ಕಾದಂಬರಿ
ಶಾಮಣ್ಣ - ಅಂತರ್ಜಾಲ ಆವೃತ್ತಿ ಭಾಗ 6 ಹಾಗು ಕಡೆಯದು
ಕುಂ ವೀರಭದ್ರಪ್ಪ

೩೮೩

ಇಣುಕಿದೆನು. ಚಂದ್ರಮಂಡಲ ಸದೃಶವದನ ನಗೆಯ ಸೂಸುತ್ತಿದ್ದ ಒಂದು ದೇಹವು ಶಾಮನದಾಗಿರಲು, ಚಂದನದ್ರವದಿಂದ ಲಿಪ್ತವಾಗಿರುವ ಅಂಗವುಳ್ಳವಳಾಗಿದ್ದ ಇನ್ನೊಂದು ದೇಹವು ಅನಸೂಯಳದಾಗಿತ್ತು. ಸುಕುಮಾರ ಅಂಗವಿನ್ಯಾಸದವಳಾದ ಆಕೆಯು ಅವನಿಗೆ ಅಂದರೆ ನನ್ನ ಮೊಮ್ಮಗನಿಗೆ, ಅಂದರೆ ನನ್ನ ಮಗನ ಮಗನಿಗೆ ಮುದ್ದು ಕೊಡುತ್ತಿರುವುದನ್ನು ನೋಡಿದೊಡನೆ ನಾನು ಆ ಕ್ಷಣ ಅನಿವರ್ಚನೀಯವಾದ ಝಂಝಾವಾತಕ್ಕೆ ಸಿಲುಕಿದ ತರಗೆಲೆಯಂತಾಗಿಬಿಟ್ಟೆನು. ವಿಸ್ತಾರವೂ, ಬಲಿಷ್ಟವೂ ಆದ ಸಮುದ್ರವು ಆ ಕ್ಷಣ ಒಂದು ಪುಟ್ಟ ತೊರೆಯಂತೆ ಮಾರ್ಪಟ್ಟಂತೆ ಭಾಸವಾಯಿತು. ಒಣ ಮರಕ್ಕೆ ಹತ್ತಿದ ಬೆಂಕಿಯು ಇಡೀ ಕಾಡನ್ನೇ ಬಲಿತೆಗೆದುಕೊಳ್ಳುವಂತೆಯೇ ದುಷ್‌ಪುತ್ರನಾದ ಶಾಮನಿಂದ ಇಡೀ ನಮ್ಮ ಶ್ರೇಷ್ಠ ಕುಲವೇ ನಾಶವಾಗುತ್ತಿದೆಯಲ್ಲಾ... ಆಶೆ ಎಂಬ ನದಿಯಲ್ಲಿ ವಾಸಿಸುತ್ತಿರುವ ಕಾಮವೆಂಬ ಮೊಸಳೆಗೆ ಬಲಿಯಾಗುತ್ತಿರುವುದಲ್ಲಾ... ಶರೀರದೊಳಗೇ ಇದ್ದು ವಾಸಿಸುತ್ತಿರುವ ದೊಡ್ಡ ಶತ್ರುವಾದ ಕಾಮವನ್ನು ಅಧ್ಯಾತ್ಮದ ಅಸ್ತ್ರದಿಂದ ಶಾಮನು ಕೊಲ್ಲಲಾಗದೇ ಹೋದನಲ್ಲಾ... ಎಂದಿತ್ಯಾದಿ ಮಮ್ಮಲನೆ ಮರುಗುತ್ತ ನಾನು ಮನೆಗೆ ಮರಳಿ ಕೋಣೆ ಪ್ರವೇಶಿಸಿ ಕದ ಮುಚ್ಚಿ ಭದ್ರಪಡಿಸಿ ‘ಆತ್ಮನ್ನೇ ಮಾತ್ಮನೇ ತುಷ್ಟಾ ತುಷ್ಟಃ ಸ್ಥಿತ ಪ್ರಜ್ಞಸ್ತದೋಚ್ಯತೇ’ ಎಂಬ ಸ್ಥಿತಪ್ರಜ್ಞ ಸಮ್ಬಂಧೀ ಗೀತಾಶ್ಲೋಕವನ್ನು ಉಚ್ಚರಿಸುವ ಮತ್ತು ಅದರರ್ಥದಾಳಕ್ಕಿಳಿಯುವ ಪ್ರಯತ್ನಕ್ಕೆ ತೊಡಗಿದೆನು. ತನ್ನ ಹೊಳಪು ಮೊದಲಾದ ಗುಣಗಳಿಂದ ಯಕಃಶ್ಚಿತ್ ಚಂದ್ರನು ಈಶ್ವರನ ತಲೆಯನ್ನು ಹತ್ತಿ ಕೂತಂತಯೇ ನೋಡಿದ ಆದೃಷ್ಯವು ಪದೇಪದೇ ನೆನಪಾಗಿ ನನ್ನ ಏಕಾಗ್ರತೆಯ ಮೇಲೆ ಧಾಳಿ ಮಾಡಿತು. ಎಷ್ಟು ಪ್ರಯತ್ನಿಸಿದರೂ ಆ ದೃಶ್ಯ ನನ್ನಿಂದ ಮರೆಯಾಗಲೇ ಇಲ್ಲ. ಪಾರದರ್ಶಕ ಗಾಜಿನ ಕೊಳವೆಯೊಳಗೆ ವಸ್ತುವಿನ ರೂಪ ಅಸಂಖ್ಯಾತವಾಗುವಂತೆ ಆ ದೃಶ್ಯ ನನ್ನ ಮನದಲ್ಲಿ ಪುರುಷಸೂಕ್ತದಂತೆ ಸಾವಿರಪಟ್ಟು ಲಕ್ಷಪಟ್ಟು ಕೋಟಿಪಟ್ಟು ವೃದ್ಧಿಯಾಗತೊಡಗಿತು. ಆ ದೃಶ್ಯದ ಜ್ವಾಲೆಯಿಂದ ಅಂತರಂಗದ ಸಾತ್ವಿಕ ವೃಕ್ಷಗಳು ಒಂದೊಂದು ಹೊತ್ತಿ ಉರ್ಯತೊಡಗಿದವು. ನೀತಿ ಸಂಹಿತೆಯ ಎಳೆ ಲತೆಗಳು ಕರಕಿಟ್ಟು ಧರೆಗೆರತೊಡಗಿದವು. ಎಷ್ಟು ಪ್ರಯತ್ನಿಸಿದರೂ ಚಂಡಮಾರುತಕ್ಕೆ ಸಿಲುಕಿದ್ದ ನನ್ನ ಹ್ರುದಯದ ದೋಣಿಯನ್ನು ನಿಯಂತ್ರಿಸುವುದಾಗಲಿಲ್ಲ. ಹೊಟ್ಟಿನ ಸಹಾಯವಿಲ್ಲದಿದ್ದರೆ ಬರಿ ಅಕ್ಕಿ ಹೇಗೆ ಮೊಳೆಯುವುದಿಲ್ಲವೋ ಹಾಗೆಯೇ ಇನ್ನೊರ್ವರಿಗೆ ಹೇಳಿಕೊಳ್ಳದ ಹೊರತು ಝಂಜಾವಾತವನ್ನು ತಂಗಾಳಿಯಾಗಿ ಮಾರ್ಪಡಿಸುವುದು ಅಸಾಧ್ಯವೆಂಬ ಅರಿವು ಮೂಡುತ್ತಿರುವಾಗ ಹೊರಗಡೆ ಸೊಸೆಯಾದ ಅಲಮೇಲುವು ‘ಮಾವನವ್ರೆ... ಮಾವನವ್ರೇ ಬಾಗಿಲು ತೆರೀರಿ... ನನಗ್ಯಾಕೋ ಭಯವಾಗ್ತಿದೆ’ ಎಂದು ಕೂಗಿಕೊಳ್ಳುವುದು ಕೇಳಿಸಿತು. ಸಾಧು ಸಮಾಗಮವಾದೊಡನೆ ಅಲೌಕಿಕ ಫಲ ದಯಪಾಲಿಸುವ ತೀರ್ಥಕ್ಷೇತ್ರದಂಥ ಮಹಿಳೆ ಆಕೆ... ಕತ್ತರಿಸುವ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿಸುವ ಶ್ರೀಗಂಧದ ವೃಕ್ಷದಂಥ ಮಹಿಳೆ ಆಕೆ. ಸಂಸಾರವೆಂಬ ಕಡಲಿನ ಉಪ್ಪು ನೀರನ್ನು ಕುಡಿದರೂ ಸಿಹಿಯಾದ ನೀರನ್ನು ಮುಗಿಲಿನಿಂದ ಸುರಿಸುವ ಮೋಡದಂಥ ಮಹಿಳೆ ಆಕೆ. ಆಕೆ ವೈಧವ್ಯದ ಪೂರ್ವದಲ್ಲಿ ಗಂಡನಿಂದ ಸುಖ ಅನುಭವಿಸಲಿಲ್ಲ. ವೈಧವ್ಯದ ಭಾರಿ ಮತ್ತು ಭಯಂಕರ ಸಂಕೇತಗಳನ್ನು ನಖಷಿಕಾಂತ ಆಭರಣೋಪಾದಿಯಲ್ಲಿ ಧರಿಸಿ ವಿಲವಿಲ ಒದ್ದಾಡುತ್ತಿರುವ ಆಕೆಗೆ ಬದುಕಿನ ಮರುಹುಟ್ಟು ನೀಡುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ. ಕಗ್ಗಾತ್ತಲ ಗವಿಯಲ್ಲಿ ಹಾವಾಗಿರುವುದು ಉತ್ತಮ. ಕಲ್ಲಿನ ನಡುವೆ ಹುಳುವಾಗಿರುವುದು ಉತ್ತಮ. ಮರಳುಗಾಡಿನಲ್ಲಿ ಕುಂಟು ಮೃಗವಾಗಿರುವುದೂ ಉತ್ತಮ. ಆದರೆ ನಮ್ಮಂಥ ಕರ್ಮಠರ
 

೩೮೪

ಮನೆಯಲ್ಲಿ ಹೆಣ್ಣಾಗಿಹುಟ್ಟುವುದಾಗಲಿ; ವಿಧವೆಯಾಗಿರುವುದಾಗಲೀ ಅತಿ ದುರಂತದ ಸಂಗತಿಯಾಗಿರುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪರಮೇಶ್ವರ ಶಾಸ್ತ್ರಿಯಂಥ ನನ್ನಂಥವರನ್ನು ಬಕ ದಂಭಕ್ಕೆ ಹೋಲಿಸಬಹುದು. ಅಂದರೆ ವ್ರತನಿಯಮ ತೋರಿಸುವ ದಂಭ ಎಂದು ಅರ್ಥ. ಅಂದರೆ ಅದು ಬೇಡ ಇದು ಬೇಡ ಎಂದು ಹಿಂಜರಿಯುವ ಜಾಯಮಾನವನ್ನು ಪ್ರಚುರಪಡಿಸುತ್ತಲೇ ಇರುವುದು. ನಡೆಯುವುದಾದರೆ ಮೆಲ್ಲಗೆ ನಡೆಯಬೇಕು, ಕಣ್ಣನ್ನು ಅತ್ತಿತ್ತ ಚಲಿಸಲಿಕ್ಕೆ ಅವಕಾಶ ಕೊಡಬಾರದು... ಆದ್ದರಿಂದ ನನ್ನಂಥವರನ್ನು ಘೋರವಾದ ಮಾರ್ಜಾಲದಂಭವೆಂದು ಕರೆದರೂ ಸರಿಯೇ, ಕೌ ಮುಚ್ಚಿ ತೆರೆಯುವಷ್ಟರಲ್ಲಿ ಪದ್ಮನಾಭ ಸೋದರಿಯೇ ಅಲಮೇಲುವಿನ ಹೆಸರಿನಲ್ಲಿ ನನ್ನ ಮಗನಿಗೆ ಹೆಂಡತಿಯಾಗಿ ; ನನಗೆ ಸೊಸೆಯಾಗಿ ನನ್ನ ಮೊಮ್ಮಗನಿಗೆ ತಾಯಿಯಾಗಿ, ಬ್ರಾಹ್ಮಣ್ಯದ ಉಪಾಸಕಿಯಾಗಿದ್ದು ಬಾಗಿಲು ತಟ್ಟುತ್ತಿರುವಳೆಂದು ಭಾಸವಾಯಿತು. ಪಂಚದಶೀ ಮಂತ್ರದ ವಾಗ್ ಭವಕೂಟವೇ ವೈಧವ್ಯದ ರೂಪ ಧರಿಸಿ ಬಾಗಿಲು ತಟ್ಟುತ್ತಿರುವಂತೆ ಭಾಸವಾಯಿತು. ಉನ್ಮೇಷ, ನಿಮಿಷಗಳಲ್ಲದ ಸಾಕ್ಷಾತ್ ದೇವಿಯೇ ಎದೆಗವುಚಿಕ್ಂಡು ಸ್ವಾಂತನಪಡಿಸಲೋಸುಗ ಬಾಗಿಲು ತಟ್ಟುತ್ತಿರುವಳೆಂದು ಭಾಸವಾಯಿತು. ಋತಂಭರಾ ತತ್ರ ಪ್ರಜ್ಞಾಽಽಽ ಎಂದು ನನಗರಿವಿಲ್ಲದಂತೆ ಉದ್ಗರಿಸಿದೆ. ತುರೀಯಳೂ ಪಡೆಯುವುದಕ್ಕೆ ಅಸಾಧ್ಯಳೂ, ನಿಸ್ಸೀಮ ಮಹಿಮೆಯುಳ್ಳವಳಾದ ಭೋಗ ಸಂಭವೇ... ಬಂದೇ ತಡೆಯೇ ತಾಯಿ... ಶಬ್ದ ಮಾಡದೆ ವರ್ಷಋತುವಿನಲ್ಲಿ ಮೋಡಗಳಂತೆ ಮಳೆ ಸುರಿಸು... ನನ್ನ ಒಳ ಹೊರಗು ತಂಪು ನಿರ್ಮಿಸು... ವೈಧವ್ಯದ ಮಣ್ಣೊಳಗೆ ಅವಿತಿದ್ದರೂಶಾಂತಿ ಮತ್ತು ಬೆಲೆ ಕಡಿಮೆಯಾಗದ ರತ್ನ ಸಮಾನಳಾದ ನೀನು ಒಳಪ್ರವೇಶಿಸಲುಬಾಗಿಲು ತಟ್ಟುವುದು ಸಾಮಾನ್ಯ ಸಂಗತಿಯಲ್ಲಮ್ಮಾ... ಅಗೆದ್ ಅಗೆದೂ ಆಹಾರದ ರುಚಿಯನ್ನು ನಾಲಿಗೆಗೆ ವರ್ಗಾಯಿಸುವ ದಂತಪಂಕ್ತಿಯಂಥವಳು ನೀನು... ಮಾತು, ಮನಸ್ಸು, ಕ್ರಿಯೆಗಳಲ್ಲಿ ತಾದ್ಯಾತ್ಮ ಹೊಂದಿರುವ ನಿನ್ನ ಮತ್ತು ನನ್ನ ನಡುವೆ ಅಡ್ಡ ಇರುವುದು ನತದೃಷ್ಟ ಹೊಸ್ತಿಲು ಮಾತ್ರ. ಹೊಸ್ತಿಲ ಹಂಗಿನಿಂದ ಕೋಣೆಯನ್ನು ನಿನಗಾಗಿ ಮುಕ್ತಗೊಳಿಸುವೆನು. ತಡೆಯಮ್ಮಾಽಽಽ ನಾನು ಹಾಗೆ ಹಿಂದೆಂದೂ ವಿಲವಿಲನೆ ಒದ್ದಾಡಿರಲಿಲ್ಲ ಎಂಬುದು ವೇದ್ಯವು.! ಸಂಪತ್ತಿನಲ್ಲಿ, ವಿಪತ್ತಿನಲ್ಲಿ, ಬರದಲ್ಲಿ, ಅರಿಷಡ್ವರ್ಗಗಳನ್ನು ಗೆಲ್ಲುವ ಪ್ರಸಂಗದಲ್ಲಿ, ಪಶ್ಚಾತ್ತಾಪದಲ್ಲಿ ಜೊತೆಯಲ್ಲಿ ನಿಂತಿರುವ ಮಹಾಸಾದ್ವಿಯ ಒಳಗೆ ಅಂತರಂಗದ ಒಳಗೆ ಬರಮಾಡಿಕೊಳ್ಳಬೇಕೆಂದು ಎದ್ದು ಲಗುಬಗೆಯಿಂದ ಹೊರಟು ಬಾಗಿಲನ್ನು ತೆಗೆದೆ. ಆಶ್ರಯರಹಿತಳೋರ್ವಳು ಆಶ್ರಯ ಬಯಸುತ್ತಿರುವಂತೆ ಒಳಬಂದಳು. ದೇಹದ ಅಣುವಿನಲ್ಲಿ ಗಾಬರಿ, ಭಯ ಪ್ರಕಟಿಸುತ್ತ ವಿಭೂತಿ ತಿಲಕವೇ ಮೊದಲಾದ ಸ್ರಕ್ಚಂದನಾದಿ ಗಳು ಬೆವರುಗುಂಟ ಕರಗಿ ನೀರಾಗಿ ಹರಿಯುತ್ತಿದ್ದ ನೊಸಲು ಮುಟ್ಟಿ "ಅಯ್ಯೋ" ಎಂದು ಉದ್ಗರಿಸಿದಳು. ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ ಅನುಗ್ರಹಗಲೆಂದೇ ಪಂಚಕೃತ್ಯಗಳಿಗಧಿದೇವತೆಯಾದ ಪಂಚಕೃತ್ಯ ನಾರಾಯಣಿಯೇ ನೊಸಲ ಸ್ಪರ್ಶಿಸಿ ನನ್ನ ದೇಹದ ವೇದಾಂಗ ಸೂತ್ರಗಳ ಅಂತರಧಿಕರಣವನ್ನೇ ನನ್ನ ದೇಹದೊಳಗಡೆ ಧಾರೆ ಎರೆಯುತ್ತಿರುವಳೆಂಬ ಭಾವನೆಯುಂಟಾಯಿತು. ಆಕೆಯ ಮುಖವನ್ನು ಭೊಗಸೆಯಲ್ಲಿ ಹಿಡಿದು ನೋಡಲು ಸೂರ್ಯಕೋಟಿ ಸಮಪ್ರಭೆಯಂತೆ ಕಣ್ಣು ಕುಕ್ಕಿದಳು. ಸಹಸ್ರ ಕಣ್ಣುಗಳುಳ್ಳ; ಸಹಸ್ರ ಪಾದಗಳುಳ್ಳ ಸಹಸ್ರ ಮುಖಗಳುಳ್ಳ, ಭಗವತಿಯ್ರ್ ನನ್ನ ಮೈ ನೇವರಿಸುತ್ತಿರುವಳೆಂದು ಆ ಕ್ಷಣ ಬಾಸವಾಯಿತು. . ಸಕಲವೇದ ಸಮೂಹವೆಂಬ ಮುತ್ತಿನ ಚಿಪ್ಪಿನಲ್ಲಿ ಅಂತರ್ಗತವಾದ ಮೌಕ್ತಿಕದ ದರುಶನ ಮಾಡಿಸಿದ


೩೮೫

ಕ್ಷಣವದು, ಆಪ್ಯಾಮಾನದಿಂದಲೂ; ಅಪಾರ ಕಕ್ಕುಲಾತಿಯಿಂದಲೂ ಆಕೆ ಎದೆ ಕಿಬ್ಬೊಟ್ಟೆ ಸವರುತ್ತಿರುವಾಗ ಲಕ್ಷ್ಮೀರ್ವಾಗಾದಿ ರೂಪೇಣ ನರ್ತಕೀವ ವಿಭಾತಿ ಯಾ... ಎಂದು ಸೂತ ಸಂಹಿತೆಯ ಶ್ಲೋಕವೊಂದು ನನ್ನ ಬಾಯಿಂದ ತಾನೇ ತಾನಾಗಿ ಹೊರಟಿತು. ರೇತಸ್ಸಿನ ಅಭಿಮಾನಿದೇವತೆಯೇ, ವೈಧವ್ಯದ ಸರ್ವವರ್ಣ ಶೋಭಿತಳಾಗಿ ಸ್ಪರ್ಶಿಸುತ್ತಿರುವಳೆಂದು ಭಾವಿಸಲು ನನ್ನೆದೆಯ ಒಳಗಿಂದ ವಿಮರ್ಶಾರೂಪದಲ್ಲಿರುವ ಸ್ವಾಭಾವಿಕ ಶಕ್ತಿಯೊಂದು ಜಾಗೃತಗೊಂಡು ತಪ್ಪಲಲ್ಲಿ ಹುದುಗಿದ್ದ ಮಾಣಿಕ್ಯ ಮುಕುಟಕ್ಕೆ ಕಿಡಿ ಹೊತ್ತಿಸಿತು. ದೇಹದ ಸಮಸ್ತ ಅಣು ಅಣುವು ಸಂಗೀತಾಲಾಪನೆ ಮಾಡಲಾರಂಭಿಸಿತು. ಅರವತ್ನಾಲ್ಕು ಅಕ್ಷರಗಳು ಇದ್ದಕ್ಕಿಂತಂತೆ ಜೊತೆಗೂಡಿ ದೇಹದ ಒಳತೋಟಿಯನ್ನಿ ಕಾವ್ಯ ಮಾಡಿದವು... ಅಸ್ಃಟರಲ್ಲಿ ತಂದೆಯೇಽಽಽ ಎಂದು ಉದ್ಗರಿಸಿದಳು. ಹಾಕಿನೀ ಮಂಡಲದ ಬಿಂದು ಸ್ಪೋಟಿಸಿ ಸಾವಿರಾರು ಕಾಮನ ಬಿಲ್ಲುಗಳನ್ನು ರಚಿಸಿರು. ಅದುವರೆಗೆ ಚೆಲ್ಲಾಟವಾಡುತ್ತಿದ್ದ ಸುವರ್ಣ ಮೃಗ ಇದ್ದಕ್ಕಿದ್ದಂತೆ ಚಿದಾಕಾಶಕ್ಕೆ ನೆಗೆದು ಮಾಯವಾಯಿತು. ಗಂಧರ್ವ ನಗರ ಪಾತಾಳಕ್ಕೆ ಕುಸಿದು ವಾಸ್ತವತೆಯ ನೆಲದಾಳದಿಂದ ತೇಲಿ ಬಂತು. ಆ ಕ್ಷಣ ಅಶರೀರಿಯಾದೆನು. ಮಗಳೇ ಎಂದು ಉದ್ಗರಿಸಿ ಆಕೆಯನ್ನು ಅಪ್ಪಿಕೊಂಡೆ. ಆಕೆಯ ಚಿದಗ್ನಿಕುಂಡಕ್ಕೆ ಸಾವಿರ ಸಾವಿರ ಅಶ್ರುಬಿಂದುಗಳನ್ನುದುರಿಸಿ ಜ್ಞಾನಾಗ್ನಿ ಒಡಲಿನಿಂದ ಮತ್ತೆ ಮೂಲ ಶರೀರ ಸಂಪಾದಿಸಿಕೊಂಡೆ.

ಆ ಕ್ಷಣ ನನ್ನೋಳಗೆ ಆಶ್ರಯ ಪಡೆದಿದ್ದು ಹೀಗೆ. ಆ ಕ್ಷಣ ನನ್ನ ಅಂತರಂಗದ ಗುಣರಾಶಿಯ ಮೇಲೆ ಕ್ರಮೇಣ ಹಿಡಿತ ಸಾಧಿದಿತು. ನನ್ನೆದೆಯ ಗಾಳಿಯನ್ನು ಕುಡಿದು ಕಾಳೋರಗಗಳು ವಿಜೃಂಭಿಸತೊಡಗಿದವು. ನನ್ನ ಅಂತರಂಗದ ಒಣಹುಲ್ಲನ್ನು ತಿಂದು ಕಾಡಾನೆಗಳು ಘೀಳಿಸತೊಡಗಿದವು. ಆ ಕ್ಷಣದಿಂದ ನನ್ನ ಮಗನಿಂದ ದೇಹ ಪಡೆದವನಾದ ಶಾಮನು ಕೇವಲ ನಾಮ ಮಾತ್ರ ಶಾಮನಾಗಿರದೆ ಜೀವಂತ ಪುರುಷಸೂಕ್ತವಾದನು. ತನ್ನ ದೇಹದ ಒಂದೊಂದು ಅಂಗದಿಂದ ಒಂದೊಂದು ಲೋಕ ಪ್ರಕಟಿಸ್ತೊಡಗಿದನು. ಪಿಂಡ ಶ್ರಾದ್ಧ ಮುಗಿಸಿಕೊಂಡ ನಂತರವೂ ನಿಸ್ತೇಜವಾಗಿ ನೆಲಕಚ್ಚಿದ ನೆನಪುಗಳು ಆ ಕ್ಷಣದಿಂದ ಸಾವಿರ ಕಣ್ಣಿನ ಬಣ್ಣ ಮುಡಿದು ಸಾವಿರ ಸಾವಿರ ನವಿಲುಗಳಾಗಿ ಕುಣಿಯತೊಡಗಿದವು. ಅಂದಿನಿಂದ ಶೋಕರಹಿತನಾದೆ... ಆ ಕ್ಷಣದಿಂದ ತನ್ನ ಅಮೃತಮಯ ಕಿರಣಗಳಿಂದ ಜಗತ್ತನ್ನು ಆನಂದಪಡಿಸುವ ಚಂದಿರ ಅರ್ಥವಾಗತೊಡಗಿದ. ಜಲಧಾರೆಗಳಿಮ್ದ ಭೂಮಿಗೆ ತಂಪೆರೆಯುವ ಮೇಘಗಳು ಅರ್ಥವಾಗತೊಡಗಿದವು. ಮೂರುಲೋಕಗಳಿಗೆ ಬೆಳಕು ತುಂಬಿದ ಹಗಲು ಉಣಬಡಿಸುವ ಸೂರ್ಯ ಅರ್ಥವಾಗತೊಡಗಿದ. ಯಾವ ಕಾರಣಗಳನ್ನೂ ಅಪೇಕ್ಷಿಸದ ಸಜ್ಜನರು ಅರ್ಥವಾಗತೊಡಗಿದರು. ಕಾಗೆ ಕಾಗೆಗಳನ್ನು ಕರೆಯುವಂತೆ ಆ ಕ್ಷಣವು ಭೂತಕಾಲದ ಸಾವಿರ ಸಾವಿರ ಕ್ಷಣಗಳನ್ನು ಕರೆತಂದಿತು. ಯಾವ ಪ್ರಕಾರವಾಗಿ ಅರ್ಥಬಾಹುಳ್ಯವೆಂಬುದು ಕಾವ್ಯಕ್ಕೆ ಬೇಕೋ; ಔದಾರ್ಯವೆಂಬುದು ಸಂಪತ್ತಿಗೆ ಬೇಕೋ; ಪರಾಕ್ರಮವೆಂಬುಉ ಪ್ರಭುತ್ವಕ್ಕೆ ಬೇಕೋ ಹಾಗೆಯೇ ಭೂತ ಕಾಲವೆಂಬುದು ವರ್ತಮಾನಕ್ಕೆ ಅಗತ್ಯವೆಂಬ ತಿಳುವಳಿಕೆಯನ್ನು ನೀದಿದಂಥ ಕ್ಷಣವದು.ವೃದ್ಧಾಪ್ಯದಲ್ಲಿ ಬದುಕು ಹೊಸೆಯುತ್ತಿದ್ದವನಾದ ನನಗೆ ಎದುರಾಗಲು ಅವರ್ಚನೀಯ ಅನುಭವ ನೀಡಲು ಆ ಕ್ಷಣ ಮಾಡಿದ ಕರ್ರಮತ್ತು ಬಲು ದೊಡ್ಡದು ಎಂಬುದು ನನ್ನ ಭಾವನೆ ಅದ್ದರಿಂದ ಆ ಕ್ಷಣಕ್ಕೆ ಕೃತಕೃತ್ಯನಾಗಿರುವೆನು.
ಆ ಕ್ಷಣವೆಂಬ ಗಾಳವು ನನ್ನ ಬದುಕಿನ ಭೂತಕಾಲದೊಡಲಿನಿಂದ ತುಕ್ಕು ಹಿಡಿದ ನೆನಪುಗಳನ್ನು


೩೮೬

ಹೆಕ್ಕೀ ಹೆಕ್ಕೀ ತಿಕ್ಕಿ ತೊಳೆದು ರಮ್ಗು ಲೇಪಿಸಿ ಪೇರಿಸ ತೊಡಗಿತು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಹಸ್ತ ಸಾಮುದ್ರಿಕ ನೋಡಿ ಕಾಲು ಊನಮಾಡಿಕೊಂಡಿರುವುದರ ಬಗೆಗೂ, ಬಗೆಬಗೆಯಾದ ಅವಮಾನಗಳಿಗೆ ತುತ್ತಾದ ನನ್ನ ಬಗ್ಗೆ ಅಗ್ರಹಾರದ ಕುಲಬಾಂಧವರು ನಾನಾ ರೀತಿಯಲ್ಲಿ ಮಾತಾಡಿಕೊಂಡುದು ಸರ್ವ ವೇದ್ಯವಾಗಿದೆ. ಆ ಘಟನೆಯನ್ನು ದುರ್ಘಟನೆ ಎಂಬಂತೆ ಸಮಸ್ತರು ಚಿತ್ರಿಸಿಕೊಂಡರು. ಆದರೆ ಅದರ ಬಗ್ಗೆ ನನಗೆ ತಿಲ ಮಾತ್ರ ಖೇದ ಇರುವಿದಿಲ್ಲ. ನನ್ನ ದೇಹದ ಉತ್ಸರ್ಜನ, ಉಪಾಕರ್ಮಗಳನ್ನು ಮಾಡಿದ ನಂತರವೂ ಉತ್ತರೋತ್ತರ ಸಮಾಜವು ಆ ಘಟನೆಯೊಂದಿಗೆ ನನ್ನನ್ನೂ; ನನ್ನೊಂದಿಗೆ ಆ ಘಟನೆಯನ್ನೂ ಈಡು ಜೋಡಾಗಿ ಬೆರೆಸಿ ಮಾತಾಡಬಹುದೆಂಬ ಕಾರಣಕ್ಕೆ ಸದರೀ ಉಯಿಲಿನಲ್ಲಿ ಅದನ್ನು ಸವಿಸ್ತಾರವಾಗಿ ಪ್ರಸ್ತಾಪಿಸುವುದು ನನಗೆ ಅನಿವಾರ್ಯವಾಗಿರುವುದು. ಕರ್ಮಠ ಗೆರೆಗಳನ್ನು ಉಲ್ಲಂಘಿಸುವ ಕೈಂಕರ್ಯಕ್ಕೆ ಸನ್ನದ್ದನಾಗಿರುವ ಮತ್ತು ನನ್ನ ಮರಣಾನಂತರವೂ ಸದಾ ಉಲ್ಲಂಘಿಸುತ್ತಲೇ ಹೋಗಿ ತನ್ನದೇ ಆದಂಥ ಲೌಕಿಕ ಪರಿಧಿಯನ್ನು ನಿರ್ಮಿಸಿಕೊಳ್ಳುವಲ್ಲಿ ಬಲು ಉತ್ಸುಕನಾಗಿರುವ ನನ್ನ ಮೊಮ್ಮಗನಾದ್ ಶಾಮನಿಗೆ ಈ ನಾನು ಬರೆಯುತ್ತಿರುವ ಉಯಿಲು ಕಳಂಕ ತರಲಾರದೆಂಬ ಭರವಸೆ ಇರುವುದು ನನಗೆ. ಇದನ್ನೆಲ್ಲ ಪ್ರಸ್ತುತಪಡಿಸಲಿಕ್ಕೆ ಮೂಲ ಪ್ರೇರಣೆ ನೀಡಿದಂಥ ಯುವಕನಾದ ಅವನೇ ವೃದ್ಧಾತಿವೃದ್ಧನಾದ ನನಗೆ ಗುರುವೂ; ತಂದೆಯೂ ಎಲ್ಲವೂ ಆಗಿರುವನು. ಅದೂ ಅಲ್ಲದೆ ಸಾಮಾನ್ಯನಾದ ಅವನು ಸದರೀ ಉಯಿಲನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಲಾರನು. ಹಾಗೆಯೇ ಉಳಿದ ಲೌಕಿಕರೂ ಸಹ... ಒಂದೇ ಮಾತಿನಲ್ಲಿ ಹೇಳುವುದಾದರೆ ನನ್ನೀ ಉಯಿಲು ಶಾಸನ ಕವಿಗಳಿಗೂ ಅರ್ಥವಾಗುವುದು ಸಾಧ್ಯವಿಲ್ಲ. ಕಾಳಿದಾಸ, ಭಾಸ, ಭಾರವಿ, ಜಗನ್ನಾಥರೇ ಮೊದಲಾದ ಪ್ರಾಚೀನ ಕವಿಗಳನ್ನು ಗುಟ್ಟಾಗಿ ಮನದಟ್ಟು ಮಾಡಿಕೊಂಡಿರುವ ನನಗೆ ಮಾತ್ರ ನಾನು ಬರೆಯುತ್ತಿರುವ ಉಯಿಲು ಅರ್ಥವಾಗುವುದು ಸಾಧ್ಯ. ಅಂದ ಮಾತ್ರಕ್ಕೆ ಇದು ಎಂದೆಂದಿಗೂ ನಿಗೂಢವಾಗಿ ಉಳಿಯಲಾರದು. ಇದನ್ನು ಓದಿ ಅರ್ಥಮಾಡಿಕೊಂಡು ಸಮಾಜಕ್ಕೆ ಉಣಬಡಿಸುವ ಸಾಮರ್ಥ್ಯ ಉಳ್ಳವರು ಇದ್ದೇ ಇದ್ದಾನೆ, ಅವತಾರ ಎತ್ತೇ ಎತ್ತುತ್ತಾನೆ. ಅರ್ಥ ವಿವರಣಕಾರನೆಂಬ ಪಂಡಿತನ ಜನ್ಮದಾತ ಸಂಸ್ಕಾರವನ್ನವಲಂಬಿಸಿರುತ್ತಾದೆ. ಆದ್ದರಿಮ್ದ ನಾನು ಮೋಕ್ಷಕಾರಣವಾದ ಸತ್ಯವನ್ನು ಯಾವ ಮುಚ್ಚುಮರೆಯಾಗಲೀ; ತೇಪೆಯಾಗಲೀ ಇಲ್ಲದೆ ಪ್ರಸ್ತಾಪಿಸುತ್ತಿರುವೆನು.

ಅಸಂತುಷ್ಟಾ ದ್ವಿಜಾ ನಷ್ಟಃ ಎಂಬ ಆರ್ಯೋಕ್ತಿಗೆ ನಾನೇ ಸಾಕ್ಷಿ ಎಂದೊಡನೆ ನೀನು ನಗಾಡಬಹುದು. ಅಸಂತುಷ್ಟತೆ ಎಂಬುದು ನಮ್ಮ ವಂಶಪಾರಂಪರ್ಯವಾಗಿ ಬಂದಿರುವ ಬಳುವ್ಳಿ ಎಂದು ಒಂದೇ ಮಾತಿನಲ್ಲಿ ಹೇಳಿಬಿಡುತ್ತೇನೆ. ಹಸಿಯಾದ ಮಡಿಕೆ ನೀರಿನಲ್ಲಿ ಕರಗುತ್ತಿದ್ದರೂ ಅದಕ್ಕೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಿಧಾನ ಶತ್ರುವಾದ ಅದು ನಮ್ಮ ವಂಶದ ಪ್ರತಿಯೊಂದು ತಲೆಮಾರಿನೊಂದಿಗೆ ಸಹಬಾಳುವೆ ನಡೆಸಿತು. ಪರಮೇಶ್ವರನನ್ನು ಆಶ್ರಯಿಸಿಯೂ ವಾಸುಕಿ ಗಾಳಿಯನ್ನೇ ಆಹಾರವನ್ನಾಗಿ ಹೊಂದಿದ್ದಂತೆಯೇ ನಾನು ಮೊದಲಾಗಿ ತಲೆಮಾರಿನವರೆಲ್ಲ ಪಾಂಡಿತ್ಯದ ಸಾನ್ನಿಧ್ಯದಲ್ಲಿದ್ದೂ ಅಸಂತುಷ್ಟತೆಗೆ ಶರಣಾಗಿದ್ದರು. ವಂಶ ಪರಂಪರೆಯಿಂದ ಬಂದದಾಗಲೀ, ಗೋಡೆ ಮೇಲೆ ಬರೆದಿಟ್ಟಿದ್ದಾಗಲೀ ಹೇಗೆ ಸಂಪತ್ತಾಗಿರಲಾರದೋ ಹಾಗೆಯೇ ಅಸಂತುಷ್ಟತೆಯಿಂದಾಗಿ ನಮ್ಮವರ್‍ಯಾರೂ ಸುಖ ನೆಮ್ಮದಿಯಿಂದ ಬದುಕಲಿಲ್ಲ, ಸಾಯಲಿಲ್ಲ. ಅವರೆಲ್ಲ ದರ್ಭೆಯಿಂದ ಮುಚ್ಚಿದ ಶರಾವ ಎಂದರೆ ಮಣ್ಣಿನ ಪಾತ್ರೆಯಂತೆ ತರ್ಪಣಕ್ಕೆ ಸಿಗದ


೩೮೭

ಉಳಿದುಬಿಟ್ಟರು. ಇಲ್ಲವಾಗಿದ್ದರೆ ಅವರು ಕಾಳಿದಾಸ, ಶ್ವೇತಕೇತು, ಆರ್ಯಭಟ, ಭಾಸ್ಕರರಂತೆಯೇ ಉತ್ತರೋತ್ತರವಾಗಿ ಖ್ಯಾತಿವಂತರಾಗಬಹುದಿತ್ತು. ಸಾವಿನಲ್ಲೂ ಜೊತೆಯಲ್ಲಿ ಬರುವ ಧರ್ಮವನ್ನು ಅವರು ಬದಿಗೊತ್ತಿ ಚಂಚಲತೆಯೇ ಮುಖ್ಯಸ್ಥಾಯಿ ಭಾವವಾದ ಲಕ್ಷ್ಮಿ ಮತ್ತು ಖ್ಯಾತಿಯ ಬೆಂಬತ್ತಿ ಯಾವ ಶ್ರಾದ್ಧಕ್ಕೂ ನಿಲುಕದಷ್ಟು ದೂರ ಉಳಿದರು.

ಗಿರಿ ಮತ್ತಾತಂದಿರಾದ ಶಿವರಾಮ ಮೋಹನ ಶರ್ಮರಿಗೆ ವಿದ್ಯಾವಚಸ್ಪತಿ ಎಂಬ ಬಿರುದು ಲಭ್ಯವಾಗಿತ್ತು. ಅವರು ಗುಡೇಕೋಟೆಯ ಚಾಮನಾಯಕನ ಆಸ್ಥಾನ ಜ್ಯೋತಿಷಿಗಳಾಗಿದ್ದರು. ಅವರು ಆಹ್ನಿಕ ಪರಮಕಾರ್ಯಗಳನ್ನು ಅಲಕ್ಷಿಸಿ ಸದಾ ನಾಯಕನನ್ನೇ ಓಲೈಸುತ್ತಿದ್ದರೆಂದು ಪ್ರತೀತಿ ಉಂಟು. ಇರುಳು ಗರುಡನಿಂದ ಬಳಲುತ್ತಿದ್ದ ನಾಯಕನ ಏಕಮಾತ್ರ ಪುತ್ರಿ ಉತ್ಸವಾಂಬೆಯ ಚಿಕಿತ್ಸೆಗೆ ನೇಮಕವಾಗಿದ್ದರು. ಚಿಕಿತ್ಸೆಯ ನೆಪದಲ್ಲಿ ಆಕೆಯೊಂದಿಗೆ ತಾಸುಗಟ್ಲೆ ಏಕಾಂತದಲ್ಲಿರುತ್ತಿದ್ದರಂತೆ. ಬೆಟ್ಟದ ಮೇಲೆ ಕೋಟೆ ದುರಸ್ತಿ ಕಾರ್ಯಕ್ಕೆ ನೇಮಕವಾಗಿದ್ದ ಅಪ್ಪೇನಹಳ್ಳಿಯ ವಡ್ಡಬೋವಿ ಇದ್ದಕ್ಕಿದ್ದಂತೆ ಅಪಸ್ಮಾರಕ್ಕೆ ತುತ್ತಾಗಿ ಗತಪ್ರಾಣನಾದೆಅನಂತೆ. ಸಂಜೀವಿನಿ ಪರ್ವತಪ್ರಾಯವಾಗಿ ಆಸ್ಥಾನದಲ್ಲಿ ತಾವಿರುವಾಗ ಅವನನ್ನು ಬದುಕಿಸುವುದೆಷ್ಟರ ಮಾತು ಎಂದು ನಾಯಕನಿಗೆ ಹೇಳಿ ಮಂತ್ರೋಚ್ಚಾರಣೆ ಮಾತ್ರದಿಂದ ಅವನಿಗೆ ಪ್ರಾಣ ದಯಪಾಲಿಸಿದರಂತೆ. ಅವರು ಹಸುವಿನ ಕಳೇಬರದಿಂದ ಹಾಲು ಕರೆದರೆಂಬ ವಿವರ ತೀರ್ಥರಾಮೇಶ್ವರ ಬೆಟ್ಟದಲ್ಲಿರುವ ಶಿಲಾಶಾಸನದಿಂದ ತಿಳಿದುಬರುತ್ತದೆ. ತಲಕಾಡಿನ ಶ್ರೀರಂಗರಾಜರು ಅವರಿಗೆ ಧನಕನಕ ವಸ್ತ್ರ ಆಮಿಷ ತೋರಿಸಿ ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸಿದರಂತೆ. ಆದರೆ ರಾಜಕುವರಿ ಉತ್ಸವಾಂಬೆಯ ಮೋಹಪಾಶದಲ್ಲಿ ಸಿಲುಕಿದ್ದ ಅವರು ದೂರದ ತಲಕಾಡಿಗೆ ಹೇಗೆ ಹೋದಾರು? ಒಮ್ಮೆ ಅರಮನೆಯ ಶಯ್ಯಾಗೃಹದಲ್ಲಿ ರಾಜ್ಕುವರಿಯೊಂದಿಗೆ ಸಲ್ಲಾಪವಾಡುತ್ತಿದ್ದಾಗ ನಾಯಕನು ಇದ್ದಕ್ಕಿಂದಂತೆ ಒಳಬಂದನಂತೆ. ಆಗ ಅವರು ಅವನ ಕಣ್ಣಿಗೆ ಏಳು ಹೆಡೆಯ ಸರ್ಪವಾಗಿ ಕಂಡರಂತೆ. ಅವನ ಪಂಚೇಂದ್ರಿಯಗಳಿಗೇ ಕಚ್ಚಿ ಬಚಾವಾದರಂತೆ. ಮುಂದೊಂದು ದಿನ ರಾಜಕುವರಿ ಅಕಾಲ ಮರಣಕ್ಕೆ ತುತ್ತಾದಳಂತೆ. ಇಷ್ಟೆಲ್ಲ ಅಟಾಟೋಪಗಳಿಮ್ದ ನೂರೈದು ವರ್ಷ ಅವರು ಸುಧೀರ್ಘವಾಗಿ ಬದುಕಿ ಸಜೀವ ಸಮಾಧಿ ಹೊಂದಿದರೆಂಬುದನ್ನು ನಾನು ನಂಬಲಾರೆನು.
ಮುತ್ತಜ್ಜ ರಾಧಾರಮಣ ಶಾಸ್ತ್ರಿಗಳು ಇನ್ನೊಂದು ಬಗೆಯ ಅಸಂತುಷ್ಟತೆಗೆ ಗುರಿಯಾಗಿದ್ದರು. ಅವರಿಗೆ ಉಯ್ಯಾಲವಾಡದ ಪ್ರಭು ನರಸಿಂಹಾರೆದ್ದಿಯವರು ರಸರತ್ನಾಕರ ಎಂಬ ಬಿರುದು ನೀಡಿ ಗೌರವಿಸಿದ್ದರು. ಆದರೆ ಅವರ ದೃಷ್ಟಿ ಬಳ್ಳಾರಿಯ ಕಲೆಕ್ಟರಾಗಿದ್ದ ಥಾಮಸ್ ಮನ್ರೋ ಎಂಬುವರಿಗೆ ಸಂಸ್ಕೃತಾಭ್ಯಾಸ ಮಾಡಿಸಬೇಕೆಂಬ ಬಯಕೆ ಉತ್ಕಟವಾಗಿದ್ದಿತು. ಅದಕ್ಕಾಗಿ ಸುಬೇದಾರ್ ಮಣಿಕಂಠಯ್ಯರ್‌ರವರ ಸ್ನೇಹ ಸಂಪಾದಿಸಿ ಆ ಮೂಲಕ ಕಲೆಕ್ಟರ್ ಸಾಹೇಬರ ಬಂಗಲೆ ಪ್ರವೇಶಿಸಿದರು. ಇಂಗ್ಲೀಷ್ ಮೂಲಕ ಸಂಸ್ಕೃತಕ್ಕೆ ಮಾರು ಹೋಗಿದ್ದ ಕಲೆಕ್ಟರ್ ಥಾಮಸ್ ಮನ್ರೋ ಅವರನ್ನು ಆದರ ಗೌರವಗಳಿಂದ ಬರಮಾಅರಿಕೊಂಡು ಬಹಳ ದಿನಗಳ ಕಾಲ ಗುರುವಾಗಿ ಸ್ವೀಕರಿಸಿ ಇಟ್ತುಕೊ
ಡಿದ್ದರು. ಅವರಿಂದ ವಿಜಯನಗರದ ಕಿಷ್ಕಿಂದೆಯ ಸಮೀಪ ಜಹಗೀರು ಪಡೆಯಬೇಕೆಂಬ ಆಸೆ ಕೊನೆಗೂ ಈಡೇರಿರಲಿಕ್ಕಿಲ್ಲ ಎಂದು ಊಹಿಸಲಾಗಿದೆ. ಸಾಕಷ್ಟು ವಯಸ್ಸಗಿರುವ ನಾನು ಅವರು ಶಂಕರಭಗವತ್ಪಾದರ ಆತ್ಮದೊಡನೆ ಸಂವಾದಿಸುತ್ತಿದ್ದರೆಂಬುದನ್ನಾಗಲೀ, ಪೆನುಗೊಂಡೆಯ ರಾಮರಾಜುಗೆ ಪುರುಷ ಶಕ್ತಿ ದಯಪಾಲಿಸಿದರೆಂಬುದನ್ನಾಗಲೀ;


೩೮೮
ಚಿನ್ನದ ಪಲ್ಲಕ್ಕಿಯಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದರೆಬುವುದನ್ನಾಗಲೀ ನೂರಾ ಮೂರು ವರ್ಷ ಬದುಕಿದ್ದರೆಂಬುದನ್ನಾಗಲೀ ನಂಬಲಾರೆನು.
ತಾತನವರಾದ ಸಕಲೇಶ್ವರ ಶಾಸ್ತ್ರಿಗಳಿಗೂ ಸರ್ವದರ್ಶನತೀರ್ಥ; ಸಾಹಿತಿ ಸಮಾರಾಂಗಣಗಳೇ ಮೊದಲಾದ
ಬಿರುದುಗಳಿದ್ದುವಂತೆ. ಅಷ್ಟ ದಿಗ್ಗಜಗಳಿಗಿದ್ದ ಶಕ್ತಿ ಅವರೊಬ್ಬರಿಗೇ ಇದ್ದಿದಂತೆ. ಸಕಲ ಶಾಸ್ತ್ರಗಳನ್ನು ಅರಗಿಸಿಕೊಂಡಿದ್ದ ಅವರು ಬದುಕಿರುವಷ್ಟು ಕಾಲ ಧನದಾಸೆಗಾಗಿ ಕ್ಷುದ್ರ ದೇವತೆಗಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತ ಶಕ್ತಿ ಕ್ಷೇತ್ರವಾದ ಅಲಂಪೂರದಲ್ಲಿ ಕೆಲಕಾಲ ಇದ್ದರು. ಯಾವುದೋ ಒಂದು ಆಕಾರಹೀನ ಶಕ್ತಿಯನ್ನು ಹಿಂಬಾಲಿಸುತ್ತ ಕದಳೀವನ ಪ್ರವೇಶಿಸಿದರು ಮತ್ತೆ ವಪಸ್ಸ್ಸು ಬರಲೇ ಇಲ್ಲ. ರುದ್ರನಾಯಕನೇ ನಮ್ಮ ತಾತನವರ ಅಪರಾವತಾರ ಎಂದೊಂದು ಕ್ಷಣ ನೋಡಿದೊಡನೆ ಅನ್ನಿಸಿಬಿಟ್ತಿತು. ತಂದೆಯವರಾದ ಶಾಮಾ ಶಾಸ್ತ್ರಿಗಳು ಹೇಳುತ್ತಿದ್ದ ಗುಣಲಕ್ಷಣ ಸ್ವಭಾವದ ಮೂಲಕ ಅವನಲ್ಲಿ ಅವರನ್ನು ಗುರುತಿಸಿ ಕೆಲವು ದಿನ ಈಷ್ಯಾಸೂಯೆಗಳಿಮ್ದ ಕುದ್ದು ಹೋಗಿಬಿಟ್ಟೆನು. ಅವನು ಉತ್ತರಾಭಿಮುಖವಾಗಿ ಪಯಣಿಸುವಂತೆ ಮಾಡುವಲ್ಲಿ ಪರೋಕ್ಷವಾಗಿ ನಾನು ಯಶಸ್ವಿಯಾದೆನು. ಇನ್ನು ನನ್ನ ತಂದೆಯವರಾದ ವಾಗ್ಭೂಷಣ ಶಾಮಾ ಶಾಸ್ತ್ರಿಗಳ ಬದುಕಂತೂ ಅಂಗೈಯಷ್ಟು ಸುಸ್ಪಷ್ಟವಾಗಿರುವುದು. ಸುಮಾರು ಎಂಭತ್ತು ವರ್ಷಗಳ ಪರ್ಯಂತರ ಬದುಕಿದ್ದ ಅವರು ಯೌವನದ ಕಾಲದಲ್ಲಿ ಮೈಸೂರು ದಿವಾನರೋರ್ವರ ಬಳಿ ಮುಖ್ಯ ಸಲಹೆಗಾರರಾಗಿಯೂ, ಅರಮನೆಯ ಬಲಪಾರ್ಶದಲ್ಲಿರುವ ಶಾರದಾಂಬಾ ದೇವಾಲಯದ ಮುಖ್ಯ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದರಂತೆ. ಅರಮನೆಯ ಪ್ರಮುಖ ನರ್ತಕಿಯೋರ್ವಳು ತಾನು ಕಾಲಾಂತರದಲ್ಲಿ ಹೆತ್ತಂಥ ಒಂದು ಗಂಡು ಮಗುವನ್ನು ನಮ್ಮ ತಂದೆಯವರಾದ ಶಾಮಾಶಾಸ್ತ್ರಿಗಳಿಗೂ; ಹೆಣ್ಣು ಮಗುವೊಂದನ್ನು ದಿವಾನರಿಗೂ ಕೊಟ್ಟು ಅವರಿಗೆ ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳಿರೆಂದು ಆಜ್ಞಾಪಿಸಿ ಪ್ರಾಣಬಿಟ್ಟಳಂತೆ. ಅಪಖ್ಯಾಅತಿಯಿಂದ ಪಾರಾಗಲು ತಂದೆಯವರು ಆ ಮಗುವಿನೊಡನೆ ಕುಂತಳವಾಡಿಗೆ ಬಂದರ್, ದಿವಾನರು ಅದೇ ತೆರನ ಅಪಖ್ಯಾತಿಗೆ ಹೆದರಿ ಎಣ್ಣು ಮಗುವನ್ನು ದಾದಿಯೋರ್ವಳಿಗೆ ಧನಕನಕ ಕೊಟ್ಟು ಮದ್ರಾಸ್ ಪ್ರಾಂತಕ್ಕೆ ಕಳಿಸಿಕೊಟ್ಟರಂತೆ. ಆ ನರ್ತಕಿಯ ಮಗನಾದ ನಾನು, ಏರ್ಪಟ್ಟ ಕರ್ಮಠ ವಾತಾವರಣದೊಳಗೆ ಬೆಳೆಯುತ್ತಿರಲು ಮದ್ರಾಸಿಗೆ ಹೋದ ದಾದಿ (ಪ್ರಾಯಶ್ಃ ಅವಳ ಹೆಸರು ಗೋದೂಬಾಯಿಯಾಗಿದ್ದಿರಬೇಕು... ಪಟ್ಟಣದ ವಾತಾವರಣಕಣುವಾಗಿ ಆಕೆ ತನ್ನ ಹೆಸರನ್ನು ನಿರ್ಮಲಾ ಎಂದು ಬದಲಾಯಿಸಿಕೊಂದಿರಬೇಕು) ಪ್ರಸಿದ್ಧ ಚಲನಚಿತ್ರ ನಿರ್ಮಾಪಕನೂ, ಪ್ರಸಿದ್ಧ ವಜ್ರದ ವ್ಯಾಪಾರಿಯೂ ಆದ ಡಬ್ಲ್ಯು. ಬಿ. ಚೆಟ್ಟಿಯಾರರನನ್ನು ಗಾಂಧರ್ವ ವಿವಾಹವಾದಳು. ಆಕೆಯ ಕಾಲುಗುಣವೆಂಬಂತೆ ಚೆಟ್ಟಿಯಾರ್ ನಿರ್ಮಿಸಿದ ಮುಂದಿನ ಚಿತ್ರಗಳು ಜನಪ್ರಿಯಗೊಂಡವು. ಮುಂದೆ ಅವರ ಬಳಿಯಿದ್ದ ಹೆಣ್ಣು ಮಗುವು ಪದ್ಮಾವತಿ ಎಂಬ ಹೆಸರಿನಲ್ಲಿ ಬೆಳೆದು ದೊಡ್ಡದಾಯಿತು. ಪದ್ಮಾವತಿ ಮುಂದೆ ಜನಪ್ರಿಯ ಚಲನಚಿತ್ರ ತಾರೆಯಾದಳು ಕೂಡ... ಆಕೆಯ ಹೆಣ್ಣುಮಗಳಾದ ಚಂಪಕಮಾಲಾಳು ಕೂಡ ದಕ್ಷಿಣ ಮತ್ತು ಉತ್ತರದ ಭಾಷೆಯ ಬಹುತೇಕ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ್ಳು. ಆಕೆ ವಿವಾಹಿತನೂ, ಮಕ್ಕಳೊಂದಿಗನೂ, ಅಗರ್ಭ ಶ್ರೀಮಂತನೂ ಆದ ಹಿರಾಲಾಲ್‌ನನ್ನು ಮದುವೆಯಾಗಿ ಅವನಿಂದ ಒಂದು ಹೆಣ್ಣು ಎರಡು ಹೆಣ್ಣು ಪಡೆದೌ. ಪಿಯೂಷಾ ಎಂಬ ಹೆಸರಿನ ಆ ಹೆಣ್ಣು ಜನಪ್ರಿಯ ಚಿತ್ರಗಳಲ್ಲಿ ನಟಿಸುತ್ತಿರುವುದು. ಕುಂದನ್‌ಲಾಲ್ ಎಂಬ ಮಗನು ಸಿಂಗಾಪುರದಲ್ಲಿ ನೆಲಸಿ ಕಳ್ಳಸಾಗಾಣಿಕೆ


೩೮೯
ಮಾಡುತ್ತಿದ್ದರೆ, ಇನ್ನೊಬ್ಬ ಮಗನಾದ ಲೋಕಪ್ರಕಶ್ ಪ್ರಸಿದ್ಧ ಭರತನಾಟ್ಯ ನರ್ತಕಿಯಾದ ವಿಂದ್ಯಾವಾಸಿನಿಯನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿರುವನು.
ಆಸ್ಥಾನ ನರ್ತಕಿಯ ಮಗ ನಾನು ಎಂಬ ಸಂಗತಿ ಬಹಳ ವರ್ಷಗಳ ಹಿಂದೆಯೇ ನನಗೆ ಸೂಕ್ಷ್ಮವಾಗಿ ಗೊತ್ತಾಗಿದ್ದರೂ ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಇತ್ತುಕೊಂಡಿದ್ದೆನು. ಆ ಗುಟ್ಟು ರಟ್ಟು ಮಾಡಿದ ಮತ್ತು ನಾನು ಅಗ್ನಿಗಾಹುತಿ ನೀಡಿದ ಆ ಕಾಗದ ಪತ್ರಗಳು ಸುದರ್ಶನ ಎಂಬ ರುಗ್ಣಶಯ್ಯೆಯಲ್ಲಿದ್ದ ವ್ಯಕ್ತಿಯಿಂದ ಬಂದಂತವುಗಳಾಗಿದ್ದವು. ನನ್ನ ಹುಟ್ಟಿನ ಗುಟ್ಟನ್ನು ನಾನು ಬಚ್ಚಿಡಲು ಪ್ರಯತ್ನಿಸಿದರೂ ಅದು ಮುಖದ ಯಾವ ಮೂಲೆಯಿಂದಲಾದರೂ ತಿಲಮಾತ್ರ ಪ್ರಕಟವಾಗಿ ಬಿಡುತ್ತಿತ್ತು. ಕೆಲವರು ಆ ಎಳೆಮೂಲಕ ರಹಸ್ಯದ ಹಚ್ಚಡವನ್ನು ನುಂಗಲು ಪ್ರಯತ್ನ ಮಾಡಿದ್ದುಂಟಾದರೂ ಅದು ಯಶಸ್ವಿಯಾಗಲಿಲ್ಲ. ಅಸಹ್ಯಪಟ್ಟುಕೊಳ್ಳಬೇಕೆಂದರೆ ತಂದೆಯವರು ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿರುವುವು. ಅವರನ್ನು ಮರಣೋತ್ತರವಾಗಿ ಅಸಹ್ಯಪಟ್ಟುಕೊಳ್ಳುವುದಷ್ಟೆ ಸಾಧ್ಯವಾಗಿರುವುದು ನನಗೆ. ಆದರೆ ಇದಕ್ಕೆ ನಾನು ಅರ್ಹನೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದೂ ಅಲ್ಲದೆ ಅವರು ತಮ್ಮ ಬದುಕಿಗೆ ತಕ್ಕುದಾದ ಶವಸಂಸ್ಕಾರ ಪಡೆಯುವುದರಲ್ಲಿ ವಿಫಲರಾದರು. ಎಲ್ಲವೂ ಅವರ ಮುಂಗೈ ಅಲಂಕರಿಸಿದ್ದ ಕಿರುಗಂಟೆಯುಳ್ಳ ಚಿನ್ನದ ಕಡಗದ ಕಾರಣದಿಂದಾಗಿ ತಿರುಗುಮುರುಗಾಯಿತು, ತಲೆಕೆಳಕಾಯಿತು. ನಾನು ಅವರ ಮಗನಾಗಿರಲಿಕ್ಕಿಲ್ಲವೆಂಬುದಕ್ಕೆ ಅವರುಸಾಯುವ ಕ್ಷಣ ಆ ಚಿನ್ನದ ಕಡಗ ನನಗೆ ದಕ್ಕದ ಹಾಗೆ ಸಂಚು ಮಾಡಿದರು ಎಂಬುದು ಉಲ್ಲೇಖಾರ್ಹ ಸಂಗತಿಯಾಗಿದೆ. ಶ್ರೀಮಂತ ವರ್ತಕರಾದ ವೆಂಕಟರಮಣ ಶ್ರೇಷ್ಠಿಗಳು ಆ ಚಿನ್ನದ ಕಡಗವನ್ನು ತಮಗೆ ಮಾರಿಬಿಡೆಂದೂ, ದಿವಂಗತರ ಅಪೇಕ್ಷೆಯಂತೆ ಮಣಿಕರ್ಣಿಕಾಘಾಟ್‌ನಲ್ಲಿ ಶವ ಸಂಸ್ಕಾರ ಮಾಡಲು ನುಕೂಲವಾಗುವುದೆಂದೂ, ಬಗೆಬಗೆಯಾಗಿ ಬಡಿದುಕೊಂಡರು. ನನ್ನ ಜನ್ಮ ಮೂಲ, ಅಷ್ಟೊತ್ತಿಗೆ ಗೊತ್ತಾಗಿದ್ದಲ್ಲಿ ನಾನು ಅದನ್ನು ಶ್ರೇಷ್ಠಿಗಳಿಗೆ ಮಾರಿಬಿಡುತ್ತಿದ್ದೆನೊಂದೇ ಅಲ್ಲ, ಸದರಿ ಗ್ರಾಮದ ಹುಲುಲಿ ಹಳ್ಳವನ್ನೆ ಪವಿತ್ರ ಗಂಗಾನದಿಯೆಂದೂ, ಅದರ ತಟವನ್ನೇ ಮಣಿಕರ್ಣಿಕಾ ಘಾಟೆಂದು ಪರಿಭಾವಿಸಿಬಿಡುತ್ತಿದ್ದೆನು. ಕೀರ್ತಿಶೇಷರ ಪಾಪಕೃತ್ಯಗಳೇ ನೂರಾರು ಮೂಷಿಕಗಳಾಗಿ ಸಹಾಯ ಮಾಡಲೆತ್ನಿಸಿದ ಶ್ರೇಷ್ಠಿಗಳ ಅವಯವಗಳಿಗೆ ತೊಂದರೆ ಕೊಟ್ಟವೆಂದು ಭಾವಿಸುತ್ತಿದ್ದೆನು. ಒಂದು ಕೈಯಲ್ಲಿ ತಲೆಯನ್ನಿಟ್ಟು ಕೊಂಡು, ಆಸದಲ್ಲಿಟ್ಟುಕೊಂಡು ಊಟ ಮಾಡಿದ ಪಾಪ ಸತ್ತ ನಂತರ ಕಾಡುತ್ತದೆ ಎನ್ನುವುದಕ್ಕೆಆ ಘಟನೆಯೇ ಸಾಕ್ಷಿಯಾಗಿ ಯೂಪಸ್ತಂಭದಂತೆ ನಿಂತಿರುವುದು. ವೇದೋಪನಿಷತ್ತುಗಳನ್ನು ಅರಗಿಸಿಕೊಂಡ ಮಾತ್ರಕ್ಕೆ ತೆಗೆದುಕೊಂಡು ಏನು ಮಾಡುವುದು? ಉಚ್ಛೈಶ್ರವಸ್ರೆಂಬ ಅಶ್ವವನ್ನೂ, ರತ್ನಗಳನ್ನೂ ಲಕ್ಷ್ಮಿಯನ್ನೂ ಕೊಟ್ಟ ಮೇಲೂ ಸಹ ಕಡೆಯದವರಿಗೆ ಸಮುದ್ರ ವಿಷವನ್ನು ಕೊಟ್ಟು ಹಗೆ ತೀರಿಸಿಕೊಂಡಿತು ತಾನೆ?... ಹಾಗೆ ಬದುಕೆಂಬ ಸಮುದ್ರ ಕೂಡ.
ರುಗ್ಣ ಶಯ್ಯೆಯಲ್ಲಿಲ್ಲಿದ್ದ ಸುದರ್ಶನ ಬರೆದಿದ್ದ ಪತ್ರಗಳು ಮುಖ್ಯವಾಗಿ ಫರಂಗಿಯವರ ಅಮೇಧ್ಯ ಭಾಷೆಯಲ್ಲಿದ್ದ ಸಬೂಬು ನೋಡಿದರೆ ತೀರ್ಥರೂಪರವರು ಆ ಭಾಷೆಯಲ್ಲಿ ಅಗಾಧ ಪ್ರಾವೀಣ್ಯತೆ ಸಾಧಿಸಿದ್ದರೆಂದು ನಿಚ್ಚಳವಾಗಿ ಊಹಿಸಬಹುದು. ಅದನ್ನು ತುಂಬ ಗುಟ್ಟಾಗಿ ಇಟ್ಟಿದ್ದರೊಂದೇ ಅಲ್ಲ; ಆ ಭಾಷೆಯನ್ನು ನಾನು ಕಲಿಯದ ಹಾಗೆ ನೋಡಿಕೊಂಡರು. ಆ ಭಾಷೆಯಲ್ಲಿ ತಮ್ಮ ವಂಶದಲ್ಲಿ ಯಾರಾದರೂ ಕಲಿತರೆ ಭೂಮಿಯ ಪಾಪ ಸಂಚಯವೇ ಪಿಶಾಚ ರೂಪದಲ್ಲಿ ಅಂಥವರನ್ನು ಸರ್ವನಾಶನ ಮಾಡುವುದೆಂದು ನನಗೆ ತಾಕೀತು ಮಾಡಿದ್ದರು. ಆದ್ದ್ದರಿಂದಾಗಿಯೇ ನಾನು ನನ್ನ
-

೩೯೦
ಮಗನನ್ನೂ ಮೊಮ್ಮಗನನ್ನೂ ಆ ಭಾಷೆಯಿಂದ ದೂರವಿರಿಸಲು ಬಗೆ ಬಗೆಯಾದ ಪ್ರಯತ್ನ ಮಾಡಿದೆನು. ಅನುಭವಿಸಲಾರದಷ್ಟು ಅನುಭವಿಸುವಂಥ ಕಾಲ್ಘಟ್ಟದಲ್ಲಿ ದೊರಕಿದ ರುಗ್ಣಿಯೋರ್ವನು ಬರೆದ ಪತ್ರಗಳನ್ನು ಹೆಸರು ಕುಲ ಮರೆಮಾಚಿ ದೂರ ಪ್ರಾಮ್ತಕ್ಕೆ ಹೋಗಿ ದೇಶಭಕ್ತರನ್ನು ಫರಂಗಿಯವರಿಗೆ ಒಪ್ಪಿಸಿ ಬಗೆಬಗೆಯಾದ ಇನಾಮು ಪಡೆದು ಸುಖದಿಂದ ಜೀವಿಸುತ್ತಿದ್ದ ಮತ್ತು ಇಂಗ್ಲೀಷ್ ಕನ್ನಡ ನಿಘಂಟಿನ ಕರ್ತೃವಾದ ಶಂಕರಾನಂದತಿಬೋಟಿಯವರ ಬಳಿಗೊಯ್ದು ಓದಿಸಿ ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡೆನು. ಆ ಕ್ಷಣ ನನ್ನ ಅಂತರಂಗದ ಸಾಗರವು ಝಂಝಾಪಾತಕ್ಕೆ ಸಿಲುಕಿ ಅಲ್ಲಾಡಿಹೋಯಿತು. ಒಂದೊಂದೇ ಅಥಿತಿಗೆ ಉಣಬಡಿಸಿದ ಅನ್ನ ನೆನಪಾದಂತೆ ಮಗ ಅಶ್ವಥ್‌ನಾರಾಯಣನೂ, ಬಂಡಾಯಕವಿಯಾಗಲು ಪ್ರಯತ್ನಿಸುತ್ತಿದ್ದ ಮೊಮ್ಮಗ ಶಾಮಂಣನೂ ಕಾಣದೆ ತುಳಿಯಲ್ಪಟ್ಟ ಕತ್ತಿಯಂತೆ ನೆನಪಾದರು. ಮಗ ಮೊಮ್ಮಗ ಎರಡು ಮಹಾನದಿಗಳು ನನ್ನ ಬದುಕಿನ ಸಾಗರದಲ್ಲಿ ಸರಿಯಾಗಿ ಬೆರೆಯಲೇ ಇಲ್ಲ. ಒಳಗೊಳಗೇ ದಾವಾನಲವನ್ನು ಅನುಭವಿಸುತ್ತಿದ್ದ ನಾನು ಮಾತ್ರ ಆಕ್ಷಣದಿಂದ ನನ್ನ ಜೀವನ ಶೈಲಿಯನ್ನು ಬದಲಿಸುವ ಪ್ರಯತ್ನ ಮಾಡತೊಡಗಿದೆನು. ನಿಂದಿತವಾದ ಕೆಲಸವನ್ನು ಮಾಡುವವನು ನರಕಕ್ಕೂ ಹೆದರಲಾರನೆಂಬ ಅರಿವನ್ನು ಭ್ರೂಮಧ್ಯೆ ಇಟ್ಟುಕೊಂಡೇ ಸಂಸಾರವೆಂಬ ದೋಣಿಯಲ್ಲಿ ಒಂಟಿಯಾಗಿ ಪಯಣಿಸುತ್ತಿದ್ದ ನನ್ನನ್ನು ಅಂದಿನ ಪ್ರಧಾನ ಪ್ರಧಾನ ಮಮ್ತ್ರಿಯಾದ ಇಂದಿರಾ ಗಾಂಧಿಯವರು ನನ್ನನ್ನು ಆಕರ್ಷಿಸಿದ್ದು.
ಶಾಮಣ್ಣ ತಾನು ಅಭ್ಯಾಸ ಮಾಡುತ್ತಿದ್ದ ಮನುಸ್ಮೃತಿಯೆಂಬ ಹೆಬ್ಬೊತ್ತಿಗೆಯೊಳಗೆ ಆಕೆಯ ವರ್ಣ ವೈವಿಧ್ಯದ ಭಾವಚಿತ್ರವನ್ನು ಗುಟ್ಟಗಿ ಇಟ್ಟುಕೊಂಡಿದ್ದ. ಕರ್ಮಠ ವಾತಾವರಣದೊಳಗೆ ಬ್ರಾಹ್ಮಣ ವಿಧವೆಯೋರ್ವಳು ಅನುಭವಿಸಬೇಕಾದ ಪಾತ್ರದ ಬಗ್ಗೆ ವಸ್ತುನಿಷ್ಟವಾಗಿ ತಿಳಿದುಕೊಳ್ಳುವ ನಿಮಿತ್ತ ನಾನು ಅವನ ಕಬ್ಬಿಣಪೆತ್ತಿಗೆಯಿಂದ ಅದನ್ನು ಹುಡುಕಿ ತೆಗೆದೆನು. ಸ್ಮೃತಿಯ ಹನ್ನೆರಡನೆತ ಅಧ್ಯಾಯದಲ್ಲಿ ದೊರಕಿದ ಆ ಮಹಿಳೆಯ ಭಾವಚಿತ್ರ ನೋಡಿದೊಡನೆಯೆ ಕತಕ ಬೀಜದ ಸಂಪರ್ಕದಿಂದ ಯಾವ ಪ್ರಕಾರವಾಗಿ ಬಗ್ಗಡ ನ್ ರು ತಿಳಿಯಾಗುವುದೋ ಹಾಗೆಯೇ ನನ್ನ ಮನಸ್ಸು ತಿಳಿಯಾಯಿತು. ನೋಡಿದೊಡನೆ ಉನ್ಮೇಷ ನಿಮಿಷೋತ್ಪನ್ನ ಭುವನಾವಲೀಽಽಽ ಎಂದು ಉದ್ಗರಿಸಿದೆನು. ವಿಂಧ್ಯಾಚಲವಾಸಿನಿಯಾದ ಶ್ರೀಲಲಿತೆಯೆ ಇವಳು ಎಂದು ಒಂದು ಕ್ಷಣ ಅನ್ನಿಸಿದರೆ ಮತ್ತೊಂದು ಕ್ಷಣ ವಾರುಣೀಮದದಿಂದ ವಿಹ್ವಲಗೊಂಡಂತಿರುವ ತ್ರಿಪುರಸುಂದರಿಯೇ ಈಕೆ ಅನ್ನಿಸಿತು. ಆ ಕೂಡಲೆ ಕರ್ಣಾಟ ಕವಿಚೂತವನ ಚೈತ್ರ ಬಿರುದಾಂಕಿತನೂ ಉಪಮಾಲಂಕಾರ ಚಕ್ರವರ್ತಿಯೂ ಆದ ಲಕ್ಷ್ಮೀಶನ ಜೈಮಿನಿ ಭಾರತದ ಹದಿನಾರನೇ ಸಂಧಿಯ ನಾಲ್ಕನೇ ಪದ್ಯವನ್ನು ಸ್ಮರಣೆಗೆ ತಂದುಕೊಂಡೆನು. ಅದನ್ನೇ ದಿಟ್ಟಿಸಿ ನೋಡುತ್ತ ನಾನು ಮೈಮರೆತಿರುವಾಗ ತುರ್ತು ಪರಿಸ್ಥಿತಿಯ ಸಾಧಕ ಭಾದಕಗಳಿಗೆ ಮನು ಮಹಾಶಯನು ಏನು ಹೇಳಿದ್ದಾನೆಂದು ತಿಳಿದುಕೊಳ್ಳುವ ನಿಮಿತ್ತ ಶಾಮಣ್ಣ ಬಂದ. ನನ್ನ ಕೈಲಿದ್ದ ಆಕೆಯ ಭಾವಚಿತ್ರ ನೋಡಿ ಗಾಬರಿಗೊಂಡ. "ಏನೋ ತ್ರಿಪುರ ಸುಮ್ದರೀದೇವಿಯವರ ಭಾವಚಿತ್ರ ನಿನ್ನಲ್ಲಿಗೆ ಹೇಗೆ ಬಂತು?" ಎಂದು ಪ್ರಶ್ನಿಸಿದೆನು. ನನ್ನ ಬಾಯಿಂದ ಇಂಥದೊಂದು ಸೊಬಗಿನ ನುಡಿಗಟ್ಟು ಬರಬಹುದೆಂದು ಅವನು ಕನಸು ಮನಸಿನಲ್ಲೂ ಯೊಚಿಅಸಿರಲಿಲ್ಲ. ಮರುಗಳಿಗೆ ಸಾವರಿಸಿಕೊಂಡು "ಅಲ್ಲ ತಾತ... ಇದು ನಮ್ಮ ಪ್ರಧಾನ ಮಂತ್ರಿಗಳಾಅದ ಇಂದಿರಾ ಗಾಂಧಿಯವರ ಭಾವಚಿತ್ರ" ಎಂದು, ಅವನು ಹೇಳಲು ನನಗೆ ಅಪರಿಮಿತ ಆಶ್ಚರ್ಯವಾಯಿತು. ಮತ್ತೆ ಚಾಳೇಸ
-

೩೯೧
ಏರಿಸಿ ಪರೀಕ್ಷಾರ್ಥವಾಗಿ ನೋಡಿದೆ. ಗುಂಗುರುಗೂದಲು, ನೀಳನಾಸಿಕ, ತೊಂಡೆಹಣ್ಣಿನಂಥ ತುಟಿಗಳು, ಫಳಫಳ ಹೊಳೆಯುವ ಕಣ್ಣುಗಳು, ಪಾರದರ್ಶಕ ಕಪೋಲಗಳು, ಚೂಪನೆಯ ಗದ್ದ... ಈಕೆ ನಿಸ್ಸಂದೇಹವಾಗಿ ಶಂಕರಾಭರಣರಾಗ ಪ್ರಿಯೆಯಾದ ತ್ರಿಪುರಸುಂದರಿಯೆ ಎಂದುಕೊಂಡೆ. ಈ ಸಂಬಂಧ ನನಗೂ ಅವನಿಗೂ ವಾದೋಪವಾದವಾಯೊತಿ. ಚಾಣಾಕ್ಷನೂ ಆಧುನಿಕನೂ ಆದ ಅವನು ಹಲವು ಚಿತ್ರಗಳನ್ನು ತೋರಿಸಿ ಇಂದಿರಾಗಂಧಿಯವರದೇ ಎಂದು ಬಲವಾಗಿ ಸಮರ್ಥಿಸುವಷ್ಟರಲ್ಲಿ ಒಳಗಿನಿಂದ ವ್ಯಾಸಪೀಠದೊಡನೆ ಸೊಸೆಯಾದ ಅಲುಮೆಲುವು ಬಂದು ಆ ಭಾವ ಚಿತ್ರ ನೋಡಿ ಕಾಶ್ಮೀರಿ ಬ್ರಾಹ್ಮಣ ಕುಟುಂಭದಲ್ಲಿ ಜನಿಸಿ ವಿಧವೆಯಾಗಿದ್ದರೂ ಕೇಶಮುಂಡನ ಮಾಡಿಸಿಕೊಂದಿಲ್ಲವಲ್ಲಾ ಎಂದು ಯೋಚಿಸುತ್ತ ಮುಖ ಸಪ್ಪಗೆ ಮಾಡಿಕೊಂಡಳು. ಸ್ವತಂತ್ರಗೊಂಡಿರುವ ಭರತ ಖಂಡದಲ್ಲಿ ವೃದ್ಧಾಪ್ಯ ಕಳೆಯುತ್ತಿದ್ದರೂ ಜನಪ್ರಿಯ ಪ್ರಧಾನ್ ಮಂತ್ರಿಯೋರ್ವರನ್ನು ನಮ್ಮ ತಾತನವರು ನೋಡಲಿಲ್ಲವಲ್ಲ ಎಂದು ಮೊಮ್ಮಗನಾದ ಶಾಮಣ್ಣನು ತನ್ನ ಮುಖವನ್ನು ಬೇರೊಂದು ರೀತಿ ಸಪ್ಪಗೆ ಮಾಡಿಕೊಂಡನು.
ಆ ದಿನವೆಂಬುದು ಕರಾಳ ಹರತಾಳ ಆಚರಿಸಿತು. ನನ್ನ ಪಾಲಿಗೆ ನನ್ನ ಹೃದಯವು ಅವತ್ತು ಧರ್ಮವನ್ನು ಆಚರಿಸದ ಹಳ್ಳಿಯಾಯಿತು. ಚಿಕಿತ್ಸೆಗೆ ಬಗ್ಗದ ರೋಗಗಳಿಂದ ನರಳುವ ಜಾಗವಾಯಿತು. ಒಂಟಿಯಾಗಿ ಪಯಣಿಸುತ್ತಿರುವಂಥ ದಾರಿಯಾಯಿತು. ಬಿಕೋಗುಟ್ಟುವ ಬೆಟ್ಟದ ಶಿಖರಾಗ್ರವಾಯಿತು. ಆ ದಿನ ನನಗೆ ಚೆನ್ನಾಗಿ ನೆನಪಿರುವಂತೆ ಅವತ್ತು ನಾನು ಮಾನಸಿಕವಾಗಿ ದೈಹಿಕವಾಗಿ ತುಂಬ ಅಸ್ತವ್ಯಸ್ತಗೊಂಡು ಪಡಬಾರದ ಸಂಕಟವನ್ನು ಅನುಭವಿಸಿದೆನು. ಶ್ರುತಿ, ಸ್ಮೃತಿಗೊಪ್ಪುವ ಶುಷ್ಕ ತರ್ಕ ಮಾಡುತ್ತ ಪರಮಾನ್ನದಂಥ ಯೌವನವನ್ನು ಸಿಹಿನೀರಿನ ನದಿಯೊಂದು ಮರುಭೂಮಿಯಲ್ಲಿ ಹರಿದಂತೆ ವ್ಯರ್ಥವಾಗಿ ಕಳೆದೆನಲ್ಲಾ ಎಂದು ತುಂಬ ಪಶ್ಚಾತ್ತಾಪ ಅನುಭವಿಸಿದೆನು. ಉದಕದಲ್ಲಾಗಲೀ, ಅನ್ನದಲ್ಲಾಗಲೀ, ಹಾಸಿಗೆಯಲ್ಲಾಗಈ, ಪುಣ್ಯ ಶ್ರವಣಗಳಲ್ಲಾಗಲೀ ರುಚಿ ಸುಖ ಮತ್ತು ನೆಮ್ಮದಿ ಇಲ್ಲದಾಯಿತು. ತುಲಸೀ ಗಿಡದ ಪಕ್ಕ ಆಕಾಶದ ನಕ್ಷತ್ರಗಳನ್ನುಎಣಿಸುತ್ತ ಮಲಗಿದ್ದ ನನ್ನ ಎದೆಯಲ್ಲಿ ತ್ರಿಪುರಸುಂದರಿ ದೇವಿಯ ಮಂದಾನಿಲದಂತೆ ಸುಳಿಯತೊಡಗಿತು. ನಿರುಪಪ್ಲವೆಯಾದ ನನಗೆ ಸಾವಿಲ್ಲ... ನಾನು ಪ್ರಧಾನಿ ಇಂದಿರಾ ಗಾಂಧಿಯ ರೂಪದಲ್ಲಾದರೂ ಗೋಚರಿತಳಾಗಿ ನಿನ್ನ ವೃದ್ಧಾಪ್ಯವನ್ನು ದಹಿಸುತ್ತಿದ್ದೇ" ಎಂದು ನುಡಿದಂತೆ ಭಾಸವಾಯಿತು.
"ನಿನಗೆ ಏಶ್ಟು ಸಾರಿ ಹೇಳಬೇಕೋ ಶಾಸ್ತ್ರಿ ಖರಹರಪ್ರಿಯ ರಾಗ ಹಾಡಬೇಡಂತ. ನಿನ್ನ ಕಿವಿಗೆ ಶಂಕರಾಭರಣ ರಾಗ ಹೊರತಾಗಿ ಮತ್ತೊಂದು ರಾಗ ಬೀಳಕೂಡದು" ಎಂದು ನನ್ನ ತುಟಿ ಮೇಲೆ ಬೆರಳಾಡಿಸಿದ್ದು ನೆನಪಾಯಿತು. ಆದಿತಾಳದ ವೈಷಿಷ್ಟ್ಯವನ್ನು ಆ ರಜತಮುಖಿ ವಿವರಿಸಿದ್ದು ನೆನಪಾಯಿತು. ಜೀವನವೆಂಬುದು ವಜ್ರಕಠೀಣವಾದಾಗ, ದೈವವು ಪ್ರತಿಕೂಲವಾದಾಗ ಆಕೆಯನ್ನು ಸಾಕ್ಷಾತ್ ಶ್ರೀ ಲಲಿತೆ ಎಂದೇ ಭಾವಿಸಿ ನೆಮ್ಮದಿಯನ್ನು ಆವಹಿಸಿಕೊಳ್ಳುತ್ತಿದ್ದೆನು. ಶ್ರೀರಾಮನ ಸಂಚಾರಕ್ಕೆ ತಡೆಯೊಡ್ಡಿ ಪರಶುರಾಮನು ತನ್ನ ಸ್ವರ್ಗಗಮನಕ್ಕೆ ವಿಘ್ನ ತಂದುಕೊಂಡ ರೀತಿಯಲ್ಲಿಯೇ ನಾನು ಸುಮ್ದರವದನೆಯನ್ನು ಧ್ಯಾನ ಮಧ್ಯೆ ಜ್ಞಾಪಕಕ್ಕೆ ತಂದುಕೊಂಡು ಗೊಂದಲಕ್ಕೀಡಾಗುತ್ತಿದುಂಟು. ಕಾಲ ಕಳೆದಂತೆ ದಯಾರ್ದ್ರ ಹೃದಯವಾಗಿ ತಾಳೆಗರಿ ಕಟ್ಟು ಕಂಠಪತ್ರಗಳೇ ಸರ್ವಸ್ವ ಎಂದುಕೊಂಡು ಗುಣಪ್ರಾಹಿಯಾಗಿ ಇದ್ದು ಬಿಟ್ಟು ಕೆಲವು ದಶಕಗಳೇ ಕಳೆದುಹೋದವು.ಕ್ರೋಧ ಬರದಂತೆ ತಪಸ್ಸನ್ನು ಹೊಟ್ಟೆಕಿಚ್ಚು ಪಡೆದಮ್ತೆ ಧರ್ಮವನ್ನೂ,


೩೯೨
ಮಾನಾಪಮಾನಗಳಿಗೆ ಬಗ್ಗದಂತೆ ವಿದ್ಯೆಯನ್ನೂ, ತಪ್ಪು ದಾರಿ ತುಳಿಯದಂತೆ ಆತ್ಮವನ್ನೂ ಕಾಪಾಡಿಕೊಳ್ಳುತ್ತ ಸುಭಾಷಿತ ಸುಧಾನಿಧಿಯೇ ಮಾನವ ರೂಪ ಧರಿಸಿದೆ ಏನೋ ಎಂಬಂತೆ ಬದುಕಿದ್ದೆ. ಹೀಗೆಯೇ ಬದುಕಿ ಶಿವ ಸಾಯುಜ್ಯ ಪಡೆಯುವೆನೆಂದುಕೊಂಡಿದ್ದೆ. ಆದರೆ ಯಾವ ಕೆಟ್ಟ ಘಳಿಗೆ ನನ್ನೀ ತಪಸ್‌ಚರ್ಯೆ ಹೊಡೆದೋಡಿಸಲು ಕಾದಿತ್ತೋ? ಆ ಕೆಟ್ಟಗಳಿಗೆಯೇ ಬ್ರಾಹ್ಮಣ ವಿಧವೆಯರು ಪಾಲಿಸಬೇಕಾದ ವಿಧಿನಿಯಮಗಳನ್ನುನಿಖರವಾಗಿ ತಿಳಿದುಕೊಳ್ಳಬೇಕಾದಂಥ ಪ್ರೇರಣೆ ನೀಡಿತು. ಆ ಪ್ರೆರಣೆಯಿಂದಾಗಿಯೇ ಶಾಮನ ಪೆಟ್ಟಿಗೆ ತೆಗೆದು ಅದರೊಳಗೆ ಕೈ ಇರಿಸಿದ್ದು, ಕೈ ಇರಿಸಿ ಮನುಸ್ಮೃತಿ ಎತ್ತಿಕೊಂದ್ದು, ಎತ್ತಿತೆರೆದೊಡನೆ ನೀಳನಾಸಿಕದ ಚೆಂದುಟಿಯ ಪ್ರಧಾನಿ ಇಂದಿರಾ ಗಂಧಿ ಎಂಬ ಮಹಿಳೆಯೋರ್ವಳ ಭಾವಚಿತ್ರ ಕೋರೈಸಿದ್ದು. ಆ ಭಾವಚಿತ್ರ ಭೂತಕಾಲದ ಪುಟಗಳನ್ನು ಸೇರಿದಂಥ ತ್ರಿಪುರ ಸುಂದರಿದೇವಿಯ ಭವ್ಯ ಮೂರ್ತಿಯನ್ನು ನನ್ನ ದೇಹದ ಅಣುಅಣುವಿನಲ್ಲಿ ಪ್ರತಿಷ್ಟಾಪಿಸಿದ್ದು. ಆಕೆ ಸಿಹಿ ನೀರು ತುಂಬಿದ ಬಾವಿ ಎಂದರೂ ಸರಿಯೆ. ಹಗ್ಗದ ಮೂಲಕ ನಿನ್ನಲ್ಲಿಗೆ ಧಾವಿಸುತ್ತಿರುವ ನನ್ನನ್ನು ನೀಚ ಎಂದು ಭಾವಿಸದೆ ನನ್ನ ಚಿರಂತನ ದಾಹ ತಣಿಸು ಎಂದು ಬೇಡಿಕೊಂಡೆ. ನನ್ನ ದಯಾರ್ದ್ರ ಬೇಡಿಕೆ ನಿನ್ನನ್ನು ತಲುಪಿತೋ ಇಲ್ಲವೋ? ಆದರು ಹಲವು ದಶಕಗಳ ನಂತರ ನಾನು ಅಮೃತೋಪಮ ಉದಕದಂತಿರುವ ನಿನ್ನಲ್ಲಿಗೆ ತಲುಪುತ್ತಿರುವೆನು! ಅನ್ಯ್ಥಾ ಭಾವಿಸದೆ ನನ್ನನ್ನು ಬರಮಾಡಿಕೋ!
ತಾಯಿಯ ಮುಖ ಕಂಡರಿಯದ ನಾನು ವಾತ್ಸಲ್ಯಕ್ಕಾಗಿ ಹಲವರ ಬಳಿ ಹಾತೊರೆಯುತ್ತಿದ್ದೆನು. ಆಗ ನನ್ನ ವಯಸ್ಸು ಇಪ್ಪತ್ತೈದರ ಆಜುಬಾಜು. ನರ್ತಕಿಯ ಉದರದಿಂದ ಜನಿಸಿದ್ದರಿಂದಾಗಿಯೋ ಏನೋ? ನನ್ನ ಕಾಲುಗಳು ನರ್ತಿಸಲು ಹಾತೊರೆಯುತ್ತಿದ್ದವು. ಬಾಯಿ ಹಾಡಾಲು ಹಾತೊರೆಯುತ್ತಿತ್ತು. ನಾನು ನಡೆದರೆ ನರ್ತಿಸಿದ್ದಂತಿರುತ್ತಿತ್ತು. ಮಾತಾಡಿದರೆ ಹಾಡಿದಂತೆ ಇರುತ್ತಿತ್ತು. ಅದಕ್ಕೂ ಮಿಗಿಲಾಗಿ ಸುಂದರನಾಗಿದ್ದೆ. ನಾನು ಯಾರ ಬಳಿ ಶಿಷ್ಯವೃತ್ತಿಯಲ್ಲಿದ್ದೆನೋ ಆ ಪಂಡಿತೊತ್ತಮರಾದ ಚಲುವ ನಾರಾಯಣ ಅಯ್ಯಂಗಾರರು ನನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಕೊಡುತ್ತಿದ್ದರು. ನನಗಿಂತಲೂ ಹಿರಿಯರಾದ ಸಹಪಾಠಿಗಳ ಪೈಕಿಕೆಲವರು ಸಲಿಂಗ ರತಿಗಾಗಿ ನನ್ನನ್ನು ಉದ್ದೀಪಿಸುತ್ತಿದ್ದರು. ಅವರ ಸ್ಪರ್ಶ, ಆಡುತ್ತಿದ್ದ ರತಿವಿಲಾಸದ ಮಾತುಗಳು ನನ್ನ ದೇಹದಲ್ಲಿ ರೋಮಾಂಚನದ ಅನುಭೂತಿ ಹುಟ್ಟಿಸುತ್ತಿದ್ದವು. ನಾನು ಪುರುಷ ವೇಶದಲ್ಲಿರುವ ಹೆಣ್ಣಿರಬೇಕೆಂದು ನನ್ನನ್ನು ನಾಅನು ಅನುಮಾನಿಸಿಕೊಳ್ಳುತ್ತಿದ್ದುದುಂಟು. ದರ್ಪಣವೊಂದರಲ್ಲಿ ನನ್ನ ಪ್ರತಿಬಿಂಬವನ್ನು ನಾನು ನೋಡಿಕೊಂಡು ಮಂತ್ರಮುಗ್ಧನಾಗಿಬಿಟ್ಟೆ. ಗಡ್ಡಮೀಸೆಯನ್ನು ಧಾರಾಳವಾಗಿ ಬಿಟ್ಟು ಅದರಲ್ಲಿ ನಾನು ನನ್ನ ಮುಖವನ್ನು ಮರೆಮಾಚಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಆದರೆ ತೀರ್ಥರೂಪರು ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಅವಾ ಮಾತಿನಿಂದ ದಂಡಿಸುತ್ತಿದ್ದರು. ಪುಷ್ಕರಣಿಯೊಂದರಲ್ಲಿ ಸ್ನಾನ ಸಂಧ್ಯಾವಂದನೆ ಮಾಡುತ್ತಿರುವಾಗ ವಾಮನರಾವ್ ಬಾಪಟ್ ಎಂಬ ಹೆಸರಿನ ಸ್ವಾತಂತ್ರ ಹೋರಾಟಗಾರರೋರ್ವರ ಪರಿಚಯವಾಯಿತು. ಅವರು ಜಲಿಯನ್ ವಾಲಾಬಾಗಿನ ಹತ್ಯಾಕಾಂಡ ಪ್ರತಿಭಟಿಸಿಬುಡಮೇಲು ಕೃತ್ಯಗಳಲ್ಲಿ ತೊಡಗಿ ಫರಂಗಿಯವರ ತುರಂಗವಾಸದಿಂದ ತಪ್ಪಿಸಿಕೊಂಡಿಲ್ಲಿಗೆ ಬಂದು ತಲೆಮರೆಸಿಕೊಂಡಿರುವರೆಂದು ತಿಳಿಯಿತು. ಅದುವರೆಗೆ ಅಲ್ಲಿಯೇ ವಾಸಿಸುತ್ತಿದ್ದ ಅವರನ್ನು ನಾವು ಉತ್ತರಭಾರತದ ಸಧು ಇರಬೇಕೆಂದುಕೊಂಡಿದ್ದೆವು. ಬಾಪಟ್‌ರವರು ದಾಸ್ಯದಲ್ಲಿರುವ
-

೩೯೩
ಭಾರತದ ಬಗ್ಗೆ, ಫರಂಗಿಯವರನ್ನು ಸಮುದ್ರದಾಚೆ ಓಡಿಸುವ ಬಗ್ಗೆ ಸುಭಾಷ್‌ಚಂದ್ರ ಬೋಸರ ಬಗ್ಗೆ, ಅವರು ಸ್ಥಾಪಿಸಿರುವ ಸಶಸ್ತ್ರ ಸೈನಿಕ ದಳದ ಬಗ್ಗೆ, ಹೇಳುತ್ತಿದ್ದರು. ಅವರ ಮಾತಿಗೆ ಮೋಡಿಮಾಡುವ ಶಕ್ತಿ ಇತ್ತು. ಪಸ್ಚಿಮ ಬಂಗಾಲಕ್ಕೆ ಕರೆದೊಯ್ದು ಸೈನ್ಯ ಸೇರಿಸುವೆನೆಂದೂ, ದೇಶಕ್ಕಾಗಿ ಪಾದಾರ್ಪಣೆ ಮಾಡಿ ಜನನೀ ಜನ್ಮಭೂಮಿಸ್ಚ ಸ್ವರ್ಗಾದಪಿ ಗರೀಯಸೀ ಎಂಬ ಅರ್ಯೋಕ್ತಿಯನ್ನು ಬ್ರಾಹ್ಮಣಕುಮಾರನಾದ ನೀನು ಸಾರ್ಥಕಗೊಳಿಸಬೇಕೆಂದೂ, ಜಾತಸ್ಯ್ ಮರಣಂ ಧೃವಂ ಎಂದು ಹೇಳೀ, ಹೇಳೀ ನನ್ನನ್ನು ತಾಕೀಟು ಮಾಡುತ್ತಿದ್ದರು. ಇನ್ನೇನು ನಾಡಿದ್ದು ತ್ರಯೋದಶಿಯಂದು ಓಡಿಹೋಗುವುದೆಂದು ಸಂಸಿದ್ಧನಾಗಿದ್ದಾಗ, ನಾಳೆ ಅಂದರೆ ದ್ವಾದಶಿಯಂದು ಮಧ್ಯಾನ್ಹ ಕೆಲವು ಫರಂಗಿ ಸರಕಾರದ ಹಿಂದೂ ಸೈನಿಕರು ಅವರನ್ನು ಬಂಧಿಸಿ ಹಿಡಿದೊಯ್ದರು. ಅದಾದ ಎರಡನೆಯ ದಿನಕ್ಕೆ ಅಂದರೆ ಚತುರ್ದಶಿಯಂದು ನಮ್ಮ ತೀರ್ಥರೂಪರು ಬಂದು ನನ್ನನ್ನು ಸಾರೋಟಿನಲ್ಲಿ ಊರಿಗೆ ಕರೆದೊಯ್ದರು.
ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿದ್ದ ಅವರು ನನ್ನಿಂದ ತ್ಯಾಗರಾಜರ ಅಣ್ಣಮಾಚಾರ್ಯರ, ಪುರಂದರದಾಸರ, ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಹಾಡಿಸುತ್ತಿದ್ದರು. ವರ್ಣ, ಗಣ, ಮಾತ್ರೆ, ತಾಳ ಲಯ, ಆರೋಹಣ ಅವರೋಹಣ ಪರಿಚಯ ಮಾಡಿಕೊಡುತ್ತಿದ್ದರು. ಸುಪ್ತಾವಸ್ಥೆಯೊಳಗೆ ಬೇರೂರಿದಂಥ ಭಾವನೆಗಳನ್ನು ಕೆರಳಿಸುವಂಥ, ಅವುಗಳಿಗೆ ಪರಿಪೂರ್ಣ ವ್ಯಕ್ತಿತ್ವ ಕಲ್ಪಿಸುವಂಥ ಕೀರ್ತನೆಗಳನ್ನು ನನ್ನ ಬಾಯಿಂದ ಹಾಡಿಸುತ್ತ ಅವರು ನಿದ್ದೆ ಹೋಗಿ ರಮ್ಯ ಕನಸುಗಳನ್ನು ವಿವರಿಸುತ್ತಿದ್ದರು. (ಅವರು ಹಾಗೆ ವಿಹರಿಸುತ್ತಿದ್ದುದು ಮೈಸೂರು ಮಹಾರಾಜರ ಆಸ್ಥಾನದ ನರ್ತಕಿಯ ನೆನಪಿನೊಂದಿಗೆ ಅಂತ ಈಗ ಅರ್ಥವಾಗುತ್ತದೆ)
ಅಷ್ಟಾಂಗಮಾರ್ಗಕ್ಕೆ ಸಂಬಂಧಿಸಿದಂತೆ ಸದರಿ ಗ್ರಾಮದಲ್ಲಿ ಸಾಕಷ್ಟು ಹೆಸರು ಶಂಪಾದಿಸಿದ್ದ ತೀರ್ಥರೂಪರು ಸಾಮಾನ್ಯವಾಗಿ ಶ್ರೀಮಂತರ, ದೊಡ್ಡ ದೊಡ್ಡ ಅಧಿಕಾರಿಗಳ ಮನೆಗೆ ವೈದಿಕ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದುದೇ ಹೆಚ್ಚು. ಅವರೊಂದಿಗೆ ತಪ್ಪದೆ ನಾನಿರಬೇಕಾಗಿತ್ತು. ಹೋಗುವಾಗ ದಾರಿಯುದ್ದಕ್ಕೂ ಧರ್ಮದ ಅಷ್ಟಮಾರ್ಗಗಳಾದ ಯಾಗ, ಅಧ್ಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ ಮತ್ತು ಲೋಭವಿಲ್ಲದಿರುವಿಕೆ ಕುರಿತಂತೆ ಹೇಳುತಿದ್ದರು. ಕೆರೆಯೊಳಗೆ ಸಂಗ್ರಹಗೊಂಡ ನೀರು ಹೋಗಲು ಕೋದಿಎಂಬುದು ಹೇಗಿರುತ್ತದೆಯೋ ಹಾಗೆ ಸಂಪಾದಿಸಿದ ಹಣದ ಒಂದು ಭಾಗವನ್ನು ದಾನಧರ್ಮಗಳಿಗೆ ವಿನಿಯೋಗಿಸಬೇಕೆಂದು ಹೇಳುತ್ತಿದ್ದರೊಂದೇ ಅಲ್ಲದೆ ಅದರಂತೆ ಬದುಕುತ್ತಿದ್ದರು. ಆದ್ದರಿಂದ ಅವರೆಂದರೆ ಶ್ರೀಮಂತರಿಗೂ ಬಡವರಿಗೂ ಅಪಾರವಾದ ಗೌರವವಿತ್ತು.
ಆ ದಿನ ಪ್ರಸಿದ್ಧ ಇಂಜಿನೀಯರಾದ ಗೋರೆಬಾಳು ಸುಭಾಷ್‌ಚಂದ್ರ ಗುತ್ತಿಗೆದಾರ್ರವರ ಮನೆಗೆ ಸತ್ಯನಾರಾಯಣ ಪೂಜೆಗೆ ತೀರ್ಥರೂಪರೊಂದಿಗೆ ನಾನೂ ಹೋಗಬೆಕಾಗಿ ಬಂತು. ದೊಡ್ಡ ಇಂಜಿನೀಯರಾಗಿದ್ದೂ ಅಪರೂಪದ ಕಲೋಪಾಸಕರಾಗಿದ್ದ ಶ್ರಿಯುತ ಗುತ್ತೇದಾರರೂ ಸುಭಾಷ್‌ಚಂದ್ರ ಬೋಸರೂ ಒಂದೇ ವಾರಿಗೆಯವರೆಂದು ಹೇಳಬಹುದು. ಅವರ ಆ ಹೆಸರು ಇಟ್ಟುಕೊಂಡಿದ್ದೇ ಸುಭಾಷ್‌ಚಂದ್ರಬೋಸರು ಪ್ರವರ್ಧಮಾನಕ್ಕೆ ಬಂದು ಹೆಸರು ಗಳಿಸಿದನಂತರವಂತೆ. ಅವರ ಮೊದಲನೆಯ ಹೆಸರು ಹನುಮಂತ ದೇವರು ಎಂದು ಇತ್ತಂತೆ. ಅವರ ತಂದೆ ಜೋಡಿದಾರ್ ಎಂದು ಕರೆಸಿಕೊಂಡಿದ್ದರೆ ಅವರ ತಾತ ಜಾಗೀರ್ದಾರ್ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಅವರ ಮುತ್ತಾತ ಜಮೀನ್ದಾರ್ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಸುಭಾಷ್
-

೩೯೪
ಚಂದ್ರರು ಫರಂಗಿಯವರ ಸರ್ಕಾರದಲ್ಲಿ ಅತ್ಯುನ್ನತ ಪದವಿಗೇರಿದ ಮೇಲೆ ತಮ್ಮ ಹೆಸರಿನ ಪಕ್ಕ ಗುತ್ತೇದಾರ್ ಎಂಬ ಉಪನಾಮ ಸೇರಿಸಿಕೊಂಡರಂತೆ. ಅದಕ್ಕೆ ತಕ್ಕಂತೆ ಸಿಂಧನೂರು ಪ್ರಾಂತದ ಗೋರೆಬಾಳಿನಲ್ಲಿ ನೂರಾರು ಎಕರೆ ಜಮೀನು ಇರುವುದಂತೆ. ತ್ರಿಪುರಸುಂದರೀದೇವಿಯಂಥ ಕಿರಿವಯಸ್ಸಿನ ಅತಿಲೋಕ ಸುಮ್ದರಿಯನ್ನು ಮದುವೆಯಾಗಿ ಐದುವರ್ಷಗಳಾದರೂ ಮಗುವಾಗಲಿಲ್ಲ ಕಾರಣಕ್ಕೆ ಆಗಾಗ್ಗೆ ಪುತ್ರಕಾಮೇಷ್ಟಿಯಾಗಕ್ಕೆ ಸಮಾನವಾದಂಥ ಸತ್ಯನಾರಾಯಣ ಪೂಜಾ ಶ್ರವಣವನ್ನು ತಮ್ಮ ಭಾರಿ ಮತ್ತು ಆಧುನಿಕವಾದ ಮನೆಯೊಳಗೆ ಏರ್ಪಡಿಸುತ್ತಿದ್ದರು.
ಆ ದಿನ ನಾನು ಅವರ ಸ್ರೀಮತಿಯವರ ಸೌಂದರ್ಯಕ್ಕೆ ಬೆರಗಾಗಿ ಹೋದೆ. ಪೂಜೆಯ ನಂತರ ತೀರ್ಥರೂಪರು ಸೂಚಿಸಿದ ಪ್ರಕಾರ ನಾನು ಸಾಂಧರ್ಭಿಕವಾಗಿ ಮುತ್ತುಸ್ವಾಮಿ ದೀಕ್ಷಿತರ ಪ್ರಸಿದ್ಧ ಕೃತಿಯಾದ ಸಾಮಗಾನಪ್ರಿಯೇ ಕಾಮಕೋಟಿನಿಲಯೇ | ಶಂಕರೀ ಸುಂದರಿ | ಸಾರತರ ಲಹರೀ | ಚಂಡಿಕೇ ನಿರ್ಮಜೇ | ಕಾಮಿನೀ ಮೋದಿನೀ | ಪಾಹಿ ಗುರುಗುಹ ಜನನೀ ಕಾಮಾಕ್ಷಿ ಎಂದು ಶಂಕರಾಭರಣ ರಾಗದಲ್ಲಿ ಸೊಗಸಾಗಿ ಹಾಡಿಬಿಟ್ಟೆ. ಹಾಡಿ ಆ ದಂಪತಿಗಳೀರ್ವರನ್ನು ಪರವಶಗೊಳಿಸಿಬಿಟ್ಟೆನು. ಆಕೆಯ ಸೌಂದರ್ಯರಾಶಿಯೇ ನನ್ನ ಅಂತರಂಗದಲ್ಲಿ ಲಗ್ಗೆ ಹಾಕಿ ಆ ಪ್ರಕಾರ ಹಾಡಿಸಿತು. ಎಲ್ಲ ವಿಷಯಗಳಿಗೆ ಸಂಬಂಧಪಟ್ಟಂಥ ಸಾರಿರಾರು ವಸ್ತುಗಳು ಒಟ್ಟಗಿ ಸೇರಿ ಹಾಡಿನ ಮೂಲಕ ಪ್ರಕಟಗೊಂಡುಬಿಟ್ಟವು. ದುಃಖವಾಗಲೀ, ಸಂತೋಷವಾಗಲಿಈ ಹೊಂದಬಾರದೆಂದು ನಾನು ನಿಧಾನವಾಗಿ ಆಲೋಚಿಸುತ್ತ ಸ್ಥಿತ ಪ್ರಜ್ಞನಂತೆ ಉಳಿದು ಬಿಟ್ಟೆನು. ಅವರೆಲ್ಲರು ಅಮೃತವನ್ನು ಹರಿಸತಕ್ಕ ಒಳ್ಳೆಯ ಮಾತುಗಳನ್ನಡಿದರು. ಜೇನು ಬೆರೆಸಿದಂತೆ ನನ್ನೆದೆಯ ಉದಕವ ಸಿಹಿಯಾಯಿತು.
ಕಾಮಸುಖವು ಬೇರೆ ಎಲ್ಲ ಶತ್ರುಗಳಿಗಿಂತಭಯಂಕರವಾದುದೆಂದು ತದ ನಂತರ ಅರಿವಿಗೆ ಬಂತು. ಸಕ್ಕರೆಯನ್ನು ರುಚಿ ನೋಡುವ ಸಂತೋಷದಲ್ಲಿ ಗಮನಿಸದೆ ಹೋದ ನೊಣವು ಹೊಟ್ಟೆ ಸೇರಿ ಯಾವ ಪ್ರಕಾರವಾಗಿ ನೋವು ಕೊಡುವುದೋ ಹಾಗೆಯೇ ಆಕೆಯ ರೂಪ ನನ್ನ ಮಸ್ತಿಸ್ಕವನ್ನು ಸೇರಿ ಹೆಚ್ಚಿನ ತೊಂದರೆ ಕೊಡಲಾರಂಭಿಸಿತು. ಒಂದೇ ಒಂದು ಒಣಗಿದ ಮರವಿದ್ದರೂ ಕಾಡುಗಿಚ್ಚಿನಿಂದ ತಾನುರಿದು ಹೂವುಗಳಿಂದ ತುಂಬಿದ ಮರಗಳ ವನವನ್ನೇ ದಹಿಸುವ ರೀತಿಯಲ್ಲಿ ಆಕೆಯ ಒಂದೇ ಒಂದು ನೆನಪು ನನ್ನೆದೆಯಲ್ಲಿ ದಹಿಸುತ್ತ ಶಾಸ್ತ್ರಾಭ್ಯಾಸದಿಂದ ಪಡೆದ ಸಮಸ್ತ ಜ್ಞಾನವನ್ನು ಆಪೋಶನ ತೆಗೆದುಕೊಳ್ಳಲಾರಂಭಿಸಿತು.
ಆ ರಾತ್ರಿ ನಾನು ಕಂಡ ಕನಸೇ ಇದಕ್ಕೆ ಸಾಕ್ಷಿ: ಭೋರ್ಗರೆಯುವ ನದಿ ದಡದ ಮರಳ ಮೇಲೆ ನಿರ್ವಸ್ತ್ರನಾಗಿ ಅಂಗಾತ ಮಲಗಿದ್ದಂಥ ಕನಸು ಅದಾಗಿತ್ತು. ಆಕಾಶದಲ್ಲಿ ಸಾವಿರ ಯೋಜನಗಳ ಮೆಲೆ ನಕ್ಷತ್ರದಷ್ಟು ಚಿಕ್ಕದಾದ ಪಕ್ಷಿಯೊಂದು ಕಾಣಿಸಿಕೊಂಡಿತು. ಅದು ಬ್ರಹ್ಮದ ಯಾವ ತತ್ವ ಆಗಿರಬಹುದೆಂದು ನಾನು ಯೋಚಿಸುತ್ತಿದ್ದೆನು. ನೋಡು ನೋಡುತ್ತಿದ್ದಂತೆ ಆ ಪಕ್ಷಿ ದೊಡ್ಡದಾಗುತ್ತ ಹೋಯಿತು. ನೀರಿನಲ್ಲಿ ಬಿದ್ದ ಶಾಯಿಯ ಬಿಂದುವಿನಂತೆ, ಕ್ರಮೇಣ ಅದು ನಭೋ ಮಂಡಲದ ತುಂಬ ರೆಕ್ಕೆಳಿಂದ ವ್ಯಾಪಿಸಿತು. ಅದರ ಎರಡು ಕಣ್ಣುಗಳು ಸೂರ್ಯ ಗೋಳದ ಎರಡು ನಮೂನೆಗಳಂತೆ ಹೊಳೆಯ ತೊಡಗಿದವು. ಅದು ಅಂಥ ಕಣ್ಣುಗಳಿಂದ ನನ್ನನ್ನು ದುರುಗುಟ್ಟಿ ನೋಡ ತೊಡಗಿತು. ಅದ ತೀಕ್ಷ್ಣ ನೋಟವು ಎಷ್ಟೊಂದು ಆಪ್ಯಾಯಮಾನವೂ ಪವಾಡ ಸದೃಶ್ಯವೂ ಆಗಿತ್ತೆಂದರೆ ನನ್ನ ಶಿಶ್ನವು ನಿಮಿರಿ ಚಿಗಿತು ಹೂವು ಹಣ್ಣು ಬಿಟ್ಟು


೩೯೫
ಘಮಾಡಿಸಲಾರಂಬಿಸಿತು. ಇದ್ದಕ್ಕಿದ್ದಂತೆ ಆ ಹಕ್ಕಿಯು ಬಿಟ್ಟ ಬಾಣದ ಹಾಗೆ ಸುರುಗಿ ನನ್ನ ಶಿಶ್ನವನ್ನು ಕೊಕ್ಕಿನಿಂದ ಕಚ್ಚಿಕೊಂಡು ಮುಗಿಲಿಗೆ ಜಿಗಿದು ಮರುಕ್ಷಣದಲ್ಲಿ ಅಂತರ್ಧಾನವಾಯಿತು.
ನಾನು ಹ್ಹಾಂ ಎಂದು ಚೀರಿಕೊಂಡೆ. ನಿದ್ರೆಯಲ್ಲಿ ಬ್ರಹ್ಮತ್ವವನ್ನು ಸೇರಿದ್ದ ತೀರ್ಥರೂಪರು ತುಪ್ಪದ ದೀವಿಗೆ ಹಿಡಿದುಕೊಂಡು ಗಾಬರಿಯಿಂದ ಬಂದು "ಏನಾಯಿತು ಮಗು?... ಕೆಟ್ಟ ಕನಸು ಕಂಡೆ ಏನು? ಎಂದು ವಿಚಾರಿಸಿದರು. ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಹೇಗೆ ಮದ್ಯಪಾನವು ಯೋಗ್ಯವಲ್ಲವೋ ಹಾಗೆ ಸತ್ಕಥಾ ಶ್ರವಣ ಸಂಪನ್ನರಾದ ತೀರ್ಥರೂಪರಿಗೆ ಕಂಡ ಕನಸನ್ನು ಕಂಡಂತೆ ಹೇಳುವುದು ಯೋಗ್ಯವಲ್ಲವೆಂದು ಭಾವಿಸಿದ ನಾನು ಬೆಟ್ಟದ ಮೇಲಿಂದ ಬಿದ್ದುದಾಗಿ ಕನಸು ಕಂಡೆನೆಂದು ಸುಳ್ಳು ಹೇಳಿದೆ. ಅದಕ್ಕವರು ಸ್ವಪ್ನ ದೋಷನಿವಾರನಾ ಮಂತ್ರ ಹೇಳಿ ಮಲಗಿಸಿದರು.
ಮುಂದಿನ ದಿನಗಳಲ್ಲಿ ಗುತ್ತೇದಾರರು ದಿನಕ್ಕೊಮ್ಮೆಯಾದರೂ ನನ್ನನ್ನು ಬರಮಾಡಿಕೊಂಡು ಒಂದಲ್ಲಾ ಒಂದು ಕೀರ್ತನೆ ಹಾಡಿಸುವುದು, ತಾವೂ ಹಾಡುವುದು, ಪರಸ್ಪರ ಅಭಿಪ್ರಶಂಸಿಸಿಕೊಳ್ಳುವುದು ಮೊದಲಾಯಿತು. ಗುತ್ತೇದಾರರು ಪರ ಊರಿಗೆ ಹೋಗಿದ್ದಾಗ ಅವರ ಎಳೆ ವಯಸ್ಸಿನ ಪತ್ನಿಯಾದ ತ್ರಿಪುರ ಸುಂದರೀ ದೇವಿಯವರು ನನ್ನನ್ನು ತಮ್ಮ ಮನೆಗೆ ಕರೆ ಕಳಿಸಿಕೊಂಡು ಶಾಮೂ ಶಂಕರಾಭರಣರಾಗದ ದೀಕ್ಷಿತರ ಕೃತಿ ಹಾಡೆಂದು ಪೀಡಿಸತೊಡಗಿದರು. ಯಾವ ಯಾವ ತಾಳದಲ್ಲಿ ಶಂಕರಾಭರಣ ಯಾವ ಯಾವ ರೂಪ ಪಡೆಯುತ್ತದೆ ಎಂದು ನನ್ನ ಶಾರೀರವನ್ನು ಪ್ರಯೋಗಕ್ಕೆ ಒಡ್ಡುತ್ತಿದ್ದರು. ಆನಂದಾತಿರೇಕದಿಂದ ನನ್ನನ್ನು ಸ್ಪರ್ಶಿಸುತ್ತಿದ್ದರು. ತಟ್ಟುತ್ತಿದ್ದರು. ಅಪ್ಪಿಕೊಳ್ಳುತ್ತಿದ್ದರು. ಉಣಬಡಿಸುತ್ತಿದ್ದರು. ಉಣ್ಣುತ್ತಿದ್ದರು. ಚಿರಂತರ ಹಸಿವೆ ತೃಷೆಗಳನ್ನು ತಮ್ಮ ಕೈಯಾರ ತಣಿಸುವ ಪ್ರಯತ್ನ ಮಾಡುತ್ತಿದ್ದರು. ಹಂಸತೂಲಿಕಾತಲ್ಪದ ಮೇಲೆ ನನ್ನನ್ನು ವಿವಿಧ ಭಂಗಿಗಳಲ್ಲಿ ಮಲಗಿಸಿ ನನ್ನ ದೇಹದ ಕೋಟಿ ಕೋಟಿ ಶ್ವೇದರಂದ್ರಗಳಲ್ಲಿ ತಮ್ಮ ಬೆಚ್ಚನೆಯ ಉಸಿರು ಬಿತ್ತುತ್ತಿದ್ದರು. ನನ್ನ ಫಲವತ್ತಾದ ದೇಹವು ಅವರಿಗಿಷ್ಟವಾದ ಬೆಳೆಯನ್ನು ಕುಯ್ಲಿಗೆ ತಂದು ಸುಗ್ಗಿ ಮಾಡುತ್ತಿತ್ತು. ಆ ದೇಹದ ಹಸಿವಿನ ಬೆಂಕಿಯನ್ನಾರಿಸಲು ನನ್ನ ದೇಹ ಬೆಳೆಯುತ್ತಿದ್ದ ಕಾಳುಗಳಿಗೆ ಸಾಧ್ಯವಾಯದಾಯ್ತು. ಆಕೆಯ ದೇಹದ ನಗ್ನತೆ ಮರೆ ಮಾಚಲು ನನ್ನ ದೇಹವೆಂಬ ಕೌಪೀನಕ್ಕೆ ಸಾಧ್ಯವಾಗದಾಯ್ತು. ಆಕೆಯ ದೇಹದ ಅಗತ್ಯಗಳನ್ನು ತೀರಿಸಲು ನನ್ನ ದೇಹವು ಅತ್ಯುತ್ಕಟವಾಗಿ ಹಾತೊರೆಯುತ್ತಿತ್ತು.
ಮುಂದೊಂದು ದಿನ ತೀರ್ಥರೂಪರು ನನ್ನ ಕಪೋಲಗಳಿಗೆ ಛಟೀರನೆ ಏಟುಕೊಟ್ಟು ಮುಂದೆಂದೂ ಸಂಗಿತದ ಗೊಡವೆಗೆ ಹೋಗಬೇಡವೆಂದೂ ಅದರಲ್ಲೂ ಮುಖ್ಯವಾಗಿ ಶಂಕರಾಭರಣ ಹಾಡಕೂಡದೆಂದೂ, ಹಾಡಿದಿ ಎಂದರೆ ರೌರವ ನರಕ ಪ್ರಾಪ್ತವಾಗುವುದೆಂದೂ ಎಚ್ಚರಿಕೆ ನೀಡಿದರು.
ಶೃಂಗೇರಿಗೆ ಕರೆದೊಯ್ದು ಸಂಧ್ಯಾ ವಂದನೆ ಮಾಡಿಸಿ ಎಳ್ಳು ಬೀಜಗಳನ್ನು ತುಂಗೆಗೆ ಬಿಡಿಸಿದರು. ಪರಮ ಪೂಜ್ಯ ಸ್ವಾಮಿಗಳಿಂದ ಪ್ರಾಯಸ್ಚಿತ್ತ ಮಾಡಿಸಿ ಹೊಸ ಯಜ್ಞೋಪವೀತ ಧಾರಣ ಮಾಡಿಸಿದರು. ನನಗೆ ಅದರ ಉದ್ದೇಶ ಅರ್ಥವಾಗಲಿಲ್ಲ. ಮಲಯಗಿರಿಯಲ್ಲಿ ವಾಸಿಸುವ ಬೇಡಿತಿಯ ಕೈಯ ಶ್ರೀಗಂಧದ ಕೊರಡಿನಂತಾಯಿತು ನನ್ನ ಪರಿಸ್ಥಿತಿ. ತ್ರಿಪುರ ಸುಂದರೀದೇವಿಯ ಕುರಿತು ಯೊಚಿಸುತ್ತಿದ್ದ ನನ್ನನ್ನು ಎದುರಿಗೆ ಕೂಡ್ರಿಸಿಕೊಂಡು ಶೃಂಗೇರಿಪೀಠದ ಶ್ರೀಗಳವರು "ಓಂ ಭದ್ರ ಕರ್ಣೇಭಿಃ ಶ್ವಣುಯಾಮಿ ದೇವಾಃ| ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ತಾಃ|


೩೯೬
ಸ್ಥಿರೈರಂಗೈಸ್ತುಷ್ಟುವಾಂ ಸಪ್ತಯಾಭಿಃ | ವ್ಯಶೇಮ ದೇವ ಹಿತಂ ಯದಾಯುಃ |" ಎಂದು ಶ್ಲೋಕವನ್ನು ತಾವೂ ಹೇಳಿದರು, ನನ್ನಿಂದಲೂ ಹೇಳಿಸಿದರು. ನಂತರ ಅದನ್ನು ವಿವರಿಸಿ ಅಡಿಯಿಂದ ಮುಡಿಯವರೆಗೆ ಸ್ಪರ್ಶಿಸಿ ವಿದ್ಯುತ್ ಸಂಚಾರ ಮಾಡಿಸಿದರು.
ನಾವು ಶೃಂಗೇರಿಯಿಂದ ಗ್ರಾಮಕ್ಕೆ ಮರಳಿದ ಕೆಲದಿನಗಳಿಗೆ ಗುತ್ತೇದಾರ್ ದಂಪತಿಗಳು ಬೇರೊಂದು ಊರಿಗೆ ವರ್ಗವಾಗಿ ಹೋದರು. ಅದು ಇಂಥದೇ ಊರೆಂದು ಗೊತ್ತಿದ್ದರೂ ನಾನು ಆ ಕಡೆ ಸುಳಿಯುವ ಧೈರ್ಯ ಮಾಡಲಿಲ್ಲ. ಹೋಗುವುದು ಏಕೆ? ಕ್ರೂರವಾದ ಶೋಕ ಪ್ರಸಂಗಗಳನ್ನು ಎದುರಿದುವುದು ಏಕೆ? ಯೌವನ ಕಳೆದುಹೋದ ಪೃಥ್ವಿಯಂತೆ ಇದೇ ಹುತ್ತದಲ್ಲಿ ಉಳಿದುಬಿಡುವುದೇ ವಾಸಿ ಎಂದು ಬಗೆದೆನು. ಬಹು ಇನಗಲವರೆಗೆ ಆಕೆಯ ನೆನಪಿನಿಂದಾಗಿ ನಿರ್ಮಲ ನೀರಿನಿಂದ ತೊಳೆದರೂ ಅವಯವಗಳ ಕೊಳೆ ಕಳೆಯದಾದೆನು. ಯಾವ ಸತ್ಯದಿಂದಲೂ ಮನಸ್ಸನ್ನು ಶುದ್ಧಿಮಾಡಿಕೊಳ್ಳದಾದೆನು. ಯಾವ ವಿದ್ಯೆಗೂ, ಯಾವ ತಪಸ್ಸಿಗೂ ಜೀವಾತ್ಮನನ್ನಾಗಲೀ ಜ್ಞಾನ ಬುದ್ಧಿಗಳನ್ನಾಗಲೀ ಸ್ವಚ್ಛಗೊಳಿಸದೇ ಹೋದೆನು. ಇದನ್ನು ಮನಗಂಡೇ ತೀರ್ಥರೂಪರು ನನಗೆ ಎಲ್ಲಿಂದಲೋ ಒಂದು ಹೆಣ್ಣು ತಂದು ಮದುವೆ ಮಾಡಿದರು. ಆಕೆ ಮಂತ್ರವಾಗದ ಅಕ್ಷರಗಳಂತಿದ್ದಳು. ಆಕೆ ಔಷದಿಯಾಗದ ಗಿಡಮೂಲಿಕೆಯಂತಿದ್ದಳು ಇದ್ದಳೋ ಏನೋ? ಆದರೆಅ ಅದನ್ನು ಗುರುತಿಸುವ ಶಕ್ತಿ ಸಾಮರ್ಥ್ಯ ನನ್ನಲ್ಲಿರಲಿಲ್ಲವೋ?... ಪೂಜ್ಯತ್ವ ನಶಿಸಿದ್ದರಿಂದಾಗಿಯೋ ಏನೋ ಅಶ್ವಥ್ ನಾರಾಯಣ ಎಂಬ ಮಗ ಹುಟ್ಟಿದ. ಎಲ್ಲ ತಂದೆಗಳೂ ಕಾಣುವಂತೆ ಅವನನ್ನೂ ಜಗದ್ವಿಖ್ಯಾತ ಶ್ರೋತ್ರಿಯನ್ನಾಗಿ ಮಾಡ ಬಯಸಿ ವಿಫಲನಾದೆ. ಅವನ ಮಗನಾದ ಶಾಮನೂ ಮಂದಾನಿಲದೆದುರಿಗಿಟ್ಟ ದೀಪದಂತೆ ಚಂಚಲ ಸ್ವಭಾವದವನಾಗಿದ್ದಾನೆ. ಈ ಎಲ್ಲ ಯಶಸ್ಸು, ಅಪಯಶಸ್ಸುಗಳ ನಡುವೆ, ಪ್ರಳಯ ಕಾಲದ ಅಗ್ನಿಗಳ ನಡುವೆ, ವೃದ್ಧಾಪ್ಯ ಆವರಿಸಿಕೊಂಡು ಕೃಶ ಶರೀರಿಯಾಗಿ ಹತ್ತಿರವಾಗಿರುವ ವೈಕುಂಠದ ಬಗ್ಗೆ ಯೋಚಿಸುತ್ತಿರುವಾಗಲೇ ಶ್ರೀಮತಿ ಇಂದಿರಾಗಾಂಧಿಯವರ ಭಾವಚಿತ್ರ ಕಣ್ಣಿಗೆಟುಕಿ ಉದ್ಬುದ್ಧ ಭಾವನೆಗಳಿಗೆ ಕಾರಣೀಭೂತವಾಗಿದ್ದು, ಅದೇ ಮೂಗು, ಅದೇ ಕಣ್ಣು, ಅದೇ ನೊಸಲು, ಅದೇ ಕಪೋಲ, ಅದೇ ಗದ್ದ ಥೇಟ್ ತ್ರಿಪುರ ಸುಂದರೀ ದೇವಿಯಂತೆಯೇ ಇರುವಳಲ್ಲ ಎಂದು ನಾನು ಅವಾಕ್ಕಾದುದರಲ್ಲಿ ತಪ್ಪೇನುಂಟು? ತ್ರಿಪುರ ಸುಂದರೀ ದೇವಿಯಂತೆಯೇ
ವೈಧವ್ಯ ನಂತರ ರಾಷ್ಟ್ರರಾಜಕಾರಣದ ಚುಕ್ಕಾಣಿ ಹಿಡಿದಿರಬಹುದೇ ಎಂಬ ಸಂದೇಹವು ಒಮ್ಮೆ ಬಂದರೆ, ಇನ್ನೊಮ್ಮೆ ಆಕೆಯ ಸಹಉದರಿ ಯಾರಾದರೂ ಇಂದಿರಾಗಾಂಧಿ ನಾಮಾಂಕಿತರಾಗಿ ಖ್ಯಾತಿಪಡೆದಿರಬಹುದೇ? ಎಂದು ಯೋಚಿಸಿದುದುಂಟು. ಇದು ಕೇವಲ ನನ್ನ ಭ್ರಾಂತಿ ಎಂದು ತದನಂತರ ಅರ್ಥವಾಯಿತು. ಹಸ್ತ ಸಾಮುದ್ರಿಕ ನೋಡುವ ನೆಪದಲ್ಲಿ ಆಕೆಯ ಮೃದುವಾದ ಹಸ್ತ ಸ್ಪರ್ಶಿಸಿ ವೃದ್ಧಾಪ್ಯದ ಸಾರ್ಥಕ್ಯ ಅನುಭವಿಸುವ ಸಲುವಾಗಿ ನಾನು ಪಡಬಾರದ ಕಷ್ಟಗಳನ್ನು ಅನುಭವಿಸಿದೆ. ಇದು ಸರ್ವರಿಗೂ ವೇದ್ಯವಾಗಿರುವ ಸಂಗತಿಯಾಗಿದೆ.
ಇದಕ್ಕೆಲ್ಲ ಪ್ರೇರಣೆ ನೀಡಿದ್ದೆ ಕಲಿದೇವನಾಥನ ಬಳಿಯ ಎರಡು ಶಿಲಾ ಶಾಸನಗಳ ನಡುವಿನಿಂದ ನಾನು ನೋಡಿದ ದೃಶ್ಯ... ಅದು ನನ್ನ ಬದುಕಿನ ಸಂಕ್ರಮಣ ಕಾಲ, ಆ ದೃಶ್ಯವೇ ಶುಕ್ರಾಚಾರ್ಯನಂತೆ ಶಾಪ ಕೊಟ್ಟು ವೃದ್ಧಾಪ್ಯವನ್ನು ನೆನಪಿಸುವಂತೆ ಮಾಡಿತು. ಕೆಲವು ಕಾಲದ ಮಟ್ಟಿಗಾದರೂ ನನ್ನ ವೃದ್ಧಾಪ್ಯವನ್ನು ತೆಗೆದುಕೊಂಡು ನಿನ್ನ ಯೌವನವನ್ನು ನನಗೆ ಕೊಡಲಾರೆಯಾ ಎಂದು ನನ್ನ ಮೊಮ್ಮಗನನ್ನು ಕಣ್ಣ ನೋಟದಿಂದ ಪ್ರಾರ್ಥಿಸುವಂತೆ ಮಾಡಿತು. ಆ ದೃಶ್ಯವೇ
-

೩೯೭
ವರದಾಚಾರ್ಯನೊಂದಿಗೆ ವಾದಕ್ಕಿಳಿಯುವಂತೆ ಮಾಡಿತು. ಆ ದೃಶ್ಯವೇ ಸ್ಕಂದ ಪುರಾನದಲ್ಲಿ ಕಾಶೀಕ್ಷೇತ್ರದ ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯ ಸಾಯುಜ್ಯ ವರ್ಣನೆಯನ್ನು ನೆನಪಿಸಿಕೊಟ್ಟಿತು. ಆ ದೃಶ್ಯವೇ ನನ್ನನ್ನೀ ಉಯಿಲು ಬರೆಯುವಂತೆ ಪ್ರೇರೇಪಿಸಿತು. ಇದಕ್ಕೆಲ್ಲ ಧರ್ಮ ಕರ್ಮ ಸಂಯೋಗವೆಂಬಂತೆ ನಾನು ನನ್ನ ಮೊಮ್ಮಗನಾದ ಶಾಮನನ್ನು ಹೊಣೆಗಾರನನ್ನಾಗಿ ಮಾಡುತ್ತಿರುವೆನು. ಹೀಗೆ ಮಾಡದೆ ನನಗೆ ಬೇರೆ ದಾರಿಯೇ ಉಳಿದಿಲ್ಲ.
ನನ್ನ ಪ್ರೀತಿಯ ಮೊಮ್ಮಗನಾದ ಶಾಮಾಶಾಸ್ತ್ರಿಯೇ
ನನ್ನ ಮರಣಾನಂತರ ನನ್ನೀ ಉಯಿಲನ್ನು ನಿನಗೆ ಓದಲು ಸಾಧ್ಯವಾಗಬಹುದು. ಸಾಶ್ಯವಾಗದೇ ಹೋಗಬಹುದು. ಈಗಾಗಲೇ ನೀನು ನನ್ನ ಬಗ್ಗೆ ಸರಿಯಾದ ಭಾವನೆಗಳನ್ನು ಹೊಂದಿಲ್ಲ. ಇದನ್ನು ನೀನು ಒದಿದೀ ಅಂದರೆ ನನ್ನ ಬಗ್ಗೆ ನಿನಗಿರುವ ಭಾವನೆಗಳಲ್ಲಿ ಮತ್ತಷ್ಟು ಏರುಪೇರುಗಳಾಗದೆ ಇರವು. ಹೀಗೆ ಇಷ್ಟು ವ್ಯಾಪಕವಾಗಿ ಬರೆಯಬೇಕಾಗಿ ಬಂದದ್ದು ಮತ್ತು ನಿನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕಾಗಿ ಬಂದದ್ದು ಎಲ್ಲ ನಿನ್ನಿಂದಲೇ ಎಂದು ನಿನಗಿಂತ ಮೂರು ಪಟ್ಟು ವಯಸ್ಸಗಿರುವ ನಾನು ನಮ್ರತೆಯಿಂದ ಹೇಳಬಯಸುತ್ತೇನೆ. ನನ್ನ ಮಾತು ಧಿಕ್ಕರಿಸಿ ನೀನು ಈಗಾಗಲೇ ವಂಶದ ಗೌರವ ಬದಿಗಿಟ್ಟು ಸಾರಕಾರಿ ನೌಕರಿ ಸೇರಿಕೊಂಡಿರುವಿ. ಅಮೇಧ್ಯ ವಾತಾವರಣ ರಾರಾಜಿಸುತ್ತಿರುವ ಕೊತ್ತಲಗಿಯಲ್ಲಿ ನೀನು ನೌಕರಿ ಆರಂಭಿಸಿರುವುದೇನು ನನಗೆ ಸಂತಸದಾಯಕ ವಿಷಯವಾಗಿಲ್ಲ. ಅನೇಕ ದೋಲಾಯಮಾನ ವ್ಯಕ್ತಿತ್ವಗಳನ್ನು ತುಂಬಿಕೊಂಡಿರುವ ನೀನು ಅದು ಹೇಗೆ ಮಹಾಸಾಧ್ವಿಯಾದ ನಿನ್ನ ತಾಯಿ ಅಂದರೆ ನನ್ನ ಅಚ್ಚುಮೆಚ್ಚಿನ ಸೊಸೆಯನ್ನು ನೋಡಿಕೊಳ್ಳುವೆಯೋ ದೇವರಿಗೇ ಗೊತ್ತು? ನಿನ್ನ ಮನಸ್ಸೆಂಬ ಅಶ್ವವನ್ನು ಪಳಗಿಸಲೆಂದೇ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ತಂದು ನಿನ್ನ ಹೆಂಡತಿಯನ್ನಾಗಿ ಮಾಡಿರುವೆನು. ಆಕೆ ಮುಂದೆ ಅದು ಹೇಗೆ ನಿನ್ನನ್ನು ಪಳಗಿಸುವಳೆಂಬ ಸಂಗತಿ ನನಗೆ ಚೆನ್ನಾಗಿ ಗೊತ್ತು! ನಿನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುವ ಮತ್ತು ಮಾಡಿರಬಹುದಾದ ಪಾಪಕೃತ್ಯಗಳನ್ನು ಕಳೆದುಕೊಳ್ಳಬೇಕಾದರೆಒಂದೇ ಒಂದು ಮಾರ್ಗ ಉಂಟು. ಈ ಉಯಿಲಿನ ಸೃಷ್ಟಿಕರ್ತನಾದ ನಾನು ನರ್ತಕಿಯಮಗನೆಂದು ಅಲಕ್ಷೆ ಮಾಡಿದಿ ಎಂದಿಟ್ಟುಕೋ! ಆದರೆ ನೀನು ಯಾರು ಎಂದು ಮೊದಲು ಯೋಚಿಸು, ಆಗ ಅರ್ಥವಾಗುತ್ತದೆ. - ಈ ಉಯಿಲಿನ ಅನಿವಾರ್ಯತೆ. ಪಾಪ ಸಂಚಯಸ್ಥವಾಗಿರುವ ನಾನಾಗಲೀ, ನೀನಾಗಲೀ ಕಾಶೀ ಕ್ಷೇತ್ರಕ್ಕೆ ಹೋಗಿ ಪರಮಸಾಯುಜ್ಯ ಪಡೆಯುವುದೇ ಲೇಸು. ಈ ಮಾತನ್ನು ನಿನ್ನ ತಾಯಿಗು ಹೇಳಿ ಮನದೌ ಮಾಡಿರುವೆನು. ಈಗಾಗಲೇ ನಿನ್ನ ಮೇಲೆ ಮಾತೃತ್ವದ ಹತೋಟಿ ತಪ್ಪಿ ಚಡಪಡಿಸುತ್ತಿರುವ ಆ ನಿನ್ನ ತಾಯಿ ಮಹಾ ಕರ್ಮಟ ಬ್ರಾಹ್ಮಣ ಮಹಿಳೆ ಎಂಬುದನ್ನು ಮರೆಯಬೇಡ. ಆ ಶ್ರೇಷ್ಟ ವಿಧವೆಯ ನಾಲಿಗೆಗೆ ತ್ರಿಮೂರ್ತಿಗಳಿಗಿರುವ ಶಕ್ತಿ ಇರುವುದೆಂದು ದೃಢ ನಿಶ್ಚಯಂಬುಗಳಿಂದ ಹೇಳುತ್ತಿರುವೆನು. ನೀನು ತಾಕೀತು ಮಾಡದಿದ್ದರೂ ನಿನ್ನ ತಾಯಿಯಾದ ಅಲುಮೇಲಮ್ಮನೂ, ಹೆಂಡತಿಯಾದ ವರಲಕ್ಷ್ಮೀ ನಿನ್ನ ಸದಾ ಹಿಂಬಾಲಿಸುವ ಏಳು ಸುತ್ತುಗಳ ಕೋಟೆಯಂಥ ನೆರಳುಗಳೆಂಬುದನ್ನು ಮರೆಯಬೇಡ. ರಥ ಸಪ್ತಮಿ, ವೈಕುಂಟ ಏಕಾದಶಿಯೇ ಮೊದಲಾದ ಪುಣ್ಯಕಾಲಗಳೆಂದು ವ್ರತ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸು, ಪುರಾಣ ಪುಣ್ಯ ಶ್ರವಣಗಳನ್ನು ಮಾಡಿಸು. ಏಕೆಂದರೆ ನಾನು ನಿನ್ನ ಮೂಲಕ ಬದುಕುತ್ತಿರುವೆನು. ಎಂಥೋರ ಮೊಮ್ಮಗ ಎಂದು ಸಮಾಜವು ಹೇಳುವುದಲ್ಲದೆ, ಎಂಥವರ ಮಗನೆಂದು ಎಂದೆಂದಿಗೂ ಹೇಳಲಾರದು! ಪ್ರಾಯಶಃ ಸಮಾಜದಲ್ಲಿ ನಿನ್ನ ತಂದೆಯ ಅಂದರೆ ನನ್ನ ಮಗನ ಹೆಸರಿನ ಕುರುಹು


೩೯೮
ಇಲ್ಲ. ಇದನ್ನು ಆಮೂಲಾಗ್ರವಾಗಿ ಅಳಿಸಿ ಹಾಕಿಬಿಟ್ಟಿರುವೆನು. ಆದ್ದರಿಂದ ನೀನು ಪಾಪ ಕೃತ್ಯ ಮಾಡಿದರೂ, ಪುಣ್ಯ ಕೃತ್ಯ ಮಾಡಿದರೂ ನನಗೇ ತಗಲುತ್ತದೆ. ಇಷ್ಟೆಲ್ಲ ಲಕ್ಷಣಗೆರೆಗಳನ್ನು ನಿನ್ನ ಬದುಕಿನ ಅಂಗಳದಲ್ಲಿ ಕೊರೆಯುತ್ತಿರುವ ನಾನು ಯಾವ ಸ್ಥಿರಾಸ್ತಿಯನ್ನಾಗಲೀ, ಚರಾಸ್ತಿಯನ್ನಾಗಲೀ ಮಾಡಿಟ್ಟಿಲ್ಲ ಮಗೂ, ಚರಾಸ್ತಿಯಾಗಿರುವ ನೀನೇ ಸ್ಥಿತಾಸ್ತಿ ಶಾಮೂ, ನನ್ನ ಹುಟ್ಟಿನ ಬಗ್ಗೆ ಮತ್ತು ತ್ರಿಪುರಸುಂದರೀದೇವಿಯರೊಂದಿನ ಅನೈತಿಕವೂ, ಪವಿತ್ರವೂ ಆದ ಸಮ್ಬಂಧದ ಬಗ್ಗೆ ಅಸಹ್ಯಪಟ್ಟುಕೊಳ್ಳಬೇಡ. ಅನಸೂಯಾಳಿಗೆ ಸಂಬಂಧಿಸಿದಂತೆನಿನ್ನ ಜಾಗದಲ್ಲಿ ನಾನಿದ್ದರೆ ಖಂಡಿತಾ ಯಾವುದೇ ಹಿರಿಯರ ಮಾತು ಧಿಕ್ಕರಿಸಿ ಆಕೆಯನ್ನು ಮದುವೆಯಾಗಿ ಬಿಡುತ್ತಿದ್ದೆನು. ನಾನು ಎಷ್ಟೇ ಕುಮ್ಮಕ್ಕು, ಸಹಕಾರ ಕೊಟ್ಟರೂ ನೀನು ಪ್ರಪಂಚ ಪ್ರಳಯವಾದರೂ ನಾನು ಅನಸೂಯಳನ್ನೇ ಮದುವೆಯಾಗುವೆನೆಂದು ಖಡಾಖಂಡಿತವಾಗಿ ಹೇಳಲಿಲ್ಲ. ಹಾಗೆ ಮದುವೆಮಾಡಿಕೊಂಡು ಮನೆ ತ್ಯಜಿಸಿ ಬಹುದೂರಹೋಗಿ ಸ್ವತಂತ್ರವಾಗಿ ಬಾಳುವೆ ನಡೆಸುತ್ತೀಯೆಂದು ನಾನು ಊಹಿಸಿದ್ದು ವ್ಯರ್ಥವಾಯಿತು ಮಗೂ, ತೇಲಲೀಯದ ಗುಂಡನ್ನೂ ಮುಳಗಲೀಯದ ಬೆಂಡನ್ನೂ ಕಟ್ಟಿಕೊಂಡು ಅತಂತ್ರವಾಗಿ ಬದುಕುವ ನಿನ್ನನ್ನು ಅದಾವ ಮುಖ ಹೊತ್ತು ಪ್ರೀತಿಸುವ, ವಿವಾಹವಾಗುವ ಧೈರ್ಯ ತೋರಿದಳೋ ಆ ಬಾಲೆ. ಆದರೆ ನೀನು ಕರ್ಮಠ ವಿಧಿ ನಿಯಮಗಳನ್ನು ಉಲ್ಲಂಘಿಸುವ ಧೈರ್ಯ ತೋರಲೇ ಇಲ್ಲ. ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ನೀನು ನನ್ನ ವೃದ್ಧಾಪ್ಯವನ್ನು ನಿಯಂತ್ರಿಸುತ್ತಲೇ ಹೋದಿ, ನಾನು ನಿನ್ನ ಯೌವನವನ್ನು ನಿಯಂತ್ರಿಸುತ್ತಲೇ ಹೋದೆನು. ಈ ಉಯಿಲು ಬರೆಯುವುದರ ಮೂಲಕ ನನ್ನೆಲ್ಲ ಒಳತೋಟಿಯನ್ನು ಅನಾವರಣಗೊಳಿಸುವುದರ ಮೂಲಕ ಉತ್ಸಾಹ ಸಂಪನ್ನನಾದ ಸೋಲನ್ನು ನಾನು ಒಪ್ಪಿಕೊಂಡಿರುವೆ. ಅರ್ಥವಾಗದ ರೀತಿಯಲ್ಲಿ ಯಾರೂ ಅರಿಯದ ಶೈಲಿಯಲ್ಲಿ ಬರೆದು ಕಾಲಕೋಶದಲ್ಲಿ ಬಚ್ಚಿಡುವ ಪ್ರಯತ್ನ ಮಾಡುತ್ತಿರುವೆ. ರಾಗರತಿಗಳ, ತಪ್ಪು ಒಪ್ಪುಗಳ ನಿರ್ಧಾರನಾ ಕಾರ್ಯವನ್ನು ಕಾಲವೇ ನಿರ್ಣಯಿಸಲಿ ಎಂದು ಭಾವಿಸುತ್ತಿರುವೆನು. ಆದ್ದರಿಂದ ನೀನು ನನ್ನ ಬಗ್ಗೆ ಯಾವ ರೀತಿ ಪರಿಭಾವಿಸಲು ಸಾಧ್ಯವಾಗುವುದಿಲ್ಲ. ಇದು ಏಕಪ್ರಕಾರವಾಗಿಯೂ ವಸ್ತುನಿಷ್ಟವಾಗಿಯೂ ಇರುವುದರಿಂದ ನೀನು ಮುಂದೆಯೂ ನಮ್ಮ ವಂಶ ಹೀಗೆ ಇತ್ತೆಂದುಊ, ಅಂಥ ವಂಶೋದ್ಭವ ನೀನೆಂದೂ ಸರ್ವಜನಿಕವಾಗಿ ರುಜುವಾತು ಪಡಿಸಲಾರೆ. ಆ ಅಂಥ ಅರ್ಹತೆಯನ್ನು ನಾನು ನಿನಗೆ ಎಂದೋ ಕೊಡಬೇಕಿತ್ತು, ಕಲಿಸಬೇಕಿತ್ತು. ಹೀಗೆ ಮಾಡಿದ್ದರೆ ಕಾಲಘಟದಲ್ಲಿ ಸಂಭವಿಸಬಹುದಾದ ಅಪಾಯದ ಅನರ್ಥದ ಅರಿವು ನನಗೆ ಸ್ಪಷ್ಟವಾಗಿ ಇತ್ತು. ಇದು ಹೇಗೆಂದರೆ ಮಾರ್ಜಾಲವು ತನ್ನ ಪ್ರಮುಖ ಶಿಷ್ಯನಾದ ವ್ಯಾಘ್ರಕ್ಕೆ ಹೇಗೆ ಬೇಟೆ ಕಲೆಯನ್ನೆಲ್ಲ ಕಲಿಸಿತಾದರೂ ಮರವೇರುವ ಕಲೆಯನ್ನು ಮಾತ್ರ ಕಲಿಸಲಿಲ್ಲವೋ ಹಾಗೆ, ಈ ಉಯಿಲಿನ ಮೂಲಕ ಮರವನ್ನೇರಿ ಕುಳಿತಿರುವ ಕೌಂಡಿನ್ಯಸ ಗೋತ್ರದ ಯಜಿಸ್ ಶಾಖೆಯ ನನ್ನನ್ನು ಮರವೇರಲರಿಯದ ನೀನು ಸ್ಪರ್ಶಿಸಿ ಗೆಲುವು ಸಾಧಿಸಲಾರೆ.
ನನ್ನ ವಮ್ಷೋದ್ಧಾರಕನಾದ ಶಾಮಾಶಾಸ್ತ್ರಿಯೇ.........
ಕಾಶೀ ಕ್ಷೇತ್ರದ ಪುರಾಣ ಪ್ರಸಿದ್ಧವಾದ ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯಲ್ಲಿ ದೇಹತ್ಯಾಗ ಮಾಡಬೇಕೆಂಬ ಬಯಕೆ ಎಂಬುದು ವಂಶಪಾರಂಪರ್ಯವಾಗಿ ಬಂದದ್ದು. ಇದು ನಿನಗೆ ಗೊತ್ತು. ಆದರೆ ಇದು ನಮ್ಮ ಹಿರಿಯರಾದ ಯಾರಿಗೂ ಸಾಧ್ಯವಾಗಲಿಲ್ಲ. ಮರಣ ಪೂರ್ವದಲ್ಲಿ ಇಂಥದೊಂದು ಬಯಕೆ ವ್ಯಕ್ತಪಡಿಸಿದ್ದು ಕೂಡ ಪುಣ್ಯದ ಕಾರ್ಯವೇ ಆಗಿದೆ. ಇಂಥ ಬಯಕೆಗೆ
 

೩೯೯
ಕುರುಡು ಕವಡೆಯ ಬೆಲೆ ಇಲ್ಲವೆಂದು ಅಮೇಧ್ಯಭಾಷೆ ಕಲಿತವನೂ, ಬಂಡಾಯಕವಿ ಎಂದು ಕರೆಸಿಕೊಳ್ಳಲು ಬೀಗುತ್ತಿರುವವನೂ ಆದ ನೀನು ಭಾವಿಸಿ ನಗಾಡಬಹುದು. ಆದರೆ ನೀನು ನಿನ್ನ ಮರಣ ಪೂರ್ವದಲ್ಲಿ ಇಂಥದೊಂದು ಬಯಕೆ ವ್ಯಕ್ತಪಡಿಸಿ ನಿನ್ನ ನಂತರದ ತಲೆಮಾರಿನವರ ಮೇಲೆ ಜವಾಬ್ದಾರಿ ಹೊರಿಸಲು ಹಿಂಜರಿಯಲಾರೆ ಎಂಬುದು ನನಗೆ ನಿಚ್ಚಳವಾಗಿ ಗೊತ್ತು. ಮಧ್ಯ ವಯಸ್ಸು ದಾಟಿದ ಪುತ್ರಯೋರ್ವನು ಬಾಯಾರಿ ಕೇವಲ ಮೂರು ನಾಲ್ಕು ಹನಿ ನೀರಿಗಾಗಿ ಮೇಘಗಳನ್ನು ಯಾಚಿಸುವ ಜಾತಕಪಕ್ಷಿಯಂತೆಯೇ ಸರಿ. ದಾರುಣ ರೀತಿಯಲ್ಲಿ ವೃದ್ಧಾಪ್ಯವನ್ನು ಹೆಜ್ಜೆ-ಹೆಜ್ಜೆಗೂ ಅಣು ಅಣುವಿನಲ್ಲೂ ಪ್ರಕಟಿಸುತ್ತ ವಂಶದ ಕುಡಿಯನ್ನು ಇಕ್ಕಟ್ಟಿಗೆ, ಪ್ರಾಣ ಸಂಕಟಕ್ಕೆ ಧರ್ಮ ಸಂಕಟಕ್ಕೆ ಗುರಿಮಾಡುವುದೇ ಆಗಿದೆ. ಇದಕ್ಕೆ ಮೊಳಕೆಯೊಡೆಯದ ಯೌವನದ ಬೀಜವನ್ನು ಎದೆಯ ಚಿಪ್ಪಿನೊಳಗೆ ಇಟ್ಟುಕೊಂಡು ವೃದ್ಧನಾಗಿರುವ ನಾನು ಹೊರತಾಗಿಲ್ಲ, ಹಾಲು ಬತ್ತಿದ ತಾಯಿಯನ್ನು ಕರುವು ಹೇಗೆ ದೂರ ಮಾಡುವುದೋ, ಹಾಗೆ ನೀನು ನನ್ನ ಬಯಕೆಯನ್ನು ದೂರ ಮಾಡುವ ಸ್ವಭಾವದವನಲ್ಲ ಎಂಬ ಭರವಸೆ ನನಗುಂಟು. ಸಸ್ಯವನ್ನು ತಿನ್ನದ ಮೋಡಗಳಂತೆಯೇ ನೀನು, ನಾನು, ಎಲ್ಲರೂ, ಕಲಿಕಾಲದಲ್ಲಿ ವಯಸ್ಸಾದಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅಂಥ ಕೆಲಸ ಕಾರ್ಯಗಳನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಅಂಥ ಕೆಲಸವಮ್ಮು ಮಾಡದ ಕಾರಣಕ್ಕೆ ನಾನು ದೈನ್ಯತೆಯ ಮೊಟ್ಟೆಯಾಗಿರುವೆನು. ಇದನ್ನು ಅರ್ಥಮಾಡಿಕೊಂಡು ನೀನು ನನ್ನ ಶವ ದಹನ ಕಾರ್ಯವನ್ನು ಮಣಿಕರ್ಣಿಕಾ ಚಕ್ರಪುಷ್ಕರಿಣಿಯಲ್ಲಿ ಮಾಡುವ ದಿಸೆಯಲ್ಲಿ ಒಂದು ಚಿಕ್ಕ ಪ್ರತ್ನವನ್ನಾದರೂ ಮಾಡು, ಅಷ್ಟೇ. ಉಳಿದುದೆಲ್ಲ ದೈವಾನುಕೂಲಕ್ಕೆ ಸಂಬಂಧಿಸಿದ್ದು. ನನ್ನೀ ಬಯಕೆಗೆ ವರದಾಚಾರ್ಯ ಕೇವಲ ನೆಪ ಮಾತ್ರ.... ದಯವಿಟ್ಟು ಅವನನ್ನು ದೂಷಿಸದಿರು. ಮುಂಜಾನೆ ಎದ್ದು ಒಳ್ಳೆಯದನ್ನು ಆಲೋಚಿಸುವ ಶಕ್ತಿಯನ್ನು ಆ ದೇವರು ನಿನಗೆ ಕೊಡಲಿ. ಹಾಗೆಯೇ ಕಾಲಾನುಕೂಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು ಯಥಾಶಕ್ತಿ ಅನುಭವಿಸುವ ಸಾಮರ್ಥಯ್ವನ್ನು ಸಹ. ಆನಂದವೇ ಸ್ವರ್ಗ, ದುಃಖವೇ ನರಕ ಎಂಬುದನ್ನು ಮರೆಯಬೇಡ. ನಿನ್ನ ತಾಯಿಗಾಗಲೀ ನಿನ್ನ ಹೆಂಡತಿಗಾಗಲೀ ಹೇಳಲು ನನ್ನಲ್ಲಿ ಏನೂ ಉಳಿದಿಲ್ಲ. ನಿನಗಾಗಲೀ, ಅವರಿಗಾಗಲೀ ನಾನು ಯಾವ ಸ್ಥಿರ ಚರಾಸ್ತಿ ಮಾಡಿಲ್ಲವೆಂದು ಬೇಸರಿಸಬೇಡ. ಹಾಗೆ ಮಾಡಿದ್ದರೆ ಆಸ್ತಿ ವಿಲೇವಾರಿಗೆ ಸಂಬಂಧಿಸಿದಂತೆ ಸರಳ ಕನ್ನಡದಲ್ಲಿ ಉಯಿಲು ರಚಿಸಿ ಸರ್ವರಿಗೂ ಪ್ರೀತಿಪಾತ್ರನಾಗುತ್ತಿದ್ದೆನು. ನನ್ನ ದೇಹವನ್ನೇ ಚರಾಸ್ತಿ ಎಂದೂ; ಮನಸ್ಸು ಜ್ಞಾನವನ್ನು ಸ್ಥಿರಾಸ್ತಿ ಎಂದು ಭಾವಿಸಿದ ನಾನು ಕಠಿಣತಮವಾದ ಭಾಷೆಯಲ್ಲಿ ಉಯಿಲು ರಚಿಸಿರುವೆನು. ಇನ್ನು ಇದರಿಂದ ಬೀಳ್ಕೊಳ್ಳುವೆನು. ನಿಮಗೆಲ್ಲರಿಗೂ ಮಂಗಳ ಹಾರೈಸುವೆನು.
ಇದು ನನ್ನ ಸ್ವಬುದ್ಧಿಯಿಂದ ಬರೆದು ಬರೆಯಿಸಿದ ಉಯಿಲು.
ಪಂಡಿತ ಪರಮೇಶ್ವರ ಶಾಸ್ತ್ರಿಗಳ ರುಜು.
ಬಿಕ್ಕಲಂ ಪರಮೇಶ್ವರ ಶಾಸ್ತ್ರಿಗಳ ಸ್ವಬರಹ.

*
*
* *

ಕೀ. ಶೇ. ಪಂಡಿತ ಪರಮೇಶ್ವರ ಶಾಸ್ತ್ರಿಗಳ ಉಯಿಲನ್ನು ಯಥಾವತ್ತಾಗಿ ನಕಲಿಗಿಳಿಸುವ ಹೊತ್ತಿಗೆ ಒಳಗಿಂದು ಹೊರಗೆ ಬಂದು, ಹೊರಗಿಂದು ಒಳಗೆ ಹೋಗಿ ಜಲಜಲ ಬೆವೆತುಬಿಟ್ಟೆ. "ರೊಟ್ಟಿ ಮಾಡಿಟ್ಟೋವು ತಣ್ಣಗಾದ್ವು, ಬದ್ನೇಕಾಯಿ ಪಲ್ಯದೊಳಗೆ ಹಾಳಾದ ಮಣ್ಣು ಸುರೀತೋ ಏನೋ.
-


೪೦೦
ಬೆಳಗ್ನಿಂದ ಹಲ್ಲು ಪಲ್ಲು ಉಜ್ಜದೆ ಗರ ಬಡ್ದೋರಂಗೆ ಒಂದೇ ಸಮ್ನೆ ಕೂತ್ಕೊಂಡು ಬಿಟ್ಟಿದೀರಿ. ಎದ್ದು ಮರ್ಯಾದೆಯಿಂದ ಮುಖ ತೊಳ್ಕೊಂಡು ಊಟಕ್ಕೆ ಬರ್ತೀರೋ ಇಲ್ಲೋ... ಕೈಯಲ್ಲಿ ಪೆನ್ನು ಪೇಪರ್ರೂ ಇದ್ದು ಬಿಟ್ರು ಅಂದ್ರೆ ನಿಮಗೆ ಪ್ರಪಂಚದ ಕಡೆ ಧ್ಯಾಸಾನೆ ಇರೋಲ್ಲ ಬಿಡ್ರಿ... " ಎಂದು ಅಡುಗೆ ಮನೆಯಿಂದ ಕೈಯ ತೇವವನ್ನು ತಾನು ಉಟ್ಟಿದ್ದ ಗಾರ್ಡೆನ್ ಸಿಲ್ಕ್ ಸೀರೆಗೆ ಒರೆಸಿಕೊಳ್ಳುತ್ತ ಬಂದ ಅನ್ನಪೂರ್ಣ ಬರೆದಿಟ್ಟ ಹಾಳೆಗಳಲ್ಲಿಣುಕಿ ನಿಟ್ತುಸಿರುಬಿಟ್ಟಳು. "ಇನ್ನೂ ನಿಮ್ಮನ್ನು ಈ ಶಾಮಣ್ಣನ ಪ್ರೇತ ಬಿಟ್ಟಂಗಾಗ್ಲಿಲ್ಲ ಬಿಡ್ರಿ... ಒಂದಿತ್ತೋ ಒದಿಲ್ಲನ್ನಂಗೆ ಬರ್ದು ಮುಗಿಸಿ ಬಿಡ್ರಿ... ಬರೆಯೋದು ಬರದ್ರೆ ಚಂದಕಣ್ರಪ್ಪ... ಬಡವ್ರು ಬಗ್ರೂ, ಹೊಲೇರು ಗಿಲೇರು ಅಂತ ಬರೀತಿದ್ದ ನೀವು ಈ ಬ್ರಾಂಬ್ರು ಕಥೀನ್ಯಾಕ್ ಹಚ್ಕೊಂಡ್ರಿ ಅಂತ... ಈ ಪ್ರಪಂಚದಾಗೆ ರವ್ವಷ್ಟು ಮಂದಿ ಇದ್ರು ಒಳ್ಳೆದು ಕೆಟ್ಟದ್ನೆಲ್ಲ ನಿರ್ಧರಿಸೋರು ಅವ್ರೆ... ಮುಂದೆ ಒಂದು ಹೋಗಿ ಇನ್ನೊಂದಾಥೀತು. ಅದೂ ಅಲ್ದೆ ಕಾಲ ಸುಮಾರೈತ್... ಮೂಲೆ ಮೂರುಕಟ್ಟಿನಲ್ಲಿದ್ದು ಬದುಕ್ತಿರೋ ನಮ್ಗೆ ಹಿಂದಿಲ್ಲ ಮುಂದಿಲ್ಲ ಎಂಬೋದ್ನ ಮರೀ ಬ್ಯಾಡಿ... ಏನು ಬರೆದ್ರೂ, ನಿಮಗೆ ಕಿರೀಟ ಬರೋದು ಅಷ್ಟರಲ್ಲೇ ಇದೆ... ಎದ್ದು ಬಚ್ಚಲಿಗೆ ಹೊಂದ್ರಿ ಮೊದ್ಲು" ಎಂದು ಗೊಣಗೊಣಗುಟ್ಟುತ್ತ ಬರೆದಿದ್ದ ಹಾಳೆಗಳನ್ನೆಲ್ಲ ಒಟ್ಟುಮಾಡಿ ಅದರ ಮೇಲೆ ನಾನು ಹಂಪಿ ಕಡೆಯಿಂದ ತಂದಿದ್ದ ಕೃಷ್ಣದೇವರಾಯನ ಕಾಲದ್ದು ಎನ್ನಲಾದ ಇಟ್ಟಿಗೆ ತುಂಡನ್ನು ಅದರ ಮೇಲೆ ಅಳ್ಳಾಡದ ಹಾಗೆ ಪೇರಿಸಿ ಕೈಹಿಡಿದು ಜಗ್ಗಿದಳು. ಕೂತೂ, ಕೂತೂ ರಕ್ತ ಸಂಚಾರದ ವ್ಯತ್ಯದಿಂದಾಗಿ ಕಾಲು ಜವ್ವು ಹಿಡಿದಿದ್ದರಿಂದ ಕೂಡಲೇ ಮೇಲೇಳಾಗಲಿಲ್ಲ ನನಗೆ. "ಬಿಡೇ ಪುಣ್ಯಾತ್ಗಿತ್ತಿ ಬರೋಣಂದ್ರ ಕಾಲು ಮರಗಟ್ಟಿಹೋಗಿವೆ" ಎಂದು ಕಾಲನ್ನು ಹಿಚುಗಿಕೊಳ್ಳುತ್ತ. ತಾಸುಗಟ್ಟಲೇ ಕೂತರೆ ಇನ್ನೇನಾಗ್ತದ್ರೀ?" ಎಂದು ಆಕೆ ನನ್ನ ಪಾದದ ಬೆರಳುಗಳನ್ನು ಹಿಡಿದು ಜಗ್ಗಲು ರಕ್ತ ಸಂಚಾರ ಮತ್ತೆ ಪುನರಾರಂಭಗೊಂಡು ಮೇಲೇಳಲಿಕ್ಕೆ ಸಾಧ್ಯವಾಯಿತು. ಹಾಗೆ ಮೇಲೇಳುತ್ತ "ಒಮ್ಮೆ ಈಗ ಬರೆದಿರೋ ಉಯಿಲ ನೀನೊಮ್ಮೆ ಓದಬೇಕಲ್ಲ ಮಾರಾಯ್ತಿ" ಅಂದೆ. "ಯಾರು ಯಾರ್ಗೋ ಬರೆದಿರೋ ಉಯಿಲ್ನ ನಾನ್ಯಾಕೆ ಓದಿ ಪಾಪ ಕಟ್ಕೊಳ್ಲಿ ಕಣ್ರೀ... ಅದರಲ್ಲಾವ ಅಶ್ಲೀಲ ಬರೆದಾರೋ ಏನೋ" ಎಂದು ನಿರಾಕರಿಸಿದಳು. "ಇದು ಶ್ಲೀಲ ಅಶ್ಲೀಲದ ಪ್ರಶ್ನೆ ಅಲ್ಲ ಅನ್ನಪೂರ್ಣ... ಒಬ್ಬರ ಬದುಕಿನ ಪ್ರಶ್ನೆ ಇದು..." ಅಂದೆ ಉಯಿಲು ಎಂಬ ಶಬ್ದ ಆಕೆಗೆ ಕೂಡಲೆ ಅರ್ಥವಾಗಲಿಲ್ಲ. ಅದನ್ನು ಆಕೆ ಬಹಳ ಹೊತ್ತಿನವರೆಗೆ ಉರುಳು ಎಂದೇ ಭಾವಿಸಿದ್ದಳು. ಉಯಿಲು ಅಂದರೆ ಹೀಗೆ ಹೀಗೆ ಎಂದು ವಿವರಿಸಿದೆ. ಇಷ್ಟೆಲ್ಲ ರಾಮಾಯನಕ್ಕೆ ಕಾರಣವಾದಂಥ ಕೊಟ್ಟೂರಿನ ಸ್ವಯಾರ್ಜಿತವಾದ ತಮ್ಮ ಮನೆಯನ್ನೂ, ಬಡೇಲಡಕು ಶಾನುಭೋಗರಾದ ಕರಣಂ ಶ್ರೀನಿವಾಸಾಚಾರ್ಯರ ಉತ್ತರಾಧಿಕಾರಿಗಳಿಂದ ಕೊಂಡಿದ್ದ ಇಪ್ಪತ್ತೆಕರೆ ಕಟ್ಟೆಯನ್ನೂ. ಮತ್ತಿವುಗಳ ನಿರ್ವಹಣೆಗೆ ಪಡೆದಿರುವ ಸಾಲ ಸೋಲದ ಬಗ್ಗೆ ವಿವರಣೆಯನ್ನೂ ವಿದ್ಯಾವಂತ ಮಗನಾದವನು ತಂದೆಯಾದ ತನ್ನ ರಮ್ಯ ಜೀವನವನ್ನು ಅರ್ಥಮಾಡಿಕೊಳ್ಳಲಿಲ್ಲವೆಂಬ ಆರೋಪವನ್ನೂ, ಪರಮೇಶ್ವರಶಾಸ್ತ್ರಿಗಳಿಂದ ಮತ್ತು ಅವರ ಸೊಸೆಯಿಂದ ಶಾಪಗ್ರಸ್ತನಾದ ಮನೆಯಲ್ಲಿ ವಾಸಮಾಡಿದರೊದಗುವ ಅಪಾಯವನ್ನೂ ವಿವರಿಸುತ್ತ ದಿವಂಗತ ತಂದೆ ಕುಂಬಾರ ಹಾಲಪ್ಪನವರು ಬರೆದಿಟ್ಟಿದ್ದ ಪತ್ರವೇ ಉಯಿಲು ಎಂದು ಬಿಡಿಸಿ ಹೇಳಿದಾಗ ಆಕೆಗೆ ಅರ್ಥವಾಯಿತು. "ಈ ಸಾಯೋರ್‍ಗೆ ಬದುಕಿರೋರ್‍ಮೇಲೆ ಹೊಟ್ಟೆಕಿಚ್ಚಿರತೆಂಬುವುದಕ್ಕೆ ಆ ಕಾಗದ ಪತ್ರಾನೆ ಸಾಕ್ಷಿ ನೋಡ್ರಿ. ಹಂಗ್ಯಾಕೆ ಬರೆದಿಟ್ಟು ಸಾಯ್ತಾವೇನೋ ಹಾಳಾದೋವು. ಅವರ


೪೦೧
ಆಸ್ತಿಪಾಸ್ತಿಯಿಂದ ಬದುಕಿರೋರು ಸುರುಕೊಳ್ಳೋದು ಅಷ್ಟರಲ್ಲೇ ಇದೆ. ನಮ್ಮ ಕಥೆ ಒಟ್ಟಟ್ಟಿಗಿಲ್ಲ... ಆದ್ರೆ ಈ ಉಯಿಲೇನಾದ್ರು ನಿಮ್ ಫ್ರೆಂಡು ಶಾಮಣ್ಣ ಬದುಕಿದ್ದಾಗ ಓದಿದ್ರೆ ಒಂದು ಹತ್ತು ವರ್ಷ ಮೊದಲೇ ಸಾಯ್ತಿದ್ನೋ ಏನೋ? ಯಾರ್ಯಾರ ಹಣೇಲಿ ಆ ಬ್ರಹ್ಮ ಏನೇನು ಅನುಭೋಸಿ ಸಾಯ್ರಿ ಅಂಥ ಬರೆದಿದಾನೋ ಏನೋ? ಬದುಕಿ ಸತ್ತೋರ ಕರ್ಮ ನಿಮ್ಮ ಸುತ್ತ ಮುತ್ಕೊಂಡು ಬರೀಬಾರದ್ದು ಬರಸತೈತಿ... ಇದರಾ ಉಸಾಬರಿ ನನಗ್ಯಾಕೆ... ಬರೆಯೋರ ಕರ್ಮ ಓದೋರ್ಗೆ ಸುತ್ತುಕೋಬಾರ್ದು ನೋಡಿ... ಇದೇನು ಓದಿ ಆನಂದ ಪಡೆಯೋಕೆ ದೇವಾನು ದೇವತೆಗಳ ಕಥಿ ಅಲ್ಲ... ಪಂಚಮಹಾಪತಿವ್ರತೆಯರ ಕಥೀನು ಅಲ್ಲ... ಓದಿ ಹಾ...ಹಾ ಎಂದು ಉದ್ಗರಿಸೋಕೆ... ಬದ್ನೇಕಾಯಿ ತಿಂದ ಬಾಯ್ಲೇ ವೇದ ಹೇಳೋರ ಕಥಾ, ಕಾದಂಬರಿ ಬರ್ದು ಭೂಮಿಗೆ ಭಾರ ಆಗಲಕ ಹೊಂಟಿರೋ ನಿಮಗೆ ಬುದ್ಧಿ ಶಕ್ತಿ ನನ್ಗಿಲ್ಲ. ನಾನೆಷ್ಟಿದ್ರು ಹೊತ್ತು, ಹೊತ್ತಿಗೆ ಕೂಳು ಹಾಕ್ಲಿಕ್ಕೆ ಶಾಸ್ತ್ರರೀತ್ಯ ನೇಮಕಗೊಂಡಿರೋಳು... ಮದ್ವೆಯಾಗಿ ಬರೋಬ್ಬರಿ ಹದಿನೈದು ವರ್ಷ ತುಂಬಿದ್ವು ಒಂದೇ ಒಂದು ಸಾರಿ ಸಿನಿಮಾಕ್ಕೆ ಹೋಗ್ಲಿಲ್ಲ... ನಾಟಕಕ್ಕೆ ಹೋಗ್ಲಿಲ್ಲ... ನಡೀಲಿ... ನಡೀಲಿ ನಿಮ್ಮ ಬರವಣಿಗೆ, ಉರುವಣಿಗೆ ಅದೆಷ್ಟು ದಿನ ನಡಿತೈತೋ ನಡೀಲಿ... ಮುಂದೊಂದು ದಿನ ಇದೇ ನಿಮ್ಮ ಬರವಣಿಗೆ ನಿಮ್ಮ ವಿರುದ್ಧ ಎದುರು ತಿರುಗಿ ನೆಲಮುಗಿಲಿಗೇಕಾಗಿ ನಿಂತು "ಬುದ್ಧಿಗೇಡಿ... ಇನ್ನು ನಾನಿನ್ನ ಕೈಗೆ ಸಿಗೊದಿಲ್ಲ" ಅಂತ ಹೇಳದೆ ಇದ್ರೆ ಕೇಳ್ರಿ... ಆಗ ನಿಮಗೆ ಹೆಂಡ್ರು ಮಕ್ಳು ನೆನಪಾಗ್ತಾರೆ..." ಎಂಬಿವೇ ಮೊದಲಾದ ಅಣಿಮುತ್ತುಗಳನ್ನುದಿರಿಸುವ ಹೆಂಡತಿ ಕೋಪ ದೈನಂದಿನ ಋತುಮಾನಗಳಲ್ಲೊಂದು. ಆಕೆಗೆ ಬೇಸರ ಬರೋದು ತಡ ಇಲ್ಲ. ಹೋಗೋದು ತಡ ಇಲ್ಲ... ಆಕೆಯಹೊಗಳಿಕೆಯನ್ನು ಗೌರವಿಸುವ ನಾನು ಆಕೆಯನ್ನೂ ಔರವಿಸುತ್ತೇನೆ. ನನ್ನ ಕೃತಿಗಳ ಪ್ರಥಮ ಓದುಗಾರ್ತಿಯಾಗಿರುವ ಆಕೆ ನೀಡುವ ಸಲಹೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆನು. ಇದರಲ್ಲಿ ಎರಡು ಮಾತಿಲ್ಲ.
ನಾನು ಅಡಸಲ, ಬಡಸಲ ಹಲ್ಲುಜ್ಜಿ ಮುಖ ತೊಳೆದುಕೊಂಡು ಊಟದಮಣೆ ಹಾಕಿಕೊಂದು ಕೂತೆ. ಪತ್ನಿ ಬಡಿಸಿದಳು. ಒಂದೊಂದು ತುತ್ತಿನ ನಡುವೆ ಶಾಮಣ್ಣ ಆಡುತ್ತಿದ್ದ ತರಾವರಿ ಮಾತುಗಳನ್ನು ನೆನಪಿಗೆ ತಂದುಕೊಂಡೆ. ಅವನು ತನ್ನ ಬಗೆಗಾಗಲೀ, ತಾನು ಬದುಕಿದ್ದ ಬದುಕಿನ ಬಗೆಗಾಗಲೀ ಯಾವ ಆಸಕ್ತಿಯನ್ನೂ ಉಳಿಸಿಕೊಂಡಿರಲಿಲ್ಲ. ಭ್ರಮೆಯ ಮುಖವಾಡ ಕಳಚಿಕೊಂಡಿದ್ದ. ವರ್ತಮಾನವನ್ನು ವೈಯಕ್ತಿಕ ನಿಷ್ಟೆಯಿಮ್ದ ಅನುಭವಿಸಿದ. ತಾನು ಸಂಪಾದಿಸಿದ್ದ ಜ್ಞಾನಸಂಪತ್ತನ್ನು ನಗಣ್ಯಗೊಳಿಸಿಕೊಂಡ. ತನ್ನ ಬಗ್ಗೆ ತಾನು ಯಃಕಶ್ಚಿತ್ ಭಾವನೆ ತಳೆದು ಬದುಕಿರುವ
ಷ್ಟು ಕಾಲ ಬದುಕೇ ಇದ್ದ. ಆತನನ್ನು ಮರಣೋತ್ತರವಾಗಿ ಶ್ರೀಮತಿ ಅನಸೂಯಾ ಆಗಲೀ, ಜಲಜಾಕ್ಷಿಯಾಗಲೀ, ಕಮಲಾಕರನಾಗಲೀ ಹೇಗೆ ಪ್ರತಿಕ್ರಿಯಿಸುವರು ಎಂಬ ಕುತೋಹಲ ಅವನ ಬದುಕಿನ ನಿರೂಪಕನಾದ ನನ್ನಲ್ಲಿ ಬರೀ ಕುತೋಹಲವಾಗಿ ಉಳಿದುಕೊಂಡಿದೆ. ಅವರ ಬಳಿಗೆ ಹೋಗಿ ಕಂದು ಮಾತಾಡುವಷ್ಟು ವ್ಯವಧಾನ ಸದರೀ ಕೃತಿಯ ಪ್ರಕಾಶಕ ಮಿತ್ರರಾದ ಶ್ರೀಯುತ ಸಿ. ಚನ್ನಬಸವಣ್ಣನವರ ಒತ್ತಡದಿಂದಾಗಿ ಇಲ್ಲವಾಗಿದೆ. "ಅದ್ಕೆಲ್ಲ ಅವರೆಲ್ಲರ ಬಳಿಗೆ ಯಾಕ ಹೋಗ್ತೀಯೋ ಮಹರಾಯ... ಅವರೇನು ನಿನ್ಗೆ ಗೊತ್ತಿಲ್ದೋರೇನು? ಶಾಮಣ್ಣನ ಬಗ್ಗೆ ನೀನು ಹೇಗೆ ಯೋಚಿಸಬಲ್ಲೆಯೋ ಅವರೂ ಹಾಗೆ ಯೋಚಿಸುತ್ತಿರಬಹುದು. ಲೇಖಕನಾದೋನ ಕೆಲಸ ಪರಕಾಯ ಪ್ರವೇಶ ಮಾಡಿ ಬರೆಯೋದು, ಬದುಕೋದು ತಾನೆ?" ಎಂದು ಬಿಲ್ಕುಲ್ ನುಡಿದಿದ್ದರು. ಕೃತಿ ಡಾ.ರಾಮಮನೋಹರ ಲೋಹಿಯಾರ ಎಪ್ಪತ್ತೆಂಟನೇ ಹುಟ್ಟು ಹಬ್ಬವಾದ್


೪೦೨
ಇದೇ ಸಾಲಿನ ಮಾರ್ಚ್ ಇಪ್ಪತ್ಮೂರರಂದು ಬಿಡುಗಡೆಯಾಗಬೇಕಿರುವುದರಿಂದ ಟೈಟಾಗಿ ಕೂತು ಬರೆದು ಮುಗಿಸುವ ಜರೂರು ಇರುವುದು. ಮೊನ್ನೆ ಗುಲಬರ್ಗಾದ ಸಮೀಪದ ಜಾವಳಿಗೆ ದಿ.ಶಿವಶರಣ ಜಾವಳಿಯವರ ದ್ವಿತೀಯ ಪುಣ್ಯ ತಿಥಿಗೆ ಹೋಗಿದ್ದು, ಸ್ವತಂತ್ರ್ಯ ಬಂದು ಐವತ್ತು ವರ್ಷಗಳಾದರೂ ಜಾವಳಿಯಂಥ ಸುಂದರ ಹಾಗೂ ಪುಟ್ಟಗ್ರಾಮಕ್ಕೆ ಶಾಸಕರಾದ ನೀವು ಒಂದು ಒಳ್ಳೆಯ ರಸ್ತೆ ಮಾಡಿಸಿಲ್ವಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಅಳಂದದ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ತರಾಟೆ ತೆಗೆದುಕೊಂಡದ್ದು, ಅವರು ಈ ವರ್ಷ ಮಾಡಿಸುವುದಾಗಿ ಒಪ್ಪಿಕೊಂಡದ್ದು ಅಲ್ಲಿಂದ ಕೆಟ್ಟ ರಸ್ತೆಯಲ್ಲಿ ಪ್ರಯಾಣಿಸಿ ಸದರೀಗ್ರಾಮ ಸೇರಿಕೊಂದದ್ದು ಎಲ್ಲ ನೆನಪಾಗುತ್ತದೆ. ಶಾಮಣ್ಣನನ್ನು ಹೋಲುವವರ್, ಅವನಿಗೆ ಸಂಬಂಧಿಸಿದವರು ಎಲ್ಲ ಕಡೆ ಇರುವರೆಂದು ಭಾಸವಾಗುತ್ತದೆ... ಇಂಥ ಬಾಸ, ಅಭಾಸಗಳ ನಡುವೆ ನಾನು ಬರೆಯಲು ಕೂತುಕೊಂದಿರುವ ಸಂದರ್ಭ ಬಲು ವಿಚಿತ್ರವಾಗಿ ಸುತ್ತುವರೆದಿರುವುದು. ನಾನೀ ಕಾದಂಬರಿ ಬರೆಯುತ್ತಿರುವ ಸಂದರ್ಭದ ಹದಿನೆಂಟು ತಿಂಗಳುಗಳಲ್ಲಿ ಈ ದೇಶದ ಮೂವ್ವರು ಪ್ರಧಾನ ಮಂತ್ರಿಗಳ ಆಡಳಿತ ರುಚಿ ನೋಡಿದೆ. ಅದೇ ಇಂದಿರಾಗಾಂಧಿಯವರ ಪ್ರೇತಾತ್ಮ ಹೊಲ್ಲೊಂದಿರುವ ಶತಮಾನದಹ್ಟು ವಯಸ್ಸಾದ ಕಾಂಗ್ರೆಸ್ ಸೀತಾರಂ ಕೇಸರಿಯವರ ಮೂಲಕ ವೃದ್ಧಾಪ್ಯ ವನ್ನು ಗರ್ಜಿಸುತ್ತಿದೆ. ಮತ್ತೆ ಚುನಾವಣೆ ವಕ್ಕರಿಸಿದೆ. ತೆಲಗುದೇಶಂನ, ಕಾಂಗ್ರೆಸ್ಸಿನ ಜೀಪು ಕಾರ್ಗಳು, ಮನೆಯ ಅಂಗಳದಲ್ಲಿ ಅಡ್ಡಾಡುತ್ತಿವೆ. ಅವುಗಳೆಬ್ಬಿಸುವ ಧೂಳಿನ ನಡುವೆ ಕೂತುಕೊಂಡು ಶಾಮಣ್ಣನ ಬದುಕನ್ನು ಊಹಿಸಬೇಕಾಗಿದೆ. ನಿರೂಪಿಸಬೇಕಾಗಿದೆ... ಈ ಶತಮಾನದ ಅತ್ಯಂತ ನಿರುಪದ್ರವ ವ್ಯಕ್ತಿ ಎಂದು ಹೆಸರಾದ ಶಾಮಣ್ಣ ಬದುಕಿದ್ದಲ್ಲಿ ವಾಣಿಜ್ಯೀಕೃತಗೊಂಡಿರುವ ಮತ್ತು ಅಂತಿಮ ಕ್ಷಣಗಳನ್ನು ಅಧಿಕಾರಕ್ಕೆ ಸಂಬಂಧಿಸಿದಂತೆ ಎಣಿಸುತ್ತಿರುವ ಜಲಜಾಕ್ಷಿಯಂತವರನ್ನು ಕಂಡು ನಗದ ಇರುತ್ತಿರಲಿಲ್ಲ. ಅಧಿಕಾರ ಲಾಲಸೆಗಾಗಿ ಅನಾವರಣಗೊಂಡಿರುವ ಪ್ರಶಸ್ತಿ ವಿಜೇತ ಲೇಖಕರ ಬಗ್ಗೆ ಖಾರವಾಗಿ ಪ್ರತಿಕ್ರಿಯಸದೆ ಇರುತ್ತಿರಲಿಲ್ಲ. ಅಂಥ ಅಪರೂಪದ ವ್ಯಕ್ತಿಯ ಬದುಕಿನ ನಿರೂಪಕನ ಪಾತ್ರವಹಿಸುವುದು ನನ್ನ ಬಹು ದೊಡ್ಡ ಕರ್ಮ.ಹಾಳೆಗಳ ನೌವೆ ಜೀವಂತವಿರುವ ಅವನು ತನ್ನ ತಾತನವರಾದ ಶಾಸ್ತ್ರಿಗಳ ಉಯಿಲು ಓದಿ ಸಿಟ್ಟಿಗೇಳಬಹುದು ಅಥವಾ ನೆಮ್ಮದಿಯ ಉಸಿರುಬಿಟ್ಟು ಸ್ಥಿತಪ್ರಜ್ಞನಂತೆ ಉಳಿದುಬಿಡಬಹುದು. ಇದನ್ನೆಲ್ಲ ಬರೆಯಲಿಕ್ಕೆ ನಿನಗೆ ಯಾರು ಅಧಿಕಾರ ಕೊಟ್ಟರೆಮ್ದು ಖಾರವಾಗಿ ಪ್ರಶ್ನಿಸಬಹುದು. ಅದಕ್ಕೆ ನಾನು "ಅಭಿವ್ಯಕ್ತಿ ಸ್ವಾತಂತ್ರ ಕಣಯ್ಯ ಅಭಿವ್ಯಕ್ತಿ ಸ್ವಾತಂತ್ರ" ಎಂದು ಉಡಾಫೆಯಿಮ್ದ ಪ್ರತಿಕ್ರಿಯಿಸಬಹುದು. ಆದರೆ ಇದೆಲ್ಲ ಎಷ್ಟು ಸರಿ.! ಎಂದು ನನ್ನನ್ನು ನಾನು ಕೇಳಿಕೊಳ್ಳುವ ಸಮ್ಧರ್ಭದಲ್ಲಿ ಇದೇ ತಾನೇ ಭಾರತರತ್ನ ಪ್ರಶಸ್ತಿ ಪಡೆದಿರುವ ಸಂಗಿತ ಲೋಕದ ಮಹಾನ್ ತಾಯಿಯಾದ ಮಧ್ರೈ ಷಣ್ಮುಗವಡಿಪು ಸುಬ್ಬುಲಕ್ಷ್ಮಿಯವರು ತಮ್ಮ ಎಪ್ಪತ್ತೆರಡನೇ ವಯಸ್ಸಿನಲ್ಲಿ ಮುತ್ತುಸ್ವಾಮಿ ದೀಕ್ಷಿತರ ಶಂಕರಾಭರಣ ಕೃತಿಯಾದ ಸಾಮಗಾನ ಪ್ರಿಯೇ! ಕಾಮಕೋಟಿನಿಲಯೇ ಎಂಬಕೃತಿಯನ್ನು ಸೊಗಸಾಗಿ ಹಾಡುತ್ತಿರುವುದು ರೇಡಿಯೋ ಮೂಲಕ ಕೇಳಿಬರುತ್ತಿರುವುದ. ಇದೇ ಕೃತಿ ತಾನೇ ಕೀ.ಶೇ. ಪಂಡಿತ ಪರಮೇಶ್ವರ ಶಾಸ್ತ್ರಿಗಳ ಬದುಕಿನ ಉಯಿಲಿನ ಸ್ಥಾಯಿ ಭಾವವಾಗಿರುವುದು. ಇದೇ ಕೃತಿಯೇ ಪೂಜ್ಯಶಾಸ್ತ್ರಿಗಳ ಮತ್ತು ಅವರ ಮೊಮ್ಮಗನೂ; ಸದರೀ ಕೃತಿಯ ಕಥಾ ನಾಯಕನೂ ಆದ ಶಾಮಾಶಾಸ್ತ್ರಿಯ ಬದುಕಿನ ಸಂಚಾರಿ ಭಾವವಾಗಿ ಪ್ರಧಾನ ಪಾತ್ರವಹಿಸುತ್ತಿರುವುದು. ಇದೇ ಕೃತಿಯೇ ತಾನೇ ಪರಮೇಶ್ವರ ಶಾಸ್ತ್ರಿಗಳ ಬದುಕನ್ನು ತ್ರಿಪುರಸುಂದರೀ ದೇವಿಯು ಪ್ರವೇಶಿಸುವಂತೆ
-

೪೦೩
ಮಾಡಿದ್ದು; ಅವರು ತಮ್ಮ ವೃದ್ಧಾಪ್ಯದಲ್ಲಿ ಇಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಮೋಹಿಸುವಂತೆ ಮಾದಿದ್ದಲ್ಲದೆ ಅಂಗವನ್ನು ಊನಗೊಳಿಸಿದ್ದು; ಇದೇ ಕೃತಿಯೇ ತಾನೆ ದಿ. ಶಾಮಾಶಾಸ್ತ್ರಿಯ ಬದುಕಿನಲ್ಲಿ ಕೊತ್ತಲಿಗೆಯ ದೇವದಾಸಿಯೂ; ಪ್ರಸಿದ್ಧ ರಂಗಕಲಾವಿದೆಯೂ ಆದ ಅನಸೂಯ ಪ್ರವೇಶಿಸುವಂತೆ ಮಾಡಿದ್ದು. ಈ ಕೃತಿಯನ್ನು ಶ್ರೀಮತಿ ವರಲಕ್ಷ್ಮಿ ಇಷ್ಟಪಟ್ಟಿದ್ದಲ್ಲಿ ಶಾಮಣ್ಣ ವಿವಾಹೇತರ ಸಂಬಂಧ ಇಟ್ಟುಕೊಲ್ಲುತ್ತಿರಲಿಲ್ಲವೆಂದು ಅವನ ಬದುಕಿನ ಪ್ರಮುಖ ನಿರೂಪಕನಾದ ನನಗೆ ಅನ್ನಿಸುತ್ತಿರುವುದು. ಅಂತೆಕಂತೆಗಳ ಸಹಾಯದಿಂದ ಇದೆಲ್ಲವನ್ನು ಊಹಿಸುವುದರಲ್ಲಿ ಯಾವ ಅರ್ಥವಿದೆ? ಮುಂದಿನ ಕಥಾ ಭಾಗವನ್ನು ಸಂಗ್ರಹಿಸಲ್ಪಟ್ಟಿರುವ ಸಂಗತಿಗಳ ಅಧಾರದಿಂದ ಏನಕೇನ ಪ್ರಕಾರೇಣ ನಾನೇ ಬರೆಯುವುದೋ! ಅಥವಾ ಅವನಿಗೆ ಹೇಳುವಂತೆ ದುಂಬಾಲು ಬೀಳುವುದೋ! ಎಂಬ ಸಮಸ್ಯೆ ಎದುರಾಯಿತು.
ಅಷ್ಟರೊಳಗೆ ಶಾಸ್ತ್ರಿಗಳ ಉಯಿಲನ್ನು ಓದಿ ಮುಗಿಸಿದ್ದ ಶ್ರೀಮತಿ ಅನ್ನಪೂರ್ಣ ನಿಟ್ಟುಸಿರು ಬಿಡುತ್ತ ಮುಖ ಸಪ್ಪಗೆ ಮಾಡಿಕೊಂಡು ತಟ್ಟೆ ತೆಗೆಯಲು ಬಂದಳು. ಆಕೆಯ ಪ್ರತಿಕ್ರಿಯೆಗಾಗಿ ಆರ್ತನಾಗಿ ನೋಡಿದೆ. "ಹೇಗಿದೆಯೇ ಉಯಿಲು"? ಎಂದು ಕೇಳಿದೆ ಮಗುವಿನಂತೆ. "ಹಾಂ ಕಮ್ಮಗೈತೆ... ಅಲ್ರೀ ಜಗತ್ತಿನಲ್ಲಿ ಇಂಥೋರೂ ಇರ್‍ತಾರೇನ್ರಿ?... ಅವಾ ವಂಶಾನೆ ಹಂಗಿದ್ದಂಗೈತಿ ಬಿಡ್ರಿ... ಹೋಗಿ ಹೋಗಿ ಕಮ್ಮನ್ನೋರ ಕಥಿ ಬರಿತ್ತಿದ್ದಿರಲ್ಲ... ಇದ್ಕೆ ನಿಮಗೆ ಏನು ಹೇಳಬೇಕೋ ಒಂದೂ ತಿಳಿಯದು." ಎಂದು ತಟ್ಟೆ ತೆಗೆದು ನೆಲ ಸಾರಿಸಿದಳು.
ಆಕೆಗೆ ಯಾವ ರೀತಿಯ ಸಮಾಧಾನ ಹೇಳಬೇಕೋ ಒಂದೂ ತಿಳಿಯಲಿಲ್ಲ. ಅದೇ ಹೊತ್ತಿಗೆ ಮಂಜು ಎಂಬ ಹೆಸರಿನ (ಪಿಂಜಾರು ಅಲ್ಲಭಕ್ಷಿಯ ಎರಡನೆ ಮಗ ಎಂದುದಿಲ್ಲಿ ವಿಶೇಷ) ಬಾಲಕ ಏದುಸಿರು ಬಿಡುತ್ತ ಓಡಿಬಂದು "ಸಾರೂ ಸಾರೂ... ನಾಟಕ್ದೋರು ನಿಮ್ಮನಿ ಕಡೀ ಬರ್ಲಿಕ್ಕತ್ಯಾರ" ಎಂದು ಹೇಳಿ ಅಂಗಿಯ ತುದಿಯಿಂದ ಮೂಗಿನ ಸಿಂಬಳ ಗೊಣ್ಣಿ ಒರೆಸಿಕೊಂಡ. ಅವನ ಬಲ್ಲಮರಿ ಆಜುಬಾಜಕ್ಕೆ ಅಲುಗಾಡಿ "ಹೌದು ಹೌದು, ಅಂತಲೋ ಹಲ್ಲೋ ಹಲ್ಲೋ ಅಂತಲೋ" ಎಂತಲೋ ಅಂದಿತು. ಅದೇ ಹೊತ್ತಿಗೆ ಎರ್ರಂಗ್ಳಿ ಶಿವಣ್ಣನವರ ನೇತೃತ್ವದಲ್ಲಿ ಕಲಾವಿದರ ತಂಡವು ಜಯನಮಃಪಾರ್ವತಿಪರಮೇಶ್ವರ ಎಂತಲೂ ಗದಗಿನ ಗವಾಯಿ ಪಂಚಾಕ್ಷರಿ ಮಾರಾಜ್ಕೂ ಜೈ ಎಂತಲೂ, ಪುಟ್ಟರಾಜ ಮಾರಾಜ್ಕೂ ಜೈ ಎಂತಲೂ ಅಂಗಳದಲ್ಲಿ ಜಯ ಘೋಷಣೆ ಮಾಡುತ್ತಿರುವುದು ಕೇಳಿಸಿತು.
ಅವರ್ನ್ನು ಸ್ವಾಗತಿಸಲೆಂದು ಎದ್ದ ನನ್ನ ಕೈ ಹಿಡಿದು ಜಗ್ಗುತ್ತ ಹೆಂಡತಿಯ ಕಿವಿಯಲ್ಲಿ ಬಾಯಿ ಇಟ್ಟು ಸೂಳೆ ಪಾರ್ಟ್ ಮಾಡ್ದೋನು ಹಿಂದೆ ಗುಂಪು ಕಟ್ಕೊಂಡು ಪಟ್ಟಿ ಕೇಳಲಿಕ್ಕೆ ಬರ್ತಿದ್ದಾನ್ರೀ ಹುಷಾರಿ" ಎಂದಳು. "ಬರಲಿ ಬಿಡೆ ಅಷ್ಟೊಂದು ಕಲಾವಿದರು ನಮ್ಮ ಮನೆಗೆ ಒಟ್ಟಿಗೆ ಬರ್ತಿರೋದು ಸಂತೊಷದ ಸಂಗತಿ ತಾನೆ" ಅಂದೆ. "ಮುಖಂಡತ್ವ ವಹಿಸೋಕೆ ಸೂಳೆಪಾರ್ತ್ ಮಾಡ್ದೋನ್ ಆಗಬೇಕಿತ್ತೇನ್ರೀ... ಮಲ್ಲಮ್ಮನ ಪಾರ್ತ್ ಮಾಡ್ದೋನು ನೇತೃತ್ವ ವಹಿಸಿದ್ರೆ ನಾನೇನು ತಪ್ಪ್ ತಿಳೀತಿರ್ಲಿಲ್ಲ. ಚಹ ಮಾಡೂಂತ ಮಾತ್ರನಂಗೆ ಹೇಳಬೇಡ ನೋಡ್ರಿ" ಎಂದು ಸಿಡುಕಿದಳು. ಆಕೆಯ ತರ್ಕ ತುಂಬ ವಿಚಿತ್ರವಾಗಿತ್ತು. ಇಷ್ಟು ಎಲ್ಲವೂ ನಿಸೂರಾಗಿದ್ದರೂ ಸೂಳೆ ಮತ್ತು ಗರತಿಯರ ನಡುವೆ ದೊಡ್ಡದೊಂದು ಕಂದರ ಸೃಷ್ಟಿಸುತ್ತಿರುವ ಈಕೆಯೇ ಹೀಗಿರಬೇಕಾದರೆ ಶಾಮಣ್ಣನ ಹೆಂಡತಿ ವರಲಕ್ಷ್ಮಿಯು ಎಷ್ಟೊಂದು ಸಂಕಟ ಅನುಭವಿಸಿರಬಹುದೆಂದು ಊಹಿಸಿದೆನು. "ಸೂಳೆ ಪಾತ್ರ ಮಾಡೋ ನಟ ಮುಂದೊಂದು ದಿನ ಮಹಾ ಪತಿವ್ರತೆಯ ಪಾತ್ರವನ್ನೂ ಮಾಡಬಹುದು ಅನ್ನೂ.


೪೦೪
ಇದ್ರಲ್ಲಿ ತಪ್ಪೇನೀಗ? ಅದೂ ಅಲ್ದೆ ಎರಂಗಿಶಿವಣ್ಣೋರು ಕಂಪನಿಯ ಹುಟ್ಟಿದ ಕಾಲದಿಂದಲೂ ಇದ್ದವರು... ಕಂಪನಿಯ ಮೇನೇಜರು ಮಹಾಂತಯ್ಯನವರ್ಗೆ ವಯಸ್ಸಗಿರೋ ಕಾರಣದಿಂದ ಶಿವಣ್ಣನವರನ್ನು ಮುಂದಿಟ್ತು ಕಳಿಸಿರಬೌದು" ಎಂದು ನಾನು ಸಮಾಧಾನ ಹೇಳುತ್ತಿರುವಷ್ಟರಲ್ಲಿ ಸಮಸ್ತ ಕಲಾವಿದರು "ಶಿವಶಿವಾ" ಎಂದು ಗೃಹ ಪ್ರವೇಶಿಸಿದರಲ್ಲದೆ ಪುಟ್ಟರಾಜ ಮಹಾರಾಜ್ಕೂ ಜೈ ಎಂದು ಪಡಸಾಲೆ ಮೇಲೆ ಕೂತುಕೊಂಡರು.
ನಾನು ಹೋಗಿ ನಮಸ್ಕರಿಸಿ ಉಭಯ ಕುಶಲೋಪರಿ ವಿಚಾರಿಸಿದೆನು. ಅವರೆಲ್ಲರ ಮುಖವಾಣಿಯಂತಿದ್ದ ಶಿವಣ್ಣನವರು ತಿಂಗಳುಗಟ್ಟಲ್ರ್ ತಮ್ಮ ಕಂಪನಿಯನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಕಾಪಾಡಿದ ಸದರಿ ಗ್ರಾಮದ ಸಮಸ್ತರನ್ನು ಕೃತಜ್ಞತಾಪೂರ್ವಕವಾಗಿ ನೆನೆದರು. ಗ್ರಾಮದವರ ನಿಷ್ಕಳಂಕ ಆತಿಥ್ಯದಿಂದಾಗಿ ಕಂಪನಿಯ ಪ್ರತಿಯೋರ್ವ ಕಲಾವಿದನ ದೇಹದ ತೂಕವು ಮೂರರಿಂದ ಆರು ಕಿಲೋಗ್ರಾಂವರೆಗೆ ಹೆಚ್ಚಾಗಿರುವುದೆಂದೂ, ಪ್ರತಿಯೊಬ್ಬರ ದೇಹದ ಎಲುಬುಗಳು ಮಾಂಸದೊಳಗೆ ಅಡಗಿಕೊಂಡು ಆಯಾ ಪಾತ್ರ ನಿರ್ವಹಿಸಲು ಅನುಕೂಲವಾಗಿರುವುದೆಂದೂ ನಗುನಗುತ್ತ ಹೇಳಿದರು.
ಶಿವಣ್ಣ ಅಡುಗೆಮನೆ ಕಡೆ ಬಗ್ಗಿ ನೋಡುತ್ತ "ಅಮ್ಮೋರು ಕಾಣಿಸ್ತಿಲ್ಲ ಮೇಸ್ಟ್ರೇ... ಮನ್ಯಾಗೆ ಅದಾರೋ ಇಲ್ಲೋ? ಅವ್ರ ಕೈ ಅಡುಗೇನ ಮರೆಯಂಗಿಲ್ಲ ಬಿಡ್ರಿ" ಎಂದರು. ಅದಕ್ಕೆ ನಾನಿದ್ದು "ಆಕೆಗೆ ಸೂಳೆ ಪಾರ್ಟ್ ಮಾಡೋ ನಿಮ್ಮ ಮ್ಯಾಲ ಸಿಟ್ಟು ಮಾಡ್ಕೊಂಡಾಳೆ... ಆಕೆ ಮಲ್ಲಮ್ಮನ ಪಾರ್ತ್ ರೇವಣ ಸಿದ್ದಯ್ನೋರ ಕಡೆ" ಎಂದುದಕ್ಕೆ ಎಲ್ಲರೂ ಗೊಳ್ಳನೆ ನಕ್ಕರು.
ನಾನು ಕೂಗಿ ಕರೆಯಲು ಅನ್ನಪೂರ್ಣ ಮುಖ ದಿಮ್ಮನೆ ಮಾಡಿಕೊಂಡು ಬಂದು ಸೌಜನ್ಯಕ್ಕಾಗಿ ಎಲ್ಲರಿಗೂ ನಮಸ್ಕರಿಸಿದಳು.
ನಮಸ್ಕಾರ ಸ್ವೀಕರಿಸಿ ಶಿವಣ್ಣನವರು "ಇದ್ರಲ್ಲಿ ತಪ್ಪೇನಿದೆ ತಾಯಿ?... ಸೂಳೆ ಪಾತ್ರವಿರದಿದ್ದಲ್ಲಿ ಮಲ್ಲಮ್ಮ ಮಹಾಪತಿವ್ರತೆ ಎಂದು ಜಗದ್ವಿಖ್ಯಾತಳಾಗುತ್ತಿದ್ದಳೇ? ವಿಶಯ ಲಂಪಟನೆನಿಸಿದ್ದ ಹೇಮರೆಡ್ಡಿ ಮುಂದೆ ಮಹಾಯೋಗಿ ವೇಮನನಾಗಿ ಸರ್ವಜ್ಞನಂತೆ ನೀತಿ ಪದ್ಯಗಳನ್ನು ರಚಿಸುತ್ತಿದ್ದನೇ...? ಕಪ್ಪು ಬಿಳುಪು, ಕತ್ತಲು ರಾತ್ರಿ ಹೆಂಗಿರ್‍ತವೋ ಹಂಗೆ ಸಮಾಜದೊಳಗೆ ಒಳ್ಳೆಯವರಿದ್ದಂಗೆ ಕೆಟ್ಟವರಿರ್‍ತಾರೆ... ಕೆಟ್ಟವರಿಂದ ಒಳ್ಳೆಯವೈದ್ದಾರಂತ ಸಮಾಜಕ್ಕೆ ಗೊತ್ತಗತೈತಿ. ಇದ್ರಿಂದ ಆ ಸಮಾಜಕ್ಕೆ ಬೆಲೆ ಬರ್‍ತದೆ ಕಣ್ರಮ್ಮಾ... ಇದ್ಕೆಲ್ಲ ಸಿಟ್ತಾದ್ರೆಂಗ ತಾಯಿ? ನಾವು ಕಂಪನೀನ ನಿಮ್ಮೆಜಮಾನ್ರ ಊರಾದ ಕೊಟ್ಟೂರಿಗೆ ಹಾಕ್ತಿದೀವಂತ... ಈಗ ನಿಮ್ಮ ಮಾವನವರಾದ ಹಾಲಪ್ಪಣ್ಣೋರು ಇರಬೇಕಿತ್ತು ತಾಯಿ... ಸ್ವಂತ ಕಲಾವಿದರಾದ ಅವ್ರೀಗೆ ಗವಾಯಿ ಕಂಪನಿ ಅಂದ್ರೆ ಪಂಚಪ್ರಾಣವಿತ್ತು ತಾಯಿ. ಅದ್ರಲ್ಲೂ ಸೂಳೆ ಪಾರ್ತ್ ಮಾಡ್ತಿದ್ದ ನನ್ನ ಒಂದು ಗಳಿಗೆ ಬಿಟ್ಟಿರ್‍ತಿರ್‍ಲಿಲ್ಲಮ್ಮಾ... ಅಂಥೋರ್‍ನ ಆ ದೇವರು ತನ್ನಲ್ಲಿಗೆ ಬೆಗ್ನೆ ಕರ್‍ಕೊಂಡು ಬಿಡ್ತಾನೆ ನೋಡಿ" ಎಂದು ನಿರರ್ಗಳವಾಗಿ ಮಾತಾಡಿದರು.
ಶಿವಣ್ಣ ಹೇಳಿದ್ದರಲ್ಲಿ ನಿಜವಿಲ್ಲದಿರಲಿಲ್ಲ. ನಮ್ಮ ತಂದೆ ಹೆಚ್ಚು ಕಡಿಮೆ ಶಿವಣ್ಣವರಂತೆಯೇ ತೆಳ್ಳಗೆ ಬೆಳ್ಳಗೆ ಎತ್ತರಕ್ಕಿದ್ದ. ಸ್ತ್ರೀ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಆತ ಯಾವುದೇ ಸ್ತ್ರೀಯ ಹೃನ್ಮನಗಳನ್ನು ತನ್ನ ಕಣ್ಣೋಟ ಮಾತ್ರದಿಂದ ಸೆಳೆಯಬಲ್ಲವನಾಗಿದ್ದ. ಯಾವುದೇ ಪತಿವ್ರತೆ ಆತನ ಕಡೆ ಒಂದು ಕಿರುನಗೆ ಬೀರದೆ ಮುಂದೆ ಹೋಗುತ್ತಿರಲಿಲ್ಲ. ಆದರೆ ಸ್ತ್ರೀವ್ಯಾಮೋಹಿಯಾಗಲೀ, ವಿಷಯ ಲಂಪಟನಾಗಲೀ ಆಗಿರಲಿಲ್ಲವಾದರೂ, ಖಾಯಮ್ಮಾಗಿ ಒಂದಿಬ್ಬರು ಸೂಳೆಯರನ್ನು


೪೦೫
ಮಾತ್ರ ಅವರವರ ಊರಲ್ಲಿ ಇಟ್ಟುಕೊಂಡು ಅವರವರಿಗೆ ಉಪಪತ್ನಿಯರ ಸ್ಥಾನಮಾನ ಕೊಟ್ಟಿದ್ದ ಪಟ್ಟಮಹಿಷಿ ಕೊಟ್ರಮ್ಮನೌದರ ಸಂಜಾತರಾದ ನಾವು ಅವರಮ್ಮು "ಚಿಕ್ಕಮ್ಮಾ" "ಸಣ್ಣಮ್ಮಾ" ಎಂದು ಸಂಬೋದಿಸುತ್ತಿದ್ದೆವು. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ಆತ ಹಗರಿ ಸಾಲಿನ ಕಡೆಯ ತಮ್ಮೂರಲ್ಲಿ ಆಡಿದ್ದಂಥ ‘ವೀರಾಭಿಮನ್ಯು’ ಎಂಬ ನಾಟಕದಲ್ಲಿ ಉತ್ತರೆ ಪಾತ್ರ ಹಾಕಿದ್ದನಂತೆ. ನಾಟಕದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಿಲ್ ಆಲ್ಫ್ರೆಡ್ ಎಂಬಾತ ಉತ್ತರೆಯನ್ನು ಮೋಹಿಸಿದನಂತೆ. ಅಂದು ರಾತ್ರಿ ರೇಪ್ ಮಾಡುವ ಪ್ರಯತ್ನ ನಡೆಸಿದಾಗ ಇದು ಹೆಣ್ಣು ವೇಶದ ಗಂಡು ಎಂದು ವಸ್ತ್ರಾಪಹರಣದ ಮೂಲಕ ಬಯಲಾಯಿತಂತೆ. ಸಲಿಗೆ ಹೆಚ್ಚಿ ಆಲ್ಫ್ರೆಡ್ಡಿನ ಮಗಳು ಹೆಲನ್‌ಗೂ ನಮ್ಮ ತಂದೆಗೂ ಪ್ರಣಯದಾಟ ಶುರುವಾಯಿತಂತೆ. ಇದು ಗೊಟ್ಟಾಗಿ ಆಲ್ಫ್ರೆಡ್ ಕಾಡುತೂಸು ತುಂಬಿದ ಕೋವಿ ಹಿಡಿದುಕೊಂಡು ಅಲ್ಲಿ ಬರುತ್ತಿರುವನೆಮ್ದಾಗ ಇಲ್ಲಿ ನಮ್ಮ ತಾತ ತನ್ನ ಮಗನಾದ ನಮ್ಮಪ್ಪನನ್ನು ಒದ್ದು ಹಿತ್ತಲ ಬಾಗಿಲಿಂದ ಬಳ್ಳಾರಿ ಸೀಮೆಯಿಂದ ದಾವಣಗೆರೆಗೆ ಸೀಮೆ ಕಡೆ ಓಡಿಸಿದನಂತೆ.
ಃಇಗೆ ಸಾಗುತ್ತದೆ ನಮ್ಮಪ್ಪನ ಪ್ರಣಯ ಮತ್ತು ಪರಾಕ್ರಮದ ಯಶೋಗಾಥೆ! ನಮ್ಮ ತಂದೆಗೂ ಈ ಕಾದಂಬರಿಗೂ ಏನು ಸಂಬಂಧ! ಎತ್ತಣ ನೆಲ್ಲಿಕಾಯಿ! ಎತ್ತಣ ಸಮುದ್ರದ ಲವಣಾಂಶ ಬೆಟ್ಟ ಮೇಲಣ ನೆಲ್ಲಿ ಕಾಯಿಗೆ ಹೇಗೆ ಬಂತೆಂದು ನೀವು ಕೇಳಬಹುದು! ಸಾಹಸ ಪ್ರಕಟಿಸುವವರೂ; ರಾಜಾರೋಷವಾಗಿ ಸೂಳೆಯರನ್ನು ಇಟ್ಟುಕೊಳ್ಳುವರೆಂದರೆ ನಮ್ಮಪ್ಪನಿಗೆ ಎಲ್ಲಿಲ್ಲದ ಪ್ರೀತಿ! ನೀನು ಎಷ್ಟು ಮಂದಿ ಸೂಳೆಯರನ್ನು ಇಟ್ಟುಕೊಂ ಎಂಬುದರ ಮೇಲೆ ಸಮಾಜ ನಿನ್ನ ಗೌರವ ಪ್ರತಿಷ್ಟೆಯನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದ! ಆದ್ದರಿಂದ ಸಹಜವಾಗಿ ಬ್ಯಾಂಕೊಂದರಲ್ಲಿ ಕ್ಯಾಷಿಯರ್ ಆಗಿದ್ದ ಶಾಮಾಶಾಸ್ತ್ರಿ ಕುಂತಳನಾಡಲ್ಲೆ ಅತಿಸುಂದರಿಯೂ, ರಸಿಕಳು ಎಂದು ಹೆಸರಾಗಿದ್ದ ಅನಸೂಯಳನ್ನು ಹೆಂಡತಿಗಿಂತ ಹೆಚ್ಚಾಗಿ ಇಟ್ಟುಕೊಂಡ ಸುದ್ದಿ ತಿಳಿದು ‘ಶಹಬ್ಬಾಸ್’ ಎಂದು ಬೆನ್ನು ತಟ್ಟಿದ. ಮುಂದೆ ಕೆಲವೊಂದು ಗೃಹಕಲಹಗಳು ಸಂಭವಿಸಿದಾಗ ನಮ್ಮಪ್ಪ ಶಾಮಾಶಾಸ್ತ್ರಿಪರ ವಕಾಲತ್ತು ವಹಿಸಿ ಮುತ್ತೈದೆಯರನ್ನು ದಿಗ್ಭ್ರಮೆಗೊಳಿಸಿದ. ಕಲ್ಲು ಗುಂಡು ಎತ್ತುವವರ, ಕುಸ್ತಿ ಆಡುವವರ, ಕಾಲು ಕೆದರಿ ಜಗಳವಾಡುವ ಪ್ರಸಿದ್ಧ ಬಂಟರ ಪಡೆಯ ಅನಭಿಷಿಕ್ತ ಮುಖಂಡನಾಗಿದ್ದ ನಮ್ಮ ‘ಡ್ಯಾಡಿ’ಯನ್ನು ತಡವುವುದು ಅಷ್ಟು ಸುಲಭಕಾರ್ಯವಾಗಿರಲಿಲ್ಲ.
ನಾಟಕ ಶಿರೋಮಣಿ ಎರ್ರಂಗಿ ಶಿವಣ್ಣನವರು ಆತನನ್ನು ಸ್ಮರಣೆ ತಂದುಕೊಂಡೊಡನೆ ಇಷ್ಟೆಲ್ಲ ನೆನಪಾಯಿತು. "ತಾಯಿ... ಹೋಗೋದು ಹೋಗ್ತೀವಿ... ನಿಮ್ಮ ಕೈಯಿಂದ ತಲಾಕ್ಕೊಂದೊಂದು ಚಾ ಮಾಡಿಕೊಟ್ರೀ ಅಂದ್ರ ಜಂಗಮರಾದ ನಾವು ಅಷ್ಟಪುತ್ರಸೌಭಾಗ್ಯವತೀರಸ್ತು ಅಂತ ಆಶೀರ್ವಾದ ಮಾಡಿ ಹೋಗ್ತೀವಿ" ಎಂದರು.
ಅದನ್ನು ಕೇಳಿ ನನಗೆ ನಗು ಬಂದು ಹೇಳಿದೆ: ನಿಮ್ಮ ಆಶೀರ್ವಾದ ಚಲಾವಣೆ ಆಗೋದಿಲ್ಲ"
"ಯಾಕೆ ಮೇಷ್ರೇ/" ಎಂದು ಕೇಳಿದರು ಕುತೋಹಲದಿಂದ.
"ಅದ್ಹೇಗೆ ಸಾಧ್ಯರೀ... ಆಪರೇಷನ್ ಮಾಡಿಸ್ಕೊಂಡೊರ್‍ಗೆ ಆಶೀರ್ವಾದದ ಬಲದಿಂದ ಮಕ್ಕಲ್ಳಾಗೋದುಂಟಾ?" ಎಂದು ನಾನು ಹೇಳಿದೊಡನೆ ಕಲಾವಿದರೆಲ್ಲರು ಗೊಳ್ಳೆಂದು ನಕ್ಕರು.
ನನ್ನ ಹೆಂಡತಿ ಹಸನ್ಮುಖಿಯಾಗಿ ಚಹ ಮಾಡಲೆಂದು ಒಳಗಡೆ ಹೋಗಿ ಸ್ಟೌವ್ ಹತ್ತಿಸಿದಳು. ಅದರ ವಾಸನೆ ಹರಡಿದ್ದ ವಾತಾವರಣದಲ್ಲಿ ನಾನು ಬರೆಯುತ್ತಿರುವ ಕಾದಂಬರಿ ಬಗೆಗೋ, ಅದರಲ್ಲಿ ಬರುವ ಪುರುಷ ಸ್ತ್ರೀಪಾತ್ರಗಳು ಗೃಹಕಲಹಕ್ಕೆ ನಾಂದು ಹಾಡಿರುವುದನ್ನು ಮೆತ್ತಗಿನ ದ್ವನಿಯಲ್ಲಿ


೪೦೬
ವಿವರಿಸಿದೆನು.
ಅದಕ್ಕೆ ಬಿದ್ದು ಬಿದ್ದು ನಗಲು ಪ್ರಯತ್ನಿಸಿದರಾದರೂ ನಗೆ ನಡುವೆ ಮತ್ತೆ ಗಮ್ಭೀರವದನರಾದರು. "ಹೇಮರೆಡ್ಡಿ ಮಲ್ಲಮ್ಮನಿಗಿಂತ ಅತ್ಯುತ್ತಮ ನಾಟಕಾಗ್ತಲ್ಲಿದು. ಮೇಸ್ಟ್ರೇ... ಅಂಗೈಯಲ್ಲಿ ಬೆಣೆ ಇಟ್ಕೊಂಡು ತುಪ್ಪಕ್ಕಾಗಿ ಪರದಾಡ್ತಿದ್ದೀವಲ್ಲ... ದಯವಿಟ್ಟು ಇದನ್ನೇ ಮೂರು ತಾಸಿನ ನಾಟಕ ಬರ್‍ಕೊಟ್ಟು ಪುಣ್ಯ ಕಟ್ಕೊಳ್ಳ್ರಿ... ಸೂಳೆ ಅನಸೂಯಳ ಪಾತ್ರವನ್ನು ನಾನೇ ಮಾಡ್ತೀನಿ... ಮಲ್ಲಮ್ಮನ ಪಾರ್ಟು ಮಾಡಿ ಮಾಡಿ ಸುಸ್ತಾಗಿರೋ ರೇವಣ್ಣ ಹೆಂಡತಿ ವರಲಕ್ಷ್ಮಿ ಪಾರ್ತ್ ಮಾಡ್ತಾರೆ. ಎಲಿವಾಳು ಸಿದ್ದಣ್ಣೋರು ಬದುಕಿದ್ದಿದ್ರೆ ಅವರ ಕೈಲಿಶಾಮಾಶಾಸ್ತ್ರಿ ಪಾತ್ರ ಮಾಡಿಸಬೌದಿತ್ತು." ಎಂದು ವಿವರಿಸುತ್ತ ಶಿವಣ್ಣನವರು ಮ್ಲಾನವದನರಾದರು.
ಅದೇ ಹೊಟ್ಟಿಗೆ ಏನೋ ಯೋಚಿಸುತ್ತಿದ್ದ ಹೇಮರೆಡ್ಡಿ ಪಾತ್ರ ಮಾಡುವ ತಿರುಕಯ್ಯನವರು "ಶಾಮಾಶಾಸ್ತ್ರಿ ಪಾತ್ರವನ್ನು ಮೇಷ್ಟ್ರೇ ಮಾಡಿದರೆ ಹೇಗೆ?" ಎಂದು ನಡುವೆ ಬಾಯಿ ಹಾಕಿದರು.
"ಪುಟ್ಟಜ್ಜೊರು ಆಶೀರ್ವಾದ ಮಾಡಿದ್ರೂ ಅಂದ್ರೆ ವೀರಭದ್ರಪ್ಪ ಮೇಷ್ಟ್ರು ಶಾಮಾಶಾಸ್ತ್ರಿ ಆಗಬೌದು, ಶಾಮಾಶಾಸ್ತ್ರಿ ವೀರಭದ್ರಪ್ಪ ಮೇಷ್ಟ್ರು ಆಗಿಬಿಡಬೌದು... ಇದೆಲ್ಲ ದೊಡ್ಡ ವಿಷಯವೇನಲ್ಲ! ನೀವೊಂದೇ ಹ್ಹೂ ಅಂದುಬಿಡಿ. ಕಂದಗಲ್ಲು ಹನುಮಂತರಾಯ್ರು ನಲ್ವಡಿ ಶ್ರೀಕಂಠಶಾಸ್ತ್ರಿಗಳು, ದುತ್ತರಿಗಿ ಇವ್ರೆಲ್ಲ ತಾವು ಬರೆದ ನಾಟಕಗಳಲ್ಲಿ ತಾವೇ ಮುಖ್ಯ ಪಾತ್ರ ವಹಿಸ್ತಿದ್ರು ಮೇಷ್ಟ್ರೇ" ಎಂದು ಹುಚ್ಚ ಭರಮರೆಡ್ಡಿ ಪಾತ್ರ ಮಾಡುವ ಬುದ್ಧಿವಂತ ಮಠ್‌ರವರು ಉತ್ಸಾಹದಿಂದ ವಿವರಿಸಿದರು.
ಅವರಾಡಿದ ಮಾತುಗಳೆಲ್ಲ ಸಾಂಕೇತಿಕವಾಗಿಯೂ; ಅರ್ಥಗರ್ಭಿತವಾಗಿಯೂ; ವಿಚಿತ್ರವಾಗಿಯೂ ಕಂಡು ನಾನು ಒಂದು ಕ್ಷಣ ಮೌನವಹಿಸಿ ಅವರೆಲ್ಲರ ಕಡೆ ಕುರಿಯೊಂದು ತೋಳದ ಕಡೆ ನೋಡುವಂತೆ ನೋಡಿದೆ.
"ಇದೆಲ್ಲ ಆಗೋ ಮಾತಲ್ಲ ಬಿಡೋ ಮಾತಲ್ಲ... ನನಗೇನೋ ಶಾಮಣ್ಣನ ಪಾತ್ರ ವಹಿಸೋಕೆ ಇಷ್ಟ ಇದೆ... ಆದ್ರೆ ಮನೆಯಾಕೆ ಒಪ್ಪಬೇಕಲ್ಲ... ಕಾದಂಬರಿ ಬರೆಯೋತಿರೋದ್ಕೇನೇ ಇಷ್ಟು ರಂಪಾಟ ಮಾಡಿದ್ದಾಳೆ. ಇನ್ನು ನಾನೇನಾದ್ರು ಶಾಮಣ್ಣನ ಪಾತ್ರವಹಿಸಿದನೆಂದರೆ ಇಡೀ ಮನೆಯೇ ರಣರಂಗವಾಗಿಬಿಡ್ತದೆ ಅಷ್ಟೆ" ಎಂದು ನಾನು ಹೇಳುವಷ್ಟರಲ್ಲಿ ಶ್ರೀಮತಿ ಅನ್ನಪೂರ್ಣಮ್ಮನವರುಚಹ ತಂದು ಎಲ್ಲರಿಗೂ ಹಂಚಿದರು.
ನಾವಾಡಿದ ಮಾತುಗಳನ್ನು ಅವರು ಕೇಳಿಸಿಕೊಂಡಿದ್ದರೇನೋ? ಅವರ ಮುಖ ಮತ್ತೆ ಸೂರ್ಯಗೋಳವಾಗಿತ್ತು.
ಚಹ ಕುಡಿಯುತ್ತ ಗುಟುಕು ಗುಟುಕಿಗೊಮ್ಮ್ರ್ ಆಕೆಯ ಮುಖ ನೋಡಿ ಮಾತು ಹೊರಡದೆ ಕಲಾವಿದರೆಲ್ಲರು ತಲೆ ತಗ್ಗಿಸುತ್ತಿದ್ದರು.
ಶಿವಣ್ಣನವರು ಚಹವನ್ನು ಹೊಗಳಿದಾದ ಮೇಲೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಕೇಲಿಯೇ ಬಿಟ್ಟರು. "ತಾಯೀ ನಾನ್ಹಿಂಗೆ ಮಾತಾಡ್ತಿದೀನಂತ ದಯವಿಟ್ಟು ಬೇಸರ ಮಾಡ್ಕೋಬೇಡಿ. ಏನಿಲ್ಲಾ... ಬರೋ ಹೆಣ್ಣು ಪಾತ್ರಗಳನ್ನು ವಹಿಸೋರೆಲ್ಲ ಗಂಡಸರಾದ ನಾವೇನೇ... ಶಾಮಂಣ ಪಾತ್ರದ್ದೇ ಒಂದು ಸಮಸ್ಯೆ ಆಗಿದೆ... ನೀವು ಮನಸ್ಪೂರ್ತಿ ಒಪ್ಪಿಗೆ ಕೊಟ್ರೆ ನಿಮ್ಮೆಜಮಾನ್ರು ಕೈಲಿ ಆ ಪಾತ್ರ ಮಾಡಿಸ್ಬೇಕೂಂತ ಮಾಡಿದ್ದೀವಿ... ಇದ್ಕೆ ತಾವು!... ಎಮ್ದು ಮಾತು ನಿಲ್ಲಿಸಿ ಉಗುಳು


೪೦೭
ನುಂಗಿದರು.
ಅದನ್ನು ಕೇಳುತ್ತಲೆ ಅನ್ನಪೂರ್ಣ ಆದಿಶಕ್ತಿಯ ಅಪರಾವತಾರವಾಗಿ ದೃಷ್ಟಿಯ ಮೂಲಕ ಅವರೆಲ್ಲರನ್ನೂ ಆಪೋಶನ ತೆಗೆದುಕೊಳ್ಳತೊಡಗಿದಳು.
"ಏನ್ರೀಽಽ... ನಮ್ಮನ್ನೇನು ನೀವು ಸಂಸಾರಸ್ತರೂಂತ ತಿಳ್ಕೊಂಡೀರೋ... ಇಂಥ ಸುಡುಗಾಡು ನಾಟಕಗಳ್ನ ಆಡೀ, ಆಡೀ ನೀವು ಕೆಟ್ಟಿರೋದಲ್ದೆ ನಂ ಯಜಮಾನರನ್ನೂ ಕೆಡಿಸ್ಲಿಕ್ಕೆ ಬಂದಿದೀರೇನು! ಒಳ್ಳೆ ಮಾತಿನಿಂದ ನೀವು ಬಂದಿರೋಕೆಲಸವನ್ನು ಮುಗಿಸಿಕೊಂಡು ಇಲ್ಲಿಂದ ಹೊರಟುಹೋದರೆ ಸೈ, ಇಲ್ಲಾಂದ್ರೆ ನಾನೇನು ಮಾಡ್ತೀನೋ ನನ್ಗೆ ಗೊತ್ತಿಲ್ಲ!... ಎಂದು ಕಿಡಿಕಾರಿದಳು.
ಅದನ್ನು ಕೇಳಿ ಪರಮೇಶ್ವರನ ಪಾತ್ರ ಮಾಡುವ ಕೆಂಡಗಣ್ಣಿನ ಮಠ್ ರವರು ಹಡಲ್ಲಗಿಬಿಟ್ಟರು. ಹಾಗೇ ಚೇತರಿಸಿಕೊಂಡು "ನಾಟಕ ಬರ್ದೋರು ಆಚಂದ್ರಾರ್ಕವಾಗಿ..." ಎಂದೇನೋ ಹೇಳುವ ಪ್ರಯತ್ನ ಮಾಡುತ್ತಿರಲು...
ನನ್ನ ಶ್ರೀಮತಿಯವರು ಅವರ ಮಾತನ್ನು ಅರ್ಧಕ್ಕೇ ತುಂಡರಿಸಿ..
"ಸಾಕು ನಿಲ್ಲಿಸ್ರಿ ನಿಮ್ ಮಾತ್ನ... ನನ್ನನ್ನೇನು ಏನು ಗೊತ್ತಿಲ್ಲದ ಮೂರ್ಖಳು ಅಂದ್ಕೊಂಡಿದ್ದೀರೋ ಹೇಗೆ? ನಲ್ವಡಿ ಶ್ರೀಕಂಠ ಶಾಸ್ತ್ರಿಗಳು ಕಂದಗಲ್ಲು ಹನುಮಂತರಾಯರು ಇವ್ರೆಲ್ಲ ಕೂಳು ನೀರಿಲ್ದೆ ಒದ್ದಾಡಿ ಸತ್ತದ್ದು ನನ್ಗೇನು ಗೊತ್ತಿಲ್ಲ ಅಂತ ಅಂದ್ಕೊಂಡೀರೇನು?" ಎಂದು ಹೇಳೋದು ಹೇಳಿ ಆದ ಮೇಲೆ ಅಪರಾಧಿಯಂತೆ ಕೂಕಂಡಿದ್ದ ನನ್ನ ಕಡೆ ತಿರುಗಿ... ರ್ರೀ ತಲೆತಗ್ಗಿಸ್ಕೊಂಡು ಏನೂ ಅರಿಯದ ಕಂದಮ್ಮನಂತೆ ಕೂತಿದ್ದೀರಲ್ಲ... ತಲೆ ಎತ್ರಿ ಮೇಲೆ... ನೀವು ಹಂಪಿ ಯೂನಿವರ್ಸಿಟೀಲಿದ್ದಾಗ ಆ ದುತ್ತರಿಗಿ ಎಂಬ ನಾಟಕ್ಕಾರ್ರು ಬಂದಿದ್ರಂತ ಹೇಳ್ತಿದ್ರಿ ಅಲ್ಲ... ಅಷ್ಟೊಂದು ನಾಟಕಗಳ್ನ ಬರೆದಿದ್ರೂ ಎಂಥೆಂಥ ಅವಸ್ಥೆ ಪಡ್ತಿದ್ದಾರೆಂಬುದನ್ನ ವಿವರಿಸಿ ಹೇಳ್ರಿ ಅವರಿಗೆ ಎಂದು ಆಜ್ಞಾಪಿಸಿದಳು.
ಆಕೆ ಗುಡುಗುಡಿಸಿದ ಮಾತಿನಲ್ಲಿ ಸತ್ಯ ಇಲ್ಲದಿರಲಿಲ್ಲ.
ಹತ್ತಾರು ಯಶಸ್ವಿ ನಾಟಕಗಳನ್ನು ಬರೆದಿರುವ ಶ್ರೀಯುತ ಪಿ.ಬಿ. ದುತ್ತಲಗಿ ಕರ್ನಾಟಕದಲ್ಲಿ ಮನೆಮಾತಾಗಿರೋರು. ಅವರ ಕೆಲವು ನಾಟಕಗಳು ಚಲನಚಿತ್ರಗಳಾಗಿಯೂ ವಶಸ್ವಿಯಾಗಿವೆ. ಸಂಪತ್ತಿಗೆ ಸವಾಲ್, ಸೊಸೆ ತಂದ ಸೌಭಾಗ್ಯ, ಹೀಗೆ. ಅಂಥ ಮಹಾನ್ ವ್ಯಕ್ತಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು ಕುಲಪತಿಗಳನ್ನು ಕಾಣುವ ವಿಫಲ ಪ್ರಯತ್ನ ಮಾಡಿದರು. ಉತ್ತರ ಕರ್ನಾಟಕದವರೂ, ಜಾನಪದ ವಿದ್ವಾಂಸರೂ, ನಾಟಕಕಾರ ಕವಿ, ಕಾದಂಬರಿಕಾರ ಹೀಗೆ ಪ್ರಸಿದ್ಧರಾದ ಕುಲಪತಿಗಳು ಅವರಿಗೆ ಬೆಟ್ಟಿಯಾಗುವ ಅವಕಾಶವನ್ನೇ ಕೊಡಲಿಲ್ಲ. ಜೇಬಿನಲ್ಲಿದ್ದಬದ್ದ ಹಣ ಖರ್ಚು ಮಾಡಿಕೊಂಡು ದುತ್ತರಿಗಿಯವರು ಒದ್ದಾಡುವುದನ್ನು ಕಣ್ಣಾರೆ ಕಂಡು ಬಹಳ ದಿನಗಳಾಗಿಲ್ಲ.
ಆಕೆಯ ಆಜ್ಞೆಗೆ ತಲೆಬಾಗಿದೆನಾದರೂ ಮಾತಾಡುವ ಧೈರ್ಯ ಬರಲೇಇಲ್ಲ.
ತಾವು ಬಂದಿರುವ ಗಳಿಗೆಯೇ ಎಡವಟ್ಟಾದುದು ಎಂದು ಭಾವಿಸಿದವರಾದ ಕಲಾವಿದರು ಅಯ್ಯೋ ಪಾಪವೆಂಬಂತೆ ನನ್ನ ಕದೆ ನೋಡಿ ಮೆಲ್ಲನೆ ಒಬ್ಬೊಬ್ಬರಾಗಿ ಎದ್ದು ಹೊರಗೆ ಹೋದರು. ಹೋಗುವ ಮೊದಲು ಶಿವಣ್ಣನವರು ನನ್ನನ್ನು ಹೊರಗೆ ಕರೆದೊಯ್ದು..
ನೋಡಿ ಮೇಷ್ಟ್ರೇ... ಆ ತಾಯಿ ಹೇಳಿದ್ರಲ್ಲಿ ಸತ್ಯಾಂಶ ಇದೆ. ಆ ಸತ್ಯದ ಇನ್ನೊಂದು ಅರ್ಥ


೪೦೮
ಏನೆಂದರೆ ನಿಮ್ಮಂಥ ಸುಶಿಕ್ಷಿತರು ಗಟ್ಟಿಯಾದ ನಾಟಕ ಬರೆಯಬೇಕು... ಅದರಲ್ಲಿನ ಮುಖ್ಯ ಪಾತ್ರವನ್ನು ನಿಮ್ಮಂಥೋರೇ ಮಾಡಬೇಕೆಂಭೋದು... ಒಂದು ಒಳ್ಳೆಯ ಮಹೂರ್ತ ನೋಡಿ ನೌಕರಿಗೆ ರಾಜೀನಾಮೆ ಕೊಟ್ತು ರಂಗಭೂಮಿಗೆ ಶರಣಾಗಿ ಬಿಡೀ... ಎಲ್ಲವನ್ನು ಸರಸ್ವತಿ ನೋಡಿಕೊಳ್ಳುತ್ತಾಳೆ. ಯೋಚ್ನೆ ಮಾಡಿ ನಿರ್ಧಾರ ತಿಳಿಸಿ.‘ಶಾಮಣ್ಣ ಅರ್ಥಾತ್ ಸೂಳೆ ಹೆಚ್ಚೋ ಗರತಿ ಹೆಚ್ಚೋ’ ಎಂಬ ನಾಟಕಾನ ಕೊಟ್ಟೂರು ಜಾತ್ರೆಯಲ್ಲಿ ಪ್ರಪ್ರಥಮವಾಗಿ ಆಡಿಬಿಡೋಣ. ನಾಳೇನೆ ಹೋಗಿ ಇಂಥ ಸಾಮಾಜಿಕ ನಾಟಕಗಳ್ನ ಬದಲಾದ ಕಾಲ ಸಂಧರ್ಭದಲ್ಲಿ ಆಡಬೇಕಾಗಿರುವ ಅಗತ್ಯ ಕುರಿತು ಪುಟ್ಟಜ್ಜೋರ ಹತ್ರ ಮಾತಾಡ್ತೀನಿ... ಅವರು ಒಫ್ಫಿ ಆಶೀರ್ವಾದ ಮಾಡೇ ಮಾಡ್ತಾರೆ... ಪತ್ರ ಹಾಕ್ತೀನಿ... ಸ್ಕ್ರಿಪ್ಟ್ ಜೊತೆಗೆ ಬಂದು ಬಿಡಿ... ಕಾಯ್ತಿರ್ತೀವಿ" ಎಂದು ಹೇಳಿ ಭುಜ ತಟ್ಟಿ ಏಣು ಘಟಿಸಿಯೇ ಇಲ್ಲವೆಂಬಂತೆ ಹೊರಟು ಹೋದರು.
ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸುವುದು, ಆ ನಾಟಕದಲ್ಲಿ ಲೇಖಕನಾದ ನಾನು ಶಾಮಣ್ಣನ ಪಾತ್ರ ವಹಿಸುವುದು... ಈ ಎಲ್ಲ ಕಲ್ಪನೆಗಳೊಂದಿಗೆ ಹೆಜ್ಜೆಹೆಜ್ಜೆಗೆ ಪುಳಕಗೊಳ್ಳುತ್ತ ಪಾತ್ರಧಾರಿಯೋರ್ವ ರಂಗ ಪ್ರವೇಶಿಸುವ ರೀತಿಯಲ್ಲಿಯೇ ನಾನು ಹೊಸ್ತಿಲು ದಾಟಿ ಪಡಸಾಲೆ ಸಮೀಪಿಸಿದೆ.
ಅಡುಗೆ ಮನೆಯಲ್ಲಿ ಪಾತ್ರೆ ಪಡಗಗಳು ನನ್ನ ಹೆಂಡತಿಯ ಕೋಪಕ್ಕೆ ತುತ್ತಾಗಿ ದಡಬಡ ಸದ್ದು ಮಾಡುತ್ತಿರುವುದು ಕೇಳಿಸಿತು. ಅದನ್ನು ನಾನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ನನ್ನ ಹೆಂಡತಿಯ ಕೋಪದ ಪ್ರಮಾಣ ನನಗೆ ಗೊತ್ತು. ಆಕೆಯ ಕೋಪವನ್ನು ಶಮನ ಮಾಡುವ ಶಕ್ತಿ ಈ ತ್ರಿಲೋಕಗಳಲ್ಲಿ ಎಲ್ಲಿಯಾದರೂ ಇದ್ದರೆ... ಅದು ನನ್ನ ಕೇವಲ ಮೌನಕ್ಕೆ ಮಾತ್ರ.
ಅವತ್ತು ಮಧ್ಯಾಹ್ನ ಅನ್ನಪೂರ್ಣೆಶ್ವರಿ ನಾಮಾಂಕಿತಳಾದ ಆಕೆಯು ಕಡು ಮುನಿದು ಅಡುಗೆ ಮಾಡಲೂ ಇಲ್ಲ... ಮುಗುಳು ನಗೆಯಮ್ ಬೀರಲೂ ಇಲ್ಲ... ನಾನೂ ಕೂಡ ಆ ನಗೆಯು ಎಲ್ಲಿದೆ ಎಂದು ಹುಡುಕುವ ಪ್ರಯತ್ನ ಮಾಡಲೂ ಇಲ್ಲ.
ನೀವೇ ಆ ಶಾಮಣ್ಣ ಪಾತ್ರ ವಹಿಸಲಿಕ್ಕೆ ಲಾಯಕ್ಕೂ ಎಂದು ಶಿವಣ್ಣನವರು ಹೇಳಿದ್ದು ನನ್ನ ಹೃದಯ ತುಂಬಿ ಹೊಟ್ಟೆ ಕ
ಡೆ ಧಾವಿಸ ತೊಡಗಿತ್ತು. ಅದು ಅಲ್ಲದೆ ಕಲೆ ಅಭಿನಯ ಮತ್ತು ಧಿಮಾಕು ಎಂಬುದು ನಮ್ಮ ವಂಶದ ತ್ರಿವಳಿ ಆಸ್ತಿ. ನಮ್ಮಂಥೋರು ಉಬ್ಭೋದಾಗಲೀ ಪಂಚೇರಾಗೋದಾಗಲೀ ತಡವಾಗೋದಿಲ್ಲ. ಶಿವಣ್ಣನವರು ಒಂದೇ ಒಂದು ಡೈಲಾಗ್ ಹೊಡೆದು ಉಬ್ಬಿಸಿಬಿಟ್ಟರು. ಉಬ್ಬಿನ ಪಂಚರಮ್ಗಿನ ಬಲೂನಾಗಿ ಅಂತರಂಗದ ಚಿದಾಕಾಶದಲ್ಲಿ ಮೇಲೆ ಮೇಲಕ್ಕೇರಿ ತೇಲಾಡತೊಡಗಿದೆನು. ಹೆಂಡತಿಯ ದುಃಖ ಶಮನ ಮಾಡಬೇಕೆಂಬ ಯೋಚನೆಯೇ ಬರಲಿಲ್ಲ. ಒಳಗಡೆ ಸಂಗೀತಗಾರನಾಗಿ, ನಾಟಕಕಾರನಾಗಿ, ನಟನಾಗಿ, ಕೊಡುಗೈ ದೊರೆಯಾಗಿ, ಪತಿಯಾಗಿ, ಮಗನಾಗಿ, ಅಧಿಕಾರಿಯಾಗಿ, ಕುಡುಕನಾಗಿ, ಜೂಜುಕೋರನಾಗಿ, ವಿಟಪುರುಷನಾಗಿ, ಖೈದಿಯಾಗಿ, ರೋಗಿಯಾಗಿ, ಕಳೇಬರವಾಗಿ, ಪ್ರೇತಾತ್ಮವಾಗಿ ಒಂದೊಂದು ಗಳಿಗೆ ರೂಪ ಪಡೆಯುತ್ತಿದ್ದ ಒಂದೊಂದು ಗಳಿಗೆಗೆ ಒಂದೊಂದು ಪಾತ್ರ ಘಟ್ಟದಿಂದ ಇನ್ನೊಂದು ಒಂದೊಂದು ಪಾತ್ರ ಘಟ್ಟಕ್ಕೆ ಲೀಲಾಜಾಲವಾಗಿ ಜಿಗಿಯುತ್ತಿದ್ದ ದಶಸ್ಕಂದ ಶಾಮಣ್ಣ ತುಂಬಿಕೊಂಡಿದ್ದರಿಂದ ವಾಸ್ತವ ಜಗತ್ತಿನ ಯಾವ ಪ್ರಿಯರಾಗಲೀ, ವರ್ತಮಾನದ ಯಾವುದೇ ವಿದ್ಯಮಾನವಾಗ್ಲೀ ನನ್ನ ಗಮನ ಸೆಳೆಯಲಿಲ್ಲ.
ನನ್ನ ಕಾದಂಬರಿಯ ಶಾಮಣ್ಣನ ಪಾತ್ರವನ್ನು ಶರಸ್ಚಂದ್ರರ ಕಾದಂಬರಿಯ ದೇವದಾಸನ ಪಾತ್ರಕ್ಕೆ


೪೦೯
ತಳಕು ಹಾಕಿ ನೋಡುವುದು, ದೇವದಾಸು ಚಿತ್ರದ ಮೂಲಕ ನಟ ಸಾಮ್ರಾಟ ಅಕ್ಕಿನೇನಿ ನಾಗೇಶ್ವರರಾವ್ರವರು ಅತ್ಯುತ್ತಮ ನಟರೆಮ್ದು ಪ್ರಸಿದ್ಧರಾದಮ್ತೆನಾನೂ ಸಹ ಶಾಮಂನ ನಾಟಕದ ಮೂಲಕ ಜಗದ್ವಿಖ್ಯಾತ ನಾಟಕಕಾರನೂ, ನಟನೂ ಆಗಬೇಕೆಂದು ಕನಸು ಕಾಣತೊಡಗಿದೆ. ಅವನೇ ನಾನೇನೋ, ನಾನೇ ಅವನೇನೋ, ನಮ್ಮಿಬ್ಬರ ನಡುವೆ (ದೇಹಾತ್ಮ, ಜೀವಾತ್ಮ) ಭಿನ್ನತೆ ಎಂಬುದು ಇಲ್ಲವೇನೋ? ಎನ್ನಿಸತೊಡಗಿತು.
ಅವನ ಪಾತ್ರದ ಒಂದೊಂದು ಆಯಾಮಕ್ಕೂ ಒಂದೊಂದು ಹಂತಕ್ಕೂ ಒಂದೊಂದು ತಿಂಗಳ ಪರ್ಯಂತರ ವಿಶೇಷ ತಾಲೀಮು ನಡೆಸಬೇಕು. ಆ ಪಾತ್ರ ಪೂರ್ಣ ಪ್ರಮಾಣದಲ್ಲಿ ಶಕ್ತಿಶಾಲಿಯಾಗಿ ಪ್ರಕಟವಾಗಬೇಕಾದರೆ ಕನಿಷ್ಠ ಒಂದು ವರ್ಷವಾದರೂ ತಲ್ ಮು ನಡೆಯಬೇಕು. ಆದರೆ ಯಾವ ತಾಲೀಮುಗಳ ಸಹಾಯವಿಲ್ಲದೆ ಆ ಸಂಸಾರ ನೌಕೆಯೆಂಬ ದುರಮ್ತ ರಂಗ ಪ್ರಯೋಗ, ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಶಾಮಣ್ಣ ನಿಜಕ್ಕೂ ಅಭಿಜಾತ ಕಲಾವಿದನೇ ಸರಿ. ಕರ್ಮಠಸಂಸಾರದ ಮೆಲ್ಪದರುಗಳನ್ನು ಸಮರ್ಥರೀತಿಯಲ್ಲಿ ಕಳಚುತ್ತ ಹೋಗಿ ಎಲ್ಲ ವೃತ್ತಿರಂಗಭೂಮಿ ಕಲಾವಿದರಂತೆ ತಾನು ದುರ್ಂತಕ್ಕೀಡಾಗಿ ಈಗ ಸಧ್ಯಕ್ಕೆ ಪ್ರೇತಾತ್ಮವೆಂಬ ಪಾತ್ರ ನಿರ್ವಹಿಸುತ್ತಿರುವನು. ತಮ್ಮ ವಂಶದ ಹಿರಿಯರಂತೆ ತನ್ನ ಕಳೇಬರದ ಅಸ್ಠಿಮಜ್ಜನ ಕಾರ್ಯವನ್ನು ಪವಿತ್ರ ಗಂಗಾನದಿಯಲ್ಲಿ ವಿಸರ್ಜಿಸಬೇಕೆಂದು ಕರಾರು ವಿಧಿಸಿರುವನು.
ಮಣಿಕರ್ಣಿಕಾ ಚಕ್ರ ಪುಷ್ಕರಿಣಿ ಎಮ್ಬುದು ಅದಾವ ಮೋಡಿ ಮಾಡಿರುವುದೋ ಏನೋ ಅದೊಂದು ಪ್ರೇತಾತ್ಮಗಳ ಸಂತೆ, ವಿಷಾದ ಮುಖಗಳ ಜಾತ್ರೆ - ಇಂದ್ರಿಯ ವಿಕಾರಗಳ ನಿಗೂಢ ಸಮೂಹ, ಮರುಳುಗಳಿಗೆ ಒಡೆಯನಾದವನೂ; ತ್ರಿಲೋಕ ಮೋಹಿನಿಯ ಪತಿ ಪರಮೇಶ್ವರನೂ ಆದ ಪರಶಿವನು ದೇವತೆಗಳೊಮ್ದಿಗೆ ಹವಿರ್ಭಾಗವನ್ನು ಹೊಂದಲು ಯೋಗ್ಯನಲ್ಲವೆಂದು ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮನ ಬಲಗೈ ಹೆಬ್ಬೆಟ್ಟಿನಿಂದ ಹುಟ್ಟಿದವನಾದ ದಕ್ಷನು ಹೀಯಾಳಿಸಿ ದೈವಕೋಪಕ್ಕೆ ತುತ್ತಾದ ಜಾಗವದು.ಅಧಿಕೃತ ಆಮಂತ್ರಣವಿರದಿದ್ದರೂ ತನ್ನ ತಂದೆಯಾದ ದಕ್ಷನು ಮಾಡುತ್ತಿರುವ ನಿರೀಶ್ವರ ಯಾಗಕ್ಕೆ ಹೋಗಿ ಪತಿನಿಂದೆ, ಅಪಮಾನ, ತಿರಸ್ಕಾರಗಳಿಗೆ ಗುರಿಯಾಗಿ ಯೋಗಾಗ್ನಿಯಲ್ಲಿ ದಾಕ್ಷಾಯಿಣಿಯು ದೇಹತ್ಯಾಗ ಮಾಡಿದ ಜಾಗವದು. ರುದ್ರಾಂಶ ಸಂಭೂತನಾದ ವೀರಭದ್ರನು ನಿರೀಶ್ವರವಾದಿಗಳ ರುಂಡಗಳನ್ನು ಚಂಡಾಡಿ ಯಜ್ಞಕುಂಡಕ್ಕರ್ಪಿಸಿದ ಜಾಗವದು.
ಮನಸ್ಸಮ್ಕಲ್ಪ ಮಾತ್ರದಿಂದಲೇ ಚತುರ್ಮುಖನಾದ ಬ್ರಹ್ಮನು ದೇವತೆಗಳನ್ನೂ, ಭೂತಗಳನ್ನೂ, ಋಷಿಗಳನ್ನೂ, ಗಂಧರ್ವರನ್ನೂ, ಅಸುರರನ್ನೂ; ಸರ್ಪಗಳನ್ನೂ ನಿರ್ಮಿಸಿದ ಜಾಗವದು. ದಕ್ಷನು ಹರ್ಯಶ್ವರೆಂಬ ಐದುಸಾವಿರಮಂದಿ ಪುತ್ರರನ್ನು ಸೃಷ್ಟಿಸಿ, ಮೈಥುನ ಧರ್ಮವನ್ನು ಭೋದಿಸಲು ಅವರು ಮಿಥುನ ಸಮಾಗಮ ಕಾರ್ಯದಲ್ಲಿ ಪಾಲ್ಗೊಂಡಿರಲು, ಆಗ ನಾರದನು ಅವರಿರುವಲ್ಲಿ ಪ್ರತ್ಯಕ್ಷವಾಗಿ "ಎಲಾ ಹುಚ್ಚರಿರಾ! ಇನ್ನೇನು ಸೃಷ್ಟಿಯೇ ಪರಮ ಪುರುಷಾರ್ಥವೆಂದು ಭಾವಿಸಿರುವಿರಾ! ಈ ಭೂಮಂಡಲವು ಎಲ್ಲಿಂದ ಹೇಗೆ ಬಂತು? ಇದರ ಒಳಗಡೆ ಇರುವುದಾದರೂ ಏನು? ಮೇಲೆ ಇರುವುದಾದರೂ ಏನು?... ಜನ್ಮರಾಹಿತ್ಯವನ್ನು ಪಡೆಯುವುದಕ್ಕೆ ಪ್ರಯತ್ನ ಮಾಡಿ"ರೆಂದು ಬೋಧಿಸಲು, ಅವರೆಲ್ಲರು ದಿಕ್ಕಾಪಾಲಾಗಿ ಹೋಗಲು, ಇದನ್ನು ಕಂಡು ಖಿನ್ನನಾದ ದಕ್ಷನು ಮರಳಿ ಶಬಲಾಶ್ವರೆಂಬ ಸಾವಿರಮಂದಿ ಪುತ್ರರನ್ನು ಸೃಷ್ಟಿಸಿ ಮತ್ತದೇ ಮೈಥುನ ಧರ್ಮವನ್ನು ಬೋಧಿಸಲು, ಅವರೂ ಸಹ ಮಿಥ್ನ ಸಮಾಗಮದಲ್ಲಿ ಮಗ್ನರಾಗಿರಲು, ಮತ್ತೆ ನಾರದನು



೪೧೦ಅವರಿರುವಲ್ಲಿಗೆ ಬಂದು ಜನ್ಮರಾಹಿತ್ಯ ಭೋದಿಸಲು ಅದರಿಂದ ಅವರೂ ತಮ್ಮ ಅಣ್ಣಂದಿರಂತೆ ದಿಕ್ಕಾಪಾಲಾಗಲು, ಇದರಿಂದ ಖಿನನಾದ ದಕ್ಷನು ಸೃಷ್ಟಿಕಾರ್ಯ ವಿರೋಧಿಯಾದ ನಾರದನಿಗೆ ಶಾಪ ಕೊಟ್ಟು ಮರಳಿ ಅರವತ್ತು ಮಂದಿ ಪುತ್ರಿಯರನ್ನು ಪಡೆದ ಜಾಗವದು.!
ಸಂಕಲ್ಪಾದ್ದರ್ಶನಾತ್ ಸ್ಪರ್ಶಾತ್ ಪೂರ್ವೇಷಾಂ ಸೃಷ್ಟಿರುಚ್ಯತೆ|
ದಕ್ಷಾತ್ಪ್ರಾಚೇತ ಸಾದೂರ್ಧ್ವಂ ಸೃಷ್ಟಿರೇನ ಸಂಭವಾ... ಎಂಬ ಶ್ಲೋಕವು ನಲಿನಲಿದಾಡುತ್ತಿರುವ ಜಾಗವದು!
ಸೃಷ್ಟಿ, ಪ್ರತಿಸೃಷ್ಟಿ, ಈಶ್ವರ, ನಷ್ವರ, ಜನನ, ಮರಣ, ಜೀವಾತ್ಮ ಪ್ರೇತಾತ್ಮ, ಸುಖ-ದುಃಖ, ಅನುರಾಗ ವಿಶಾದಗಳ ನಿಘಂಟಾಗಿರುವ ಈ ಸ್ಥಳವಲ್ಲದೆ ಅರಿಷ್ಡವರ್ಗಗಳಿಗೆ ಅತೀತನೂ, ಒಡೆಯನೂ; ಕಾಮಾರಿಯೂ ಆದ ಪರಮೇಶ್ವರನು ಯಜ್ಞಕುಂಡದಲ್ಲಿ ಬೆಂದ, ಅರೆಬೆಂದ ಕಳೇಬರವನ್ನು ತೆಕ್ಕೆಯಲ್ಲಿ ಅವಚಿಕೊಂಡು ಪ್ರೇಮಾಲಾಪ ಮಾಡುತ್ತ ಹೆಜ್ಜೆ-ಹೆಜ್ಜೆಗೂ ವಿರದುರಿಯನ್ನು ಚೆಲ್ಲಾಡುತ್ತ ಅಶ್ರುಧಾರೆಯನ್ನು ಸಿಂಪಡಿಸುತ್ತ ದಿಕ್ಕುಗೆಟ್ಟವನಾಗಿ ದಿಕ್ಕುಗಳಿಗಾಗಿ ತಡಕಾಡುತ್ತ ಹುಚ್ಚನಂತೆ ಅಲೆದಾಡಿದಂಥ ಸೃಷ್ಟಿಸ್ಥಿತಿಲಯಗಳಿಗೆ ಕಾರಕವೂ ಪ್ರೇರಕವೂ ಆದಂಥ ಜಾಗವೇ ಅದು!
ಬೆಂದ ಅರೆಬೆಂದ ಹೆಣಗಳಿಂದಲೂ, ಒಂದೊಂದು ವಿಧದ ಅವಯವಗಳಿಂದಲೂ, ಲಕ್ಷೋಪಲಖ್ಷ ಅಸ್ಥಿಗಲಿಂದಲೂ; ಕೋಟಿ ಕೋಟಿ ಮಣದಷ್ಟು ತೂಕದ ಚಿತಾಭಸ್ಮದಿಮ್ದಲೂ, ಮೀನು, ಮೊಸಳೆ, ಆಮೆ, ಕಲ್ಲಾಮೆಗಳಂಥ ಜಲಚರಗಳಿಂದಲೂ, ಹಿಮಾಚಲ, ಕಾಷ್ಮೀರ, ಬಿಹಾರ, ಒರಿಸ್ಸಾ, ಬಂಗಾಲಗಳಿಂದ ಬಂದಂಥ ನಿರಾಶ್ರಿತರು ನಡೆಸುತ್ತಿರುವ ದೋಣಿಗಳಿಂದಲೂ, ಲಕ್ಷಂತರ ಮೋಕ್ಷಾಪೇಕ್ಷಿಗಳ ಧ್ಯಾನಸ್ಥ ರೌರವ ಕೂಗುಗಳಿಂದಲೂ, ತೇಲಾಡುವ ಮೂಟೆ ಮೂಟೆ ಕಫಗಳಿಂದಲೂ, ವ್ಯಾಸ, ಮಣಿಕರ್ಣಿಕಾ, ದಶಾಶ್ವಮೇಧ, ಹನುಮಂತ, ಹರಿಶ್ಚಂದ್ರವೇ ಮೊದಲಾದ ಮುನ್ನೂರ ಅರವತ್ತೈದು ಸುತ್ತುವರಿದ ಘಾಟ್ಗಲಿಂದಲೂ; ವಿಘ್ನೇಶ್ವರ, ಕಾಲಭೈರವ, ಬಿಂದುಮಾಧವ, ಅನ್ನಪೂರ್ಣಾ, ಸರ್ವಮಂಗಳ, ವಿಶಾಲಕ್ಷಿ, ವಿಶ್ವನಾಥರೇ ಮೊದಲಾದ ದೇವಾನುದೇವತೆಗಳು ನೆಲೆಗೊಂಡಿರುವ ದೇಗುಲಗಲಿಂದ ತುಂಬಿದ ತಟಗಳಿಂದಲೂ, ಗಿಜಿಗಿಜಿಗುಡುಗುತ್ತಿರುವ ಗಂಗಾನದಿಯು ಈ ನಮ್ಮ ಶಾಮನನ್ನು ಅದಾವ ಮೋಡಿ ಮಾಡಿರುವುದೋ?
ಮೋಕ್ಷದಾಯಕಗಳೆಂದು ಪುರಾಣಪ್ರಸಿದ್ಧಿ ಪಎದ ಸಪ್ತಪಟ್ಟಣಗಳಲ್ಲಿ ಒಂದಾದ, ಸದರೀ ಕ್ಷೇತ್ರದಲ್ಲಿ ಸತ್ತವರೆಲ್ಲರೂ ಮುಕ್ತಿಯನ್ನು ಹೊಂದುವರೆಂಬ ಪ್ರತೀತೆಗೆ ಆಗರವಾದ ಕಾಶೀಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಶಾಮನಿಗೆ ತನ್ನ ಗಿಜಿಗಿಜಿ ಬದುಕಿನ ನಡುವೆ ಯಾವಾಗ ಸಾಧ್ಯವಾಯಿತು? ಎಂಬುದೇ ಬಗೆಹರಿಯಲಾರದ ಪ್ರಶ್ನೆಯಾಗಿರುವುದು. ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯನ್ನೂ; ಗಂಗಾನದಿಯನ್ನೂ; ಕಾಶೀಕ್ಷೇತ್ರವನ್ನೂ ದೇಹ ಮತ್ತು ಮನಸ್ಸಿನಲ್ಲಿ ಸೃಷ್ಟಿಸಿಕೊಳ್ಳುತ್ತ ಹೋಗಿ (ಅಥವಾ ಅವೇ ಅವನ ದೇಹ ಮತ್ತು ಮನಸ್ಸಿನಲ್ಲಿ ಆಶ್ರಯ ಪ
ಡೆದವೇನೋ?) ಕೊನೆಗೆ ತಾನೇ ಸಂಸ್ಕಾರ ಯೋಗ್ಯವಾದ ರುದ್ರಭೂಮಿಯಾಗಿ ಮಾರ್ಪಟ್ಟಂತಿದ್ದ ಅವನ್ಯಾಕೆ ತನ್ನ ಕಳೇಬರದ ಅಸ್ಥಿಮಜ್ಜನವನ್ನು ಗಂಗಾನದಿಯಲ್ಲಿ ಮಾಡಬೇಕೆಂದು ಬಯಸಿದ ಎಂಬುದೇ ಅರ್ಥವಾಗದ ಸಂಗತಿ.
ಕಾಶೀ ಪಟ್ಟ್ಸಣಕ್ಕಿಂತ ಮುಖ್ಯವಾಗಿ ಕಾಶೀರಾಜನನ್ನೇ ತುಂಬ ಹಚ್ಚಿಕೊಂಡಿದ್ದನೆಂದು ಕೊತ್ತಲಿಗಿಯ ಅನಸೂಯ ಹೇಳುತ್ತಿದ್ದುದು ನೆನಪಾಗುವುದು.


೪೧೧
ಪ್ರಥಮ ಗಣ ಪರಿವಾರದಲ್ಲಿ ಒಬ್ಬನಾದ ಶಿವನು ತನ್ನ ಹೆಂಡತಿಯಾದ ಪಾರ್ವತಿಯೊಡನೆ ಅತ್ತೆಯಾದ ಮೇನಾದೇವಿಯ ಮನೆಯಲ್ಲಿ ತಿಂಗಳುಗಟ್ಟಲೆ ಠಿಕಾಣಿ ಹೂಡಿದ್ದ. ಎಂಥ ಅಳಿಯನಾದರೂ ತಿಂಗಳುಗಟ್ಟಲೆ ಹೆಂಡತಿಯೊಡನೆ ಇದ್ದರೆ ಅತ್ತೆ ಮಾವನಿಗಾದರೂ ಹೇಗೆ ಸೇರಿಯಾರು? ಅತ್ತೆ ತನ್ನ ಅಳಿಯನನ್ನು ಹುಟ್ಟು ದರಿದ್ರನೆಂದೂ; ಒಂದಾದರೂ ಮನೆಗೆ ಗತಿ ಇಲ್ಲದವನೆಂದೂ ಮಾತು ಮಾತಿಗೆ ನಿಂದಿಸತೊಡಗಿದ್ದು ಕೇಳಿ ಮಹಾಪತಿವ್ರತೆಯಾದ ಪಾರ್ವತಿಯು ಗಂಡನನ್ನು ತರುಬಿ ಬೇರೊಂದು ಮನೆ ಮಾಡಬೇಕೆಂದು ಕಾಟ ಕೊಟ್ಟಳು. ಈ ಪರಿಣಾಮವಾಗಿ ಶಿವ ತನ್ನ ಪರಿವಾರದ ಕುಂಭನಿಗೆ ಕಾಶೀರಾಜನಾದ ದಿವೋದಾಸನನ್ನು ಉಪಾಯಮಾಡಿ ಓಡಿಸಬೇಕೆಂದು ಆಜ್ಞಾಪಿಸಿದ. ಆಗ ಕುಂಭ ಕಾಶೀ ಪಟ್ಟಣಕ್ಕೆ ಬಂದು ನಿಕುಂಭನೆಂಬ ಬ್ರಾಹ್ಮಣನ ಕನಸಿನಲ್ಲಿ ಕಾಣಿಸಿಕೊಂಡು ಅತಂತ್ರ ಸ್ತಿಥಿಯಲ್ಲಿ ಬದುಕುತ್ತಿರುವ ಮತ್ತು ಇರುವೆ ಎಂಬತ್ನಾಲ್ಕು ಕೋಟಿ ಜೀವರಾಶಿಗಳಿಗೆ ಸಂರಕ್ಷಕನೂ, ಒಡೆಯನೂ ಆದ ವಿಶ್ವನಾಥನಿಗೊಂದು ಗುಡಿ ಕಟ್ಟಿಸಿಪೂಜಿಸು ಎಂದು ಹೇಳಲಾಗಿ ಅವನು ಹಾಗೆಯೇ ಮಾಡಲಾರಂಭಿಸಿದ. ಅನೇಕ ಮಂದಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದ ವಿಶ್ವನಾಥ ದಿವೋದಾಸನ ಒಂದೇ ಒಂದು ಕೋರಿಕೆಯನ್ನು ಈಡೇರಿಸಲಿಲ್ಲ. ಆದ್ದರಿಂದ ಅವನು ದೇವಳವನ್ನು ಕೆಡವಿಸಿದ. ಅದರಿಂದ ಸಿಟ್ಟಿಗೆದ್ದ ವಿಶ್ವನಾಥ ಶಾಪ ಕೊಟ್ಟು ಕಾಶೀ ಪಟ್ಟಣವನ್ನು ಹಾಳು ಮಾಡಿದ. ಹಾಳು ಪಟ್ಟಣದಲ್ಲಿರಲಾಗದೆ ದಿವೋದಾಸ ಸಕುಟುಂಬ ಪರಿವಾರ ಸಮೇತನಾಗಿ ಊರು ಬಿಟ್ಟ. ನಂತರ ಶಿವನು ಪರಿವಾರದೊಂದಿಗೆ ನೆಲೆಗೊಂಡ ನಂತರವೇ ಕಾಶೀಕ್ಷೇತ್ರ ಅವಿಮುಕ್ತ ಕ್ಷೇತ್ರವಾಯಿತು.
ಶಾಮಾಶಾಸ್ತ್ರಿ ಹೇಇದ್ದೆಂದು ಅನಸೂಯ ಹೇಲಿದ ಈ ಕಥೆಯಲ್ಲಿ ಸುಳ್ಳೂ ಇರಲಿಕ್ಕಿಲ್ಲ ನಿಜವೂ ಇರಲಿಕ್ಕಿಲ್ಲ... ಇಡೀ ಕಶೀಪಟ್ಟಣವೇ ಪಾವಿತ್ರ್ಯ; ಅಪಾವಿತ್ರ್ಯಗಳ ಸಂಕೇತವಾಗಿ ಶಾಮನ ಬದುಕಿನಲ್ಲಿ ನಿಂತುಬಿಟ್ತಿತೇನೋ! ಆತ ಹಿಂದೆಂದೋ ಮಣಿಕರ್ಣಿಕಾ
ಋತುಪರ್ಣಿಕಾ ಎಂದೊಂದು ಸುಂದರ ಭಾವಗೀತಾತ್ಮಕ ಪದ್ಯ ಬರೆದಂತೆ ನೆನಪು. ಆ ಪದ್ಯದಲ್ಲಿ ಹೆಮ್ಡತಿ ಪಾರ್ವತಿಯ ಕರ್ಣದ ಮಣಿಖಚಿತ ಓಲೆಯನ್ನು ಗಂಗಾ ನದಿಯ ದಡದುದ್ದಕ್ಕೂ ಹುಡುಕಾಡುವ ಪರಮ ಶಿವನ ಹೃದಯದ ತುಮುಲವನ್ನು ಭಾವಪೂರ್ಣವಾಗಿ ಚಿತ್ರಿಸಿದಂತೆ ನೆನಪು. ಅಭಿನಂದನಾಗ್ರಂಥದಂಥೀ ಕಾದಂಬರೀ ಪುಣ್ಯಕಥನ ಶ್ರವಣ ವಿನೋದಗಳಿಗೆ ಆ ಶಿವನ ಮೂರು ಮತ್ತು ನಾಲ್ಕು ಮಾತ್ರೆಯ ನಾಲ್ಕು ಗಣಗಳುಳ್ಳ ಚತುಷ್ಪದಿಯ ಆ ಕವಿತೆಯನ್ನು ಸೇರಿಸಿ ಇದರ ಸೊಬಗನ್ನು ಹೆಚ್ಚಿಸಬೇಕೆಂದರೆ ಅದು ಸದ್ಯಕ್ಕೆ ಸಿಗುವ ಲಕ್ಷಣವಿಲ್ಲ. ಅವೆಲ್ಲಕ್ಕೂ ಮಿಗಿಲಾಗಿ ಅವನ ಬದುಕೊಂದು ಅದ್ಭುತ ಖಂಡಕಾವ್ಯವಾಗಿರುವಾಗ ಅವನ್ನೆಲ್ಲ ಯಾಕೆ ಸೇರಿಸುವುದ?
ಕುಂತರೂ, ನಿಂತರೂ, ಮಲಗಿದರೂ ಏಕಪ್ರಕಾರವಾಗಿ ಕಾಡುತ್ತಿರುವ ಶಾಮಣ್ಣನೇ ನನ್ನನ್ನು ನಿನ್ನ ಬಂಧನದಿಂದ ಏಮ್ದು ಬಿಡುಗಡೆಗೊಳಿಸುವೆಯೋ ಮಾರಾಯಾ? ನಾನೇ ನಿನ್ನ ಪಾತ್ರಕ್ಕೆ ಹೊಂದುವುದಾಗಿ ಎರಂಗಿ ಶಿವಣ್ಣನ್ವರು ಹೇಳಿದ ಕ್ಶಣದಿಮ್ದ ಥೇಟ್ ನಿನ್ನಂತೆ ವರ್ತಿಸುವ ಬಯಕೆ ಹುಟ್ಟುತ್ತಿರುವುದಲ್ಲಾ! ಈ ಕೂಡಲೆ ಕೊತ್ತಲಿಗಿಗೆಗೆ ಹೋಗಿ ರಾಖ್
ಏಶ ಕುಮಾರನನ್ನು ಕಂಡು ಅನಸೂಯಳಮ್ಮನ ಮನೆಯಲ್ಲಿ ಸಾಕ್ಷಾತ್ಕರಿಸಿದ ಕಾಂಚನಾ ಎಂಬ ದಿವ್ಯಮೂರ್ತಿಯ ವಾರಸುದಾರನಾಗಿ ಬಿಡುವ ಉತ್ಕಟೇಚ್ಛೆ ಮುನ್ನುಗ್ಗಿ ಬರುತ್ತಿರುವುದಲ್ಲಾ! ಭೌತಿಕ, ಆದಿಭೌತಿಕ ಜಗತ್ತನ್ನು ವಿಶ್ಲೇಷಿಸುತ್ತಲೇ ನಿನ್ನಂತೆ ನಾನು ನನ್ನದೇ ಆದ ನಿರ್ಮಾಣವಾದ, ಯಾವ ಸ್ಮೃತಿ ಸಂಹಿತೆ ಲೆಕ್ಕಾಚಾರಗಳಿಗೂ ನಿಲುಕದ ಜಗತ್ತನ್ನು ಸೃಷಿಸಿಕೊಂಡು ಅದರಲ್ಲಿ ನಾನೇ ನಾನಾಗಿ ವಾಸಿಸುವ


೪೧೨
ಬಯಕೆ ಹುಟ್ಟುತ್ತಿರುವುದಲ್ಲಾ! ಶಾಮಣ್ಣ ನಿನ್ನನ್ನು ನಾನು ದೂರ ಇಡುವುದಕ್ಕಾಗಲೀ ಹತ್ತಿರವಿಟ್ಟುಕೊಳ್ಳುವುದಕ್ಕಾಗಲೀ; ಒಳಗೆ ಈಟ್ಟುಕೊಳ್ಳುವುದಕ್ಕಾಗಳೀ, ಹೊರಗೆ ಇಟ್ಟುಕೊಳ್ಳುವದಕ್ಕಾಗಲೀ ಆಗ್ತಾ ಇಲ್ಲ... ಏನು ಮಾಆಡಲಿ ಗೆಳೆಯಾ! ನನಗೆ ನಿನ್ನಂತೆ ಪಾತ್ರ ವಹಿಸಿ ಯಶಸ್ವಿಯಾಗುದು ಸಾಧ್ಯವೇ?
ಹೆಂಡತಿ ಅನ್ನಪೂರ್ಣ ಮೆಲ್ಲಗೆ ಟೇಬಲ್ ಕಡೆ ನೋಡುತ್ತಿರುವಂತೆ, ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡಂತೆ; ಮೆಲ್ಲಗೆ ಹಿತ್ತಿಲು ಪ್ರವೇಶಿಸಿದಂತೆ, ಅದರ ಮೇಲೆ ಎಣ್ಣೆಸುರಿಯಲು ಚಿಮಣಿ ಬುದ್ದಿಯನ್ನು ಕೈಲಿ ಹಿಡಿದುಕೊಂದಮ್ತ್ರ್...
ಅಯ್ಯೋ ಕನಸಲ್ಲ! ಇದು ಘೋರ ವಾಸ್ತವ! ಕೋಣೆಯ ಮೂಲೆಯಲ್ಲಿ ಅರೆಮಂಪರಿನಲ್ಲಿದ್ದು ಮಗ್ಗುಲು ಬದಲಾಯಿಸುತ್ತ ಮಲಗಿದ್ದವನು ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ಎದ್ದು ಒಂದೇ ಏಟಿಗೆ ಓಡಿ ಹಿತ್ತಿಲು ತಲುಪಿ ಆಕೆಯ ಕೈಲಿದ್ದ ಚಿಮಣಿ ಬುಡ್ಡಿಯನ್ನು ಕಸಿದು ಕಣಗಿಲೆ ಗಿಡದ ಬುಡಕ್ಕೆ ಎಸೆದು (ಈಹಿಂದೆ ಬಾಡಿಗೆ ಇದ್ದ ಮಂದಲಾಫೀಸಿನ ಪ್ರ.ದು.ಗು. ಕುರಕುಂದಿ ಕರಿಯಪ್ಪನ... ಮಠಸ್ತರ ಮನೆಯಲ್ಲಿ ನೀಚ ಜಾತಿಯವರು ವಾಸಿಸಬಾರದು. ಅದರಿಂದ ಒಳ್ಳೆಯದಾಗುವುದಿಲ್ಲ... ಆಗಬಾರದ್ದು ಆಗುತ್ತದೆಅನುಭವಿಸು - ಹೆಂಡತಿ ಪ್ರಮಿಳೆಯು ಹೆತ್ತಿದ್ದಂಥ ಎರಡು ದಿನದ ವಯಸ್ಸಿನ ಕಂದಮ್ಮನು ಅಪಸ್ಮಾರ ರೋಗಕ್ಕೆ ತುತ್ತಾಗಲು ... ಅದನ್ನು ಆ ಮಧ್ಯೆ ರಾತ್ರಿಯಲ್ಲಿ ಸುಡುಗಾಡಿಗೆ ಒಯ್ದು ಮಣ್ಣುಮಾಡುವುದಾಗಲೀ... ಬೆಳಗಾಗುವವರೆಗೆ ಆ ಪುಟ್ಟ ಕಏಬರವನ್ನು ಮುಂದಿಟ್ಟುಕೊಂಡು ಕಾಯುತ್ತ ಕೂಡ್ರುವುದಾಗಲೀ ಯ್ಯಕೆ ಅಂತ ಹಿತ್ತಲ ಆ ಕಡೆ ಅದನ್ನು ನೆಲದಲ್ಲಿ ಹೂತು ಅದರ ಮೇಲೆ ಕಣಗಿಲೆ ಅಂಟನ್ನು ಹಚ್ಚಿಬಿಟ್ಟಿದ್ದರು.ಅದು ದಿನಕ್ಕೊಂದು ಕವಲು ಕಿತ್ತು ಇದೀ ಹಿತ್ತಲಿಗೆ ಕೊಡೆ ಬಿಚ್ಚಿದಂತೆ ಸೊಗಸಾಗಿ ಬೆಳೆದು ಹರಡಿತ್ತು. ಇಂಥದೊಂದು ಅನುಮಾನ ಎಂಥವರಿಗೂ ಕಾಡುತ್ತಿದ್ದುದರಿಂದ ಆ ಗಿಡದಿಂದ ಕಣಗಿಲೆ ಹೂವನ್ನು ಯಾರೂ ಕೀಳುತ್ತಿರಲಿಲ್ಲ. ಹೀಗಾಗಿ ಬಿದ್ದ ಹೂವುಗಳೇ ಆ ಗಿಡಕ್ಕೆ ಅಪರೂಪದ ಗೊಬ್ಬರವಾಗಿದ್ದವು) ಬಿಸಿಲಿಗೆಸೆದ ಹಸು ಮಗುವು ಯಾವ ಪ್ರಕಾರವಾಗಿ ಅರಣ್ಯ ರೋದನ ಮಾಡುವುದೋ ಹಾಗೆ ಪಟಪಟ ಸದ್ದು ಮಾಡುತ್ತ ಹಿಂಗೈ ಮುಂಗೈ ಬಯಲಿಗೆ ಚಾಚುತ್ತಿದ್ದ ಹಸ್ತಪ್ರತಿಯ ಹಾಳೆಗಳ ಮೇಲೆರಗಿಗಕ್ಕನೆ ಎದೆಗವುಚಿಕೊಂಡೆನು.
ಅನ್ನಪೂರ್ಣ ಅದನ್ನು ನನ್ನಿಂದ ಕಸಿದುಕೊಳ್ಳುವ ಬೆಂಕಿಗಾಹುತಿಮಾಡುವ ಪ್ರಯತ್ನ ಮಾಡಿದಳು. ಸಂಸಾರ ಸಾಗರದಲ್ಲಿ ಅಪರುಪಕ್ಕೆ ನದಿಮುಖಜ ಭೂಮಿ ಸೀಳಿನ ಪ್ರವಾಹದ್ ವಿರುದ್ಧ ಈಜುವ ಪ್ರಯತ್ನ ಮಾಡಿ "ಹೀಎ ಮಾಡಿದೀ ಅಂದ್ರೆ ತೊಟ್ಟಿಲಲ್ಲಿ ಮುಗುಳ್ನಗುತ್ತಿರುವ ಮೂರನೇ ಮಗನ ಮೇಲಾಎ" ಎಂದೇ ಅಥವಾ ಹಂಗನ್ನಿಸಿತು ನಿಘೂಡ ಶಕ್ತಿ ನನ್ನಿಂದ.
ಅದನ್ನು ಕೇಳಿ ದಡಬಡನೆ ಪಡಸಾಲೆ ಕಡೆಗೋಡಿ ತೊಟ್ಟಿಲಲ್ಲಿ ಕಮ್ಮಗೆ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಮಗ್ವನ್ನು ಎತ್ತಿಕೊಳ್ಳಲು ಆತ ಕಿಟಾರನೆ ಕಿರುಚಿ ತಾಯಿಯ ಇಂಟರ್ಫಿಯರೆನ್ಸನ್ನು ಪ್ರತಿಭಟಿಸಿದನು. ಆತ ಎಷ್ಟಿದ್ದರೂ ಅವರ ಮನೆ ದೇವರಾದ ನಿರ್ವಾಣಗಿರಿಯಲ್ಲಿ ಪರಮ ನಿರ್ವಾಣ ಹೊಂದಿದಂಥ ಗುರುಸಾರ್ವಭೌಮ ನಿರ್ವಾಣೆಶ್ವರರ ಆಶೀರ್ವಾದದ ಬಲದಿಂದ ಹುಟ್ಟಿರುವಂಥವನು. ಹೆಸರಿಡುವ ಪೈಕಿ ಆಕೆಗೂ ನನಗೂ ತಿಂಗಳ ಪರ್ಯಂತ ಜಗಳ ನಡೆದು ಆತನನ್ನು ನಾನು ಪ್ರವರ ಎಂತಲೂ. ಆಕೆ ನಿರ್ವಾಣಸ್ವಾಮಿ ಎಂತಲೂ ಕರೆಯುವ ಕುರಿತು
-

೪೧೩
ಚರಿತ್ರಾತ್ಮಕ ಒಪ್ಪಂದವಾಗಿರುವುದು.
"ನಮ್ಮ ನಿರ್ವಾಣಸ್ವಾಮಿ ಮೇಲೆ ಆಣೆ ಇಟ್ಟ್ರ ಸರಿಹೋಯ್ತು... ಇಲ್ಲಾಂದ್ರೆ ಶಾಮಣ್ಣನ ಕಥೀನ ಎಂದೋ ಸುಟ್ಟು ಬೂದಿ ಮಾಡಿಬಿಡ್ತಿದ್ದೆ" ಎಂದು ಸಮಾಧಾನಕರವಾದ ಹಂತಕ್ಕೆ ಬಂದಳು.
"ಇಡ್ದೆ ಏನು ಮಾಡ್ಲಿ ಕಣೇ... ಹೊಟ್ಟೇಲಿ ಹುಟ್ಟಿದ ಮಗನ ಮೇಲೆ ಆಣೆ ಮಾಡೋದು ನನಗೆ ಅನಿವಾರ್ಯವಾಯ್ತು. ನಿನ್ಗೆ ನಿನ್ ಮಗ ಹೇಗೋ ಹಾಗೇನೇ ಇದು ನನಗು ಹೆರೋದ್ಕೆ ನೀನು ಕೇವಲ ಇನ್ನೂರಾಎಂಬತ್ತೈದಿನ ತಗೊಂಡಿರಬೌದು. ಆದ್ರೆ ಈ ಕಾದಂಬರಿಯ ಭ್ರೂಣ ನನ್ನ ತಳೆಲಿ ಬೆಳೆಯಲಿಕ್ಕೆ ಹತ್ತಿ ಐದು ವರ್ಷದ ಮೇಲಾಯ್ತು..." ಎಂದು ಸಮಾಧಾನ ಚಿತ್ತದಿಂದ ಹೇಳಿದೆ.
"ಅಲ್ರಿ ಬರ್‍ಕೊಳ್ಳಿ... ನಿಮ್ಮ್ ಕೈ ನಿಮ್ ಮಾತು... ನನ್ ಗಂಟೇನು ಹೋಗೋದೈತಿ ಇದ್ರಲ್ಲಿ/\... ಅಲ್ಲಾ... ಸತ್ತಮೇಲೆ ಇಷ್ಟೊಂದು ನಿಮ್ ತಲೆಕೆಡೆಸಿರೋ ಶಾಮಣ್ಣ ... ಬದುಕಿದ್ದಾಗ ನಿಮಗಾವ ಮೋಡಿ ಮಾಡಿರಬೌದಂತೀನಿ!"
"ಯಾಕ ಹಂಗಂತೀ?"
"ಮತ್ತಿನ್ನೇನು? ನಿಮ್ಗೆ ಬಣ್ಣ ಹಚ್ಚಿಸ್ಲಿಕ್ಕೆ ಹೋಟಾನಲ್ಲ... ನಾಟಕ ಮಾಡೋದಿದ್ರೆ ಮಾಡ್ರಿ ಅದ್ಕ್
ಏನು ಬರ ಬಂದೈತಿ ನಿಮ್ ಕಣ್ಣ್ಡದಾಗ... ಲಂಕೇಶರ್ದು ಸಂಕ್ರಾಂತಿ ಮಾಡ್ರಿ, ಜೊಷಿಯವರ್ದು ಸತ್ತೋರ ನೆರಳು ಮಾಡ್ರಿ... ಇದ್ಕೆ ನಾನೇನು ಬೆಡಂತೀನೇನು! ಆದ್ರೆ ಹೋಗೀ, ಹೋಗಿ ಶಾಮಣ್ಣನ ಬಗ್ಗೆ ನಾಟಕ ಬರೆಯೊದಲ್ದೆ ಶಾಮಣ್ಣನ ಪಾರ್ಟು ಮಾಡಬೇಕಂತಿದೀರಲ್ಲ... ಆ ಬಣ್ಣದ ಮಂದಿಗೆ ಬಣ್ಣ ಒಂದು ಬಿಟ್ರೆ ಬೇರೆ ಪ್ರಪಂಚ ಗೊತ್ತಿದ್ದಂಗಿಲ್ಲ ಬಿಡ್ರಿ...
"ಯಾಕ ಹಂಗಂತೀ?"
"ಮತ್ತಿನ್ನೇನು? ಆ ಬಣ್ಣ ನಂಬ್ಕೊಂಡು ಬದುಕೋ ಶಿವಣ್ಣ ನಿಮ್ಗೆ ನಾಟಕ ಬರೀರಿ ಅಂತ ಹೇಳಿದ್ದೂ ಅಲ್ದೆ... ಆ ಕುಡುಕ, ಲಂಪಟ, ವ್ಯಭಿಚಾರಿ, ಜೂಜುಕೋರ ಶಾಮಣ್ಣನ ಪಾರ್ಟು ನಿಮ್ ಕೈಲಿ ಮಾಡೊಸ್ಲಿಕ್ಕೆ ಪುಸಲಾಯಿಸಿದ್ನಲ್ಲ. ಇದನ್ ಕೇಳಿ ನನ್ ಒಡಲು ಕುಯ್ದು ಹೋತು ನೋಡ್ರಿ... ಇಂಥೋರ್ನ ಮನೆಗೆ ಕರ್ಕೊಂಡು ಬಂದು ಬ್ ಗರಿಗೆ ಮಾಡಿದಂಗೆ ಸತ್ಕಾರ ಮಾಡ್ತೀರಲ್ಲ... ನಿಮ್ಗೆ ಬುದ್ಧಿ ಇಲ್ಲ ಅಷ್ಟೆ."
"ಆಯ್ತು ಮಾರಾಯ್ತಿ ಆಯ್ತು."
"ಈಕಾದಂಬರೀನ ನೀವು ಬರೆಯ್ಯೋಕೆ ಶುರು ಮಾಡಿದ್ಮೇಲೆ ಹುಲಿಯಂತಿದ್ದ ನೀವು ಇಲಿಯಂಗಾಗಿ ಬಿಟ್ಟಿದ್ದೀರಿ... ಇನ್ನೊಂದು ಸಾರಿ ಇಂಥೋರ್ ಬಗ್ಗೆ ಬರ್‍ದು ಹೆಸ್ರು ಕೆಡಿಸ್ಕೋಬೇಡಿ. ಈಗ ಅನುಭೋಗಿಸ್ತಿರೋದೇ ಸಾಕು. ಗಡಗಡ ಬರ್‍ದು ಮುಗಿಸಿ ಎಣ್ಣೆ ಸ್ನಾನ ಮಾಡಿಬಿಡ್ರಿ ಅಷ್ಟೆ" ಎಂದು ಕ್ರಮೇಣ ತಣ್ಣಗಾಗಿ ತಣ್ಣನೆ ನದಿಯಂತೆ ಹರಿಯತೊಡಗಿದಳು.
"ಯಾಕಾಗಬಾರದು ಕಾಂತೆ" ಎಂದು ನಾಟಕೀಯವಾಗಿ ನುಡಿಯಲು ಆಕೆಯ ಸಂತೋಶದ ಕಟ್ಟೊಡೆದು ಗೊಳ್ಳನೆ ನಗುತ್ತ "ಇಂಥಾದ್ರಲ್ಲಿ ಏನೂ ಕಡಿಮೆ ಇಲ್ಲ ನೀವು" ಎಂದು ನನ್ನ ಮೂಗು ಹಿಡಿದು ಜಗ್ಗಿದಳು...
ಅಂತೂ ದೊಡ್ಡದೊಂದು ಪ್ರಮಾದ ದೂರವಾಯಿತೆಂದು ನೆಮ್ಮಡಿಯ ಉಸಿರುಬಿಟ್ಟೆ

*
*
*



೪೧೪
ಕಾದಂಬರಿಯ ಹಸ್ತ ಪ್ರತಿಯನ್ನು ಎದುರಿಗೆ ಬಿಚ್ಚಿಕೊಂದು ಕೂತೆ. ಮುಂಚೂಣಿಗೆ ಬಂದಿದ್ದವು. ಮುಂಚೂನಿಯಲ್ಲಿದ್ದ ಪಾತ್ರಗಳು ನೇಪಥ್ಯಕ್ಕೆ ಸರಿಯುವಪ್ರಯತ್ನ ಮಾಅತೊಡಗಿದವು. ಶಾಸ್ತ್ರಿಗಳ ವೇದ ಜ್ಞಾನ ವ್ಯಾಮೋಹದಿಂದಾಗಿ ರಾಖೇಶ ಎಂಬ ಪಾತ್ರವು ಪರಮಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಸ್ಥಾನವನ್ನು ಆಕ್ರಮಿಸುವ ಹುನ್ನಾರು ನಡೆಸಿದ್ದರೆ ಅನಂತಪುರದಲ್ಲಿ ಇಂಗ್ಲೀಷು ವಿದ್ಯೆ ವ್ಯಾಸಂಗ ಮಾಡುತ್ತಿರುವ ಅಶ್ವಥ್ ನಾರಾಯಣ, ಶಿವರಾಮಶಾಸ್ತ್ರಿ ಎಂಬ ಮಕ್ಕಳ ಮೇಲಿನ ವ್ಯಾಮೋಹದಿಂದಾಗಿ ಕೊತ್ತಲಗಿಯ ಅನಸೂಯಮ್ಮ ಎಂಬ ಪಾತ್ರವು ವರಲಕ್ಷ್ಮಿ ಎಂಬ ಪಾತ್ರವನ್ನು ಆಕ್ರಮಿಸುವ ಸಂಚು ನಡೆಸಿತ್ತು. ಅಮೇಧ್ಯ ಸೇವಿಸಿ ಗಟ್ಟಿಮುಟ್ಟಾಗಿರುವ ಇವರ ಮುಂದೆ ಸಾತ್ವಿಕ ಆಹಾರಭ್ಯಾಸಿಗಳಾದ ಅವರು ತಮಗೇಕೀ ಹೋರಾಟದ ಉಸಾಬರಿ ಎಂದು ದಾರಿಬಿಡತೊಡಗಿದ್ದವು. ಗುಲಾಂ ನಬಿ ಎಂಬುದು ಮುಖ್ಯಮಂತ್ರಿ ಜಾಗದ ಕಡೆ ನಡೆಯತೊಡಗಿದ್ದರೆ, ಆರ್ ಎ ಬ್ರಾಂಡ್ ತಯಾರಿಕಾ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀಮತಿ ಅನಸೂಯಾ ರಘುರಾಂ ಎಂಬ ಪಾತ್ರವು ಯುನೈಟೆಡ್ ಕಿಂಗ್‌ಡಂನ ಪ್ರಸಿದ್ಧ ಇನ್‌ಸ್ತಾಂಟ್‌ಫುಡ್ ಕಂಪನಿಯ ಜೊಟೆ (ಅದರ ಮಾಲೀಕರಾದ ಲಕ್ಕೂಭಾಯಿ ಪಾಠಕ್‌ರವರು ಕಳೆದ ವರ್ಷವಷ್ಟೇ ನಿಧನಹೊಂದಿದರು) ಪೈಪೋಟಿ ಆರಂಭಿಸಿತ್ತು.
ರಘುರಾಂ ಎಂಬ ಪಾತ್ರವು ‘ಇನ್‌ಸ್ತಾಂಟ್‌ಫುಡ್’ನಿರ್ಮಾಣದಲ್ಲಿ ಏಶ್ಯಾ ಖಂಡದ ಗಿಡ ಮೂಲಿಕೆಗಳ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಮಾಡಲು ಕಳೆದ ವಾವಷ್ಟೆ ಇಂಗ್ಲೆಂಡಿನ "ರಾಯಲ್ ಸೊಸೈಟಿ ಆಫ್ ಇನ್‌ಸ್ಟಾಂಟ್ ಫುಡ್ಸ್" ಎಂಬ ಸಂಸ್ಥೆಗೆ ಹೋಗಿದ್ದು ಅಲ್ಲಿ ಶಾಮಣ್ಣನ ಪ್ರೇತಾತ್ಮವನ್ನು ಹುಡುಕುವಸನ್ನಹ ನಡೆಸಿತ್ತು. ಅದಲ್ಲದೆ ನೂರಾರು ವರ್ಷಗಳಷ್ಟು ಹಿಂದೆಯೇ ಈಸ್ಟ್ ಇಂಡಿಯಾ ಕಂಪೆನಿಯು ವಶಪಡಿಸಿಕೊಂಡಿರುವುದೆನ್ನಲಾದ ಚರಾಸ್ತಿಯನ್ನು ವಶಪಡಿಸಿಕೊಳ್ಳಲು ರಾಯಲ್ ಕೋರ್ಟ್‌ನಲ್ಲಿ ದಾವೆ ಹೂಡಿ ವರ್ಷ ಆರು ತಿಂಗಳುಗಳನ್ನು ಜಲ ಪ್ರಯಾಣದಲ್ಲೇ ಕಳೆದು ಹಲವು ವರ್ಷಗಳ ನಂತರ ತನ್ನ ವಿರುದ್ಧ ತೀರ್ಪು ಬರಲಾಗಿ ಎದೆಯೊಡೆದು ಸತ್ತ ಕೊಡಗಿನ ಪದಚ್ಯುತ ಮಹಾರಾಜನಾದ ಚಿಕ್ಕವೀರರಾಜೇಂದ್ರನು ತಮ್ಮ ತಯಾರಿಕಾ ಸಂಸ್ಥೆಯ ಆಹಾರ ಸೇವಿಸಿದ್ದರೆ ದೀರ್ಘಕಾಲ ಬದುಕುತ್ತಿದ್ದ ಎಂಬ ವಿಷಯವನ್ನು ರಘುರಾಂ ತನ್ನ ಭಾಷಣದಲ್ಲಿ ಸೇರಿಸಿಕೊಂಡಿದ್ದುದು ತಿಳಿದದ್ದು ಇತ್ತೀಚೆಗೆ. ಅವನು ಶಾಮಣ್ಣನಿಗೂ, ಚಿಕ್ಕವೀರರಾಜೇಂದ್ರನಿಗೂ ಪರಸ್ಪರ ಸಂಬಂಧ ಕಲ್ಪಿಸಿದ್ದಲ್ಲಿ ವ್ಯಾಪಕವಾಗಿ ಚರ್ಚಿಸಬಹುದಿತ್ತು. (ನಿಘೂಡ ವ್ಯಕ್ತಿಯಾಗಿ ಬಂದು ಕೌಟುಂಬಿಕ ತಳಮಳಕ್ಕೆ ಕಾರಣನಾದ ಶಾಮಾಶಾಸ್ತ್ರಿಯನ್ನು ರಘುರಾಮ ಎಂಬ ಸ್ವಾತಂತ್ಯೋತ್ತರೋತ್ತರ ಬಂಡವಾಳ ಶಾಹಿಯು ಚಿಕ್ಕವೀರರಾಜೇಂದ್ರನಿಗೆ ಹೋಲಿಸುವ ಕೆಲಸ ಮಾಡಲಾರ). ಅದರ ಜೊತೆಗೆ ತನ್ನ ಪತ್ನಿಯಾದ ಅನಸೂಯಾರವರನ್ನು ರಾಜ್ಯಸಭೆಗೆ ನಾಮಕರಣ ಸದಸ್ಯೆಯನ್ನಾಗಿ ಮಾಡಿಸುವ ಉದ್ದೇಶವೂ ಅವನ ಇಂಗ್ಲೆಂಡಿನ ಪ್ರಿನ್ಸ್ ಚಾರ್ಲಸ್ ಕಡೆಯಿಂದ ಭಾರತದ ಪ್ರಧಾನಿಗಳಿಗೆ ಫೋನ್ ಮಾಡಿಸುವ ಉದ್ದೇಶವೂ ವನ ಇಂಗ್ಲೆಂಡು ಪ್ರವಾಸದ ವಿವಿಧೋದ್ದೇಶಗಳಲ್ಲಿ ಒಂದು ಮತ್ತು ಪ್ರಮುಖವಾದುದು. ತಂತಮ್ಮ ಪಾರ್ಟಿಗಳಿಗೆ ಅವನಿಂದ ಸಾಕಷ್ಟು ಹಣ ಪಡೆದಿರುವ ರಾಜ್ಯದ ಮತ್ತು ರಾಷ್ಟ್ರದ ಪ್ರಮುಖ ರಾಜಕಾರಣಿಗಳೂ; ಕನ್ನಡ ಮತ್ತು ಸಂಸ್ಕೃತಿ ಶಾಖೆಯೊಂದಿಗೆ ಮಹಿಳಾ ಮಕ್ಕಳ ಶಾಖೆಯನ್ನುಸ್ವತಮ್ತ್ರವಾಗಿ ನಿರ್ವಹಿಸುತ್ತಿರುವ ಶ್ರೀಮತಿ ಜಲಜಾಕ್ಷಿ ಮಸಾಲೆಯವರೂ (ಕಳೆದ ವರ್ಷವಷ್ಟೇ ರಾಷ್ಟ್ರೀಯ ಕಬಡ್ಡಿ


೪೧೫
ಅಸೋಸಿಯೇಷನ್‌ರವರು ಇವರನ್ನು ಮಧ್ಯಪ್ರದೇಶದ ಛೋಟಾ ನಾಗಪುರಕ್ಕೆ ಬರಮಾಡಿಕೊಂಡು ಲೇಡಿ ತೈಗರ್ ಎಂಬ ಬಿರುದು ಕೊಟ್ಟಿರುವರು. ಅಲ್ಲದೆ ಮುಖ್ಯಮಂತ್ರಿಯವರೂ ಸಚಿವ ಸಮ್ಪುಟ ಸಭೆಯಲ್ಲಿ ಇವರನ್ನು ಕರ್ನಾಟಕದ ಜೋನ್ ಆಫ್ ಆರ್ಕ್ ಎಂದು ಕರೆದುದೂ ಉಂಟು. ಇದರಿಂದಾಗಿ ಇಂಗ್ಲಿಷ್ ಮತ್ತು ಪ್ರಾಂತೀಯ ಭಾಷೆಗಳ ನಿಯತಕಾಲಿಕೆಗಳು ಆಕೆ ಕುರಿತು ಯಥೇಚ್ಛವಾಗಿ ಬಳಸುತ್ತಿರುವುವು) ಪದ್ಮಶ್ರೀ ಪ್ರಶಸ್ತಿ ವಿಜೇತರೂ, ಪತ್ರಿಕಾ ಅಕಾಡೆಮಿಯ ವಿಶೇಷ ಗೌರವ ಸದಸ್ಯರೂ ಆದಂಥ ಡಾ. ಕಮಲಾಕರ್‌ರವರೂ ಶ್ರೀಮತಿ ಅನಸೂಯಾ ರಘುರಾಮ್ ರವರನ್ನು ರಾಜ್ಯಸಭೆಗೆ ಕಳಿಸಲು ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವರು.
ಈ ಸುದ್ದಿ ಏನಾದರೂ ಸತಿರೋ ಶಾಮಣ್ಣನಿಗೆ ಗೊತ್ತಾದಲ್ಲಿ ಅವನು ಮತ್ತಷ್ಟು ಸಾಯುವನೆಂಬುದರಲ್ಲಿ ಸಂಶಯವಿಲ್ಲ ಎಂದೆನಿಸಿತು. ಸ್ವರ ಬಗ್ಗೆ ಬರೆಯೋದಾದರೆ ಖಂಡಿತ ನನ್ನ ಬಗ್ಗೆ ಬರೆಯಲೇಬೇಡವೆಂದು ಅವನು ಕಡ್ಡಿ ಮುರಿದಂತೆ ಹೇಳಿಬಿಡುವಷ್ಟು ನಿಷ್ಠುರವಾದಿಯು. ಆಗಲೇ ಒಂದು ವ್ಯವಸ್ಥೆಯಲ್ಲಿದ್ದು ಪಳಗಿದ್ದ ಅವನು ಇನ್ನೊಂದು ವ್ಯವಸ್ಠೆಯನ್ನು ಪ್ರವೇಶಿಸುವುದು ಆಗ ಕಷ್ಟದ ಕೆಲಸವಾಗಿರಲಿಲ್ಲಎಂಬುದು ಅಷ್ಟೇ ಸತ್ಯ.ತುಟಿ ಮೀರಿ ಕೈಮೀರಿ ಬರೆದುಕೊಟ್ಟಲ್ಲಿ ಅವನು ಹೇಳದೆ ಕೇಳದೆ ಕಾದಂಬರಿಯಿಮ್ದ ಯಾವ ಕ್ಷಣದಲ್ಲಾದರೂ ನಿರ್ಗಮಿಸಿಬಿಡಬಹುದು. ಅವನು ಆಗಮಿಸುವುದಾಗಲೀ, ನಿರ್ಗಮಿಸುವುದಾಗಲೀ, ಅವನಿಗೆ ಚಿಟಿಕೆ ಹೊಡೆವಷ್ಟು ಸುಲಭ. ಭೋರ್ಗರೆಯುತ್ತ ಹರಿವ ನದಿಯೊಂದು ಮಾರ್ಗಮಧ್ಯದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ ತನ್ನ ಪಾಡೊಗೆ ತಾನು ನಡೆದಿರುವ ಭಗೀರಥನಂಥ ಪಥಿಕನ ಮನಸ್ಸಿಗೆ ಹೇಗಾಗಬೇಡ! ಅದೇ ಪರಿಸ್ಥಿತಿ ನನಗೂ ನನ್ನ ಕಾದಂಬರಿಗೂ ಒದಗದೆ ಇರದು. ಪ್ರೇತಲೋಕದ ಸಂಚಾರೀ ಭಾವವಾಗಿದ್ದ ಅವನು ಕಾದಮ್ಬರಿಯ ಹಸ್ತಪ್ರತಿಯನ್ನೇ ವಿದುರಾಶ್ವತ್ಥವೆಂದು ಭಾವಿಸಿ ಹಲವು ದಿನಗಳಿಂದ ಠಿಕಾಣಿ ಹೂಡಿರುವನು. ಲೇಖಕನ ಬಗೆಗಿನ ನಂಬಿಕೆ ಅಪನಂಬಿಕೆಗಳ ನಡುವೆ ಹೊಯ್ದಾಡುತ್ತಿರುವನು. ತಾನೊಂದು ಕೇಂದ್ರ ಪಾತ್ರವಾಗಿ ಕಾದಂಬಯೊಳಗೆ ಬೆಳೆಯುತ್ತಿರುವ ಪರಿ ಕುರಿತು ಕುತೋಹಲ ತಾಳಿರುವನು. ತನ್ನ ತಾತನವರಾದ ಪರಮೇಶ್ವರ ಶಾಸ್ತ್ರಿಗಳ ಉಯಿಲಿನ ವಾಸನೆ ಎನಾದರೂ ಅವನ ಮೂಗಿಗೆಟಕಿದರೆ ಅದನ್ನು ಅವನು ಹೇಗೆ ಪರಿಭಾವಿಸುವನೆಂಬುದೇ ನಿಗೂಢ! ಕುಂದಿದ ಜೀರ್ಣಶಕ್ತಿಯನ್ನು ಉತ್ತಮಪಡಿಸಿಕೊಳ್ಳಲಿಕ್ಕಾಗಿ, ಅಶ್ವಿನಿ ದೇವತೆಗಳ ಸಲಹೆಯಂತೆ ಅಗ್ನಿದೇವನು ಇಂದ್ರನ ಪ್ರಸಿದ್ಧ ಉದ್ಯಾನಗಳಲ್ಲಿ ಒಂದಾದದ್ದೂ; ಸರಸ್ವತೀ ಮತ್ತು ವೃಷದ್ವತೀ ನದಿಗಳಿಗೆ ಪೂರ್ವದಲ್ಲಿರುವಂಥಾದ್ದು ಉತ್ತಮ ಗಿಡಮೂಲಿಕೆಗಳಿಗೆ ಹೆಸರಾದಂಥದ್ದೂ ಆದಂಥ ಖಾಣ್ಡವ ವನವನ್ನು ದಹಿಸಿದೋಪಾದಿಯಲ್ಲಿ ಶಾಮನೂ ಒಂದು ದಿನ ಕುಡಿದ ಅಮಲಿನಲ್ಲಿ ತನ್ನ ತಾತನವರು ಸಂಗ್ರಹಿಸಿಟ್ಟಿದ್ದ ಅಮೂಲ್ಯ ತಾಲೆಗರಿ ಕಟ್ಟುಗಳನ್ನು ಒಂದೊಂದಾಗಿ ಬೆ
ಕಿಗೆ ಎಸೆಯತೊಡಗಿದ್ದು ಕಂಡು ಇಡೀ ಊರಿಗೆ ಊರೇ ಹ್ಹೋ ಹ್ಹೋ ಹ್ಹಾ ಹ್ಹಾ ಎಂದು ಉದ್ಗರಿಸಿತು. ಅಲುಮೇಲಮ್ಮೆಂಬಜ್ಜಿಯೂ; ವರಲಕ್ಷ್ಮಿ ಎಂಬ ಸಾಧ್ವಿಯೂ ತಡೆಯಲು ಹೋಗಿ ಆಚೆ ಕಡಿಕೊಬ್ಬರೂ, ಈಚೆಕಡಿಕೊಬ್ಬರೂ ಬಿದ್ದರು. ಸೀಳಿಬಿಸುಟರೂ ಮತ್ತೆದ್ದು ಬಂದ ಜರಾಸಂಧನ ದೇಹದ ಹೋಳುಗಳಂತೆ ಮತ್ತೆ ತಡೆಯುವ ಪ್ರಯತ್ನ ಮಾಡಿದರು; "ನಾನು ಪರಮನಾಸ್ತಿಕ ಕಣ್ರೀ... ಆ ಮುದುಕನ ಚಿತೇಲಿ ಇವ್ನೆಲ್ಲ ಹಾಕಿಬಿಟ್ಟಿದ್ರೆ ಚೆನ್ನಾಗಿರ್‍ತಿತ್ತು... ಇವ್ನ ಮುಂದಿಟ್ಕೊಂಡು ನನ್ನ ಆಟ ಆಡಿಸ್ಲಿಕ್ಕೆ ನೋಡ್ತಿದ್ದೀರಾ... ಆ ಮುದುಕನ ಪ್ರೇತಾನೂ ನಿಮ್ ಜೊತೆ ಶಾಮೀಲಾಗಿದೆ...
-

೪೧೬

ನೋಡ್ರಿ... ಕಣ್ತುಂಬ ನೋಡ್ರಿ..." ಎಂದು ಕೂಗಿ ಹೇಳಿದಾಗ ಇಡೀ ಓಣಿಗೆ ಒಣಿಯ್ರ್ ಹ್ಹೋ...ಹ್ಹೋ... ಹ್ಹಾ...ಹ್ಹಾ... ಎಂದಿತು.
"ಅವನ ಹೊಟ್ಟೇಲಿರೋದು ಹಾಗಾಡಿಸ್ತಿದೆ ಕಣ್ರತ್ತೇ... ಆ ಭೋಸೂಡಿ ಕುಡಿಸಿ... ಅಮೇಧ್ಯ ತಿನ್ನಿಸಿ ಬ್ರಾಹ್ಮಣ್ಯಾನ ಸುಟ್ಟು ಬೂದಿ ಮಾಡಿ ಬಾ ಅಂತ ಕಳಿಸಿರ್‍ತಾಳೆ" ಎಂದು ಖುದ್ದ ಸೊಸೆ ಕೈಹಿಡಿದು ಜಗ್ಗಿದರೂ ಕೊಸರಿಕೊಂಡು ಅಲುಮೇಲಮ್ಮನವರು ಧಗಧಗ ಉರಿಯುತ್ತಿದ್ದ ಬೆಂಕಿಯಲ್ಲಿ ಕೈ ಹಾಕಿದರು. ಬುದ್ಧಿ ಹೇಳಲು ಬಂದ ಅಗಸರ ಯಮುನಪ್ಪನೊಂದಿಗೆ ವಾಗ್ವಾದಕ್ಕಿಳಿದಿದ್ದ ಶಾಮ ತಾಯಿ ಕಡೆ ಗಮನ ಹರಿಸಿರಲಿಲ್ಲ. ತನ್ನ ನಾಲಿಗೆ ಮೇಲೆ ಸರ್ಪದ ಹೆಡೆಯಾಕಾರದ ಕಪ್ಪು ಮಚ್ಚೆ ಇರುವುದೆಂಬ ಕಾರಣಕ್ಕೆ ಎಲ್ಲರೂ ಹೆದರುತ್ತಿದ್ದಂತೆ ಯಮುನಪ್ಪನೂ ಹೆದರಿ ಹಿಮ್ಮೆಟ್ಟತೊಡಗಿದ್ದು. ಆ ಸದುವು ನೋಡಿಕೊಂಡೇ ಅಲುಕ್ಮೇಲಮ್ಮಜ್ಜಿ ಬೆಂಕಿಯೊಳಗೆ ಸುಡಲೆಂದು ಬೆಚ್ಚಗಾಗುತ್ತಿದ್ದ ತಾಳೆಗರಿ ಕಟ್ಟನ್ನು ತೆಗೆದು ಪುದುಪುದು ಒಳಗಡೆ ಹೋಗಿ ಒಂದು ಮೂಲೆಯಲ್ಲಿ ಭದ್ರಪಡಿಸಿಬಿಟ್ಟಿತು.
ಆ ತಾಳೇಗರಿ ಕಟ್ಟೆ ಎಲ್ಲೆಲ್ಲೊ ತಿರುಗಾಡಿ ಕೊನೆಗೆ ನನ್ನಲ್ಲಿ ಆಶ್ರಯ ಪಡೆದು "ಗಂಡಸರಾದರೆ ನನ್ನ ಸರಳೀಕರಿಸಿ ಪ್ರಯೋಗಿಸುವಿ ಏನು?" ಎಂದು ಪ್ರಶ್ನೆ ಹಾಕಿತು. ನನ್ನಾಪ್ಪನಾಣೆಯಾಗಿಯೂ ನನಗೆ ಅದರಲ್ಲಿದ್ದ ಒಂದೇ ಒಂದು ಸಾಲನ್ನು ಅರಗಿಸಿಕೊಳ್ಳಲಾಗದೆ ಬೇಧಿಗಿಟ್ಟುಕೊಂಡೆನು. ಯಾವುದೇ ಚರಾಸ್ತಿಯನಾಗಲೀ ಸ್ಥಿರಾಸ್ತಿಯನ್ನಾಗಲೀ ಮಾಡಿರದಿದ್ದ ಶಾಸ್ತ್ರಿಗಳು ಯಾಕೆ ಉಯಿಲು ಬರೆದಿಟ್ಟಿರ್‍ತಾರೆ... ಕಾಶೀಲಿ ಶವಸಂಸ್ಕಾರ ಮಾಡಿಸ್ಕೊಳ್ಳಬೇಕೆಂಬ ಬಯಕೇನ ವ್ಯಕ್ತಪಡಿಸಲಿಕ್ಕಾಗಿಯೇ ಉಯಿಲು ಬರೆದಿಟ್ಟಿದ್ದಾರ್ಂದು ಅವರಿಗೆ ಆಗದವರ್‍ಯಾರೋ ಹೇಳಿದ್ದಾರೆ ಅಷ್ಟೆ... ಮರಣನಂತರದ ಅಂಥ ವ್ಯಾಮೋಹ ಅವರಿಗಿರ್‍ಲಿಲ್ಲ" ಎಂದು ವಿದ್ಯಾವರಿಧಿ ವಿಘ್ನೇಶ್ವರ ತೀರ್ಥರು ವಾದಿಸಿದ್ದರು. ಅದರಲ್ಲಿ ಏನಿದೆ ಎಂದಾದರೂ ತಿಳಿದುಕೊಳ್ಳಬೇಕಲ್ಲ? ಅದಕ್ಕೆಂದೇ ಗುಟ್ಟಾಗಿ ಕನ್ನಡವ್ನ್ನೂ; ರಾಜಾರೋಶವಾಗಿ ಸಂಸ್ಕೃತವನ್ನು ಕಲಿತುಕೊಂಡಿದ್ದ ಗೆಳೆಯ ಮಲ್ಲೇಪುರಂ ಬಳಿಗೆ ಧಾವಿಸಿದ್ದು. ಬರೆದಾದ ಮೇಲೆ ನರ್ತಕಿಗೂ ಶಾಸ್ತ್ರಿಗಳಿಗೂ ದೈಹಿಕ ಸಂಬಂಧವಿತ್ತೆಂಬ ಸಂಗತಿಯನ್ನು ಬೇಕೆಂದೇ ಮಲ್ಲೇಪುರಂ ಸೇರಿಸಿರಬಹುದೆಂಬ ಅನುಮಾನ ನನಗೆ ಕಾಡದೆ ಇರಲಿಲ್ಲ... ಅಂಥ ಕಲ್ಪನೆಯಲ್ಲೂ ಮಜವಿರುತ್ತದೆಂದು ನಾನೂ ಅದನ್ನು ತೆಗೆಯುವ ಗೋಜಿಗೆ ಹೋಗಿರಲಿಲ್ಲ... ಇಂಥದೊಂದು ಪಾಪಿಷ್ಠ ಒಪ್ಪಂದವೇನಾದರೂ ಶಾಮನ ಆತ್ಮಕ್ಕೆ ಗೊತ್ತಾದರೆ ಅವನು ಪ್ರತಿಭಟಿಸಿ ಕಾದಂಬರಿಯಿಂದ ನಿರ್ಗಮಿಸದೆ ಇರಲಾರ ಎಮ್ದುಕೊಂಡೆನು.
ಕಾವ್ಯಕಳಾ ಶಿಕ್ಷಕರೊಬ್ಬರು ಪರೀಕ್ಷಿಸೆ ಕೃತಿಯಂ ಕೃತಾರ್ಥರಲ್ಲರೆ ಕವಿಗಳ್ ಎಂಬ ನೇಮಿಚಂದ್ರನ ಮಾತು ನೆನಪಾಯಿತು.
ಶಿಶಿರವು ತನ್ನ ಉಡಿಯೊಳಗೆ ವಾಯುದೇವನನ್ನು ಬಂಧಿಸಿಟ್ಟರೂ ತನ್ನ ಉಚ್ಛಾಸ ನಿಶ್ವಾಸಗಳೇ ಚಂಡಮಾರುತಗಳಾಗಿ ಹಸ್ತಪ್ರತಿಯ ಹಾಳೆಗಳನ್ನು ಚದುರಿಸತೊಡಗಿದವು. ಪುಟದ ಸಂಖ್ಯೆಗಳು ಅರ್ಥ ವಿವರಣೆಗೆ ನಿಲುಕದ ಗೃಹ್ಯಸೂತ್ರಗಳಂತೆ ಹಿಂದುಮುಂದಾಗತೊಡಗಿದವು. ಅವುಗಳನ್ನು ಅನುಕ್ರಮವಾಗಿ ಜೋಡಿಸುವಷ್ಟರಲ್ಲಿ ಕರುಳು ಬಾಯಿಗೆ ಬಂದಿತು. ಕೌಟುಂಬಿಕ ಶಾಸ್ತ್ರದ ಬಾಂಧವ್ಯವನ್ನು ಹೊಂದಿದ ಕೆಲವಂಶಗಳು ಭಿನ್ನರಾಶಿಗಳ ಶಕುನಗಳನ್ನು ವಿವರಿಸುತ್ತಿರುವಂತೆ ಭಾಸವಾಗತೊಡಗಿತು.
ಹಸ್ತಪ್ರತಿಯೊಳಗೆ ಪ್ರಮುಖ ಪಾತ್ರವಾಗಲು ಹಾತೊರೆಯುತ್ತಿದ್ದ ಕೊತ್ತಲಿಗಿಯ


೪೧೭
ಅನಸೂಯಮ್ಮ ಪಾತ್ರವು ಪಕಪಕ ನಗಾಡುತ್ತಿರುವಂತಿದೆ ಎಂದುಕೊಂಡೆನು. ನಾನೇ ಇರದಿದ್ದಲ್ಲಿ, ಇದ್ದರೂ ಅವನ ಜೀವನದಲ್ಲಿ ನಾನು ಪ್ರವೇಶಿಸದಿದ್ದಲ್ಲಿ ನೀನೆಲ್ಲಿ ಈ ಕಥಾನಕ ಬರೆಯುತ್ತಿದೆಯೋ ಎಂದು ಪ್ರಶ್ನಿಸಿತು.
"ನೋಡಮ್ಮಾ ತಾಯಿ... ಯಾರ ಜೀವನದಲ್ಲಿ ಯಾರು ಪ್ರವೇಶ ಮಾಡ್ತಾರೋ ಬಿಡ್ತಾರೋ ಎಂಬುದಿಲ್ಲಿ ಮುಖ್ಯವಲ್ಲ" ಪ್ರವೇಶ ಮತ್ತು ನಿರ್ಗಮನ ಪ್ರತಿಯೊಂದು ಪಾತ್ರದ ಅನಿವಾರ್ಯ ಕ್ರಿಯೆಗಳು ಎಂಬುದನ್ನು ಮರೆಯಬೇಡ. ಕೆಲವೊಂದು ವಿಶಿಷ್ಟ ಸನ್ನಿವೇಶಗಳು ಪ್ರವೇಶ ಎಮ್ಬ ಎ ಸಹಕರಿಸುತ್ತವೆ. ಹಾಗೆಯೇ ನಿರ್ಗಮನವೆಂಬ ಪ್ರಾದುರ್ಭಾವಕ್ಕೂ ಕೂಡ. ಪ್ರವೇಶ ಮತ್ತು ನಿರ್ಗಮನದ ನಡುವೆ ಗಟ್ಟಿಗೊಳ್ಳುವ, ವಿಘಟಿತವಾಗುವ ಅಂಶಗಳನ್ನಷ್ಟೆ ವಿವೇಚಿಸುವುದ ಲೇಖಕನಾದ ನನ್ನ ಅನಿವಾರ್ಯ ಕರ್ಮ... ಇಲ್ಲಿ ಯಾರಿಗೂ ಯಾರೂ ಹ್ರಮಿಸುತ್ತಿರ ಬೇಕಾದುದು ಲೋಕ ನಿಯಮ. ಎಲ್ಲಾ ಪಾತ್ರಗಳು ಪರಿಭ್ರಮಿಸುವ ಕೇಂದ್ರ ಪಾತ್ರಕ್ಕೆ ಧಕ್ಕೆಯಾಗಬಾರದು. ಅಮ್ದರೆ ಎಷ್ಟೇ ಪ್ರಯತ್ನಿಸಿದರೂ ಉಪಪಾತ್ರಗಳಾದುವುಗಳು ಕೇಂದ್ರ ಪಾತ್ರದ ಮಟ್ಟಕ್ಕೆ ಏರಲಾರವು... ಅವುಗಳಿಗೆ ಹಾಗೆ ಸ್ಪರ್ಧಿಸುವ ಅರ್ಹತೆಯೇ ಇರುವುದಿಲ್ಲ. ಅರ್ಹತೆ ಪ್ರಶ್ನಿಸಿದರೆ ಸ್ಥಾನಭ್ರಂಶವಾಗದೆ ಇರದು." ಎಂದು ಅದಕ್ಕೆ ತಿಳಿಹೇಳುವ ಪ್ರಯತ್ನ ಮಾಡಿದೆ.
ಇದರಿಂದ ಅದು ಖತಿಗೊಂಡು ನುಡಿಯಿತು-
"ನೀನೆಂಥ ಲೇಖಕ್ನಿದಿಯೋ ಮಾರಾಯಾ... ಹೇಳಿ ಕೇಳಿ ಮೈಮಾರಿಕೊಂಡು ಬದುಕಿದ ಮೂರು ಕಾಸಿನ ಸೂಳೆ... ಎದೆ ಸೀಳಿದ್ರೆ ಎರಡಕ್ಷರವಿಲ್ಲ... ಆದರೂ... ನಾನು ನೂರಾರು ನಾಟಕಗಳ ಹೆಣ್ ಪಾತ್ರಗಳ ಮಾತ್ನೆಲ್ಲ ಪಟಪಟಾಂತ ಒಪ್ಪಿಸಿಬಿಡಬಲ್ಲೆ. ಎಂಥದೋ ನಾಟಕ ಬರ್ದೋರ್‍ನ ಅರಗಿಸಿಕೊಂಡಿರೋ ನನ್ಗೆ ಯಾಕೋ ನಿನ್ ಮಾತೊಂದೂ ಅರ್ಥಾಗ್ತಿಲ್ಲ ಮಾರಾಯಾ... ಕಾದಂಬ್ರಿ ಅಂದ್ರೇನಂಬೋದೇ ನಂಗೊತ್ತಿಲ್ಲ... ಆದ್ರೆ ಅದೊಂದು ನಮೂನಿ ಪುರಾಣ ಅಂತ ತಿಳ್ಕೊಂಡಿದ್ದೀನಿ... ಆತನ ಹೆಂಡ್ತಿಗೆ ಒಂದು ಲೆವೆಲ್ಲಿನ ಜಾಗ ಕೊಟ್ಟಿರೋ ನೀನು ನನ್ನನ್ಯಾಕೆ ಕೆಳಗಿನ ಲೆವೆಲ್ಲಿನಾಗಿಟ್ಟೆ?... ಇದ್ನ ಕೇಳೊದ್ರಲ್ಲಿ ತಪ್ಪೇನೈತೆ... ಲೇಖಕನಾದ ನೀನು ಹೇಳೋದೊಂದು ಬರಿಯೊದೊಂದು ಮಾಡಿದ್ರೆ ನಾನೆಂಗ ಬಾಯಿ ಮುಚ್ಕೊಂಡು ಸುಮ್ಕಿರ್‍ಲಿ... ವರಲಕ್ಷ್ಮಿಗೆ ಯಾವ ಜಾಗ ಕೊಟ್ಟಿಯೋ ಆ ಜಾಗಾನೂ ನಂಗೆ ಕೊಡು. ಆಕೀಗಿಂತ ನಾನು ಯಾವುದರಾಗ ಕಡ್ಮೆ ಆದೀನಿ... ಹಂಗ ನೋಡಿದ್ರೆ ನಾನೇ ಆಕಿಗಿಂತ ಒಂದು ಕೈ ಮ್ಯಾಲಿದೇನಿ... ಆಕಿ ತನ್ ಗಂಡನ್ನ ಒಂದು ನಿರ್ಜೀವ ಪೆಟರಿ ಥರ, ಕೇವಲ ಒಂದು ಮೆಷಿನ್ನಿನಂಥ ಗಂಡನ ಥರ ರಭೌದು. ಆಕಿ ಆತನ್ನ ಸರ್ಯಾಗಿ ನೋಡ್ಕೊಂಡಿದ್ದರ್‍ಯಾಕೆ ಆತ ನನ್ ಹಾಸಿಗೀಗೆ ಬಂದ್ ಬೀಳ್ತಿದ್ದ... ಮೊದಮೊದ್ಲು ಆತ ಯಕಃಶ್ತ್ ಒಬ್ಬ ಮಿಂಡನಾಗಿ ಚಟ ತೀರಿಸ್ಕೋಳ್ಳಾಕೆ ಬಂದಿದ್ದಿರಭೌದು. ಆದರೆ ಬರ್‍ತಾ ಬರ್‍ತಾ ಆತ ನಂಗೆ ಮಗ ಆದ. ತಂದಿ ಆದ, ಗಂಡ ಆದ, ಮಿಂಡ ಆದ, ಮಾವ ಆದ, ಅಳಿಯಾದ, ಮೈಆದ, ಮನಸ್ಸಾದ... ಕೊನೀಕೆ ದೇವರ ಜಗುಲಿ ಆದ... ಅದರಂಗ ನಾನೂ ಹಂಗೇನೆ ಆದೆ... ನನ್ನ ಆತನ ಸಂಬಂಧ ನಿಂಗೆ ಹೆಂಗ ಗೊತ್ತಾಗತೈತಿ? ಇದ್ನೆಲ್ಲ ಅರ್ಥ ಮಾಡ್ಕೊಂಡು ಬರದ್ರೆ ಸೈ ಅಂತೀನಪ್ಪಾ... ಶಾಮನ ಎಡಭಾಗಕ್ಕೆ ವರಲಕ್ಷ್ಮೀನ್ನಿಡು ಬಲಭಾಗಕ್ಕೆ ನನ್ನನ್ನಿಡು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇಡೋ ಭೇದಾವ ತೋರಿಸಬ್ಯಾಡ... ಹಿಂಗ ಮಾಡ್ಲೀ ಅಂದ್ರ ನಿನ್ನೆಂಡ್ರೂ ಮಕ್ಳಿಗೆ ಸುಖಾ ಆಗೋದಿಲ್ಲ..."
-

೪೧೮
ನಾನು ಕೊತ್ತಲಿಗಿಗೆ ಹೋಗಿ ನೋಡಿದ ಅನಸುಯಮ್ಮಗೂ ಕಾದಮ್ಬರಿಯೊಳಗೆ ರೂಪ ಪಡೆದಿರೋ ಪಡೆಯುತ್ತಿರೋ ಅನಸೂಯಮ್ಮಗೂ ನಡುವೆ ಅಜಗಜಾಂತರ ವ್ಯತ್ಯಸವಿರುವುದರ ಅರ್ಥವಾಯಿತು.
ಕೊತ್ತಲಿಗಿ ಸೋಮವಾರ ಪೇಟೆಯ ಸಹಜ ಗುಣವಾದ ತಾಮಸ ಬಲದಿಂದ ಮುನ್ನುಗ್ಗುವುದು ಸರಿಯಲ್ಲ.
"ನೀನು ವರಲಕ್ಷ್ಮಿಗಿಂತ ಕಡ್ಮೆ ಅಂತ ಯಾಕ ಭಾವಿಸ್ಕೋತಿ ಅನಸೂಯಮ್ಮಕ್ಕಾ... ನಿನ್ ಪಾತ್ರದ ಕಾಲಾಗ ನಾನೂ ನನ್ ಹೆಂಡ್ತೀನೌ ಅದೇಸು ಸಾರಿ ಜಗಳ ಅಡಿದ್ದೀವಿ ಎಂಬುದು ನಿಂಗೇನಾರ ಗೊತ್ತೇನು?"
"ಗರತೋರೆಲ್ಲ ಗರತೇರ ಕಡೇಕಿರ್‍ತಾರ... ನಂಂಅಂಥ ಮೂರ್‍ಕಾಸಿನ ಸೂಳೇರ್‍ಕಡೀಕ ಯಾಕಿರ್‍ತಾರ! " ಎಂದು ಬೇಸರ ಮತ್ತು ದುಃಖದಿಂದ ನಿಟ್ತುಸಿರು ಇಟಿತು.
ಅದರ ಆ ಸ್ಥಿತಿ ನೋಡಿ ನನ್ನ ಕರುಳು ಚುರಕ್ಕೆಂದಿತು.
"ನಾನಿದ್ದೀನಲ್ಲ ಅನಸೂಯಮ್ಮ... "
"ನೀನಿದ್ರೆ ತಗೊಂಡೆನ್ಮಾಡ್ಲಿ ಸಾರೂ... ವರಲಕ್ಷ್ಮಿಯಂಥೋರು , ನಿನ್ನೆಂಡ್ತಿಯಂಥೋರು ನನ್ ಪರ ನಿಂತ್ಕೊಂಡು ಮಾತಾಡುವಂತಾದಾಗ್ಲೇ ನನ್ಗೆ ಸಮಾಧಾನ ಆಗೋದು.!"
ಅದೆಂಗ ಸಾಧ್ಯ? ನಿಮ್ದು ನೋಡಿದ್ರೆ ಉತ್ತರ ಧ್ರುವ ಅವರ್‍ದು ನೋಡಿದ್ರೆ ದಕ್ಷಿಣ ಧ್ರುವ... ನಿಮ್ ಅವ್ರ ಬದುಕಿನ ನಡುವೀನು ದೊಡ್ಡದೊಂದು ಕಂದಕ ಹುಟ್ಕೊಂಡೈತೆ".
"ಅದ್ನ ತುಂಬಿ ನಮ್ಮೆಲ್ಡು ಧ್ರುವಾನು ಹತ್ರ ಮಾಡೋ ಕೆಲಸಾನ ನಿಮ್ಮಂಥೋರು ಮಾಡಬೇಕು ಸಾರು... ನಿಷ್ಠೆ ವಿಶಯದಾಗ ನಾವವ್ರಿಗಿಂತ ಒಂದು ಕೈ ಬಲ..."
"ಕಂದಕ ತುಂಬಿ ಸರಿಮಾಡೋದು ನನ್ ಕೆಲಸವಲ್ಲ ತಾಯೀ... ಸಮಾಜ ಆ ಕೆಲಸಾನ ಮಾಅಬೇಕಿತ್ತು. ಆದ್ರೆ ಅದೇ ನಿಂತ್ಕೊಂಡು ಬೆಳೆಸತೈತಂದ್ಮೇಲೆ ಏನು ಮಾಡೊದೈತೆ... ಲೇಖಕನಾದ ನಂದೇನಿದ್ರು ತೇಪೆ ಹಚ್ಚೋ ಕೆಲಸ ನೋಡಮ್ಮಾ... ಶಾಮಣ್ಣ ಯಾರೊಬ್ಬರ ಸೊತ್ತಲ್ಲ... ಅವ್ನೇನು ನನ್ ಚಿಗದೊಡ್ಡಪ್ನ ಮಗ್ನಲ್ಲ - ಹಂಗ ನೋಡಿದ್ರೆ ... ಏನೋ ಒಬ್ಬೊಬ್ನೀಗೆ ಒಂದೊಂದ್ನಮೂನಿ ಆಗಿದ್ದ... ಹೆಂಡತಿಗೆ ಗಂಡನಾಗಿದ್ದ, ತಾಯಿಗೆ ಮಗನಾಗಿದ್ದ, ಸರಕಾರಕ್ಕೆ ನೌಕರನಾಗಿದ್ದ, ಹಾರ್ಮೋನಿಯಂಗೆ ಮಾಸ್ತರನಾಗಿದ್ದ; ಹಾಡಿಗೆ ಹಾಡುಗಾರನಾಗಿದ್ದ; ಮಕ್ಕಳಿಗೆ ತಂದೆಯಾಗಿದ್ದ; ಕ್ರೋಧಕ್ಕೆ ಮೋಹವಾಗಿದ್ದ; ಮೋಹಕ್ಕೆ ಮತ್ಸರವಾಗಿದ್ದ, ಅರಿಷಡ್ವರ್ಗಗಳನ್ನು ಮುಕುಳೀ ಅಡೀಲಿ ಹಾಕ್ಕೊಂಡು ಅದರ ಮ್ಯಾಲ ವಿರಾಜಮಾನವಾಗಿ ಬದುಕಿದ್ದ... ಆದರೆ ಯಾವುದೋ ಮಹಾತ್ಮರಿಗಿರದಿದ್ದ ಅಪರೂಪದ ಬದ್ಕೋ ಗುಣ ಅವನಲ್ಲಿತ್ತು ಕಣಮ್ಮಾ... ಅದ್ನ ಲೋಕಕ್ಕೆ ತೋರಿಸೋ ಕೆಲಸಾನ ನಾವೆಲ್ರು ಮಾಡ್ಬೇಕು... ಕೈಮುಗ್ದು ಕೇಳ್ಕಂತಿದೀನಿ... ಕರುಳ್ನ ನಾಲಗೆ ಮ್ಯಾಲ ತಂದ್ಕೊಂಡು ಅಂಗಲಾಚ್ತಿದೀನಿ... ನೀವೆಲ್ರು ಹೆಚ್ಚು ಕಡ್ಮೆ ಎಂದು ಭಾವಿಸ್ದೆ ನಿಮ್ ನಿಮ್ಮ ಭಾಗದಾಗ ಸ್ಥಾನಮಾನದಾಗ ನಿಂತ್ಕೊಂದು ಸಹಕರಿಸ್ರೀ ತಾಯಿ... ಯಾರ್ದೋ ಡಯಲಾಗ್ನ ಯಾರೋ ಹೇಳಿಬಿಟ್ರೆ ನಾಟಕ ನಡೆಯೋದಾದ್ರು ಯಂಗೆ... ಸುಣ್ಣ ಅಡಿಕೆ ಎಲೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಒಂದಾದಾಗ ಮಾತ್ರ ಅದು ತಾಂಬೂಲ ಅನ್ನಿಸಿಕೊಳ್ತದಮ್ಮಾ"
"ನಾನೇನು ನಿನ್ನ ಹೆಚ್ಚಿಗೆ ಕೇಳ್ತಿಲ್ಲ ಸಾರೂ... ಕಾದಂಬರಿಯೊಳಗ ಒಂದೊಳ್ಳಿ ಜಾಗದಾಗ ನಮ್ಮನ್ನು ಕುಂಡ್ರಿಸು... ಅಷ್ಟೆ. ಸಮಾಜದಾಗಂತೂ ಕಿಮ್ಮತ್ತು ಕಳ್ಕೊಂಡಿರೋ ಕವಡೆ ಅಗೀವಿ...


೪೧೯
ಕಥಾನಕದೊಳಗಾದ್ರು ಚಲಾವಣೆ ಆಗೋಣ ಎಂದು ಆಕೆ ಹೇಳುತ್ತಲೆ ಸೋಮವಾರಪೇಟೆಯ ರಾಖೇಶ, ದುರುಗಪ್ಪ, ಸುಂಕಲವ್ವ ಚವುಡವ್ವ ಇವೇ ಮೊದಲಾದ ಪಾತ್ರಗಳು ಪಕಪಕ ನಗಾಡಿ ಅನಸೂಯಮ್ಮನ ಪಾತ್ರಕ್ಕೆ ಬೆಂಬಲ ಸೂಚಿದಿದವು.
ಅವುಗಳ ಪಟ್ಟು ನನ್ನ ಮಾತಿನ ಪೆಟ್ಟಿನಿಂದ ಸಡಿಲಗೊಳ್ಳುವ ಲಕ್ಷಣ ಕಾಣಿಸದಿರುವುದು ಕಂಡು ನನಗೆ ನಿರಾಸೆಯಾಯಿತು. ಅವುಗಳ ವಾದದಲ್ಲಿ ನಿಜ ಇಲ್ಲದಿರಲಿಲ್ಲ. ಸಾಂಪ್ರದಾಯಿಕ ಸಮಾಜದ ನೆಲಗಟ್ಟಿನ ಮೇಲೆ ನಿಂತು ಕಾದಂಬರಿ ರಚಿಸುತ್ತಿರುವ ನಾನು ಸರ್ವೊತೋಮುಖ ಒತ್ತಡಕ್ಕೆ ಸಿಲುಕಿದ ತೆಳು ಸಿಲವಾರ ದಬ್ಬಿಯಂತಾದೆನು. ಪ್ರಾಸಿಕ್ಯುಷನ್ ಮಾಡುವುದಷ್ಟೆ ನನ್ನ ಕೆಲಸ. ಅವು ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುವವೋ ಸಮರ್ಥಿಸಿಕೊಳ್ಳಲಿ! ತೀರ್ಪು ಕೊಡೋದು ನ್ಯಾಯಾದೀಶರಾದ ಓದುಗ ಮಹಾಶಯರಿಗೆ ಬಿಟ್ಟುಕೊಟ್ಟು ನೆಮ್ಮದಿಯಿಂದ ಇದ್ದರಾಯಿತು ಎಂದುಕೊಂಡೆ.
ಹಸ್ತಪ್ರತಿಯೊಳಗಿಂದ ಶಾಮಣ್ಣ ಪಾತ್ರವು ಆಕಳಿಸುತ್ತಿರುವಂತೆ, ಸೆಕೆಗೆ ಸಿಕ್ಕು ಮುಲುಕಾಡುತ್ತಿರುವಂತೆ ಸದ್ದು ಮಾಇತು. ಒಂದು ಪುಟ್ಟ ಕೋಣೆಯಲ್ಲಿ ಆ ಕಡೆ ಬಿಗರನ್ನೂ, ಈ ಕಡೆ ಬೀಗರನ್ನೂ ಒಟ್ಟಿಗೆ ಸೇರಿಸಿದಾಗ, ಅವರ ನಡುವೆ ತುಂಬು ಗರ್ಭಿಣಿ ಹೆಂಗಸೋರ್ವಳ ಪರಿಸ್ಥಿತಿ ಹೇಗಿರುತ್ತದೋ ಹಾಗಾಗಿತ್ತು ಶಾಮಣ್ಣನ ಪರಿಸ್ಥಿತಿ ಕಾದಮ್ಬರಿಯ ಹೆಜ್ಜೇನಿನೆ ಹುಟ್ಟಿನೊಳಗೆ.
ಅದು ಮೆಲ್ಲನೆ ಆ ಗಜಿಬಿಜಿಯಿಂದ ಬಿಡಿಸಿಕೊಂಡು ಮೆಲ್ಲನೆ ಹೊರಕ್ಕೆ ಬಂದು-
"ಲೋ ಕುಂವೀ ಎಂಬ ಧೂರ್ತನೇ... ನಮ್ಮನ್ನೆಲ್ಲ ಈ ನಿರ್ವಾತ ಪ್ರದೇಶದಲ್ಲಿ ಕೂಡಿ ಹಾಕಿಟ್ಟು ಅದಾವ ಪುರುಷಾರ್ಥ ಸಾಧಿಸಬೇಕೆಂದುರುವಿಯೋ ಪಾಪಾತ್ಮನೇ... ಮುಖ್ಯ ನನ್ನನ್ನಿಲ್ಲಿಂದ ಬಿಡುಗಡೆ ಮಾಡಿ ಪುಣ್ಯ ಕಟ್ಕೋ ಮಾರಾಯಾ... ಹೇಳದೆ ಕೇಳದೆ ಇಲ್ಲಿಂದ ಅಂತರ್ಧಾನವಾಗಿ ಕೈಗ್ ಸಿಕ್ಕದಂತೆ, ಹತ್ತು ನನ್ನ ಹಿಂಬಾಲ ಎಮ್ದು ಹೇಳಿ, ಹೋಗಬೌದು... ಆದರೆ ಅದು ನಾಕು ಮಂದಿ ಮೆಚ್ಚೋ ಕೆಲಸವಲ್ಲ... ಬದುಕಿದ ಪ್ರಾಯಶ್ಚಿತ್ತಕ್ಕಾಗಿ ನಿನ್ನ ಕಾದಂಬರಿಯೊಳಗೆ ಮರುಸೃಷ್ಟಿ ಪಡೆಯಬೇಕೆಂಬ ಬಯಕೆಯಿಂದಲೇ ನಾನು ತೂಗು ಬಾವಲಿಯಂತೆಅಕ್ಷರಗಳಿಗೆ ಜೋತುಬಿದ್ದಿರುವುದು. ಇದನ್ನೇ ನನ್ನ ದೌರ್ಬಲ್ಯವೆಂದು ಭಾವಿಸಬೇಡ" ಎಂದು ಒಂದೇ ಸಮನೆ ಸಿಡಿಮಿಡಿಗುಟ್ಟತೊಡಾಗಿತು.
"ನೀವ್ಯಾಕೆ ಇಷ್ಟೊಂದು ಅವಸರ ಮಾಡ್ತಿದ್ದೀಯಾ... ಅರ್ಥವಾಗ್ತಿಲ್ಲ ಶಾಮೂ... ತೆಲೆ ಏರೋಕೂ ಮೊದ್ಲೆ ಪಾತ್ರಗಳು ಅಭಿನಯಿಸೋಕೆ ಅವಸರ ಮಾಡಿದ್ರೆ ಹೇಗಯ್ಯಾ... ನೋಡಿದವರಾದ್ರು ಏನಂದಾರು?" ಎಂದು ಸಮಾಧಾನ ಪಡಿಸಲೆತ್ನಿಸಿದೆ.
"ನೀನು ಸತ್ತೋ ಬದುಕಿಯೋ ಅಕ್ಷರದಲ್ಲಿ ಸಿಕ್ಕಾಕ್ಕೋ... ಆಗ ಗೊತ್ತಾಗ್ತದೆ ನನ್ನ ಸಂಕಟ. ಅದಿರ್‍ಲಯ್ಯಾ ಹೋಮ್ ಸಿಕ್ಕೇ... ನನ್ನ ಪ್ರಾಣಪದಕವಾದ ಅನಸೂಯಳ ಜೊತೆ ಜಟಪಟಿ ಇಳ್ದಿದ್ದೆಯಲ್ಲಾ ಏನ್ಸಮಾಚಾರ?’
ಅದೇ ಕಣಪ್ಪಾ... ನಿನ್ನ ಧರ್ಮಪತ್ನಿಯ ಸ್ಥಾನಮಾನ ನನ್ಗೂ ಕೊಡು... ನಾನು ಆಕೆಗಿಂತ ಹೆಚ್ಚೂಂತ ವಾದಿಸಿದಳಪ್ಪಾ! ನಾನೇಷ್ಟು ಹೇಳಿದರೂ ಕೇಳ್ತಾ ಇಲ್ಲ ಆಯಮ್ಮ. ನೀನಾದ್ರು ಒಂದು ಮಾತು ಹೇಳಿ ಕಾದಂಬರಿ ಸುಗಮವಾಗಿ ಓಡ್ಲಿಕ್ಕೆ ಅನುಕೂಲ ಮಾಡಿಕೊಡಿಸಬಾರ್‍ದೇನು?" ಎಮ್ದು ಅಂಗಲಾಚಿದೆನು.
ನಿನ್ನ ಧರ್ಮವನ್ನೊಯ್ದು ಸುಡುಗಾಡಿಗಿಡು... ತಾಳಿ ಕಟ್ಟಿಸ್ಕೊಂಡ ಮಾತ್ರಕ್ಕೆ ಒಂದು ಹೆಣ್ಣು


೪೨೦
ಹೆಂಡತಿ ಆಗ್ಲಿಕ್ಕೆ ಸಾಧ್ಯವೇನೋ ಬೆಪ್ಪೆ. ಇಂಥ ಯಾವುದೇ ವಿವಾವೇತರ ಸಮ್ಬಂಧದಲ್ಲಿ ಸಿಲುಕಿ ಅನುಭವವಿರದ ನಿನ್ನಂಥೋರು ಗೆರೆ ಕೊರೀಲಿಕ್ಕಷ್ಟೆ ಲಾಯಕ್ಕು... ಮಾನವ ಸೂಕ್ಷ್ಮ ಸಮ್ಬಂದಹಗಳು ನಿನ್ನಂಥೋರಿಗೆ ಅರ್ಥ ಆಗೋದು ಸಾಧ್ಯವಿಲ್ಲ... ಎಲವೋ ಅಕ್ಷರಾವಲಂಬಿಯೇ! ... ನಿನಗೆನಾದ್ರು ಒಂಚೂರು ಮಾನ ಮರ್ಯಾದೆಇದ್ದದ್ದೇ ಆದ್ರೆ... ನನ್ನ ಅನಸೂಯಳಿಗೆ ಧರ್ಮಪತ್ನಿಗಿಂತ ಮಿಗಿಲಾದ ಸ್ಥಾನಮಾನ ಕೊಡು ಅಷ್ಟೆ!" ಎಂದು ಖಡಾಖಂಡಿತವಾಗಿ ನುಡಿಯಿತು.
"ಹೌದಪ್ಪ... ನಿನಗಿರೋವಷ್ಟು ಪ್ರಪಂಚ ಜ್ಞಾನ ನನಗಿಲ್ಲದಿರಬಹುದು. ಆದರೆ ಮನುಷ್ಯ ಸಂಬಂಧಗಳ ಅಜ್ಞಾನವಿರುವಂಥ ವ್ಯಕ್ತಿ ಮಾತ್ರ ಖಂಡಿತ ನಾನಲ್ಲ. ಹಾಗೆ ಮಾಡಿದ್ರೆ ಸಮಾಜ ಏನೆಂದ್ಕೊಳ್ತದೆ! ನಿಮ್ಮ ತಾತನವರ ಆತ್ಮವಾದ್ರು ಏನಂದ್ಕೊಂಡೀತು!"
"ಈ ನಿನ್ನ ಸಮಾಜವನ್ನೊಯ್ದು ಮೊಹರಂ ಅಗ್ನಿಕುಂಡಕ್ಕೆ ಹಾಕು. ಅದು ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ... ಬೆಕ್ಕುಬೆಣ್ಣೆ ತೂಗೋದೂ ಒಂದೆ... ಅದು ನ್ಯಾಯ ಹೇಳೋದೂ ಒಮ್ದೆ... ಅದರ ಬಗ್ಗೆ ಪುರಾಣ ಬಿಚ್ಚಬೇಡ... ನಾನು ಸತ್ತದ್ದೇ ಹೆಂಡತಿಯ ಪರಮಪಾತಿವ್ರತ್ಯದಿಂದ. ನಾನು ಸತ್ತು ಬದುಕಿರುವುದೇ ಅನಸೂಯಳ ನಿರ್‍ವ್ಯಾಜ ಅಂತಃಕರಣದಿಂದ, ಪ್ರೇಮದಿಂದ ಎಂಬುದನ್ನು ಮರೆಯಬೇಡ.... ಕಾದಂಬರಿಯೊಳಗಿನ ಪಾತ್ರಸ್ಥಾನದಲ್ಲಿದ್ದುಕೊಂಡು ನಾನು ನಿನಗೆ ಆಜ್ಞೆ ಮಾಡ್ತಿದೀನಿ... ಮರ್ಯಾದೆಯಿಂದ ಅವಳಿಗೆ ಹೆಂಡತಿಗಿಂತ ಹೆಚ್ಚದ ಸ್ಥಾನಮಾನ ಕೊಡು" ಎಂದು ಗುಡುಗುಡನೆ ಗುಡುಗಿತು.
ಬದುಕಿರುವ ಪರ್ಯಂತರ ದುರ್ಬಲತೆಯಿಂದಲೂ ಕೀಳರಿಮೆಯಿಂದಲೂ ಒಂದೇ ಸಮನೆ ನೆರಳುತ್ತಿದ್ದ ಶಾಮಣ್ಣ ಸತ್ತ ಮೇಲೆ ಎಷ್ಟೊಂದು ಶಕ್ತಿಶಾಲಿಯಾಗಿರುವನಲ್ಲ ಎಂದುಕೊಂಡೆ. ಕೇಂದ್ರ ಪಾತ್ರ ಮಾಡಿದ್ದರಿಂದ ಅವನಿಗೆ ತೀರ ಸೊಕ್ಕು ಬಂದುಬಿಟ್ಟಿದೆ.... ಇದು ಮೊದಲೇ ಗೊತ್ತಗಿದ್ದಲ್ಲಿ ಸೂಳೆಯನ್ನೋ, ಹೆಂಡತಿಯನ್ನೋ, ತಾಯಿಯನ್ನೋ ಅಥವಾ ಶಿವರಾಮ ಶಾಸ್ತ್ರಿಗಳಂತ ಹಸುಮಕ್ಕಳ ಪ್ರಜ್ಞಾ ಪ್ರವಾಹದ ಮೂಲಕ ಕಥೆ ಹೇಳುವ ಕೆಲಸ ಮಾಡಬಹುದಿತ್ತು. ನನ್ನ ಗೆಳೆಯ ಎಂಬ ಕಾರಣದಿಂದಾಗಿ ಶಾಮನನ್ನೇ ಕೇಂದ್ರಪಾತ್ರವಾಗಿರಿಸಿಕೊಂಡು ಅವನ ಸುತ್ತ ಉಪಪಾತ್ರಗಳನ್ನು ಬೆಳೆಸುವ ಕಠಿಣತಮ ಕಾರ್ಯಕ್ಕೆ ತೊಡಗಿದ್ದು, ಈಗಲಾದರೂ ಇಷ್ಟು ಅಷ್ಟು ಸೇರಿಕೊಂಡು ಹಲೋ ಹಲೋ ಎನ್ನುತ್ತಿದ್ದಾನೆ, ಬದುಕಿದ್ದಾಗ ಮುಖ್ಯವಾಗಿ ಮದುವೆ ಆದ ನಂತರ ಎದುರಿಗೆ ಬಂದರೂ ಹಲೋ ಎಂದವನಲ್ಲ. ಮೊದಲನೆ ಮಗು ಹುಟ್ಟಿದಾಗಿರಲಿ, ಎರಡನೆ ಮಗ ಹುಟ್ಟಿದಾಗಲೂ ನಾಮಕರಣಕ್ಕೆ ಕರೆದವನಲ್ಲ... ಮಿತ್ರದ್ರೋಹಿ ಎಂದು ಲೇಬಲ್ ಅಂಟಿಸಿ ಆಗಲೇ ದೂರ ಇಟ್ಟಿದ್ದ ಮಹಾನುಭಾವ, ಅಂಥವನನ್ನು ಬಲು ಕಕ್ಕುಲಾತಿಯಿಂದ ಆಧುನಿಕವಾಗಿ ಪೌರಾಣಿಕವಾಗಿ ಪದವಿಗೇರಿಸಿದ್ದು ನನ್ನ ಮೂರ್ಖತನ.
"ನೀನು ಹೇಳೋದು ಸರಿ ಅಲ್ಲ ಅಂತ ಹೇಳಲಾರೆ ಮಿತ್ರಮಾ... ಬದುಕಿದಾಗ ನೀವು ಯಾವ ಯಾವ ಆಯಕಟ್ಟಾದ ಜಾಗದಲ್ಲಿದ್ದು ಏನೇನು ಕೆಲಸ ಮಾಡಿದ್ದೀರೋ ನನಗೇನು ಗೊತ್ತು? ಕಲ್ಪಿಸಿಕೊಂ
ಡು ಬರೆದ್ರೂ ಕಷ್ಟ ಬರೆಯದಂತಿದ್ರೂ ಕಷ್ಟ. ಓದುಗರಿಂದ ನಿಷ್ಠುರ ಕಟ್ಟಿಕೊಳ್ಳೋದಾದ್ರು ಯಾಕಪ್ಪಾ?... ನಿಮ್ಮ ಕಥೆನ ನೀವೇ ಹೇಳ್ಕೊಂಡು ಬಿಡ್ರಿ... ಲಿಪಿಕಾರನಾಗಿ ನಾನು ಬರೆದುಕೊಂಡೋಗ್ತೀನಿ... ಏನಂತೀಯಾ" ಎಂದು ಕೈ ತೊಳೆದುಕೊಳ್ಳುವ ಬಯಕೆ ವ್ಯಕ್ತಪಡಿಸಿದೆ.
ಎಲಾ ಚಾಣಾಕ್ಷ! ನಮ್ಮ ಕಥೇನ ನಮ್ಮ ತಲೀಗೆ ಸುತ್ ನೋಡ್ತಿದ್ದೀಯಲ್ಲಾ! ನಮ್ದು ನಾವೇ


೪೨೧
ಹೇಳ್ಕೊಂಡ್ರೆ ನೀನೇನು ಬರೆದಂತಾಗ್ತದೊ ಂಆನ್ನೂ. ಈಗಾಗ್ಲೆ ಸತ್ತು ಸುಡುಗಾಡು ಸೇರಿರೋ ನಮ್ಮ ಬಗ್ಗೆ ನೀನೇನು ಬರ್‍ಕೊಂಡ್ರು ನಾವು ಮಾಡೋದೇನು? ಅದೂ ಅಲ್ಲದೆ ಬದುಕಿನೊಳಗೆ ನವೆಯುತ್ತಿರುವ ಅನುಸೂಯಾಳಿಗೆ ಏನಾದ್ರು ತೊಂದರೆ ಆಗ್ತದೆನ್ನೋ ಭಯ ಕಾಡ್ತಿದೆ. ಈ ಕಾದಂಬರಿ ಏನಾದ್ರು ಬದುಕಿರೋ ಅವಳಿಗಾಗಲೀ,ಸತ್ತಿರೋ ನಮಗಾಗ್ಲೀ ಏನಾದ್ರು ಸಹಾಯ ಮಾಡೀತಾ... ಹ್ಹೂ...ಹ್ಹೂ ...! ಬಿಲ್ಕುಲ್ ಇಲ್ಲ... ವರಲಕ್ಷ್ಮಿ ಹಡೆದಿರೊ ಎರಡನೆ ಮಗ ಅಶ್ವಥ್‌ನ್ನಾದ್ರು ಅವಳಿಗೆ ಕೊಡಿಸೋ ಪ್ರಯತ್ನ ಮಾಡಿ ವಿಫಲನಾದೆ... ಅದಕ್ಕಿಂತ ಆ ಮುಂಡೆ (ನಾನು ಬದುಕಿದ್ದಾಗ್ಲೆ ವಿಧವೆ ಆದ್ಲು ಅಂತ ಇಟ್ಕೋ) ಒಪ್ಲಿಲ್ಲ... ಬ್ರಾಹ್ಮಾಣ್ಯದ ಹುತ್ತದೊಳಗೆ ಆ ಮಕ್ಕಳನ್ನು ಕಟ್ಟಿಕೊಂಡು ಅದೇನು ಸಾಧಿಸಿದ್ದಾಳೋ ಎನೋ? ಯಾರು ಬಲ್ಲರು... ನೀನು ಮೊದಲೇ ಅಂದರಿಕಿ ಮಂಚಿವಾಡು... ಅವರಲ್ಲಿ ಅವರಂತೆಯೇ ತಲೆಹಾಕ್ತಿ... ಇವರಲ್ಲಿ ಇವರಂತೆಯೇ ತಲೆಹಾಕ್ತಿ... ಯಾರೊಂದಿಗೂ ನಿಷ್ಠುರ ಕಟ್ಕೊಳ್ಳೋ ಜಾಯಮಾನದವನಲ್ಲ ನೀನು... ನಾನು ಸತ್ತೊಡನೆ ನಮ್ಮ ಮನೆಯನ್ನು ಕೊಂಡವನ ಮಗನಾದ ನೀನು... ನಮ್ಮ ಕತೆಯ ಉರುಳಿಗೆ ನಮ್ಮನ್ನೇ ಬಲಿಕೊಡ್ಲಿಕ್ಕೆ ನೋಡ್ತಿದೀಯಾ? ಎಷ್ಟು ಧೈರ್ಯ ಕಣೋ ನಿನಗೆ..." ಶಾಮಣ್ಣ ಪಾತ್ರವು ಅಸಹಕಾರ ಚಳುವಳಿಯನ್ನು ಆರಂಭಿಸಿತು.
ಕಟಕಟೆಯಲ್ಲಿ ನಿಂತಿರುವ ವ್ಯಕ್ತಿಯೇ ಪ್ರಾಸಿಕ್ಯುಟರ್‍ನನ್ನು ಪ್ರಾಸಿಕ್ಯೂಷನ್ನಿಗೆ ಓಳಪಡಿಸಿದ ಉದಾಹರಣೆ ಪ್ರಪಂಚದಲ್ಲಿ ಎಲ್ಲಿಯಾದರೂ ನಡೆದಿದ್ದರೆ ಇದೊಂದೆ ಎಂದು ಹೇಳಬಹುದು.
ತಲೆ ಮೊಸರು ಗಡಿಗೆ ಆಗುತ್ತಿರುವಂಥ ಅನುಭವವಾಯಿತು. ಇಡೀ ಹಸ್ತಪ್ರತಿಯನ್ನು ಅಗ್ನಿಗಾಹುತಿ ಮಾಡಲು ಶ್ರೀಮತಿಗೆ ಕೊಡುವುದೇ ಮೇಲೆಂದೆನ್ನಿಸಿತು. ಹಿಂದೆ ಕೂಡ ಇಂಥ ಬೇಸರ ಆಗದೆ ಇರಲಿಲ್ಲ... ಕೈ ಚೆಲ್ಲಿದಾಗ ಚನ್ನಬಸವಣ್ಣ "ನೀನೇ ಹೀಗೆ ಹೆದರಿ ದ್ರ ಸರ್‍ಕೊಂಡ್ರೆ ಹೇಗೆ ಕುಂವೀ? ಭಟ್ಟಿ ವಿಕ್ರಮಾರ್ಕ ಬೇಸರ ಮಾಡ್ಕೊಂಡಿದ್ರೆ ಅವ್ನೀಗೆ ಬೇತಾಳ ವಶಪಡಿಸಿಕೊಳ್ಳಿಕ್ಕೆ ಸಾಧ್ಯ ಆಗ್ತಿತ್ತೇನು? ಕಾದಮ್ಬರಿಯ ಪಾತ್ರಗಳನ್ನು ದಬಾಯಿಸಲರಿಯದ ನೀನು ಸಮಾಜದ ಜೀವಂತ ಪಾತ್ರಗಳನ್ನು ಹೇಗೆ ದಬಾಯಿಸ್ತೀಯಾ...? ಲೇಖಕ ನಿಷ್ಠುರವಾದಿಯಾಗಿರಬೇಕಪ್ಪಾ... ಲೋಹಿಯಾ ಏನು ಹೇಳಿದ್ದಾರೆ ಗೊತ್ತೆ!" ಎನ್ನುತ್ತಿದ್ದಂತೆ ನಾನು ಹೆದರಿದೆ... ಅನಾವಶ್ಯಕವಾಗಿ ಲೋಹಿಯಾರನ್ನು ಎಳೆದುಕೊಂಡು ಬಂದು ಹಿಂಸೆ ಕೊಡುವುದು ನನಗೆ ಸರಿ ಕಾಣಲಿಲ್ಲ...
"ನೋಡು ಶಾಮಾ ಸಾವು ಎಂಬ ಬಡ್ತಿ ದೊರಕಿದ ಧೈರ್ಯದಿಂದ ಬಾಯಿಗೆ ಬಂದಂಗ ಮಾತಾಡಬೇಡ... ನನ್ನ ಮೂಗಿನ ನೇರಕ್ಕೆ ನಾನು ಬರ್‍ಕೊಂದು ಹೋಗೋನಾಗಿದ್ರೆ ಎಂದೋ ಒಂದೇ ಏಟಿಗೆ ಬರ್‍ದು ಮುಗಿಸ್ತಿದ್ದೆ... ನನ್ನ ಪ್ರಾಣಮಿತ್ರನಾಗಿದ್ದ (ಎಷ್ಟು ಪ್ರೀತಿಸ್ತಿದ್ದೆನಂತ ನಿನಗೂ ಗೊತ್ತಿಲ್ಲದಿಲ್ಲ) ನೀನು ಕೇಂದ್ರವಾಗುಳ್ಳ ಕಾದಂಬರೀನ ಕಪ್ಪು ಬೀಲುಪು ಮಾಡೋ ಆಸೆ ನನಗಿಲ್ಲ... ನಿನ್ನ ಬಗ್ಗೆ ನೀನು ಸುಳ್ಳಾದ್ರು ಹೇಳ್ಕೋ ನಿಜನಾದ್ರು ಹೆಳ್ಕೋ... ತೀರ್ಪು ಕೊಡೋರು... ಪಾತ್ರಗಳನ್ನು ಅವುಗಳ ಜಾಯಮಾನಕ್ಕನುಗುಣವಾಗಿ ಜಾಗಕ್ಕೆ ಕೂಡ್ರಿಸೋರು ಓದುಗರು , ಅದರ ಬಗ್ಗೆ ಈಗ್ಯಾಕೆ ತಲೆಕೆಡಿಸಿಕೊಳ್ಳೋದು... ಹೇಳೋದ್ನ ಪ್ರಾಮಾಣಿಕವಾಗಿ ಹೇಳಿದ್ದೀನಿ... ನೀನು ಹೇಳಿದ್ರೆ ಹೇಳು... ಬಿಟ್ರೆ ಬಿಡು ... ಅಷ್ಟೆ... ನಿನ್ನ ದಾರಿ ನಿನ್ಗೆ, ನನ್ನ ದಾರಿ ನನಗೆ... ಏನಂತೀಯಾ?" ಎಂದು ಕಡ್ಡಿ ಮುರಿದಂತೆ ಬೇಸರಗೊಂಡು ಹೇಳಿದೆ. ಎಲ್ಲಿವರೆಗೂ ನೀನೇ ಇಂದ್ರ, ಚಂದ್ರ ಅಂತ
-

೪೨೨
ಮಸ್ಕ ಹೊಡೆಯುತ್ತ ಕಾಲಕ್ಷೇಪ ಮಾಡುವುದು?
ನನಗು ನಿಷ್ಟುರವಾಗಿ ಮಾತಾಡಲು ಬರುತ್ತದೆ ಎಂದು ಗೊತ್ತಾದ್ದರಿಂದಲೋ ಅಥವಾ ನಿಷ್ಟುರ ಕಟ್ಟಿಕೊಂಡರೆ ಲೇಖಕನೊಬ್ಬ ವಾಚಾಮಗೋಚರವಾಗಿ ಬರೆಯಬಹುದೆಂದೋ ಏನೋ ಅದು ನಲವತ್ತೈದು ಸೆಂಟಿಗ್ರೇಡಿನಿಂದ ಹತ್ತು ಡಿಗ್ರಿ ಸೆಂಟಿಗ್ರೇಡಿಗಿಳಿದು ಮುಖವನ್ನು ಒಂದು ನಮೂನಿ ಮಾಡಿತು.
"ಪರವಾ ಇಲ್ಲಯ್ಯಾ... ನಿಮ್ಗೂ ಮುಖ ಮುಲಾಜು ನೋಡ್ದೆ ಮಾತಾಲಿಕ್ಕೆ ಬರ್‍ತದೆ... ಇದೇ ಜಾಯಮಾನ ನಾನು ನಿನ್ನಿಂದ ಬಯಸಿದ್ದು... ನಾನು ಸತ್ತ ಮೇಲಾದ್ರು ಇದ್ನ ಗಳಿಸಿಕೊಂಡಿದ್ದೀಯಲ್ಲ ಅದೇ ಸಂತೋಷ’ ಎಂದು ಮೆತ್ತಗೆ ನುಡಿಯುತ್ತ ಸ್ವಲ್ಪ ಹತ್ತಿರಕ್ಕೆ ಬಂದು, ವಿಷಾದಪೂರ್ಣ ಧ್ವನಿಯಲ್ಲಿ "ನನ್ನ ಬದುಕಿನಲ್ಲಿ ಏನು ವಿಶೇಷ ಕಂಡು ಕಾದಂಬರಿಗೆ ಬಲಿ ಕೊಡಲು ನಿರ್ಧರಿಸಿರುವಿಯೋ ಏನೋ? ನಾನು ಬದುಕಿದ್ದಷ್ಟು ಕಾಲ ಸಮಾಜಕ್ಕೆ ಭಾರವಾಗಿದ್ದೆ... ಗಂಡಂದಿರಲ್ಲೇ ಅತಿ ಕೆ
ಟ್ಟ ಗಂಡ ಅನ್ನಿಸ್ಕೊಂಡೆ; ತಂದೆಯಮ್ದಿರಲ್ಲೇ ಅತಿ ಕೆಟ್ಟ ತಂಡೆ ಅನ್ನಿಸ್ಕೊಂಡೆ, ಕುಡುಕರಲ್ಲೇ ಅತಿ ಕೆಟ್ಟ ಕುಡುಕ ಅನ್ನಿಸ್ಕೊಂಡೆ... ಜೂಜುಕೋರರಲ್ಲೇ ಅತಿ ಕೆಟ್ಟ ಜೂಜುಕೋರ ಅಂತ ಅನ್ನಿಸ್ಕೊಂಡೆ, ಮಿಂಡರಲ್ಲಿ ಅತಿ ಕೆಟ್ಟ ಮಿಂಡ ಅಂತ ಅನ್ನಿಸ್ಕೊಂಡೆ... ನೌಕರರಲ್ಲೇ ಅತಿ ಕೆಟ್ಟ ನೌಕರ ಅಂತ ಅನ್ನಿಸ್ಕೊಂಡೆ; ನಾಗರೀಕರಲ್ಲೇ ಅನಾಗರೀಕ ಅಂತ ಅನ್ನಿಸ್ಕೊಂಡು ಪಾದಚಾರಿಗಳಲ್ಲೇ ಅತಿ ಕೆಟ್ಟ ಪಾದಚಾರಿ ಅಂತ ಅನ್ನಿಸ್ಕೊಂಡೆ, ರೋಗಿಗಳಲ್ಲೇ ಅತಿ ಕೆಟ್ಟ ರೋಗಿ ಮತ್ತು ಅವಿಧೇಯ ರೋಗಿ ಅಂತ ಅನ್ನಿಸ್ಕೊಂಡೆ... ಖೈದಿಗಳಲ್ಲೇ ಅತಿ ಕೆಟ್ಟ ಖೈದಿ ಅಂತ ಅನ್ನಿಸ್ಕೊಂಡೆ... ಸಾವಿನಲ್ಲೂ ಅಷ್ಟೆ... ಇಷ್ಟೊಂದು ಕೆಟ್ಟದಾಗಿ ಯಾವ ಶತ್ರುವೂ ಸಾಯಬಾರ್ದಪ್ಪಾ ಅಂತ ಅನ್ನಿಸ್ಕೊಂಡೆ... ಪ್ರೇತಗಳಲ್ಲಿ ಅತಿ ಕೆಟ್ಟ ಪ್ರೇತ ಅಂತ ಅನ್ನಿಸ್ಕೊಂಡೆ... ಅರ್ಥಾಯ್ತೇ ನಾನೆಂಥೊನಂಥ. ಅಂದ್ರೆ ಯಾವ ಸಂದರ್ಭದಲ್ಲೂ ನಾನು ಯಾವ್ದೇ ನಿಯಮವನ್ನು ಪಾಲಿಸಿಕೊಂಡು ಬಂದೋನಲ್ಲ ಮಾರಾಯ... ನನ್ನ ಬದುಕು ಉಲ್ಲಂಘಿಸುವುದರಲ್ಲಿಯೇ ಕಳೆದುಹೋಯ್ತು... ಉಲ್ಲಂಘಿಸುವುದರಲ್ಲೂ ಅಷ್ಟೆ ... ನನ್ನದು ಕೆಟ್ಟ ಉಲ್ಲಂಘನೆ... ಉಲ್ಲಂಘಿಸುವಾಗಲೂ ಕೆಲವೊಂದು ನೀತಿ ಸಂಹಿತೆಗಳಿವೆ... ಮಾನಸಿಕವಾದ, ದೈಹಿಕವಾದ ಕೆಲವು ಅರ್ಹತೆಗಳು ಉಲ್ಲಂಘಿಸಬಯಸುವವರಿಗೆ ಇರಬೇಕು... ಉಲ್ಲಂಘಿಸುವ ಕ್ರಿಯೆಯಲ್ಲಿ ದೇಹದ ಅಂಗಾಂಗಗಳು ಯಾವ ರೀರಿ ವರ್ತಿಸಬೇಕೋ ಆ ರೀತಿ ವರ್ತಿಸಬೇಕು... ಆದ್ರೆ ನಾನು ಇದಕ್ಕೆ ತದ್ವಿರುದ್ಧ ನೋಡು...
ಯಾವುದೇ ಛಂದಸ್ಸು, ಅಲಂಕಾರ, ಕರ್ತೃ, ಕರ್ಮ, ಕ್ರಿಯೆ, ವ್ಯಾಕರಣ ಇನ್ಯಾವೂ ಇಲ್ಲದೆ ಬದುಕಿದ್ದು ಒಂದು ಬದುಕೇನು ಕುಂವೀ... ಇದು ನಾನು ಬೇಕೆಂದೇ ಆವಹಿಸಿಕೊಂಡ ಪ್ರಾರಬ್ದ ಕಣೋ... ಹಗಲನ್ನು ರಾತ್ರಿ ಮಾಡಿಕೊಂಡು, ರಾತ್ರಿಯನ್ನು ಹಗಲು ಮಾಡಿಕೊಂಡು ಬದುಕಿದವನು ಕಣೋ ನಾನು... ನನ್ನ ಬದುಕು ಯಾರಿಗೂ ಪ್ರಿಯವಾಗಿರಲಿಲ್ಲ... ಕಟ್ಟಿಕೊಂಡ ಹೆಂಡತಿಗೂ; ಹೆತ್ತ ತಾಯಿಗೂ ಯಾರಿಗೂ ಪ್ರಿಯವಾಗಿರಲಿಲ್ಲ... ನನ್ನ ಬದುಕಿನಲ್ಲಿ ರಾಷ್ಟ್ರೀಯ ಹೆದ್ದರಿ ರಾಜ್ಯದ ಹೆದ್ದಾರಿ ಮಟ್ಟಕ್ಕಿಳಿಯಿತು, ರಾಜ್ಯದ ಹೆದ್ದರಿ ಜಿಲ್ಲ ಮಟ್ಟದ ರಸ್ತೆಯಾಯಿತು. ಜಿಲ್ಲಾ ಮಟ್ಟದ ರಸ್ತೆ ಗ್ರಾಮಾಂತರ ಮಟ್ಟದ ರಸ್ತೆಯಾಯಿತು. ಕ್ರಮೇಣ ಅಂತಿಮವಾಗಿ ಗಟಾರ ಆಶ್ರಯಿಸಿದ ರಸ್ತೆಯಲ್ಲಿಯೇ ಅಡ್ಡಾಡತೊಡಗಿದ ನನಗೆ ಅದೆಷ್ಟು ಸೊಕ್ಕು ಇತ್ತೆಂದು ಹೇಳಿದರೆ ನಿನಗೆ ಆಶ್ಚರ್ಯವಾಗಬಹುದು. ಗಟಾರದಲ್ಲಿದ್ದುಕೊಂಡೆ ನಾನು ಸಾರ್ವಜನಿಕರ ಗಮನ ಸೆಳೆಯಿತ್ತಿದ್ದೆ.


೪೨೩
ಆಗ ಅವರು "ಅಯ್ಯೋ ಇದೇನಿದು ಪಂಡಿತ ಪರಮೇಶ್ವರ ಶಾಸ್ರ್ತಿಗಳ ಮೊಮ್ಮಗ ಶಾಮಾ ಶಾಸ್ತ್ರಿ ಅಲ್ವೆ!" ಎಂದೋ "ಏನಿದೇನಿದು ಬ್ಯಾಂಕ್ ಕ್ಯಾಷಿಯರ್ ಶಾಸ್ತ್ರಿ ಗಟಾರದಲ್ಲಿದ್ದಾನಲ್ಲ ಎಂದೋ" ಪರಮಾಶ್ಚರ್ಯದಿಮ್ದ ಮಾತಾಡಿಕೊಳ್ತಿದ್ರೋ ಮಹರಾಯ... ಅದನ್ನೆಲ್ಲ ಕೇಳಿಸಿಕೊಳ್ತಿದ್ದ ನನಗೆ ಅದೆಷ್ಟು ಸಂತೋಷವಾಗ್ತಿತ್ತು ಗೊತ್ತೆ? ಅಸದಳವಾದದ್ದು! ಅಸದಳವಾದದ್ದು! ದಾರಿ ಇಲ್ಲದ ಕಡೆ ದಾರಿ ನಿರ್ಮಿಸಿಕೊಳ್ಳುತ್ತ ಅಡ್ಡಾಡುತ್ತ ನನಗೆ ದಾರಿ ತೋರಿಸಿದವರಾರು ಕಣಪ್ಪಾ... ಹೆಂಡತಿಯಿಂದ, ತಾಯಿಯಿಂದ, ಗೆಳೆಯರಿಂದ, ಗೆಳತಿಯರಿಂದ, ಸ್ವಜಾತಿಯವರಿಂದ, ಅನ್ಯ ಜಾತಿಯವರಿಂದ, ಸರಕಾರಿ ನೌಕರರಿಂದ ತಿರಸ್ಕರಿಲ್ಪಟ್ಟ ನನ್ನನ್ನೇನಾದರೂ ಅನಸೂಯ ನೋಡದೇ, ಕಾಪಾಡದೇ ಇದ್ದಿದ್ರೆ ನಾನು ಸಹಜವಾಗಿ ಬದುಕ್ತಾನಾಗಲೀ, ಸಹಜವಾಗಿ ಸಾಯ್ತಾನಾಗಲೀ ಇರ್‍ಲಿಲ್ಲ ಕುಂವೀ...ನೀನು ನನ್ಗೆ ಪ್ರಾಣ ಮಿತ್ರ ಅಂತ ಬೊಗಳೆ ಬಿಡಬೇಡ... ಅಂಥ ಶಬ್ದಗಳನ್ನು ಕೇಳಿದ್ರೆ ನನಗೆ ವಾಕರಿಕೆ ಬರುತ್ತೆ. ಆ ಪ್ರಾರಬ್ಧ ಸಮಯದಲ್ಲಾದರೂ ನೀನು ನನ್ನ ನೋಡಿದ್ರೆ ಮೂಗು ಬಾಯಿ ಮುಚ್ಕೊಂಡು ಏನೂ ಅರಿಯದ ಮಳ್ಳಿಗನಂತೆ ಹೋಗಿಬಿಡ್ತಿದ್ದೆಯೋ... ಖರೆ ಹೇಳಬೇಕೆಂದರೆ ಮೇಲೆ ಹೇಳಿದ್ಕಿಂತ ಹೆಚ್ಚು ಕೆಟ್ಟದಾಗಿತ್ತು ನೋಡು ನನ್ನ ಬದುಕು. ಅಸಹ್ಯದ ಮೂಟೆಯಾಗಿ ಅಸಹ್ಯಕ್ಕೇನೆ ಜ್ವಲಂತ ವ್ಯಾಖ್ಯಾನವನ್ನು ಬರೆದು ಎಲ್ಲರಿಂದ ಛಿ ಥೂ, ಅಂತ ಉಗುಳಿಸಿಕೊಂದು ಕೊನೆಗೂ ಸತ್ತು ಎಲ್ಲರೂ ನೆಮ್ಮದಿಯಿಂದ ಉಸಿರು ಬಿಡುವಂತೆ ಮಾಡಿದ ನನ್ನಲ್ಲಾಗಲೀ, ನನ್ನ ಬದುಕಿನಲ್ಲಾಗಲೀ ಅದಾವ ವಿಶೇಷವನ್ನು ಗುರುತಿಸಿ ಕಾದಂಬರಿ ಬರೆದು ಅಮಾಯಕರೂ ನಿರುಪದ್ರವಿಗಳು ಆದ ಕರ್ಣಾಟಕದ ಓದುಗ ಕುಲಕೋಟಿಯ ಜೀವ ತಿನ್ನಬೇಕೆಂದಿರುವಿಯೋ ಮೂಢನೆ?
ಬರೆಯುವುದಕ್ಕೆ ನನ್ನ ಬಿಟ್ರೆ ನಿನ್ಗೆ ಬೇರೆ ಯಾರೂ ಸಿಗಲಿಲ್ವೇನಯ್ಯಾ? ಬರ್ಮಿಂಗ್ ಹ್ಯಾಂನ ಕೋಟೆಕೊಟ್ಟಲ, ಸುಖ ಸಂಪತ್ತಿ, ಹಂಸತೂಲಿಕಾ ತಲ್ಪಗಳನ್ನೂ; ಪ್ರಿನ್ಸ್ ಚಾರ್ಲ್ಸ್‌ನಂಥ ನಿಸ್ತೇಜ ರಾಜಕುಮಾರನನ್ನುಊ ಗಾಳಿಗೆ ತೂರಿ ಸ್ವಚ್ಛಂದ ಕ್ರೌಂಚದಮ್ತೆ ನೀಲನಭದಲ್ಲಿ ಹಾರಾಡಿ, ಚುಕ್ಕಿಗಳನ್ನು ನೆಲದಂಗಳಕ್ಕೆ ಉದುರಿಸಿ, ಕೋಟಿಕೋಟಿ ಜೀವ ಜಗತ್ತಿನ ಉದ್ಧಾರಕ್ಕೆ ಕಾರಣಳಾಗಿ ಅಚಾನಕ್ಕಾಗಿ ರಸ್ತೆ ಅಪಘಾತದಲ್ಲಿ ದುರ್ಮರಣವನ್ನಪ್ಪಿದ ಆರು ಮೊಳದುದ್ದ ಅಪರೂಪ ಚಲುವೆ ಡಯನಾಳ ಬಗ್ಗೆ ಬರೆಯಬೇಕಿತ್ತು? ದೂರವಿರುವ ಮತ್ತು ಕನ್ನಡ ಲೇಖಕನ ಲೆಕ್ಕಾಚಾರಕ್ಕೆ ಡಯಾನ ಸಿಕ್ಕುವುದಿಲ್ಲವೆಂದಿಟ್ಟುಕೋ? ನೆನ್ನೆ ತಾನೆ ರಾಜಕೀಯ ಪ್ರವೇಶಿಸಿ ಐವತ್ತೊಂದು ವರ್ಷದ ಇಟ್ಯಾಲಿನ್ ಮಹಿಳೆ ಸೋನಿಯಾ ಗಾಂಧಿಯವರ ಕಳೆದ ನಾಲ್ಕು ವರ್ಷದ ವೈಧವ್ಯದ ಯಾತನಾಮಯ ಬದುಕು ಏಕೆ ನಿನ್ನ ಬರವಣಿಗೆಯನ್ನು ಆಕರ್ಷಿಸಲಿಲ್ಲ ಮಹಾರಾಯ! ಕಾಮ ಕೆರಳದಿರಲೀ ಅಂತ ಎಷ್ಟೋ ಮಂದಿ ಗಂಡಂದಿರು ತಮ್ಮ ಹೆಂಡಂದಿರನ್ನು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಕ್ಕೋ, ಶಾಂತಿ ಧ್ಯಾನ ಧಾಮಗಳಿಗೆ ಕಳಿಸ್ತಿರೋದರ ಕಡೆ ನಿನ್ನ ಬರವಣಿಗೆಯ ಗಮನ ಹರಿಸು ಮಾರಾಯಾ! ಆ ಒಂದೊಂದು ಹೆಣ್ಣಿನ ಮನಸ್ಸಿನಲ್ಲಿ ನೂರು ನೂರು ಕಾದಂಬರಿಗಳಿಗಾಗುವಹ್ಟು ಸರಕಿದೆ. ಇಷ್ತೇ ಅಲ್ಲ, ನೀನು ಯಾವುದೇ ವ್ಯಕ್ತಿಯ ಮನಸ್ಸನ್ನು ನೀನು ಏಕಾಗ್ರತೆಯಿಂದ ಹತ್ತು ನಿಮಿಷ ಗಮನಿಸಿದರೆ ಒಂದೊಂದು ಕಾದಂಬರಿ ಬರೆಯಬಹುದಪ್ಪಾ. ಇಂಥ ಎಷ್ಟೋ ಸೃಜನಶೀಲ ಸಂಗತಿಗಳನ್ನು ಬದಿಗಿಟ್ಟು ನನ್ನ ಒಣ ಬದುಕನ್ನು ಯಾಕೆ ಆಯ್ದುಕೊಂಡಿರುವೆಯೋ ಏನೋ... ಅದ್ಕೆ ಬೇಸರ ಬಂದು ನಾನು ಹಾಗೆ ನುಡಿದದ್ದು... ನನ್ನದು ನಾನು ಹೇಳಲಿಕ್ಕೆ ನನ್ನ ಗಂಟೇನೂ ಹೋಗೋದಿಲ್ಲಪ್ಪಾ. ಆದ್ರೆ ಒದೋರ್‍ಗೆ ತುಂಬ ಹಿಂಸೆ
-

೪೨೪
ಆಗದೆ ಇರೋದಿಲ್ಲ... ನೀನೇ ಒಂದಿಷ್ಟು ಉಪ್ಪುಕಾರ ಸೇರಿಸಿ ಬರೆದು ಬಿಟ್ಟರಾಯಿತು. ಆನಂದವರ್ಧನ, ಕುತಂತಕ ಗಿಂತಕರಂಥ ಲಾಕ್ಷಣಕಿರು ಬರೆದಿರೋ ವಕ್ರೋಕ್ತಿ ಗಿಕ್ರೋಕ್ತಿಗಲನ್ನೆಲ್ಲ ಚೆನ್ನಾಗಿ ಒಡ್ಕೊಂಡಿದ್ದ್ ಯಾ... ಬರೆದು ಬಿಡು ಯಾಕೆ ಹಿಂಜರಿಯುವೆ... ಅಂಥ ಬಿಕ್ಕಟ್ಟು ಬಂದಾಗ ಹೇಗೋ ನಾನು ಬಂದು ಸಹಕರಿಸ್ತೀನಿ... ನಿನ್ನಿಂದ ನನಗಾದ ಒಂದೇ ಒಂದು ಬೇಸರವೆಂದರೆ ನೀನು ನಿನ್ನ ಹಸ್ತಪ್ರತಿಯಲ್ಲಿ ನನ್ನನ್ನು ಬಂಧಿಸಿಟ್ಟಿದ್ದು. ನಾನು ಪ್ರಿಯಾಂಕಳನ್ನು ನೋಡುವ ಆಸೆಯಿಂದ ಶ್ರೀ ಪೆರಂಬದೂರಿಗೆ ಹೋಗಬೇಕೆಂದುಕೊಂಡಿದ್ದೆ. ಶ್ರೀ ಪೆರಂಬದೂರು ರಾಮಾನುಜಾಚಾರ್ಯರು..." ನಿರರ್ಗಳವಾಗಿ ಒಂದೇ ಉಸುರಿಗೆ ಶಾಮಣ್ಣ ನುಡಿದ ಮಾತುಗಳನ್ನು ನಾನು ಅರಗಿಸಿಕೊಳ್ಳಲಾರದೆ ಹೋದೆನು.
ಕಾಗೆ ಸವಿವಂತು ಸವಿಗುಮೆ ರಾಗಿಸಿಮಿಂದುಳೆಯ ನೀರಿನಂಚೆ!
ಗುರುರೋಪಿ ಗುರುಃ ಎಂಬಂತೆ ಬದುಕಿದ ಶಾಮಣ್ನನನ್ನು ಅರ್ಥ ಮಾಡಿಕೊಳ್ಳದ ನನ್ನ ಮರ್ಕಟ ಬುದ್ಧಿಯನ್ನು ನಾನೇ ಹೀಗಳೆದುಕೊಂಡೆನು. ಹೃದಯ ಆರ್ದ್ರವಾಯಿತು. ವೈಶಾಖದ ಬಿರುಬಿಸಿನಾಳದ ಗಾಳಿ ಎದೆಯೊಳಗೆ ಮಾರ್ಮಲೆಯತೊಡಗಿತು. ಬಿದಿಯ ಬೀಸಿದ ಮಾಯೆಯಲ್ಲಿ ಸಿಲುಕಿ ಜರ್ಝರಿತಗೊಂಡ ನೀನೇ ಧನ್ಯ!
ಕಂಠ ಗದ್ಗದವಾಯಿತು.
ಕೊತ್ತಲಿಗಿಯ ಬಸ್ ನಿಲ್ದಾಣದಲ್ಲಿ ಹೆಂಡತಿ ಪಕ್ಕದೊಳಿದ್ದರೆ ನಾನೂ ಒಬ್ಬ ಸಿಪ್ಪಾಯಿಯಂತೆ ಹೆಂಡತಿಯೊಂದಿಗೆ ನಿಂತುಕೊಂಡು ಜಗಲೂರು ಕಡೆ ಬರಲಿದ್ದ ಬಳ್ಳಾರಿ ಬಸ್ಸಿಗೆ ನಾನು ಕಾಯುತ್ತ ನಿಂತಿದ್ದ ದಿನ ನೆನಪಾಯಿತು. ಡಿಪೋ ಕಂಟ್ರೋಲರ್ ಗುರುಪಾದಪಯ್ಯ ಅನಾಥ ಹೆಣದ ಸಂಸ್ಕಾರಕ್ಕೆಂದು ಪ್ರಯಾಣಿಕರಿಂದ ಹಣ ಸಂಗ್ರಹಣಾ ಕಾರ್ಯ ನಡೆಸಿದ್ದ. ಆತ ಚಾಚಿದ ಡಬ್ಬಿಯೊಳಗೆ ಐದು ರೂಪಾಯಿ ಹಾಕುವ ಮೊದಲು ಬಿದ್ದಿರುವ ಹೆಣ ಶಾಮನದೆ ಯಾಕಾಗಿರಬಾರದೆಂದು ಹೋಗಿ ಇಣುಕಿ ನೋಡಿದೆ. ಕಂಡ ಕಂಡ ಹೆಣಗಳ್ನ ಯಾಕೆ ನೋಡ್ಲಿಕ್ಕೆ ಹೋಗ್ತೀರಾ... ನಾವು ಪ್ರಯಾಣ ಮಾಡ್ತಿರೋದು ಬೇರೆ ಕೆಟ್ಟ ಗಳಿಗೆಯಲ್ಲಿ... ನೀವು ಬರೀ ಹೆಣವನ್ನು ನೋಡಿ ವಾಪಸಾಗೋದಾದ್ರೆ ಈ ಮಾತು ಹೇಳ್ತಿರ್‍ಲಿಲ್ಲ... ನೋಡಿ ಬಮ್ದ ಮೇಲೆ ಆ ಹೆಣ ನಿಮ್ ಕಣ್ಣಿಂದ ಇಳಿಯೋಕೆ ಎರಡು ಮೂರು ದಿನಗಳಾದ್ರು ಬೇಕು... ಅದೆಲ್ಲ ಯಾಕೆ ಫಜೀತಿ" ಎಂದು ಹೆಂಡತಿ ತಡೆಯಲೆತ್ನಿಸಿದರೂ ಹೋಗಿ ಇಣುಕಿದೆ. ಶಾಸ್ತ್ರಿಗಳ ಮೊಮ್ಮಗ ಶಾಮನದೇ ಆಗಿತ್ತೆಂದು ನನಗೆ ಅನುಮಾನ, ಕುಡಿದೂ, ಕುಡಿದೂ ಅವನ ಕರುಅಲುಗಳು ತೂತುಬಿದ್ದಿರುವವಲ್ಲದೆ ಕ್ಷಯರೋಗ ಢಾಳಗಿ ಬಡಿದುಕೊಂಡಿದೆ ಎಂದು ಊರಲ್ಲಿ ಅಗಸರ ನಾರಾಣಿ ಅದರ ಹಿಂದಿನ ದಿನ ಹೇಳಿದ್ದ. ಆ ಕ್ಷಣದಲ್ಲಿ ಆಸುಪಾಸಿನಲ್ಲಿ ಯಾವುದೇ ಹೇನ ಬಿದ್ದಿದ್ದರೂ ಅದು ಶಾಮನದೇ ಇರ್‍ತದೆ ಎಂಬ ಅನುಮಾನ ಕಾಡತೊಡಗಿತ್ತು. ‘ದೇವರೇ ನಾವು ಊರು ಮುಟ್ಟುವವರೆಗೆ ಯಾವುದೇ ಹೆಣದ ದರುಶನವನ್ನು ಮಾಡಿಸಬೇಡ’ ಎಂದು ಬೇಡಿಕೊಂಡು ಎಚ್ಚರಿಕೆಯಿಂದಿದ್ದರೂ ಒಕ್ಕಣ್ಣು ಗುರುಪಾದಪ್ಪನ ಸುಪರ್ದಿನಲ್ಲಿ ಅನಾಥ ಹೆಣ ಸಂಸ್ಕಾರ ನಡೆಸುವ ಘಟನೆ ಅಯಾಚಿತವಾಗಿ ಕಂಣ ಮುಂದೆಯೇ ನಡೆಯುತ್ತಿರುವುದು.
ಕಳೇಬರ ಶಾಮನದೇ ಆಗಿದ್ದರೆ ಏನು ಮಾಡುವುದು? ಆಗಿರದಿದ್ದರೆ ಏನು ಮಾಡುವುದು? ಎಂಬ ದ್ವಂದ್ವಗಳ ನಡುವೆ ನಾನು ಮಿಶ್ರ ಭಿನ್ನರಾಶಿಯಂತೆ ನಿಂತಿದ್ದ ಜನರ ನಡುವೆ ತೂರಿ ಇಣುಕಿದೆ. ಪ್ರ್ವ ಪಶ್ಚಿಮಾಭಿಮುಖವಾಗಿ ಮಲಗಿಸಿದ್ದ ಆ ಕಳೇಬರವು ದಕ್ಷಿಣಕ್ಕೆ ವಾಲಿತ್ತು. ಎತ್ತರ


೪೨೫
ಮತ್ತು ಗಾತ್ರವೇನೋ ಹೆಚ್ಚು ಕಡಿಮೆ ಅವನ್ದೆ! ಕೆದರಿದ ತಲೆಯಲ್ಲಿ ಜುಟ್ಟು ಇರಬಹುದು,ಅಥವಾ ಅವನು ಕತ್ತರಿಸಿ ಎಸೆದಿರಬಹುದು, ಮೀಸೆ ಕುರುಚಲು ಗಡ್ಡ... ತಲೆ ಮುಖ ನರೆಯುವಷ್ಟು ವಯಸ್ಸಗಿಲ್ಲ... ಕಣ್ಣು ಬಾಯಿ ಮತ್ತು ಶಿಶ್ನಗಳಿದ್ದ ಭಾಗಗಳ ತುಂಬ ಸಾವಿರಾರು ನೊಣಗಳು (ಜನಪ್ರಿಯ ನಟ ಸತ್ತಾಗ ಜನ ಹೇಗೆ ಸಂತೋಷ, ಕುತೋಹಲ ಮತ್ತು ದುಃಖ್ದಿಂದ ಮುತ್ತಿ ಕಳೇಬರದ ಯಾವುದಾರೂ ಅಂಗವನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಾರಲ್ಲ ಹಾಗೆ) ಮತ್ತಷ್ಟು ಬಾಗಿ ಗುರುತಿಸೋಣವೆಂದರೆ ಜನರ ನೆರಳು ನೇರವಾಗಿ ಅದರ ಮೇಲೆ ಬೀಳುತ್ತಿರುವುದು. ‘ಅವನಾಗ್ಲೆ ಸತ್ತಿದಾನೆ... ಈಗ ಬದುಕಿರೋದು ಅವನ್ ದೇಹ ಮಾತ್ರ ಎಂದು ಓಸಿ ಯಂಕಣ್ಣ ಹೇಳಿದ್ದ ಮಾತಿನ ಆಧಾರದ ಮೇಲೆ ಅವನು ಸಾಯುವುದು ಅಥವಾ ಬದುಕಿರುವುದು (ಇವೆರಡು ನಿರಾಸೆಯ ಎರಡುಮು ನಮೂನೆಗಳು ಮಾತ್ರ) ನನಗೆ ಅನಿವಾರ್ಯವಾಗಿತ್ತು. ಬಗ್ಗಿ ಬಗ್ಗಿ ನೋಡೀ ನೋಡೀ ಆ ಲಳೇಬರ ಶಾಮಣ್ಣನದಲ್ಲವೆಂದು ನಾನು ಖಚಿತಪಡಿಸಿಕೊಂಡು ಇನ್ನೇನು ಮುಖ್ ಸಪ್ಪಗೆ ಮಾಡಿಕೊಂದು ಹಿಂತಿರುಗುತ್ತಿದ್ದಾಗ ಎದುರಾದ ವ್ಯಕ್ತಿ ಥೇಟ್ ಶಾಮಣ್ಣನಂತಿದ್ದ ಅಥವ ಅವನೇ ಆಗಿದ್ದ. ಮಾತಾಡಿಸುವ ಅವನೂ ಮಾತಾಡಲಿಲ್ಲ... ನಾನೂ ಮಾತಾಡಲಿಲ್ಲ... ಖಂಡಿತ ಶಾಮಣ್ಣ ಸಾಯಲಾರದೆ ಬದುಕಿದ್ದಾನೆಂದೂ,ಅವನು ನನ್ನನ್ನು ಮಾತಾಡಿಸದಿದ್ದುದೇ ಸೌಭಾಗ್ಯವೆಂದು ಭಾವಿಸಿ ನಾನು ಹೆಂಡತಿ ಇರುವಲ್ಲಿಗೆ ಮರಳಿ ಬಂದೆ. "ಅಂತೂ ಹೆಣವನ್ನು ನೋಡೇ ಬಿಟ್ರಿ ತಾನೆ! ನನ್ನ ಮಾತಂದ್ರೆ ಯಾವ ಲೆಕ್ಕವೆಂದು" ಹೆಂಡತಿ ಸಿಡುಕಿದಳು.
ಈ ಘಾನೆ ನಾನು ಪ್ರಕಟಿಸಿದ ಬಹು ದೊಡ್ಡ ಕ್ರೌರ್ಯದ ಬಹು ದೊಡ್ಡ ಉದಾಹರಣೆ. ಇಷ್ಟೆಲ್ಲ ಅಸಹ್ಯ ತುಂಬಿಕೊಂಡಿದ್ದರು ಮಹಾಮಾನವತಾವಾದಿಯಂತೆ, ಮಹಾನ್ ಲೇಖಕನಂತೆ, ಮಹಾನ್ ಗೆಳೆಯನಂತೆ ಸೋಗು ಹಾಕಿ ಕಾದಂಬರಿ ಬರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.
ಯೋಚಿಸುತ್ತಾ ಯೋಚಿಸುತ್ತ ಆರಡಿ ಇದ್ದವನು ಆರು ಅಂಗುಲದಷ್ಟಾಗಿಬಿಟ್ಟೆ.. ಹಾಳೆ ತಿರುಗುವ ಗಾಳಿಗೆ ಕಂಪಿಸತೊಡಗಿದೆ.
"ನಯ್ಯಾ ಕುಂವೀ... ಎಷ್ಟೊಂದು ಕುಗ್ಗಿ ಹೋಗಿಬಿಟ್ಟೆಯಲ್ಲ... ಮೈಯಲ್ಲಿ ಹುಷಾರಿಲ್ಲವೇನು? ಎಂದು ಮಾತೃ ಹೃದಯದ ಶಾಮನ ಆತ್ಮ ಪ್ರಶ್ನಿಸಿತು.
"ಅಂಥಾದ್ದ್ನೂ ಇಲ್ಲ ಶಾಮಾ... ಎಷ್ಟೊಂದು ವಿಚಿತ್ರ ನೋಡು... ಬದುಕುವ ಅರ್ಹತೆ ಇರೋ ನಿನ್ನಂಥೋರು ಸಾಯ್ತಾನೆ ಇರ್ತಾರೆ... ಸಾಯೋ ಅರ್ಹತೆ ಇರೋ ನನ್ನಂಥೋರು ಸದಾ ಬದುಕ್ರ್ ಇರ್‍ತಾರೆ" ಎಂದು ನಿಟ್ಟುಸಿರುಬಿಟ್ಟೆ.
"ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವಿಜಿಟಿಂಗ್ ಪ್ರೊಫೆಸರ್ ಥರ ಮಾತಾಡ್ತಿದ್ದೀಯಲ್ಲೋ ಹುಚ್ಚಪ್ಪ... ಸಾವು ಬದುಕಿನ ನಡುವೆ ಅಂಥ ಅಂತರವೇ ಇಲ್ಲ ಮಾರಾಯ... ಸಾಯಲಾರದೆ ಬದುಕೋದಾಗ್ಲಿ; ಬದುಕಲಾರ್ದೆ ಸಾಯೋದಾಗ್ಲಿ ಇವೆರಡು ನೆಪಗಳು ಮಾತ್ರ... ಬದುಕಿರೋವಷ್ಟು ಕಾಲ ಧೈರ್ಯದಿಂದ ಬದುಕಪ್ಪಾ... ಸತ್ತೋರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತಿದ್ದೀಯಾ?" ಎಂದು ಶಾಮನ ಆತ್ಮ ಹಿಮಾಲಯದ ನಿರೀಶ್ವವಾದಿ ಯೋಗಿಯಂತೆ ಧೈರ್ಯ ತುಂಬುವ ಮಾತಾಡಿತು.
"ನಾನೊಂದು ಬಹು ದೊಡ್ಡ ತಪ್ಪು ಮಾಡಿದ್ದೀನಿ. ಕ್ಷಮಿಸ್ತೀಯಾ ಶಾಮಾ..." ಎಂದೆ ಪಾಪ ನಿವೇದಕನಂತೆ.
"ಥೂ! ಹಾಗೆಲ್ಲ ಮಾತಾಅಬೇಡ್ವೋ ಮುಂಡೇದೆ... ನಾನೊಂದು ಲೆಕ್ಕ ಹೇಳ್ತೀನಿ... ಅದ್ನ


೪೨೬
ಬಿಡಿಸಿದ ನಂತರವೇ ನನ್ನ ಬಗ್ಗೆ ಬರೆಯೋದ್ನ ಆರಂಭಿಸು... ಇಲ್ಲಾಂದ್ರೆ ನಿನ್ನ ತಲೆ ಸಾವಿರ ಚೂರಾಗಿ ಹೋಗ್ತದೆ! ಏನಂತೀಯಾ?
"ಹ್ಹೂಂ..."
"ಹೇಳುವೆನು ಶ್ರದ್ಧೆಯಿಂದ ಕೇಳು...
ರತಿಕ್ರೀಡೆಯ ಕಾಲದಲ್ಲಿ ಪ್ರಿಯತಮನಾದ ನಾನು ನನ್ನ ಪ್ರಿಯತಮೆಯಾದ ಅನಸೂಯಳ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಹಿಡಿದು ಜಗ್ಗಲು ಹಾರ ಹರಿದು ಹೋಯಿತು. ಆಗ ಆರನೆ ಒಂದು ಭಾಗದಷ್ಟು ಮುತ್ತಿಗಳು ನೆಲದ ಮೇಲೆ, ಐದನೇ ಒಂದು ಭಾಗದಷ್ಟು ಮುತ್ತುಗಳು ಕೌದಿಯ ಮೇಲೆ, ಆರನೇ ಒಂದು ಭಾಗದಷ್ಟು ಮುತ್ತುಗಳು ಆಕೆಯ ವಕ್ಷ ಮತ್ತು ನಾಭಿ ಪ್ರದೇಶದ ಮೇಲೆ ಬಿದ್ದವು. ಅವುಗಳ ಪೈಕಿ ಹತ್ತನೇ ಒಂದು ಭಾಗದಷ್ಟು ಮುತ್ತುಗಳನ್ನು ನಾನು ಆಯ್ದುಕೊಂಡೆನು. ದಾರದಲ್ಲಿ ಇನ್ನೂ ಆರು ಮುತುಗಳು ಉಳಿದಿದ್ದವು... ಹಾಗಾದರೆ ಆ ಹಾರದಲ್ಲಿದ್ದ ಒಟ್ಟು ಮುತ್ತುಗಳು ಎಷ್ಟು?... ನೀನು ಗಣಿತದಲ್ಲಿ ಡಲ್ ಎಂದು ಗೊತ್ತಿದ್ದರೂ ಈ ಪ್ರಶ್ನೆಯನ್ನು ನಿನಗೆ ಹಾಕಿದ್ದೀನಿ. ಡಯೋಷೆಂಟ್ ಗೆಲೈಸ್‌ಟೇಟ್‌ನದಕ್ಕಿಂತಲೂ ಭಾರತೀಯ ಬೀಜಗಣಿತ ಮೇಲ್ಮಟ್ಟದ್ದು ಎಂಬುದಕ್ಕೆ ಈ ಸಮೀಕರಣವೇ ಸಾಕ್ಷಿ ನೋಡು.... ಸಾಧ್ಯವಾದಷ್ಟು ಈ ಲೆಕ್ಕ ಬಿಡುಸುವ ಪ್ರಯತ್ನ ಮಾಡು...
ಈ ಕಾದಂಬರಿ ಬರೆಯುವಾಗ ಈ ಸಮೀಕರಣ ಕುರಿತು ಯೋಚಿಸುತ್ತಾ ಹೋಗು... ನಿನ್ನ ಕಥೇನ ಎಲ್ಲಿಂದ ಪುನರಾರಂಭ ಮಾಡಬೇಕೆಂತಿದ್ದೀಯಾ?... ನಾನೇ ಇದರ ಕ್ಲೂ ಕೊಡ್ತೀನಿ ನೋಡು... ನಾನು ನೌಕರಿಗೆ ಸೇರಿದ್ದೀನಿ... ಇಲ್ಲಿಂದ ಬೇಡ... ನಾನು ಆಕೆ ಹನೀಮೂನಿಗೆ ಹೋಗಿದ್ದೀವಿ... ಇಲ್ಲಿಂದಲೂ ಬೇಡ... ಶಾಸ್ತ್ರಿಗಳು ಸತ್ತು ಹೋದ್ರು ಇಲ್ಲಿಂದಲೂ ಬೇಡ... ನಿಜವಾದ ಕಥೆ ಸುರುವಾಗೋದೆಲ್ಲಿಂದಪ್ಪ ಅಂದ್ರೆ ಮನೆಯಲ್ಲಿ ನನ್ನ ಮೇಲೆ ಅಧಿಕಾರ ಸಾಧಿಸುವ, ಅಥವಾ ಅಪಭ್ರಂಶ ಹೊಂದಿರುವ ಕಾರಣಕ್ಕಾಗಿ ನನ್ನ ತಾಯಿಯಾದ ಅಲುಮೇಲಮ್ಮಗೂ ಹೆಂದತಿಯಾದ ವರಲಕ್ಷ್ಮಿಗೂ ದಿನಂಪ್ರತಿ ಒಂದಲ್ಲಾ ಒಂದು ಘರ್ಷಣೆಯು ನಡೆಯುತ್ತಲೇ ಹೋಗುತ್ತದೆ. ಅವರಿಬ್ಬರೂ ಅಭಿಮಾನಧನರೇ ಎಂಬುದರಲ್ಲಿ ಅನುಮಾನವಿಲ್ಲ... ಸುಸ್ತೋ ಸುಸ್ತು ಅಂತ ನಾನು ದ್ಯೂಟಿ ಮುಗಿಸಿಕೊಂಡು ಕೊತ್ತಲಿಗಿಯಿಂದ ಮನೆಗೆ ಮರಳಿದ ಕ್ಷಣದಿಂದ ಸಮಾನ ಬಲರಾದ ಅವರು ಅತಿರಥ ಮಹಾರಥರಂತೆ ಜಗಳ ಆಅಲು ಶುರು ಮಾಡುತ್ತಾರೆ. ನೋಡೋ ಅಂತ ತಾಯಿ ಎಡಕ್ಕೆ; ನೋಡ್ರಿ ಅಂತ ಪತಿಪಾರಾಯಣೆಯಾದ ಹೆಂಡತಿ ವರಲಕ್ಷ್ಮಿಯು ಬಲಗಡೆ ನಿಂತುಕೊಂಡು ಟಗ್ ಆಫ್ ವಾರ್ ಅಂತಾರಲ್ಲ ಹಾಗೆ ಎಳೆದಾಡತೊಡಗುತ್ತಾರೆ. ಒಂದು ದಿನದ್ದಲ್ಲ... ಎರಡು ದಿನದ್ದಾಲ್ಲ... ಇದು ದೈನಂದಿನ ಗೋಳು. ಅನಕ್ಷರಸ್ಥ ರೈತಾಪಿ ಶೂದ್ರನಾಗಿದ್ದರೆ ನಾನು ಅವರಿಬ್ಬರಿಗೂ ತಲಾ ಎರಡೆರಡು ಏಟು ಕೊಟ್ಟು ಮ್ಲೆಯಲ್ಲಿ ಕುಕ್ಕುರು ಬಡಿಯಬಹುದಾಗಿಟ್ಟು. ಗದರಿಸಲೆಂದರೆ ಬಯ್ಯಲೆಂದರೆ, ಹೊಡೆಯಲೆಂದರೆ ಅಕ್ಷರಸ್ಥ ನಾಗರೀಕ ಭಾವ, ಪವಿತ್ರ ವಂಶೋದ್ಭವನೆಂಬ ಹೆಗ್ಗಳಿಕೆ, ಸಕಲ ಶಾಸ್ತ್ರಪಾರಂಗತನೆಂಬ ಹುಸಿ, ಠೇಂಕಾರ ಅಡ್ಡ ಬರುತ್ತದೆ... ಹೊಟ್ಟೆಯ ಸಿಟ್ಟು ರಟ್ಟೆಗೆ ಬರುವುದಿಲ್ಲ... ಕಪೋಲದ ರಕ್ತ ಕಣ್ಣುಗಳಿಗೆ ಏರುವುದಿಲ್ಲ... ಮೆದುಳಿನ ಮಾತು ನಾಲಿಗೆಗೆ ಬರುವುದಿಲ್ಲ... ನಾಲಿಗೆ ಮೇಲಿನ ಮಾತು ಮಾತಾಗಿ ರೂಪಗೊಳ್ಳುವುದಿಲ್ಲ... ನನ್ನೊಳಗೆ ನಾನು ವಿಲವಿಲನೆ ಒದ್ದಾಡಿ ಹೋಗುತ್ತೇನೆ. ಅವರನ್ನು ಅವರ ಪಾಡಿಗೆ ಬಿಟ್ಟು ಬಜಾರದ ಕಡೆ ನಡೆಯುತ್ತೇನೆ... ಆತ್ಮೀಯ ಅಂತ ತಿಳ್ಕೊಂಡು ಪತ್ರಿಕಾ ಸಂಪಾದಕ ಮಿತ್ರ ಕಮಲಾಕರನಿಗೆ ಹೇಳುತ್ತೇನೆ... ಅದಕ್ಕವನು ಪಕಪಕ ನಗುತ್ತ ‘ವೆರ್ರಿ


೪೨೭
ಇಂಟರೆಸ್ಟಿಂಗ್’ ಎಂದು ಉದ್ಗರಿಸುತ್ತಾನೆ... ಬ್ಶ್\ಏಸರದಿಂದ ನಾನು ಇದರಲ್ಲಿ ನಗೋದೇನೈತಿ ಕಮಲಾಕರ..." ಎನ್ನುತ್ತೇನೆ. "ನಗೋದು ಯಾಕಿಲ್ಲ ಶಾಮಾ? ಕ್ರಿಯೇಟಿವ್ ಲೇಖಕನಾದ ನೀನು ಅತ್ತೆ ಸೊಸೆಯರ ಜಗಳವನ್ನೇ ವಸ್ತು ಮಾಡ್ಕೊಂಡು ಅತ್ಯುತ್ತಮವಾದ ವಿವಿಧ ವಿನೋದಾವಳಿಗಳಂಥ ಕಥೆಗಳ್ನ ಬರೆಯಬಹುದಯ್ಯಾ... ಇದೆಲ್ಲ ಲೇಖಕನ ಅಡ್ವಾಂಟೇಜಸ್ಸೆ... ಎಂದು ಹೇಳುತ್ತಾನೆ. ಮುಂದೊಂದಿನ ನಾನಿವನ ಸಹವಾಸ ಸಾಕು ಅಂತ ಊರ ಹೊರಗಡೆ ಯೋಗಾಶ್ರಮ ಕಟ್ಕೊಂಡಿರೋ ಚಿದಾನಂದಾವಧೂತರ ಬಳಿಗೆ ಹೋಗುವೆನು.... ಇಂಥಾ ತಾಯಿ ಹೆಂಡತಿಯರ ನಡುವೆ ರಾಜಿ ಕುದುರಿಸುವ ಬಗ್ಗೆ ಕುರಿತು ಮಾತು ತೆಗೆಯುತ್ತೇನೆ... ಅದಕ್ಕೆ ಅವರೂ ಪಕಪಕ ನಗಾಡುವರು... ಕಾರಣ ಕೇಳುತ್ತೇನೆ. "ಎಂಥ ಅದೃಷ್ಟವಂತರು ನೀವು ಶಾಮಾ ಶಾಸ್ತ್ರಿಗಳೇ... ಇಂಥಾ ಜಗಳ ಸದಾ ಕೇಳುತ್ತಿದ್ದರೆ ಖಂಡಿತ ಅಲೌಕಿಕ ಆನಂದದ ಸಾಕ್ಷಾತ್ಕಾರವಾಗುತ್ತದೆ... ಬಾಲ ಶಂಕರನು ಪೂರ್ಣ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವನ ಕಾಲನ್ನು ಕಚ್ಚಿದ ಮೊಸಳೆಯ ಎರಡು ಮಾನವ ರೂಪಗಳೇ ನಿಮ್ಮ ತಾಯಿ ಮತ್ತು ಹೆಂಡತಿ. ಅವರನ್ನು ಅವರ ಪಾಡಿಗೆ ಜಗಳವಾಡಲು ಬಿಡಿ. ಆ ಜಗಳ ಕೇಳುತ್ತಾ ಕೇಳುತ್ತಾ ಶಂಕರಾಚಾರ್ಯರ ಮಹಾನುಶಾಸನವನ್ನು ಕಂಠಪಾಠ ಮಾಡುತ್ತಾ ಹೋಗಿ... ಜಗಳ ಮತ್ತುಧ್ಯಾನ, ಧ್ಯಾನ ಮತ್ತು ಜಗಳ ಇವೆರಡರ ಸಂಘರ್ಷದಿಂದ ನಿಮ್ಮಲ್ಲಿ ಅಲೌಕಿಕವಾದ ಜ್ಞಾನ ಹುಟ್ಟುವುದು... ಆ ಜ್ಞಾನ ಬಲವೃದ್ಧಿ ಆಗೀ ಆಗೀ ನಿಮ್ಮ ಮಸ್ತಿಷ್ಯಕ್ಕೆ ಏರುವುದು... ಅದರಿಮ್ದ ಕುಂಡಲೀ ಶಕ್ತಿ ಜಾಗೃತವಾಗುವುದು... ಆಗ ನೀವು "ಆನಂದೋ ಬ್ರಹ್ಮ" ಎಂದು ಉದ್ಗರಿಸುವಿರಿ. ಕ್ರಮೇಣ ಆಚಾರ್ಯತ್ರಯರ ಪದವಿಗೇರುವಿರಿ... ಆಗ ಪೂಜಾರ್ಹರಾಗುವಿರಿ’ ಎಂದು ಮೊದಲಾಗಿ ಹೇಳಿ ತಲೆ ತಿನ್ನುವರು.
ಮುಂದೊಂದು ದಿನ ಚಿದಾನಂದಾವಧೂತರನ್ನು ಶಪಿಸಿ ಮನಶ್ಯಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ವೇದವ್ಯಾಸ ಜೋಷಿಯವರ ಬಳಿಗೆ ಹೋಗುವೆನು... ಅವರೂ ಪಕಪಕ ನಗಾಡಿ ಇಂಟೆರೆಸ್ಟಿಂಗ್ ಎಮ್ದು ಉದ್ಗರಿಸುವರು... ನಾವೀಗ ಮಾಡ್ತಿರೋ "ಸ್ಪ್ಲಿಟ್ ಪರ್ಸನಾಲಿಟೀಸ್ ಇನ್ ಅವರ್ ಇಂಡಿಯನ್ ರೂರಲ್ ಸೊಸೈಟಿ" ಎಂಬ ಸಂಶೋಧನೆಗೆ ನೀವು ಹೇಲ್ತಿರೋ ಘಟನೆ ತುಂಬ ಹೆಲ್ಪ್ ಆಗ್ತದಲ್ರೀ ಮಿ. ಶಾಸ್ತ್ರೀಜಿ. ಅವರಿಬ್ಬರು ಜಗಳಾಡೊದನ್ನ ಗುಟ್ಟಾಗಿ ಟೇಪ್‌ರಿಕಾರ್ಡ್ ಮಾಡ್ಕೊಂಡು ತಂದ್ಕೊಡ್ತೀರಾ ಪ್ಲೀಜ್... ಬೇಕಾದ್ರೆ ಜಪಾನ್ದು ರೆಕಾರ್ಡರ್ ಕೊಡ್ತೀನಿ... ಬೈದಬೈ ಆ ಅಪರೂಪದ ಅತ್ತೆ ಸೊಸೆಯರ ಜೊತೆ ಡಿಸ್ಕಸ್ ಮಾದ್ಲಿಕ್ಕೂ ಅವಕಾಶ ಮಾಡ್ಕೊಡಿ..." ಎಂದು ಹೇಳಿ ತಲೆ ತಿನ್ನುವನು...
ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುವುದಕ್ಕೆ ಬೇಸತ್ತು ನಾನು ಯಾರ ಬಳಿಗೂ ಹೋಗುವುದಿಲ್ಲ... ಒಂಟಿಯಾಗಿ ಅಲೆದಾಡುವ ಅಭ್ಯಾಸ ಮಾಡಿಕೊಳ್ಳುತ್ತೇನೆ. ಯಾರೊಂದಿಗೂ ಮಾತಾಡುವ ಮತ್ತು ಮಾತಾಡದೇ ಇರುವ ಭಯ ಕಾಡಲಾರಂಭಿಸುವುದು... ಎಷ್ಟು ದೂರದಲ್ಲಿದ್ದರೂ ತಾಯಿ ಮತ್ತು ಹೆಂಡತಿಯರೀರ್ವರು ತಲೆಯಿಂದ ಮರೆಯಾಗುವುದಿಲ್ಲ... ಜಗಳ ಕೇಳೀ ಕೇಳೀ ಅವರ ಮಾತುಗಳನ್ನು ನನಗರಿವಿಲ್ಲದಂತೆ ನಾನು ಅನುಕರಿಸುವೆನು... ನಗೆಪಾಟಲಾಗುವೆನು... ವಯಸ್ಸಾದ ಬ್ರಾಹ್ಮಣ ವಿಧವೆಯರು ತಾಯಿ ಅಲುಮೇಲಮ್ಮನಂತೆಯೂ ತರುಣಿಯರು ಯುವತಿಯರು ಹೆಂಡತಿ ವರಲಕ್ಷ್ಮಿಯಂತೆಯೂ ಗೋಚರಿಸಲು ಶುರುವಾಗುವುದು.
ಮುಂದೊಂದು ದಿನ ಏನಾಗುವುದೆಂದರೆ ಅತ್ತೆ ಮತ್ತು ಸೊಸೆಯರ ನಡುವಿನ ಜಗಳದ


೪೨೮
ಉಷ್ಣತಾಮಾನ ಅರವತ್ತು ಡಿಗ್ರಿ ಸೆಲ್ಸಿಯಸ್ಸಿಗೆ ತಲುಪಿರುವುದು. ಕೈ ಕೈ ಮಿಲಾಯಿಸಿರುವರು. ಆಕೆಯ ಮೈಮೇಲಿನ ಬಟ್ಟೆಯನ್ನು ಈಕೆಯೂ; ಈಕೆಯ ಮೈಮೇಲಿನ ಬಟ್ಟೆಯನ್ನು ಆಕೆಯೂ; ಹರಿದು ಚಿಂದಿ ಚಿಂದಿ ಮಾಡುವರು. ಆ ಮೂಲೆಗೊಬ್ಬರು, ಈ ಮೂಲೆಗೊಬ್ಬರು, ಕೂಡ್ರುವರು. ಒಲೆಉಅಲ್ಲಿ ಬೆಕ್ಕು ಮಲಗಿ ಗುರ್ ಎಮ್ದು ಸದ್ದು ಮಾಡುತಿರುವುದು.
ಓಣಿಯ ಹಿರಿಯರು ಅವರ ನಡುವೆ ರಾಜಿ ಕುದುರಿಸುವ ಪ್ರಯತ್ನ ಮಾಡುತ್ತಿರುವರು...
ಅದೇಹೊತ್ತಿಗೆ ನಾನಲ್ಲಿಗೆ ಅಪರಾಧಿಯಂತೆ ಹೊಗುವೆನು... ಮತ್ತೆ ಜಗಳ... ಪಂಚಾಯ್ತಿ... ಇತ್ಯಾದಿ... ಆಗ ಓಣಿಯ ಹಿರಿಯರು "ನಿನ್ನ ಹೆಂಡತಿಯನ್ನು ನೀನು ಕರ್ಕೊಂಡು ಕೊತ್ತಲಿಗಿಗೆ ಹೋಗಿಬಿಡಪ್ಪ... ಅತ್ತೆ ಸೊಸೆ ಹೊಂದ್ಕೊಳ್ತಿಲ್ಲ... ಸೊಸೆ ಅತ್ತೆ ಹೊಂದ್ಕೊಳ್ತಿಲ್ಲ... ಅವರಿಬ್ಬರೂ ಹಾವು ಮುಂಗುಸಿಯಂತೆ ಕಾದಾಡುತ್ತಿರುವುದನ್ನು ನೋಡೀ ನೋಡೀ ನಮಗೆ ಸಾಕಾಗಿ ಹೋಗಿದೆ..." ಎಂದು ಹೇಳುತ್ತಾರೆ.
"ಆಗ್ಲಿ ಯಜಮಾನ್ರೆ... ಕೊತ್ತಲಿಗೀಲಿ ಒಂದು ಮನೆ ಮಾಡಿ ನಾನಿವಳನ್ನು ಕರ್ಕೊಂಡು ಹೋಗ್ತೀನಿ" ಎಂದು ಭರವಸೆ ನೀಡುತ್ತೇನೆ.
"ಹಾಗೆ ತಾಯಿ ಕಡೆಗೂ ಒಂದು ಕಣ್ಣು ಇಟ್ಟಿರಪ್ಪಾ... ಮಾತೃ ದೇವೋಭವ ಅಂತ ವೇದಗಳು ಹೇಳಿದ್ದಾವೆ" ಎಂದು ತಿಪಟೂರು ಕಡೆಯ ವೃದ್ಧೆಯೋರ್ವರು ಎಚ್ಚರಿಸುತ್ತಾರೆ...
ಆಗ ನಾನು "ಎಲ್ಲಾದ್ರು ಉಂಟೆ ತಾಯಿ" ಎಂದು ಶಿರಸಾವಹಿಸುತ್ತೇನೆ.
ನಾನು ಮರುದಿನ ಕೊತ್ತಲಿಗಿಗೆ ಹೋದೆನು. ಬ್ಯಾಂಕ್ ಸೇರಿಕೊಂಡೆನು... ಸಹೋದ್ಯೋಗಿಗಳಾದ ವಿಶ್ವೇಶ್ವರ, ಇಸ್ಮಾಯಿಲ್, ಚಂಬಸಯ್ಯ, ಶಾಂತಿ, ಹೆಬ್ರಿ, ಗೋವಿಂದಾಚಾರ್ಯ, ಓಬನ್ನ ಮೊದಲಾದವರು ನನ್ನ ಜೊತೆಗೆ ಕಾರಣ ವಿಚಾರಿಸುತ್ತಾರೆ... ಈ ಭಾಗದಿಂದ ಕಥೆ ಶುರು ಮಾದು ಕುಂವೀ... ಈ ವಿಷಯದಲ್ಲಿ ನಾನು ನಿನಗೆ ಸರ್ವ ಹಕ್ಕುಗಳನ್ನು ಕೊಡುತ್ತಿರುವೆ. ಯೋಚಿಸಬೇಡ... ಬರೆದುಬಿಡು... ನಾನಿನ್ನು ಹಸ್ತಪ್ರತಿಯೋಳಗೆ ನಿರ್ಗಮಿಸಲು ನನಗೆ ಆಜ್ಞೆ ಮಾಡು ಗೆಳೆಯಾ" ಎಂದು ಶಾಮ ಶೂದ್ರ ಸಹಜ ಬುದ್ಧಿಯಿಂದಾಗಿ ನನ್ನನ್ನೂ ನನ್ನ ಬದುಕನ್ನೂಲೇವಡಿ ಮಾಡಲು ಮರೆಯಬೇಡ.
ಎಂದು ಪಾತ್ರವು ಹೇಳಿಕೊಂದಿತು.
"ಹೋಗು ಶಾಮ... ಎಲ್ಲಿಗಾದ್ರು ಹೋಗಿ ಬೇಸರ ಕಳೆದುಕೊಂಡು ಬರ್ತಿಎಉ..." ಎಂದು ನಾನು ಆ ಪಾತ್ರಕ್ಕೆ ನಿರೀಕ್ಷಣಾ ಜಾಮೀನು ನೀದಿದೆನು.
ಅದು ಹೋಯಿತು.
ನಾನು ನೆಮ್ಮದಿಯಿಂದ ಉಸಿರುಬಿಟ್ಟೆ.
ಗಾಳಿ ತಣ್ಣಗೆ ಬೀಸಿತೆಂಬಲ್ಲಿಗೆ ಕುಂವೀ ಎಂಬ ನರಮಾನವ ವಿರಚಿತ ಶಾಮಣ್ಣ ಎಂಬ ಕಥಾನಕದ ಚತುರ್ಥಾಶ್ವಾಸಂ ಪರಿಸಮಾಪ್ತಿಯಾದುದು.
ಜಯಮಂಗಳಂ ನಿತ್ಯ ಶುಭ ಮಂಗಳಂ
*
*
* *


೪೨೯
ಪಂಚಮಾಶ್ವಾಸಂ
ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ ಇನ್ನೊಬ್ಬರು ತನ್ನ ಪಾದಗಳಿಷ್ಟಿರಬೇಕು ಎಂದು ಭಾವಿಸುವವನಾದ ಅವನು ಕೊತ್ತಲಿಗಿಗೆ ಮಾಡಿದ ದೊಡ್ಡ ಉಪಕಾರವೆಂದರೆ ಬ್ಯಾಂಕು ಮುಂಜೂರು ಮಾಡಿಸಿದ್ದು. ದಲಿತರು, ಶೂದ್ರರು, ದೇವದಾಸಿಯರು, ರಂಗಕಲಾವಿದರೇ ಬಹುಪಾಲು ವಾಸಿಸುತ್ತಿರುವ ಸೋಮವಾರಪೇಟೆ, ಶನಿವಾರಪೇಟೆ, ಅಂಬೇಡಕರ ನಗರ, ಇಂದಿರಾನಗರ ಇಂಥ ಒಂದೊಂದು ಓಣಿಗೂ ಒಬ್ಬೊಬ್ಬರಂತೆ ಇರುವ ಅಮರ ಅಕ್ಬರ ಅಂಥೋಣಿ ಮುಂತಾದ ಪಿಗ್ಮಿ ಕಲೆಕ್ಟರುಗಳು ಸಂಗ್ರಹಿಸಿ ತಂದು ಕಟ್ಟುವ ಹಣವನ್ನೇ ಸದರಿ ಗ್ರಾಮದ ಸೀನಪ್ಪ, ಯಂಟೇಸಪ್ಪ, ಉಮೇಚಪ್ಪ ಮೊದಲಾದ ಸಿರಿವಂತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದು ಅವರು ಅದನ್ನೇ ಹೆಚ್ಚಿನ ಬಡ್ಡಿ ದರದಲ್ಲಿ ಸೋಮವಾರಪೇಟೆ, ಶನಿವಾರಪೇಟೆ ಮೊದಲಾದ ಕಡೆ ವಾಸಿಸುತ್ತಿರುವ ಶ್ರಮಿಕರಿಗೆ ಸಾಲ ಕೊಡುವುದು. ಹೀಗಾಗಿ ಆ ಬ್ಯಾಂಕು ಬಂದಂದಿನಿಂದ ಬಡವರ ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಿದೆ. ಅದಕ್ಕಾಗಿ ಶ್ರಮಿಸುವ ಮತ್ತು ದೇಶಾವರಿ ನಗೆಯನ್ನು ಗಾಳ, ದಾಳ ಎರಡೂ ಮಾಡಿಕೊಂಡಿರುವ ಬ್ಯಾಂಕಿನ ಸ್ಟಾಫು ಒಂದೇ ಮರದ ಎರಡು ಕೊಂಬೆ ರೆಂಬೆಗಳಂತಿರುವುದು. ಆ ಮರದ ಕಾಂಡವೇ ಮ್ಯಾನೇಜರು.
ಜವಾನ ಕಂ ಅಟೆಂಡರನಾಗಿರುವ ಓಬಯ್ಯ ಆ ಬ್ಯಾಂಕಿಗೇನೆ ಒಂದು ಹಾರ್ಟ್ ಇದ್ದಂತೆ. ಸೋಮವಾರಪೇಟೆಯ ಎಸ್. ಎಸ್.ಎಲ್.ಸಿ ಪದವಿಯನ್ನು ಏಳನೆ ಅಟೆಂಪ್ಟಿಗೆ ಪಡೆದವನೂ, ಹುಣಸೇಮರದ ಮನೆಯ ಓಬವ್ವ ಅಲಿಯಾಸ್ ಅನಾರ್ಕಲಿಯ ಮೊಮ್ಮಗನೂ ವಿಟಪುರುಷನೊಂದಿಗೆ ನಡೆದ ಮಾರಾಮಾರಿಯಲ್ಲಿ ಎಡಗಾಲಿನ ಮೂರು ಬೆರಳುಗಳನ್ನುಕಳೆದುಕೊಂಡವನೂ, ಡಿಸ್ಟ್ರಿಕ್ಟ್ ಹೆಲ್ತ್ ಆಫೀಸರ್ ಡ್.ರಾಜೇಂದ್ರಗುಪ್ತ ಎಂ.ಬಿ.ಬಿ.ಎಸ್., ಎಂ.ಎಸ್., ಅವರ ಕೈ ಬೆಚ್ಚಗೆ ಮಾಡಿ ಅಂಗವಿಕಲನೆಂದು ಸರ್ಟಿಫಿಕೇಟ್ ಪಡೆದು ಆ ಆಧಾರದ ಮೇಲೆ ನೌಕರಿಗೆ ಸೇರಿದಂಥವನೂ, ಇಲಿಯನ್ನು ಹುಲಿಯನ್ನಾಗಿಯೂ; ಹುಲಿಯನ್ನು ಇಲಿಯಾಗಿಯೂ ಮಾಡುವುದರಲ್ಲಿ ನಿಸ್ಸೀಮನೂ ಆದಂಥ ಅವನು ಮಿರಿಮಿರಿ ಮಿಂಚುವ ಬುಷ್‌ಷರ್ಟ್ ಪ್ಯಾಂಟು ತೊಟ್ಟುಕೊಂಡು ಹುಣಸೆ ಮರದ ಮನೆಯಿಂದ ಹೊರಬಿದ್ದು ಖಲೀನನ ಪಾನ್ ಶಾಪಿನಲ್ಲಿ ಪಡೆದ ತ್ರೀಹಂಡ್ರಡ್ಡನ್ನು ದವಡೆಯಲ್ಲಿ ಪ್ರತಿಷ್ಟಾಪಿಸಿಕೊಂಡು ಶನಿವಾರ ಪೇಟೆಯಲ್ಲಿ ಹತ್ತು ಸಾರಿ ಕೊಟ್ಟೆಲಪ್ಪನ ತೇರು ಬಜಾರದಲ್ಲಿ ಐದುಸಾರಿ, ನಂತರ ಬರುವ ಬಸ್‌ಸ್ಟಾಂಡಿನಲ್ಲಿ ಮೂರು ಸಾರಿ ಪಿಚುಕು ಪಿಚುಕು ಅಂತ ಉಗುಳಿ ಭೂಮ್ತಾಯಿರುಣಾ ತೀರಿಸುತ್ತ, ತೊಂಬೂಲದುಂಡೆಯನ್ನು ಮುನುಸೋಬರ ಮನೆ ಮುಂದಿರುವ ಮಾತ್ಮಾಗಾಂಧಿಯವರ ಕಾಲಬುಡಕ್ಕೆ ಉಗುಳಿ ಹತ್ತೂಕಾಲಿಗೆಲ್ಲ ಬ್ಯಾಂಕು ಸೇರಿಕೊಂಡು ಬರುವವರನ್ನು ಮಾವಂದಿರಂತೆಯೂ, ಹೋಗುವವರನ್ನು ಅಳಿಯರಂತೆಯೂ ಸಂಭೋದಿಸುತ್ತ ಇಡಿ ಬ್ಯಾಂಕಿನಲ್ಲಿ ತುಂಬ ಜನಪ್ರಿಯ ವ್ಯಕ್ತಿಯಾಗಿರುವನು.
ಮೀಸಲಾತಿ ಆಧಾರದ ಮೇಲೆ ಬಿ.ಎ., ಪಾಸು ಮಾಡಿ ನೌಕರಿಗೆ ಸೇರಿರುವ ಟಿ.ಎಂ.ಕೆ.
-

೪೩೦
ವಿಶ್ವೇಶ್ವರನು (ಅಂದರೆ ತೂಲಹಳ್ಳಿ ಮಾದಿಗರ ಕರಿಯಪ್ಪನ ಮಗ ವಿಶ್ವೇಶ್ವರ) ಲಟಿಗಾಪುಟಿಗಾ ಲೂನಾದ ಮೇಲೆ ವಯಾ ಬಡೇಲಡುಕು ಮೂಲಕ ತೂಲ ಹಳ್ಳಿಯಿಂದ ಅಪ್ ಅಂಡ್ ಡೌನು ಮಾಡುತ್ತಿದ್ದರೆ, ಜಮಾತೇ ಇಸ್ಲಾಮಿನ ಹೊಸಪೇಟೆ ವಿಭಾಗದ ಸಂಚಾಲಕರ ಮಗನಾದ ಇಸ್ಮಾಯಿಲು ಮಾದೇದೇವಿ ಮೂಲಕ ಅಂಡ್ ಡೌನ್ ಮಾಉತ್ತಿರುವನು. ಕುಪ್ಪಿನಕೇರಿ ಲಿಂಗಾಜನೇಯನ (ಹದಿನಾರನೆ ಶತಮಾನದಲ್ಲಿ ಕುಂತಳ ನಾಡಿನ ಪಂಚಗಣಾಧೀಶ್ವರರಾದ ಕೊಟ್ಟೂರಿನ ಕೊಟ್ಟೂರೆಶ್ವರರ, ನಾಯಕನ ಹಟ್ಟಿ ತಿಪ್ಪ್ರುದ್ರಸ್ವಾಮಿ, ಕೂಲಹಳ್ಳಿ ಮುದ್ಧಾನೇಶ, ಅರಸೀಕೆರೆಯ ಕೋಲ ಶಾಂಟೇಶ, ಹರಪನಹಳ್ಳಿ ಕೋಲ ಶಾಂತೆಶರು ಅದೇ ತಾನೆ ಹಾಳಾದ ಹಂಪೆಯಿಂದ ತಂತಮ್ಮ ಕಾರ್ಯಕ್ಷೇತ್ರಗಳಿಗೆ ಹೊರಟು ಹಾದಿ ಮಧ್ಯೆ ಬಂದ ಕುಪ್ಪಿನಕೇರಿ ಗ್ರಾಮದಲ್ಲಿ ತಂಗಿದರು. ತಮ್ಮನ್ನು ಸತ್ಕರಿಸಲೆಂದು ಬಂದ ಗ್ರಾಮಕಾಧಿದೇವತೆಯಾದ ಆಂಜನೇಯನ ಕೊರಳಲ್ಲಿ ಲಿಂಗವಿರದಿರುವುದನ್ನು ನೋಡಿ ಖೇದಗೊಂಡರು. ಲಿಂಗಾಂಗಿಯಲ್ಲದವರಿಂದ ಸತ್ಕಾರ ಸ್ವೀಕರಿಸಲು ನಿರಾಕರಿಸಿದರು. ಆಗ ಬೇರೆ ದಾರಿ ಕಾಣದೆ ಒಪ್ಪಿಕೊಂಡ ಆಂಜನೇಯನಿಗೆ ಲಿಂಗಧಾರಣೆ ಮಾಡಿದರು. ಅಂದಿನಿಂದ ಲಿಂಗಾಂಜನೇಯನೆಂದು ಹೆಸರಾಗಿ ವೀರಶೈವರಿಂದ ಪೂಜಿಸಿಕೊಳ್ಳತೊಡಗಿದನು. ಪ್ರಪಂಚದಲ್ಲಿ ತನ್ನ ಆಂಜನೇಯನೊಂದೇ ಲಿಂಗ ಧರಿಸಿರುವುದೆಂಬ ಹೆಗ್ಗಳಿಕೆಯಿಂದ ಕುಪ್ಪಿನಕೆರಿಯ ಒಂದೊಂದ್ಹೊತ್ತಿಗೂ ಪರದಾಡುತ್ತಿರುವ ಸದ್ಭಕ್ತ ಗಣಂಗಾದಿಗಳು ಬೀಗುತ್ತಿರುವರು) ಅರ್ಚಕನೂ, ಬಿಪಿಎಮ್ಮೂ, ಮತ್ತಿಸ್ಕೂಲು ಟೀಚರೂ, ವಾಲ್ಮೀಕಿ ಸಂಘದ ಗೌರವಾಧ್ಯಕ್ಷರೂ, ಅಸ್ತ್ಮಾ ರೊಗಿಗಳು ಆದಂಥ ಗರಡಿ ಮನೆ ಹನುಮಂಥಯ್ಯನವರ ಪಂಚಮ ಸುಪುತ್ರಿ ಕುಮಾರಿ ಜಿ.ಎಂ. ಶಾಂತಿ ಮೇರಾಲಾಂ ಮೂಲಕ ಅಪ್ ಅಂಡ್ ಡೌನ್ ಮಾಡುತ್ತಿರುವಳು.
ನುಗ್ಗೇಹಳ್ಳಿ ಪೀಠದ ಜಗದ್ಗಿರುಗಳ ಅಂತರಂಗದ ಬಂಟರೆಂದೇ ಖ್ಯಾತರಾಗಿರುವ ಪ್ರಭು ಒಡೆಯರ ಮಠದ ಚಂಬಸ್ಯನವರು ಕೊತ್ತಲಿಗಿಗೆ ಅಪ್ ಅಂಡ್ ದಊನ್ ಮಾಡಲು ಸೆಕೆಂಡ್ಯಾಂಡು ಬಜಾಜ್ ಸೂಪರು ಮಾಡಿಕೊಡಿರಿವರು.
ರಾಷ್ಟ್ರೀಯ ಸ್ವಯಂ ಸೇವಾ ದಳದ ಕಾರ್ಯಕರ್ತರೂ; ಅತಲ್ ಬಿಹಾರಿ ವಾಜಪೇಯಿಗಳ ಉಗ್ರಾಭಿಮಾನಿಗಳೂ ಆದಂಥ ಗೋವಿಂದಾಚಾರ್ಯರು ಹೀರೋಹೋಂಡಾದ ಮೂಲಕ ಹೊಸಪೇಟೆಯಿಂದ ಅಪ್ ಅಂಡ್ ದೌನ್ ಮಾಡುತ್ತಿರುವರು. ಶ್ರೀಯುತ ಹೆಬ್ರಿಯವರು ಬಾಬ್ರಿ ಮಸೀದಿ ಕೆಡವಲೆಂದು ಅಯೋಧ್ಯೆಗೆ ಹೋಗಿ ಅಲ್ಲಿಂದ ಮಸೀದಿಯ ಇಟ್ಟಿಗೆಯ ಚೂರು ತಂದು ತಮ್ಮ ಮನೆಯ ಮುಂದೆ ಸಾರ್ವಜನಿಕವಾಗಿ ವೀಕ್ಷಣೆಗೆ ಇರಿಸಿದ್ದರು. ನರರೂಪ ರಾಕ್ಷಸನೂ; ಹಿಟ್ಲರನ ಆಂತರಂಗಿಕ ವ್ಯಕ್ತಿಯೂ ಆದಂಥ ಷಿಂಡ್ಲರ್ ಸಮಾಧಿ ಕಡೆ ಯಹೂದಿಗಳು ತಿರಸ್ಕಾರದಿಂದ ನೋಡುತ್ತಿದ್ದರಲ್ಲ ಹಾಗೆಯೇ ರಾಮಜನ್ಮಭೂಮಿ ಕಾರ್ಯಕರ್ತರು ನೋಡಿ ಖುಷಿಪಟ್ಟರು. ಹೆಬ್ರಿಯವರು ಆ ಇಟ್ಟಿಗೆ ತುಂಡನ್ನು ಇಕ್ಬಾಲ್ಕೇರಿಯೊಳಗೆ ಮೆರವಣಿಗೆ ಮಾಡಿಸಿ ಲಾಲಕ್ರಿಷ್ಣ ಅದ್ವಾನಿಯವರ ಗಮನ ಸೆಳೆಯಲು ಪ್ರಯತ್ನಪಟ್ಟರಾದರೂ ಪೊಲಿಸ್ ಅಧಿಕಾರಗಳ ಸಕಾಲಿಕ ಎಚ್ಚರದಿಂದಾಗಿ ಅದು ಸಾಧ್ಯವಾಗಲಿಲ್ಲ. ಹೋದೋರು, ಬಂದೋರಿಗೆಲ್ಲ ತಾವು ತಾವು ಫೋಟೊ ತೋರಿಸುತ್ತ ಉ.ಪ್ರ.ಮು.ಮಂ.ಕಲ್ಯಾಣಸಿಂಗ್ ಯಾದವರ ಜೊತೆ ತೆಗೆಸಿಕೊಂಡ ಈಸ್ಟ್ಮನ್ ಕಲ್ಲರು ತಾವು ಫೋಟೊ ತೋರಿಸುತ್ತ "ನಿಜವಾದ ಮುಖ್ಯಮಂತ್ರಿ ಅಂದ್ರೆ ನೋಡಿ ಮಾರಾಯ್ರೆ... ಅಂಥೋರು ನಮ್ಮ ಮುಖ್ಯಮಂತ್ರಿ ಆದಾಗ ಮಾತ್ರ ಕರ್ನಾಟಕದ ಉದ್ಧಾರ ಸಾಧ್ಯ ಎಂದೋ,
-

೪೩೧
ಶ್ರೀರಾಮ ಕರ್ನಾಟಕದಲ್ಲಿ ಹುಟ್ಟಿದ್ದರೆ ಆ ಕಥೆಯೇ ಬೇರೆ ಆಗ್ತಿತ್ತೆಂದೋ ಹೇಳುತ್ತಿದ್ದರು. ಬಾಬ್ರಿ ಮಸೀದಿಯನ್ನೂ, ಮುಸ್ಲಿಮ್ಮರನ್ನೂ ಬಯ್ದವರಿಗೆ ಮಾತ್ರ ಸಾಲ ಮುಂಜೂರುಮಾಡುವರು. ಈ ಕಾರಣದಿಂದಾಗಿ ಹಲ್ಲು ಸಂಧಿಯಲ್ಲಿ ಕಡ್ಡಿ ತೂರಿಸುವುದನ್ನು ಅಬ್ಯಾಸ ಮಾಡಿಕೊಂಡಿರುವ ಮೇನೇಜರ್ ಹೆಬ್ರಿ ಗೋವಿಂದಾಚಾರ್ಯರಿಗೂ; ಅಲಗಾಡುತ್ತಿರುವ ಮೇಲ್ದವಡೆಯ ಮುಂಬಾಗದ ಹಲ್ಲಿನ ಹಿಂದೂ ಮುಂದೂ ಜಿಹ್ವಾ ಸಂಚಲನ ಮಾಡುವ ಜಮಾತೆ ಇಸ್ಲಾಮಿನ ಔರಸಪುತ್ರ ಇಸ್ಮಾಯಿಲರಿಗೂ ಸದಾ ಎಣ್ಣೆ ಸೀಗೇಕಾಯಿ ಸಂಬಂಧ. ಗಿರಾಕಿಗಳನ್ನೂ, ಜನರನ್ನೂ ಪರಸ್ಪರ ವಿರುದ್ಧ ಎತ್ತಿಕಟ್ಟುವುದರಲ್ಲಿಯೇ ಅರ್ಧಾಯುಷ್ಯ ಕಳೆದಿರುವ ಇವರು ತೋರಿಕೆಗೆ ಸದಾ ಮುಗುನಗುತ್ತಲಿರುವರು. ರಾಜಕೀಯ ಬೆಂಬಲವಿಲ್ಲದಿದ್ದರೆ ಅವರು ಮಥುರೆಯ ಯಾದವರಂತೆ ಪರಸ್ಪರ ಹೊಡೆದಾಡಿಕೊಂಡು ಸಾಯುವರೆ? ಆದರೆ ಸ್ಥಳೀಯ ರಾಜಕಾರಣಿಯಾದ ಗುಲಾಂನಬಿಯ ‘ದುಆ’ ಇಸ್ಮಾಯಿಲರ ಮೇಲೂ, ಕರಣಂ ಸೇತೂ ಮಾಧವಾಚಾರ್ಯ ಹಿರಿಯ ಕಾಂಗ್ರೆಸ್ ಮುಖಂಡರ (ಹರಪನಹಳ್ಳಿಯ ಕರಣಂಗಾರಿ ಓಣಿಯಲ್ಲಿರುವ ಅವರ ಮನೆಯಲ್ಲಿ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲರೊಂದಿಗೆ ತೆಗೆಸಿಕೊಂಡಿರುವ ಬ್ಲಾಕ್ ಅಂಡ್ ವೈಟ್‌ಭಾವಚಿತ್ರವನ್ನು ಇಂದಿಗೂ ನೋಡಬಹುದಾಗಿದೆ) ‘ಧೀರ್ಘಾಯುಷ್ಮಾನ್ ಭವ’ ಎಂಬ ಆಶೀರ್ವಾದ ಹೆಬ್ರಿಯವರ ಮೇಲಿರುವುದು.
ಅವರೀರವರನ್ನು ಕೂಳು ನೀರು ದೊರಕದ ಊರಿಗೆ ಎತ್ತಂಗಡಿ ಮಾಡಿಸಿ ಅವರ ಜಾಗದಲ್ಲಿ ವೀರಶೈವ ಜಂಗಮ ಕೋಮಿಗೆ ಸೇರಿದವರನ್ನು ತರಲೋಸುಗ ಶ್ರೀಯುತ ಪಿ.ಎಂ.ಚಂಬಸಯ್ಯನವರು ಜಗದ್ಗುರುಗಳ ಮೂಲಕ ಮಾಡುತ್ತಿರುವ ಪ್ರಯತ್ನ ಇದುವರೆಗೂ ನೆರವೇರಿಲ್ಲ.
ಹದಿನೇಳು ವರ್ಷಗಳಲ್ಲಿ ಹಿಂದೆಯೇ ಋತುಮತಿಯಾಗಿದ್ದು ಅವಿವಾಹಿತೆಯಾಗಿ ಉಳಿದಿರುವ ಕು.ಜಿ.ಎಂ.ಶಾಂತಿಯವರಿರದಿದ್ದಲ್ಲಿ ಆ ಬ್ಯಾಂಕು ಎಂದೋ ಸರಯೂ ನದಿಯ ತಟವಾಗಿರುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ವಿವಾಹವೇ ದುಃಖಕ್ಕೆ ಮೂಲ ಎಂದು ವಾದಿದುವ ಉಗ್ರ ಸ್ತ್ರೀವಾದಿಯಾಗಿರುವ ಆಕೆ ಸ್ಲೀವ್ಲೆಸ್ ಬ್ಲೌಜು ತೊಟ್ಟು; ಹೊಕ್ಕಳ ಮತ್ತು ಕಿಬ್ಬೊಟ್ಟೆ ಕಾಣಿವಂತೆ ಪಾರದರ್ಶಕ ಸೀರೆ ಉಟ್ಟು ಬರುವ ಆಕೆ ಜೂನಿಯರ್ ಸಿಲ್ಕ್ ಸ್ಮಿತಾ ಎಂದೇ ಹೆಸರಾಗಿರುವಳು... ಆಕೆಯಿಂದಾಗಿಯೇ ಸದರೀ ಬ್ಯಾಂಕಿನ ಠೇವಣಿ ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆಯಾಗಿರುವುದು. ಎಂಥ ಘೇಂಡಾಮೃಗವೂ ಆಕೆಯತ್ತ ಮುಗುಳುನಗೆ ಚೆಲ್ಲದೆ ಇರದು. ಮೇನೇಜರು ಗೋವಿಂದಾಚಾರ್ಯರೂ; ಇಸ್ಮಾಯಿಲ್; ಚಂಬಸ್ಯ ಈ ಮೂವರು ಈಕೆಯ ಕೃಪಾಕಟಾಕ್ಷಕ್ಕೆ ಒಳಗಾಗಲು ತಂತಮ್ಮ ಜಾತಿಮತ ಸಂಘಟನೆಗಳನ್ನು ಮರೆಯುವರು... ಪತ್ತೆದಾರಿ ಕಾದಂಬರಿಯ ಪುರುಷೋತ್ತಮನಾದ ಓಬಲೇಶನು ಬ್ಯಾಂಕಿನ ವಿದ್ಯಮಾನಗಳಿಗೆ ಉಪ್ಪು, ಹುಳಿ ಖಾರ ಬೆರೆಸಿ ಊರಲ್ಲಿ ಟಾಂ ಟಾಂ ಹೊಡೆಯುವನು.
ಇಂಥ ಸನ್ನಿವೇಶದಲಿಯೇ ಶಾಮಾ ಶಾಸ್ತ್ರಿಯು ಡ್ಯೂಟಿಗೆ ಜಾಯಿನಾದುದು. ಹೇಗೋ ಸ್ಮಾರ್ಥ ಬ್ರಾಹ್ಮಣನಾದ ಶಾಸ್ತ್ರಿಯು ಬಂದು ತನ್ನ ಬಲಗೈಯನ್ನು ಬಲಪಡಿಸಿದಂತಾಯ್ತು ಎಂದು ಮೇನೇಜರು ಬಗೆದನು.
"ಮೇನೇಜರ್ರೂ ಆರೆಸ್ಸೆಸ್ಸು ಕುಳ ಶಾಸ್ತ್ರಿ... ಅಯೋಧ್ಯೆಯನ್ನು ಹೃದಯದಲ್ಲಿಟ್ಕೊಂಡು ಅವನು ಕೆಲಸ ಮಾಡ್ತಿರೋದು ಮ್ಯಾನೇಜ್ಮೆಂಟಿಗೆ ಗೊತ್ತಾಗಿದೆ... ಅವನನ್ನು ಯಾವುದಲ್ಲಾದರೂ ಇರುಕಿಸಿ ಬೆಂಡೆತ್ತಬೇಕೆಂದು ಗೌರ್‍ಮೆಂಟೂ ಕಾಯ್ತಾ ಇದೆ... ಅವನತ್ರ ಸ್ವಲ್ಪ ಹುಷಾರಿಂದ
-

೪೩೨
ವರ್ತಿಸು..." ಎಂದು ಇಸ್ಮಾಯಿಲೂ...
ಸ್ಮಾರ್ಥರೆಂದರೆ ಲಿಂಗಾತ್ಯರಿದ್ದಂತೆ... ನೀವೂ ಹರಿಹರರ ನಡುವೆ ಭಿನ್ನ ಇಲ್ಲಾಂತ ಹೇಳ್ತೀರಿ ನಾವು ಇದೆ ಅಂತ ಹೇಳ್ತೀವಿ ಅಷ್ಟೆ... ನೀವು ವೀಭೂತಿ ಹಚ್ತೀರಿ... ನಾವೂ ವೀಭೂತಿ ಹಚ್ತೀವಿ... ಶಿವಭಕ್ತ ರಾವಣನನ್ನು ಕೊಂದ ರಾಮ ಇಂಥಲ್ಲೇ ಹುಟ್ಟಿದ್ದೂಂಥ ಹೇಳ್ತಾನಲ್ಲ ಆ ಮೇನೇಜರು ಅವನೆನಾದ್ರು ಹೋಗಿ ಕೌಸಲ್ಯಮ್ಮನ ಹೆರಿಗೆ ಮಾಡಿಸಿದ್ದನೇನು?... ಅವ್ನೂ ಅಷ್ಟೇ ಆ ಜಮಾತೆ ಇಸ್ಲಾಮಿನ ಇಸ್ಮಾಯಿಲೂ ಅಷ್ಟೆ... ಅವರಿಬ್ರು ಒಂದು ಹಾವಿನ ಎರಡು ತಲೆಗಳಿದ್ದಂತೆ... ಅವರಿಬ್ರನ್ನು ಪೋಲೀಸ್ರು ಇಂದಲ್ಲ ನಾಳೆ ಹಿದ್ಕೊಂಡು ಹೋಗಿ ಒದಿತಾರೆ ನೋಡ್ತಿರು.... ಅದ್ರಿಂದ ಅವರಿಬ್ರ ಜೊತೆ ಸಲಿಗೆ ಬೆಳಸಬೇಡ... ಅದೇನಿದ್ರು ನನ್ ಜೊತೆ ಬೆಳೆಸು... ವಿಭೂತಿ ಹಚ್ಚೋ ನಾವಿಬ್ರು ಎಂದಿದ್ರು ಒಂದೆ ಏನಂತೀ?ಆ?" ಎಂದು ಪಿ.ಎಂ.ಚಂಬಸ್ಯನೂ ಶಾಸ್ತ್ರಿಯ ಕಿವಿಯಲ್ಲಿ ಊದತೊಡಗಿದರು.
ಶಾಮಾಶಾಸ್ತ್ರಿ ಈ ಮುವ್ವರನ್ನು ಒಂದು ಪಗಡಿಯಲ್ಲೂ; ಜಿ.ಎಂ.ಶಾಂತಿಯ ಸ್ಲೀವ್ ಲೆಸ್ ತೋಳನ್ನು ಇನ್ನೊಂದು ಪಗಡೆಯಲ್ಲೂ ಇಟ್ಟು ತೂಗತೊಡಗಿದ. ಆಕೆಯ ತುಂಬುದೋಳಿನ ಮೇಲೆ ಒಂದರ ಕೆಳಗೆ ಒಂದರಂತೆ ಇದ್ದ ಹಳೆ ಇಪ್ಪತ್ತು ಪೈಸೆದಷ್ಟು ಅಗಲದ ಮೈಲಿ ಕಲೆಗಳು ಆತನ ಹೃದಯ ರಹಸ್ಯ ಸ್ಥಾವರದ ಮೇಲೆ ಧಾಳಿ ಮಾಡತೊಡಗಿದವು.
"ನಿಮ್ಮ ತೋಳಿನ ಮೇಲೆ ಒಂದು ಕವಿತೆ ಬರೆಯುವ ಆಸೆಯಾಗಿದೆ... ಅದನ್ನು ಮುಟ್ಟಲು ಆಸ್ಪದ ಕೊಟ್ಟು ಕವಿತೆಯನ್ನು ಸದೃಢಗೊಳಿಸುವಿರಾ?" ಎಂದು ಕೇಳುವ ಪ್ರಯತ್ನ ದಿನಂಪ್ರತಿ ಮಾಡತೊಡಗಿದ... ತುಂಬ ಗುಟ್ಟಾಗಿ...
ತೋಳಿಲ್ಲದ ರವಿಕೆ ಹೆಣ್ಣೆ
ಕುಣಿಯುವ ನವಿಲಿನ ಕಣ್ಣೆ
ಹೃದಯದಿ ಗೀತೆಯ ರಚಿಸು
ಅರಳಲಿ ಬದುಕಿನ ಸೊಗಸು
...ಎಂಬಂಥ ಚೌಪದಿ ಪದಿಯನ್ನು ರಚಿಸಿ ‘ಶ್ಯಾಂ’ ಎಂಬ ಸಂಕ್ಷಿಪ್ತ ನಾಮದಿಂದ ಕಳಿಸಿದ ಅದು ಜನ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಯುವಕರ ಗಮನ ಮಾತ್ರ ಸೆಳೆಯಿತು. ಅವರು ಅಲ್ಲಲ್ಲಿ ಗಟ್ಟಿಯಾಗಿ ಹಾಡಿಕೊಂಡರು. ಗೋಡೆಗಳ ಮೇಲೂ ಬರೆದು ಖುಷಿಪಟ್ಟರು. ತಿಂಗಳ ಭವಿಷ್ಯ ಓದುವ ಪ್ರೌಡರ ಗಮನವನ್ನು ಅದು ಸೆಳೆಯಲಿಲ್ಲ. ಸೆಳೆದರೂ ಪೋಲಿ ಪದ್ಯ ಎಂದುಕೊಂಡರು...
ಆ ಹನಿಗವಿತೆ ಪ್ರಕಟಗೊಂಡ ತರುಣದಲ್ಲಿ ಶಾಸ್ತ್ರಿಗೆ ಸಂತೋಷವಾಯಿತಾದರೂ ಅದು ಅಲ್ಪಾಯುಷಿಯಾಗಿತ್ತು. ‘ಶ್ಯಾಂ’ ಎಂಬುದರ ಬದಲು ಶಾಮಾಶಾಸ್ತ್ರಿ ಎಂದು ಬರೆದು ಕಳುಹಿಸಿದ್ದರೆ ಚೆನ್ನಾಗಿತ್ತು ಎಂದುಕೊಂಡ. ಕಾವ್ಯದ ಬಗ್ಗೆ ಯಾವುದೇ ಆಸಕ್ತಿ ಉಳಿಸಿಕೊಂಡಿರದಿದ್ದ ಶಾಂತಿ ಆ ಕಡೆ ತಿರುಗಿ ಸಹ ನೋಡಲಿಲ್ಲ...
ಆದರೆ ಶಾಮ ನಿರಾಶನಾಗಲಿಲ್ಲ... ತೋಳಿಲ್ಲದ ರವಿಕೆ ಕುರಿತು ಯಶಸ್ವಿಯಾದ ಚೌಪದಿಗಳನ್ನು ರಚಿಸುವುದರಲ್ಲಿ ಪಳಗಿದ. ದಿನಕ್ಕೊಂದರಂತೆ ಬರೆಯತೊಡಗಿದ. ಅದೂ ಯಾರಿಗೂ ಕಾಣದಂತೆ... ಮುಖ್ಯವಾಗಿ ಟಾಯ್ಲೆಟ್ಟಿಗೆ ಹೋದಾಗ ಚೌಪದಿಗಳು ಮೊಳೆಯತೊಡಗಿ ಮಲಗಿದ ಸ್ವಲ್ಪ ಹೊತ್ತಿಗೆಪೂರ್ಣ ರೂಪ ಪಡೆಯತೊಡಗಿದವು... ಹೊತ್ತಿಲ್ಲದ ಗೊತ್ತಿಲ್ಲದ ಹೊತ್ತಿನಲ್ಲಿ ಎದ್ದು


೪೩೩
ಡೈರಿಯಲ್ಲಿ ಬರೆದಿಟ್ಟುಕೊಂಡುಬಿಡುತ್ತಿದ್ದ.
ಇದೇ ತೋಳಿಲ್ಲದ ರವಿಕೆಯ ಉಪಾಸನೆಯಿಂದಾಗಿಯೇ ಅವನು ಅನಸೂಯಾ ತೋಳಿಲ್ಲದ ರವಿಕೆ ತೊಡುವುದನ್ನು ಅಭ್ಯಾಸ ಮಾಡಿಕೊಂಡಿರುವಳೋ ಇಲ್ಲವೋ ಎಂದು ಯೋಚಿಸಿ ಬೆಂಗಳೂರಿಗೆ ಹೋಗಲು ದಾರಿ ಮಾಡಿಕೊಟ್ಟಿತು. ಎಂದೂ ಊಹಿಸಬಹುದು.
ಇಂಥ ಚೌಪದಿಗಳ ರಚನಾ ಚಟದಿಂದಾಗಿ ಅವನು ಯಾವ ಕಡೆಗೂ ವಾಲದ ನಿಟ್ಟನೆ ನಿಟಾರಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡ. ಯಾರ ಜೊತೆಗೂ ಹೆಚ್ಚಿಗೆ ಬೆರೆಯುತ್ತಿರಲಿಲ್ಲ ನೀರಲ್ಲಿನ ತುಪ್ಪದ ಹನಿಯಂತೆ ಮಾತಾಡಿದರೆ ಹೋಯ್ತು, ಮುತ್ತು ಹೊಡೆಯದರೆ ಹೋಯ್ತು ಎಂಬ ಗಾದೆ ಮಾತಿನ ಸಮರ್ಥಕನಂತೆ ಇದ್ದುಬಿಡುತ್ತಿದ್ದ. ತಾನಾಯಿತು, ತನ್ನ ಕೆಲಸವಾಯಿತು. ಯಾವುದೋ ಒಂದು ಬಸ್ಸು ಏರುತ್ತಿದ್ದ. ಸಕಾಲಿಕವಾಗಿ ತಲುಪುತ್ತಿದ್ದ. ಕೆಲಸ ಮಾಡುವ ನಡುವೆ ಓರೆಗಣ್ಣಿನಿಂದ ಶಾಂತಿಯ ಸ್ಲೀವ್ ಲೆಸ್ ರವಿಕೆ ಕಡೆ ನೋಡುತ್ತಿದ್ದ. ಆಕೆ ನೋಡಿದೊಡನೆ ಮುಖ ತಗ್ಗಿಸಿ ಜಲಜಲ ಬೆವೆಯುತ್ತಿದ್ದ. ಯಾರು ಏನು ಕೇಳಿದ್ರು, ಹೇಳಿದ್ರು ‘ಎಸ್’ ಎಂತಲೋ ‘ಆಯ್ತು’ ಎಂತಲೋ ಅಂತಿದ್ದ. ‘ನೋ’ ಅಥವಾ ‘ಇಲ್ಲ’ ಎಂಬ ಶಬ್ದ ಅವನ ಸ್ಮೃತಿಪಟಲದಲ್ಲೇ ಇರಲಿಲ್ಲ. ಲಂಚ್ ಅವರ್‍ನಲ್ಲೂ ಅಷ್ಟೆ. ಎಲ್ಲರೂ ಒಂದು ಕಡೆ, ಅವನು ಕೂಡುತ್ತಿದ್ದುದೇ ಮತ್ತೊಂದು ಕಡೆ... ಯಾರೊಬ್ಬರ ಟಿಫಿನ್ ಬಾಕ್ಸ್‌ಗಳ ಕಡೆ ಅಪ್ಪಿತಪ್ಪಿ ಇಣುಕಿ ನೋಡುತ್ತಿರಲಿಲ್ಲ. ತನ್ನ ಟಿಫಿನ್ ಬಾಕ್ಸ್‌ನಲ್ಲಿಣುಕಲು ಯಾರಿಗೂ ಆಸ್ಪದ ಕೊಡುತ್ತಿರಲಿಲ್ಲ... ಅಯೋಧ್ಯೆಯಲ್ಲಿ ಚಳಿ ತಾಳಲಾರದೆ ಗೋವಿಂದಾಚಾರ್ಯ ಅಮೇಧ್ಯ ತಿಂದ, ಮದ್ಯ ಕುಡಿದ ಎಂಬ ಸುದ್ದಿ ಓಬಲೇಶನ ಮೂಲಕ ಹಬ್ಬಿದ್ದ ಕಾರಣದಿಂದ ಅವನು ದೂರ ಇರುತ್ತಿದ್ದ. ಇಸ್ಮಾಯಿಲನದಂತೂ ಇನ್ನೊಂದು ಕರ್ಮ. ಯಾವುದೇ ಪ್ರಾಣಿಯ ಮಾಂಸ ತಿಂದರೂ ಅವನ ಮೈತುಂಬ ತಿಂಡಿ ತುರಿಕೆ ಅಲರ್ಜಿ, ಚಂಬಸ್ಯವರಂತೂ ಅಪ್ಪಟ ಸಸ್ಯಾಹಾರಿಯಾಗಿದ್ದರೂ ಮಾಂಸ ತಿನ್ನುತ್ತಿರುವಂಥ, ಮದ್ಯ ಕುಡಿಯುತ್ತಿರುವಂಥ, ಕನಸುಗಳನ್ನು ಕಾಣುತ್ತಿದ್ದರು. ಅಂಗ ಸೌಷ್ಟವ ಕಾಪಾಡಿಕೊಳ್ಳುವ ನಿಮಿತ್ತ ಶಾಂತಿಯವರ ಬಾಕ್ಸಿನಲ್ಲಿ ಹಸೀತರಕಾರಿಯೇ ಹೆಚ್ಚಿನ ಪ್ರಮಾಣದಲ್ಲಿರುತ್ತಿತ್ತು. ಆಕೆ ತುಟಿಗೆ ಅಂಟಿಸದೆ ತಿನ್ನುತ್ತಿದ್ದಾಗ ಅವರೆಲ್ಲರಂತೆ ವಕ್ಶಸ್ಥಳವನ್ನು ನೋಡುವ ಧೈರ್ಯ ಶಾಮಣ್ಣ ಮಾಡುತ್ತಿರಲಿಲ್ಲ... ಬೇರೆ ಯಾರೊಂದಿಗೂ ಮಾತಾಡುತ್ತಿರಲಿಲ್ಲ... ಮಾತಾಡುತ್ತಿದ್ದುದೂ ಎಷ್ಟು ಬೇಕೋ ಅಷ್ಟು ಹಾಲಿಗೆ ಹೆಪ್ಪು ಬೆರೆಸಿದಂತೆ. ಆದ್ದರಿಂದ ಅವರೆಲ್ಲರು ಅವನಿಗೆ ‘ಗುಮ್ಮನ ಗುಸುಗ’ ಎಂದು ಬಿರುದು ಕೊಟ್ಟಿದ್ದರು.
ಮಿತಭಾಷಿ ‘ಗುಮ್ಮನ ಗುಸುಗ’ ಮುಂದೊಂದಿನ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಹಂಚಿದ. ಮುಹೂರ್ತಕ್ಕೆ ಮೊದಲೆ ಹೋಗಿ ಮುಯ್ಯಿ ಮಾಡಿ ಶುಭಕೋರಿ ಬಂದರು. ಗುಮ್ಮನ ಗುಸುಗನ ಮಧುಚಂದ್ರಕ್ಕಾಗಲೀ; ತಾತನ ಶವಸಂಸ್ಕಾರಕ್ಕಾಗಲೀ; ಶ್ರಾದ್ಧ ಕಾರ್ಯಗಳಿಗಾಗಲೀ ಮೇನೇಜರ್ ಹೆಬ್ರಿ ಗೋವಿಂದಾಚಾರ್ಯರು ಸಾಕಷ್ಟಿ ರಜೆಯನ್ನು ಮುಂಜೂರು ಮಾಡಿದರಲ್ಲದೆ, ಆಗಾಗ್ಗೆ ಹಣ ಸಹಾಯ ಮಾಡಿದರು. ಎಲ್ಲ ಮುಗಿಸಿಕೊಂಡು ಬಂದ ಗುಮ್ಮನ ಗುಸುಗ ತನ್ನ ಜೀವನದಲ್ಲಿ ಯಾವೊಂದು ಮಹತ್ವದ ಘಟನೆ ನಡೆದೇ ಇಲ್ಲವೆಂಬಂತೆ ಇದ್ದುಬಿಟ್ಟ. ಯಾರಾದರೂ ಮಾತಾಡಿಸಿದರೆ ಹ್ಹೂಂ... ಹ್ಹಾಂ... ಅಷ್ಟೇ. ಜಿ.ಎಂ. ಶಾಂತಿಯ ಸ್ಲೀವ್‌ಲೆಸ್ ಬ್ಲೌಜು ಕೂಡಾ ಆಕರ್ಶಣೆ ಕಳೆದುಕೊಂಡಿತ್?. ತನ್ನ ತೋಳೇ ಆಕರ್ಷಣೆ ಕಳೆದುಕೊಂಡಿರುವುದೋ ಎಂಬ ಅನುಮಾನ ಬಂದು ಕು.ಶಾಂತಿ ಒಳಗೊಳಗೆ ಸಂಕಟಪಡ


೪೩೪
ತೊಡಗಿದಳು... ಶಾಸ್ತ್ರಿಯ ಸಿಂಪ್ಲಿಸಿಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕಾವನ ಗಮನ ಸೆಳೆಯಲು ಪ್ರಯತ್ನ ಮಾಡಿದಳು. ಕೊನೆಗೂ ಸಾಧ್ಯವಾಗದಿದ್ದಾಗ ಹಾಳು ಬಾವಿಗೆ ಬೀಳು ಎಂದು ತನ್ನ ಪಾಡಿಗೆ ತಾನು ಇದ್ದುಬಿಟ್ಟಳು.
ಅವರಾರಿಗೂ ಅರ್ಥವಾಗದ ಸಂಕಟವನ್ನು ಶಾಸ್ತ್ರಿಯು ಅನುಭವಿಸುತ್ತಿದ್ದ. ಬದುಕಿನ ಕ್ಷಣ ಭಂಗುರಕ್ಕೆ ಕನ್ನಡಿ ಹಿಡಿಯುವ ಸಂಕಟವದು. ಬಲವಂತ ಸಂಭೋಗಕ್ಕೆ ಸಮನಾದ ಸಂಕಟವದು. ಆ ಸಂಕಟ ಕುರಿತು
ಸಂಕಟ ಸಂಕಟ ಬಾಳೆಲ್ಲ ಸಂಕಟ
ಬದುಕಿಗೆ ಹೆಂಡತಿಯೆಂಬುದು ಕಂಟಕ
ಸಂಸಾರವೆಂಬುದು ಒಣರೊಟ್ಟಿ ಕಡಿದಂತೆ
ಕೊರೆವ ಚಳಿಯಲ್ಲಿ ತಣ್ಣೀರೊಳಗೆ ಮಿಂದಂತೆ
...ಎಂದು ಡೈರಿಯಲ್ಲಿ ಬರೆದುಕೊಂಡ... ಅದು ಅವನಿಗಷ್ಟೇ ಗೊತ್ತು...!
ಯಾರಿಗೂ ಹೇಳದಿದ್ದರೂ ಆ ಸಂಕಟವನ್ನು ಅವನ ಮುಖದ ನಿರಿಗೆಗಳು ಪ್ರಕಟಿಸದೆ ಇರುತ್ತಿರಲಿಲ್ಲ. ಅಲ್ಲದೆ ಕೊತ್ತಲಿಗೆ ಏನು ಕೊಟ್ಟೂರಿಗೆ ದೂರದ ಗ್ರಾಮವಾಗಿರಲಿಲ್ಲ... ಕೊಟ್ಟೂರಿನಲ್ಲಿ ಹೂಸು ಬಿಟ್ಟರೆ ಕೊತ್ತಲಿಗಿ ಗ್ರಾಮದವರು ಮೂಗು ಮುಚ್ಚಿಕೊಳ್ಳುವರು. ಗುಲಾಂನಬಿ ಕೆಮ್ಮಿದರೆ, ಸೋಮವಾರಪೇಟೆಯಲ್ಲಿ ಮುಲುಕಿದರೆ ಕೊಟ್ಟೂರಿನಲ್ಲಿ ಸದ್ಗೃಹಸ್ಥರು ಹ್ಹಾಹಾಽಽ ಎಂದು ಉದ್ಗರಿಸುವರು...
ಆ ದಿನ ಲಂಚ್ ಅವರಿನಲ್ಲಿ ತನ್ನ ಮೂಲೆ ಅಲಂಕರಿಸಿದ್ದ ಶಾಮಣ್ಣ ತಲೆತಗ್ಗಿಸಿ ಕೂತಿದ್ದ. ಕೆಟ್ಟದಾಗಿ ಹಸಿದಿದ್ದ. ಹಸಿವೆಗಿಂತಲೂ ಭಯಂಕರವಾದುದು ತಾಯಿ ಹೆಂಡತಿ ನಡುವಿನ ಜಗಳ. ಅವರು ಪರಸ್ಪರ ಎಸೆಯುತ್ತಿದ್ದ ಮಾತುಗಳು ತಲೆತಿನ್ನತೊಡಗಿದವು. ದೇಹದ ಬಿಳಿ ಮತ್ತು ಕೆಂಪು ರಕ್ತ ಕಣಗಳು ಕ್ರಿಯಾಶೂನ್ಯವಾಗಿದ್ದವು. ಯಾರನ್ನೋ ನೆನಪಿಸಿಕೊಂಡರೆ ಯಾರೋ ನೆನಪಾಗತೊಡಗಿದರು... ಭಯವಾಯಿತು... ಕಣ್ಣಲ್ಲಿ ನೀರು ಒತ್ತರಿಸಿ ಬಂದು ಹನಿಹನಿಯಾಗಿ ಧುಮ್ಮಿಕ್ಕಿದವು.
ಶಾಮಣ್ಣ ಯಾರಿಗೂ ಗೊತ್ತಗದಂತೆ ಅಳುತ್ತಿರುವುದು ಓಬಳೇಶ ಪತ್ತೆ ಹಚ್ಚಿದ. ಶಾಸ್ತ್ರಿಗೂ ಅಳಲಿಕ್ಕೆ ಬರ್‍ತದೆ ಎಂದು ಟಾಂಟಾಂ ಸಾರಿದ. ಅದನ್ನು ಕೇಳಿ ಕೆಲವರು ನಕ್ಕರು. ಆದರೆ ಸಹೋದ್ಯೋಗಿಗಳು ನಗಲಿಲ್ಲ... ಅಳಲಿಕ್ಕೇನಾಗಿದೆ ಈ ಹೊಸ ಮದು ಮಗನಿಗೆ... ತಾವ್ನಾದದ್ರು ಇವನ ಪಾಲಿಗೆ ಸತ್ತು ಹೋಗಿದ್ದೀವಾ? ತಮ್ಮ ಬಳಿ ಹೇಳಲಿಕ್ಕಾಗದಂಥ ಯಾವ ಸಂಕಟವು ಇವನನ್ನು ತಿನ್ನುತ್ತಿರುವುದು! ಧಾವಿಸಿದರು ಅವನ ಬಳಿಗೆ... ಚಂಬಸಯ್ಯ ಅವನ ಮುಖ ಮೇಲೆತ್ತಿಸಿದ. ಇಸ್ಮಾಯಿಲ್ ಕರವಸ್ತ್ರದಿಂದ ಕಣ್ಣೊರೆಸಿದ... ಶಾಂತಿ ಲೊಚಗುಟ್ಟಿದಳು... "ರ್ರೀ... ಯಾರಾದ್ರು ಅವರ್‍ನ ಕರ್ಕೊಂಡು ಹೋಗಿ ತಿಂಡಿ ಕೊಡಿಸಿಕೊಂಡು ಬರಬಾರದೆ" ಎಂದರು ಮೇನೇಜರು...
ಆಗೋದೆಲ್ಲ ಆಯಿತು. ಎದೆಯೊಳಗೆ ಸಮಾಧಾನದ ತಂಗಾಳಿ ಬೀಸಿತು. ದೇಹ ಮನಸ್ಸು ಹಗುರಾಯಿತು. ಶಾಸ್ತ್ರಿ ತಾನು ಕೊತ್ತಲಿಗಿಯಲ್ಲಿ ಸಂಸಾರ ಹೂಡಬೇಕಾಗುವ ಅನಿವಾರ್ಯತೆ ಕುರಿತು ಕೊನೆಗೂ ಹೇಳಿದ.
ಅದನ್ನು ಕೇಳಿ ಅವರೆಲ್ಲರು ಹ್ಹಾಽಽ ಎಂದು ಉದ್ಗರಿಸಿದರು.
ಊರಿಗೆ ಬಂದವರ ಪೈಕಿ ಒಬ್ಬರಾದರೂ ನೀರಿಗೆ ಬಂದರಲ್ಲ...


೪೩೫

ಓಬಳೇಶ ನಗಾಡಿದ. ಅವನ ಅಂಗಿಯ ಪಾರದರ್ಶಕತೆ ಆ ನಗುವನ್ನು ಮರೆಮಾಚಿತು.
*
*
*
ಶಾಮಣ್ಣ ಕೊತ್ತಲಿಗಿಯಲ್ಲಿ ಮನೆ ಮಾಡುವನೆಂದೂ; ಅದರಲ್ಲಿ ತನ್ನ ಹೊಸ ಹೆಂಡತಿಯನ್ನು ತಂದು ಸಂಸಾರಹೂಡಲಿರುವನೆಂದೂ ಈ ಮೂಲಕ ಹಲವಾರು ದಶಕಗಳಿಂದ ತಮ್ಮ ಗ್ರಾಮಕ್ಕೆ ವಕ್ಕರಿಸಿದ ಅಪ ಶೃತಿ, ಅಪನಿಂದೆಗಳು ದೂರವಾಗುವುದರ ಮಂಗಳಕರ ಸೂಚನೆ ಎಂದು ಓಬಳೇಶನು ಕಂಡಕಂಡವರಿಗೆಲ್ಲ ಹೇಳುತ್ತ ಹೋಗಿ ಗ್ರಾಮದ ಮೂಲನಿವಾಸಿಗಳು ಸಮಾಧಾನದ ಉಸಿರು ಬಿದಲಿಕ್ಕೆ ಕಾರಣನಾದನು.

ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಶಾಮಾ ಶಾಸ್ತ್ರಿ ತಮ್ಮ ಗ್ರಾಮದಲ್ಲಿ ಮನೆ ಮಾಡುವುದು ಶುಭಸೂಚಕವೆಂದೇ ಎಲ್ಲರು ಭಾವಿಸಿದರು. ಸದ್ಗೃಹಸ್ತ ಕಲ್ಪನೆಯೇ ಅಪರೂಪವಾಗಿದ್ದಂಥ ಗ್ರಾಮವದು. ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದರೂ ಒಂದೇ ಒಂದು ಜಿನತತ್ವವು ಕೇಳಲು ಸಾಧ್ಯವಿಲ್ಲದಂಥ ಗ್ರಾಮವದು. ಕದಂಬ, ಚಾಲುಕ್ಯರ ಶಿಲ್ಪ ಶಾಸನಗಳೊಂದೇ ಅಲ್ಲದೆ ವಿಜಯನಗರದ, ಚಿತ್ರದುರ್ಗದ, ಹೈದರಾಲಿ ಟಿಪ್ಪೂಸುಲ್ತಾನ ಕಾಲದ ಶಿಲ್ಪಾವಶೇಷಗಳು ಗ್ರಾಮದ ಒಳಹೊರಗೆ ಚೆಲ್ಲಾಪಿಲ್ಲಿಯಾಗಿರುವುವು. ಗುಡೇಕೋಟೆ, ಜರ್ಮಲಿ, ಹರಪನಹಳ್ಳಿ ಮೊದಲಾದ ಪಾಳೆಪಟ್ಟುಗಳ ಅಧೀನದಲ್ಲಿದ್ದಂಥ ಗ್ರಾಮವದು. ದಕ್ಷಿಣ ಭಾರತದ ಪ್ರಾಚೀನ ಜೈನ ಕೇಂದ್ರವೆಂದು ಹೆಸರು ಪಡೆದಿದ್ದ ಕೋಗಳಿ, ಹಡಗಲಿ, ಕೊಪ್ಪಳಗಳೇನು ಸದರಿ ಗ್ರಾಮಕ್ಕೆ ದೂರವಿಲ್ಲ... ಆದರೂ ಈ ಗ್ರಾಮದಲ್ಲಿ ಜೈನಮತದ ಒಂಚುರು ನೆರಳು ಸಹ ಇಲ್ಲ.

ರಾಜಾಸ್ಥಾನದ ಸುಡುಸುಡು ಮರುಭೂಮಿಗೆ ಬೇಸತ್ತು ಮಾರ್ವಾಡಿಗಳು ಗುಂಪುಗುಂಪಾಗಿ ಎಲ್ಲ ಗ್ರಾಮಗಳನ್ನು ಸೇರಿಕೊಂಡರಾಗಲೀ ಸದರಿ ಗ್ರಾಮವನ್ನು ಮಾತ್ರ ಸೇರಿಕೊಳ್ಳಲಿಲ. ಫೂಕ್‌ಚಂದ್ ಅಮೃತ್‌ಲಾಲ್ ಎಂಬ ಮಾರ್ವಾಡಿಯು ಸ್ವಾತಂತ್ರ್ಯ ಪೂರ್ವದಲ್ಲಿ ಈ ಗ್ರಾಮ ಸೇರಿಕೊಂಡು ಜವಳಿ ವ್ಯಾಪಾರ ಆರಂಭಿಸುವುದರ ಜೊತೆಗೆ ಬಡ್ಡಿ ವ್ಯಾಪಾರವನ್ನೂ ಶುರುಮಾಡಿದ್ದುಂಟು. ಗ್ರಾಮಸ್ಥರು ಕೂಡ ಅನ್ಯೋನ್ಯವಾಗಿಯೇ ಇದ್ದರು. ಸ್ವಾತಂತ್ರ್ಯ ಬಂದ ಎರಡನೇ ವರ್ಷದಲ್ಲಿ ಏನಾಯಿತೋ ಏನೋ? ಸೋಮವಾರಪೇಟೆಯ ವಾಲ್ಮೀಕಿ ಜನಾಂಗದವರು ರಾತ್ರೋರಾತ್ರಿ ಆ ಮಾರ್ವಾಡಿ ಮನೆ ಮೇಲೆ ಕ್ರೂರವಾಗಿ ಧಾಳಿ ಮಾಡಿದರು. ಇದರಿಂದ ತತ್ತರಿಸಿ ಹೋಯಿತು ಆ ಅಹಿಂಸಾವಾದಿ ಕುಟುಂಬವು. ಆ ಕುಟುಂಬದ ಸಮಸ್ತರನ್ನು ದಾರುಣವಾಗಿ ಕೊಲೆ ಮಾಡಿ ಅವರ ಹೆಣಗಳನ್ನು ಸಾಲು ಮರಗಳಿಗೆ ನೇತು ಹಾಕಿದರು... ಎಂಬುದು ಒಂದು ವರ್ಗದವರ ಅಂಬೊಣ.

ಸಂಡೂರು ಪ್ರಾಂತದ ದಟ್ಟ ಅರಣ್ಯಗಳಿಂದ ಶ್ರೀಗಂಧದ ಲೂಟಿ ಮಾಡಿ ಪೋಲಿಸ್ ವ್ಯವಸ್ಥೆಯು ತಲೆ ತಿನ್ನುತ್ತಿದ್ದ ಬೋಳುತಲೆ ದುರುಗಪ್ಪನು ಈ ಗ್ರಾಮದವನೆ, ಸ್ವಗ್ರಾಮದಲ್ಲೊಂದೇ ಅಲ್ಲದೆ ಮಲಮೂತ್ರ ಮೈಥುನ ನಾಗರೀಕ ದಾಟಿಯಲ್ಲಿ ಮಾಡಲರಿಯದ, ದೇಹದ ಮುಖ್ಯ ಭಾಗವನ್ನು ಸರಿಯಾದ ಬಟ್ಟೆ ಬರೆಯಿಂದ ಮುಚ್ಚಿಕೊಳ್ಳಲರಿಯದ, ಅಡುಗೆ ಮಾಡಲರಿಯದ, ಉಂಡಕೂಳನ್ನು ಅರಗಿಸಿಕೊಳ್ಳಲರಿಯದ ಜನರೇ ತುಂಬಿರುವ ಗೊಲ್ರಟ್ಟಿ, ಮಾದೇಪ್ರ, ಜರುಮಲಿ, ಗುಂಡುಮುಳುಗೇ ಮೊದಲಾದ ಕುಗ್ರಾಮಗಳಿಂದ ಐವತ್ತು ನೂರು ರೂಪೈಗೊಂದರಂತೆ ಹೆಣ್ಣುಗಳನ್ನು ಕೊಂಡು ಪೂನಾ ಬಾಂಬೆಗಳಿಗೆ ಮಾರಾಟ ಮಾಡಿ ಲಕ್ಷಗಟ್ಟಲೆ


೪೩೬

ಧನಕನಕ ಸಂಪಾದಿಸಿ ರಾಷ್ಟ್ರೀಯ ಹೆದ್ದಾರಿಗಂಟಿಕೊಂಡಂತೆ ನಿಪ್ಪಾಣಿ ಬಳಿ ರಾಜ್ ವಿಹಾರ್ ಹೋಟೆಲ್ ಕಟ್ಟಿಸಿಕೊಂಡು ಚಿನ್ನದ ಚಮಚೆಯಿಂದ ಫ್ರೂಟ್ಸಾಲಾ ತಿಂದು ಹಂಸತೂಲಿಕಾ ತಲ್ಪದ ಮೆಲೆ ಮಲಗುತ್ತಿರುವ ಅಂಬುಜಾಕ್ಷಿ ಅಲಿಯಾಸ್ ತುಂಬರಗುದ್ದಿ ಚವುಡವ್ವನ ಸ್ವಾಸ್ತಿ ಸದರೀ ಗ್ರಾಮವೇ. ಇಂಥ ಅನೇಕ ವಿಧ್ವಂಸಕ ದೃಶ್ಯಾವಳಿಗಳ ತವರೆನಿಸಿಕೊಂಡದ್ದು ಸ್ವಾತಂತ್ರ್ಯಾ ನಂತರವೇ ಎಂಬುದು ಗಮನಾರ್ಹ ಸಂಗತಿ.
ವಿಜಯನಗರದ ಪತನಾನಂತರ ವಿಜಯನಗರದಿಂದಲೂ; ಮೈಸೂರು ಪ್ರಾಂತ ಪತನಾ ನಂತರ ಮೈಸೂರು ಪ್ರಾಂತದಿಂದಲೂ ಹರಪನಹಳ್ಳಿ ಪತನಾ ನಂತರ ಹರಪನಹಳ್ಳಿ ಕಡೆಯಿಂದಲೂ; ಹೀಗೆ ಚಿತ್ರದುರ್ಗ, ಸೀರ್ಯ, ಬಿಜಾಪುರ, ಗೋಲ್ಕೊಂಡಾ ಪ್ರಾಂತಗಳಿಂದ ಇತಿಹಾಸ ಪ್ರಸಿದ್ಧ ಜಟ್ಟಿಗಳೂ, ಸಂಗೀತಗಾರರೂ; ರಂಗ ನಟರೂ, ನಟಿಯರೂ ತಂಡೋಪತಂಡವಾಗಿ ಹರಿದು ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟರು ಎಂದು ಈ ಕುರಿತು ಮಹಾ ಸಂಶೋಧನಾ ಪ್ರಬಂಧ ಮಂಡಿಸಿರುವ ಡಾ. ಅಭಿಷೇಕ್ ಗೋಡ್ಲೆಯವರು ಅಭಿಪ್ರಾಯಪಟ್ಟಿರುವರು. ಉದರಂಭರಣಕ್ಕಾಗಿ ಪೈಲ್ವಾನರಾಗಲೀ; ಯಾರಾಗಲೀ ಒಳ್ಳೆಯದೂ ಮಾಡಿರಬಹುದು ಹಾಗೇ ಕೆಟ್ಟದ್ದೂ ಮಾಡಿರಬಹುದು.

ಈಗಲೂ ಕೊತ್ತಲಿಗಿಯ ಸೋಮವಾರಪೇಟೆಯಲ್ಲಿ ಯಾವುದೇ ಬಯಲಾಟ, ನಾಟಕ, ಭಾಮಾಕಲಾಪವೇ ಮೊದಲಾದ ರಂಗಪ್ರಾಕಾರಗಳ ಪಠ್ಯವನ್ನು ನೋಡುತ್ತಲೆ, ಕೇಳುತ್ತಲೆ ಬಾಯಿಪಾಟ ಮಾಡಿ ಆಯಾ ಪಾತ್ರ ಹೊಕ್ಕು ಬೆಳ್ಳಂಬೆಳಗು ಅಭಿನಯಿಸುವ ಸಾಮರ್ಥ್ಯವುಳ್ಳ ರಂಗನಟಿಯರಿದ್ದಾರೆ. ದಿನಕ್ಕೊಂದು ಟನ್ ಹುಣಸೆ ಬೊಟ್ಟು ಕುಟ್ಟುವಂಥ ದಿನಗಟ್ಟಲೆ ಉಪವಾಸವಿದ್ದರೂ ಮೈ ಮತ್ತು ಮುಗುಳುನಗೆ ಮಾಸದಂಥ, ಎಷ್ಟು ಹಡೆದರೂ ಕಿಪ್ಪೊಟ್ಟೆ ಮಾಂಸ ತುಳುಕಾಡುತ್ತಿರುವ ಸೋಮವಾರಪೇಟೆಯಿಂದಾಗಿಯೇ ಸದರೀ ಗ್ರಾಮಕ್ಕೆ ಐತಿಹಾಸಿಕ ಮಹತ್ವ ಪ್ರಾಪ್ತವಾಗಿರುವುದು. ಎಂಥ ಪೈಲ್ವಾನರನ್ನೂ; ಜಿತೇಂದ್ರಿಯರನ್ನೂಹಾಸಿಗೆ ಮೇಲೆ ಕೆಡವ ಬಲ್ಲಂಥ ನೂರಾರು ಸುಂದರ ಮತ್ತು ಬಟ್ಟಲುಗಣ್ಣುಗಳಿಗಿಲ್ಲಿ ಬರವಿಲ್ಲ. ಈ ಗ್ರಾಮದ ವಾತಾವರಣದಲ್ಲಿ ತೆಗೆದುಕೊಳ್ಳುವ ಉಚ್ವಾಸವೇ ರತಿಕ್ರಿಡಾ ಮನೋಭಾವವನ್ನು ಏಕ್‌ಧಂ ಉದ್ದೀಪಿಸುತ್ತದೆ. ಶೂನ್ಯದಿಂದ ಕೈಬಳೆ, ಕಾಲ್ಗೆಜ್ಜೆ ಮುಲುಕುವ ಸದ್ದು ಕೇಳಿ ಬರುತ್ತದೆ. ಕಕ್ಕಸುಗೇರಿಯಲ್ಲಿ ನಿಂತರೂ ಕುಂತರೂ ಸುಗಂಧ ಪರಿಮಳ ದ್ರವ್ಯ ಮೂಗಿಗೆ ತುರಿ ಪಂಚೇಂದ್ರಿಯಗಳಿಗೆ ರೆಕ್ಕೆ ಮೂದಿಸುತ್ತದೆ, ಎಂಥ ಅಮಾಯಕನೂ ರಾಸಲೀಲಾ ವಿನೋದದ ಸೆಳವಿಗೆ ಸಿಲುಕಿ ಸೋಮವಾರ ಪೇಟೆ ಕಡೆಗೆ ಪರಾವರ್ತಿತ ಪ್ರತಿಕ್ರಿಯೆಯಿಂದ ನಡೆಯುತ್ತಾನೆ... ಈ ಗ್ರಾಮದಲ್ಲಿ ಕಾಗೆ ಕೋಗಿಲೆಯಾಗಿದೆ, ಕೆಂಬೂತ ನವಿಲಾಗಿದೆ, ಕೊಕ್ಕರೆ ಚಕೋರಿಯಾಗಿದೆ. ಗ್ರಾಮದ ಓಣಿ ಓಣಿಯಲ್ಲಿ "ಲೈಂಗಿಕ ರೋಗತಜ್ಞರು" ಎಂದು ಬೋರ್ಡು ಹಾಕ್ಕೊಂಡಿರುವ ಡಾಕ್ಟರು ಸಿಗುತ್ತಾರೆ. ಈ ಊರಿಗೆ ಬರುವ ಎಂಥ ಪತಿವ್ರತೆಯರೂ ಈ ಗಾಳಿ ತಗುಲು ಕೆಡುತ್ತಾರೆ ಎಂಬ ಪ್ರತೀತಿ ಇದೆ. ಕೆಲವೊಂದು ಸಂದರ್ಭಗಳಲ್ಲಿ ಅದು ನಿಜವಾಗಿರುವ ಉದಾಹರಣೆಗಳು ಇಲ್ಲದಿಲ್ಲ. ಪುಂಖಾನುಪುಂಖವಾಗಿ ಕುಂತಳನಾಡನ್ನೊಂದೇ ಅಲ್ಲದೇ, ಯಡದೊರೆನಾಡು, ಸಿಂಧುವಾಡಿನಾಡು, ಇಂದುವಾಡಿನಾಡು ಇವೇ ಮೊದಲಾದ ಛಪ್ಪಾನಾರು ನಾಡುಗಳಲ್ಲಿ ಹರಡಿರುವ ಕಾರಣದಿಂದಾಗಿಯೋ ಏನೋ ಮರ್ಯಾದೆಯುಳ್ಳ ಯಾವ ಸದ್ಗೃಹಸ್ತನೂ ಸಂಸಾರ ಸಮೇತ ಬಂದು ಇಲ್ಲಿ ಇರಲು


೪೩೭

ಇಷ್ಟಪಡುವುದಿಲ್ಲ... ಅಥವಾ ಇದನ್ನೇ ಒಂದು ನೆವ ಮಾಡಿ ಮನುಜ್ಷ್ಯ ಸದ್ಗೃಹಸ್ಥ ಮನೋಭಾವದಿಮ್ದ ದೂರ ಉಳಿಯುವ ಪ್ರಯತ್ನಮಾಡಿರಬಹುದು. ಇದೆಲ್ಲ ಅಂತೆ ಕಂತೆ ಮಾತ್ರ. ಇದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ? ಇಂಥ ಅನುಭವಗಳಿಗೆ ತುತ್ತಾದವರೇ ಹೇಳಬೇಕು...
ಇಂಥ ಕಪೋಲಕಲ್ಪಿತವೋ; ನಿಜವೋ ಆದ ಸುದ್ದಿಗಳು ತಾಂಡವಾಡುತ್ತಿದ್ದುದರಿಂದಾಗಿ ಸಾಮಾನ್ಯವಾಗಿ ಸರಕಾರಿ ನೌಕರರು ಹೆಂಡತಿಯೊಡನೆ ಬಂದು ಸಂಸಾರ ಹೂದುವುದಿಲ್ಲ... ಅಥವಾ ಯಾವ ಹೆಂಡತಿಯೂ ಈ ಊರಿಗೆ ಬಂದು ಗಂಡನೊಂದಿಗೆ ಜೀವಿಸಲು ಒಪ್ಪುವುದಿಲ್ಲ. ಹೆಂಡತಿ ಕಾಟ ಕೊಟ್ಟು ಗಂಡನನ್ನು ವರ್ಗ ಮಾಡಿಸುವುದು, ಗಂಡನ ಒತ್ತಾಯಕ್ಕೆ ಹೆಂಡತಿ ಮೆಡಿಕಲ್ ಲೀವ್ ಹಾಕಿ ವರ್ಗ ಮಾಡಿಸಿಕೊಂಡು ಹೋಗುವಳು. ಆದ್ದರಿಂದ ಅನಿವಾರ್ಯವಾಗಿ ಉಳಿದವರು ಸಾಮಾನ್ಯ ಕಂತಿನ ಮೇಲೆ ಗಾಡಿಗಳನ್ನು ಕೊಂಡು ಅಪ್ ಅಂಡ್ ಡೌನ್ ಮಾಡ್ತಿರೋದೇ ಹೆಚ್ಚು.
ಇಂಥ ವಿವರಣೆ, ವಿಶ್ಲೇಷಣೆಗಳಿಗೆ ಸತ್ಯ ಮಿಥ್ಯಗಳಿಗತೀತವಾಗಿ ಉಳಿದಿರುವ ಘಟನೆ ಸಂಘಟನೆಗಳ ಕಾರಣದಿಂದಾಗಿ ಶಾಮಣ್ಣ ಕೊತ್ತಲಿಗಿಯಲ್ಲೇ ಮನೆ ಮಾಡಬೇಕಿದೆ! ಎಂದು ಹೇಳಿದಾಗ ಸಹೋದ್ಯೋಗಿಗಳೆಲ್ಲರು ಅವನ ಕಡೆ ಬೆಕ್ಕಸ ಬೆರಗಾಗಿ ನೋಡಿದರು. ಪ್ರಪಂಚ ಜ್ಞಾನದ ರಿಸೀವರ್ರಾದ ಯಾಂಟನಾದಂತಿದ್ದ ಅವರು ಗರುಡ ಪುರಾಣದಲ್ಲಿ ಬರುವ ಫಲ್ಗುಣಿ ಎಂಬ ರೌರವ ನದಿಯ ಒಟ್ಟು ಮೊತ್ತವೇಕೊತ್ತಲಗಿ ಗ್ರಾಮವು ಎಂದು ಈ ಮೊದಲೆ ತಿಳಿದುಕೊಂಡಿದ್ದ. ಅವನ ಸಾಂಪ್ರದಾಯಿಕ ಕರ್ಮಠ ಮನಸ್ಸು ‘ಇಸ್ಸಿ’ ಅಂತಿದ್ದರೆ, ಸೃಜನಶೀಲ ಮನಸ್ಸು ಮನುಷ್ಯರ ಕ್ಷುದ್ರ ಬದುಕನ್ನೇ ಕಥೆ, ಕವಿತೆ, ಕಾದಂಬರಿಯನ್ನಾಗಿಸಬೇಕೆಂದು ಹೇಳುತ್ತಿತ್ತು. ಅದೇ ಮನಸ್ಸಿನ ಕ್ರಾಂತಿಕಾರಕ ಭಾಗವು ವೆರಿಯರ್ ಎಲ್ವಿನ್ ಗೊಂಡೋ ಪ್ರದೇಶದ ಆದಿವಾಸಿಗಳನ್ನು ಉದ್ಧಾರ ಮಾಡಿದಂತೆ ನೀನೂ ಇಲ್ಲೇ ನೆಲೆಗೊಂಡು ಈ ಗ್ರಾಮದಲ್ಲಿ ಸಾಮಾಜಿಕ ಬದಲಾವಣೆ ಮಾಡು ಎಂದು ಬೋಧಿಸುತ್ತಿತ್ತು. ವೇಷ ಮರೆಸಿಕೊಳ್ಳುವುದರಲ್ಲಿ ಈಗಾಗಲೇ ನಿಷ್ಣಾತನಾಗಿರುವ ಶಾಮಣ್ಣ ಬಹುಶಃ ಓಬಳೇಶನಿಗೂ ಗೊತ್ತಿಲ್ಲದಂತೆ ವೇಷ ಮರೆಸಿಕೊಂಡುಸೋಮವಾರಪೇಟೆಯನ್ನು ಪ್ರವೇಶಿಸಿ ದೇವದಾಸಿಯರೂ, ರಂಗಕಲಾವಿದರೂ ಎಂಬೊಂದು ಸಚಿತ್ರ ಲೇಖನಕ್ಕೆ ವಿಷಯ ಸಂಗ್ರಹಿಸಿದ್ದನು. ಹೀಗೆ ಸಂಗ್ರಹಿಸುವಾಗ ಆರುಮೂರಾಗ್ಲಿ, ಮೂರು ಆರಾಗ್ಲಿ ಈ ಊರಿಗೆ ಹೆಂಡತಿಯನ್ನು ಕರೆದುಕೊಂಡು ಬಂದು ವಾಸ ಮಾಡಬಾರದೆಂದು ಶಪಥ ಮಾಡಿದ್ದನು. ತಾಯಿ ಮತ್ತು ಹೆಂಡತಿಯರೆಂಬ ಅಜ್ಞಾತ ಅಂಶಗಳಿರುವ ಎರಡು ಸಮೀಕರಣಗಳನ್ನು ‘ನಾನು’ ಎಂಬ ಒಂದೇ ಸೂತ್ರದಿಂದ ಬಿಡಿಸುವುದು ಸಾಧ್ಯವಿಲ್ಲವೆಂಬ ಸಂಗತಿಯನ್ನು ಮನದಟ್ಟು ಮಾಡಿಕೊಂಡಿದ್ದನು. ಸಂಕಲನದ ವ್ಯವಸ್ಥೆಯೇ ಬೇರೆ, ವ್ಯವಕಲನದ ವ್ಯವಸ್ಥೆಯೇ ಬೇರೆ; ಅವೆರಡು ಒಂದೇ ಚಿನ್ಹೆಯೊಳಗೆ ಅಡಾಗುವುದಿಲ್ಲ... ಆ ಎರಡು ಭಿನ್ನ ಜಾತಿಯ ಧೃವಗಳು ಒಂದಾಗಿದ್ದೇ ಆದರೆ ಬಕ್ಷಾಲಿಯ ಗಣಿತ ಗ್ರಂಥಕ್ಕೆ ಸರಿಸಮಾನರಾಗುತ್ತಾರೆ. ಎರಡು ಭಿನ್ನ ಮನೋಭಾವದ ಪ್ರಾಣಿಗಳು ಒಂದೇ ಬೋನಿನಲ್ಲಿ ಒಟ್ಟಿಗೆ ಇರಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆ ತಾಯಿ ಮತ್ತು ಹೆಂಡತಿ
ಹಿಂಗಾಳಿ, ಮುಂಗಾಳಿಗಳಾಗಿ ಒಟ್ಟಿಗೆ ಜೀವಿಸಲುಸಾಧ್ಯವೇ ಇಲ್ಲವೆಂದು ಬಗೆದೇ ಕೊತ್ತಲಗಿಯಲ್ಲಿ ಮನೆ ಹುಡುಕಲು ನಿಶ್ಚಯಿಸಿದನು. ಈ ಕುರಿತು ಗೆಳೆಯರ ಸಹಕಾರವನ್ನು ಕೋರಿದನು. ಅಷ್ಟೊತ್ತಿಗಾಗಲೇ ಪರಸ್ಪರ ಏಕವಚನ ಸಂಬೋಧಿಸುವಷ್ಟರ ಮಟ್ಟಿಗೆ ಸಲಿಗೆ ಸಾಧಿಸಿದ್ದ ಅವರ ಪೈಕಿ ಒಬ್ಬನಾದ ಪಿ.ಎಂ.ಚಂಬಸ್ಯನು -
"ನಿಂಗೆ ಬುದ್ಧಿ ನೆಟ್ಟಗಿದ್ದಂಗಿಲ್ಲ ಶಾಸ್ತ್ರೀ... ನಿನ್ನಂಥೋರು ನಮ್ಮಂಥೋರು ಗೊತ್ತಿದ್ದೂ


೪೩೮

ಗೊತ್ತಿದ್ದು ಈ ಊರಲ್ಲಿ ಸಂಸಾರ ಹೂಡೋದೇನು! ನೌಕರಿ ಮಾಡ್ತಿರೋ ತಪ್ಪಿಗೆ ಗಾಡಿ ತಗೊಂಡು ಅಪ್ಪಂಡೌನ್ ಮಾಡ್ಬೇಕಯ್ಯಾ ಅಪ್ಪಂಡೌನೂ" ಎಂದು ಕೆಮ್ಮಿದನು.
"ನೀನು ಅಪ್ಪಂಡೌನು ಮಾಡೋದಾದ್ರೆ ನಾನೊಂದೊಳ್ಳೆ ಗಾಡೀನ ಕಡ್ಮೆ ರೇಟಿಗೆ ಕೊಡಿಸ್ತೀನಿ ಮೇರಾ ದೋಸ್ತ್. ಜಾಡ್ರ ಕಾಳಪ್ಪನತ್ರ ಯಯ್ಪಿಸಿಕ್ಸ್ ಮಾಡೆಲ್ ಅವಂತಿ ಐತೆ. ಬೋತಿಂಗು ಬರ್ದಂಗೆ ಓರಾಯ್ಲು ಮಾಡಿಸಿಟ್ಟಿದ್ದಾನೆ... ಏನು ಬ್ರೇಕೂ? ಏನು ಗೇರೂ? ಒಂದ್ಲೀಟ್ರೀಗೆ ಫಿಫ್ಟಿಫೈವ್ ಕೊಡ್ತದಪ್ಪಾ... ಒಳ್ಳೆ ರೆಡ್ಡು ಪೇಂಟಾಕಿಸಿದ್ದಾನೆ... ಬೇಕಂದ್ರೆ ಕೊಡಿಸ್ತೀನಿ... ಇನ್‌ಸ್ಟಾಲ್ಮೆಂಟ್‌ಮ್ಯಾಲೇ ಕೊಟ್ರಾಯ್ತು... ಚಂಬಸ್ಯಯ್ಯ ಹೇಳ್ದಂತೆ ಕೊಟ್ರೂಗೂ ಇಲ್ಗೂ ಅಪ್ಪಂಡೌನ್ ಮಾಡಿಬಿಡು ಮಾರಾಯಾ" ಎಂದು ಇಸ್ಮಾಯಿಲು ಕಕ್ಕುಲಾತಿಯಿಂದ ನುಡಿದನು.
ಮೇನೇಜರು ಹೆಬ್ರಿಯವರು...
"ಉತ್ತರ ಪ್ರದೇಶದ ಸರಯೂದ್ಂದಾ ಕಡೆ ಇನ್ನೂ ರಮಾಯಣ, ಮಹಾಭಾರತದ ಎಪಿಕ್ ಲೈಫ್ ಸ್ಟೈಲು ಇನ್ನೂ ಜೀವಂತ ಇದೆ ನೋಡು ಇಸ್ಮಾಯಿಲ್... ಅಲ್ಲಿ ಗೋಡೋ, ಗೋರಖ್ಪುರ್ ಕಾಡೊಳ್ಗೆ ಇನ್ನೂ ಭಾರತೀಯ ಆರ್ಷೇಯ ಸಂಸ್ಕೃತಿ ಆಚರಿಸ್ತಾನೆ ಬದುಕಿದ್ದಾರೆ ಜನ...
ಅಲ್ಲಿನ ಯಾವ ಲೈಂಗಿಕ ಕ್ರಿಯೆಗೂ ವ್ಯಭಿಚಾರ, ಸೂಳೆಗಾರಿಕೆ ಅನ್ನೋದೆ ಇಲ್ಲ ನೋಡಿ. ಅಲ್ಲಿ ಒಬ್ಬನಿಗೆ ಐದಾರು ಜನ ಹೆಂಡ್ರು ಇರೋದ್ನೂ ನೋಡಿದೆ. ಏಳೆಂಟು ಮಂದಿ ಗಂಡಸರೊಂದಿಗೆ ಬಾಳುವೆ ಮಾಡ್ತಿರೋ ಫೂಲವಂತಿ ಮೊಲೆ ಇಷ್ಟಿಷ್ಟು ದಪ್ಪ ಇರಬೌದು ನೋಡಿ. ನನ್ನ ಲೆಕ್ಕಾಚಾರದ ಪ್ರಕಾರ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಶ್ರೀರಾಮಚಂದ್ರನ ಸಂಗಡ ಅಯೋಧ್ಯೆಯ ಸಾವಿರಾರು ಮಂದಿ ಸ್ರೀಪುರುಷರೂ ಹೋದ್ರು ಎಂಬ ಸತ್ಯವನ್ನು ನಾನು ಇತ್ತೀಚೆಗೆ ಪತ್ತೆ ಹಚ್ಚಿದ್ದೀನಿ ಚಂಬಸ್ಯಯ್ಯಾ... ಕಳಕೊಂಡಸತಿಯನ್ನು ರಾಮ ಹುಡುಕುತ್ತಾ, ಹುಡುಕುತ್ತಾ ವಯಾ ಈ ಪ್ರದೇಶದ ಮೂಲಕ ಶ್ರೀಲಂಕಾದ ಕಡೆ ಹೋದ... ಶ್ರೀರಾಮನನ್ನು ಹುಡುಕುತ್ತಾ, ಹುಡುಕುತ್ತಾ ಸಾವಿರಾರು ಮಂದಿ ಅಯೋಧ್ಯೆಯ ಸ್ರೀಪುರುಷರೂ ಸುಸ್ತಾಗಿ ಈ ಇಲ್ಲೇ ನೆಲೆ ನಿಂತರು ನೋಡು... ಅವರೇ ಕೊತ್ತಲಿಗಿಯ ಮೂಲ ನಿವಾಸಿಗಳು ಕಣಪ್ಪಾ... ಇಂಥ ಕಡೆ ಸಂಸಾರ ಸಮೇತ ವಾಸ ಮಾಡೋಕೂ ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರ್ಬೇಕು ಶಾಸ್ತ್ರಿ. ಮಕ್ಳು ಪಥ ಸಂಚಲನಕ್ಕೆ ಹೋಗ್ತಿರೋದ್ರಿಂದ ನೀನು ಅಪ್ಪಂಡೌನ್ ಮಾಡಬೇಕಾಗಿದೆ" ಎಂದು ಮುಂತಾಗಿ ಹೇಳಿದರು ನಿರರ್ಗಳವಾಗಿ.
ಇಸ್ಮಾಯಿಲ್ಲಗೆ ಅದಕ್ಕೆ ಪ್ರತಿಯಾಗಿ ಏನು ಹೇಳಬೇಕೋ ತಿಳಿಯಲಿಲ್ಲ. ಚಂಬಸ್ಯನೂ ಅಷ್ಟೆ... ತಲೆ ಕೆರೆದುಕೊಂಡ.
ಅವರೆಲ್ಲ ಅಲ್ಲಿಂದ ಕದ್ಲಿ ಹೋದ ಮೆಲೆ ಓಬಳೇಶ ಶಾಮಣ್ಣಗೆ ಜೊತೆಯಾದ...
"ಅವ್ರೆಲ್ಲ ಇಲ್ಲಿ ವಾಸ ಮಾಡ್ತಿರೋರು ದನಗಳೂಂತ ತಿಳ್ಕೊಂಡಾರೆ... ಅವರ ಮಾತು ಕಟ್ಕೊಂರೆ ಕೂಳಿಗೆ ಕೂಳು, ನೀರಿಗೆ ನೀರು ಅಷ್ಟೇ" ಎಂದು ಹೇಳಿದ ಅವನಿಗೆ ಶಾಮಣ್ಣ ಒಂದು ಮಸಾಲೆ ದೋಸೆ ತಿನ್ನಿಸಿ ಒಂದು ಕಾಫಿ ಕುಡಿಸಿದ. ಇದರಿಂದ ಹುಮ್ಮಸ್ಸು ಹೆಚ್ಚಿಸಿಕೊಂಡ ಓಬಳೇಶ ಸ್ವಲ್ಪ ಓಪನ್ ಆದ.
"ಈ ಮೂರ್‍ಮಂದಿ ಒಳಾಗಿಂದು ಹೊರಾಗಿಂದು ನಂಗೆಲ್ಲ ಗೊತ್ತು ಸೋಮಿ... ಎಲ್ಲಾ ಬಿಚ್ಚಿ ಡ್ರಾಯರು ಮ್ಯಾಲೆ ಅವ್ರು ನಿಂತ್ಕಳ್ಳಿ ಗಂಡಸ್ರಾದ್ರೆ... ಆಗ ಗೊತ್ತಾಗತೈತಿ ಅವ್ರ ಹಣೇ ಬರಾ... ಈ ಊರಾಗೇನೈತೋ ಅದೆಲ್ಲ ಅವ್ರ ಮಯ್ಯಿಮ್ಯಾಗ ಐತೆ ನೋಡ್ರಿ... ಆ ಚಂಬಸ್ಯಯ್ಯ ತನ್ ಮಗಳ್ನ ಎಲ್ಲೆಲ್ಲಿ ಎನೇನು ಮಾಡಲಕ ಇಟ್ಟಾನೆಂಬೋದು ನಿಮ್ಗೆ ಗೊತ್ತಾದ್ರೆ ನೀವಿವ್ರ ಸಂಗಾಟ ಒಂದ್


೪೩೯

ಸೆಕೆಂಡಿರಾಕಿಲ್ಲ ಬಿಡ್ರಿ... ಆ ಇಸ್ಮಾಯಿಲ್ಲೂ ಅಷ್ಟೆ... ಹೆಬ್ರಿನೂ ಅಷ್ಟೆ ಅದ್ನೆಲ್ಲ ಕಟ್ಕೊಂಡೀಗ ಮಾಡೊದಾದ್ರು ಏನೈತೆ... ಈಗ್ನಿಮ್ಗೊಂದು ಮನಿ ತೋರಿಸ್ಬೇಕಷ್ಟೆ!... ಆ ಕೆಲಸಾನ ನಂಗೆ ಬಿಡ್ರಿ... ಅರ್‍ಮನೆಯಂಥ ಮನೇನ ಕೊಡ್ಸೋ ಜವಾಬ್ದಾರಿ ನಂದು... ನೀವು ಚಿಂತೆ ಮಾಡೋದು ಬ್ಯಾಡ... ನೀವು ನಾಳೆ ಬರೋ ಹೊತ್ಗೆ ನೋಡಿಟ್ಟಿರ್‍ತೀನಿ" ಎಂದು ಹೇಳಿ ಹೋದನು.
ಸಹೋದ್ಯೋಗಿಗಳ ಪೈಕಿ ಇಸ್ಮಾಯಿಲ, ಚಂಬಸ್ಯಯ್ಯ ಆಡಿದ ಮಾತುಗಳನ್ನು ಹೆಜ್ಜೆಹೆಜ್ಜೆಗೊಂದರಂತೆ ಗಾಳಿಗೆ ಬಿಟ್ಟನು. ಹೆಬ್ರಿಯವರ ಮಾತಿನಲ್ಲಿ ಕೆಲವೊಂದು ಪೂರ್ವಗ್ರಹಗಳ ವಾಸನೆ ಇರುವುದನ್ನು ಗುರುತಿಸಿದನು.
"ಏನೋ ಶಾಮಾ... ಹೆತ್ತೋಳ್ಗಿಂತ ಹೆಚ್ಚಾದ್ಲೇನೋ ನಿಂಗೆ... ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ಅವಳ್ನೊಂದೆ ಕರ್‍ಕೊಂಡೋಗಬೇಕೆಂದ್ಕೊಂಡಿದ್ದೀಯಾ... ಅಲ್ಲಿ ಅವಳೇನು ನಿನ್ನ ಆರೈಕೆ ಮಾಡ್ತಾಳೋ ಮಾಡ್ಲಿ... ನನ್ನ ದೇಹ ನನ್ಗೆ ಭಾರ ಆದೀತಾ... ತುಲಸಿ ರಾಮಾಯಣವನ್ನೋ; ಲಲಿತಾಷ್ಟಕವನ್ನೋ ಓದ್ಕೊಂಡು ಕಾಲ ಹಾಕ್ತೀನಿ.... ಏನೇ ವರಲಕ್ಷ್ಮೀ... ತಾಯಿ ಮಗನ್ನಗಲಿಸಿ ಅದ್ಯಾವ ನರಕಕ್ಕೆ ಹೋಗ್ತೀಯೇ ಮಳ್ಳೀ... ಅದೆಷ್ಟು ದಿನ ನಿನ್ನಾಟ ನಡೀತದೋ ನಡಿಯಲಿ... ನಾನೂ ನೋಡ್ತೀನಿ" ಎಂದು ತಾಯಿ ವಟಗುಟ್ಟುತ್ತಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ ಗ್ರಾಮೀಣ ಸಾರಿಗೆ ಹತ್ತಿದ....
ಜೀವಾವಧಿ ಶಿಕ್ಷೆಗೊಳಗಾಗಿರುವ ಖೈದಿಯಂತೆ ತಲೆ ತಗ್ಗಿಸಿ ನಡೆಯುತ್ತ ಮನೆ ತಲುಪಿದ. ಪಡಸಾಲೆಯ ಒಂದು ಕಡೆ ಬತ್ತಿ ಹೊಸೆಯುತ್ತ ಕೂತಿದ್ದ ತಾಯಿ ಅಲುಮೇಲಮ್ಮನೂ; ನೆಲ ಬಳಿಯುತ್ತಿದ್ದ ಹೆಂಡತಿ ವರಲಕ್ಷ್ಮಿಯೂ ತಲಾ ಒಂದೊಂದು ಕೋನದಲ್ಲಿ ತನ್ನ ಕಡೆ ನೋಡಿ ನಿಟ್ಟುಸಿರು ಬಿಟ್ಟರು ಸುಯ್ ಅಂತ.
ಬಟ್ಟೆ ಬದಲಾಯಿಸಿ ಬಚ್ಚಲಿಗೆ ಹೋಗಿ ಬಂದ.
"ಸ್ನಾನ ಮಾಡಿ ಸಂಧ್ಯಾವಂದನೇನೆ ಮಾಡಲ್ವೇನೋ... ಪುರುಷ ಸೂಕ್ತ ಹೇಳೋದ್ಬೇ ವಾರ್‍ದಿಂದ ನಾನು ಕೇಳೇ ಇಲ್ಲ... ಮಾವನವ್ರು ಹೊರಟು ಹೋದ್ಮೇಲೆ ಮನೆ ಎಂಬೊದು ಶೂದ್ರರ ದನದ ಕೊಟ್ಟಿಗೆಗಿಂತ ಅತ್ತತ್ತ ಆಯ್ತು... ಒಂದು ಮಡಿ ಇಲ್ಲ ಒಂದು ಆಚಾರ ಇಲ್ಲ..." ಎಂದು ಕೂತ ಕಡೆಯಿಂದ ಕೂಗಿ ಹೇಳಿತು.
ಆ ಮಾತಿನಿಂದ ಖತಿತಳಾಗಿ ವರಲಕ್ಷ್ಮಿಯು -
"ಅದಕ್ಯಕತ್ತೆ ಹಂಗತೀರಾ... ನಾನೇನೀ ಮನೇನ ದನದ ಕೊಟ್ಟಿಗಿ ಮಾಡೀವ್ನಾ... ಬೆಳಗ್ನಿಂದ ಒಂದು ಕಾಳು ನೀರ್‍ನ ಬಾಯ್ಗೆ ಹಾಕ್ಕೊಳ್ದೆ ವಿಶೇಷಾರ್ಚನೆ ಮಾಡ್ಲಿವಾ..." ಎಂದು ಮಾತೆಸೆದಳು.
"ಹ್ಹಾ...ಹ್ಹಾ... ಮಾಡಿದ್ದೀಯಾ... ಮಸಡಿದ್ದೀಯಾ... ಬಚ್ಚಲೊಳಗೆ ಕೂತ್ಕೊಂಡು ಅವಲಕ್ಕಿ ಕೊಬ್ರಿ ಮುಕ್ಕುತ್ತಿದ್ನ ನಾನ್ನೋಡಿಲ್ಲಾಂತ ಅಂದ್ಕೊಂಡೀ ಏನು!"
ಅತ್ತೆಯವರ ಮಾತು ಕೂರ್ದನಿಯಂತೆ ತಿವಿಯಲು ಜಿಗಿದು ನಿಂತಳು ವರಲಕ್ಷ್ಮಿಯು -
"ಆಯ್ಯೋ ರಾಮ ರಾಮಾ... ಎಂಥಾ ಮಾತಾಡ್ತಿದೀರಲ್ಲ ಅತ್ತೆ. ನಾನೇನಾದ್ರು ಹಾಗೆ ಮಾಡಿದ್ದ ಪಕ್ಷದಲ್ಲಿ ನನ್ನ ಕೈಕಾಲು ಬಿದ್ದು ಹೋಗ್ಲಿ... ಇವತ್ತು ಹೇಳಿ ಕೇಳಿ ರಥಸಪ್ತಮಿ, ತಿಲಮಿಶ್ರಿತ ಜಲಸ್ನಾನ ಮಾಡಿ ಹೊರಗಡೆ ಬಂದು ಯದಾ ಜನ್ಮಕ್ಷತಂ ಶಾಪಂ ಮಯಾ ಅಂತ ನೂರು ಸಾರಿ ಜಪಿಸಿದ್ದನ್ನು ನೀವೇ ಕೇಳಿದ್ದೀರಿ... ಅವರ ಸಂಧ್ಯಾವಂದನೆಗೆ ಅನುಕೂಲವಾಗ್ಲೀ ಅಂತ ನಾನು ಶುಚಿ ಮಾಡ್ತಿದ್ರೆ ಮೇಲೀ ಮಾತಾಡ್ತಿದ್ದೀರಿ" ಎಂದು ಪಟಪಟ ಹೇಳಿ ನನ್ನ ಕಡೆ ತಿರುಗಿ -


೪೪೦

"ಅವ್ರ ಮಾತು ಕೇಳಿ ಅಪಾರ್ಥ ಮಾಡ್ಕೋಬೇಡಿ... ವಯಸ್ಸಾದೋರು ಹಾಗೆ ಮಾತಾಡೋದ್ರಲ್ಲಿ ತಪ್ಪೇನು ಇಲ್ಲ... ಯಾರು ಏನೇ ಹೇಳ್ಕೊಳ್ಳಿ... ನಾನು ಪ್ರಾಣ ಬೇಕಾದ್ರೆ ಬಿಡ್ತೀನೇ ಹೊರತು ಆಚಾರ ವಿಚಾರವನ್ನು ಮಾತ್ರ ಬಿಡೋಳಲ್ಲ" ಎಂದು ಅಫಿಡವಿಟ್ ಸಲ್ಲಿಸಿದಳು.
ತನ್ನ ತಾಯಿ ಮಾಡುತ್ತಿರುವುದು ಸುಳ್ಳು ಅಪಾದನೆಯಂತ ತನಗೆ ಗೊತ್ತು. ತನ್ನನ್ನು ಹೆಂಡತಿ ವಿರುದ್ಧ ಎತ್ತಿಕಟ್ಟುವ
ಪ್ರಯತ್ನವನ್ನು ಅನೇಕ ಸಾರಿ ಮಾಡಿರುವಳು. ಆದರೆ ತಾನು ಎಹ್ಟು ಮಾತ್ರಕ್ಕೆ ಸೊಪ್ಪು ಹಾಕಿಲ್ಲ. ತನಗು ವರಲಕ್ಷ್ಮಿ ಬಚ್ಚಲಲ್ಲಿ ಏನೆಲ್ಲ ತಿನ್ನುವುದು ಬೇಕಾಗಿದೆ. ಆದರೆ ಆಕೆ ಹಾಗೆ ಮಾಡಬೇಕಲ್ಲ. ಮಡಿ ಆಚಾರಗಳೇ ಸ್ತ್ರೀರೂಪ ಧರಿಸಿ ತನ್ನ ಹೆಂಡತಿಯಾಗಿರುವಳೆಂದುಕೊಂಡಿರುವೆನು.
ಪ್ರತಿದಿನ ಒಂದಲ್ಲಾ ಒಂದು ತಿಥಿ ನಕ್ಷತ್ರ ಶೋದಿಸಿಯೇ ಆಕೆ ದಿನಚರಿ ಆರಂಭಿಸುವುದು. ಯಾವುದೇ ವ್ರತ ನಿಯಮ ನೋಂಪಿಯನ್ನು ಪತಿಪತ್ನಿಯರೀರ್ವರೂ ಸೇರಿ ಮಾಡಿದಾಗ ಮಾತ್ರ ಪುಣ್ಯ ಸಂಚಯವಾಗುವುದಾಗಿ ಹೇಳುವಳು...
ಆದರೆ ಇವತ್ತು ರಥಸಪ್ತಮಿಯನ್ನು ಹಿಡಿದುಕೊಂಡಿದ್ದಾಳೆ. ಮನೆಯಲ್ಲಿದ್ದರೆ ಕಾಫಿ ಒತ್ತಟ್ಟಿಗಿರಲಿ ಒಂದು ಕಪ್ಪು ನೀರನ್ನು ಸಹ ಕುಡಿಯಲು ಆಸ್ಪದ ಕೊಡಲಾರಳೆಂದುಕೊಂಡ ಶಾಮ ಹೊರಡುವ ಅವಸರದಲ್ಲಿ ಎಡಗಾಲ ಚಪ್ಪಲಿಯನ್ನು ಬಲಗಾಲಿಗೂ ಬಲಗಾಲ ಚಪ್ಪಲಿಯನ್ನು ಎಡಗಾಲಿಗೂ ತೊಡುವ ಪ್ರಯತ್ನ ಮಾಡುತ್ತ ಸಿಕ್ಕಿಬಿದ್ದ.
"ನ್ರೀ, ಆಗಲೇ ಹೊರಡ್ತಿದೀರಲ್ಲ... ಇವತ್ತು ರಥಸಪ್ತಮಿ ಎಂಬುದನ್ನು ಮರ್‍ತುಬಿಟ್ಟಿರೇನು? ಅದ್ಹೇಗೆ ಬೇಳೆಸಿದ್ರೆನೋ ಈ ಅತ್ತೆಯವರು- ಶ್ರೀರಾಮನಿಗೇ ಗೊತ್ತು!" ಎಂದು ಓಡಿ ಬಂದು ಕೈಹಿಡಿದು ತಡೆದಳು ವರಲಕ್ಷ್ಮಿ.
ಆಕೆಯ ಸ್ಪರ್ಶ ಎಷ್ಟೊಂದು ಆಪ್ಯಾಯಮಾನವಾಗಿತ್ತು ಎಂದರೆ ಆ ಕೂಡಲೆ ಸುಖೋಪಭೋಗವನ್ನು ಸವಿಯಬೇಕೆಂಬ ಮನಸ್ಸಾಯಿತು. ಆದರೆ ಆ ಆಸೆ ಕ್ಷಣಭಂಗುರವೆಂದು ಅರ್ಥವಾಯಿತು.
"ಏನೇ... ನನ್ನ ಮಗನ್ನ ನಾನೂ, ಮಾವನವ್ರೂ ಹೇಗೆ ಬೆಳೆಸಿದೆವಂಥ ಕೇಳ್ತಿದ್ದೀಯಾ... ಹೇಳ್ತೀನಿ ಕೇಳೆ..." ತಾಯಿಯ ಮಾತು ಮುಂದುವರಿದಿರುವುದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಹೆಂಡತಿಯು ತನ್ನನ್ನು ಬಚ್ಚಲಿಗೆ ಎಳೆದುಕೊಂಡು ಹೋಗಿ
ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು
(ಹೇಳ್ತಾ ಸ್ನಾನ ಮಾಡ್ತೀ... ಆ ಎಲ್ಲ ಮಂತ್ರ ತನಗೆ ನೆನಪಿದ್ದರೆ ತಾನೆ! ಆಕೆ ಹೇಳಿದಳು)
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮಿ
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಂ|
ಮನೋ ವಾಕ್ಕಾಯಜಂ ಯಚ್ಚ ಜ್ಞಾತಾ ಜ್ಞಾತೇಚಯೇ ಪುನಃ
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ
ಸಪ್ತವ್ಯಾಧಿ ಸಮಾಯುಕ್ತ ಹರಮಾಕರಿ ಸಪ್ತಮಿ||... ಎಂದು ಮುಂತಾಗಿ ಆಕೆಯೆ ಹೇಳುತ್ತ ಸ್ನಾನ ಮಾಡಿಸಿದಳು... ಹೆತ್ತ ಕೂಸಿಗೆ ತಾಯಿ ಸ್ನಾನ ಮಾಡಿಸಿದಂತೆ...
ಇವತ್ತು ರಥಸಪ್ತಮಿ ಎಂದು ಮೊದಲೇ ನೆನಪಿಗೆ ಬಂದಿದ್ದಲ್ಲಿ ಆತ ಹೋಟಲಿಗೆ ಹೋಗಿ ತಿಂಡಿ

೪೪೧

ಗಿಂಡಿ ತೆಗೆದುಕೊಂಡು ಮನೆಯಲ್ಲಿ ಕಾಲಿಡುತ್ತಿದ್ದ... ತೋಳಿಲ್ಲದ ರವಿಕೆಯನ್ನು ತೊಡೆಸಿದರೆ ತನ್ನ ಹೆಂಡತಿ ಜಿ.ಎಂ.ಶಾಂತಿ ಥರ ಕಾಣಿಸಬಹುದೆ ಎಂದುಕೊಂಡ. ಹಾಗೆ ಕಲ್ಪಿಸಿಕೊಂಡು ಹೆಂಡತಿಯ ತೋಳು ಸವರಲು ಪ್ರಯತ್ನಿಸುತ್ತಲೇ ‘ಸಪ್ತ ಸಪ್ತಿವಹ" ಎಂಬ ಮಂತ್ರ ಗೊಣಗುತ್ತ ಸೂರ್ಯದೇವನಿಗೆ ಅರ್ಘ್ಯ ಕೊಟ್ಟ...
ಉತ್ತರಾಬಾದ್ರೆ ನಕ್ಷತ್ರದಲ್ಲಿ ಹುಟ್ಟಿ ಮೀನ ರಾಶಿಯಲ್ಲಿ ಜಾಗ ಪಡೆದಿರುವ ತಾನು ರಥಸಪ್ತಮಿಯ ಪುಣ್ಯ ರಾತ್ರಿಯಂದು ಹೊಟ್ಟೆತುಂಬ ಊಟಮಾಡಬಾರದೆಂದೂ, ಸಂಭೋಗ ಕಲ್ಪಿಸಿಕೊಂಡರೆ ರೌರವ ನರಕ ಪ್ರಾಪ್ತವಾಗುವುದೆಂದೂ ಆಕೆ ಹೇಳಲು ಶಾಮನು ವಿಧಿಯನ್ನು ಹಳಿಯುತ್ತ ಅವಲಕ್ಕಿ ತಿಂದು ಬೋರಲು ಮಲಗಿ ನೂರಾರು ಕನಸು ಕಂಡನು. ಪರಸ್ತ್ರೀಯರ್ರ್‍ ಕಿಕ್ಕಿರಿದ್ದಿಂತಹ ಕನಸುಗಳು ಅವು... ಬೆಳಗಾಗೆ ಹೆಂಡತಿಗೆ ಹೇಳಿದರೆ ವಿವಾಹೇತರ ಸಂಬಂಧವನ್ನು ತನ್ನ ಗಂಡ ಕನಸಿನಲ್ಲಾದರೂ ಇಟ್ತುಕೊಂಡಿರಬಹುದೆಂದು ಆಕೆ ಊಹಿಸಿ ಸಂದೇಹಿಸದಿರಲಾರಳೆಂದುಕೊಂಡ.

ಮರುದಿನ ಸೂರ್ಯೋದಯಕ್ಕೂ ಪೂರ್ವದಲ್ಲೇ ಅತ್ತೆ ಸೊಸೆಯರೀರ್ವರ ವಾಗ್ವಾದ ತಾರಕಕ್ಕೆ ಮುಟ್ಟಿತ್ತು. ಅವರ ಜಗಳಕ್ಕೆ ಹೆದರಿ ಉದಿಸಲು ದಿನಕರ ಹಿಂದೇಟು ಹಾಕುತ್ತಿದ್ದ. ತಾಯಿ ವ್ಯಾಸ ಪೀಠದ ಮುಂದೆ ಜಪಮಾಲೆ ಹಿಡಿದು ಕೂತಿರುವುದನ್ನೂ; ಹೆಂಡತಿ ತುಲಸೀ ಕಟ್ಟೆಗೆ ಪೂಜೆಮಾಡುತ್ತಿರುವುದನ್ನೂ ಗಮನಿಸಿ ಎಚ್ಚರಗೊಂಡ. ಬ್ರಾಹ್ಮೀ ಮುಹೂರ್ತದಲ್ಲಿ ಗಂಡನನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಳು.
ಲಗುಬಗೆಯಿಂದ ಶಾಮ ಎದ್ದು ಒಂದಿತ್ತು, ಒಂದಲ್ಲ ಎನ್ನೋ ಹಾಗೆ ಶೌಚಾದಿ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ನಶ್ಯ ಪುಡಿ ಬಣ್ಣದ ಪ್ಯಾಂಟು ಧರಿಸಿದ. ಪವಿತ್ರ ಶ್ರೋತ್ರಿಗಳ ವಂಶದಲ್ಲಿ ಜನಿಸಿ ಪ್ಯಾಂಟು ತೊಡುವುದೆಂದರೇನು? ಮಡಿಧೊತರ ಉಟ್ಟು ನೌಕರಿಗೆ ಹೋಗಬಾರದೇಕೆ? ಹೆಂಡತಿ ಗೊಣಗುತ್ತ ಮಜ್ಜಿಗೆ ಅನ್ನ ಕಲೆಸಿಟ್ಟಿದ್ದ ಟಿಫಿನ್ ಬಾಕ್ಸ್ ಕೈಗೆ ಕೊಟ್ಟಳು.

ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಹೊರಟು ಕೊತ್ತಲಿಗಿ ತಲುಪಿದ.
ಹಿಂದಿನ ದಿನ ರಥ ಸಪ್ತಮಿಯಾಗಿದ್ದ ಕಾರಣಕ್ಕೋ ಅದು ಪವಿತ್ರ ಮಾಘಮಾಸದ ಅಷ್ಟಮಿಯ ದಿನವಾಗಿದ್ದರಿಂದಾಗಿಯೋ, ಹಿರೇಮಗಳುರಿರಿನಿಂದ ‘ರಾಸ್ವಸೇ’ದ ರಾಜ್ಯ ಘಟಕದ ಸಂಚಾಲಕರಾದ ಶ್ರೀಯುತ ಚಕ್ರವರ್ತಿಯವರು ಬಂದು ನಿಕ್ಕರು ಪ್ರದರ್ಶಿಸಲಿರುವ ಕಾರಣಕ್ಕೋ ಮೇನೇಜರು ಹೆಬ್ರಿಯವರು ಅಂದು ರಜೆ ಹಾಕಿದ್ದರು.

ಇಸ್ಲಾಮಿನ ಪವಿತ್ರ ಮೂರ್ತಿಯಾದ ಅಯತುಲ್ಲಾ ಖೋಮೇನಿ ಮರಣದಂಡನೆ ಘೋಷಿಸಿರುವ ಸಲ್ಮಾನ್ ರಷ್ಡಿ ಬರೆದದ್ದೆನಲಾದ ಕೃತಿಯೊಳಗಿಂದ ಜಮಾತೆ ಇಸ್ಲಾಮಿಗೆ ಸ್ಪೂರ್ತಿ ಪಡೆಯುವ ನಿಮಿತ್ತ ಸೆಟಾನಿಕ್ ವರ್ಸೆಸ್ಸನ್ನು ಕಂಕುಳಲ್ಲಿಟ್ಟುಕೊಂಡು ಇಸ್ಮಾಯಿಲು ಮೇನೇಜರ ಗತ್ತಿನಿಂದ ಬ್ಯಾಂಕಿನೊಳಗೆ ತಿರುಗಾಡುತ್ತಿದ್ದನು. (ಪ್ರವಾದಿಯವರನ್ನು ಹೀಗಳೆದ ಕಥೆ ಪ್ರಕಟಿಸಿದ್ದ ಇಂಗ್ಲೀಷ್ ದಿನಪತ್ರಿಕೆಯ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲು ಕುಂತಳನಾಡಿನಿಂದ ಹೋಗಿದ್ದ ನೂರು ಮಂದಿ ತಂಡದ ನೇತೃತ್ವವನ್ನು ಇಸ್ಮಾಯಿಲು ವಹಿಸಿದ್ದ ಎಂಬುದು ಪೋಲೀಸ್ ದಾಖಲೆಯಲ್ಲಿದೆ)
ತನ್ನನ್ನು ಯಾರೋ ನೋಡಲು ದುಬಾಐಯಿಂದ ಬರುತ್ತಿದ್ದಾರೆ ಎಂಬ ಕಾರಣದಿಂದ ಕು.ಜಿ.ಎಂ.ಶಾಂತಿ ರಜೆ ಹಾಕಿದ್ದಳು. ಅದನ್ನೇ ಒಂದು ಜೋಕು ಮಾಡಿಕೊಂಡು ಅಡ್ಡಾಡುತ್ತಿದ್ದ ಓಬಳೇಶನು ತನ್ನ ಪ್ರಿಯತಮೆ ಏನೋ ಎಂಬಂತೆ ಫೈಲು ಹಿಡಿದು ಬಂದು ಕಿವಿಯಲ್ಲಿ ತ್ರೀ ಹಂಡ್ರಡ್ ಬಾಯಿ
-

೪೪೨

ಇಟ್ಟು "ಸೋಮಿ... ಮನೆ ನೋಡಿದ್ದೀನಿ... ಲಂಚ್ ಅವರಾದ್ಮೇಲೆ ಹೋಗಾಣು" ಎಂದ. ಶಾಮ ಹ್ಹೂ ಅಂದ.
ಅದಕ್ಕೂ ಮೊದಲೆ ಗುಂಡುಮುಣುಗು ಸಿದ್ದನಗೌಡ ಎಂಬ ರೋಹಿಯಾವಾದಿ ಸಾಲಕೊಡಿಸಲು ಹತ್ತಾರು ಮಂದಿ ರೈತರನ್ನು ಕಟ್ಟಿಕೊಂಡು ಬಂದು ಒಳಗೆ ಬೀಡು ಬಿಟ್ಟಿದ್ದ. ಆತ ಮಾತು ಮಾತಿಗೆ ಲೋಹಿಯಾರವರು ಹಳ್ಳಿಗಳ ಸರ್ವತೋಮುಖ ಪ್ರಗತಿ ಕುರಿತು ಏನು ಹೇಳಿದ್ದಾರೆಂದರೆ ಎಂಬ ಪಲ್ಲವಿ ಪೋಣಿಸುತ್ತ ತಲೆ ನೋವಾಗಿದ್ದ. ಆ ತಲೆನೋವಿಗೆ ಒಂದು ತಿಂಗಳ ಇತಿಹಾಸವಿದೆ.

ಅಪಾತ್ರರಿಗೆ ಸಾಲವನ್ನಾಗಲೀ, ವಿದ್ಯೆಯನ್ನಾಗಲೀ, ಅನ್ನವಾಗಲೀ ಕೊಡಬಾರದೆಂದು ವೇದೋಪನಿಷತ್ತುಗಳಲ್ಲಿ ಹೇಳಿದೆ ಎಂದು ಯೋಚಿಸಿ ಮನಸ್ಸಿನಲ್ಲಿಟ್ಟುಕೊಂಡು ಸದರಿ ದಿನ ಬರಲು ಹೇಳಿ ಬರಲು ಹೆಬ್ರಿ ರಜೆ ಹಾಕಿದ್ದರು.
ನಲವತ್ತನೇ ವಯಸ್ಸಿನಲ್ಲಿ ಅಂದರೆ ಕಳೆದ ವಾರ ಇನ್ನೇನು ಮುಟ್ಟು ನಿಲ್ಲಲ್ಲಿದೆ ಎಂಬಂತಿದ್ದ ಹೆಂಗಸನ್ನು ಮದುವೆಯಾಗಿ ಕ್ರಾಂತಿ ಮಾಡಿದ ಗೌಡರು "ಕಸ್ಟಮರ್ ಈಸ್ ಗಾಡ್, ಗಾಡ್ ಈಸ್ ಕಸ್ಟಮರ್ ಕಣ್ರೀ... ನೇಗಿಲಿಗೆ ಸಿಟ್ಟು ಬರೋಕು ಮೊದ್ಲೆ ಇವ್ರೀಗೆ ಲೋನ್ ಸ್ಯಾಂಕ್ಷನ್ ಮಾಡ್ರಿ... ಇಲ್ಲಾಂದ್ರೆ... ನಾವು ರೈತ ವಿರೋಧಿ ಬ್ಯಾಂಕಿನ ಮುಂದೆ ಸತ್ಯಾಗ್ರಹ ಆರಂಭಿಸ್ತೀವಿ" ಎಂದು ಷೋಕಾಸ್ ನೋಟೀಸು ನೀಡಿಬಿಟ್ಟ.
ಅದನ್ನು ಕೇಳಿ ಎಲ್ಲರು ಅಲ್ಲಾಡಿ ಹೋದರು. ಕೊತ್ತಲಿಗಿ ಸೆಗ್ಮೆಂಟ್ ಏರಿಯಾದಲ್ಲಿ ನೂರಾರು ಚಳುವಳಿ ಮಾಡಿರುವ ಅನುಭವ
ಗುಂಡುಮುಣುಗು ಗೌಡರಿಗುಂಟು. ಉಪವಾಸ ಕೂತು ರಾಜ್ಯದ ನೂರಾರು ಮಂದಿ ನಾಯಕರ ಗಮನ ಸೆಳೆದಿರುವ ಆತನನ್ನು ಎದುರು ಹಾಕಿಕೊಳ್ಳುವ ಧೈರ್ಯ ಖುದ್ದ ಚಿನ್ನದಿಂದ ಮಾಡಲ್ಪಟ್ಟ ಈಚಲು ಮರವನ್ನು ಪೂಜಿಸುವ ಈಡಿಗರಿಗೂ ಇಲ್ಲ...
ಹೆಬ್ರಿ ಮೇಲೆ ರೈತ ನಾಯಕರನ್ನು ಎತ್ತಿಕಟ್ಟಲು ಇದೇ ಸುವರ್ಣಾವಕಾಶವೆಂದು ಬಗೆದ ಇಸ್ಮಾಯಿಲು, ಚಂಬಸ್ಯಯ್ಯ ಗೌಡರ ಬಳಿಗೆ ಹೋಗಿ "ಇದ್ರಲ್ಲಿ ನಮ್ಮದೇನು ತಪ್ಪು ಐತೆ ಗೌಡ್ರೇ..." ಬರಲಿಕ್ಕೆ ಹೇಳಿ ರಜೆ ಹಾಕಿದ್ದು ಮೇನೇಜರ್ರು ತಪ್ಪಲ್ಲೇನು? ಆತ ಬಂದ್ಮೇಲೆ ಕೊರಳ ಪಟ್ತಿ ಹಿಡ್ದು ಕೇಳಿ... ಅದ್ಕೆ ಅಡ್ಡ ಬಂದ್ರೆ ಕಪಾಳಕ್ಕೆ ಹಾಕಿ, ಆಯ್ತಾ" ಎಂದು ಹೇಳಿದರು.

"ಆ ಹೆಬ್ರೀನೂ ಅಷ್ಟೇ ನೀವು ಕೊಬ್ರೀನೂ ಅಷ್ಟೇ ಕಾಣ್ರೀ... ಬ್ರಾಂದಿ ಇನ್ ಡಿಫರೆಂಟ್ ಬಾಟಲ್ಸು... ನಿಮ್ಮಂಥ ಬ್ಯೂರೋಕ್ರಾಟ್ಸನ್ನ ನಂಬ ಬಾರ್ದೂಂತ ನಮ್ ಲೋಹಿಯಾ ಹೇಳಿದ್ದಾರೆ. ಅದ್ಕೆ ನಾವು ಅಮರಾಣಾಂತ ಉಪಾಸ ಸತ್ಯಾಗ್ರಹ ಆರಂಭಿಸ್ತೀವಿ" ಎಂದು ಅವರ ಮುಖಕ್ಕೆ ರಾಚಿದಂತೆ ಹೇಳಿ ಸಣ್ಣ ರೈತರ ಕಡೆ ತಿರುಗಿ "ಇವ್ರಿಗೆ ಬುದ್ಧಿ ಕಲಿಸಬೇಕೆಂದ್ರೆ ಉಪಾಸ ಸತ್ಯಾಗ್ರಹವೊಂದೇ ಬ್ರಹ್ಮಾಸ್ತ್ರ, ಬರ್ರಿ ಸತ್ಯಾಗ್ರಹ ಮಾಡೋಣ" ಎಂದು ಹೇಳಿದನು ಗುಮುಸಿ ಗೌಡ’
ಆತನ ಮಾತು ಕೇಳಿ ರೈತರು ತಲೆಕೆರೆದುಕೊಂಡರು.

"ಏಯ್... ಹೋಗಿ ಗವುಡ್ರೆ... ಸಾಲ ಕೊಡಿಸ್ತೀನಂತ ಕರ್ಕೊಂಡು ಬಂದು ನಮ್ಮನ್ನ ಉಪಾಸನ್ವಾಸ ಕುಂಡ್ರುಸ್ತಿದ್ದೀರಲ್ಲ? ಇದೇ ಕೆಲಸಾನ ನಮ್ಮನ್ಯಾಗ ನಾವು ಮಾಡ್ತಿಲ್ಲೇನು? ಬ್ಯಾಂಕಿನೋರು ಸಾಲ ಕೊಟ್ರೆ ಹತ್ತು, ಕೊಡ್ಲಿಲ್ದಿದ್ರೆ ಇಪ್ಪತ್ತು... ನಡ್ಕೋತ ನಮ್ಮೂರ್‍ಕಡೀಕೆ ನಾವೊಂಟೋಕೀವಿ... ನಿಮ್ಗೂ ಬುದ್ಧಿ ಇಲ್ಲಾಂದ್ರೆ ನಮ್ಗೂ ಇಲ್ಲೇನು?" ಎಂದು ಹೇಳಿ, ಟುವೆಲ್ಲು ಕೊಡವಿ ಹೆಗಲ ಮೇಲೆ ಹಾಕಿಕೊಂಡು ಬಸ್‌ಸ್ಟಾಂಡಿನ ದಾರಿ ಎಲ್ಲೈತೆಲ್ಲೈತಂತ ಹೊರಟೇ ಬಿಟ್ಟರು.
"ಹೋಗ್ರೋ ಹೋಗ್ರಿ... ಸತ್ಯಾಗ್ರಹದ ಮರ್ಮ ಅರ್ಥಾಗ್ದ ಹೊರ್‍ತು ನೀವು ಉದ್ಧಾರಾ


೪೪೩

ಗೋದಿಲ್ಲ... ನಮ್ಮ ದೇಶ ಉದ್ಧಾರಾಗ್ದೆ ಐದು ಸಾವ್ರ ವರ್ಷದ ಹಿಂದೆ ಎಲ್ಲಿತ್ತೋ ಅಲ್ಲೇ ಉಳಿಕೋತೈತಿ" ಎಂದು ಅವರನ್ನು ಬೀಳ್ಕೊಟ್ಟು ಗೌಡರ ತನ್ನ ಹೆಗಲ ಮೇಲಿದ್ದ ಹಸಿರು ಟವಲನ್ನೇ ಧ್ವಜದೊಪಾದಿಯಲ್ಲಿ ಅಂಗಳದ ಕ್ರೋಟನ್ ಗಿಡಕ್ಕೆ ನೇತುಹಾಕಿ, ಪದ್ಮಾಸನ ಹಾಕಿಕೊಂಡು ಕೂತೇ ಬಿಟ್ಟರು.
ಇವರ ಹೆಂಡತಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಚಂಬಸ್ಯಯ್ಯ ಕಾಫಿ ಕುಡ್ದು ಬರ್ತೀನಂತ ಹೇಳಿ ಹೊರಹೊಂಟನು. ಅವತ್ತು ಕೆಟ್ಟಗಳಿಗೆ ಇದ್ದುದರಿಂದಾಗಿಯೋ! ಜಿಲ್ಲಾ ನಾಯಕನೋರ್ವನ ಭಾಷಣ ಸದರೀ ಗ್ರಾಮದಲ್ಲಿ ಇದ್ದುದ್ದರಿಂದಾಗಿಯೇ ಏನೋ ಯಾರೊಬ್ಬರೂ ಬ್ಯಾಂಕಿನ ಕಡೆ ಬಂದಿರಲಿಲ್ಲ.
ಅರ್ಧ ಮುಕ್ಕಾಲು ಗಂಟೆಗೂ ಮೊದಲೆ ಲಂಚ್ ಅವರ್ ಶುರು ಆಯಿತು. ಕು.ಶಾಂತಿಯ ಗೈರುಹಾಜರಿಯಿಂದಾಗಿ ‘ಲಂಚವರ್ರೂ’ ಬನ್ನಿ ವೃಕ್ಷದಂತೆ ಬಿಕೋ ಎನ್ನಲಾರಂಭಿಸಿತು.

ತನ್ನ ಗಂಡನ ದೇಹದಲ್ಲಿ ತಾಮಸ ಗುಣ ಉದ್ಭವಿಸಬಾರದೆಂಬ ಕಾರಣದಿಂದ ಹೆಂಡತಿ ಕಟ್ಟಿದ್ದ ಮಜ್ಜಿಗೆ ಅನ್ನವನ್ನು ಬ್ಯಾಂಕಿನ ಘೂರ್ಕಾ ಎಂದೇ ಹೆಸರುಪಡೆದಿದ್ದ ನಾಯಿಗೆ ಹಾಕಲು ಓಬಳೇಶನಿಗೆ ಕೊಟ್ಟ. ಅವನು ಹಾಕಿ ಬಂದು "ಇನ್ನು ನಾವು ಮನೆ ನೋಡಲಕ ಹೋಂಡೋನೇನ್ರಿ" ಅಂದ.
ಇಸ್ಮಾಯಿಲ್ ಹೇಳಿದ "ಗೌಡ ಯಜಿಟೇಷನ್ನು ಮಾಡ್ತಿರುವಾಗ್ಲೆ ಹೋಗಬೇಕೇನು ಶಾಸ್ತ್ರಿ" ಅಂದ. ಅದೇ ಹೊತ್ತಿಗೆ ಚಂಬಸ್ಯನ ಜೊತೆ ಬಂದ ಶ್ರೀಮತಿ ಪಾರ್ವತಮ್ಮ ಗುಮಿಸಿಗೌಡರಿಂದಾಗಿ ಸತ್ಯಾಗ್ರಹ ಕಾಲಾಫ್ ಲಕ್ಷಣ ತೋರಿತು.
ಶಾಮು ಓಬಳೇಶರು ಪದ ವಿಂಗಡನೆಗೊಂಡ ವಕ್ರ ಮತ್ತು ಉಕ್ತಿಗಳಂತೆ ಹೊರ ಹೊಂಟರು. ಇಲ್ಲಿ ಮುಳುಗುತ್ತ ಅಲ್ಲಿ ತೇಲುತ್ತ; ಅಲ್ಲಿ ಮುಳುಗುತ್ತ ಇಲ್ಲಿ ತೇಲುತ್ತ ಸೈಬೀರಿಯನ್ ಹಕ್ಕಿಗಳಂತೆ ಅವರೀರ್ವರು ನಡೆಯತೊಡಗಿದರು.

ತಾಮಸ, ಸಾತ್ವಿಕ ಪ್ರವೃತ್ತಿಗಳೇ ವ್ಯಕ್ತಿರೂಪ ಧರಿಸಿ ನಡೆಯುತ್ತರುವರೇನೋ ಎಂಬಂತೆ ಅವರೀರ್ವರೂ ನಡೆಯ ತೊಡಗಿದರು.
ನಾಗರೀಕ ಅನಾಗರೀಕ ಜಾಯಮಾನಗಳಂತೆ; ಸುರ ಅಸುರರಂತೆ; ಹಿಂದಿನಕಾಲದ ಇಂದಿನ ಕಾಲಗಳಂತೆ; ಅಂತರಂಗ ಬಹಿರಂಗದಂತೆ ಅವರು ನಡೆಯುತ್ತಿರುವುದನ್ನು ಸಮಸ್ತರು ನೋಡತೊಡಗಿದರು.

ಕೆಲವರಂತೂ ಅಯ್ಯೋ ಪಾಪ!... ಇವನಿಗೇನು ಬಂತು ರೋಗ ಎಂಬಂತೆ ನೋಡ ತೊಡಗಿದರು. ಕೆಲವರು ಹ್ಹೋಽಽಹ್ಹೋಽಽಹ್ಹೋಽಽಃಃಓಽಽ ಎಂದು ಉದ್ಗರಿಸಿ ಶುಭ ಕೋರಿದರು. ಇಂಥ ಕಂಟಕ, ಸಂಕಟಗಳ ಮೂರ್ತಿವೆತ್ತ ಓಬಳೇಶನೇ ಪಕ್ಕದಲ್ಲಿರುವಾಗ ಶಾಮ ಯಾಕೆ ಹೆದರುವುದು?
ತ್ರಿಕಾಲ ಪೂಜೆ ಮಾಡುವಳೆಂದೂ, ಒಬ್ಬ ಬ್ರಾಹ್ಮಣನಿಗಾದರೂ ಊಟಹಾಕದ ಹೊರತು ಒಂದು ತುತ್ತು ಅನ್ನ ಮುಟ್ತುವವಳು ಅಲ್ಲವೆಂದೂ; ಈ ಪ್ರಪಂಚದಲ್ಲಿರುವ ಸಮಸ್ತ ದೇವಾನುದೇವತೆಗಳ ಫೋಟೋಗಳಿಂದ ಮನೆಯ ಗೋಡೆಗಳನ್ನು ಅಲಂಕರಿಸಿರುವಳೆಂದೂ ಸದ್ಗುರು ಸದಾನಂದ ಬಾಬಾರವರು ಮಂತ್ರಿಸಿಕೊಟ್ತಿರುವ ಪವಿತ್ರ ಭಸ್ಮ, ಕುಂಕುಮ ಸದಾ ನೊಸಲ ಮೇಲೆ ಅಲಂಕರಿಸಿಕೊಂಡಿರುವಳೆಂದೂ ಎಂದು ಮುಂತಾಗಿ ಮನೆ ಮಾಲೀಕಳಾದ ಕಾವಲಿ ಫಕೀರಮ್ಮನ ಗುಣಗಾನ ಮಾಡಿದ ಓಬಳೇಶ ದಾರಿಯುದ್ದಕ್ಕೂ.

೪೪೪

ಓಬಳೇಶ ಪರಮೆಶ್ವರ ಶಾಸ್ತ್ರಿಗಳ ಮೊಮ್ಮಗನೂ, ಸದರೀ ಗ್ರಮದ ಬ್ಯಾಂಕ್ ಆಫೀಸರನೂ ಆದ ಶಾಮಾ ಶಾಸ್ತ್ರಿಯನ್ನು ತಮ್ಮ ಕೇರಿಗೆ ಕರೆದುಕೊಂದು ಬರುತ್ತಿರುವನೆಂಬ ಸಂಗತಿಯು ಅದಾವ ಮಾದಿಯಿಂದಾಗಿಯೋ ಕೇರಿಯಲ್ಲಿ ಬಿತ್ತರವಾಗಿದ್ದಿತು. ಅಲ್ಲಿನ ಇರುವೆ ಎಂಬತ್ತು ನಾಲ್ಕು ಕೋಟಿ ಜೀವರಾಶಿಗಳು ಆ ಮಹಾಮಹಿಮನನ್ನು ಸ್ವಾಗತಿಸಲು ತುದಿಗಾಲಮೇಲೆ ನಿಂತು ಕಾಯಿತ್ತಿದ್ದವು.

ಬರೀ ಒಂದೇ ನಮೂನಿಯ ಮತ್ತು ಸವಕಲಾದ ಪ್ರಪಂಚವನ್ನು ನೋಡೀ, ನೋಡೀ ಸಾಕಾಗಿದ್ದ ಶಾಮಣ್ಣ ಎದುರಾಗುತ್ತಿದ್ದ ಶಾಮಣ್ಣ ಎದುರಾಗುತ್ತಿದ್ದ ಹೊಸ ಪ್ರಪಂಚವನ್ನೂ,ಹೊಸ ಪ್ರಪಂಚದ ರಂಗುರಂಗಿನ ಜೀವರಾಶಿಯನ್ನೂ; ಪುಳಕಗೊಳಿಸುತ್ತಿರುವ ಭಾವನೆಗಳನ್ನೂ ನೋಡಿ ಮೂಕ ವಿಸ್ಮಿತನಾಗುತ್ತಿದ್ದನು. ನರಕವಾಸಿಯೋರ್ವನಿಗೆ ಸ್ವರ್ಗ ತೋರಿಸಿದಾಗ ಅವನು ಯಾವ ರೀತಿ ಪ್ರತಿಕ್ರಿಯಿಸಬಹುದೋ ಬೆರಗಾಗಬಹುದೋ ಹಾಗೆ...

ಈಗ ಇರುವುಂಥ ಯಾವುದೇ ಅಸಹ್ಯಕರ ಭಾವನೆ ಆ ಕಾಲದಲ್ಲಿರಲಿಲ್ಲ. ಆ ಕಾಲದಲ್ಲಿ ಅದು ಯಕ್ಷರು, ಕಿನ್ನರರು, ಕಿಂಪುರುಷರು, ಗಂಧರ್ವರು ವಾಸಿಸುತ್ತಿರುವ, ವಾಸಿಸಲು ಯೋಗ್ಯವಾದ ಬಡಾವಣೆಯಾಗಿತ್ತು. ಆ ಬಡಾವಣೆಯನ್ನು ದೂರದಿಂದ, ಹತ್ತಿರದಿಂದ ನೋಡಲು ಪ್ರವೇಶಿಸಲು ಎಂಥ ಸಜ್ಜನರು ಹಾತೊರೆಯುತ್ತಿದ್ದರು.
ಶೂದ್ರಾತಿ ಶೂದ್ರನಂತೆ ವೇಷಮರೆಯಿಸಿಕೊಂಡು ಬಂದು ಹೋದ ಅನುಭವಕ್ಕಿಂತ ಶ್ರೋತ್ರಿಯ ನೈಜ ಸ್ವರೂಪದಲ್ಲಿ ಪ್ರವೇಶಿಸುವ ಅನುಭವವೇ ಅನನ್ಯವೆನಿಸಿತು.
ಶನಿವಾರಪೇಟೆ ದಾಟಿದ ನಂತರ ಎದುರಾದ ಬುಧವಾರಪೇಟೆಯೇ ಸೋಮವಾರಪೇಟೆಯ ಬುಲಂದೇ ದರವಾಜ ಇದ್ದಂತೆ ಎಂದೊಂದು ಕ್ಷಣ ಶಾಮನಿಗೆ ಅರ್ಥವಾಗಲಿಲ್ಲ. ದೂರದಲ್ಲೆಲ್ಲೋ ತಬಲ, ಮದ್ದಲೆ, ಕಂಜರ, ದಂಬಡಿಯೇ ಮೊದಲಾದ ಚರ್ಮ ವಾದ್ಯಗಳೂ; ಪಿಟೀಲು, ವೀಣೆ, ತಂಬುರಿಗಳೇ ಮೊದಲಾದ ತಂತಿ ವಾದ್ಯಗಳೂ, ಹಾರ್ಮೋನಿಯುಂಗಳು ಪರಸ್ಪರ ಮಧುರವಾಗಿ ಸಂಭಾಷಿಸುತ್ತಿರುವವೇನೋ ಎಂಬಂತೆ ಕೇಳಿ ಬರುತ್ತಿರುವುದು.
ಅಲ್ಲೊಂದೆರಡು ಕಡೆ ಹುಡುಗಿಯರು ಹುಡುಗರು ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ ಮೊದಲಾದ ಆಟಗಳನ್ನು ಆಡುತ್ತಿರುವುದು ಕಂಡಿತು. ಪಿಟ್ಟೆ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದ ಎರಡು ನಾಯಿಗಳು ಬಂದು ಶಾಮನ ಕಾಲ ಮೀನ ಖಂಡವನ್ನು ಮೂಸಿ ಹೋದವು.

ಬಾಗಿಲಲ್ಲಿ; ಕಿಟಕಿಯಲ್ಲಿ ನಿಂತು ಕೂತು ಅಡಗಿ ಇಣುಕುವ ಕಿನ್ನರಿ ಯಕ್ಷಿಯರು.
ಸಿದ್ಧಾರ್ಥನ ಕುತೋಹಲದಿಂದ ನೋಡುತ್ತ ಓಬಳೇಶನ ಹಿಂದೆ ಸಾಗಿದ ಶಾಮಣ್ಣ ಅಲ್ಲಿಂದ ಒಂದೈವತ್ತು ಹೆಜ್ಜೆ ನಡೆದು ಅವರು ಮನೆಯೊಂದರ ಮುಂದೆ ನಿಂತರು. ಬಾಗಿಲ ಮುಂದೆ ಸುಂದರವಾದ ತುಲಸಿಕಟ್ಟೆ.
ಓಬಳೇಶ "ಓಯ್ ಪಕ್ಕೀರಮ್ಮತ್ತಾ... ಇಂಟ್ಲೂ ಉನ್ನಾವಾ ಲೇದಾ... ಯಾವರೋಚ್ಚಾರೂ ಸೂಡು... ಬಿರ್‍ನರಾವೇ" ಎಂದು ಕೂಗಿದ.
ತ್ರಿಪುಂಡ್ರಾಕ್ಷೆಯಾಗಿದ್ದ ಸ್ಥೂಲ ದೇಹಿಯೋರ್ವಳು ‘ವಸ್ತುನ್ನಾ, ವಸ್ತುನ್ನಾಽಽ’ ಎನ್ನುತ್ತ ಹೊರಗೆ ಬಂದಳು.
(ಹಿಂದೆ ರಂತಿ ದೇವರು ಮಾಡಿದ ಯಜ್ಞದಲ್ಲಿ ಅನೇಕ ಪಶುಗಳನ್ನು ಕೊಂದು ಅವುಗಳ ಚರ್ಮ ರಾಶಿ ಹಾಕಿರಲಾಗಿ ಅಲ್ಲಿಂದ ಹರಿದು ಬಂದು ಔರೈಯಾದ ಬಳಿ ಯಮುನೆಯನ್ನು ಸೇರಿಕೊಳ್ಳುವ ಚಂಬಲ್ ನದಿಯೇ ಸ್ತ್ರೀರೂಪ ಧರಿಸಿ ಫಕೀರಮ್ಮ ಎಂಬ ಅಭಿಧಾನ ಪಡೆದಿರುವುದೋ...)

೪೪೫

ಮಹಾ ಪತಿವ್ರತೆಯೂ; ಅತ್ರಿಮುನಿಯ ಪತ್ನಿಯೂ; ಕರ್ದಮ ಮುನಿಯಿಂದ ದೇವಹೂತಿಯೆಂಬಾಕೆಯಲ್ಲಿ ಜನಿಸಿದವಳೂ ಆದಂಥ ಅನಸೂಯಳು ತನ್ನ ಪ್ರಾತಿವ್ರತ್ಯದ ಪರೀಕ್ಷಾರ್ಥವಾಗಿ ಬಂದ ತ್ರಿಮೂರ್ತಿಗಳಿಗೆ ನಮಸ್ಕರಿಸಿ ಪರ್ಣಕುಟಿಯೊಳಗೆ ಕರೆದುಕೊಂಡು ಹೋದಂತೆ ಫಕೀರಮ್ಮ ನಮಸ್ಕರಿಸಿ ಶಾಮಣ್ಣನನ್ನು ಒಳಗಡೆ ಕರೆದುಕೊಂಡು ಹೋಗಿ ಉನ್ನತಾಸನದ ಮೇಲೆ ಕುಳ್ಳರಿಸಿ, ಹಣ್ಣು ಹಂಪಲು ನೀಡಿ ಸತ್ಕರಿಸಿ ಅಷ್ಟು ದೂರ ನೆಲದ ಮೇಲೆ ಪದ್ಮಾಸನ ಹಾಕಿ ಕುಳಿತುಕೊಂಡಳು. ಒಂದಿಬ್ಬರು ಮೂರು ಮಂದಿ ತರುಣಿಯರು ಆಕೆಯ ಎಡಬಲಕ್ಕೆ ಕೂತುಕೊಂಡು ತಾವು ಅಮಾಯಕರೇನೋ ಎಂಬಂತೆ ನೋಡ ತೊಡಗಿದರು.
ಅವರ ಆ ಮಾದಕ ನೋಟಗಳನ್ನು ಹೇಗೆ ಎದುರಿಸಬೇಕೆಂದು ತಿಳಿಯಲಾರದೆ ಕಕ್ಕಾಬಿಕ್ಕಿಯಾಗಿ, ಆ ಕಕ್ಕಾಬಿಕ್ಕಿಯನ್ನು ಹೊರಗಡೆ ತೋರಗೊಡದಂತೆ, ಅಮಾಯಕನಂತೆ ಕುತಿದ್ದ ಶಾಮಣ್ಣನು ಒಳಗೊಳಗೆ ಪ್ರಾಪಂಚಿಕ ಸೌಂದರ್ಯದ ಬಗ್ಗೆ ಮೂಕವಿಸ್ಮಿತನಾದನಾದರೂ ಮಂದಸ್ಮಿತನಾಗಲಿಲ್ಲ.
( ಅವು ಹಿಂದೆಂದಾರೂ ಮಂದಸ್ಮಿತ ನೋಟದಿಂದ ಯಾವ ಸುಂದರಿಯ ನೋಟವನ್ನು ಎದುರಿದವನಾಗಿದ್ದರೆ ತಾನೆ)
ಫಕೀರಮ್ಮ ಆ ಹುಡುಗಿಯರ ಕಡೆ ತಿರುಗಿ - "ಏಯ್... ಪೆದ್ದವಾಳ್ಳು... ವಾಳ್ಳ ಕಾಳ್ಳಕಿ ಮೊಕ್ಕಿ ನಮಸ್ಕರಿಂಚಕೂಡಾ ಅಲಾಗೆ ಕೂಚಾರಾಮಿ! ಪೋಯಿ ನಮಸ್ಕರಿಂಚಂಡಿ" ಎಂದು ತಾರೀಫು ಮಾಡಿದ್ದು ಕಂಡು ಶಾಮಣ್ಣನ ಎದೆ ಧಸಕ್ಕೆಂದಿತು. ಅವರೆಲ್ಲಿ ಬಂದು ತನ್ನ ಸೂಕ್ಷ್ಮ ಗ್ರಾಹಿಯಾದ ಪಾದಮುಟ್ಟಿ ಬಿಡುವರೋ; ಅದರಿಂದ ತನ್ನ ದೇಹದ ಉಷ್ಣಮಾನದ ಏರಿಕೆಯಾಗಿ ಬಿಡುವುದೋ ಎಂದು ಅವನು ಹೆದರುತ್ತಿರುವಾಗಲೆ ಅವರು ಒಬ್ಬೊಬ್ಬರ್ಂತೆ ಎದ್ದು ಹೋಗಿ ಪಾದ ಮುಟ್ಟಿ ನಮಸ್ಕರಿಸಿಯೇ ಬಿಟ್ಟರು.
ದೀರ್ಘಾಯುಷ್ಮಾನ್ ಭವ ಎಂದು ಆಶೀವದಿಸಬೇಕೋ, ಶೀಗ್ರ ಕಲ್ಯಾಣಮಸ್ತು ಎಂದು ಅಶೀರ್ವದಿಸಬೇಕೋ, ಶತಪುತ್ರ ಸೌಭಾಗ್ಯವತೀರಸ್ತು ಎಂಬ ಗೊಂದಲಕ್ಕೆ ಬಿದ್ದ ಶಾಮಣ್ಣನಿಗೆ ಪೂರ್ಣಚಂದ್ರನ ಮೆಲಿರುವ ಹದಿನರು ಕಾಮಕಲೆಗಳ ಕುರಿತಾದ ಶ್ಲೋಕವೊಂದು ತನಗರಿವಿಲ್ಲದಂತೆ ನೆನಪಾಗಿ ಬಿಡಲು ಅವನು -
ಪೂಷಾ ಯಶಾಸ್ಸು ಮನಸಾ ರತಿಃ ಪ್ರಾಪ್ತಿಸ್ತಥಾ ದೃತಿಃ
ಋದ್ಧಿ ಸ್ಯೌಮ್ಯಾ ಮರೀಶಸ್ಚ ತಥಾ ಚೈವಾಂಶು ಮಾಲಿನೀ
ಅಂಗೀರಾ ಶಶಿನೀ ಚೇತಿ ಛಾಯಾ ಸಂಪೂರ್ಣ ಮಂಡಲಾ
ತಿಷ್ಟಿಶ್ಚೈವಾಮೃತಾ ಚೇತಿ ಕಲಾಸೋಮಸ್ಯ ಷೋಡಶ...
... ಎಂದು ಕಣ್ಣುಮುಚ್ಚಿ ಗಟ್ಟಿಯಾಗಿ ನುಡಿದುಬಿಟ್ಟನು.
ಅದನ್ನು ಕೇಳಿ ಫಕೀರಮ್ಮ ಭಕ್ತಿ ಪರವಳಾಗಿ "ಸಾಕ್ಷಾತ್ ಪರಮೇಶ್ವರ ಶಾಸ್ತ್ರಿಗಳೇ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡ್ದಂಗಾಯ್ತು" ಎಂದು ಉದ್ಗರಿಸಿದಳು.
ಹುಡುಗಿಯರ ಪೈಕಿ ಎತ್ತರದ ನಿಲುವಿನ ಹುಡುಗಿ ಮಾತ್ರ ಶಾಮಣ್ಣನ ಶ್ಲೋಕೋಚ್ಚಾಣೆಯಿಂದ ಬೆರಗಾಗಲಿಲ್ಲ.. ಆ ಚೌಪದಿಯನ್ನು ಒಂದೆರಡು ಬಾರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಂತೆ ಕಣ್ಮುಚ್ಚಿ ನಿಂತಿದ್ದು ನಂತರ ತೆರೆದಳು.
"ಇದೇ ಶ್ಳೋಕವನ್ನು ನಾನೂ ಹೇಳ್ಲೇನ್ರೀ ಶಾಸ್ತ್ರಿಗಳೇ" ಎಂದು ಕೇಳಿದಳು.


೪೪೬

ಅದರಿಂದ ಆತನಿಗೆ ಆಶ್ಚರ್ಯವಾಯಿತು.
"ಅದ್ನೇಳಾಕೇನದು ಚಿತ್ರಾಂಗದ ನಾಟಕದ ಮಾತಂದ್ಕೊಂಡೀ ಏನೇ ವಿಜ್ಜೀ... ಬಾಯಿ ಮುಚ್ಕೊಂಡು ಕೂಕ ಬಾರೇ" ಎಂದು ಫಕೀರಮ್ಮ ಸಿಡುಕಿದಳು.
"ಹೇಳ್ಲಿ ಬಿಡ್ರೀ..." ಎಂದ ಶಾಮ.
ವಿಜಯ ಕಣ್ಣು ಮುಚ್ಚಿಕೊಂಡು ಪೂಷಾಯಶಸ್ಸು... ಎಂದು ರಾಗ ಬದ್ಧವಾಗಿ ಶುರುಮಾಡಿ ಎಲ್ಲೂ ತಡವರಿಸದೆ ಕಲಾ ಸೋಮಸ್ಯೆ ಷೋಡಶ ಎಂಬಲ್ಲಿಗೆ ಮುಗಿಸಿದಳು.
ತಾನು ಚಿಕ್ಕಂದಿನಲ್ಲಿ ಈ ಶ್ಲೋಕ ಬಾಯಿ ಪಾಠ ಮಾಡಲು ತೆಗೆದುಕೊಂಡಿದ್ದು ವಾರಕ್ಕಿಂತಲೂ ಹೆಚ್ಚುಸಮಯವನ್ನು. ಆದರೆ ಈ ತರುಣಿ ಕಿವಿಯಲ್ಲಿ ಕೇಳಿದೊಡನೆ ನಾಲಿಗೆಗೆ ತಂದುಕೊಂಡು ಒಂದೇ ಏಟಿಗೆ ಹೇಳಿಬಿಟ್ಟಳಲ್ಲ! ಅದೂ ಅಲ್ಲದೆ ಶೂದ್ರ ಕುಲದಲ್ಲಿ ಹುಟ್ಟಿದವಳು..!
ಆಶ್ಚರ್ಯ ಮತ್ತು ಸಂತೋಷ ತಡೆಯಲಾಗದೆ ಶಾಮಣ್ಣ ಎದ್ದುಹೋಗಿ ವಿಜಯಳ ತಲೆಯನ್ನು ಮೆಚ್ಚುಗೆಯಿಂದ ನೇವರಿಸಿ "ಅದ್ಭುತ ಪ್ರತಿಭಾವಂತೆ ಕಣಮ್ಮಾ" ಎಂದು ಉದ್ಗರಿಸಿ ಕೂತನು.
ಅದರಿಂದ ವಿಜಯಳ ಮುಖದಲ್ಲಿ ಯಾವುದೇ ಭಾವನೆ ಮೂಡಲಿಲ್ಲ. ಬದಲಿಗೆ -
"ಇದೇ ಚಂದ್ರನ ಮಂತ್ರ ಶಾಸ್ತ್ರದಲ್ಲಿರೋ ಶ್ಲೋಕ ಹೇಳ್ಳೇನ್ರಿ" ಎಂದು ಕೇಳಿದಳು.
"ವಿಜ್ಜಿ ನಿನ್ನ ತಲೆ ಹರಟೆ ಜಾಸ್ತಿ ಆತು..." ಬಾಯಿ ಮುಚ್ಚಿಕೊಂಡು ಬಂದು ಕೂಡ್ತೀಯೋ ಇಲ್ಲವೋ" ಎಂದು ಫಕೀರಮ್ಮ ಗದರಿಸಿದಳು.
"ಹೇಳಮ್ಮಾ.. ಇದ್ಕಿಂತ ಸಂತೋಷ ಯಾವ್ದಿದೆ" ಎಂದು ಶಾಮಣ್ಣ ಕುತೋಹಲದಿಂದ ಹೇಳಿದ.
ವಿಜಯ ಮತ್ತೆ ಕಣ್ಣು ಮುಚ್ಚಿಕೊಂಡು -
"ಅಮೃತಾ ಮಾನದಾ ಪೂಷಾ ಪುಷ್ಟಿಸುತ್ತಿಷ್ಟೀರತಿ ರ್ಧೃರ್ತಿಃ
ಶಶಿನೀ ಚಂದ್ರಿಕಾ ಕಾಂತ ಜ್ಯ್ರೋತ್ಸ್ನಾ ಶ್ರೀಃ ಪ್ರೀತಿ ರಂಗದಾ
ಪೂರ್‍ಣಾ ಪುರ್‍ಣಾಮೃತಾ ಕಾಮದಾಯಿನ್ಯಶೃಶಿನಃ ಕಲಾಃ... ಇದ್ರ ಅರ್ಥ ವಿವರಣೆ ಮಾಡಿ ಹೇಳಲೇನ್ರಿ ಶಾಸ್ತ್ರಿಗಳೇ" ಎಂದು ಮರು ಪ್ರಶ್ನೆ ಹಾಕಿದಳು.
ಮೊಮ್ಮಗಳ ಈ ವರ್ತನೆಯಿಂದ ಬೇಸರಗೊಂಡ ಫಕೀರಮ್ಮ ಆಕೆಯ ಕಿವಿ ಹಿಡಿದು ಎಳೆದುಕೊಂಡು ಬಂದು ಪಕ್ಕದಲ್ಲಿ ಕೂಡ್ರಿಸಿಕೊಂಡಳು. ಆ ಹುಡುಗಿ ಸ್ಥಿತ ಪ್ರಜ್ಞೆಯಂತೆ ಕೂತು ತನ್ನ ಬೊಗಸೆ ಕಣ್ಣುಗಳಿಂದ ಪಿಳಿಪಿಳಿ ನೋಡ ತೊಡಗಿತು.
ಶಾಮಣ್ಣನಿಗೆ ಆಶ್ಚರ್ಯದ ಜೊತೆ ನಾಚಿಕೆಯೂ ಆಯಿತು. ಸಂತೋಷವನ್ನು, ಮೆಚ್ಚುಗೆಯನ್ನು ಯಾವ ಪರಿವೇಷದ ಸಹಾಯದಿಂದ ವ್ಯಕ್ತಪಡಿಸಬೇಕೆಂಬುದೇ ಒಂದು ಕ್ಷಣ ತಿಳಿಯಲಿಲ್ಲ. ಬೆವೆತ, ಒರೆಸಿಕೊಂಡ.
"ವಿಜಯಾ.. ನೀನು ಸಾಮಾನ್ಯಳಲ್ಲ.. ಅದ್ಭುತ ಪ್ರತಿಭಾವಂತೆ... ದೇವರು ನಿನ್ಗೆ ಒಳ್ಳೆಯದು ಮಾಡ್ಲಿ... ಅದಿರ್‍ಲಿ... ಏನೋದ್ತಿದೀಯಾ?" ಎಂದು ಕೇಳಿದ.
"ಸಂಸ್ಕೃತದಲ್ಲಿ ಬಿ.ಎ., ಮಾಡ್ತಿದೀನಿ ಶಾಸ್ತ್ರಿಗಳೇ" ಎಮ್ದು ಯಾವ ಬಿಂಕು ಬಿನ್ನಾಣವಿಲ್ಲದೆ ನುಡಿಯಿತು.
ಶಾಮಣ್ಣ ತನ್ನ ತಾತನವರನ್ನು ನೆನಪು ಮಾಡಿಕೊಂಡು ನಿಟ್ಟುಸಿರುಬಿಟ್ಟ. ಮನು ಮಹಾಶಯನೇನಾದರು ಎದುರಿಗೆ ಬಂದರೆ ಎರಡು ಸಾರಿ ಜಾಡಿಸಬೇಕೆನ್ನುವಷ್ಟು ಸಿಟ್ಟು ಬಂತು.
ಈ ಓಣಿ ಈ ಊರು ತಾನು ಸಂಸಾರ ಸಮೇತ ವಾಸಿಸಲಿಕ್ಕೆ ಯೋಗ್ಯ ಸ್ಥಳವೆಂದು ನಿರ್ಧರಿಸಿದ.


೪೪೭

"ಯತ್ತೈ ಬ್ಯಾಂಕೀಕಿ ಪೋಡಾನಿಕಿ ಪೊದ್ದವುತುಂದಿ... ಇಲ್ಲುನಿ ಚ್ಸೇಕಿ ಪೋದಾಮು" ಎಂದು ಓಬಲೇಶ ಸಮಯ ಪ್ರಜ್ಞೆಯಿಂದ ಎಚ್ಚರಿಸಿದ.
ವಿಜಯಳ ರೂಪ ಮತ್ತು ಬುದ್ಧಿಮತ್ತೆ ತುಂಬಿಕೊಂಡು ಬಾಗಿಲು ದಾಟಿದಾದ ಮೇಲೆ ಆಕೆ ಕಡೆ ಅಭಿಮಾನದಿಂದ ನೋಡಿದ.
ಫಕೀರಮ್ಮ ತಾನು ಕಳೆದು ವರ್ಷವಷ್ಟೆ ಕಟ್ಟಿಸಿರುವ ಮನೆ ಅಲ್ಲಿಗೆ ಕೇವಲ ನೂರು ಅಡಿ ದೂರದಲ್ಲಿತ್ತು. ಮನೆ ಬಗ್ಗೆ ಶಾಮನಿಗೆ ಯಾವ ಕುತೋಹಲವೂ ಉಳಿದಿರಲಿಲ್ಲ. ಅವನಿಗೆ ಕುತೋಹಲವಿದ್ದುದು ವಿಜಯಳ ಬಗ್ಗೆ... ಈ ವಯಸ್ಸಿನಲ್ಲಿ ಅದ್ಭುತ ಸೂಕ್ಷ್ಮಗ್ರಾಹಿಯಾಗಿರುವ ಅವಳು ಅದ್ಭುತ ಹುಡುಗಿ ಎಂದುಕೊಂಡ.

ಆಕೆಯ ನೆನಪಿನಲ್ಲಿ ಮನೆಯ ಮುಂದೆ ಕೊಟ್ಟೂರಿನ ತನ್ನ ಮನೆಯಷ್ಟು ಕಿಮ್ಮತ್ತಿನ ಬಾಗಿಲು, ನಿಷ್ಣಾತ ಕಾಷ್ಠ ಶಿಲ್ಪಿ ತಯಾರಿಸಿದ ಅದರ ಮೇಲೆ ಪರಮೇಶ್ವರ ಕಾಮ ದಹನ ಮಾಅಡಿದ ಚಿತ್ರಣಾತ್ಮಕ ವಿವರವಿತ್ತು. ಬಾಗಿಲ ಪಲಕಗಳ ಒಂದುಕಡೆ ಪದ್ಮಾಸನೆಯಾದ ಲಕ್ಷ್ಮಿದೇವಿಯ ಚಿತ್ರವಿದ್ದರೆ ಇನ್ನೊಂದು ಪಲಕದ ಮೇಲೆ ಮಹಿಷಾಸುರನನ್ನು ಮೆಟ್ಟಿನಿಂತಿರುವ ಚಾಮುಂಡಿಯ ಚಿತ್ರ ಇರುವುದು.
ಫಕೀರಮ್ಮ ತನ್ನ ಬೊಜ್ಜು ಹೊಟ್ಟೆಯ ‘ಬಾಳೆ’ಯಿಂದ ಬೀಗದ ಗೊಂಚಲು ತೆಗೆಯುವಾಗ ಶಾಮ ಆಕೆಯ ಕಿಬ್ಬೊಟ್ಟೆಯನ್ನೂ; ಸುರುಳಿ ಸುತ್ತಿ ಆತ್ಮಲಿಂಗದಂತಿದ್ದ ಹೊಕ್ಕಳನ್ನೂ ನೋಡಿದ. ಮೂರು ನಾಲ್ಕು ನಮೂನಿಯ ಉಂಗುರಗಳಿದ್ದ ನೀಳ ಬೆರಳುಗಳಲ್ಲಿ ಛಾವಿ ಹಿಡಿದು ಆಕೆ ಅದನ್ನು ಪತ್ತಾಡೊಳಗಡೆ ತೂರಿಸಿ ತಿರುವಿದ್ದು ಅರ್ಥಗರ್ಭಿತವಾಗಿ ಕಂಡಿತು.

ತೆರೆದ ಬಾಗಿಲೊಳಗಡೆ ಮೊದಲಿಗೆ ಪ್ರವೇಶಿಸಿದ ಓಬಳೇಶ ಲೈಟು ಹಾಕಿದನಲ್ಲದೆ ಕಿಟಕಿಗಳನ್ನೂ ತೆರೆದ.

ಅಡುಗೆ ಮನೆಯನ್ನು ಕಿಚನ್‌ರೂಂ ಎಂದೂ; ಬಚ್ಚಲ ಕೋಣೆಯನ್ನು ಬಾತ್ರೂಮ್ ಎಂದೂ, ದೇವರ ಕೋಣೆಯನ್ನು ದೇವರ ಕೋಣೆ ಎಂದೂ ವಿವರಿಸಿದ. ಈ ರೂಮನ್ನಾದ್ರು ಬೆಡ್ರೂಮಾದ್ರು ಮಾಡ್ಕೋ ಬೌದು, ಈ ರೂಮನ್ನಾದ್ರು ಬೆಡ್ರೂಮಾದ್ರು ಮಾಡ್ಕೋ ಬೌದು ಎಂದ. ಒಂದೊಂದು ರೂಮಿಗೂ ಎರಡೆರಡು ಕಪಾಟುಗಳಿದ್ದವು. ಐವತ್ತು ಮಂದಿ ಸಲೀಸಾಗಿ ಕೂಡ್ರಬಹುದಾದಷ್ಟು ವಿಶಾಲವಾದ ಹಝಾರ ಬೇರೆ... ಮನೆ ಹೆಣ್ಣು ಮಕ್ಕಳು ಸಣ್ಣಪುಟ್ಟ ಕೆಲಸಗಳಿಗೆ ಹೊರಗೆ ಹೋಗುವಂತಿಲ್ಲ... ಎರಡು ಮೂರು ಕಡೆ ಕೊಳಾಯಿ, ಕಕ್ಕಸು ಕೋಣೆ, ಅಲ್ಲೊಂದು ಇಲ್ಲೊಂದು ಕಡೆ ಇರುವ ಪುಟ್ಟ ತೆಂಗಿನ ಗಿಡಗಳ ಬುಡಕ್ಕೆ ಬಟ್ಟೆ ತೊಳೆದ ನೀರು ಹರಿದು ಹೋಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಬೆಳೆದು ನೆರಳು ಕೊಡಲಿರುವ ಕಣಗಿಲೆ, ದಾಸವಾಳ ಗಿಡಗಳಡಿ ಆರಾಮ ಛೇರಿನ ಮೇಲೆ ಒರಗಿಕೊಂಡು ಪುರಾಣ ಪಾರಾಯಣ ಮಾಡಬಹುದು. ಈ ಕಡೆ ನಿಂತರೆ ಆ ಕಡೆಯಲ್ಲಿರುವ ಮನೆಯವರು ಕಾಣುತ್ತಾರೆ. ಆ ಕಡೆಯಲ್ಲಿ ನಿಂತರೆ ಈ ಕಡೆಯಲ್ಲಿರುವ ಮನೆಯವರು ಕಾಣುತ್ತಾರೆ. ಆದರೆ ಆ ಕಡೆ ಈ ಕಡೆಯಲ್ಲಿರುವ ಮನೆಯವರಿಗೆ ಈ ಮನೆಯವರು ಮಾತ್ರ ಕಾಣುವುದಿಲ್ಲ... ಫಕೀರಮ್ಮನ ಅಳಿಯ ಚಲುವಯ್ಯನವರು ಮಾಡಿಕೊಟ್ಟ ಬ್ಲೂಪ್ರಿಂಟ್ ಆಧಾರದ ಮೇಲೆ ಕಟ್ಟಿರುವ ಮನೆ, ಚಲುವಯ್ಯ ಅನೇಕ ಮಂತ್ರಿಗಳ ಮನೆಗಳ ಆರ್ಕಿಟೆಕ್ಟು. ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲನಿಯ ಬಹುಪಾಲು ಮನೆಗಳ ವಾಸ್ತುಶಿಲ್ಪಿ, ಬೆಂಗಳೂರಿನಿಂದ ವರ್ಷಕ್ಕೆರಡು ಮೂರು ಸಾರಿ ಇಲ್ಲಿಗೆ ಬಂದು ತಮ್ಮ ವಿಜಯಾಳ


೪೪೮

ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ. ಪಾಪ! ತಾಯಿಯಿಲ್ಲದ ಹುಡುಗಿಗೆ ಆಕೆಯ ಹೆಣ್ಣಜ್ಜಿಯಾದ ಫಕೀರಮ್ಮನೇ ದಿಕ್ಕು , ಮಗಳಿಗೆಂದು ಚಲುವಯ್ಯನವರೇ ಕಟ್ಟಿಸಿಕೊಟ್ಟಿರುವ ಮನೆ ಇದು.
ಇದೇ ಮನೆಯನ್ನು ಪಾರ್ಟಿ ಆಫೀಸು ಮಾಡಿಕೊಳ್ಳಬೇಕೆಂದು ರಾಜಕಾರನಿಗಳಾದ ಗುಲಾಂ ನಬಿ, ದಯಾನಂದ ಸಾಗರ್ ಮೊದಲಾದವರು ಪೈಪೋಟಿಗಿಳಿದ್ದಿದ್ದುಂಟು. ಜಮಾತೆ ಇಸ್ಲಾಮಿಯ ವಲಯ ಕಛೇರಿಯನ್ನಾಗಿ ಮಾಡಿಕೊಳ್ಳಬೇಕೆಂದು ಇಸ್ಮಾಯಿಲನೂ, ಆರ್.ಎಸ್.ಎಸ್.ನ ವಲಯ ಕಛೇರಿಯನ್ನಾಗಿ ಮಾಡಿಕೊಳ್ಳಬೇಕೆಂದು ಹೆಬ್ರಿಯೂ ಪ್ರಯತ್ನಿಸಿದ್ದುಂಟು. ಪ್ರಸಿದ್ಧ ಆರೆಂಪಿ ಸರ್ಜನ್ ರಾಮಣ್ಣನವರಿಗೂ ಕೊಡಲಿಕ್ಕಾಗಲಿಲ್ಲವೆಂದ ಮೇಲೆ ಪಾರ್ಟಿ ಆಫೀಸಿಗಾಗಲೀ, ಸಂಘಟನೆಯ ಕಛೇರಿಗಳಿಗಾಗಲೀ ಕೊಡಲಿಕ್ಕಾಗುವುದೇ? ಕಮ್ಯುನಿಸ್ಟ್ ಪಾರ್ಟಿ ಕಛೇರಿ ಮಾಡ್ಲಿಕ್ಕೆ ಕಾಮ್ರೇಡ್ ರಾಮಚಂದ್ರರಾವ್ ಕೇಳಿದ್ರು ಅಂದ ಮೇಲೆ ನೀವೇ ಲೆಕ್ಕ ಹಾಕಿ... ಇಲ್ಲಿಗೆ ಒಂದು ಹರಿದಾರಿ ದೂರದಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ವಿಜಯನಗರ ಉಕ್ಕಿನ ಕಾರ್ಖಾನೆ ಮಾಡಬೇಕೆಂದು ನಿರ್ಧರಿಸಿ ಒಂದೆರಡು ದಶಕಗಳ ಹಿಂದೆ ಶಿಲಾನ್ಯಾಸ ಮಾಡಿರೋದ್ರಿಂದಾಗಿಯೇ ಎಡಪಂಥದೋರು, ಬಲಪಂಥದೋರು, ಒಳ್ಳೆಯೋರು, ಕೆಟ್ಟೋರು ಎಲ್ಲಾರು ಇಲ್ಲಿಗೆ ಮುಗೆ ಬಿದ್ದಿರೋದು... ಈ ಮನೆಯ ವಾಸ್ತು ಇಟ್ಟುಕೊಟ್ಟೋರು ನಿಮ್ಮ ತಾತಂದಿರಾಗಿರೋದ್ರಿಂದಾಗಿಯೂ ಇದರಲ್ಲಿ ವಾಸೊಸಲಿಕ್ಕೆ ಎಲ್ಲಾರು ಒಂದಲ್ಲಾ ಒಂದು ಪ್ರಯತ್ನ ಮಾಡ್ತಾನೆ ಇದ್ದಾರೆ.
ಈ ಮನೆಯೊಂದೇ ಅಲ್ಲ... ಇದರ ಜಾಗ ಕೂಡ ಅದ್ಭುತವಾದದ್ದು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹೆಗ್ಗೆರೆ ಗ್ರಾಮದಿಂದ ರಾಯನೋರ್ವ ಈ ಊರಿಗೆ ಬ್ರೆಡ್ಡಿನ ಸಂಸ್ಕೃತಿಯನ್ನು ಪರಿಚಯಿಸಿದ್ದೂ ಜಾಗದಿಂದಲೇ ...ಹೀಗೆ ಹೇಳ್ತಾಹೋದ್ರೆ ಹೊತ್ತು ಹೋಗಿದ್ದೇ ತಿಳಿಯುವುದಿಲ್ಲ.
ಇದಿಷ್ಟು ಓಬಳೇಶನ ಮಾತಿನ ಗ್ರಾಂಥಿಕ ಭಾಷಾ ರೂಪ.
"ಸೋಮಿ, ನಿಮ್ಮ ತಾತನವರೆ ಕಣಪ್ಪ ನಮ್ ಚೆಲುವ್ನೀಗೆ ಒಂದು ದಾರಿ ತೋರಿಸಿಕೊಟ್ಟೋರು. ಅವನೆಷ್ಟಿದ್ರೂ ಮೂರು ಹೆಣುಮಕ್ಳುಹುಟ್ಟಿದ್ಮ್ಯಾಕ ಹುಟ್ದೋನು... ಜನ್ಮದಾರಭ್ಯ ಕುಜ ದೋಷದಿಂದ ಬಳಲ್ತಾ ಇದ್ದ... ನಿಮ್ಮ ತಾತ್ನೋರು ಯಾವ ಗಳಿಗೇಲಿ ಅಂತ್ರ ಮಂತ್ರಿಸಿ ಕಟ್ಟಿದ್ರೋ ಏನೋ... ಅವತ್ನಿಂದ ಛೇಂಜಾತು ನೋಡ್ರಿ ನಮ್ಮ ಚಲುವ್ನ ನಸೀಬು... ಬಂಗಾರದ್ತಟ್ಯಾಗ ಉಂಬುವಷ್ಟು ಆ ದೇವ್ರು ಸಿರಿವಂತಿಗೆ ಕೊಟ್ಟಾನ. ಅದೆಲ್ಲ ಪರಮೇಶ್ವರ ಶಾಸ್ತ್ರಿಗಳ ಆಶೀರ್ವಾದ ಕಣ್ರಪ್ಪಾ... ಹೆಂಗೋ ದೇವ್ರು ಮೆಚ್ಯಾನ... ನೀವಿಲ್ದಿದ್ರೆ ಹೆಂಗೋ ನಮ್ಮನ್ಯಾಗ ಪೂಜೆ ಪುನ್ಸ್ಕಾರ ಸುಸೂತ್ರವಾಗಿ ನಡೀತಾವ... ಇರಾಮ ಸಿಕ್‌ಸಿಕ್ಕಾಗ ನನ್ ಮಮ್ಮಕ್ಳೀಗೆ ಸ್ಲೋಕಾಭ್ಯಾಸ ಮಾಡಿಸ್ರಿ... ನಿಮ್ಗೆ ತಿಳ್ದಷ್ಟು ಬಾಡಿಗೆ ಕೊಡ್ರಿ... ನಾನೇನು ಅಡುವಾನ್ಸು, ಗಿಡುವಾನ್ಸು ಕೇಳೋಳಲ್ಲ... ಆ ದೇವ್ರು ಬೇಕಾದಂಗ ಕೊಟ್ತು ಮರ್‍ತಾನ... ಒಳ್ಳೆ ಟೇಮು ನೋಡಿ ಅಮ್ಮಾವರ್‍ನ ಕರ್ಕೊಂಡು ಬಂದು ಬಿಡ್ರಿ... ಮನೆ ತೊಳ್ಸೀ..ಬಳ್ಸೀ ರೆಡಿ ಮಾಡಿಟ್ಟಿರ್‍ತೀನಿ..." ಎಂದು ಹೇಳಿದ ಫಕೀರಮ್ಮನ ಅಂತಃಕರಣಕ್ಕೆ ಶಾಮ ಶರಣಾಗಿ ಹೋದ.
"ಆಯ್ತಮ್ಮಾ ನಿಮಿಷ್ಟದಂತಾಗ್ಲಿ... ನಾಡಿದ್ದು ದಿನ ಪ್ರಶಸ್ತವಾಗಿದೆ. ಸಂಸಾರ ಸಮೇತ ಬಂದು


೪೪೯
ಬಿಡ್ತೀವಿ..." ಎಂದ ಶಾಮಣ್ಣ. ಓಬಳೇಶನೊಂದಿಗೆ ಅಲ್ಲಿಂದ ಬೀಳ್ಕೊಂಡ.
*
*
*
ಅತ್ತೆಯಿಂದ ಸೊಸೆ ಅಗಲೋದು ಸೊಸೆಯಿಂದ ಅತ್ತೆ ಅಗಲೋದು ಎಷ್ಜ್ಟೊಂದು ಹೃದಯ ಸ್ಪರ್ಶಿಯಾಗಿರುತ್ತದೆಂಬುದಕ್ಕೆ ಹೊರಟುನಿಂತ ವರಲಕ್ಷ್ಮಿ ಅತ್ತೆಯವರಿಂದ ಅಲುಮೇಲಮ್ಮನ ಪಾದಕ್ಕೆ ಬಿದ್ದು "ಆಶೀರ್ವಾದ ಮಾಡತ್ತೆ..." ಎಂದು ಕೇಳಿದ್ದೇ ಸಾಕ್ಷಿ. ಅದಕ್ಕೂ ಮೊದಲು ಅವರೀರ್ವರ ನಡುವೆ ಭೀಕರ ವಾಗ್ಗದನವಾಗಿತ್ತು.
ತನ್ನನ್ನು ಒಂಟಿ ಮಾಡಿ ಮಗ ತನ್ನ ಹೆಂಡತಿಯನ್ನು ತಾನು ಕರೆದುಕೊಂಡು ಹೋಗಲಿದ್ದಾನೆ ಎಂಬ ಸುದ್ದಿ ತಿಳಿದ ಕ್ಷಣದಿಂದ ಅಲುಮೇಲಮ್ಮ ಕರುಳನ್ನು ಬಾಯಿಗೆ ತಂದುಕೊಂಡು ಹೊಯ್ದಾಡಿದ್ದರು.
ಪೂಜ್ಯ ಶಾಸ್ತ್ರಿಗಳ ಫೋಟೊದೆದುರಿಗೆ ನಿಂತುಕೊಂಡು - "ನೀವು ನನ್ನನ್ನು ಅನಾಥೆಯನ್ನಾಗಿ ಮಾಡಿ ಹೋಗಿ ಬಿಟ್ರಿ ಮಾವನೋರೆ... ನಿಮ್ ಜೊತೆ ನಾನೂ ಹೊರಟು ಬಂದಿದ್ರೆ ಈ ನರಕ ಅನುಭೋಸ ಬೇಕಾಗ್ತಿರ್‍ಲಿಲ್ಲ. ನಾನೇನು ತಪ್ಪು ಮಾಡ್ತಿದ್ದೀನೀಂತ ಈ ನಿಮ್ಮ ಮೊಮ್ಮಗ ನನ್ನನ್ನಿಲ್ಲಿ ಒಂಟಿಯಾಗಿ ಬಿಟ್ಟು ತನ್ನ ಹೆಂಡತಿಯನ್ನು ತಾನು ಕರ್‍ಕೊಂಡು ಹೋಗ್ಲಿಕ್ಕೆ ಸಜ್ಜಾಗಿದಾನೆ? ಎಂಥಾ ಸೊಸೇನ ತಂದು ಕೂರಿಸಿದ್ದೀರಿ ನನ್ ನರೆತಿರೋ ತಲೆ ಮೇಲೆ... ಆಕೆ ಬಂದದ್ದೇ ಬಂದದ್ದು ಮನೆ ರಣರಂಗ ಆಗಿಬಿಟ್ತು. ಮಗನ್ನೂ ಸೊಸೆಯನ್ನೂ ಅವರ ಪಾಡಿಗೆ ಅವರ್‍ನ ಬಿಟ್ಟು ದೂರ ಹೊರಟು ಹೋಗೋಣಾಂದ್ರೆ ನನ್ಗೆ ನನ್ನೋರು ತನ್ನೋರ್ರೆಂಭೋರು ಯಾರಿದ್ದಾರೇಳ್ರಿ..." ಎಂದು ಮುಂತಾಗಿ ಏಕಪ್ರಕಾರವಾಗಿ ಮಾಡುತ್ತಿದ್ದ ಧಾಳಿಯನ್ನು ಹೆಂಡತಿ ವರಲಕ್ಷ್ಮಿಯೂ ಸಮರ್ಥಳಾಗೇ ಎದುರಿಸಿದಳು.
ಓಣಿಯವರು ಬಂದು ಅವರೀರ್ವರ ನಡುವೆ ರಾಜಿ ಕುದುರಿಸಲು ಕೆಲವು ಸೂತ್ರಗಳನ್ನು ಮಂಡಿಸಿದರಾದರೂ ಅವು ಇರುಪಕ್ಷಗಳಿಂದ ತಿರಸ್ಕೃತವಾದವು. ತನ್ನ ಹೆಂಡತಿಯನ್ನು ತಾನು ಕರೆದುಕೊಂಡು ಹೋಗದೆ ಬೇರೆ ದಾರಿಯೇ ಉಳಿಯಲಿಲ್ಲ ಶಾಮನಿಗೆ.
ಒಂಟೆತ್ತಿನ ಬಂಡಿಯ ನಂಜುಂಡಿ ಲಗ್ಗೇಜನ್ನೆಲ್ಲ ಹೇರಿಕೊಂಡು ಬಸ್‌ಸ್ಟಾಂಡ್ ಕಡೆ ಹೋಗಿದ್ದಾನೆ. "ಆಗಾಗ್ಗೆ ಬಂದು ಮುದುಕಿ ಯೋಗಕ್ಷೇಮ ನೋಡ್ಕೊಂಡು ಹೋಗ್ತಿರಪ್ಪ... ಹೆತ್ತ ತಾಯಿ ಎಷ್ಟು ಕೊಟ್ರು ಸಿಗೋದಿಲ್ಲವೆಂದು ಹೆತ್ತೇಳು ಮಕ್ಕಳಿಂದಲೂ ತಿರಸ್ಕೃತಗೊಂಡಿರುವ ವೃದ್ಧೆ ಗಂಗವ್ವ ಹೇಳಿದಾದ ಮೇಲೆ
ತಾನೇನು ಕಡ್ಮೆ ಅಂತ ಬಂದ ಅಂಬಾರಿ ಸುಶೀಲವ್ವ -
"ವರಲಕ್ಷ್ಮಿ ಬಂಗಾರದಂಥ ಹುಡುಗಿಯಪ್ಪಾ... ತಗ್ಗಿಸಿದ ತಲೇನ ಮೇಲೆತ್ತೋದಿಲ್ಲ... ಈಗಿನ ಕಾಲದ ಹುಡುಗಿಯರಂತೆ ಚಮಕ್ ಚಮಕ್ಕಂತ ಅಡ್ಡಾಡೊದಿಲ್ಲ ತಾನಾಯ್ತು ತನ್ ಬಾಳ್ವೆಯಾತು ಅನ್ನಂಗಿರ್‍ತಾಳೆ... ಇಂಥ ಪುರಾಣ ಕಾಲದ ಹುಡುಗೀನ ಮದುವೆಯಾಗಿರೋ ನೀನೇ ಪುಣ್ಯವಂತ... ಹೆಂಡ್ತಿ ಮಾತ್ನ ಮೀರಬ್ಯಾಡ... ಆಕೇ ಮನಸೀಗೆ ನೋವಾಗೋ ಹಂಗ ನಡಕೋ ಬೇಡ... ಮನೆ ಹೆಂಡತಿ ಉಸ್ರು ಬಿಟ್ರೆ ಒಳ್ಳೆಯದಾಗೊಲ್ಲ..." ಎಂದು ಮುಂತಾಗಿ ಸಾಂಸಾರಿಕ ನೀತಿ ಸಂಹಿತೆಯನ್ನು ಮಂಡಿಸಿದಳು.
ಏನು ತಿಳಿಯಿತೋ ಏನೋ ವರಲಕ್ಷ್ಮಿ ಕಣ್ಣಿರಿನಿಂದ ಮುಖವನ್ನು ಒದ್ದೆ ಮಾಡ್ಕೊಂಡು ನಿಂತಿದ್ದ ತನ್ನತ್ತೆಯ ಬಳಿಗೆ ದುಡುದುಡನೆ ಹೋದವಳೆ ಕೊಸರಿ ದೂರಸರಿಯಲು ಸಾಧ್ಯವಾಗದಂತೆ ಆಕೆಯ


೪೫೦

ಪಾದವನು ಗಟ್ಟಿಯಾಗಿ ಹಿಡಿದುಕೊಂಡು -
"ಅಷ್ಟಪುತ್ರ ಸೌಭಾಗ್ಯವತೀರಸ್ತೂಂತ ಆಶೀರ್ವಾದ ಮಾಡ್ರಿ ಅತ್ತೆಮಾಽಽ" ಎಂದು ಕೇಳಿಯೇ ಬಿಟ್ಟಳು.
ಸೊಸೆ ವರ್ತನೆಯಿಂದ ಅತ್ತೆಯ ಹೃದಯ ಜಲಜಲ ಕರಗಿ ಹೋಯಿತು. ಆ ಸಂತೋಷಕ್ಕೂ ಅಳುತ್ತ ಆಶೀರ್ವಾದ ಮಾಡಿದಳಲ್ಲದೆ ರೆಟ್ಟೆ ಹಿಡಿದು ಮೇಲಕ್ಕೆತ್ತಿ ಗಾಢವಾಗಿ ಅಪ್ಪಿಕೊಂಡು... ಅತ್ತೆಯ ಹುದಯಪರಿವರ್ತನೆಗೆ ಬೆರಗಾಗಿ ಸೊಸೆಯೂ ಭಾವ ಪರವಶಳಾದಳು... ಆ ಕ್ಷಣದಿಂದ ಅವರಿಬ್ಬರು ಅಂತಃಕರಣದ ಎರಡು ನಮೂನೆಗಳಾದರು. ನೋಡಿದವರೆಲ್ಲರೂ ಗದ್ಗದಿರಾದರು.
ಅತ್ತೆ ಸೊಸೆಯಂದಿರಿದ್ದರೆ ಅಲುಮೇಲಮ್ಮ ವರಲಕ್ಷ್ಮಿಯರಂತಿರಬೇಕು ಎಂಬಂತೆ.
"ಅತ್ತೆಮ್ಮಾ ನೀವೊಬ್ರೆ ಹೆಂಗಿರ್‍ತೀರಾ? ... ನಂಗೆ ಭಯವಾಗ್ತದೆ ನಾನು ಹೋಗೋದಿಲ್ಲ ನಿಮ್ ಸೇವೆ ಮಾಡ್ಕೊಂಡಿಲ್ಲೇ ಇರ್‍ತೀನಿ ಅತ್ತೆಮ್ಮಾ" ವರಲಕ್ಷ್ಮಿ ಪ್ಲೇಟು ಬದಲಾಯಿಸಿ ಎಲ್ಲರನ್ನೂ ಮುಖ್ಯವಾಗಿ ಗಂಡನನ್ನು ಅಚ್ಚರಿಗೀಡು ಮಾಡಿದಳು.
ಅದಕ್ಕಿದ್ದು ಅಲುಮೆಲಮ್ಮ ಬಾಯಿ ದೊಡ್ಡದು ಮಾಡಿ ನಗೆಯಾಡುತ್ತ -
"ದೀಪ ನುಂಗೋ ನನ್ಗೆ ದೀವಟಿಗೆ ನುಂಗೋ ಸೊಸೆಯಾಗಿರೋ ನೀನೆ ಹೇಗಾಡಿದ್ರೆ ಹೇಗಮ್ಮಾ... ನೀನು ನಿನ್ ಗಂಡನ್ಜೊತೆ ಒಂದು ಕಡೆ ನೆಮ್ಮದಿಯಿಂದ ಜೀವಿಸಬೇಕೆಂದಾಗಬೇಕೆಂದೇ ನಾನೀ ಹಂಚಿಕೆ ಹೂಡಿದ್ದು... ನಿನ್ನಂತೆ ನಾನೇನು ಆ ಅಂಜುಪುಕ್ಕನ ಹೆಂಡತಿಯಾಗಿದ್ದೆ ಅಂತ ತಿಳ್ಕೊಂಡಿ ಏನು? ನಾನು ಮಿಲಿಟರಿ ಆಫೀಸರ ಹೆಂಡತಿಯಾಗಿದ್ದೋಳು ತಿಳಿತಾ... ನನ್ ಕಡೆ ನೀವು ಚಿಂತೆ ಮಾಡೋದು ಬೇಕಾಗಿಲ್ಲ..." ಎಂದು ಕೆಚ್ಚೆದೆಯಿಂದ ಧೈರ್ಯ ಹೇಳಿದ್ದು ಕಂಡು ಶಾಮಣ್ಣನಿಗೆ ಆಶ್ಚರ್ಯ ಮತ್ತು ಸಂತೋಷವಾಯಿತು.
ಅಲುಮೆಲಮ್ಮ ಅಷ್ಟು ದೂರದವರೆಗೆ ಹೋಗಿ ಮಗ ಸೊಸೆಯನ್ನು ಬೀಳ್ಕೊಟ್ಟಳು.
ಶಾಮಂಣ ದಂಪತಿಗಳು ಜೊತೆ ಜೊತೆಯಾಗಿ ಬಸ್‌ಸ್ತಾಂಡ್ ಕಡೆ ದಯಮಾಡಿಸುತ್ತಿರುವುದನ್ನು ಓಣಿಯ ಅಬಾಲವೃದ್ಧರಾದಿಯಾಗಿ ಎಲ್ಲರೂ ಕಣ್ತುಂಬ ನೋಡಿ ಶುಭ ಕೋರಿದರು. "ಲೋ ಮಿತ್ರ... ನಿನ್ ಬರವಣಿಗೆಗೆ ತುಸು ಹೊತ್ತು ವಿಶ್ರಾಂತಿ ಕೊಡ್ತೀಯಾ ನಮ್ಮಪ್ಪಾ... ಗಾರ್ದಭವೊಂದು ಮೂತ್ರ ವಿಸರ್ಜಿಸಿದಂತೆ ಸುಮ್ಮನೆ ಬರ್‍ಕೊಂಡು ಹೋಗ್ತಿದೀಯಲ್ಲ... ಕೆಲವು ಕಡೆ ಓದುಗರನ್ನು ರಂಜಿಸುವ ನಿಮಿತ್ತ ಸುಳ್ಳುಗಳನ್ನು ಪೋಣಿಸ್ತಿದೀಯಾಂತ ಅನ್ನಿಸ್ತಿದೆ" ಹಸ್ತ ಪ್ರತಿಯೊಳಗಿಂದ ಶಾಮಣ್ಣನ ಆತ್ಮವು ಕೂಗಿಕೊಂಡಿತು.
ಬಸ್ಸಿನಲ್ಲಿ ತಾನು ಹಿಡಿದ ಸೀಟಿನಲ್ಲಿ ಹೆಂಡತಿಯನ್ನು ಪ್ರತಿಷ್ಟಾಪಿಸಿ ಚಿಲ್ಲರೆ ವಿಷಯವಾಗಿಯೋ ಟಿಕೆಟ್
ಕೊಡಲಿಲ್ಲವೆಂದೋ, ಕೊಟ್ಟ ಟಿಕೆಟ್‌ನಲ್ಲಿ ಪಂಛ್ ಮಾಡಿಲ್ಲ ಎಂದೋ ತನಗಿರೋ ಪ್ರಪಂಚ ಜ್ಞಾನ ಅನುಮಾನಿಸ್ತಿದೀಯಾ ಎಂದೋ ಶಾಮಣ್ಣ ಕಂಡಕ್ಟರ್ ಬಳಿ ತಗಾದೆ ಶುರು ಮಾಡಿದ ಎಂದು ನಾನು ಬರೆಯುತ್ತಿದ್ದ ನಾನು ಬರೆದದ್ದನ್ನು ಅರ್ಧಕ್ಕೆ ನಿಲ್ಲಿಸಿ ದಿಗ್ಭ್ರಮೆಗೊಂಡು ಆರೊಗ್ಯ ಸುಧಾರಿಸಿ ಹೊಸತನದಿಂದ ನಳನಳಿಸುತ್ತಿರುವ ಶಾಮಣ್ಣನ ಪಾತ್ರದ ಕಡೆ ನೋಡಿದೆ.
"ನಡುವೆ ಮತ್ತೆ ಕಾಣಿಸಿಕೊಂಡು ತಕರಾರೆತ್ತಿದ್ದಕ್ಕೆ ಕೃತಜ್ಞತೆಗಳು ಶಾಮೂ... ಕೆಲವು ವಾಸ್ತವಾಂಶಗಳನ್ನು ಅನುಲಕ್ಷಿಸಿ ಕೆಲವು ಸುಳ್ಳುಗಳನ್ನು ಪೋಣಿಸದೇ ಹೋದ್ರೆ ಕಾದಂಬರಿ


೪೫೧

ಕಳೆಗಟ್ತಿದೇನೋ... ಸದರೀ ಕಾದಂಬರಿಯ ವಿವಿಧ ಅಂಗಳಗಳಲ್ಲಿ ವರ್ಣ ವಕ್ರತೆ, ಪದ ವಕ್ರತೆ ಬಳಸದೆ ಹೋದರೆ ಬರಹದಿಂದ ಧ್ವನಿ ಎಂಬುದು ಹುಟ್ಟಬಹುದೇನೋ... ‘ಕವಿ ವ್ಯಾಪಾರ ವಕ್ರತಾ’ ಎಂಬ ಕುಂತಕನ ಸಿದ್ಧಾಂತ ಬಳಸಿಕೊಂಡು ಬರೆ ಅಂತ ನೀನೇ ಹೇಳಿದ್ದು ಮರೆತು ಬಿಟ್ಟೆ ಏನು?" ಎಂದು ನನ್ನ ವಕ್ರಬುದ್ಧಿಯನ್ನು ಸಮರ್ಥಿಸಿಕೊಂಡೆನು.

ಏನೋ ಒಂದಿಷ್ಟು ಬರೆದ ಮಾತ್ರಕ್ಕೆ ಕುಂತಕನ ಮರಿಮೊಮ್ಮಗನಂತೆ ಮಾತಾಡ್ತಿದ್ದೀಯಲ್ಲೋ ಬೇಕೂಫಾ... ವಾಣಿಜ್ಯ ದೃಷ್ಟಿಯಿಂದ ನೀನು ಕೆಲವು ರಂಜನೀಯ ಅಂಶಗಳನ್ನು ಸೇರಿಸ್ತಿದೀಯಲ್ಲಾ... ಇದ್ಕೆ ನಾನು ನಿನಗೆ ಏನು ಹೇಳೋದು? ಡಾ. ಅಭಿಷೇಕ್ ಗೋಡ್ಲೆ ಬರೆದಿರೋ ಪಿಹೆಚ್ಡೀ ಪ್ರಬಂದವನ್ನಷ್ಟೇ ಆಧಾರವಾಗಿಟ್ಟುಕೊಂಡು ಕೊತ್ತಲಿಗಿಯ ಸಾಮಾಜಿಕ ವಿನ್ಯಾಸವನ್ನು ವಿಶ್ಲೇಷಿದ್ದು ಎಷ್ಟರಮಟ್ಟಿಗೆ ಸರಿ? ನೀನು ನಿನ್ನ ಬದುಕಿನ ದ್ರವ್ಯದ ಮಾಪನದಿಂದ ನೋಡುವ ಗೋಜಿಗೆ ಹೋಗಲಿಲ್ಲ. ಹೆಬ್ರಿ, ಇಸ್ಮಾಯಿಲ್ ಎಂಬಿಬ್ಬರು ಮೂಲಭೂತವಾದಿಗಳಿಗೆ ಮುಖಾಮುಖಿಯಾಗಿ ಕಾಮ್ರೇಡ್ ಪಶುಪತಿ ಎಂಬುವನು ಆ ವ್ಯವಸ್ಥೆಯೊಳಗೆ ಹುಟ್ಟಿಕೊಂಡಿದ್ದು ನಾನಲ್ಲಿಗೆ ನೌಕರಿಗೆ ಸೇರಿದ ಮೇಲೆಯೇ. ಅವನು ಹಿಂದೆಂದೋ ಆರ್.ಎ ಬ್ರಾಂಡಿನ ರಘುರಾಮನ ಪೂರ್ವಾಶ್ರಮದಲ್ಲಿದ್ದು; ಅವನಿಂದ ತರಬೇತಿ ಪಡೆದು ಬಂದಿದ್ದನಂತೆ. ನನ್ನ ಬ್ರಾಹ್ಮಣ್ಯವನ್ನೆ ಒಂದು ದೌರ್ಬಲ್ಯವೆಂದು ಭಾವಿಸಿ ಅನೇಕ ಸಂದರ್ಭಗಳಲ್ಲಿ ನನ್ನ ಮೇಲೆ ಮಾನಸಿಕವಾಗಿ ಆಕ್ರಮಣ ಮಾಡಿದ. ಅದರ ಕಡೆ ನೀನು ಕಣ್ಣು ಹೊರಳಿಸಲಿಲ್ಲ.

ಆ ಇಂಜಿನಿಯರ್ ಚಲುವಯ್ಯನ ಮಗಳು ವಿಜಯ ಸಂಸ್ಕೃತದಲ್ಲಿ ನನಗಿಂತ ಬುದ್ಧಿವಂತಳು ಎಂಬ ಅರ್ಥದಲ್ಲಿ ಬರೆದಿರುವಿ... ಕೇವಲ ಶೂದ್ರತ್ವ ಮತ್ತು ಲಿಂಗದ ಆಧಾರದ ಮೇಲೆ ನೀನು ಆಕೆ ಪರ ವಕಾಲತ್ತು ಮಾಡಿರುವಿಯಲ್ಲದೆ, ನಾನು ಶತದಡ್ಡ; ಮೂರ್ಖನೆಂಬಂತೆ ಬರೆದಿರುವಿ. ಆಕೆ ತಾನು ಹೇಳಿದ ಶ್ಲೋಕಾರ್ಥ ವಿವರಿಸಲಿಕ್ಕೆ ನೀನು ಅಡ್ಡಗಾಲು ಹಾಕಿದಿ ಅಲ್ಲವೆ? ಪ್ರೀತಿಸಿದೋನು ಕೈಹಿಡಿಯಲಾರದ ಕಾರಣಕ್ಕೆ ಸತ್ತು ಹೋದ ಸಾವಿತ್ರಿಯ ಮಗಳು ಎಂಬ ವಿವರ ನಿನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಗುಂಡೂರವ್‌ರವರ ಮನೆಗೆ ಬ್ಲೂಪ್ರಿಂಟ್ ಒದಗಿಸಿದೋನು ತಾನೆಂಬ ಕಾರಣದಿಂದಾಗಿ ಆ ಇಂಜಿನೀಯರ್ ಚಲುವಯ್ಯ ವಿಜಯಾ ತನ್ನ ಮಗಳು ಅಂತ ಸಾರ್ವಜನಿಕವಾಗಿ ಹೇಳಿಕೊಳ್ಳೊದಿಲ್ಲ. ಬೆಂಗಳೂರಲ್ಲಿ ರಘುರಾಮನ ಮನೆಯ ಹಿಂಭಾಗದ ರಸ್ತೆಯ ಕನ್ನೀರವ್ವನ ಬಾವಿ ಆಕಾರದ ಮನೆಯೇ ಆತನದು. ಅವನೇ ಮುಂದೊಂದಿನ ಆ ರಘುರಾಮನ ಮಾತು ಕಟ್ಟಿಕೊಂಡು ನನ್ನನ್ನು ತನ್ನ ಮನೆಯಿಂದ ಬಿಡಿಸಿದ್ದು. ಇಂಥ ಎಷ್ಟೋ ವಿವರಗಳು ನಿನಗೆ ಅಷ್ಟು ಸುಲಭವಾಗಿ ತಿಳಿಯಲಾರವು. ತಿಳಿದುಕೊಳ್ಳುವ ಗೋಜಿಗೂ ನೀನು ಹೋಗುವವನಲ್ಲ. ಮತ್ತೊಂದು ವಿಷಯ ಅಂದರೆ ನನ್ನ ತಾಯಿ ಮತ್ತು ಹೆಂಡತಿ ನಡುವೆ ಪ್ರಸಿದ್ಧವಾದ ಜಗಳ ಎಂದೂ ನಡೆದಿರಲಿಲ್ಲ. ನನ್ನ ಮೇಲೆ ಹಕ್ಕು ಚಲಾಯಿಸುವ ನಿಮಿತ್ತ ಅವರು ಮಾಡುತ್ತಿದ್ದುದು ಕೇವಲ ಕೋಳಿಜಗಳ ಮಾತ್ರವಾಗಿತ್ತು. ತಾಯಿಯೋರ್ವಳು ತನ್ನ ಮಗನನ್ನು ಪ್ರೀತಿಸುವುದಕ್ಕಿಂತ ಹೆಚ್ಚಗಿ, ಹೆಂಡತಿಯೋರ್ವಳು ತನ್ನ ಗಂಡನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ, ಅತ್ತೆ ಸೊಸೆಯನ್ನೂ; ಸೊಸೆ ಅತ್ತೆಯನ್ನೂ ಪ್ರೀತಿಸುತ್ತಿದ್ದರು ಎಂದು ಹೇಳಿದರೆ ನಿನಗೆ ಆಶ್ಚರ್ಯವಾಗಬಹುದು. ಸೊಸೆ ಅತ್ತೆಯೊಳಗೆ ತಾಯಿಯ ಹುಡುಕಾಟ ನಡೆಸಿದರೆ, ಅತ್ತೆ, ಸೊಸೆಯೊಳಗೆ ಗತಿಸಿದ ತನ್ನ ಮಾವನ ಹುಡುಕಾಟ ನಡೆಸಿದ್ದಳು. ಇನ್ನೊಂದು ವಿಚಿತ್ರ ಅಂಶವೆಂದರೆ ನನ್ನ ತಾಯಿ ತನ್ನ ಮಗನಾದ ನನ್ನೊಳಗೆ ಗತಿಸಿದ ತನ್ನ ಗಂಡ (ಅಂದರೆ ನನ್ನ


೪೫೨

ತಂದೆ)ನನ್ನು ಹುಡುಕುತ್ತಿದ್ದಳು. ಹೆಂಡತಿಯಾದ ವರಲಕ್ಷ್ಮಿ ತನ್ನ ಗಂಡನಾದ ನನ್ನಲ್ಲಿ ತಾನು ಎಂದೋ ಓದಿ ಮರೆತಿದ್ದ ಪುರಾತನ ಶ್ಲೋಕವನ್ನು ಹುಡುಕುವ ಕ್ರಿಯೆ ಆರಂಭಿಸಿದ್ದಳು.

ತಾಯಿ ಮಗನನ್ನು ಮಗ ಎಂದು ಗುರುತಿಸದಿರುವಾಗ ಹೆಂಡತಿ ಗಂಡನನ್ನು ಗಂಡ ಎಂದು ಗುರುತಿಸದಿರುವಾಗ ನಾನು ತಾಯಿಯನ್ನು ತಾಯಿ ಎಂದಾಗಲೀ ಹೆಂಡತಿಯನ್ನು ಹೆಂಡತಿ ಎಂದಾಗಲೀ ಗುರುತಿಸಲು ಹೇಗೆ ಸಾಧ್ಯವಾದೀತು? ಆ ಕರ್ಮಠ ವ್ಯವಸ್ಥೆಯೊಳಗೆ ನಾನು ಸಹಜವಾಗಿ ಅರಳಲೇ ಇಲ್ಲ. ತಾತ, ತಾಯಿ, ಹೆಂಡತಿ, ನೆನಪುಗಳು, ಸ್ಮೃತಿಗಳು, ಗೆಳೆಯರು ಇವರೆಲ್ಲ ನಿಷೇದಿತ ಪ್ರದೇಶಕ್ಕೆ ಕಾವಲಿರುವ ಸೈನಿಕರಂತೆಯೇ ಕಾಣಿಸುತ್ತಿದ್ದರೇ ಹೊರತು ನನ್ನ ಅಂತರಂಗದ ಧ್ವನಿಗಳಾಗಲಿಲ್ಲ. ನನ್ನ ಯಾವ ಭಾವನೆಗಳಿಗೂ ಸ್ಪಂದಿಸಲೇ ಇಲ್ಲ. ಹೀಗಾಗಿ ನಾನು ಸಂಬಂಧಗಳನ್ನು ಉಲ್ಲಂಘಿಸುವ ಕನಸು ಕಾಣತೊಡಗಿದೆ. ಈ ಕನಸು ವಯಸ್ಸಿನಲ್ಲಿ ನನಗಿಂತ ಹಿರಿಯದಾದುದು ಎಂದರೆ ಅರ್ಥವಾಗುತ್ತದೆ ತಾನೆ? ಪೂರ್ಣ ಪ್ರಮಾಣದಲ್ಲಿ ಕರ್ಮಠ ವ್ಯವಸ್ಥೆಯನ್ನು ಉಲ್ಲಂಘಿಸುವ ಸಮರ್ಥನೋರ್ವನ ನಿರೀಕ್ಷೆಯಲ್ಲಿಯೇ ಒಬ್ಬರನ್ನೊಬ್ಬರು ಹುಟ್ಟಿಸುತ್ತ ಪೋಷಣೆ ಎಂಬರ್ಥದಲ್ಲಿ ಬೇಟೆಯಾಡುತ್ತಿದ್ದರು. ನಮ್ಮ ವಂಶದ ಹಿರಿಯರು ಎಂದು ಹೇಳಿದರೆ ಕ್ರೌರ್ಯ ಎಂದು ಭಾವಿಸಬೇಡ. ಆದ್ದರಿಂದ ಉಲ್ಲಂಘನೆಯನ್ನೇ ನನ್ನ ಕಾಯಕ ಮತ್ತು ಧ್ಯೇಯ ಮಾಡಿಕೊಂಡೆ. ಪ್ರತಿಕ್ಷಣ ಪ್ರತಿಯೊಂದನ್ನು ಉಲ್ಲಂಘಿಸುತ್ತಲೇ ಹೋದೆ. ಸಾಯುವ ಕ್ಷಣದಲ್ಲೂ ಉಲ್ಲಂಘಿಸುವಂಥಾದ್ದು ಏನು ಉಳಿದಿದೆ ಎಂದು ಯೋಚಿಸುತ್ತಿದ್ದ ನಾನು ಮಣಿಕರ್ಣಿಕಾಚಕ್ರ ಪುಷ್ಕರಣಿಯ ಕನಸು ಕಂಡೆ.... ಬದುಕಿದವರನ್ನು ಒಂದಲ್ಲಾ ಒಂದು ಇಕ್ಕಟ್ಟಿಗೆ ಸಿಕ್ಕಿಸುವ?ವಂಶದ ಬಳುವಳಿಯನ್ನು ನಾನೂ ಮುಂದುವರಿಸಿದೆ ಅಷ್ಟೆ" ಎಂದು ಒಂದೇ ಉಸುರಿಗೆ ಹೇಳಿ ಶಾಮಣ್ಣ ಪಾತ್ರವು ಒಂದು ಕ್ಷನ ಚಿಂತಾಕ್ರಾಂತವಾಯಿತು.

ಅದರ ಮಾತುಗಳು ನನ್ನ ಮನಕಲಕಿದವು. ನಾನು ಒಂದು ಕ್ಷಣ ಮೌನ ವಹಿಸಿದೆ. ನಂತರ ನಾನು ಮಾತಾಡಿದೆ. "ಶಾಮಾ ನಿನ್ನ ಸಂಕಟವನ್ನು ಅರ್ಥ ಮಾಡಿಕೊಳ್ಳುತ್ತಿರುವ ಒಂದು ಕಿರು ಪ್ರಯತ್ನ ಮಾಡುತ್ತಿರುವೆ. ಉಲ್ಲಂಘನೆ ಎಂಬ ಕ್ರಿಯಾಪದದ ವ್ಯಾಖ್ಯಾನ ರೂಪವೇ ನಿನ್ನ ಬದುಕು. ಆ ಶಬ್ದವನ್ನು ಸಾರ್ಥಕಪಡಿಸಲೆಂದೇ, ಧೃಡಗೊಳಿಸಲೆಂದೇ ನೀನು ಅವತರಿಸಿದಿ ಎಂದು ಕಾಣುತ್ತದೆ... ಉಲ್ಲಂಘಿಸಬೇಕಿದ್ದುದನ್ನೆಲ್ಲ ... ಯಾವುದು ಉಲ್ಲಂಘಿಸಬಾರದಿತ್ತೋ ಅದೆಲ್ಲವನ್ನು ಉಲ್ಲಂಘಿಸಿದ್ದಾಯಿತು. ನೀನು ಸತ್ತು ಹೋದಿ... ಮಾನವ ಜಗತ್ತಿನಲ್ಲಿ ನೀನು ನಗಣ್ಯ ... ಜೀವ ಜಗತ್ತಿನಲ್ಲಿ ಆತ್ಮಗಳಿಗೆ ಯಾವ ಬೆಲೆ ಇದೆ ಹೇಳು? ಆದ್ದರಿಂದ ಸಮಾಜದಲ್ಲಿ ಸಂಬಂಧಗಳು ಯಾವ ಭಾವನಾತ್ಮಕ ನೆಲೆಯಲ್ಲಿ ಗುರುತಿಸಲ್ಪಡುತ್ತಿದ್ದವು ಎಂಬುದು ಮುಖ್ಯವೇ ಹೊರತು ಯಾರು? ಯಾರಲ್ಲಿ? ಏನನ್ನು ಕುರಿತು ಹುಡುಕಾಟ ನಡೆಸಿದ್ದರು ಎಂಬುದು ಮುಖ್ಯ! ನಾನೂ ಕೂಡ ಅಷ್ಟೆ. ಓದುಗರ, ಬುದ್ಧಿಜೀವಿಗಳ, ಜ್ಯೂರಿಗಳನ್ನಾಕರ್ಷಿಸುವ ಯಾವ ಅಂಶಗಳು ನಿನ್ನ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿದ್ದವು ಎಂಬುದನ್ನು ಶೋದಿಸುತ್ತಿರುವೆ. ನೀನು ಯಾವ ಸ್ಥಿತಿಯಲ್ಲಿದ್ದು ಸಮಾಜವನ್ನು ಪುಳಕಗೊಳಿಸಿದಿ ಎಂಬುದು ಮುಖ್ಯ. ನಾವೆಲ್ಲ ಬದುಕೆಂಬ ಕೇರಂ ಬೋರ್ಡ್ ಮೇಲೆ ಕಪ್ಪು ಬಿಳಿ ಕಾಯಿಗಳು ಮಾತ್ರ... ನಾವೆಂದೂ ಸ್ಟ್ರೆಕರ್ ಆಗುವುದು ಸಾಧ್ಯವಿಲ್ಲ... ಚಲನೆ ಒಬ್ಬರಿಗಿಂದ ಇನ್ನೊಬ್ಬರಿಗೆ ವಿಸ್ತರಿಸುತ್ತದೆ. ನೀನು ಆಟದಿಂದ ಹೊರಬಿದ್ದಿರುವಿ. ನಾನು ಹೊರಬೀಳುವುದನ್ನೇ ಸಮಾಜ ಕಾಯುತ್ತಿದೆ ಅಷ್ಟೆ . ಆದ್ದರಿಂದ ಸೇಡು ಎಂಬ ಕ್ರಿಯೆಗೆ ಪ್ರತ್ಯಯ ಸ್ಥಾನ ಕೊಡಬೇಡ.


೪೫೩

ಕಾಮ್ರೇಡ್ ಪಶುಪತಿ ಬಗ್ಗೆ ವಿಷಯ ಸಂಗ್ರಹಿಸಿದ್ದೇನಾದರೂ ಆ ಪಾತ್ರವನ್ನು ಮಂಡಲ್ ಎಲೆಕ್ಷನ್ ಸಮಯದಲ್ಲಿ ಹೊರತರಬೆಕೆಂದಿದ್ದೆ. ಇನ್ನು ವಿಜಯಾಳನ್ನು ಕಟ್ಕೊಂಡು ಮಾಡಬೇಕಾಗಿರೋದಾದ್ರು ಏನು? ಮುಂದೆ ಕಾಂಚನಾ ಪಾತ್ರ ಬರಲಿರುವುದರಿಂದ ವಿಜಯಾಳನ್ನು ನೇಪಥ್ಯಕ್ಕೆ ತಳ್ಳುವುದು ವಾಸಿ, ಏನಂತೀಯಾ? ಕಾದಂಬರಿಯ ವಸ್ತು ಸಂವಿಧಾನದಲ್ಲಿ ಕೆಲವು ಕಡೆ ರಾಜಿ ಮಾಡ್ಕೋ ಬೇಕಾಗುತ್ತೆ ಮಾರಾಯಾ... ನನ್ನನ್ನು ಅನಾವಶ್ಯಕ ಪ್ರಾಸಿಕ್ಯೂಟ್ ಮಾಡಿ ಗೊಂದಲದಲ್ಲಿ ಸಿಕ್ಕಿಸಬೆಡ" ಎಂದು ಸ್ಪಷ್ಟವಾಗಿ ಹೇಳಿದೆ.

ಅದಕ್ಕೆ ಪ್ರತಿಕ್ರಿಯೆಯಾಗಿ ಶಾಮಣ್ಣ ಪಾತ್ರವು ಕಣ್ಣಂಚಿನಲ್ಲಿ ನಕ್ಕಿತು.

" ಆಳೋ ಪಕ್ಷದ ಮರ್ಜಿ ಹಿಡಿದು ಕಾಮ್ರೇಡ್ತನಕ್ಕೆ ತಿಲಾಂಜಲಿಕೊಟ್ಟು ಕೊಳಚೆ ನಿರ್ಮೂಲಾ ಪ್ರಾಧಿಕಾರದ ಅಧ್ಯಕ್ಷನಾದ. ಅವನು ಅಲ್ಲಿಂದ ಇನ್ನೊಂದು ಪಕ್ಷ ಸೇರಿ ಆ ಪಕ್ಷದ ಯುವ ಶಾಖೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ನೀನೀ ಕಾದಂಬರಿ ಮುಗಿಸೋ ಹೊತ್ತಿಗೆ ಅಥವಾ ನಂತರ ಅವನು ಮಂತ್ರಿಯಾಗಲೂಬಹುದು. ಎಷ್ಟು ಪ್ರೀತಿ ತೋರಿಸಿದರೂ ಬ್ರಾಹ್ಮಣ್ಯ ಕಾರಣಕ್ಕೆ ನನಗೆ ಬಗೆಯ ಬಾರದ ದ್ರೋಹ ಬಗೆದ ಅವನು ನಿನ್ನ ಮೇಲೆ ಖಂಡಿತ ಸೇಡು ತೀರಿಸಿಕೊಳ್ಳಲಾರದೆ ಇರಲಾರ. ಸ್ವಲ್ಪ ಹುಷಾರಿಂದಿರು. ಕಾಲ ಹೀಗೆ ಇರೋದಿಲ್ಲ... ಆ ಹೆಬ್ರೀನೂ ಅಷ್ಟೆ. ಬ್ರಾಹ್ಮಣ್ಯವನ್ನು ಸರಿಯಾಗಿ ಪ್ರಕಟಿಸುತ್ತಿಲ್ಲವೆಂಬೊಂದೇ ಕಾರಣದಿಂದ ಆ ನೀಚ ಅವನೊಂದಿಗೆ ಶಾಮೀಲಾಗಿ ನನ್ನನ್ನು ಕಸದ ಬುಟ್ಟಿಗೆ ತಳ್ಳಿದ... ಅಂಥವರ ಮುಗುಳು ನಗೆಯೇ ಅಮೇರಿಕೆಯ ಪರಮಾಣು ಅಸ್ತ್ರಗಳಿಗಿಂತ ಅಪಾಯಕಾರಿಯಾದುದು ಎಂಬುದು ಜ್ಞಾಪಕದಲ್ಲಿರಲಿ ಮಹಾರಾಯಾ... ಸಾಮಾಜಿಕವಾಗಿ ಪ್ರಿಯವಾಗುವಂತಹ ಅಂಶಗಳನ್ನು ನಮ್ಮ ವಂಶದ ಕಮ್ಮಠ ತಾಕೀತುದಾರರಾದ ತಾತನವರಾಗಲೀ, ತಾಯಿಯಾಗಲೀ, ಹೆಂಡತಿಯಾಗಲೀ ಬೆಳೆಸಿ ಪೋಷಿಸಿ, ಪ್ರಕಟಗೊಳಿಸಲು ಅವಕಾಶ ಕೊಟಿದ್ದಲ್ಲಿ ನಾನು ಖಂಡಿತ ಉಲ್ಲಂಘಿಸುವ ಕಾರ್ಯಕ್ಕೆ ತೊಡಗುತ್ತಿರಲಿಲ್ಲ. ನಾನೂ ಎಲ್ಲರಂತೆ ಹನ್ನೊಂದರ ಪೈಕಿ ಇನ್ನೊಂದಾಗಿ ಸುಖವಾಗಿರುತ್ತಿದ್ದೆನು. ಅವರೆಲ್ಲ ತಮ್ಮ ಮೂಗುದಾಣ, ಲಗಾಮು ಇತ್ಯಾದಿಗಳನ್ನು ಬಿಗಿಪಡಿಸುತ್ತಲೇ ಹೋದರು. ಪ್ರಪಾತ ಸೃಷ್ಟಿಸಿದವರೂ; ಅದರಲ್ಲಿ ನೂಕಿದವರೂ; ನಾನು ಬೀಳುವ ವಿವಿಧ ಭಂಗಿಗಳನ್ನು ನೋಡಿ ದುಃಖದ ಮರೆಯಲ್ಲಿ ಸಂತೋಷಪಟ್ಟವರೂ ಆ ನನ್ನ ತಾಕೀತುದಾರರೇ. ಮೀಸೆ ಟ್ರಿಮ್ ಮಾಡಿದರೆ ಪಾತ್ರದ ಗಾತ್ರವನ್ನು ಸ್ಲಿಮ್ ಮಾಡಿದರೆ ಮಾತಿನ ಧಾಟಿಯನ್ನು ಅವರೋಹಣಗೊಳಿಸಿದರೆ ನಾಯಕ ಸ್ಥಾನ ಪಡೆಯುವ ಅದೇ ಪಾತ್ರವು ಮೀಸೆ ಹುರಿಗೊಳಿಸಿದರೆ; ದೇಹ ಸ್ಥೂಲ ಮಾಡಿದರೆ, ಮಾತಿನ ಧಾಟಿ ಆರೋಹನಗೊಳಿಸಿದರೆ ಖಳನಾಯಕನ ಸ್ಥಾನಕ್ಕೇರುತ್ತದೆ. ಇದೆಲ್ಲ ಮೇಕಪ್ ಮಾಡುವವರ ನಿರ್ದೇಶಕರ ಕೈಯಲ್ಲಿರುತ್ತದೆ. ಅವರೆಲ್ಲ ನೇಪಥ್ಯದಲ್ಲಿರುತ್ತಾರಾದ್ದರಿಂದ ಅವರು ಸಾಮಾಜಿಕವಾಗಿ ಅರ್ಥವಾಗುವುದೇ ಇಲ... ಅವರು ಮಾಡಿದಂತೆ ಮಾಡಿಸಿಕೊಂಡು; ಅವರು ಕುಣಿಸಿದಂತೆ ಕುಣಿಯುವ ಪಾತ್ರಗಳು ಸಾಮಾಜಿಕವಾಗಿ ಛೀ ಥೂ ಎಂದು ಉಗುಳಿಸಿಕೊಳ್ಳುತ್ತವೆ. ಹಾಗಾದವನು ನಾನು... ಅಂದ ಮಾತ್ರಕ್ಕೆ ನೇಪಥ್ಯದಲ್ಲಿರುವ ಸಂಚುಗಾರರ ಕಡೆ ಬೆರಳು ಮಾಡಿ ತೋರಿಸುತ್ತಿರುವೆನೆಂದು ತಿಳಿದುಕೊಳ್ಳೇಡ... ಅವರು ವ್ಯವಸ್ಠೆಯ ಒಂದು ಕಿರು ಭಾಗ ಮಾತ್ರ. ಸ್ವಾತಾಂತ್ತ್ಯೋತ್ತರವಾಗಿ ಸಾಮಾಜಿಕ ಪರಿವೇಷವೇ ಹಾಗೆ ಬದಲಾಗುತ್ತ ಹೋಗುತ್ತಿದೆ. ಬದಲಾಅಗುತ್ತಿರುವ ಪರಿಸ್ಥಿತಿಯಲ್ಲಿ ಯಾರು ಯಾವ, ಯಾವ ಕಾರ್ಯನಿರ್ವಹಿಸುತ್ತಿದ್ದಾರೆ? ಯಾರು ಯಾರನ್ನು, ಯಾವ ಯಾವ, ಪ್ರಮಾಣದ ಮುಗುಳು ನಗೆ ಆತ್ಮೀಯತೆಯಿಂದ


೪೫೪

ಬೇಟೆಯಾಡುತ್ತಾರೆ? ನಿಮ್ಮ ಮಸೂರ ಹಾಕುವ ಕಡೆಯಲ್ಲಿ ಪೀನ ಮಸೂರವನ್ನೋ; ಪೀನ ಮಸೂರ ಹಾಕುವ ಕಡೆಯಲ್ಲಿ ನಿಮ್ನ ಮಸುರವನ್ನೋ ಹಾಕಿ ರಸ್ತೆಗಳ ಮೂಲ ಆಕಾರವನ್ನೇ ಹೆಚ್ಚು ಕಡಿಮೆ ಮಾಡಿ ಬಿಡಬಲ್ಲ ಚಾಣಾಕ್ಷರಿಂದಲೇ ಈ ಸಮಾಜ ತುಂಬಿಕೊಂದಿದೆ ಕಣಯ್ಯಾ... ನಾನಾ ನಮೂನೆಯ ಹಸಿವುಗಳನ್ನು ಸೃಷ್ಟಿಸುವವರೂ ಅವರೇ; ಆ ಜಾಗಗಳಲ್ಲಿ ಕಮರುಡೇಗುಗಳಲ್ಲಿ ಪ್ರತಿಷ್ಠಾಪಿಸುವವರೂ ಅವರೇ ಮಿತ್ರ... ಚಿತ್ರ ವಿಚಿತ್ರಕಾರದ, ಪಂಚೇಂದ್ರಿಯಗಳಿಗೆ ನಿಲುಕದಂಥ ಜೇಡರ ಬಲೆಗಳ ಕೇಂಗಳಲ್ಲಿ ನಿಗೂಢವಾಗಿ ಕೂತು ಕಬಳಿಸುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಅವರಿಗೆ ಮಾನವೀಯ ಸಂಬಂಧಗಳ ಸೂಕ್ಷ್ಮ ಅರಿವು ಇರುವುದಿಲ್ಲ. ಬೇಟೆಯ ಗುಣ, ಸ್ವಭಾವ, ಕರಾಮತ್ತಿಗೆ ಮರುಳಾದ, ಪರವಶರಾದ ಅವರು ಮುಂದೆ ತಮ್ಮನ್ನು ತಾವೇ ಬೇಟೆಯಾಡಿಕೊಳ್ಳುತ್ತಾರೆ ನೋಡು... ವ್ಯವಸ್ಥೆ ಎಂಬುದು ದೊಡ್ಡ ಜೇಡರ ಹುಳ. ಒಂದು ವ್ಯವಸ್ಥೆ ಇನ್ನೊಂದು ವ್ಯವಸ್ಥೆಯನ್ನು ಕಬಳಿಸುತ್ತ ಹೋಗುತ್ತದೆ. ಯಾವ ಜೇಡರ ಹುಳ ಸಂಜೀವಿನಿ ಪರ್ವತದ ಶಿಖಿರಾಗ್ರದ ಮೇಲೆ ವಿರಾಜಮಾನವಾಗಿರುವುದು ಹೇಉ? ಯಾವ ಜೇಡರ ಹುಳು ಅಮೃತ ಕುಡಿದು ಅನಾದಿ ಕಾಲದಿಂದ ಜೀವಂತವಾಗಿರುವುದು?... ಆದ್ದರಿಂದ ಇದೆಲ್ಲ ಯಾವ ಸಿದ್ಧಾಂತದ ಮಾಪನಗಳಿಗೆ ಎಟಕುವಂಥಾದ್ದಲ್ಲ... ಇದೆಲ್ಲ ಯಾವ ಅಸ್ತ್ರಕ್ಕೂ ಬಗ್ಗುವಂಥಾದ್ದಲ್ಲ... ಇದೆಲ್ಲ ಯಾವ ಬದುಕಿಗೂ ನಿಲುಕುವಂಥಾದ್ದಲ್ಲ... ಇದೆಲ್ಲ ಆ ಪರಮಾತ್ಮನ ಪಂಚೇಂದ್ರಿಯಗಳಿಗೂ ಜೀರ್ಣವಾಗುವಂಥಾದ್ದಲ್ಲ... ಸೃಷ್ಟಿ, ಸ್ಥಿತಿ, ಲಯ ಶಕ್ತಿ ಕೇಂದ್ರಗಳೆಂದು ಆರ್ಷೇಯ ಕಲ್ಪನೆಗಳಿಂದ ಗುರುತಲ್ಪಡುತ್ತಿರುವಂಥ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿತ್ವ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಸೃಷ್ಟಿಯನ್ನು ಸ್ಥಿತಿಯೂ; ಸ್ಥಿತಿಯನ್ನು ಲಯವೂ; ಲಯವನ್ನು ಸೃಷ್ಟಿಯೂ ಕಬಳಿಸುತ್ತಾ ಹೋಗುತ್ತದೆ. ಕೊಟ್ಟ ಕೊನೆಗೆ ಉಳಿದುಕೊಳ್ಳುವುದು ತ್ರಿಮೂರ್ತಿತ್ವದ ಸ್ಥಿತಿಯೇ ಎಂಬುದನ್ನು ಜ್ಞಾಪಕದಲ್ಲಿಟ್ಟಿಕೋ ಮಿತ್ರಮಾ..." ಎಂದು ಮುಂತಾಗಿ ಶಾಮಣ್ಣ ಆಚಾರ್ಯತ್ರಯರೇ ಏಕೀಭವಿಸಿದಂತೆ ಮಾತಾಡಿತ್ತಿರುವುದು ಕೇಳಿ ನಾನು ಸಖೇದಾಸ್ಚರ್ಯಗೊಂಡೆನು.

"ಅಬ್ಬಾ! ಎಷ್ಟೊಂದು ಅದ್ಭುತವಾಗಿ ಮಾತಾಡಿದೆಯೋ ಶಾಮಾ... ರಜನೀಶ, ಸಾಯಿಬಾಬಾರಿಂದ ಹಿಡಿದು ಬನ್ನಂಜೆ ಗೋವಿಂದಾಚಾರ್ಯರವರೆಗೆ ಅನೇಕರ ಭಾಷಣ ಕೇಳಿದ್ದೀನಿ. ಆದರೆ ಅವರ ಯಾವ ಮಾತುಗಳೂ ನಿನ್ನ ಮಾತುಗಳಷ್ಟು ಪರವಶಗೊಳಿಸಿರಲಿಲ್ಲ ನೋಡು... ಸಾವು ವಿಜೃಂಭಿಸಿರುವ ಬದುಕಿನ ಅಖಾಡಕ್ಕೆ ನುಗ್ಗಿ ಅದನ್ನು ಸಮರ್ಥವಾಗಿ ಎದುರಿಸಿದಂಥವನಾದ ನೀನು ಕೆಲಕಾಲ ನಮ್ಮೊಂದಿಗಿರಲಿಲ್ಲವೆಂಬುದೇ ಬೇಸರದ ಸಂಗತಿ. ಹ್ಹೂ ಇರಲೀ... ಹೀಗೆ ಮಾತಾಡ್ತಾ ಕಾಲ ಹರಣ ಮಾಡೋಕೆ ಸಮಯವಿಲ್ಲ!... ಈ ಕಾದಂಬರಿಯ ಪ್ರಕಾಶಕ ಚನ್ನಬಸವಣ್ಣ ಎಂಥೊರಂಥ ನಿನ್ಗೂ ಗೊತ್ತಿರಬೇಕಲ್ಲ?"
"ಯಾವ ಚನ್ನಬಸವಣ್ಣ?"
"ಅದೇ ಕಣಪ್ಪಾ... ಹಿಂದೊಮ್ಮೆ ಬಳ್ಳಾರಿಯಲ್ಲಿ ನಡೆದ ಜಿಲ್ಲಾ ಬಂಡಾಯ ಸಮ್ಮೇಳನಕ್ಕೆ ನೀನೂ ನಾನೂ ಹೋಗಿದ್ದಿಲ್ಲೇ... ರಂಗನಾಥೂ; ವಡ್ಡರ್ಸೆ ಶೆಟ್ರೂ ಅವ್ರೂ ಇವ್ರೂ ಬಂದಿದ್ರಲ್ಲ... ನಿನ್ಗೂ ವೀರಣ್ಣಗೂ ಜಗಳ ಬಿದ್ದಿತ್ತು ನೋಡು!..."
"ನನ್ನ ಜಗಳದಿಂದ ತಪ್ಪಿಸಿಕೊಂಡೊರ್‍ಯಾರೂ ಇಲ್ಲ ಬಿಡು... ಅಂದ ಹಾಗೆ ರಾಜಶೇಖರ ನೀರಮಾನ್ವಿ ಜೊತೆಯಲ್ಲಿ... ಗಂಜಿ ಮಾಡಿದ ಬಿಳಿ ಬಟ್ಟೆ ಉಟ್ಕೊಂಡು ಗಡ್ಡ ಬಿಟ್ಕೊಂಡು ಯುವ


೪೫೫

ರಾಜಕಾರಣಿಯಂತೆ ಅಡ್ಡಾಡ್ತಿದ್ದರಲ್ಲ... ನಮ್ಮನ್ನೆಲ್ರನ್ನ ಮನೆಗೆ ಕರ್ಕೊಂಡು ಹೋಗಿ ಬಿಳಿಜೋಳದ ರೊಟ್ಟಿ ಎಣ್ಣೆಗಾಯಿ ಕಡ್ಲೆಪುರಿ ಗುರಾಳುಪುಡಿ ಗೋದಿಹುಗ್ಗಿ, ಇದೆಲ್ಲ ತಿನ್ನಲು ಕೊಟ್ತು ಮೇಲೊಂದು ಕಪ್ಪು ಕಷಾಯ ಕುಡಿಯಲು ಕೊಟ್ರಲ್ಲ..."
"ಹ್ಹಾ...ಹ್ಹಾ... ಅವರೇ ಕಣೋ ಶಾಮೂ..."
"ಹೌದೇನು! ಆ ಮನುಷ್ಯನ್ನ ಹೇಗೆ ಮರೀಲಿಕ್ಕೆ ಸಾಧ್ಯವೋ... ಅವರು ಜೋಳದನ್ನ ಕಟಂಬಲಿ,ಕಿಚಡಿ, ನವಣಕ್ಕಿ ಬಾನದ ಬಗ್ಗೆ ಮಾಡಿದ ಉಪನ್ಯಾಸ ನನ್ ಕಿವಿಯಲ್ಲಿ ಇನ್ನೂ ಗುಂಯ್‌ಗುದುತ್ತಲೇ ಇದೆ. ಅದ್ನೆಲ್ಲ ನಾನು ನಮ್ ಅನಸೂಯಳ ಕೈಯಿಂದ ಮಾಡಿಸ್ಕೊಂಡು ತಿಂದೆ ಬಿಡು... ಅವರೊಂದ್ನಮೂನಿ ಸ್ಟ್ರಿಕ್ಟೂಂತ ಕೇಳಿದ್ದೆ..."
"ಹೌದಪ್ಪಾಹೌದು... ಸ್ಟ್ರಿಕ್ಟಿರೋ ಕಡೆ ಸ್ಟ್ರಿಕ್ಟು... ಸಲಿಗೆ ಇರೋ ಕಡೆ ಸಲಿಗೆಯಿಂದ ಇರ್‍ತಾರೆ... ಈಗ ಸಧ್ಯಕ್ಕೆ ಬಳ್ಳಾರೀಲಿ ಲೋಹಿಯಾದ ತಲೆ ಕೆಡೆಸಿಕೊಂಡು ಕಾರ್ಯಕ್ರಮ ಏರ್ಪಡಿಸ್ತಿರೋರು ಅವರೊಬ್ರೆ. ಇದೇ ಮಾರ್ಚ್ ಇಪ್ಪತ್ಮೂರರಂದು ಬಳ್ಳಾರೀಲಿ ಲೋಹಿಯಾರವರ ಎಪ್ಪತ್ತೆಂಟನೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಕಣಪ್ಪಾ... ಅವತ್ತು ನಿನ್ ಕಥಿ ಇರೋ ಈ ಕಾದಂಬರಿ ಬಿಡುಗಡೆ ಆಗಬೇಕಾಗಿದೆ. ಮಾರ್ಚ್ ಇನ್ನೆಷ್ಟು ದೂರ ಇದೆ? ಈ ಫೆಬ್ರವರಿ ಆದ ಮೇಲೆ ಬರೋದೆ ಮಾರ್ಚು... ಅದ್ಕೆ ಬರೆಯೋ ನಡ್ವೆ ತತ್ವಜ್ಞಾನ ಬಿಚ್ಕೊಂಡು ಕೂಡ್ರಲಿಕ್ಕೆ ಸಮಯವಿಲ್ಲ..."
"ಹೋ...ಹಾಗೋ ಸಮಾಚಾರ! ಹೋಗಿಹೋಗಿ ಆ ಪುಣ್ಯಾತ್ಮನ ಹುಟ್ಟುಹಬ್ಬದಂದು ನನ್ನಂಥ ನರಾಧಮನ ಕುರಿತಾದ ಕಾದಂಬರೀನ ಪ್ರಕಟಿಸಲಿಕ್ಕೆ ಯಾಕೆ ಹೋದ್ರೂಂತ ಆ ಚನ್ನಬಸಣ್ಣ... ಅವರಿಗೆ ಇದು ಬಿಟ್ರೆ ಬೇರೆ ಯಾವ್ದೂ ಸಿಗಲಿಲ್ವೆ!"
"ಅದೆಲ್ಲ ಇರ್‍ಲಿ ಮಾರಾಯ... ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿದರೆ ಫಲವೇನು? ಉಳಿದಿರೋ ಸಮಯಾವಕಾಶದೊಳಗೆ ಕಾದಂಬರಿ ಮುಗಿಸಕೊಡಬೇಕಿದೆ... ಪಂಚಾಯ್ತಿ ಮಾಡೋದು ಬೇಡ... ಈಗ ನಿನ್ನ ಕಥೀನ ನಾನೇ ಶುರು ಮಾಡ್ಲೋ... ನೀನೆ ನಿನ್ನ ಕಥೀನ ಶುರುವು ಮಾಡ್ತೀಯೋ ಅಷ್ಟು ಹೇಳು?"
"ಒಳ್ಳೆ ಶಾರ್ಟ್‌ಟೆಂಪರ್ನ ಕೈಲಿ ಸಿಕ್ಕಿ ಹಾಕ್ಕೊಂಡು ಬಿಟ್ಟಿದ್ದೀನಲ್ಲಪ್ಪಾ ಶಿವ್ನೇ... ಈ ಭಾಗವನ್ನು ನೀನು ಬರೆದ್ರೆ ರಂಜನೀಯಾಂಶಗಳನ್ನು ಸೇರಿಸಿ ನನ್ನ ಕಥೀನ ವಾಸ್ತವಾಂಶಗಳಿಮ್ದ ದೂರ ಇಡ್ತೀ... ಅದ್ಕೆ ಒಂದು ಧಂ ನಾನು ನನ್ನ ಕಥಿಯನ್ನೇ ಹೇಳಬೇಕೆಂದು ನಿರ್ಧರಿಸಿದ್ದೀನಿ... ಈ ಭಾಗದಲ್ಲಿ ನಾನು ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡಬೇಕೆಂದು ತೋಚ್ತಾ ಇಲ್ಲ... ಮೊದಲಿಂದ ಹೇಳಬೇಕೆಂದರೆ ಪರಮ ಸ್ವಾರ್ಥಿಯಾದ ನೀನು ಆಗ್ಲೆ ಬರೆದು ಬಿಟ್ಟಿರುವಿ... ನೀನು ಅದೆಷ್ಟು ನಿಷ್ಕರುಣಿ ಎಂದರೆ ನೀನು ಕಥೆ ನಡುವೆ ನನ್ನನ್ನು ಕೊಂದು ಇದ್ದೊಂದು ಮನೆಯನ್ನು ವಿಲೇವಾರಿ ಮಾಡಿ ಬಿಟ್ಟಿರುವಿ... ಅದಾವ ಪ್ರೇರಣೆಯಿಂದ ನೀನು ಅನಂತಪುರಕ್ಕೆ ಹೋಗಿ ನನ್ನ ಹೆಂಡತಿಯನ್ನು ಕಂಡೆಯೊ ಏನೋ? ವಿಧವೆಯಾದ ನಂತರ ವರಲಕ್ಷ್ಮಿ ಹುತಾತ್ಮಳಂತೆ ಬದುಕುತ್ತಿರುವಳೆಂದು ಚಿತ್ರಿಸಿರುವಿ. ಮದುವೆಯಾದ ಕ್ಷಣದಿಂದ ಆಕೆ ವೈಧವ್ಯದ ಏಳು ಸುತ್ತಿನ ಕೋಟೆಯ ನಿರ್ಮಾಣಕ್ಕೆ ತೊಡಗಿದಳು. ಅದರ ಸುಳಿವು ದೊರಕಿದ್ದು ಮಧುಚಂದ್ರ ಎಂಬ ಆಕೆಯ ಅಟ್ಟಹಾಸಕ್ಕೆ ಹೋಗಿದ್ದಾಗ... ಅದರ ಪೂರ್ಣ ಅರಿವು ಆಗಿದ್ದು ಆಕೆಯೊಡನೆ ಕೊತ್ತಲಗಿಯಲ್ಲಿ ಸಂಸಾರ ಹೂಡಿದಾಗ... ಆಕೆ ಪಾತಿವ್ರತ್ಯವೆಂಬ ಕ್ರೌರ್ಯವನ್ನು ಪ್ರತಿಕ್ಷಣ ಝಳಪಿಸ


೪೫೬

ತೊಡಗಿದಾಗ ... ಎಲ್ಲಿಂದ ಶುರು ಮಾಡಲಿ ಮಿತ್ರಮಾ?"

"ಕುರಿಕೇಳಿ ಮಸಾಲೆ ಅರೀತಾರೇನೋ ಮಾರಾಯಾ...ಬಂದ, ಕೊಂದ, ತಿಂದ ಅಂತ ಮೂರೇ ಶಬ್ದಗಳಲ್ಲಿ ಕಥೆ ಮುಗಿಸಿದ್ರೆ ಕೇಳೋದ್ಕೆ ಯಾವ ಸ್ವಾರಸ್ಯ ಇರ್‍ತದೆ ಹೇಳು... ನೀನು ಹೇಳೋದು ಆಗಲೆ ನನಗೂ ಓದುಗರಿಗೂ ಮನವರಿಕೆಯಾಗಿದೆ! ಬೀಜ ಮೊಳೆಯುವ, ಗಿಡವಾಗುವ, ಹೂವು ಹೀಚುಗಾಯಿ ಹಣ್ಣು ಬಿಡುವ ಕ್ರಮದಂತೆಯೇ ಸ್ವಾಭಾವಿಕವಾಗಿ ಬದುಕು ಬದುಕಾಗಿ ಅರಳಬೇಕು. ಸಮಾಜವೆಂಬುದು ಬಯೋಲಾಗಿಕಲ್ ಗಾರ್ಡನ್ ಕಣಪ್ಪಾ... ಅಲ್ಲಿನ ಒಂದೊಂದು ಘಟಕಕ್ಕೂ ಒಂದು ನಿರ್ದಿಷ್ಟವಾದ ನೀತಿ ಸಂಹಿತೆ ಇರುತ್ತೆ. ತುಲಸಿ ಗಿಡ ತುಲಸಿ ಗಿಡಾನೆ, ಅಶ್ವಥ್ ಮರ ಅಶ್ವಥ್ ಮರಾನೇ... ಪೂಜಿಸಿಕೊಳ್ಳುವ ಒಂದೇ ಕಾರಣದಿಂದ ಅವುಗಳು ತಮ್ಮ ಜಾಯಿಮಾನವನ್ನು ಅದುಲು ಬದುಲು ಮಾಡಿಕೊಳ್ಳಲು ಸಾಧ್ಯವಿಲ್ಲ. ಯರನ್ನೇ ಕೇಳಿದರೂ ತುಲಸಿ ಗಿಡವನ್ನು ಅಶ್ವತ್ಥಮರ ಎಂದು ಹೇಳಲಾರರು. ಮನುಷ್ಯನ ಬದುಕು ಯಾವ ಹಂತದಲ್ಲಿಯಾದರೂ ಆರಂಭವಾಗಿರುವುದೇ ಇಲ್ಲ. ಕೆಲವರ ಬದುಕು ಆರಂಭವಾಗುವುದು ಸತ್ತ ನಂತರವೇ. ಬದುಕು ಮತ್ತು ಸಾವು ಇವು ಕೇವಲ ಮನುಷ್ಯ ಬದುಕಿನ ಎರಡು ನೆಪಗಳು ಮಾತ್ರ. ಆದ್ದರಿಂದ ಕಥೆಗೆ ಮನುಷ್ಯ ಬದುಕಿನ ಯಾವ ಮುಲಾಜೂ ಇರೋದಿಲ್ಲಾಪ್ಪ... ನೀನು ಎಲ್ಲಿಂದ ಅಂದರೆ ಅಲ್ಲಿಂದಲೇ ಆರಂಭಿಸಬಹುದು. ಇದಕ್ಕೆ ನಿರೂಪಕನಾದ ನನ್ನ ಅಭಂತರ ಇಲ್ಲ."
"ನೀನು ಹೇಳ್ತಿರೊದು ಸರಿ ಇದೆ ಕುಂವೀ... ಎಲ್ಲಿಂದಲಾದರೂ ಯಾಕೆ ಆರಂಭಿಸಲಿ, ಹೇಗೋ ನೀನು ದಂಪತಿಗಳಾದ ನಮ್ಮನ್ನು ಕರ್ಕೊಂಡು ಬಂದು ಕೊತ್ತಲಿಗಿಗೆ ಬಿಟ್ಟಿದ್ದೀಯಲ್ಲ... ಅಲ್ಲಿಂದಲೇ ಚೂಟಿಯಾಗಿ ಆರಂಭಿಸಿಬಿಡ್ತೇನೆ... ಜವಾನನ ಹೆಸರು ಓಬಳೇಶನಲ್ಲ... ಅವನ ಹೆಸರು ಮಾದನ್ನ ಅಂತ. ಹಾಗೆ ಚಂಬಸ್ಯಯ್ಯನ ಹೆಸರು ಓಂಕಾರಯ್ಯ ಅಂತ.... ಇಸ್ಮಾಯಿಲನ ಜನ್ಮಾಂಕಿತ ಔರಂಗ ಜೇಬ ಅಂತ. ನಂತರ ಅವನು ಇರಿಸಿಕೊಂಡಿದ್ದು ಖಲೀಲ ಅಂತ. ಹೀಗೆಲ್ಲ ಹೆಸರುಗಳನ್ನು ಎಚ್ಚರಿಕೆಯಿಂದ ಬದಲಾಯಿಸಿಕೊಂಡಿರುವಿ. ನಾನು ಮತ್ತೆ ಏರು ಪೇರು ಮಾಡೊದು ಬೇಡ. ನೀನು ಈಗಾಗಲೇ ಬದಲಾಯಿಸಿದ ಹೆಸರುಗಳನ್ನು ಹಾಗೇ ಬಳಸಿಕೊಂಡು ಹೇಳುವೆ. ಕೈಗೆ ಪೆನ್ನು, ಪ್ಯಾಡು, ಪೇಪರೂ ತಗೋ"
*
*
*
ಹ್ಹಾ... ಹ್ಹಾ... ನನ್ನ ಧರ್ಮ ಪತ್ನಿಯಾದ ವರಲಕ್ಷ್ಮಿಯೇ... ನೀನೇ ಪಾತಿವ್ರತ್ಯದ ಏಕಮಾತ್ರ ವಾರಸುದಾರಳಂತೆ ಎಷ್ಟು ಬಿಂಕದಿಂದ ಮುಂದೆ ನಡೆಯುತ್ತಿದ್ದಂತೆಯೇ ಪುಣ್ಯಾತ್ಗಿತ್ತಿ... ನೀನು ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಅಕ್ಕ ಪಕ್ಕದ ಮನೆಗಳು ಅಲ್ಲಾಡಿಹೋಗಿ ಒಳಗಿದ್ದವರು ಹೊರಗಡೆ ಬಂದು; ಹೊರಗಿದ್ದವರು ಒಳಗಡೆ ಹೋಗಿ ಪಂಚಮಹಾಪತಿವ್ರತೆಯರೇ ಶಾಮಾಶಾಸ್ತ್ರಿಯ ಹೆಂಡತಿಯಾಗಿ ಮುಂದೆಮುಂದೆ ಅದೆಷ್ಟು ಸತ್ವದಿಂದ ನಡೆಯುತ್ತಿರುವಳು ಎಂದು ಮಾತಾಡಿಕೊಂಡರು. ಪ್ರತಿಯೊಂದು ಹೆಜ್ಜೆ ಮೂಲಕ ತಾನು ಉಚ್ಚಕುಲ ಸಂಜಾತೆಯೆಂಬ ಭಾವನೆ ಪ್ರಕಟಿಸುತ್ತಿದ್ದಳು.
ಆ ಓಣಿ ಈ ಓಣಿಗಳೆಲ್ಲ ದಾಟಿ ಬುಧವಾರ ಪೇಟೆ ತಲುಪಿದಾಗ ಫಕೀರಮ್ಮ, ವಿಜಯ, ಓಬಳೇಶ ಮೊದಲಾದವರ ಕಚ್ಚಾ ದೇಗುಲಗಳನ್ನು ನೋಡಿ "ಏನ್ರೀ ಬರೀ ಹೆಣ್ದೇವತೆಗಳ


೪೫೭

ಗುಡಿಳದಾಳೆ... ಬರೀ ಶೂದ್ರ ದೇವತೆಗಳು ಇವು... "ಪುರುಷ ದೇವತೆಗಳ ಗುಡಿಗಳೊಂದೂ ಕಾಣಿಸ್ತಿಲ್ವಲ್ಲಾ" ಎಂದು ಖೇದ ವ್ಯಕ್ತಪಡಿಸಿದಳು.
"ಇಲ್ರಮ್ಮಾ... ಈ ಓಣಿ ಆಚೆ ಕಡೆ ಆಂಜನೇಯಸ್ವಾಮಿ ಗುಡಿಯೊಂದೈತೆ..." ಎಮ್ದು ಓಬಳೇಶ ಹೇಳಿದ್ದು ಆಕೆಗೆ ಸರಿಕಾಣಲಿಲ್ಲ.
"ನಮ್ ಮನಿ ಬಾಗ್ಲಮೇಲ ಎಲಾ ದೇವಾನ್ದೇವತೆಗಳಾದವು... ಮನಸೊಂದ್ನ ಸುದ್ದಿಟ್ಕಂಡ್ರೆ ಕೈಲಾಸ ವಯಕುಂಟ ಎಲ್ಲಾವು ಮನ್ಸಾಗೆರ್‍ತಾವು." ಎಂದು ಫಕೀರಮ್ಮ ಹೇಳಿದ್ದು ಆಕೆಗೆ ಸರಿಕಾಣಲಿಲ್ಲ.

ಒಂದು ಕೇಳುತ್ತ ಒಂದು ಬಿಡುತ್ತ ನಡೆದು ಮನೆಯ ಏರಿಕೆ ಬಾಗಿಲು ನೋಡಿ ತೃಪ್ತಿ ಪಟ್ಟಳು. ಅಡುಗೆಮನೆ, ಬಚ್ಚಲಮನೆ, ದೇವರಕೋಣೆ, ಹಿತ್ತಿಲು, ಹಜಾರನೋಡಿ ಸಂತೋಷಪಟ್ಟಳು. ಒಳ್ಳೆ ದೈವಭಕ್ತರು ಈ ಮನೇನ ಕಟ್ಟಿಸಿದಂತಿದೆ ಎಂದು ಗೊಣಗುತ್ತ ತಾನೊಬ್ಬಳೆ ಸಾಮಾನುಗಳನ್ನು ಆಯಾ ಜಾಗಕ್ಕೆ ಸರಿ ಹೊಂದಿಸಿದಳು... ಹೆಸರು, ನಡೆ, ನುಡಿ, ಅನುಮಾನಿಸಿ ಯಾರನ್ನೂ ಬಾಗಿಲಿಂದೀಚೆ ಬಿಟ್ಟುಕೊಳ್ಳಲಿಲ್ಲ. ಅವರ್‍ಯಾರೂ ಬಾಗಿಲು ದಾಟುವ ಪ್ರಯತ್ನವನ್ನೂ ಮಾಡಿಲಿಲ್ಲ. ಸುಜಾ ತಂದುಕೊಟ್ಟ ಒಂದುತಂಬಿಗೆ ಹಾಲನ್ನು ಕಾಯಿಸಿ ಉಕ್ಕಿಸಲೆಂದು ಒಳ ಒಯ್ದಳು. ಫಕೀರಮ್ಮ ಕಾಯಿಪಲ್ಲೆ ಅದೂ ಇದೂ ತಂದಿಟ್ಟಳು. ಅದನ್ನೂ ಒಳಗೊಯ್ದಳು. ಓಣಿಯ ಸದಭಿರುಚಿ ವರ್ತನೆಯನ್ನೂ; ಆಕೆಯ ಮಡಿಯುಡಿಯ ಪ್ರತಿಕ್ರಿಯೆಯನ್ನು ನೋಡಿ ವಿಜಯ ದೂರದಲ್ಲಿ ನಗಾಡುತ್ತಿದ್ದಳು.
ನನ್ನ ಹೊಟ್ಟೆ ಹಸಿದಿತ್ತು... ನೀರು ತುಂಬಿಸಿಟ್ಟು "ಬೇಗನೆ ಅಡುಗೆ ಮಾಡಿದರೆ..." ಎಂದೆ. "ಶ್ರೋತ್ರಿಗಳ ವಂಶರವರಾದ ನೀವೆ ಹೀಗೆ ಮಾತಾಡೋದೆ? ...ಗೃಹ ಶಾಂತಿ, ನವಗ್ರಹ ಪೂಜೆ, ಇತ್ಯಾದಿ ಎಲ್ಲ ಮಾಡಿಸಬೇಕಿದೆ. ಹೋಗಿ ವೈದೀಕಕ್ಕೆ ಒಳ್ಳೆ ಪುರೋಹಿತರನ್ನು ಕರ್ಕೊಂಡು ಬನ್ನಿ" ಅಂದಳು... ನಾನು ಸ್ನಾನ ಮಾಡಿ ಸೀದ ಊಳೂರು ಕೃಷ್ಣಮೂರ್ತಿ ಶರ್ಮರ ಮನೆಗೆ ಹೋದೆ. ರಾತ್ರಿ ಊಟದ ತಾಪತ್ರಯದಿಂದಾಗಿ ಇಂಥದೇ ಆಮಂತ್ರಣದ ನಿರೀಕ್ಷೆಯಲ್ಲಿದ್ದ ಅವರು ಕೂಡಲೆ ಜೊತೆಗೆ ಹೊರಟು ಬಂದರು. ಫಕೀರಮ್ಮನನ್ನು ಮಹಾ ಬ್ರಾಹ್ಮಣ ಪ್ರೇಮಿ ಎಂದೂ ದೈವ ಭಕ್ತೆ ಎಮ್ದೂ ಹೊಗಳಿದರು.

ಹೋಗುತ್ತಲೆ ವರಲಕ್ಷ್ನಿ ಅವರ ಪಾದಕ್ಕೆ ನೀರು ಸುರಿದು ಒಳ ಬರಮಾಡಿಕೊಂಡಳು. ವೈದಿಕ ವಿಶಯದಲ್ಲಿ ಅಪಾರ ಆಸಕ್ತಿ ವಹಿಸಿದ ವರಲಕ್ಷ್ಮಿಯನ್ನೂ ಪರಮೇಶ್ವರ ಶಾಸ್ತ್ರಿಗಳ ಮನೆಯ ಸೊಸೆ ಅಂದರೆ ನಿನ್ನಂತಿರಬೆಕಮ್ಮಾ ಎಂದು ಹೊಗಳಿದರು. ದಂಪತಿಗಳಾದ ನೀವೀರ್ವರೂ ಬುಧವಾರ ಪೇಟೆಯನ್ನು, ಗುರುವಾರ ಪೇಟೆಯನ್ನಾಗಿ ಮಾಡಬೇಕೆಂದು ಸಲಹೆ ಕೊಟ್ಟರು.

ಮನೆಯ ಹಜಾರದ ನಡುವೆ ಪುಟ್ಟ ಯಜ್ಞ ಕುಂಡ ಸ್ಥಾಪಿಸಿ ವೃದ್ಧ ಶರ್ಮರು ಹವನ, ಹೋಮ ಮಾಡಿಸಿದರು. ಮನಸೇಚ್ಛೆ ಮಂತ್ರಗಳನ್ನು ಹೇಳಿದರು. ಓನಿಯ ಹುಡುಗರು ಹುಡುಗಿಯರು ಕುತೋಹಲದಿಂದ ಇಣುಕಿ ಹಾಕುತ್ತಿದ್ದುದ್ದನ್ನು ದೀಕ್ಷಾ ಕೈಕರ್ಯದ ನಡುವೆ ನಾನು ಓಡಿಸಬೇಕಾಗಿತ್ತು. ಏನೋ ಹುಡುಗರು ಕುತೋಹಲ; ನೋಡಿಕೊಳ್ಳಲಿ ಎಂದು ನಾನು ಸುಮ್ಮನಿದ್ದರೆ ಆಕೆಯೇ ದೊಡ್ಡ ದನಿ ತೆಗೆಯುತ್ತಿದ್ದಳು.
ಹಜಾರದಿಮ್ದೀಚೆ ಕೂತಿದ್ದ ಫಕೀರವ್ವ, ಓಬವ್ವ, ಚವುಡವ್ವ, ತಮ್ಮಣ್ಣ ಮೊದಲಾದವರು ತಮ್ಮ ಕೇರಿಯಲ್ಲಿ ಇಂಥದೊಂದು ಪೂಜೆ ಆಗುತ್ತಿರುವುದನ್ನು ಉಲ್ಲಾಸಮಯ ಭಕ್ತಿಯಿಂದ


೪೫೮

ನೋಡುತ್ತಿದ್ದರು
ಮಂಗಳಾರತಿಗೆ ಮೊದಲು ನಿಲುವಂಜಿ ನಿಂಗವ್ವ ಮತ್ತಕೆಯ ಸಂಗಡಿಗರು ಇದ್ದಕ್ಕಿದ್ದಂತೆ ಸ್ಪೂರ್ತಿಯಿಂದ
ಉಣ್ಣಬಾರದು ನಿಮ್ಮ ಮನೆಯಲ್ಲಿ ನಾವು
ಗನ್ನಗಾತಕ ಪಾಪಿ ನೀವು
ಅನ್ನವನುಂಡರೆ ನಿಮ್ಮ ಬ್ರಾಹ್ಮಣಿಕೆ ಹೋಗುವುದೆಂದು
ದುಮ್ಮಾನದಲ್ಲಿ ಹರಿನುಡಿದ
ಉಪ್ಪರಿಗೆ ಹತ್ತಿ ಭುವನತ್ರಿಗೆ ಬೀಳಲು
...ಎಂದು ಏರು ದನಿಯಲ್ಲಿ ಹಾಡುತಲೆ ನನ್ನ ಹೆಂಡತಿ "ಸಾಕು ಮಾಡ್ರೆಮ್ಮ ಸಾಕು ಮಾಡಿ ಹಾಡಲು ಇಂಥ ಹಾಡು ಸಿಕ್ಕಿತೇನು ನಿಮ್ಗೆ... ನಾವೇನು ನಿಮ್ಗೆ ಊಟ ಬಡಿಸ್ತೀವಾ" ಎಂದು ತಕರಾರು ಎತ್ತಿದಳು.
ನಾವು ಹಾಡಿದರಲ್ಲಿ ತಪ್ಪೇನೈತಿ... ಅಧ್ಯಾತುಮದ ಗೀತೆಗೆ ಬ್ಯೆಲೆ ಕೊಡ್ತಿಲ್ವಲ್ಲೀ ತಾಯಿ?" ಎಂದು ಅವರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ವರಲಕ್ಷ್ಮಿಗೂ ಅವರಿಗೂ ಇನ್ನೇನು ಜಟಾಪಟಿ ನಡೆಯುವುದು ಎನ್ನುವಷ್ಟರಲ್ಲಿ ಫಕೀರಮ್ಮ ಪುಸಲಾಯಿಸಿದ್ದಕ್ಕೆ ವಿಜಯಾ -
ಮಂಗಳಂ ಸುಗುಣಾಭಿ ರಾಮಗೆ
ಮಂಗಳಂ ಗುಣಧಾಮಗೆ
...ಎಂದು ಸುಶ್ರಾವ್ಯವಾಗಿ ಹಾಡತೊಡಗಿದಳು. ಒಂದು ಕ್ಷಣ ಆ ತರುಣಿಯ ಮಧುರ ಶಾರೀರಕ್ಕೆ ವರಲಕ್ಷ್ಮಿ ಮನಸೋತು -
ಜಾನಕೀರಮಣನಿಗೆ
ಮುನಿಗಣ ಸೇವ್ಯಗೆ
ಮಾನವೇಂದ್ರಗೆ ಪೂರ್ಣಚಂದ್ರಗೆ
ಧೇನುಪುರಿ ಶ್ರೀರಾಮಗೆ
... ಎಂದು ತಾನೂ ಧ್ವನಿ ಸೇರಿಸಿ ಹಾಡಿದಳು.
ಮಂಗಳಾರತಿ ಆದ ನಂತರ ಎಲ್ಲರೂ ಚದುರಿದರು. ಹೊರಡಲಿದ್ದ ವಿಜಯಾಳನ್ನು ಹತ್ತಿರ ಕರೆದು ವರಲಕ್ಷ್ಮಿ ಆಕೆಯ ತಲೆ ನೆವರಿಸಿ ಏನಮ್ಮಾ ಎಂತಮ್ಮಾ ಎಂದು ವಿಚಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದಳು.
ಆ ಕ್ಷಣದಿಂದ ನಮ್ಮ ಹೊಸ ಮನೆ ಹೊಸ ಸಂಸಾರ ಅಧಿಕೃತವಾಗಿ ಆರಂಭವಾಯಿತು. ರಾತ್ರಿ ಬಹಳ ಹೊತ್ತು ಆಕೆ ಮಲಗಲಿಲ್ಲ. ಊರು, ಓಣಿ, ಜನ, ಮತ್ತವರ ಸ್ವಭಾವ ಕುರಿತು ಅದು ಇದು ಮಾತಾಇದಳು. ಅತ್ತೆಯವರು ಊಟ ಮಾಡಿದ್ರೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದಳು. ಆ ಹುಡುಗಿ ವಿಜಯ ಎಷ್ಟೊಂದು ಚೆನ್ನಾಗಿ ಹಾಡಿದ್ಲು ಅಲ್ಲಾವಾ... ಅಂಥದೊಂದು ಹೆಣ್ಣು ಮಗಳು ನಮಗೆ ಹುಟ್ಟಿದರೆ ಹೀಗಿರ್‍ತದೆ... ನೀವು ಗಂಡು ಮಗು ಆಗಬೇಕೂಂತ ಬಯಸ್ತೀದೀರೇನೋ! ಎಂದಿತ್ಯಾದಿ ಮಾತಾಡಿದಳು. ನಾನು ಆಕೆಯ ಪ್ರತಿ ಮಾತಿಗೆ ಹ್ಹೂಂಗುಟ್ತುತ್ತಿದ್ದೆನು. ಏನ್ರೀ ಎಲ್ಲಾದ್ಕೂ


೪೫೯

ಹ್ಹೂಂಗುಟ್ಟುತ್ತಿದ್ದೀರಲ್ಲ ಎಂದು ತಕರಾರು ಎತ್ತಿದಳು.
"ಹೌದು! ನಾನು ಆಕೆಯ ಮಾತಿಗೆ ಪ್ರತಿನುಡಿಯುತ್ತಿರಲಿಲ್ಲ.. ಆಕೆ ಎಂದರೆ ನನಗೊಂದು ರೀತಿಯ ಭಯ. ಯಾವುದೋ... ನನ್ನನ್ನು ವಿರೋಧಿಸುವ ಶಕ್ತಿ ಆಕೆಯಲ್ಲಿ ಆಶ್ರಯ ಪಡೆದಿದೆ ಎಂದು ದೃಡವಾಗಿ ನಂಬಿದ್ದೆ. ಅದನ್ನು ಓಡಿಸುವ ಪ್ರಯತ್ನ ನಾನು ಮಾಡಿರಲಿಲ್ಲ.
"ಹೌದು! ಅಂಥದೊಂದು ಹೆಣ್ಣು ಮಗಳ ತಂದೆಯಾಗುವುದು ಹೆಮ್ಮೆಯ ವಿಷಯ; ಇದನ್ನು ಹೇಳಬೇಕೆಂದು ಕೊಂಡಿದ್ದಾಗ -
"ಏನ್ರೀ... ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ತನ್ನನ್ನು ಯಾರೂ ನೋಡ್ಲಿಲ್ಲಾಂತ ತಿಳ್ಕೊಳ್ತದಂತೆ" ಎಂದು ಇದ್ದಕ್ಕಿದ್ದಂತೆ ಮುಖ ದಿಮ್ಮನೆ ಮಾಡಿಕೊಂಡಳು.
ಏನಾದರೂ ಹೇಳಲಿಕ್ಕೆ ಕೇಳಲಿಕ್ಕೆ ಕೊಟ್ಟೂರಲ್ಲಾದರೆ ಅಮ್ಮ ಇರುತ್ತಿದ್ದಳು. ಆದರೆ ಇಲ್ಲಿ ತಾನೆ ಯಾರಿದ್ದಾರೆ... ಮಾಪಕ ಕಡ್ಡಿಯ ಒಂದು ತುದಿಯಲ್ಲಿ ನಾನಿದ್ದರೆ ಇನ್ನೊಂದು ತುದಿಯಲ್ಲಿ ಹೆಂಡತಿವರಲಕ್ಷ್ಮಿ ಇರುವಳು. ಮೆಲಿಂದ ಕೆಳಗೆ ಸಂಖ್ಯೆಗಳನ್ನು ಎಣಿಸುತ್ತಿದ್ದರೆ ಆಕೆ ಕೆಳಗಿಂದ ಮೇಲಕ್ಕೆ ಸಂಖ್ಯೆಗಳನ್ನು ಎಣಿಸುವಳು.
"ಯಾಕೆ... ಹಾಗಂತೀಯ ವರಲಕ್ಷ್ಮೀ" ಎಂದು ಪ್ರೀತಿಯಿಂದಲೇ ಕೇಳಿದೆ.

"ಮತ್ತೇನು... ನೀವು ಆ ಹುಡುಗಿ ಕಡೆ ಹುಳಿಹುಳಿ ನೋಡ್ತಿದ್ದುದನ್ನು ನಾನು ನೋಡ್ಲಿಲ್ಲಾಂತ ತಿಳ್ಕೊಂಡಿದ್ದೀರೇನು?" ಎಂದಳು, ಬಾರಕೋಲಿನಿಂದ ಬಾರಿಸಿದಂತೆ.
ಆಕೆ ಹಾಗೆ ಮಾತಾಡಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ... ಅದನ್ನು ಕೇಳಿ ನನಗೆ ಬೇಸರವಾಗಲೀ ದುಃಖವಾಗಲೀ ಆಗಲಿಲ್ಲ. ಬದಲಿಗೆ ಅನುಕಂಪ ಮೂಡಿತು.
"ಹುಚ್ಚಿ... ತಮಾಷೆ ಮಾಡ್ಬೇಡ... ಅದಕ್ಕೂ ಒಂದು ಮಿತಿ ಇರಬೇಕು..." ಎಂದು ರಮಿಸುವ ಪ್ರಯತ್ನ ಮಾಡಿದೆ. ಒಂದು ಕ್ಷಣ ನನ್ನ ಮುಖವನ್ನು ದಿಟ್ಟಿಸಿದಳು.
"ನೀವಂಥೊರಲ್ಲ ಬಿಡ್ರಿ" ಎಂದಳು... ನಾನು ಸುಮ್ಮನಿದ್ದೆ. ಹೌದು : ಖಂಡಿತ ನಾನು ಅಂಥವನಲ್ಲ... ಅಫಿಡವಿಟ್ ಮುಂಜೂರು ಮಾಡುವ ಕೋರ್ಟಿನ ಶಿರಸ್ತೆದಾರಳಂತಿರುವ ಹೆಂಡತಿಯಿಂದ ನಾನು ನನ್ನ ಪ್ರತಿಯೊಂದು ನಡೆ ನುಡಿ ಕುರಿತು ಪ್ರಮಾಣ ಪತ್ರ ಪಡೆಯಬೇಕು.... ಎಂಥ ವಿಚಿತ್ರ! ಪ್ರತಿ ಕ್ಷಣ, ಪ್ರತಿ ಚಲನವಲನವನ್ನು ಆಕೆ ಗಮನಿಸುವಳು... ಅನುಮಾನ ಬಂತೆಂದರೆ ಹಿಂದು ಮುಂದು ನೋಡದೆ ಪಾಟೀ ಸವಾಲಿಗೆ ಗುರಿ ಮಾಡುವಳು... ಹೌದು, ನನ್ನ ಗಂಡ ನಿರಪರಾಧಿ ಎಂದು ಸಮಾಧಾನ ಪಡುವಳು. ದೇವರ ಮೇಲೆ ಹೂವು ತಪ್ಪಬಹುದು... ಆದರೆ ಈ ಪಾಟೀ ಸವಾಲಾಗಲೀ, ಸಮಾಧಾನ ಹೊಂದುವುದಾಗಲೀ ತಪ್ಪುವುದಿಲ್ಲ... ಇದು ನಾನು ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ನಿತ್ಯಕರ್ಮ.

ಮರುದಿನ ಬ್ಯಾಂಕಿಗೆ ಹೋದಾಗ ಎಲ್ಲರೂ ಬುಧವಾರ ಪೇಟೆಯಲ್ಲಿ ಮನೆ ಮಾಡೋದೆಂದರೆ ಸಾಮಾನ್ಯ ಸಂಗತಿಯೇ ಎಂದು ಆಶ್ಚರ್ಯ ವ್ಯಕ್ಯಪಡಿಸಿದರು. "ವೈನಿಯವ್ರ ಕೈರುಚಿ ತೋರಿಸಲ್ವೇ ಶಾಸ್ತ್ರಿ" ಎಂದು ಹೆಬ್ರಿ ಕೇಳಿಯೇ ಬಿಟ್ಟ. ಅದಕ್ಕೆ ಎಲ್ಲರೂ ಹೌದೌದೆಂದು ತಲೆ ಅಲ್ಲಾಡಿಸಿದರು. ಇಸ್ಮಾಯಿಲ ನನ್ನ ಕಿವಿಯಲ್ಲಿ "ಹಾಗೇನಾದ್ರು ಕರ್ಕೊಂಡೋಗೀಯಾ ಶಾಸ್ತ್ರಿ! ಅವನ ಕಚ್ಚೆ ಸುಮಾರಂತ ನನ್ನ ಮಾತಿನ ಅರ್ಥವಲ್ಲ. ಸಂಪ್ರದಾಯಸ್ಥ ಹೆಂಗಸರನ್ನು ಆರೆಸ್ಸೆಸ್‌ಗೆ ಹೆಚ್ಚು ಹೆಚ್ಚಾಗಿ ಸೇರಿಸ್ಕೋಬೇಕಂತ ಮೇಲಿಂದ ಹುಕುಂ ಬಂದಿದೆಯಂತೆ... ಹೆಂಗಸರು ಪರಿಚಯವಾದೊಡನೆ ಆತ ಹೇಳೋದು ಪಥ ಸಂಚಲನದ ಮಹತ್ವದ ಬಗ್ಗೆ. ಪಥ ಸಂಚಲನ ಒಂಥರಾ ಅಫೀಮಿದ್ದಂತೆ... ಅದ್ಕೆ


೪೬೦

ಒಂದ್ಸಾರಿ ಅಡಿಕ್ಟಾದರೆ... ಮುಖ್ಯವಾಗಿ ಲೇಡೀಸು... ಮಾಡ್ಕೊಂಡ ಗಂಡನ್ನಾದ್ರು ಬಿಟ್ಟಾರು ಪಥ ಸಂಚಲವನ್ನು ಮಾತ್ರ ಬಿಡಲಾರರು, ಹೇಳ್ದೆ ಕೇಳ್ದೆ ಹೆಬ್ರಿ ಬಂದು ಬಿಡ್ತಾನೆ ಹುಷಾರ್..." ಎಂದು ಪಿಸು ನುಡಿದ...

ಇದನ್ನು ದೂರದಿಂದಲೇ ಗಮನಿಸಿದ ಚಂಬಸ್ಯಯ್ಯ ಲಂಚ್ ಅವರ್‌ಗಿಂತ ಸ್ವಲ್ಪ ಮುಂಚೆ ಟಾಯ್ಲೆಟ್ ಬಳಿ ಜೊತೆಯಾದ.... "ಏನಾ ಇಸ್ಮಾಯಿಲೂ ನೀನೂ ತುಂಬ ಮಾತಾಡ್ತಿದ್ರಲ್ಲ... ಏನ್ಸಮಾಚಾರ! ಹಂಚಿನ ಗುಡೀಲಿ ರುಕ್ಕಮ್ಮ ಎಂಬ ರಂಡೇನ ಜೊತೆ ಮಾಡ್ಕೊಂಡಿರೋದು ಯಾರ್‍ಗೂಗೊತ್ತಾಗಲ್ಲಾಂತ ತಿಲ್ಕೊಂಡಿದ್ದಾನೀಸುಮಾಯಿಲು... ಹಿಂದೂ ಸ್ತ್ರೀಯರೆಂದರೆ ಅವನಿಗೆ ಎಳ್ಳಷ್ಟು ಗೌರವವಿಲ್ಲ ಶಾಸ್ತ್ರಿ... ಸ್ವಲ್ಪ ಹುಷಾರಿಂದ ಇರಪ್ಪ... ನೀನು ಮೊದ್ಲೇ ಬಾಯಿ ಸತ್ತೋನು... ಈ ದರಿದ್ರ ಊರಲ್ಲಿ ಸಂಸಾರ ಹೂಡಿ... ದಾರಿದ್ರ್ಯವನ್ನು ಮೈ ಮೇಲೆ ಎಳ್ಕೊಳ್ಳಕ್ಕೆ ಸಜ್ಜಾಗಿದ್ದೀಯ" ಎಂದು ಒಂದ ಮಾಡುತ್ತ ಹೇಳಿದ.
ನಂತರ ಅವನು ಅಣ್ಣತಮ್ಮಂದಿರಂತೆ ನಗುನಗುತ್ತ ಇದ್ದುದು ಕಂಡು ನನಗೆ ಆಶ್ಚರ್ಯವಾಯಿತು. ಅಲಾಯಿದವಾಗಿ ನನ್ನ ಕಡೆ ಕಣ್ಣು ಮಿಟುಕಿಸುತ್ತಿದ್ದರು. ಅವರ ಪರಸ್ಪರ ಬೇಟೆಯಾಡುವುದರಲ್ಲಿ ನಿಷ್ಣಾತರಿರುವರು ಎಂದುಕೊಂಡೆ.

ನಾನು ನೌಕರಿಗೆ ಸೇರುವುದಕ್ಕಿಂಥ ಮೊದಲಿಂದಲೂ ಆ ಮುವ್ವರ ಪರಿಚಯ ನನಗಿಲ್ಲದಿರಲಿಲ್ಲ. ಹೆಬ್ರಿ ಗೋವಿಂದಾಚಾರ್ಯ ತುರ್ತು ಪರಿಸ್ಥಿತಿ ಅವಧಿಯಲ್ಲಿ ಸರಕಾರದ ವಿರುದ್ಧ ಪಿತೂರಿ ಮಾಡಿದ ಆಪಾದನೆಗಾಗಿ ಜೈಲಿಗೆ ಹೋಗಿದ್ದ. ಅವನಿದ್ದದ್ದು ಪ್ರಸಿದ್ಧ ಯರವಾಡ ಜೈಲಿನಲ್ಲಿ... ಜೈಲೊಳಗೆ ಇದ್ದು ಆರೆಸ್ಸೆಸ್ ಮುಖವಾಣಿ ಪತ್ರಿಗೆಗೆ ಪ್ರಾಸಬದ್ಧ ಮತ್ತು ಒತ್ತಕ್ಷರದ ಕಠಿಣ ಪದಗಳುಳ್ಳ ಕಿರು ಲೇಖನಗಳನ್ನು ಗುಪ್ತನಾಮ ಇಟ್ಟುಕೊಂಡು ಬರೆಯುತ್ತಿದ್ದ. ಒತ್ತಕ್ಷರ ಬಳಕೆ ಕುರಿತು ಕಲಿಯುತ್ತಿದ್ದ ನಾನು ಅದನ್ನು ಗುಟ್ಟಾಗಿ ಸಂಪಾದಿಸಿ ಓದುತ್ತಿದ್ದೆ. ಅವುಗಳಿಂದ ಪ್ರೇರಿತನಾಗಿ ನಾನು ಕೂಡ ಒಂದು ಖಾಕಿ ಚೆಡ್ಡಿ ಹೊಲಿಸಿಟ್ಟುಕೊಂಡಿದ್ದೆ. ತೊಡುತ್ತಿರಲಿಲ್ಲ. ವಾರದ ಎರಡು ಸಲ ಪಥ ಸಂಚಲನದ ಕನಸು ಕಾಣುತ್ತಿದ್ದೆ. ತುರ್ತು ಪರಿಸ್ಥಿತಿ ತೆಗೆದು ಹಾಕಿದ ಮರು ವಾರ ಕೊಟ್ಟೂರಿನ ಮೈದಾನದಲ್ಲಿ ಆತ ತನ್ನ ಸಂಗಡಿಗರೊಡನೆ ಪಥ ಸಂಚಲನ ಮಾಡಿದ್ದು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.

ಇಸ್ಮಾಯಿಲ ಹರಪನಳ್ಳಿ ಆಚೆ ಇರುವ ಕ್ಯಾದಿಗೆ ಹಳ್ಳಿ ಬಸಾಪುರ, ಹುಣಿಸೀಕಟ್ಟೆ ದಲಿತರನ್ನು ಕೆಲವು ಸವರ್ಣೀಯರನ್ನು ತಿರುಚನಾಪಳ್ಳಿಯ ದರಗಾಕ್ಕೆ ಸಾಗಿಸಿ ಇಸ್ಲಾಂ ಮತಕ್ಕೆ ಮತಾಂತರಗೊಳಿಸಿದ ಜಮಾತೆ ಇಸ್ಲಾಮಿನ ಗುಂಪಿನಲ್ಲಿದ್ದುದಾಗಿ ಕೇಳಿದ್ದೆ. ವಕೀಲರೋರ್ವರ ತಂಗಿಯನ್ನಪಹರಿಸಿ ಸಿಕ್ಕಿಹಾಕಿಕೊಂಡು ಹಲ್ಲೆಗೀಡಾಗಿದ್ದ. ಅವನು ಮತಾಂತರಗೊಳಿಸಿದವರ ಪೈಕಿ ಪ್ರಭುದೇವನೆಂಭೋರ್ವನು ಈಗಲೂ ಕೊಟ್ಟೂರು ಬಳಿ ನಗೀರ್ ಅಹಮದ್ ಎಂಬ ಹೆಸರಿಟ್ಟುಕೊಂಡು ದೆಹಲಿಯ ಚಾಂದಿನಿ ಚೌಕದಲ್ಲಿ ತಯಾರಾಗುತ್ತಿರುವ ತಂಬಾಕಿನ ವಿವಿಧ ನಮೂನೆಗಳನ್ನು ಗ್ರಾಮದ ಜನರಿಗೆ ಪರಿಚಯಿಸುತ್ತಿರುವನು. ಅವನೂ, ಇಸ್ಮಾಯಿಲೂ ಈಗಲೂ ವರ್ಹಕ್ಕೊಂದು ಸಾರಿ ಅಜ್ಮೀರಿಗೆ ಹೋಗಿ ಬರುತ್ತಿರುತ್ತಾರೆ.

ಚಂಬ್ಸ್ಯಯ್ಯ ಮಾತ್ರ ಅವರಿಬ್ಬರಿಗಿಂತ ಚೆನ್ನಾಗಿ ಪರಿಚಯ. ಪೀಠದ ಅಧಿಕಾರ ಕುರಿತಂತೆ ಲಿಂಗಾಯಿತ ಜಾತಿಯ ಎರಡು ಕೋಮುಗಳ ನಡುವೆ ಐದಾರು ವರ್ಷಕ್ಕೊಮ್ಮೆಯಾದರೂ ಸಂಭವಿಸುವ ಗಲಭೆಯಲ್ಲಿ ಆತ ಮಚ್ಚು ಹಿಡಿದುಕೊಂಡು ಪಂಚಾಚಾರ್ಯ ಮಾರಾಜ್ಕೂ ‘ಜೈ’


೪೬೧

ಎಂದು ಕೂಗುತ್ತ ಅಡ್ಡಡುತ್ತಿದ್ದುದನ್ನು ನಾನು ನೋಡಿರುವುದುಂಟು. ಅಲ್ಲದೆ ಆತ ತನ್ನ ಕಿರಿ ಪತ್ನಿ ಗೌರಮ್ಮನನ್ನು ವೃದ್ಧಾತಿ ವೃದ್ಧ ಜಗದ್ಗುರುಗಳ ಸೇವೆಗೆ ಬಿಟ್ಟಿದ್ದಾನೆ. ಜಗದ್ಗುರುಗಳ ಸ್ನಾನ ಕಾರ್ಯದ ಮೇಲ್ವಿಚಾರಕಿಯಾದ ಆಕೆಯ ಮೂಲಕ ಹಲವು ವೀರಶೈವ ಪುಡಾರಿಗಳು ಜಗದ್ಗುರುಗಳಿಂದ ರಾಜಕೀಯ ಮತ್ತು ರಾಜಕೀಯೇತರ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿರುವರೆಂದು ನಾನು ಕೇಳಿರುವುದುಂಟು. ಗೌರಮ್ಮ ಜಗದ್ಗುರುಗಳ ನೂರೆರಡನೇ ಹುಟ್ಟುಹಬ್ಬವನ್ನು ಅವರಿಂದ ವೀರ್ಯಸ್ಖಲನ ಮಾಡಿಸುವುದರ ಮೂಲಕ ಯಶಸ್ವಿಯಾಗಿ ಆಚರಿಸಿದಳೆಂದು ಮುಂತಾಗಿ ವಿಡಂಬನಾತ್ಮಕ ಲೇಖನ ಬರೆದು ಕರಪತ್ರ ಹಂಚಿದ ಕಾರಣಕ್ಕಾಗಿ ಸ್ಥಳೀಯ ಹವ್ಯಾಸಿ ಪತ್ರಕರ್ತ ಪ್ರಕಾಶನನ್ನು ಹಿಡಿದು ಅವನ ತಲೆ ಬೋಳಿಸಿ ಕತ್ತೆ ಮೇಲೆ ಬತ್ತಲೆಯಾಗಿ ಕೂಡ್ರಿಸಿ ಪೀಠದ ಕೇಂದ್ರ ಸ್ಥಳವಾದ ಶಿವಪುರದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದಂದಿನಿಂದಲೇ ಚಂಬಸ್ಯಯ್ಯ ಹೆಚ್ಚಿಗೆ ಪ್ರಚಾರಕ್ಕೆ ಬಂದದ್ದು.

ಆದರೆ ಈ ಮೂವರು ಈ ಚರಿತ್ರೆ ಎಲ್ಲ ನನಗೆ ಗೊತ್ತಿಲ್ಲವೆಂದುಕೊಂಡು ಪರಮ ಸಜ್ಜನರಂತೆ ವರ್ತಿಸುತ್ತಿರುವರು. ಇದನ್ನೆಲ್ಲ ಸಂದರ್ಭಾನುಸಾರ ಪ್ರಕಟಿಸಿ ಅವರ ಮೇಲೆ ಹಿಡಿತ ಸಾಧಿಸಬೇಕೆಂದು ನಿರ್ಧರಿಸಿದೆ. ಇವರೊಂದೇ ಅಲ್ಲ, ಸಮಾಜದ ಅನೇಕರ ಒಳಗುಟ್ಟುಗಳನ್ನು ದಾಖಲು ಮಾಡಿಕೊಂಡಿರುವೆ. ಇದು ನನ್ನ ಪ್ರಮುಖ ಹವ್ಯಾಸಗಳಲ್ಲಿ ಒಂದು. ನಮ್ಮ ವಂಶದ ತಾಕೀತುದಾರರ ಗುಟ್ಟುಗಳನ್ನೂ ನಾನು ಸಂಗ್ರಹಿಸಿಕೊಂಡಿರುವೆ - ತಂದೆಯವು, ತಾತನವು, ತಾಯಿಯವು... ಆದರೆ ಹೆಂಡತಿ ಮಾತ್ರ ಗುಟ್ಟುಗಳೇ ಇಲ್ಲದ ಶೂನ್ಯ ಸಿಂಹಾಸನದಂತೆ ಗೋಚರಿಸುತ್ತಿರುವಳು.

ವಿವಾಹ ನಂತರದ ಇಷ್ಟು ದಿನಗಳಲ್ಲಿ ಆಕೆ ತನ್ನ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಒಂದೇ ಒಂದು ಗುಟ್ಟನ್ನು ಅನುಭವಿಸುವುದಾಗಿಲ್ಲ. ಬಚ್ಚಿಟ್ಟುಕೊಳ್ಳುವುದಾಗಿಲ್ಲ... ಅದಕ್ಕೆಂದು ನಾನು ಅನೇಕ ಅವಕಾಶಗಳನ್ನು ಕಲ್ಪಿಸಿರುವುದುಂಟು. ಆಕೆ ಮುಖ್ಯವಾಗಿ ನಿರ್ಮೋಹಿ. ಆಕೆಯನ್ನು ಆಕರ್ಶಿಸುವ ಯಾವ ವಸ್ತುವೂ ಭೂಮಿ ಮೇಲಿಲ್ಲ. ಮಲ್ಲಿಗೆ ಮತ್ತು ಗುಲಾಬಿ ಹೂಗಳ ನಡುವೆ ಅಂತರ ಗುರುತಿಸಲಾರಳು. ಕಾಗೆ ಮತ್ತು ನವಿಲಿನ ನಡುವೆಯೂ ಅಷ್ಟೆ. ಆಕೆಯ ಚಿತ್ತವನ್ನು ಸೂರೆಗೊಳ್ಳುವ ಶಕ್ತಿಗಾಗಿ ಹುಡುಕಾಟ ನಡೆಸಿ ವಿಫಲನಾದೆ... ಆಕೆಯನ್ನು ಲೈಂಗಿಕವಾಗಿ ಉದ್ರೇಕಿಸುವ ವಸ್ತುವನ್ನು ಆ ಸೃಷ್ಟಿಕರ್ತನು ಸೃಷ್ಟಿಸಿಯೇ ಇಲ್ಲವೆಂದು ನನಗೆ ಗೊತ್ತಾದದ್ದು ಯಾವಾಗ ಎಂದರೆ ಗಂಡು ಹೆಣ್ಣುಗಳು ಬತ್ತಲೆಯಾಗಿ ಸಾಮೂಹಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿರುವಂಥ ಚಿತ್ರಗಳೇ ತುಂಬಿದ್ದ ‘ರತಿವಿಲಾಸ’ ಎಂಬ ನಿಷೇದಿತ ಪತ್ರಿಕೆಯನ್ನು ‘ಸ್ವರ್ಣಗೌರಿ ವ್ರತವು’ ಎಂಬ ಪುಸ್ತಕದ ಒಳಗಿರಿಸಿ ಕಿಟಕಿ ಕಿಂಡಿಯಲ್ಲಿಣುಕಿ ನಾನು ಆಕೆಯ ಪ್ರತಿಕ್ರಿಯೆಯನ್ನು ಗಮನಿಸಿದ್ದುಂಟು. ಅದನ್ನು ತೆರೆದು ನೋಡಿ ಆಕೆ ಮೂರ್ಛೆ ಹೋದಳು. ಎದೆ ಎದೆ ಬಡಿದುಕೊಂಡಳು. ಅದನ್ನು ಹರಿದು ಚಿಂದಿಮಾಡಿ ಸುಟ್ಟು ಗೋಮೂತ್ರ ಸಿಂಪಡಿಸಿ ಮನೆಯನ್ನು ಶುದ್ಧ ಮಾಡಿದಳು. ನನ್ನನ್ನು ವಾರದ ದಿನಮಾನ ಕೆಟ್ಟದಾಗಿ ತರಾಟೆ ತೆಗೆದುಕೊಂಡು ಶಿಕ್ಷಿಸಿದಳು ಇತ್ಯಾದಿ...

ಒಂದು ನಿಜ ಹೇಳಬೇಕೆಂದರೆ ಆಕೆಯಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಕಾಮೋತ್ತೇಜಕ ವಸ್ತುಗಳಿಗಾಗಿ ನಾನು ಗುಟ್ಟಾಗಿ ಹುಡುಕಾಟ ನಡೆಸಿದ್ದುಂಟು. ಕಿಷ್ಕಿಂದೆಯಲ್ಲಿ ಆಂಧ್ರದಲ್ಲಿ ರೆಡ್ಡಿಯವರು ರಾಜಸುಯಯಜ್ಞ ನಡೆಸುತ್ತಿರುವರೆಂಬ ಸುದ್ದಿ ಕೇಳಿ ಹೊಸಪೇಟೆ ತಲುಪಿ


೪೬೨

ಉಳ್ಳಾಗೆಡ್ಡೆಯವರೋಣಿಯಲ್ಲಿ ಲೈಂಗಿಕ ತಜ್ಞರೋರ್ವರ ವಿಳಾಸ ಪಡೆದು ರಾಣಿಪೇಟೆಯಲ್ಲಿದ್ದ ಅವರನ್ನು ಸಂಪರ್ಕಿಸಿ, ನೂರಾರು ರುಪಾಯಿಕೊಟ್ಟು ಪಡೆದ ಐದು ಗ್ರಾಂ ಭಸ್ಮವನ್ನು ಆಕೆಗರಿವಿಲ್ಲದಂತೆ ಪಂಚಕಜ್ಜಾಯದಲ್ಲಿರಿಸಿ ತಿನ್ನಿಸಿದ್ದೂ ಉಂಟು.

ಇದೇ ಮೊನ್ನೆ ಬಸ್ಸಿನಲ್ಲಿ ಪ್ರಯಾಣಿಸುವಾಗ್ಗೆ ಪ್ರೌಡ ಶಾಲಾ ವಿಧ್ಯಾರ್ಥಿಯೋರ್ವನು ಭುಜ ತಾಕಿಸಿದ ಎಂಬ ಕಾರಣಕ್ಕೆ ದೊಡ್ಡ ರಂಪಾಟ ಮಾಡಿಬಿಟ್ಟಂಥ ನನ್ನ ಹೆಂಡತಿಯಲ್ಲಿ ಯಾವ ಗುಟ್ಟುಗಲನ್ನು ಹುಡುಕಲು ಸಾಧ್ಯವಾದೀತು? ಸಮಾಜಕ್ಕೆ ನಿರುಪದ್ರವಿಯೂ; ನನಗೆ ಕರ್ಮಠ ಉಪದ್ರವಿಯೂ ಆದೆ ಆಕೆ ದ್ವೀಪದಂತೆ ವಾಸಿಸಬೇಕೆಂದು ಇಚ್ಛಿಸುತ್ತಾಳೆ. ವಾರಕ್ಕೊಂದಾದರೂ ವ್ರತವನ್ನು ಮಾಡುತ್ತಾಳೆ. ನನ್ನ ಹೆಂಡತಿಗೆ ತಿಥಿಗಳ ಪರಿಚಯವಿದೆ.. ನಕ್ಷತ್ರಗಳ ಪರಿಚಯವಿದೆ, ವಾರಗಳ ಪರಿಚಯವಿದೆ, ಘಳಿಗೆಗಳ ಪರಿಚಯವಿದೆ. ಆಕೆ ಜೀವಂತ ಪಂಚಾಂಗವೆಂದರೂ ಸರಿಯೇ. ಆದರೆ, ಗಂಡನಾದ ನನ್ನ ಮನಸ್ಸಿನ ಭಾವನೆಗಳ ಪರಿಚಯವಿಲ್ಲ.. ಸಾಂಸಾರಿಕ ಛಂದಸ್ಸಿನ ಪರಿಚಯವಿಲ್ಲ, ದಾಂಪತ್ಯದ ವ್ಯಾಕರಣದ ಪರಿಚಯವಿಲ್ಲ. ಅವುಗಳನ್ನು ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸಂಸಾರವೆಂಬ ಉದಕದಲ್ಲಿ ತೈಲದ ಬಿಂದುವಿನಂತೆ ಇರುವ ಆಕೆಯಲ್ಲಿ ಯಾವ ಗುಟ್ಟನ್ನು ಯಾವ ದೋಶವನ್ನು ಹುಡುಕಲಿ?

ದಿನಗಳೆದಂತೆ ಬುಧವಾರಪೇಟೆ ಆಕೆಗೆ ನರಕ ಸದೃಶವಾಗ ತೊಡಗಿತು. ಅವರು ಹಾಗೆ! ಇವರು ಹೀಗೆ! ಎಂದು ಸಿಡಿಮಿಡಿಗುಟ್ಟ ತೊಡಗಿದಳು. ಪೂರ್ವ ನಿರ್ಧರಿತ ಒಪ್ಪಂದದಂತೆ ನಾನು ಫಕೀರಮ್ಮನ ಮನೆಯಲ್ಲಿ ದಿನಕ್ಕೆ ಒಂದಾವರ್ತಿ ಪ್ರಾತಃಕಾಲದಲ್ಲಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವುದರ ಬಗ್ಗೆ; ಐದು ರೂಪಾಯಿ ದಕ್ಷಿಣೆ ಸ್ವೀಕರಿಸುವ ಬಗ್ಗೆ, ಪಾದಾಭಿವಂದನೆ ಸ್ವೀಕರಿಸುವ ಬಗ್ಗೆ ತಕರಾರು ಶುರು ಮಾಡಿದಳು. ಪಾಪ ಸಂಚಯದ ಒಂದು ಭಾಗವೇ ದಕ್ಷಿಣೆ ಎಂದು ವಾದಿಸತೊಡಗಿದಳು. ಪಾದಾಭಿವಂದನೆ ಮಾಡುವುದರ ಮೂಲಕ ವಕ್ಷಸ್ಥಳ ತೋರಿಸಿ ತನ್ನ ಗಂಡನಾದ ನನ್ನ ಚಿತ್ತವನ್ನು ಅಪಹರಿಸುವ ಪ್ರಯತ್ನ ಮಾಡುತ್ತಿರುವರೆಂದು ತರ್ಕಿಸ ತೊಡಗಿದಳು. ಆಕೆಯ ತರ್ಕಕ್ಕೆ ಗೊಬ್ಬರ ಹಾಕುವ ರೀತಿಯಲ್ಲಿ ವಿಜಯಾ; ರಾಗಿಣಿ; ಮೇನಕೆ ಎಂಬ ತರುಣಿಯರು ಕೂಡಾ ಅಷ್ಟೇ ಸಲಿಗೆಯಿಂದ ಇದ್ದರು. ವಿಜಯಾ ಶಂಕರಾಚಾರ್ಯ ವಿರಚಿತ ‘ಸೌಂದರ್ಯಲಹರಿ’ಯ ಕೆಲವು ಕ್ಲಿಷ್ಟ ಸ್ತೋತ್ರಗಳ ಅರ್ಥ ಬಯಸಿ ಆಗೊಮ್ಮೆ, ಈಗೊಮ್ಮೆ ನಮ್ಮ ಮನೆಗೆ ಬರುತ್ತಿದ್ದುದು ಕ್ರಮೇಣ ಇಷ್ಟಪಡದಾದಳು. ಆದಿತಾಳದ ರೂಪರೇಷೆಗಳನ್ನು ತಿಳಿದುಕೊಳ್ಳುವ ನಿಮಿತ್ತ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಕರ್ನಾಟಕ ಸಂಗೀತ ವಿದ್ಯಾರ್ಥಿನಿ ರಾಗಿಣಿಯ ಮೇಲೆ ಕಿಡಿಕಾರ ತೊಡಗಿದಳು. ಸಂಖ್ಯಾಶಾಸ್ತ್ರದ ವಿದ್ಯಾರ್ಥಿನಿಯಾದ ಮೇನಕೆಗೂ ವರಲಕ್ಷ್ಮಿಗೂ ನನ್ನ ಗೈರುಹಾಜರಿಯಲ್ಲಿ ಜಗಳ ಆಯಿತೆಂದು ವಿದ್ಯುತ್ ಇಲಾಖೆಯ ಮೀಟರ್ರೀಡರು ಯಾಕೂಬ ಹೇಳಿದ. ಇದರಲ್ಲಿ ಸುಳ್ಳೆಷ್ಟೊ ನಿಜವೆಷ್ಟೋ!... ಆಕೆ ಎಷ್ಟೇ ವಿರೋಧಿಸಿದರು ಆ ಮೂರು ಮಂದಿ ತರುಣಿಯರು ನನ್ನಿಂದ ಸಾಧ್ಯವಾದಷ್ಟು ಜ್ಞಾನವನ್ನು ಸಂಪಾದಿಸುತ್ತಿದ್ದರು. ಅವರೆಂದೂ ನನ್ನ ಬಳಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸುದುದಿಲ್ಲ. ಹತ್ತಿರ ಬಂದರೆ ದೂರ ಸರಿಯುವ, ದೂರವಾದರೆ ಹತ್ತಿರ ಸುಳಿಯುವ ನನ್ನ ಸ್ವಭಾವ ನನಗೆ ಗೊತ್ತಿದ್ದೇ ಇತ್ತು. ವರಲಕ್ಷ್ಮಿಯ ಕಾರುಬಾರಿನಿಂದ ಅವರೆಲ್ಲಿ ದೂರವಾಗಿಬಿಡುವರೋ! ಆಗ ಮತ್ತೆಲ್ಲಿ ತಾನು ಅವರಿಗೆ ಹತ್ತಿರವಾಗಲು ಪ್ರಯತ್ನಿಸುವೆನೋ ಎಂಬ ಅಳುಕಿನಿಂದಾಗಿ ನಾನು, ಅವರ ಮತ್ತು ನನ್ನ ನಡುವೆ ಒಂದು ಅಂತರ ಕಾಯ್ದುಕೊಂಡು ಬಂದಿದ್ದೆ. ಯಾರು ಯಾರನ್ನೂ ಮೋಹಿಸುವುದು


೪೬೩

ಸಾಧ್ಯವಿರಲಿಲ್ಲ!... ಆದರೆ ಅದು ಆಕೆಗೆ ಅರ್ಥವಾಗುವುದು ಸಾಧ್ಯವಿರಲಿಲ್ಲ. ರೆಡ್‌ಹ್ಯಾಂಡ್ನಲ್ಲಿ ಹಿಡಿಯಬೇಕೆಂದು ನಿರ್ಧರಿಸಿರುವಳಂತೆ ಇರುತ್ತಿದ್ದಳು. ಎಲ್ಲರಿಗೂ ಕೇಳಿಸುವಂತೆ "ವಿಜಯಾ ಕಾಲೇಜ್ನಿಂದ ಈಗ ಬಂದ್ಯಾ... ಊಟಾ ಆಯ್ತಾರಾಗಿಣಿ... ಸಂಗೀತ ತರಗತಿಗೆ ಹೋಗಿದ್ಯಾ... ಇತ್ಯಾದಿ ಇತ್ಯಾದಿ ಹೊರಗಡೆ ಮಾತಾಡಿಸುತ್ತಿದ್ದ ಆಕೆ ಅವರೇನಾದರೂ ಮನೆ ಕಡೆ ಸುಳಿದರೆ ಬನ್ರಮ್ಮಾ ಕೂತ್ಕೋಳ್ಳಿ... ಒಂದು ಕಪ್ಪು ಪಾನಕ ಮಾಡಿಕೊಡ್ತೀನಿ... ಕೋಸಂಬರಿ ತಿಂದು ಕುಡಿಯುವಿರಂತೆ" ಎಂದೆನ್ನುತ್ತಿರಲಿಲ್ಲ. ಶ್ರೀಲಲಿತಾಷ್ಟಕದ ಮೂರು ಖಂಡಗಳಂತಿದ್ದ ಆ ಮುವ್ವರನ್ನು ನಾನು ಪರಿಭಾವಿಸುವುದೆಂಬ ಗೊಂದಲದಲ್ಲಿದ್ದ ನಾನು ತಾತ, ತಾಯಿ ಮತ್ತು ಕರ್ಮಠವೆಂಬೀ ಮೂರು ಕೋರ್ಟುಗಳು ಜೀವಾವಧಿ ಶಿಕ್ಷೆ ವಿಧಿಸಿ ತುರಂಗ ಪಾಲು ಮಾಡಿರುವ ಸಂಗೀತ, ಸಾಹಿತ್ಯ ಮತ್ತು ಸಂಖ್ಯಾ ಶಾಸ್ತ್ರಗಳ ಮೂರು ಹವ್ಯಾಸಗಳೆ; ಪ್ರತಿಭೆಗಳೇ ಈ ಮೂರು ಮಂದಿ ತರುಣಿಯರು ಎಂದು ಭಾವಿಸಿದ್ದೆನು. ಆದ್ದರಿಂದ ಅವರ ತರುಣ ಪ್ರತಿಭೆಗಳನ್ನು ಆರಾಧಿಸುತ್ತಿದ್ದೆ ಮತ್ತು ಗೌರವಿಸುತ್ತಿದ್ದೆನೇ ಹೊರತು ಕಾಮ ದೃಷ್ಟಿಯಿಂದ ಪ್ರೀತಿಸುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೆ ಅಳುಕು ಎಂಬ ಸಂಕೋಲೆಯನ್ನು ಕಾಲಿಗೆ ತೊಡರಿಸಿಕೊಂಡು ಸಂಕೋಚವೇ ಮೂರ್ತಿವೆತ್ತಂತೆ ಅಡ್ಡಾಡುತ್ತಿದ್ದೆನು.

ನಾನು ಸ್ಲೀವ್‌ಲೆಸ್ ಬ್ಲೌಸಿನ ಆಕೆ, ಮನೆಗೆ ನನ್ನ ಗೈರುಹಾಜರಿಯಲ್ಲಿ ಬಂದು ಲಗ್ನ ಪತ್ರಿಕೆಯನ್ನು ನನ್ನ ಹೆಂಡತಿಗೆ ತಂದು ಕೊಟ್ಟು ಅಕೆಯೊಂದಿಗೆ ಗಂಟೆಗಟ್ಟಲೆ ಹರಟಬಹುದು ಎಂದು ಯೋಚಿಸಿರಲಿಲ್ಲ... ಹೆಬ್ರಿಯವರ ಊರಿಗೆ ಹೋಗಿ ಹೆಬ್ರಿಗೂ, ಇಸ್ಮಾಯಿಲರ ಊರಿಗೆ ಹೋಗಿ ಇಸ್ಮಾಯಿಲಗೂ; ಚಂಬಸ್ಯಯ್ಯನ ಊರಿಗೆ ಹೋಗಿ ಚಂಬಸ್ಯಯ್ಯನಿಗೂ ಕೊಟ್ಟಿದ್ದ ಆಕೆ, ಕೊಟ್ಟೂರಿಗೆ ಹೋಗಿ ನನ್ನ ತಾಯಿಯವರಿಗೂ ಕೊಟ್ಟಿರಬಹುದೆಂದು ಭಾವಿಸಿದ್ದುದೇ ತಪ್ಪಾಗಿತ್ತು. ಗ್ರಹಲಾಘವವೇ ಸಿದ್ಧಾಂತ ರಹಸ್ಯವೇ ಹೆಣ್ಣು ರೂಪ ಧರಿಸಿರುವುದೇನೋ ಎಂಬಂತಿದ್ದ ಆಕೆಗೆ ಏನ್ರೀ ಶಾಂತೀ ನನ್ಗೆ ನಿಮ್ಮ ಲಗ್ನ ಪತ್ರಿಕೆ ಕೊಡ್ಲಿಲ್ವಲ್ಲಾ" ಎಂದು ಕೇಳುವ ಬಯಕೆಯಿಂದ ಕೇಳುವ ಧೈರ್ಯ ಮಾಡಲೂ ಇಲ್ಲ ನಾನು. ಅದೇ ದಿನ ಗುಂಡುಮುಗುಳು ಸಿದ್ಧನಗೌಡ ನನಗೆ ಪಶುಪತಿಯೆಂಬ ದೊಗಳೆ ಉಡುಪುಧರಿಸಿದ್ದ ದೊಗಳೆ ವ್ಯಕ್ತಿಯನ್ನು ಪರಿಚಯಿಸಿಕೊಟ್ಟಿದ್ದ. ಈ ದೇಶದಲ್ಲಿ ಮಾರ್ಕ್ಸಿಜಂ ಜೀವಂತವಾಗಿ ಉಳಿದಿರೋದಾದ್ರೆ ಅದು ಬ್ರಾಹ್ಮಣರಿಂದ ಮಾತ್ರ ಎಂದು ಅವನು ಪರಿಚಯವಾದ ಕ್ಷಣ ಹಸ್ತಲಾಘವ ಮಾಡಿ ಹೇಳಿ ಬಿಟ್ಟಿದ್ದ. ಅವನು ನನ್ನನ್ನು ಹೊಗಳಿದನೋ, ತೆಗಳಿದನೋ ಎಂದೊಂದು ಕ್ಷಣ ಅರ್ಥವಾಗಲಿಲ್ಲ. ಚತುರ್ಭುಜಾಕೃತಿಗಳನ್ನು ಚೌರಸಗಳನ್ನಾಗಿಯೂ; ಚೌರಸಗಳನ್ನು ವೃತ್ತಗಳನ್ನಾಗಿಯೂ ಮಾರ್ಪಡಿಸಬಲ್ಲ ಚಾಣಾಕ್ಷನಂತಿದ್ದ. ಪೈಥಾಗೋರಿಯಸ್ ಪ್ರಮೇಯದ ಮೂಲಕ ಸಮಾಜವನ್ನು ಅರ್ಥಮಾಡಿಕೊಳ್ಳಲು, ಪಡೆವ ಉತ್ತರಕ್ಕೆ ತಾನೇ ವಾರಸುದಾರನೆಂಬಂತೆ ಬೀಗುತ್ತಿದ್ದ. ಮೂರುಗ್ ಗೂಟಗಳ ನಡುವೆ ಕಟ್ಟಿದ ದಾರಗಳ ಪೈಕಿ ನನಗೂ ಆ ಪೈಕಿ ಒಂದನ್ನು ಕೊಟ್ಟಿದ್ದ. ಅಲುಮೇಲಮ್ಮ ನನಗೆ ಗೊತ್ತಿದ್ದಲೇ ಹೊರತು ಮಾರ್ಕ್ಸಿಜಮ್ಮ ನನಗೆ ಗೊತ್ತಿರಲಿಲ್ಲ. ಅದನ್ನು ತಿಳಿದುಕೊಳ್ಳುವ, ಭೇದಿಸುವ ಗೋಜಿಗೂ ನಾನು ಹೋಗಿರಲಿಲ್ಲ. ಸಹನೌಭುನಕ್ತು, ಸಹವೀರ್ಯಂ ಕರವಾವಹೈ ಎಂಬುದರಲ್ಲಿಯೇ ಇದೆಲ್ಲ ಅಡಗಿಹೋಗಿದೆಯಲ್ಲಾ ಎಂದು ಕೊಂಡಿದ್ದ ನಾನು... ನಾನು ಗೂಟದ ಈಶಾನ್ಯಕ್ಕಿದ್ದರೆ ಪಶುಪತಿ ಯಮ ದಿಕ್ಕಿನಲ್ಲಿ; ಗುಮಿಸಿ ಗೌಡ ನೈರುತ್ಯ ದಿಕ್ಕಿನಲ್ಲಿದ್ದರು. ಅವರು ತಂತಮ್ಮ ಕಡೆ ಜಗ್ಗಾಡುತ್ತಿರುವಾಗ ನಾನೋರ್ವನೇ ಗೂಟಕಿತ್ತು ಕೊಂಡು ಮನೆ ಕಡೆ ಓಡುವುದು ಹೇಗೆ ಸಾಧ್ಯವಾದೀತು?... ನಾನೀ ಬಿಡುಗಡೆ ಪ್ರಯತ್ನದಲ್ಲಿರುವಾಗಲೇ ಶಾಂತಿ ಲಗ್ನ ಪತ್ರಿಕೆಗಳನ್ನು ಅಂಕಗಣಿತ; ಬೀಜಗಣಿತ,


೪೬೪

ರೇಖಾಗಣಿತವನ್ನಡಗಿಸಿಟ್ಟುಕೊಂಡಂತಿದ್ದ ನಿಘೂಡ ವ್ಯಾನಿಟ್ ಬ್ಯಾಗಿನೊಳಗಿಟುಕೊಂಡು ಬ್ಯಾಂಕಿನಿಂದ ಸೀದ ಬುಧವಾರ ಪೇಟೆ ಕಡೆ ಲಟಗೂ ಪುಟಗೂ ಹೊರಟಿದ್ದಳು.

ಆಕೆ ನಮ್ಮ ಮನೆ ತಲುಪುವ ಕೆಲವು ಕ್ಷಣಗಳ ಹಿಂದೆಯಷ್ಟೆ ವರಲಕ್ಷ್ಮಿಯು ಮಡಿಮುಡಿಯಿಂದ ಮಾಧ್ವನವಮಿಯನ್ನು ಆಚರಿಸುವ ಸನ್ನಾಹದಲ್ಲಿದ್ದಳು. ಈಶ್ವರಾಂಶ ಸಂಭೂತವಾದ ಜೀವಾತ್ಮನೇ ನಿತ್ಯಶಾಶ್ವತವೆಂದು ಬೋಧಿಸುವ ತಹತಹಿಕೆಯಿಂದ ಶ್ರೋತೃವಿಗಾಗಿ ಹುಡುಕಾಡುತ್ತ ಹಿತ್ತಲಿಗೂ ಅಂಗಳಕ್ಕೂ ನಡುವೆ ಅಡ್ಡಾದುತ್ತಿದ್ದಳು. ಕೇಳುವವರು, ಜ್ಞಾನತೃಷಿಗಳೊಬ್ಬರೂ ಆಕೆಗೆ ದೊರಕಿರಾಲಿಲ್ಲ. ಅನ್ಯಥಾರ್ಗತಿನಾಸ್ತಿ ಎಂಬಂತೆ ತನ್ನ ನಿರುಪಾದಿಕವಾದ ಪ್ರತಿಬಿಂಬವನ್ನೇ ಎದುರಿಗಿಟ್ಟುಕೊಂಡು ಅದಕ್ಕೆ ಆಚಾರ್ಯತ್ರಯರಲ್ಲೋರ್ವರಾದ ಮಾಧ್ವಾಚಾರ್ಯರ ತತ್ವದ ನಿರ್ವಚನವನ್ನು ಹೇಳತೊಡಗಿದಳು ಮೌನವಾಗಿ -ಮಳೆ ಬರುತ್ತಾ ಇರುವುದು, ಒಂದೇ ಸಮನೆ ಸುರಿಯುತ್ತಿರುವ, ಸಿಂಪಡಿಸುತ್ತಿರುವ ತುಂತುರು ಮಳೆ ಅದು...ಮೇಘಾಚ್ಛಾಧಿತ ಆಕಾಶ. ಸೂರ್ಯಕಿರಣಗಳು ಹಾಯದಂತೆ ತಡೆಯುತ್ತಿರುವ ಅಪಾರದರ್ಶಕ ಮೋಡಗಳು. ಆದ್ದರಿಂದ ನಮಗೆ ಸೂರ್ಯದರ್ಶನವಾಗದು. ಕ್ರಮೇಣ ಮಳೆ ಕಡಿಮೆಯಾಗುತ್ತದೆ. ಮೇಘಗಳು ಕರಗುತ್ತವೆ, ತಿಳಿಗೊಳ್ಳುತ್ತವೆ. ಆಗ ಸೂರ್ಯ ಕಿರಣಗಳು ನಯನ ಮನೋಹರವಾಗಿ; ಆಹ್ಲಾದಕರವಾಗಿ ಕಾಣಲಾರಂಭಿಸುವವು. ಆದರೂ ತುಂತುರು ತುಂತುರುಗಳ ಪೈಕಿ ಯಾವುದೋ ಒಂದು ಬಿಂದುವನ್ನು ಕಿರಣ ಪ್ರವೇಶಿಸಿ ವಕ್ರವಾಗಿ ಬಾಗಿ ವರ್ಣ ವಿಭಜನೆ ಗೊಳ್ಳುವುದು... ಬಿಂದುವೇ ಸೂರ್ಯನ ಕಿರಣವನ್ನು ವಿಶ್ಲೇಷಿಸಿ ಇಂದ್ರ ಧನಸ್ಸೊಂದನ್ನು ನಿರ್ಮಿಸಿ ದಿಗಂತದಲ್ಲಿ ಪ್ರತಿಷ್ಟಾಪಿಸುವುದು. ಹಾಗೆ ನಿರ್ಮಿತಗೊಂಡ ಇಂದ್ರ ಧನಸ್ಸಿಗೆ ಉಪಾಧಿಯೇಯೇ ವರ್ಷ ಬಿಂದುವು. ಆದರೆ ಅದು ಅಲ್ಲಿರುವುದಿಲ್ಲ. ಇಂದ್ರಧನಸ್ಸನ್ನು ನಿರ್ಮಿಸಿದ ಸೂರ್ಯನಿಗಾಗಲೀ, ಸೂರ್ಯಕಾಂತಿಯ ಕಿರಣಕ್ಕಾಗಲೀ; ಅದನ್ನು ಗ್ರಹಿಸಿ ಸಪ್ತ ವರ್ಣಗಳಾಗಿ ವಿಶ್ಲೇಷಣೆಗೊಂಡು ಆಕೃತಿ ತಳೆದಂಥ ಇಂದ್ರಧನಸ್ಸುಗಾಗಲೀ ನಡುವೆ ಯಾವುದೇ ಹೋಲಿಕೆಗಳಿರುವುದಿಲ್ಲ. ಆದರೆ ಜಲಬಿಂದುವನ್ನು ಪ್ರವೇಶಿಸಿದ ಕಿರಣವೇ ಇಂದ್ರಧನಸ್ಸಾಗಿ ಪರಿವರ್ತನೆಗೊಳ್ಳುವುದು. ಆದರೆ ಇಂದ್ರ ಧನಸ್ಸಿಗೂ ಸೂರ್ಯನಿಗೂ ನಡುವೆ ವ್ಯತ್ಯಾಸ ಅಪಾರ. ಆದರೆ ಸೂರ್ಯನಿಲ್ಲದೆ ಇಂದ್ರಧನಸ್ಸಿಗೆ ಅಸ್ತಿತ್ವವೇ ಇಲ್ಲ. ಇಂದ್ರ ಧನಸ್ಸಿನ ರಚನೆಗೆ ಮೂಲಕಾರಕವೂ, ಪ್ರೇರಕವೂ ಆದ ಉಪಾಧಿ ಸ್ಥಿತಿಯಲ್ಲಿದ್ದ ಜಲಬಿಂದುವೂ ಇಲ್ಲ... ಇಂಥದೇ ಆದ ನಿರುಪಾಧಿಕ ಪ್ರತಿಬಿಂಬವನ್ನೇ ಆಕೆ ಅಂತರಂಗದಿಂದ ಹೊರಗಡೆ ತೆಗೆದಿಟ್ಟುಕೊಂಡು ಸಂಭಾಷಿಸುವ ಪ್ರಯತ್ನಕ್ಕೆ ತೊಡಗಿದ್ದಳು. ಸತ್ಯ, ಜ್ಞಾನ, ಅನಂತ, ಆನಂದಗಲೆಂಬೀ ಕಲ್ಯಾಣ ಗುಣಗಳ ಪೈಕಿ ಒಂದಾದರೂ ಬುಧವಾರ ಪೇಟೆಯ ತಮ್ಮ ಮನೆಯಂಗಳದಲ್ಲಿ ತಿರುಗಾಡುತಿಲ್ಲವಲ್ಲ ಎಂದು ಆಕೆ ಬೇಸರಗೊಂಡಿದ್ದಳು.

ಇನ್ನೇನು ಆಕೆ ನಿರಾಸೆಗೊಳ್ಳಲಿರುವಳು ಎನ್ನುವಷ್ಟರಲ್ಲಿ ಶಾಂತಿ ಬಂದು ಅಂಗಳದಲ್ಲಿದ್ದ ಐವತ್ತಾರು ಚುಕ್ಕಿಗಳಷ್ಟು ಉದ್ದದ ಮುವತ್ತಾರು ಚುಕ್ಕಿಗಳಷ್ಟು ಅಗಲದ, ಪ್ರತಿ ಆರು ಚುಕ್ಕಿಗಳ ಸಹಾಯದಿಂದ ಏಳುದಳಗಳುಳ್ಳ, ಪುಷ್ಪಗಳಳುಳ್ಳ ರಂಗವಲ್ಲಿ ಕಂಡು ಎಕ್ಸಲೆಂಟ್ ಎಂದು ಉದ್ಗರಿಸಿದಳು. ತಾನು ಶಾಮಾಶಾಸ್ತ್ರಿಯ ಧರ್ಮ ಪತ್ನಿಯನ್ನು ನೋಡುತ್ತಿರುವುದು ಇದೇ ಪ್ರಥಮ ಸಲ. ಇನ್ನೇನು ತಾನು ಕೂಗಿದೊಡನೆ ಹೊರಬಂದು ಕಾಣಿಸಿಕೊಳ್ಳಲಿರುವ ಆಕೆ ಅವರಂತಿರಬಹುದೇ? ಇವರಂತಿರಂತಿರಬಹುದೇ ಎಂದು ಕಲ್ಪಿಸಿಕೊಳ್ಳತೊಡಗಿದಳು. ಅವರಂತಿದ್ದರೆ


೪೬೫

ಹೇಗೆ ಸಂಭೋದಿಸಲಿ? ಇವರಂತಿರಂತಿದ್ದರೆ ಹೇಗೆ ಸಂಭೋದಿಸಲಿ? ಎಂದೊಂದು ಕ್ಷಣ ಭಾಷಾ ಲೆಕ್ಕಾಚಾರಕ್ಕೆ ತೊಡಗಿದಳು. ಮಡಿಯುಡಿ ಆಚಾರ ವಿಚಾರದಲ್ಲಿ ಶಾಸ್ತ್ರಿಪತ್ನಿ ತುಂಬ ಕಟ್ಟುನಿಟ್ತೆಂದೂ; ಮನುಮನ್ವಂತರದ ತಾನೂ ಒಂದು ಸ್ಮೃತಿ ಬರೆದು ಹೊಸದೊಂದು ಮನ್ವಂತರ ಅವತರಿಸುವಂತೆ ಮಾಡಲು ತುಂಬ ಸನ್ನದ್ಧಳಾಗಿರುವಳೆಂದೂ; ಯಾರನ್ನೇ ಪ್ರಪಥಮ ಬೆಟ್ಟಿಯಾದರೂ ಅವರನ್ನು ನೋಟದಿಂದ ಅಟಕಾಯಿಸಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತದ ಸಿದ್ಧಾಂತಗಳ ಮೂಲಕ ವಿಶ್ಲೇಷಿಸಿ ಬಿಡಬಲ್ಲ ಸಮರ್ಥಲೇಂದೂ ಅವರಿವರಿಂದ ಕೇಳಿ ತಿಳಿದುಕೊಂಡಿದ್ದ ಶಾಂತಿ "ಯಾರಿದ್ದೀರಿ" ಒಳಗಡೆ? ಎಂದು ಕೂಗಲೆಂದು ಬಾಯಿ ತೆರೆದಳಾದರೂ ಅದು ಸಾಧ್ಯವಾಗಲಿಲ್ಲ. ಅಕ್ಕದ ಮನೆಯ ರುಕ್ಮಿಣಿ; ಪಕ್ಕದ ಮನೆಯ ದಾರಾಸಿಂಗ್; ಎದುರುಮನೆಯ ವೆಂಕಮ್ಮರೇ ಮೊದಲಾದ ಅಷ್ಟದಿಕ್ಪಾಲಕರು ಬಂದು ಬಂದು ಇಣುಕಿ ನೋಡಿ ಹೋದರು. ಕುಂಟೋ ಬಿಲ್ಲೆ ಆಟದಲ್ಲಿ ಇಡಿ ಬುಧುವಾರಪೇಟೆಗೇ ಛಾಂಪಿಯನ್ನಲೇಂದು ಹೆಸರಾಗಿದ್ದ ಹೇಮಮಾಲಿನಿ ಎಂಬ ಬಾಲೆಯೋರ್ವಳು ಒಳ್ಳೆಬ್ಯಾಲೆಪಟುವಿನಂತೆ ಕುಂಟುತ್ತ ಬಂದು "ಆಂಟೀ... ಆಂಟೀ... ಬಂದಿದ್ದಾರ್‍ನೋಡ್ರೀ ವರಲಕ್ಷ್ಮಾಂಟೀ" ಎಂದು ಕೂಗಿ ಹಾಗೆಯೇ ಕುಂಟುತ್ತಾ ಹೋದಳು.
ಒಂದು ಕೈಯಲ್ಲಿ ಯಾವುದೋ ಪೂಜಾ ಸಾಮಗ್ರಿ ಹಿಡಿದುಕೊಂಡು ಇನ್ನೊಂದು ಕೈಯನ್ನು ನಾರುಮಡಿಯುಡಿಗೆ ಒರೆಸಿಕೊಳ್ಳುತ್ತಾ ಹೊರಬಂದ ವರಲಕ್ಷ್ಮಿಯು ಆಗಂತುಕೆಯನ್ನು ಲೇಡಿಹೆಲ್ತ್‌ವರ್ಕರಳೆಂದು ಅಪಾರ್ಥ ಮಾಡಿಕೊಂಡು "ಬಂದೆ ಏನಮ್ಮಾ ಬಂದೆಯಾ?... ಎಲ್ರೂ ಆರೋಗ್ಯದಿಂದೇವಮ್ಮಾ ನನಗಿನ್ನೂಮುಟ್ಟು ನಿಂತಿಲ್ಲಮ್ಮಾ... ಮುಟ್ಟು ನಿಂತಾಗ ನಾನೇ ಹೇಳಿ ಕಳಸ್ತೀನಿ ಬರುವಿಯಂತಮ್ಮಾ" ಎಂದು ದಡ ದಡ ನುಡಿದಳು.
ಅದನ್ನು ಕೇಳಿ ಶಾಂತಿಗೆ ಆಶ್ಚರ್ಯವಾಯಿತು. ತಾನು ಬಿಳಿ ಸೀರೆ ಬಿಳಿ ರವಿಕೆ ತೊಟ್ಟು ಸಿಂಪಲ್ಲಾಗಿ ಬಂದಿರುವುದನ್ನು ಕಂಡು ತಪ್ಪು ತಿಳಿದಿದ್ದಾಳೀ ಅಪೂರ್ವ ಸತಿಯು ಎಂದು ಊಹಿಸಿ -
"ಅದಲ್ರೀ ನಾನೂ..." ಎಂದು ಸರಿಪಡಿಸಲೆತ್ನಿಸುತ್ತಿರುವಷ್ಟರಲ್ಲಿ,
"ಓಹೋ... ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದವಳೋ... ನಿನ್ಗೆ ಎಷ್ಟು ಸಾರಿ ಹೇಳಬೇಕಮ್ಮಾ... ಹೀಗೆವಾರಕ್ಕೊಂದೆರಡು ಸಾರಿ ಬಂದು ಪೀಡಿಸಬೇಡಾಂತ... ನಮ್ಮನೇಲೇ ಸಾವ್ರಾರಮಂದಿಗೆ ಹಂಚೋವಷ್ಟು ಆಧ್ಯಾತ್ಮ ತುಂಬಿಕೊಂಡಿದೆ. ನಮ್ಮೆಜಮಾನ್ರು ಯಾರಂತ ತಿಳಿಕೊಂಡೀಯೇ ತಾಯಿ, ಪರಮ ಪಂಡಿತರಾದ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಳೂ... ವೇದೋಪನಿಷತ್ತುಗಳನ್ನೆಲ್ಲ ಅವರ ಪತ್ನಿಯಾದ ನಾನೂ ತಿಳ್ಕೊಂಡಿದ್ದೀನಮ್ಮಾ... ತಿಳಿತಾ... ಹೋಗಿ ಬಾ... ಇವತ್ತು ಮಧ್ವ ನವಮಿ... ದಯವಿಟ್ಟು ತೊಂದರೆ ಕೊಡಬೇಡ..." ಎಂದು ವರಲಕ್ಷ್ಮಿಯು ಮತ್ತೆ ಅನ್ಯಥಾ ಭಾವಿಸಿ ನುಡಿದಿದ್ದನ್ನು ಕೇಳಿ ಜಿ.ಎಂ.ಶಾಂತಿಗೆ ಅಪಾರ ನಗು ಬಂತು.
"ನಾನು ಕಣ್ರೀ... ನಿಮ್ಮೆಜಮಾನ್ರ ಕೊಲಿಗ್ಗೂ..." ಒಳಗೆ ಕರೆಯದಿದ್ದುದನ್ನು ನೋಡಿ ’ಸ್ವಲ್ಪ ಕೆಲಸ ಇದೆ ಒಳಗೆ ಬರ್‍ಲೇ" ಎಂದು ಕೇಳಿದಳು.
ಒಳಗೆ ಚಾಪೆ ಹಾಕಿ ಕೂಡ್ರಿಸಿದಳು ವರಲಕ್ಷ್ಮಿ. ಯಾವ ಜಾತಿ? ಏನು ಕೆಲಸ? ಹೇಗಂತ ಕೇಳುವುದು... ಶಾಂತಿ ತಾನು ಹೀಗೆ ಅಂತ ಹೇಳಿಕೊಂಡಳು. ಜಿ.ಎಂ. ಅಂತ ಇನ್ಷಿಯಲ್ಲಿರೋದರಿಂದ ಜಂಗಮರಿರಬಹುದೆಂದು ಊಹಿಸಿದಳು. ವಿವಾಹಿತಳೋ ಅವಿವಾಹಿತಳೋ ಎಂಉ ಕೊರಳ ಕಡೆ ನೋಡಿದಳು. ಯಾವುದೋ ಕಪ್ಪು ಮಣಿದಾರ ನೋಡಿ ವಿವಾಹಿತೆ ಎಂದೂಹಿಸಿದಳು. ತಾಯ್ತನದ ರೇಖೆಗಳು ನೋಡಬೇಕೆಂದರೆ ಸೀರೆಯನ್ನು ಹೊಕ್ಕಳು ಕಾಣಿಸದಂತೆ


೪೬೬

ಉಟ್ಟಿರುವಳು... ಸೊಂಟದ ಸ್ನಾಯುಗಳು ಉಬ್ಬಿರಿವುದು ನೋಡಿದರೆ ಆಗಲೆ ಎರಡಾದರೂ ಹೆರಿಗೆಯಾಗಿರಬಹುದು!
"ಮಕ್ಳೆಷ್ಟು?" ಎಂದು ಕೇಳಿಯೇ ಬಿಟ್ಟಳು ಪರಮ ಮುಗ್ಢೆ.
"ಇನ್ನೂ ಎಲ್ರೀ!" ಅಡಗೋಡೆ ಮೇಲೆ ದೀಪ ಇಟ್ಟಂತೆ ,
"ಅಯ್ಯೋ ಪಾಪ ಭಗವಂತ ಕೊಟ್ಟಿಲ್ವೆ!"
"ಮದುವೆ ಆಗಿದ್ರೆ ತಾನೆ ಮಕ್ಳಾಗೋದು!"
"ಇನ್ನೂ ಮದುವೆ ಆಗಿಲ್ವೆ... ಪಾಪ"
"ಲಗ್ನ ಪತ್ರಿಕೆ ಕೊಡ್ಲಿಕ್ಕೆ ಕಣ್ರೀ ನಾನು ಬಂದಿರೋದು?" ಎಂದು ಶಾಂತಿ ಹೇಳುತ್ತಲೆ ವರಲಕ್ಷ್ಮಿ ಈಗಾಗಲೇ ಎಷ್ಟು ಉರಿದಿರಬಹುದೆಂದು ಯೋಚಿಸಿದಳು. ತನ್ನ ಗಂಡ ಎಳೆ ತೋರಿಸಿದರೆ ಹಚ್ಚಡ ನುಂಗುವ ಸ್ವಭಾವದವನಲ್ಲ... ಆದರೂ ಅವರಿಗೆ ಒಳಗಡೆ ಬುದ್ಧಿ -
ಲಗ್ನಪತ್ರಿಕೆ ಕೊಟ್ಟದ್ದೂ ಇಸಿಕೊಂಡದ್ದೂ ಎಲ್ಲಾ ಆಯಿತು. ಚಹಾ, ಕಾಫಿ, ಪಾನಕ ಇದೆಲ್ಲ ಮಾಡುಕೊಡುವ ಜಾಯಮಾನದವಳಲ್ಲ ನನ್ನ ಹೆಂಡತಿ. ಶಾಂತಿ ಒಂದು ಕಪ್ಪು ನೀರು ಇಸಿದುಕೊಂಡು ಕುಡಿದು ಆಕೆಯ ನಿರ್ದೇಶನದಂತೆ ಅಲ್ಲೆ ಒಂದುಕಡೆ ಬೋರಲಿಟ್ಟಳು. "ನಿಮ್ಮ ಗಂಡ ತುಂಬ ಓಳ್ಳೆಯವರು, ಯಾರೊಂದಿಗೂ ಹೆಚ್ಚು ಮಾತಾಡುವವರಲ್ಲ... ಕೆಲಸದಲ್ಲೂ ಅಷ್ಟೆ, ವೆರಿ ಸಿನ್ಸಿಯರ್ರು... ನೀವು ಕೂಡಾ ಅಷ್ಟೆ... ತುಂಬಿದ ಕೊಡ ಇದ್ದಂತಿರುವಿರಿ... ಅವರಿಗೆ ನಿಮ್ಮನ್ನು; ನಿಮಗೆ ಅವರನ್ನು ಜೊತೆ ಮಾಡಿದ ಆ ದೇವರನ್ನು ಅಭಿನಂದಿಸಲೇ ಬೇಕು. ನಿಮ್ಮಂಥ ಆದಿ ದಂಪತಿಗಳು ವಾಸಿಸುತ್ತಿರುವುದರಿಂದ ಈ ಬುಧವಾರ ಪೇಟೆಗೆ ಖಂಡಿತ ಒಳ್ಳೆಯದಾಗುತ್ತದೆ. ಋಷಿಗಳು ತಪಸ್ಸು ಮಾಡುತ್ತಿದ್ದ ಕಾಡು ಅರಣ್ಯಗಳಿಗಿಂತ ಈ ಬುಧವಾರ ಪೇಟೆಯನ್ನು ನೀವು ತಿದ್ದಬೇಕು. ಹಾಗೆ ಹೀಗೆ ಅಂತ ಶಾಂತಿ ನನ್ನ ಬಗ್ಗೆ ಪ್ರಮಾಣಪತ್ರ ಮುಂಜೂರು ಮಾಡಿದಳು.

ಆಕೆಯ ಮಾತುಗಳಿಂದ ವರಲಕ್ಷ್ಮಿ ಉಬ್ಬಿಹೋದಳು. ನಿಂಬೆಹಣ್ಣು ಇದ್ದಿದ್ದರೆ, ಪಾನಕ ಮಾಡಿಕೊಡದೆ ಇರುತ್ತಿರಲಿಲ್ಲ ಆಕೆ. ತನ್ನ ಗಂಡ ಈಗ ಎಲ್ಲಿರಬಹುದು? ಏನು ಮಾಡುತ್ತಿರಬಹುದು ಎಂದು ಆಕೆ ಊಹಿಸುತ್ತಿರುವಾಗಲೇ ನಾನು ಬಂದದ್ದು. ಎರಡು ನಮೂನೆಯ ಕ್ಲಿಷ್ಟ ಗ್ರಂಥಗಳು ಒಂದಾಗಿರುವವೆಂದುಕೊಂಡ, ಕೊಲಿಗ್ಗೇನೋ ಆತ್ಮೀಯತೆಯಿಂದಲೇ ಮಾತಾಡಿಸಿದಳು... ನಾನು ಆಕೆಗೆ ಏನು ಕೇಳುವುದು ಏನು ಬಿಡುವುದು! ಯಾವ ಕೋನದಲ್ಲಿ ಹೇಗೆ ಕುಳಿತುಕೊಳ್ಳುವುದು! ಎಂಬ ಗೊಂದಲಕ್ಕೀಡಾದೆ. ಪರಸ್ತ್ರೀ ಎದುರಿಗೆ ನನ್ನ ವರ್ತನೆ ಹೀಗೇ ಇರಬೇಕೆಂದು ನಿರ್ಧರಿಸುವಾಕಿ ನನ್ನ ಹೆಂಡತಿ, ಸಾಂಪ್ರತು ನಾನೂ ಮಾತಾಡದೆ ಇರಲಿಲ್ಲ. "ಮದುವೆಗೆ ತಪ್ಪಿಸಬಾರ್ದೂರೀ... ನಿಮ್ಮ ಮಿಸೆಸ್ಸನ್ನು ಕರ್‍ಕೊಂಡು ಬನ್ನಿ" ಎಂದು ಹೇಳಿ ಅಲ್ಲಿಂದ ಹೋದಳು!

ಶಾಂತಿಯಂಥ ಸಹೋದ್ಯೋಗಿ ಜೊತೆ ನಾನು ಕೆಲಸ ಮಾಡ್ತಿದೀನಂತ ನಾನು ಹಿಂದೆ ಹೇಳಿರಲಿಲ್ಲ. ಯಾಕೆ ಹೇಳೋದಂತ ಸುಮ್ಮನಿದ್ದೆ. ಆ ಕಾರಣದಿಂದ ವರಲಕ್ಷ್ಮಿ ಚಾವತ್ತು ದಿಮ್ಮಗೆ ಇದ್ದಳು. ಆದರೆ ನನಗೆ ಮಾತ್ರ ದಿಮ್ಮಗೆ ಇರುವ ಸ್ವಾತಂತ್ರ್ಯವೂ ಇರಲಿಲ್ಲ.. ನಾನು ಎದುರಿಗಿದ್ದರೆ ಅಂತರಂಗವನ್ನು ಹೊಕ್ಕು ಮನದ ಕೋಣೆ ಕೋಣೆಗಳನ್ನು ಜಾಲಾಡುತ್ತಿದ್ದಳು. ದೂರವಿದ್ದರೆ ತನ್ನ ಮನಸ್ಸನ್ನು ಕಾವಲು ನಾಯಿಯೊಗಿ ನನ್ನೊಂದಿಗೆ ಕಳಿಸುತ್ತಿದ್ದಳು... ಆ ನಾಯಿ ನಾನು ಎಲ್ಲಿ ಹೋದರೆ ಅಲ್ಲಿ ಬಿಜಯಂಗೈಯುತ್ತಿತ್ತು. ಮೌನವಾಗಿ ಬೊಗುಳಿ ಎಚ್ಚರಿಸುತ್ತಿತ್ತು. ನಡುವಳಿಕೆಯನ್ನು ನಿಯಂತ್ರಿಸುತ್ತಿತ್ತು. ಆ ನಾಯಿಯೊಂದು ನಮೂನಿಯ ಸದ್ಭಾವನಾ ಯಾತ್ರೆ ಎಂದರೂ ಸರಿಯೆ?...


೪೬೭

ಮೊದಲೇ ನನ್ನನ್ನು ನಿರ್ಬಂಧಿತ ವ್ಯಕ್ತಿತ್ವ, ಮಂಗಳಾರತಿ ಕೊಟ್ಟರೆ ಉಷ್ಣ ತೀರ್ಥ ಕೊಟ್ಟರೆ ಶೀತ ಎಂಬ ಜಯಮಾನದ್ದು. ತನ್ನ ಪಾತಿವ್ರತ್ಯ ಪ್ರಭಾವದಿಂದ ಗಂಡನ ಆಯುರಾರೋಗ್ಯ ವೃದ್ಧಿಸುವಂತೆ ಮಾಡಬೇಕೆಂದೂ; ಅವನು ಅರಿಷಡ್ವರ್ಗಗಳಿಂದ ಬಹುದೂರ ಬಹುದುರ ಉಳಿದು ಸಂತತ್ವದಿಂದ ಪ್ರಜ್ವಲಿಸಬೇಕೆಂದೂ ಅಕೆ ದಿನ ದಿನಕ್ಕೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೋಳ್ಳುತ್ತಿದ್ದಳು. ಇದನ್ನು ವಿರೋಧಿಸುವ ಶಕ್ತಿ ನನ್ನಲ್ಲಿಲ್ಲದಿರಲಿಲ್ಲ... ಆದರೆ ಅದನ್ನು ಪ್ರಕಟಿಸುವ ಧೈರ್ಯ, ವ್ಯವಧಾನ ಇರಲಿಲ್ಲವೆಂದು ಹೇಳಬಹುದು.

ಆಕೆ ಬೆಚ್ಚಿ ಬೀಳುವಂತೆ ಗದರಿಸಬೇಕೆಂದು ನಾನು ಅನೇಕ ಸಾರಿ ನಿರ್ಧರಿಸಿದ್ದುಂಟು. ಆದರೆ ಅದು ಕೇವಲ ನಿರ್ಧಾರವಾಗಿ ಮಾತ್ರ ಉಳಿಯಿತು. ನನಗರಿವಿಲ್ಲದಂತೆ ಅದು ನಿಧಾನವಾಗಿ ಬೆಳೆಯತೊದಗಿತ್ತು. ಅದು ನನ್ನ ಗಮನಕ್ಕೆ ಬರಲಿಲ್ಲ. ಸನಿಹದಲ್ಲೆ ದೊಡ್ಡದೊಂದುಉಕ್ಕಿನ ಕಾರ್ಖಾನೆ ಉದ್ಭವಿಸಲಿರುವುದರಿಂದ; ಸಾವಿರಾರು ಕಾರ್ಮಿಕರು ಕೆಲಸ ಮಾಡಲಿರುವುದರಿಂದ; ಸಾವಿರಾರು ಹೊಸ ಸಂಸಾರಗಾಲು ನೆಲೆಯೂರಲಿರುವುದರಿಂದ; ಒಂದೊಂದನ್ನು ಒಂದೊಂದು ನುಂಗುವ ಹೊಂಚುವ ಕೆಲಸ ಮಾಡುವ ಶಕ್ತಿಗಳು ವಿಜೃಂಭಿಸಲಿರುವುದರಿಂದ, ಅದಕ್ಕೆ ಸಮಷ್ಟಿಯಾಗಿ ವ್ಯಭಿಚಾರ, ಜೂಜು, ಬ್ರಷ್ಟಾಚಾರ ದಬ್ಬಾಳಿಕೆ; ಶೋಶಣೆ ಇತ್ಯಾದಿ ಅವಾಂತರಗಳು ಹುಟ್ಟಿಕೊಳ್ಳಲಿರುವುದರಿಂದ... ಇದೆಲ್ಲ... ಅಂದರೆ ಹತ್ತದಿನೈದು ವರ್ಷಗಳ ನಂತರ... ಆದರೆ ಸಂಘಟಕನಾದವನು ಈ ಕ್ಷಣದಿಂದಲೇ ಎಚ್ಚೆತ್ತುಕೊಳ್ಳಬೇಕು. ಉಸಿರಾಡೋಕೆ ಆಮ್ಲಜನಕ ಸಿಗೋದೋರನ್ನೆಲ್ಲ ಒಂದೇ ಕಟ್ಟಿಗೆ ತರಬೇಕು. ವ್ಯವಸ್ಥೆ ನಿಯಂತ್ರಕರಿಗೆ ತಲೆ ನೋವಾಗಬೇಕು. ಅದ್ಕೆ ಏನು ಮಾಡಬೇಕು ಗೊತ್ತಾ? ಒಂದು ಭೂಗತ ಪತ್ರಿಕೆ ಪತ್ರಿಕೆ ಮತ್ತು ಚಟುವಟಿಕೆ ಆರಂಭಿಸಬೇಕು. ಅದರಲ್ಲಿ ಅಂಥದ್ದೇನೂನೂ ಇರೊದಿಲ್ಲ ಕಣಪ್ಪಾ... ಹೆಸರಿಗೆ ಭೂಗತ ಅಷ್ಟೆ... ಈ ಪ್ರಕಾರವಾಗಿ ಮಧ್ಯ ಪ್ರವೇಶಿಸಿದ ಪಶುಪತಿ ಗದರಿಸಬೇಕೆಂಬ ನಿರ್ಧಾರವನ್ನು ಕೆಡದಂತೆ ಮೀಥೆಲ್ ಎಂಬ ದ್ರವದೊಳಗಿರಿಸಿದ. ತನ್ನ ಸೈಕ್ಲೋಸ್ಟೈಲ್ ಪತ್ರಿಕೆಗೆ ಕ್ರಾಂತಿಕಾರಿ ಪ್ರೇಮ ಕವಿತೆಗಳನ್ನು ಬರೆಯಬೇಕೆಂದೂ; ಅವಕ್ಕೆಲ್ಲ ‘ಮಾಲೆ’ ಎಂಬ ಗುಪ್ತ ನಾಮ ಇಟ್ತುಕೋ ಎಂದು ಸೂಚಿಸಿದ. (ಮಾ...ಎಂದರೆ ಮಾವೋ; ಲೆ ಅಂದರೆ ಲೆನಿನ್)... ನಾನು ಭಲಾ ಎಂದೆ. ವಂತಿಗೆ ಕೇಳಿದ... ಜೇಬಿನಲ್ಲಿದ್ದ ಐವತ್ತು ರೂಪಾಯಿ ಕೊಟ್ಟೆ.

ಗುಮುಸಿ ಗೌಡ ಯಾವ ಗಳಿಗೆಯಲ್ಲಿ ಪರಿಚಿಯಿಸಿದನೋ ಪಶುಪತಿ ಏಕವಚನ ಸಂಭೋದನೆಯಿಂದ ಬಲವಾಗಿ ತಗುಲಿಕೊಂಡ... ಯಾಕೋ ಆತ್ಮೀಯ ಎನ್ನಿಸಿದ. ಆ ಕೆಂಪಂಗಿ ತೊಟ್ಟುಕೊಂಡೋರು ಸದಾ ಹುಳಿ ಹುಳಿ ನೋಡುತ್ತಿರುತ್ತಾರೆ ಕಣ್ರೀ... ಅವರಿಂದ ದೂರ ಇರ್ರೀ... ಅವನ ಪರಿಚಯಯಾದಂದಿನಿಂದ ನಿಮ್ಮ ತುಟಿ ಕಪ್ಪಾಗ್ತಿವೆ. ಕೈಬೆರಳಿಂದ ಎಂಥದೋ ವಾಸನೆ ಎಂದು ಹೆಂಡತಿ ಕೇಳತೊಡಗಿದ ಕ್ಷಣ ಗದರಲಿಕ್ಕೆ ಯೋಗ್ಯವಾದುದು ಎಂದುಕೊಂಡೆ. ಆತ ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲಿ ಮಾರ್ಕ್ಸಿಜಂ ಗಾಳಿ ಬೀಸಿದುದರ ಬಗ್ಗೆ ಹೇಳುತ್ತ ಸಿಗರೇಟು ಚುಟ್ಟ ಸೇದುವ ಅಭ್ಯಾಸ ಮಾಡಿಸಿದ. ಒಂದು ಗ್ಲಾಸ್ ಬಿಯರ್ ಕುದಿಯೋದ್ರಿಂದ ಮನುಷ್ಯನ ಅಂತರಂಗದ ಮತ್ತು ಬಹಿರಂಗ ಕೆಂಪು ವರ್ಣಕ್ಕೆ ತಿರುಗುವುದೆಂದು ಹೇಳಿದ್ದ... ನನ್ನ ಅಂತರಂಗದ ಯಾವುದೋ ಅನಾಥ ಕೂಗಿಗೆ ಗುಮುಸಿ ಗೌಡ ಮತ್ತು ಪಶುಪತಿ ಸ್ಪಂದಿಸುತ್ತಿರುವರೆಂದುಕೊಂಡೆ. ಅವರೂ; ಅವಾಲೋಚನೆಗಳೂ; ಭಾವನೆಗಳೂ, ಚಟಗಳೂ ಪವಿತ್ರ... ಆಧುನಿಕ ಮನುಷ್ಯ ಕೂಪಸ್ಥ ಮಂಡೂಕವಾಗಿರಬೇಕೆ?


೪೬೮

"ರ್ರೀ ಸಿಗರೇಟು ಸೇದೋದ್ನ ಕಲ್ತಿದೀರಿ... ಹೌದು ತಾನೆ?" ಎಂದೊಂದು ದಿನ ಜಗ್ಗಿ ಕೇಳಿಯೇ ಬಿಟ್ಟಳು. ಸಂರಕ್ಷಕ ದ್ರವದಿಂದ ನಿರ್ಧಾರದ ಪುಟ್ಟ ಕಳೇಬರ ಹೊರಗೆ ಬಂದು ಜೀವ ಪಡೆಯಿತು.

"ಹೌದೇ ನಿಂದೆನು ಭಯಾನಾ? ನಾನು ಗಂಡ್ಸು... ಬೇಕಾದ್ದು ಮಾಡ್ತೀನಿ... ಇವತ್ತು ಸೇದ್ತೀನಿ... ನಾಳೆ ಕುಡಿಯೋದನ್ನ ಕಲೀತೀನಿ... ನಾಡಿದ್ದು ತಿನ್ನೋದನ್ನ ಕಲೀತೀನಿ... ಅದ್ನ್ಯಾರೆ ನೀನು ಕೇಳೋಕೆ... ತಾತನ ಬದ್ಲೀಗೆ ನೀನು ಹುಟ್ಕೊಂಡಿದ್ದೀಯಾ ಅಷ್ಟೆ;" ಎಂದು ಕಣ್ಣು ಉರಿ ಮಾಡಿ ಇಡೀ ಕೇರಿಗೇ ಕೇಳಿಸುವಂತೆ ಗದರಿಸಿಯೇ ಬಿಟ್ಟೆ. ಪ್ರತಿಘಟಿಸಿದ್ದಲ್ಲಿ ಛಳೀರನೆ ಏಟುಕೊಅಬೇಕೆಂದುಕೊಂದಿದ್ದೆನಾದರೂ ಅದಕ್ಕೆ ಆಸ್ಪದ ಕೊಡಲಿಲ್ಲ.
ನಾನು ಗದರಿಸಿದ್ದು ಕೇರಿಯಲ್ಲಿ ಮತ್ತು ಬ್ಯಾಂಕಿನಲ್ಲಿ ದೊಡ್ಡ ಸುದ್ದಿಯಾಯಿತು. ಅವರೆಲ್ಲ ಕೊಲೆಗಾರನ ಕಡೆ ನೋಡುವಂತೆ ಭಯಾಶ್ಚರ್ಯ ಗಳಿಂದ ನೋಡತೊಡಗಿದರು. "ಅಂತೂ ಶಾಸ್ತ್ರಿಗಳು ತಮ್ಮ ಹೆಂಡರನ್ನು ಗದರಿಸಿದಳು. ದೇವರು ದೊಡ್ಡವನು" - ಕೇರಿಯ ಮಂದಿ ಮಂಗಳಾರತಿ ಮಾಡಿ ಅಭಿನಂದಿಸುವುದೊಂದೇ ಬಾಕಿ!

ನಾನು ನನಗೇ ಕಗ್ಗಂಟಾಗಿದ್ದೆನೆಂಬುದಕ್ಕೆ ಸಾಕ್ಷಿಯಾಗಿ ನಾನು ಅಂದಿನಿಂದ ಸಿಗರೇಟನ್ನು ಸಾರ್ವಜನಿಕವಾಗಿ ಸೇದತೊಡಗಿದೆ. "ಅಲ್ಲಾಹು... ನೀನು ದೊಡ್ಡೋನು." ಎಂದು ಇಸ್ಮಾಯಿಲು ನನ್ನಿಂದ ಸಿಗರೇಟು ವಿನಿಮಯ ಮಾಡಿಕೊಳ್ಳತೊಡಗಿದ. ಹೊಟ್ಟೆ ಹುಣ್ಣು ಎಂಬ ಕಾರಣದಿಂದ ಚಂಬಸ್ಯಯ್ಯ ಧೂಮ್ರಪಾನದಿಂದ ದೂರ ಇದ್ದನಾದರೂ ಮತ್ತೆ ಸೇದ ತೊಡಗಿದ. ನಾವು ಮುವ್ವರು ಸಿಗರೇಟು ಸೇದುತ್ತಿದ್ದರೆ ಹೆಬ್ರಿಯ ಕಣ್ಣುಗಳು ಕೆಂಪಾಗತೊಡಗಿದವು. ನಮ್ಮ ಗಂಟಲುಗಳಿಗೆ ಹೊಗೆ ಅಡರಿದರೆ ಆತ ಕೆಮ್ಮ ತೊಡಗಿದ...

ಆಗಲೆ ಹಿಂದೊಮ್ಮೆ ಹೋಗಿ ಪರಿಚಯ ಮಾಡಿಕೊಂದಿದ್ದ ಹೆಬ್ರಿ ನನ್ನ ಗೈರು ಹಾಜರಿಯಲ್ಲಿ ಒಂದೆರಡು ಬಾರಿ ಮನೆಗೆ ಹೋಗಿ ನನ್ನ ಹೆಂಡತಿಯ ಕಿವಿ ಚುಚ್ಚಿದ - ಪತಿಯನ್ನು ಸನ್ಮಾರ್ಗದಲ್ಲಿ ನಡೆಸೂ ಅಂತ. ಅಲ್ಲಾಡಿ ಹೋಗಿದ್ದ ಆಕೆ ಕೆಲ ದಿನ ಹೇಳಿರಲಿಲ್ಲ.
ಅಲ್ಲದೆ ನಾನು ಆಕೆಯನ್ನು ಗದರಿಸದೇ ಮಾತಾಡುತ್ತಿರಲಿಲ್ಲ. ಅಂಗಳದಲ್ಲಿ, ಹಿತ್ತಿಲಲ್ಲಿ ಕೂತು ರಾಜಾರೋಷವಾಗಿ ಸಿಗರೇಟು ಸೇದುತ್ತಿದ್ದಿದನ್ನು ನೋಡಿ ಪರವಾ ಇಲ್ಲ ಎಂದು ಕೊಂಡರು. ಕೇರಿ ಜನ. ನಡೆದ ಝಟಾಪಟಿ ನಾನು ವರಲಕ್ಷ್ಮಿಯ ಜಡೆ ಹಿಡಿದು ಎಳೆದಾಡಿದ್ದುಂಟು. ಅತ್ತೆಯವರ ಪಾದ ಸೇವೆಯೇ ಮೇಲು ಎಂದು ನಿರ್ಧರಿಸಿದಳಾದರೂ ತನ್ನ ಗಂಡ ಮತ್ತಷ್ಟು ಕೆಟ್ಟರೆ ಎಂದು ಅನುಮಾನ ಬಂದು ನಿಂತುಕೊಂಡಳು.

ಆಕೆಯ ಸಮಕ್ಷಮದಲ್ಲಿ ಪ್ರಕಟಗೊಳ್ಳುತ್ತಿದ್ದ ವರ್ತನೆ ಎಲ್ಲರೆದುರಿಗೂ ಪ್ರಕಟವಾಗ ತೊಡಗಿತು. ಯಾರಾದರು ‘ಅಪ್ಪ’ ಎಂದರೆ ನಾನು ‘ತಾತ’ ಎನ್ನತೊಡಗಿದೆ. ಕೆರೆಯ ಒಡ್ಡಿಗೆ ಅಚ್ಚುಕಟ್ಟಾಗಿ ಹೊಂದಿಕೊಂಡು ಏರಿ ಆಕೃತಿ ಎಲ್ಲಿವರೆಗೆ ದೃಡವಾಗಿರುತ್ತದೋ ಅಲ್ಲಿವರೆಗೆ ನೀರಿನ ಸಂಗ್ರಹ ಇರುತ್ತದೆ. ಏರಿಯ ಒಂದು ಕಲ್ಲು ಕದಲಿದರೆ ನೀರು ಇಡೀ ಏರಿಯನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಧೀರ್ಘಕಾಲ ಬಂಧನದಲ್ಲಿರುವ ಹಕ್ಕಿಗೆ ಸ್ವಾತಂತ್ರ್ಯದ ರುಚಿ ತೋರಿಸಿದರೆ ಅದು ಆಗಸದ ತುಂಬ ರೆಕ್ಕೆಗಳನ್ನು ಹರಡಿ ಅಳೆಯುತ್ತಿದೆ. ಇದಕ್ಕೆ ನಾನೇ ಸಾಕ್ಷಿಯಾದೆ. ನನಗೆ ಹೆಂಡತಿ ಮೇಲೆ ಪ್ರೀತಿ ಇಲ್ಲದಿರಲಿಲ್ಲ... ಆದರೆ ಮತ್ತೆಲ್ಲಿ ನನ್ನ ಮೇಲೆ ಹಿಡಿತ ಸಾಧಿಸುವಳೋ ಎಂಬ ಆತಂಕ. ಆಕೆ ಗುಟ್ಟಾಗಿ ವಾರ್ತಾಯ ಸುಯಂತಾಂ ಪ್ರವಾಚಿತಃ ವರಲಕ್ಷ್ಮೀ ಶಾಸ್ತ್ರೀಯಾ... ಎಂದು.


೪೬೯

ಪತ್ರದ ಮೂಲಕ ಸದರೀ ವಾರ್ತೆಯನ್ನು ಕೊಟ್ಟೂರಿನಲ್ಲಿರುವ ನನ್ನ ತಾಯಿಯವರಿಗೆ ಬಿತ್ತರಿಸಿದಳೋ; ಅಥವಾ ಆಕೆಗೆ ಕನಸು ಬಿತ್ತೋ... ಆಕೆಯ ಎಚ್ಚರಿಕೆ ನೀಡುವ ದೀರ್ಘಾಯುಷ್ಯ ಕೋರುವ ಪತ್ರವೂ ಬೆಂಗಳೂರಲ್ಲಿ ಪ್ರಸಿದ್ಧ ಪತ್ರಕರ್ತನಾಗಿರುವ ಪದ್ಮಶ್ರೀ ಬಿರುದಾಂಕಿತನಾಗಿರುವ ಕಮಲಾಕರನ ಪತ್ರವೂ, ಏಕ ಕಾಲದಲ್ಲಿ ಬಂದವು. ಆತ ತನ್ನ ಪತ್ರದಲ್ಲಿ ಆಡಳಿತ ಪಕ್ಷವಾದ ಕಾಂಗ್ರೇಸ್‌ನ ದುರಾಡಳಿತದಿಂದ ಕರ್ನಾಟಕದ ಪ್ರಜೆಗಳು ಬೇಸತ್ತಿರುವರೆಂದೂ; ವಿರೋಧ ಪಕ್ಷವಾಗಿರುವ ಜನತಾದಳವು ಮುಂಬರುವ ಚುನಾವಣೆಯಲ್ಲಿ ನಿಚ್ಚಳವಾದ ಬಹುಮತ ಸಾಧಿಸಲಿರುವುದೆಂದೂ; ಅದಕ್ಕೆ ಸ್ಲೋಗನ್ನುಗಳೇ ಮೊದಲಾದ ಹಾಡುಗಳನ್ನು ನೀನು ಕೂಡಲೆ ಬಂದು ಬರೆದುಕೊಟ್ಟಲ್ಲಿ ಕೈತುಂಬ ಒಳ್ಳೆ ಸಂಭಾವನೆ ದೊರಕುವುದಲ್ಲದೆ ನೀನು ಸಾಹಿತ್ಯ ಅಕಾಡೆಮಿಯ ಸದಸ್ಯನಾಗುವಿ ಎಂದು ಬರೆದಿದ್ದ. ಅಲ್ಲಿ ಅಂಥ ಕವಿಗಳೇ ಸಾಕಷ್ಟಿರುವಾಗ ನಾನಲ್ಲಿಗೆ ಹೊಗಿ ಏನು ಕಡಿಯುವುದು!

ಹೆಬ್ರಿಗೂ ಗುಟ್ಟಾಗಿ ಹೇಳಿರುವಿಯಲ್ಲದೆ ಕೊಟ್ಟೂರಿಗೂ ಪತ್ರ ಬರೆದು ತಿಳಿಸಿರುವಿಯಾ: ಆ ಮುದುಕಿ ಎದುರಿಗೇ ಹೋಗಿ ಸಿಗರೇಟು ಸೇದಲಿಕ್ಕು ಹೆದರುವುದಿಲ್ಲವೆಂದು ಹೆಂಡತಿಯನ್ನು ಕೈಗೆ ತೆಗೆದುಕೊಂಡೆ. ಆಕೆಗೂ ನನಗೂ ನಡುವೆ ಮಾತಿಗೆ ಮಾತು ಬೆಳೆದು ಕಪಾಳಕ್ಕೆ ಛಳೀರನೆ ಒಂದು ಏಟು ಕೊಟ್ಟೆ. ನಂತರ ರಾತ್ರಿ ಆಕೆ ಮುಲುಕಿದಾಗ ಅದೇ ಕಪಾಲಕ್ಕೆ ನಾನೇ ತೈಲ ಲೇಪಿಸಿ ಸಮಾಧಾನ ಮಾಡಿದೆ. ನನ್ನ ದೂರ ಮಾಡಬೇಡಿರೆಂದು ಆಕೆ ಗೊಣಗುತ್ತ ಆಕೆ ನನ್ನನ್ನು ತಬ್ಬಿಕೊಂಡಳು. ಮನಸ್ಸಿನಲ್ಲಿ ಯಾರನ್ನೋ ಕಲ್ಪಿಸಿಕೊಂಡು ನಾನೂ ಆಕೆಯನ್ನು ತಬ್ಬಿಕೊಂಡೆ. ಮುಂದೆಂದೂ ಹೊಡೆಯುವುದಿಲ್ಲವೆಂದು ಭರವಸೆ ನೀಡಿದೆ.
ಮಹಾಪತಿವ್ರತೆಯಾದ ಹೆಂಡತಿಯನ್ನು ಹೊಡೆಯುವುದರ ಮೂಲಕ ಕರ್ಮಠ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ನನ್ನನ್ನು ಮನೆಗೆ ಬರ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡಿಸುವುದನ್ನು ಫಕೀರಮ್ಮ ಹಂತ ಹಂತವಾಗಿ ನಿಲ್ಲಿಸಿದಳು. ಯ್ಯಜ್ಞವಲ್ಕ್ಯರ ಶಿಕ್ಷಾಸ್ಮೃತಿವರೆಗೆ ಬಂದಿದ್ದ ವಿಜಯಾಳನ್ನು ಆಕೆಯ ತಂದೆ ಚಲುವಯ್ಯ ಬೆಂಗಳೂರಿಗೆ ಕರೆದುಕೊಂಡು ಹೋಗಿ (ವಿಚಿತ್ರವೆಂದರೆ) ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಸಂಸ್ಥೆಗೆ ಸೇರಿಸಿದ. ಮಕ್ಕಳೊಂದಿಗ ಮತ್ತು ವಿವಾಹಿತನೂ ಆದ ತನ್ನ ಸಂಗೀತ ಮಾಸ್ತರ ವೃಷಭೇಂದ್ರಾಚಾರನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಳು ರಾಗಿಣಿ. ಮೂರನೆ ಹುಡುಗಿ ಮೇನಕೆಯ ರಕ್ತ ರಾತ್ರಿ ನಾಟಕದಲ್ಲಿ ಉತ್ತರೆಯ ಪಾತ್ರ ವಹಿಸಲು ಆಂಧ್ರದ ಬೊಮ್ಮನಾಳಿಗೆ ಹೋಗಿ ಧರ್ಮರಾಯನ ಪಾತ್ರ ವಹಿಸಿದ್ದ ಪ್ರತಾಪರೆಡ್ಡಿಯೊಂದಿಗೆ ದೈಹಿಕ ಸಂಬಂಧವಿರಿಸಿಕೊಂಡು ಅಲ್ಲಿಯೇ ಶಾಶ್ವತವಾಗಿ ಉಳಿದುಬಿಟ್ಟಳು.

ಈ ಎಲ್ಲ ಅಹಿತಕರ ವಿದ್ಯಮಾನಗಳಿಂದ ಜ್ಞಾನೋದಯವಾಗಿ ಫಕೀರಮ್ಮ ಸದಾನಂದ ಬಾಬಾನೇ ದಿಕ್ಕು ಎಂದು ಭಾವಿಸಿ ಆತನ ಆಶ್ರಮವನ್ನು ಹುಡುಕಾಡುವ ನಿಮಿತ್ತ ಹೇಳದೆ ಕೇಳದೆ ಹೊರಟು ಹೋಗಿ ಕೆಲ ದಿನಗಳಾಗಿರುವುದು. ಅನೇಕ ಪ್ರಮುಖ ರಾಜಕಾರಣಿಗಳನ್ನು ಶಿಷ್ಯರನ್ನಾಗಿ ಹೊಂದಿದ್ದೂ ಸಾಂಗ್ಲಿಯಾನಾ ಐ.ಪಿ.ಎಸ್. ಎಂಬ ಚಲನಚಿತ್ರ ಬಿಡುಗಡೆಯಾದಂದಿನಿಂದ ಮನಶ್ಶಾಂತಿ ಬಯಸಿ ದಿನಕ್ಕೊಂದು ಟೆಂಟ್ ಬದಲಾಯಿಸುತ್ತಿರುವ ಬಾಬಾ ಎಲ್ಲಿರುವನೆಂದು ಹೇಗೆ ಹೇಳುವುದು? ಸ್ಥಳ ಬದಲಾಯಿಸುತಿರುವುದರ ಜೊತೆಗೆ ವೇಷವನ್ನೂ ಬದಲಾಯಿಸುತಿರುವನೆಂದು ಪ್ರತೀತಿ ಹುಟ್ಟಿಕೊಂಡಿರುವುದರಿಂದ ಆತ ಇಂಥಲ್ಲಿ, ಇದೇ


೪೭೦

ವೇಷದಲ್ಲಿರುವನೆಂದು ಯಾರು ನಿಖಿರವಾಗಿ ಹೇಳುವುದು ಸಾಧ್ಯ! ಆತನ ಇರುವಿಕೆಗಾಗಿ ಕರ್ನಾಟಕ ತುಂಬ ಪ್ಯಾಸೆಂಜರ್ ಗಾಡಿಯಂತೆ ಫಕೀರಮ್ಮ ಅಡ್ಡಾಡಿದಳು. ಹುಬ್ಬಳ್ಳಿಯ ರೇಲ್ವೆ ಪ್ಲಾಟ್‌ಫಾರಂ ಮೇಲೆ ಮಲಗಿದ್ದ ಆಕೆಯ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು ‘ಈ ಕೂಡಲೆ ನೀನು ದೇಹತ್ಯಾಗ ಮಾಡಿ ಸ್ವರ್ಗ ಮತ್ತು ನರಕದ ಚೌರಾಸ್ತಾದಲ್ಲಿ ಕಾಯುತ್ತಿರು... ನಾನು ಸಾಂಗ್ಲಿಯಾನಾ ಚಿತ್ರಕ್ಕೆ ಮೋಕ್ಷ ದಯಪಾಲಿಸಿ ಬಂದು ಸ್ವರ್ಗಕ್ಕೆ ಕರೆದುಕೊಂಡು ಹೋಗುವೆ’ನೆಂದು ಅಪ್ಪಣೆ ಕೊಡಿಸಿದನಂತೆ. ಸಂಗತಿಗಳು ಹೀಗಿರುವಾಗ ಇಂಜಿನಿಯರ್ ಚಲುವಯ್ಯ ತನ್ನ ಅತ್ತೆಯ ಅನ್ವೇಷಣಾ ಕಾರ್ಯವನ್ನು ನಿಲ್ಲಿಸಿ ಆಕೆಯ ಹೆಸರಿನಲ್ಲಿ ತಿಥಿ ಶ್ರಾದ್ಧ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪೂರೈಸಿದ. ಕೊತ್ತಲಿಗಿಯ ತಮ್ಮ ಹೊಸ ಮನೆಯಲ್ಲಿ ಆಕೆಯ ಪ್ರಥಮ ಪುಣ್ಯತಿಥಿಯಂದು ಶರಣೆ ಫಕೀರಮ್ಮನ ಭಜನಾ ಮಂಡಲಿಯನ್ನು ಶುರು ಮಾಡಬೇಕೆಂದಿರುವನು. ಅದರ ಪ್ರಾರಂಭೋತ್ಸವಕ್ಕೆ ಭದ್ರಗಿರಿ ಅಚ್ಯುತ ಕೇಶವದಾಸರನ್ನು ಕರೆಸಬೇಕೆಂದಿರುವನಂತೆ. "ಎಷ್ಟು ದಿನಗಳಲ್ಲಿ ಮನೆಯನ್ನು ಖಾಲಿ ಮಾಡಲು ಸಾಧ್ಯ ಶಾಸ್ತ್ರಿಗಳೇ?" ಎಂಬೊಂದು ಮಾತು ಆತನಿಂದ ಬಂತು.... (ಕೋರ್ಟ್‌ನಲ್ಲಿ ನೋಟರಿ ತಗಿನ ಮಠರನ್ನು ಹಿಡಿದುಕೊಂಡು ಶಾಸ್ತ್ರಿ ಎಂಬ ವಿಶೇಷಣವನ್ನು ಹೆಸರಿನಿಂದ ಖಾಯಂ ಆಗಿ ಬೇರ್ಪಡಿಸಬೇಕು. ಅದು ಎಂದು ಸಾಧ್ಯವಾಗುವುದೋ?)
ಹೀಗೆ ಹೇಳಿಕೊಳ್ಳೋದು ಸಾಕಷ್ಟಿದೆ ಕುಂವೀ... ಆದರೆ ನೀನು ಕಥಾನಕವನ್ನು ಬೇಗನೆ ಮುಗಿಸಬೇಕೆಂದು ಆತುರ ಪಡುತ್ತಿರುವಿ. ಪ್ರಕಾಶಕ ಚನ್ನಬಸವಣ್ಣನವರು ನಿನ್ನ ಮೇಲೆ ಒತ್ತಡ ಹೇರಿರುವುದು ನನಗೆ ಅರ್ಥವಾಗುತ್ತದೆ. ಈ ಕಾದಂಬರಿಯ ಕೆಲವು ಕಂತುಗಳನ್ನು ಸಿದ್ಧಣ ಅರಕೆಯವರು ತಮ್ಮ ವಾರ ಪತ್ರಿಕೆಯಲ್ಲಿ ನಾನು ಓದಿರಲಿಲ್ಲವೆಂದು ತಿಳಿದುಕೊಳ್ಳಬೇಡ. ಓದಿ ಆತಂಕ ಗೊಂಡಿದ್ದೆ. ಏನಪ್ಪಾ ಇವನು ನನ್ನ ಬದುಕಿನ ಪೂರ್ವೋತ್ತರವನ್ನು ಅದೆಷ್ಟು ರೋಮಾಂಟಿಕ್ಕಾಗಿ ನೋಡ್ತಿದ್ದಾನಲ್ಲ ಎಂದು ಬೇಸರಪಟ್ಟಿದ್ದೆ. ಅಷ್ಟರಲ್ಲಿ ನಿನಗೂ, ಚಂದ್ರಶೇಕರ ಆಲೂರು ಎಂಬದರ ಸಂಪಾದಕ ಮಹಾಶಯನಿಗೂ ವಾಗ್ವಾದ ನಡೆದು ಕಂತು ಕೊಡುವುದನ್ನು ಅಲ್ಲಿಗೆ ನಿಲ್ಲಿಸಬಿಟ್ಟೆ ಎಂಬುದೂ ಅಷ್ಟೊತ್ತಿಗಾಗಲೆ ಸತ್ತಿದ್ದ ನನಗೆ ಗೊತ್ತಾಯಿತು. ಬದುಕಿದೆ ಎಂದು ಸಮಾಧಾನದ ಉಸಿರುಬಿಟ್ಟೆ.