೆ ಒಮ್ಮೆ ನೋಡಿ ಮುಖದ ಬಿಗುವು ಸಡಲಿಸಿಕೊಂಡು ಮೆಲ್ಲಗೆ ಕೈ ಚಾಚಿ ನನ್ನ ಬೆನ್ನು ಸವರಿದ.
ಇದರಿಂದ ನನಗೆ ಒಂಥರಾ ಇರುಸು ಮುರುಸಾಯಿತು.


೨೪೮

"ಏನು ಮಾಡೋದಪ್ಪಾ... ನಿಮ್ಮಂಥ ಸಾಮಾನ್ಯ ಮನುಷ್ಯರಾಗಿ ಹುಟ್ಟಿದ್ರೆ ಇಂಥ ಸಮಸ್ಯೇನೇ ಇರ್ತಿರ್ಲಿಲ್ಲ... ಅದೂ ಅಲ್ದೆ ಈ ದೇಶಕ್ಕೆ ಸ್ವಾತಂತ್ರ ಬಂದು ಕೊಡಬಾರ್ದಕಷ್ಟ ಕೊಡ್ತಿದೆ. ಈ ಇಂದ್ರಾಗಾಂಧಿ ಎಂಭೋಳು ಸುಡುಗಾಡು ಕಾಯ್ದೆ ಮಾಡಿ ನಮ್ಮ ಹಿರೇರು ಸಂಪಾದಿಸಿದ ಭೂಮೀನೆಲ್ಲ ಕಿತ್ಕೊಳ್ಳೊಕೆ ಶುರು ಮಾಡ್ಯಾಳ... ನೀನೂ ನನ್ ಮಗ ಇದ್ದಂತೆ... ನನ್ ಯೋಗಕ್ಷೇಮ ಬಯಸೋದು ಕೂಡ ನಿನ್ ಕರ್ತವ್ಯ ತಾನೆ?" ಎಂದು ಮುಂತಾಗಿ ಆತ ಮಾತಾಡತೊಡಗಿದ್ದು ನನಗೆ ಆಶ್ಚರ್ಯವಾಯಿತು.

ಜಮೀನ್ದಾರಿ ವ್ಯವಸ್ತ್ಥೆಯ ತರಾವರಿ ನಡುವಳಿಕೆಗಳ ಬಗ್ಗೆ ಸದಾ ಅನುಮಾನ ಇಟ್ಟುಕೊಂಡಿರುವ ಮನುಷ್ಯನಾದ ನಾನು ನೀಚಸ್ಥಾನದಲ್ಲಿ ಕುಳಿತಿದ್ದವರ ಕಡೆ ಒಮ್ಮೆ ನೋಡಿದೆ. ಅವರೆಲ್ಲ ವಿಶೇಷ ವಿಧೇಯತೆ ತುಳುಕಿಸುತ್ತ ಕೂಕಂದಿದ್ದರು.
ಮಾನಪ್ಪಾಚಾರಿ ಮೆಲ್ಲಗೆ ಮುಖ ತಿರುವಿ "ಸಾಹುಕಾರ್ರು ಹೇಳೆದು ಖರೇವು ಮೇಸ್ಟ್ರೇ. ಸತ್ಯವನ್ನು ನುಂಗ್ಲಿಕ್ಕಾಗ್ದೆ ಉಗುಳಿಕ್ಕಾಗ್ದೆ ಒದ್ದಾಡೋದ್ರ ಬಗ್ಗೆ ನೀನಾಗಲೀ, ನೀವಾಗ್ಲೀ ತಪ್ ತಿಳಿಬಾರ್ದು ನೋಡು..." ದ್ವನಿ ಸ್ವಲ್ಪ ತಗ್ಗಿಸಿ "ಆ ತಮ್ಮಾರೆಡ್ಡಿ ಎಂಥ ನೀಚ ಅದಾನ ಗೊತ್ತಾ ಮೇಸ್ಟ್ರೇ?"... ಕರನುಲಿನ ಆ ನಾಕುಮಂದಿಯಿಂದ ಉಳ್ಕೊಂಡ್ರೆ ಮಾಟ ಮಾಡಿಸಿಯಾದ್ರು ಮುಗಿಸ್ಬೇಕಂತ ಉಯ್ಯಲವಾಡದಿಂದ ಮಂತ್ರ ಮಾಡೊರ್ನ ಕರೆಸ್ಯಾನಂತೆ... ಆಯ್ತವಾರ ಅಮಾಸೆ ಬಂದಿತ್ತು ನೋಡು... ಅವತ್ರಾತ್ರಿ ಸುಡುಗಾದ್ನಾಗೆ ಅವ್ರೆಲ್ಲ ಏನೇನೋ ಮಾಡಿದ್ರಂತೆ... ಸಾಹ್ಕಾರ್ರ ಗೊಂಬಿ ಮಾಡಿ ಇಲ್ಲೆಲ್ಲೋ ಉಗಿದಿಟ್ಟಾರ. ಅದೆಲ್ಲಿ ಎಂಬುದೇ ತಿಳಿವಲ್ದು?" ಎಂದು ತಲೆ ಕೆರೆದುಕೊಂಡ.
ರಾಘಪ್ಪ ತಾನೇನು ಕಡಿಮೆ ಎಂಬಂತೆ ಎದ್ದು ನಿಂತು ಸುತ್ತ ಒಮ್ಮೆ ನೋಡಿದನು. "ನಿಮ್ಮೂರಲ್ಲಿ ಪರಮೇಶ್ವರ ಶಾಸ್ತ್ರಿಗಳೆಂಭೋರು ಅದಾರಂತಲ್ಲ..." ಎಂದು ಆತ ಹೇಳುತ್ತಲೆ ಮುಂದಿನದೆಲ್ಲ ಅರ್ಥವಾಗಿ ನೆಮ್ಮದಿ ಉಸಿರುಬಿಟ್ಟೆ.
ನನಗೆ ನಗಬೆಕೋ ಅಳಬೆಕೋ ತಿಳಿಯಲಿಲ್ಲ. ಅವರಿಗೆ ಶಾಸ್ತ್ರಿಗಳು ಲಕ್ವ ಹೊಡೆದು ಮಲಗಿದ್ದಾರೆಂಬ ಸಂಗತಿಯನ್ನು ಹೇಗೆ ಹೆಳುವುದು?
ಒಂದು ದಿನ ಹೋಗೋಣವೆಂದರು. ಆಗಲಿ ಎಂದೆ.

ಬೇಡ... ಅಡುಗೆ ಮಾಡಿಕೊಂಡಿದ್ದೀನೆಂದರೂ ರೆಡ್ಡಿಯವರು ಊಟ ಮಾಡೇ ಹೋಗುವಂತೆ ಬಲವಂತ ಮಾಡಲು ನನ್ನನ್ನು ಬಚ್ಚಲು ಮನೆಗೆ ಕರೆದೊಯ್ದರು. ಬಚ್ಚಲು ಮನೆ ಅಂದರೆಬಚ್ಚಲು ಮನೆಯದು. ಐವತ್ತು ಮಂದಿ ಏಕಕಾಲಕ್ಕೆ ಜಳಕ ಮಾದುವಷ್ತು ವಿಶಾಲವಾಗಿತ್ತು. ಸದಾ ಉರಿಯಾಡುತ್ತಿರುವ ಒಲೆ ಮೇಲೆ ಬಾವಿಯನ್ನು ಹೋಲುವ ಐದಾರು ತಂಬಿಗೆಗಳು.

ಶಿವ್ಲಿಂಗಯ್ಯ ವೈಯ್ಯಾರದಿಂದ ಬಂದು ಬಿಸಿನೀರಿಗೆ ತಂಣ್ನೀರು ಬೆರೆಸಿಕೊಡುತ್ತ "ನೀರು ಕಾದದ ಜಳಕ ಮಾಇ ಬಿಡ್ಬೇಕ್ರಿ... ದೊಡ್ಸಾವ್ಕಾರ್ರು ಒಂದೊಂದು ತಾಸು ಜಳಕ ಮಾಡ್ತಿದ್ದ್ರು... ನೀವೂ ಜಳಕಾ ಮಾಡ್ನೋಡ್ರಿ ಗಪ್ಪಂತ ನಿದ್ದೆ ಬಂದು ಬಿಡ್ತದೆ" ಎಂತು ಮುಂತಾಗಿ ಕೊರೆದ, ನಾನು ಕಿವಿಮೇಲೆ ಹಾಕ್ಕೊಳ್ದದೆ ಕೈ ಕಾಲು ಮುಖ ತೊಳೆದುಕೊಂಡು ಹೊರಗಡೆ ಬಂದೆ. ನನಗಾಗಿ ಕಾಯುತ್ತಿದ್ದ ಆಸ್ತಮಾ ರೋಗಿ ಪುರುಶೋತ್ತಮರೆಡ್ಡಿ ನನ್ನನ್ನು ಕರೆದೊಯ್ದು ಮನೆಯನ್ನೆಲ್ಲ ತೋರಿಸಿಕೊಂಡು ಬಂದ. ಬರುವ ಹೊತ್ತಿಗೆ ವಿಶಾಲವಾದ ಊತದ ಮನೆಯಲ್ಲಿ ಮಾನಪ್ಪ,


೨೪೯

ರಾಘಪ್ಪ ರೆಡ್ಡಿಯವರೇ ಮೊದಲಾದ ಇಪ್ಪತ್ತಾರು ಮಂದಿ ಊಟಕ್ಕೆ ಕೂತಿದ್ದರು. ಸೂಚನೆ ಮೇರೆಗೆ ನಾನು ರೆಡ್ಡಿಯವರ ಪಕ್ಕದಲ್ಲಿದ್ದ ಅಡ್ಡಣಿಗೆ ಮುಂದೆ ಕೂತುಕೊಂಡೆ. ತಮ್ಮೀ ಮನೆಯೊಳಗೆ ಆ ಕಾಲದಲ್ಲಿ ಅಷ್ಟು ಜನ ಉಂಬಿದ್ರು... ತಮ್ಮ ತಾನವರ ಕಾಲದಲ್ಲಿ ವಿಕ್ಟೋರಿಯಾ ರಾಣಿಯೇ ಊಟಕ್ಕೆ ಬರ್ತೀನಂತ ಹೇಳಿ ಕಳಿಸಿದ್ಲು... ಎಂದು ಮುಂತಾಗಿ ರೆಡ್ಡಿಯವರು ಹೇಳುತ್ತಿರುವಷ್ಟರಲ್ಲಿ ಊಟ ಬಡಿಸುವ ಪ್ರಕ್ರಿಯೆ ಆರಂಭವಾಯಿತು. ಗೌಡ್ರಿ ಮತ್ತಾಕೆಯ ಹೆಣ್ಣು ಮಕ್ಕಳು, ಗಂಡು ಮಕ್ಕಳು ಮೊಮ್ಮಕ್ಕಳು ತಲಾ ಒಂದೊಂದು ತಿನಿಸಿನ ಗುತ್ತಿಗೆ ಹಿಡಿದು ಬಡಿಸಲಾರಂಬಿಸಿದರು. ಊಟ ಮಾಡಿ ಮುಗಿಸುವ ಹೊತ್ತಿಗೆ ಅರ್ಧ ತಾಸು ಹಿಡಿಯಿತು. ನಂತರ ಹಣ್ಣು ಹಂಪಲು, ತಾಂಬೂಲ ಇತ್ಯಾದಿ ಸಮಾರಾಧನೆ.

ನಾನು ಹೊರಡುವುದಾಗಿ ಎದ್ದೆ... ಬೀಳ್ಕೊಡುತ್ತ ರೆಡ್ಡಿಯವರು "ನಾವು ಹೇಳಿದ್ನ ಮನಸ್ಸಿನಲ್ಲಿಟ್ಕೊಳ್ಳಪ್ಪಾ... ಆದಷ್ಟು ಬೇಗ ಕೊಟ್ಟೂರಿಗೆ ಹೋಗಿ ಶಾಸ್ತಿಗಳನ್ನು ಕಂಡು ಬಂದ್ರೆ ಒಳ್ಳೆಯದು" ಎಂದು ಹೇಳಿ ಬೀಳ್ಕೊಟ್ಟರು.

ಗುರಪ್ಪನೊಂದಿಗೆ ಹೊರಟ ನನ್ನ ಹಿಂದೆಯೇ ಅಷ್ಟು ದೂರದವರೆಗೆ ಬಂದ ಮಾನಪ್ಪ, ರಾಘಪ್ಪ "ನಿಮ್ಮಂಥ ಅದೃಷ್ಟವಂತ್ರು ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಮೇಸ್ಟ್ರೇ" ಎಂದರು. ನಾನು ಯಾಕೆ ಅನ್ನಲು ರಾಘಪ್ಪ "ಜಗನ್ನಾಥರೆಡ್ಡಿಯವರ ಪಕ್ಕದಲ್ಲಿ ಕೂತುಕೊಂಡು ಊಟ ಮಾಡೋದೆಂದ್ರೆ ಸಾಮಾನ್ಯ ಸಂಗತಿಯೇ. ಎಂಥೆಂಥ ಕಲೆಕ್ಟರಿಗೇ ಇದು ಸಾಧ್ಯವಾಗಿಲ್ಲ. ಅಂಥದ್ರಲ್ಲಿ ನೀವು..." ಎಂದು ಮೆಚ್ಚಿಗೆ ವ್ಯಕ್ತಪಡಿಸಿದ.
"ಹೆಂಗಾರ ಮಾಡಿ ಆ ತಮ್ಮಾರೆಡ್ಡಿ ನೆಗ್ದು ಬೀಳೋ ಹಂಗ ಪರಮೇಶ್ವರ ಶಾಸ್ತ್ರಿಗಳಿಂದ ಮಾಟ ಮಾಡಿಸ್ಲೇ ಬೇಕಪ್ಪಾ ಮೇಸ್ಟ್ರೇ, ಉಂಡಿದ್ದು, ಹಾಲುಮುಟ್ಟಿ ಪ್ರಮಾಣ ಮಾಡ್ದಂಗೆ ಎಂಬೋದ್ನ ಮರಿಬ್ಯಾಡ." ಎಂದು ಮಾನಪ್ಪಾಚಾರಿ ಕಿವಿಯಲ್ಲಿ ಪಿಸುಗುಟ್ಟಿದ.

ಅವರಿಬ್ಬರು ಕವಲು ದಾರಿಯಲ್ಲಿ ತಲಾ ಒಂದು ದಿಕ್ಕು ಆಯ್ದುಕೊಂಡು ಹೋದರು. ನನ್ನ ಜೊತೆಯಲ್ಲಿ ನಿರಮ್ಮಳವಾಗಿ ಹೆಜ್ಜೆ ಹಾಕುತ್ತಿದ್ದ ಗುರಪ್ಪ "ಈ ಪರಪಂಚ್ದಾಗ ಯಾರನ್ನಂಬಿದ್ರು ಓ ಯಿಬ್ರೂನ್ನ ಮಾತ್ರ ನಂಬಾರ್ದು ನೋಡ್ರಿ... ಇವರ್ನ ನಂಬ್ದೋರ್ಯಾರೂ ಉದ್ಧಾರಾಗಿಲ್ಲ..." ಎಂದು ಶುರು ಮಾಡಿದ, ರೆಡ್ಡಿ ಮಗ್ಗುಲ ಕೂತು ಉಂಡಿದ್ದು ಒಂದು ಪೂರ್ವ ಜನ್ಮದ ಸುಕೃತ ಎಂಬ ಮಾತಿಗೆ "ಸೂಳ್ಯಾಮಗ, ಮಾದಿಗ್ರು, ಬ್ಯಾಗೇರು ಮುಂಡೇರ ಸಂಗಾಟ ಒಂದೇ ತಟ್ಟೇಲಿ ಅವ ಉಂಭೋದು ಯಾರ್ಗಾರ ಗೊತ್ತಿಲ್ಲಾಂ